Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
ಜೋಗಿಯವರ ಓದುಗರಿಗೆ ಅವರ ಯಾವತ್ತಿನ ಶೈಲಿ ಚಿರಪರಿಚಿತ. ಸರಳವೆನಿಸುವ ಸಂಭಾಷಣೆಗಳ ಮಧ್ಯೆ ಫಿಲಾಸಫಿಕಲ್ ಟಚ್ ತಂದು ಏನೋ ಕಾಡುವ ಹಾಗೆ ಮಾಡುವುದು, ಎಲ್ಲ ಇರುವಾಗಲೂ ಏನೋ ಬಯಸಿ ಹೊರಡುವ ಪಾತ್ರಗಳು, ಕೊನೆಯಾಗದ ಕಥೆಗಳು.
ಓದುಗರಿಗೆ ಕೆಲ ಪಾತ್ರಗಳು ಕೆಲ ರಾಜಕೀಯ ನಾಯಕರ ಪ್ರತಿನಿಧಿಸುವ ಹಾಗೆ ಕಾಣಬಹುದು. ಆದರೆ ಕಥೆ ಸಾಗುವ ದಿಕ್ಕು ಹಾಗಿಲ್ಲ. ಅದು ರಾಜಕೀಯ ಮೇಲಾಟಗಳ ಹೇಳುತ್ತಲೇ ಮತ್ತೆ ಮತ್ತೆ ಸಂಬಂಧಗಳ ಗಟ್ಟಿತನ,ಗೊಂದಲಗಳ ,ಪ್ರೀತಿಯ ಎಂದಿನ ಜೋಗಿಯವರ ಶೈಲಿಗೇ ಬಂದು ನಿಲ್ಲುತ್ತದೆ. ಅವರ ಇತರ ಕಾದಂಬರಿಗಳ ಓದಿದವರಿಗೆ ಅದೇ ಪಾತ್ರಗಳು ಇನ್ನೊಂದು ರೂಪ ಧರಿಸಿ ಬಂದದ್ದು ಗೊತ್ತಾಗುತ್ತದೆ.
ಯಾಮಿನಿ ,ಹಿಟ್ವಿಕೆಟ್ ನೆನಪಿಸುವ ಪಾತ್ರಗಳು ಅವು.
ಅಥವಾ ಇದನ್ನು ಸೃಜನಶೀಲ ಲೇಖಕನೊಬ್ಬ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಸದ್ಯದ ರಾಜಕೀಯ ಪರಿಸ್ಥಿತಿಗೆ ನೀಡಿದ ಪ್ರತಿಕ್ರಿಯೆ ಎಂದೂ ಕರೆಯಬಹುದು.
ಇಡೀ ಕಾದಂಬರಿಯಲ್ಲಿ ಬರುವ ವ್ಯಾಸರ ಪಾತ್ರ ಮತ್ತು ಆ ಇಡೀ ಅಧ್ಯಾಯ ನನಗೆ ಬಹಳ ಇಷ್ಟವಾಯಿತು.
ಜೋಗಿ ಹಾಗೇ ಅಲ್ಲವೇ? ಸಾಮಾನ್ಯ ಅನಿಸುವ ಕತೆಗೆ ಕೊನೆಗೆ ಮ್ಯಾಜಿಕಲ್ ರಿಯಲಿಸಂ ಟಚ್ ಕೊಟ್ಟು ಉಳಿದದ್ದು ಹುಡುಕಿಕೊಳ್ಳುವ ಜವಾಬ್ದಾರಿ ಓದುಗರಿಗೇ ಬಿಡುತ್ತಾರೆ.
ಇಲ್ಲಿ ಯಾವುದೂ ಹೊಸದಲ್ಲ. ಆದರೆ ಅವರು ಕತೆಯನ್ನು ನೋಡಿದ ಕೋನ ಬೇರೆ. ಅಷ್ಟೇ.
ಚುನಾವಣಾ ಕಾವಿರುವ ಪ್ರಸ್ತುತ ಸನ್ನಿವೇಶಕ್ಕೆ ಈ ಕಾದಂಬರಿ ಒಂದು perfect read 👌👌👌 ಕರ್ನಾಟಕ ಚುನಾವಣೆಯ ಒಂದು ವರ್ಷಕ್ಕೆ ಮುಂಚೆಯೇ ಶುರುವಾದ ಮೇಲಾಟ ಕಡೇ ಘಳಿಗೆಯಲ್ಲಿ ಖುದ್ದು ಪ್ರಧಾನಿಯವರೇ ಮೊಕ್ಕಾಂ ಹೂಡುವರೆಗೂ ಬಂದು ತಲುಪಿದನ್ನು ನಾವು ಈಗಷ್ಟೇ ಸಾಕ್ಷೀಕರಿಸಿದ್ದೇವೆ. ಪ್ರಮುಖ ಪಕ್ಷಗಳ ಗಿಮಿಕ್, ರೋಡ್ ಶೋ, ಚರ್ಚೆ, Social Media ಹೊಯ್ದಾಟ, Propaganda Narratives ಸಿದ್ಧವಾಗುವುದೇ ಕಾರ್ಪೊರೇಟ್ ಶೈಲಿಯ War Roomಗಳಲ್ಲಿ ಮತ್ತು ಅದರ ಸಾರಥಿಯೇ ಒಬ್ಬ Highly Educated and Highly Paid "Political Strategist". ಅಂತಹ Political Strategist ಸಹದೇವ ಉಪಾಧ್ಯಾಯ, ಮೌಲ್ಯಯುತ ರಾಜಕಾರಣ ಬಯಸುವ ಪ್ರಧಾನಿ ಸಂಸ, ಪಕ್ಷಕ್ಕೆ ನಿಷ್ಠನಾಗಿದ್ದು ಏನಾದರೂ ಮಾಡಲು ಹೇಸದ ಚೀಫ್, ನೀತಿಗೆಟ್ಟ ಮಾಧ್ಯಮ, ಸಾಹಿತಿ, ಅಧಿಕಾರಿಗಳು, ಸಹದೇವನ ಬಳಗ, ಸಂಸರ ಬಳಗ ಮತ್ತು ನನಗೆ ಬಹಳ ಹಿಡಿಸಿದ ಪಾತ್ರವಾದ 'ವ್ಯಾಸ' ಎಲ್ಲವನ್ನೂ ಮತ್ತು ಎಲ್ಲರನ್ನೂ ಸೇರಿಸಿ, ಎಲ್ಲಿಯೂ ಲಯ ತಪ್ಪದೆ ಅಲ್ಲಲ್ಲಿ Philosophical touch ನೀಡಿ ಜೋಗಿಯವರು ಅನುದಿನದ ಭಾರತದಲ್ಲಿ ಮಹಾಭಾರತ ವನ್ನು ತೆರೆದಿಟ್ಟಿದ್ದಾರೆ.....🙏🙏🙏
ಕಾದಂಬರಿ - ಹಸ್ತಿನಾವತಿ ಲೇಖಕರು - ಜೋಗಿ ಪುಟಗಳು - ೪೦೦ ಬೆಲೆ - ೪೫೦ ಪ್ರಕಾಶಕರು - ಅಂಕಿತ ಪುಸ್ತಕ
ನಾನು ಜೋಗಿಯವರ ಕಾದಂಬರಿ ಇಲ್ಲಿಯವರೆಗೂ ಓದೇ ಇರಲಿಲ್ಲ, ಹಸ್ತಿನಾವತಿ ಪುಸ್ತಕ ಬಿಡುಗಡೆಯ ದಿನ ಹೋದಾಗ ಅಲ್ಲಿ ಹಲವರು ಲೇಖಕರನ್ನು ಭೇಟಿಯಾಗಲು ಅವಕಾಶವಾಯಿತು. ಅಂದೇ ಹಸ್ತಿನಾವತಿ ಪುಸ್ತಕ ಕೊಂಡುಕೊಂಡೆ ಆದರೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಈ ಪುಸ್ತಕವನ್ನು ಓದಲು ಶುರುಮಾಡಿದಾಗ ನಿಲ್ಲಿಸಲು ಮನಸ್ಸು ಒಪ್ಪುತ್ತಿರಲಿಲ್ಲ, ಕೆಲಸದ ಒತ್ತಡವಿದ್ದರೂ ೨ ದಿನದಲ್ಲಿ ಓದಿ ಮುಗಿಸಿದೆ, ಸರಾಗವಾಗಿ ಓದಿಸಿಕೊಂಡು ಹೋಗುವ ಕೃತಿ, ಓದಿದ ನಂತರ ಜೋಗಿಯವರನ್ನು ಪುಸ್ತಕ ಬಿಡುಗಡೆಯ ದಿನ ಭೇಟಿ ಮಾಡಬೇಕಿತ್ತು ಎಂದು ಮನಸ್ಸಿಗೆ ಅನ್ನಿಸಿತು, ಅವರ ಬರಹ ತುಂಬಾ ಇಷ್ಟವಾಯಿತು. ಆದಿ ಪರ್ವದಿಂದ ಶುರುವಾಗುವ ಮಹಾಭಾರತವು ಸ್ವರ್ಗಾರೋಹಣ ಪರ್ವದಿಂದ ಮುಕ್ತಾಯಗೊಳ್ಳುತ್ತದೆ. ಹಸ್ತಿನಾವತಿಯಲ್ಲಿ ಆದಿಪರ್ವ, ಸಭಾ ಪರ್ವ, ಅರಣ್ಯ ಪರ್ವ, ಉದ್ಯೋಗ ಪರ್ವ ಹಾಗು ಶಾಂತಿ ಪರ್ವವಾಗಿ ವಿಂಗಡನೆಗೊಂಡಿದೆ. ಅರಣ್ಯ ಪರ್ವದಲ್ಲಿ ದ್ವಾಪರಯುಗದ ವ್ಯಾಸರೇ ಇಲ್ಲಿ ಕಥಾನಾಯಕನಾದ ಸಹದೇವನಿಗೆ ಕಾಣಿಸಿಕೊಂಡಾಗ ಅವರಿಬ್ಬರ ನಡುವೆ ನಡೆಯುವ ಸಂಭಾಷಣೆಗಳು ಅದ್ಭುತವಾಗಿ ಮೂಡಿಬಂದಿದೆ. ರಾಜಕಾರಣವು, ದಾಯಾದಿ ಕಲಹವು ದ್ವಾಪರಯುಗದಲ್ಲೂ ಇತ್ತು ಈ ಕಾಲದಲ್ಲೂ ಇದೆ. ಧರ್ಮದಿಂದ ನೋಡಿದರೆ ಕೃಷ್ಣನಂತವರು ನಮಗೆ ಬೇಕೇ ಬೇಕಾಗುತ್ತದೆ, ಈ ಕಾಲದ ರಾಜಕಾರಣವನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಕೃತಿಯೇ ಹಸ್ತಿನಾವತಿ, ಸಹದೇವನೆ ಇಲ್ಲಿ ಎಲ್ಲರಿಗೂ ಬೇಕಾಗುವ ವ್ಯಕ್ತಿಯಾಗುತ್ತಾನೆ ಆತನ ಪಾತ್ರವು ದ್ವಾಪರಯುಗದ ಕೃಷ್ಣನಿಗೆ ಹೋಲಿಕೆಯಾಗುತ್ತದೆ. ಸರಿ ಇನ್ನು ನಾವು ಹಸ್ತಿನಾವತಿಗೆ ಹೋಗೋಣ.
ಸಹದೇವ ಉಪಾಧ್ಯಾಯ ದೆಹಲಿಯಲ್ಲಿ ಏಕಾಂಗಿಯಾಗಿ ವಾಸಮಾಡಿಕೊಂಡು, ದಿನದ ಕೆಲಹೊತ್ತು ಜಿಪ್ಸಿ ಕಫೆಯಲ್ಲಿ ಕಾಲ ಕಳೆಯುತ್ತಾನೆ. ಜಿಪ್ಸಿ ಕಫೆಯನ್ನು ಸಂಯುಕ್ತಾ ಪರಾಂಜಪೆ ನಡೆಸುತ್ತಿರುತ್ತಾಳೆ. ಮಗನು ಸಂಯುಕ್ತಾ ಪರಾಂಜಪೆಯಿಂದ ದೂರವಿದ್ದಾಗ, ಜಾಬಾಲಿಯನ್ನು ಬೆಳಸಿಕೊಂಡು ಕಫೆಯನ್ನು ನಡೆಸುತ್ತಿರುತ್ತಾಳೆ, ತನ್ನ ಮಗನನ್ನು ಸಹದೇವನಲ್ಲಿ ಕಾಣುವ ಸಂಯುಕ್ತಾ ಪರಾಂಜಪೆಗೆ ಆತನೆಂದರೆ ತುಂಬಾ ಅಕ್ಕರೆ. ಸಹದೇವನು ಎಷ್ಟು ಬೇಕೋ ಅಷ್ಟೇ ಮಾತು,ತನ್ನ ತಾಯಿಯ ಜೊತೆ ಮಾತಾಡಲೂ ಸಹ ಆತನಿಗೆ ಸಮಯ ದೊರಕುತ್ತಿರಲಿಲ್ಲ. ತನ್ನನ್ನು ಯಾರಾದರು ಭೇಟಿಯಾಗಬೇಕಾದಲ್ಲಿ ಜಿಪ್ಸಿ ಕಫೆಯಲ್ಲೇ ಭೇಟಿಯಾಗುತ್ತಿದ್ದ, ಮೀಟಿಂಗ್ ಆಗಲಿ ಇಂತಿಂತ ಜಾಗಕ್ಕೆ ಹೋಗಬೇಕಾಗಲಿ ಸೋನು ವೆ ಎಲ್ಲವು ನೋಡಿಕೊಳ್ಳುತ್ತಿದ್ದಳು, ಆಕೆಗೆ ಕಿವಿ ಕೇಳಿಸದು ಮಾತು ಬಾರದು ಏನೇ ಇರಲಿ ಮೆಸೇಜ್ ಕಳುಹಿಸುತ್ತಿದ್ದಳು. ಸಹದೇವನು ಮಾತೃಭೂಮಿ ಪಕ್ಷದಲ್ಲಿ ಕೆಲಸಮಾಡಿಕೊಂಡು ಪಕ್ಷದ ನಾಯಕನಾದ ಚಿದಾನಂದ (ಚೀಪ್) ರವರ ಆದೇಶದ ಮೂಲಕ ಕೆಲಸವನ್ನು ಮಾಡಿಕೊಂಡು ತನ್ನನ್ನು ಭೇಟಿಮಾಡಲು ಬರುವ ವ್ಯಕ್ತಿಗಳಿಗೆ ಸೂಕ್ತವಾದ ಸಲಹೆಗಳನ್ನು ಕೊಡುತ್ತಾ ದೇಶದಲ್ಲಿ ನಡೆಯುವ ಬೆಳವಣಿಗೆಗಳನ್ನು ಸಂಬಂಧಪಟ್ಟವರಿಗೆ ತಿಳಿಸುವುದರ ಮೂಲಕ ಪಕ್ಷಕ್ಕೆ ತನ್ನ ಸೇವೆಯನ್ನು ಸಲ್ಲಿಸುತ್ತಿದ್ದನು. ಚುಣಾವಣೆಯ ಸಮಯದಲ್ಲಿ ಪ್ರಾಧಾನ ಮಂತ್ರಿಗಳಾದ ಸಂಜಯ್ ಸರ್ಕಾರ್ (ಸಂಸ) ರಾಜಿನಾಮೆ ಕೊಡಲು ನಿರ್ಧರಿಸಿದ್ದರು, ಇದು ಚೀಪ್ ಗೆ ತಲೆಬಿಸಿಯಾಗಿ ಅದನ್ನು ತಡೆಯಲು ಸಹದೇವನ ನೆರಹೋಗುತ್ತಾರೆ. ಇತ್ತೀಚೆಗೆ ಸಂಸರಿಂದ ಹೆಸರು ಪಡೆದ ಮಾತೃಭೂಮಿ ಪಕ್ಷವು ಸಂಸರನ್ನು ಕಳೆದುಕೊಂಡರೆ ತಾವು ಸೋಲುವುದು ಖಚಿತವೆಂದು ಇದರಿಂದ ನ್ಯಾಷನಲ್ ಪಾರ್ಟಿ ಅಧಿಕಾರಕ್ಕೆ ಬಂದರೆ ತಮ್ಮ ಪಾರ್ಟಿಯ ಇಮೇಜ್ ಹಾಳಾಗುತ್ತೆಂದು ರಾಜೀನಾಮೆ ನಿರ್ಧಾರವನ್ನು ಹೇಗಾದರೂ ತಡೆಯಬೇಕೆಂದು ಸಹದೇವನಿಗೆ ಆ ಕೆಲಸ ಒಪ್ಪಿಸುತ್ತಾರೆ.
ಇದನ್ನೇ ಕಾಯುತ್ತಿದ್ದ ಪ್ರದ್ಯುಮ್ನ ಜೋಷಿ ತಾನು ಹೊಸ ಚಾನೆಲ್ ಸ್ಥಾಪಿಸುತ್ತಿರುವುದಾಗಿ ಅದಕ್ಕೆ ಪ್ರಧಾನಿಗಳೇ ಉದ್ಘಾಟನೆ ಮಾಡಬೇಕಾಗಿ ಅಂದು ಅವರ ಜೊತೆ ಸಂದರ್ಶನ ಇಟ್ಟುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಡುವುದಕ್ಕಾಗಿ ಕೇಳಿದಾಗ ಸಹದೇವನು ನಿರಾಕರಿಸುತ್ತಾನೆ. ಆದರೂ ಹೇಗೋ ಪ್ರದ್ಯುಮ್ನ ಜೋಷಿ ಬೇರೆಯವರ ಮೂಲಕ ಪ್ರಧಾನಿಗಳನ್ನು ಸಂದರ್ಶಿಸುದ್ದಲ್ಲದೆ ಅಂದು ತಾವು ರಾಜಿನಾಮೆ ಕೊಡುತ್ತಿರುವು ಸುದ್ಧಿಯನ್ನು ಬಹಿರಂಗ ಪಡಿಸುತ್ತಾರೆಂಬು ಮಾಹಿತಿಯನ್ನು ತಿಳಿದ ಸಹದೇವನು ಉತ್ತರಾಯಣ ಚಾನೆಲ್ ಆ ಸಮಯದಲ್ಲಿ ಸ್ಥಾಪನೆಯಾಗುವುದನ್ನು ಹಾಗು ಸಂದರ್ಶವನ್ನು ತನ್ನ ಸ್ಟ್ರಾಟಜಿ ಮೂಲಕ ತಪ್ಪಿಸುವುದು ಅದ್ಭುತವಾಗಿದೆ. ಅದೇ ರೀತಿ ಮಾತೃಭೂಮಿ ಪಕ್ಷವನ್ನು ಮುಂಬರುವ ಚುಣಾವಣೆಯಲ್ಲಿ ಹೇಗಾದರೂ ಸೋಲಿಸಬೇಕೆಂದು ಕುತಂತ್ರ ಹೂಡುತ್ತಿದ್ದ ವನಿತಾ ಜೋಷಿಯನ್ನು ಸರಿಯಾದ ಘಟನೆಗಳಲ್ಲಿ ಸಿಕ್ಕಿಸಿ ಅವರಿಗೆ ಬುದ್ಧಿ ಕಲಿಸುವ ಸಹದೇವನ ಐಡಿಯಾಗಳೂ ಅದ್ಭುತವಾಗಿವೆ. ಇನ್ನು ಈ ಕಾದಂಬರಿಯಲ್ಲಿ ಬರುವ ಇತರೆ ಪಾತ್ರಗಳಾದ ಸದಾಶಿವ ದೇಸಾಯಿ, ದೇವಯಾನಿ, ಚಾರುಲತಾ, ಭಿಮಲ್, ನಿರಂಜನ, ಸುಕನ್ಯಾ ಇಂಗಳೆ, ಪಂಕಜಾ ಪಾಂಡೆ ಗೆ ಒಂದೊಂದು ಮಹತ್ವವನ್ನೂ ಕೊಟ್ಟಿದ್ದಾರೆ. ಈ ಪಾತ್ರಗಳನ್ನು ನಾವು ನಮ್ಮ ಸುತ್ತ ಮುತ್ತಾರೆ ಕಂಡಿದ್ದೇವೆ ಹಾಗು ಕಾಣುತ್ತಲೂ ಇದ್ದೇವೆ. ಅರಣ್ಯಪರ್ವದಲ್ಲಿ ಬರುವ ದ್ವಾಪರಯುಗದ ವ್ಯಾಸರ ಪಾತ್ರವು ಕಾದಂಬರಿಗೆ ಒಂದು ತಿರುವನ್ನು ಕೊಡುತ್ತದೆ. ವ್ಯಾಸರ ಜೊತೆ ಸಹದೇವನು ನಡೆಸುತ್ತಿದ್ದ ಸಂಭಾಷಣೆಗಳಿಂದ ತನ್ನ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುತ್ತಾನೆ. ನಿವೃತ್ತಿಯಾಗಲು ಹೊರಟಿರುವ ಪ್ರಧಾನ ಮಂತ್ರಿ ಸಂಸರ ಜೊತೆ ಸಹದೇವ ಮಾತನಾಡಿದಾಗ ಅವರ ವ್ಯಕ್ತಿತ್ವಕ್ಕೆ, ಅವರ ಆದರ್ಶಗಳಿಗೆ, ಅವರ ಸರಳ ಸ್ವಭಾವಕ್ಕೆ ಅವರ ಮೇಲೆ ಹೆಚ್ಚು ಗೌರವವೂ ಬೆಳೆಯುತ್ತದೆ. ಸಂಸರು ನಿವೃತ್ತಿಯಾಗಲು ವೈಯಕ್ತಿಕ ಕಾರಣವೋ ಅಥವಾ ಇನ್ನಿತರೇ ಕಾರಣವೋ ಎಂಬುದನ್ನು ಕಂಡುಹಿಡಿಯಲು ಹೊರಟಾಗ ಅವರ ಕುರಿತು ಹೆಚ್ಚು ಮಾಹಿತಿಗಳನ್ನೇ ಪಡೆದುಕೊಳ್ಳುತ್ತಾನೆ. ಸಂಸರ ವ್ಯಕ್ತಿತ್ವ ಹಾಗು ಅವರು ದೇಶಕ್ಕೆ ಮಾಡುತ್ತಿರುವ ಸೇವೆಯಿಂದ ಇಂತಹ ಪ್ರಧಾನ ಮಂತ್ರಿಗಳು ದೇಶಕ್ಕೆ ಅವಶ್ಯಕತೆ ಇರುವುದಾಗಿ ರಾಜೀನಾಮೆಯ ಉದ್ದೇಶವನ್ನು ತಡೆಯಲು ನಾನಾರೀತಿಯಾಗಿ ಪ್ರಯತ್ನಿಸುತ್ತಾನೆ.
ಸಭಾ ಪರ್ವ, ಅರಣ್ಯ ಪರ್ವ, ಉದ್ಯೋಗ ಪರ್ವದಲ್ಲಿ ಆ ಯಾ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ತನ್ನ ತಾಯಿಯನ್ನು ಬಿಟ್ಟು, ಮದುವೆಯಾಗದೆ, ರಾಜಕೀಯ ಎಂದರೆ ಎಲ್ಲರನ್ನು ಎದುರುಹಾಕಿಕೊಳ್ಳಲೇಬೇಕು ಇಂತಹ ಜೀವನ ತಾನೇಕಾದರು ನಡೆಸುತ್ತಿದ್ದೇನೋ ಎಂದು ಒಮ್ಮೆ ಬೇಸರವಾಗಿ ಸಂಸರ ಬಳಿ ತಾನು ರಾಜೀನಾಮೆ ಕೊಡಲು ನಿರ್ಧರಿಸಿದ್ದೇನೆಂದು ಹೇಳಿದಾಗ, ನಮ್ಮ ನಮ್ಮ ಮನೆಯಲ್ಲಿ, ನಮ್ಮ ನಮ್ಮ ಕುಟುಂಬದ ಜೊತೆ ಸುಖವಾಗಿರೋಣ ದೇಶ ಏನಾದರೇನಂತೆ, ನಾವೇನು ದೇಶಸೇವೆ ಮಾಡುತ್ತೇವೆಯಂದು ಮಾತು ಕೊಟ್ಟಿದ್ದೇವಾ ಎಂಬ ಸಂಸರ ಕಟುವಾದ ಮಾತುಗಳಿಗೆ ತನ್ನ ನಿರ್ಧಾರದಿಂದ ಕ್ಷಮೆ ಕೇಳುತ್ತಾನೆ. ಆದರೆ ನಿವೃತ್ತಿಯಾಗಲು ಹೊರಟಿದ್ದ ಸಂಸರು ಆಮೇಲೆ ಏನು ಮಾಡಿದರು? ಅಧಿಕಾರದಲ್ಲಿ ಮುಂದುವರಿದರೇ? ನಿವೃತ್ತರಾದರೇ?ಅವರ ಸಂದರ್ಶನ ಪ್ರಸಾರವಾಯಿತೆ? ಅದು ಲೇಖಕರು ಓದುಗರಿಗೆ ಬಿಟ್ಟುಕೊಟ್ಟಿದ್ದಾರೆ. ಇದೊಂದು ಮಹಾಭಾರತವೆ ಹಾಗು ಇದು ಮುಂದುವರೆಯುತ್ತಲೇ ಇರುತ್ತದೆ. ಸಂಭವಾಮಿ ಯುಗೇ ಯುಗೇ.
*ಲೇಖಕರು ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ: ಎಲ್ಲಾ ಕಾಲಗಳಲ್ಲೂ ರಾಜಕಾರಣ ಒಂದೊಂದು ಆಶಯವನ್ನು ಪ್ರತಿಪಾದಿಸುತ್ತಾ ಬಂದಿದೆ. ಹೀಗಾಗಿ ರಾಜಕಾರಣ ಅನ್ನುವುದು ಧರ್ಮಕಾರಣವೂ ಹೌದು. ಪ್ರತಿ ಯುಗದಲ್ಲೂ ನಡೆಯುವ ಕುರುಕ್ಷೇತ್ರ, ಮತ್ತೆ ಮತ್ತೆ ಬರೆಸಿಕೊಳ್ಳುವ ಮಹಾಭಾರತ, ಮತ್ತೆ ಮತ್ತೆ ಹುಟ್ಟುವ ಶ್ರೀಕೃಷ್ಣ, ಮತ್ತೆ ಮತ್ತೆ ಸಾಯುವ ದುರ್ಯೋಧನ- ಈ ಚಕ್ರ ನಿರಂತರ.*
ಒಬ್ಬ ಪ್ರಧಾನ ಮಂತ್ರಿ, ಪಕ್ಷದ ಅಧ್ಯಕ್ಷ, political strategist ಹೀಗೆ ಸುಮಾರು ಪಾತ್ರಗಳ ಸುತ್ತ ನಡೆಯುವ ಕಥೆ.
ಕಥೆ ಹೇಳಿರುವ ರೀತಿ ಚೆನ್ನಾಗಿದೆ. ಅಷ್ಟೆಲ್ಲ build up ಕೊಟ್ಟ ರೀತಿಗೆ ಕೊನೆಯಲ್ಲಿ ಇಷ್ಟು simple ಆಗಿ ಮುಗಿತು ಅನ್ನಿಸಿತು. ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳ ಹೆಸರು ಚೆನ್ನಾಗಿದೆ(ಹೆಚ್ಚಿನವು ಮಹಾಭಾರತದ್ದೆ) - ಸಹದೇವ, ಸಂಜಯ, ದೇವಯಾನಿ, ವ್ಯಾಸ, ಸಂಯುಕ್ತ.
(ಕಥೆ ಪೂರ್ತಿ ಓದಿ ಮುಗಿಸಿದ ನಂತರ ಒಂದೆರಡು ಕಡೆ sync ಇಲ್ಲ ಅಂತ ಅನ್ನಿಸಿತು)