ಕನ್ನಡ ಸಾಹಿತ್ಯದಲ್ಲಿ ರಂಗಣ್ಣನವರ ಹೆಸರು ಸ್ವಲ್ಪ ಕಳೆದುಹೋಗಿರುವುದು ನಮ್ಮೆಲ್ಲ ದುರಾದೃಷ್ಟ. ಬಿಎಂಶ್ರೀ ಅವರ ಸಮಕಾಲೀನರಾದ ರಂಗಣ್ಣನವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅದ್ಭುತ ಪಾಂಡಿತ್ಯವನ್ನು ಹೊಂದಿದವರು ಹಾಗೆಯೇ ಕನ್ನಡಕ್ಕಾಗಿ ಶ್ರಮಿಸಿದವರು. ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ರಂಗಬಿನ್ನಪ ಪುಸ್ತಕವು ಪ್ರಾಯಶಃ 1963ನೇ ಇಸವಿಯಲ್ಲಿ ಮುದ್ರಣವಾಗಿದ್ದು. ಅದಕ್ಕಿಂತ ಮುಂಚೆ ಕೆಲವು ಇದರಲ್ಲಿಯ ಲೇಖನಗಳು ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟವಾಗಿ ಇನ್ನೂ ಜನಪ್ರಿಯ ಮಾಸಿಕ, ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಪ್ರಿಯಗೊಂಡಿದ್ದವು. ಈ ಪುಸ್ತಕವು ಗದ್ಯವನ್ನೂ ಒಳಗೊಂಡಿದೆ ಪದ್ಯಗಳನ್ನೂ ಒಳಗೊಂಡಿದೆ. ಓದುಗರು ಯಾವ ಪ್ರಕಾರದ ಸಾಹಿತ್ಯವನ್ನು ಇಷ್ಟ ಪಡುತ್ತಾರೋ ಆ ಪ್ರಕಾರ ಈ ಪುಸ್ತಕದಲ್ಲಿ ಕಂಡು ಬರುತ್ತದೆ. ಡಿವಿಜಿಯವರ ಕಗ್ಗ ಸ್ವಲ್ಪ ಕ್ಲಿಷ್ಟ, ಕಾರಣ ಅದರಲ್ಲಿಯ ಭಾಷೆ ಮತ್ತು ಆಳ. ಕಗ್ಗಕ್ಕಾಗಿಯೇ ಬೇರೊಂದು ನಿಘಂಟು ಮತ್ತು ತಾತ್ಪರ್ಯಕ್ಕಾಗಿ ಪುಸ್ತಕಗಳಿವೆ. ಆದರೆ ಈ ಪುಸ್ತಕ ಹಂಗಲ್ಲ. ಕಗ್ಗದಲ್ಲಿಯ ವಿಚಾರಧಾರೆಯನ್ನೇ ನಾವು ಈ ಪುಸ್ತಕದಲ್ಲಿಯೂ ಕಾಣಬಹುದು. ಪುಸ್ತಕದಲ್ಲಿಯ ವಚನಗಳು ಆಳವಾದ ವಿಚಾರಧಾರೆಯನ್ನು ಹೊಂದಿದ್ದರೂ ಸಾಮಾನ್ಯ ಜನರಿಗೆ ಆರಾಮಾಗಿ ಅರ್ಥವಾಗುವಂತಹವು. ರಂಗಣ್ಣನವರು ತಮ್ಮ ವೃತ್ತಿ ಮತ್ತು ಜೀವನದಲ್ಲಿ ಕಂಡಂತಹ ಏಳು ಬೀಳುಗಳು, ಜನರ ಸುಖ-ದುಃಖಗಳು, ಜೀವನದ ಸ್ವಾರಸ್ಯ ಇಂತಹ ವಿಷಯಗಳನ್ನು ಕುರಿತು ಬಹಳ ಚೆನ್ನಾಗಿ ಈ ಪುಸ್ತಕದಲ್ಲಿಯ ವಚನಗಳನ್ನು ನಿರ್ಮಿಸಿದ್ದಾರೆ. ಮೊದಲಿನ ದಿನಗಳಲ್ಲಿ ರಂಗಣ್ಣನ ವಚನಗಳು ಎಂದೇ ಈ ಸಾಲುಗಳು ಪ್ರಸಿದ್ಧವಾಗಿದ್ದವು. ಇಲ್ಲಿ ರಂಗಣ್ಣನವರ ಅಂಕಿತನಾಮ ಮಾವಿನಕೆರೆ ರಂಗಯ್ಯ. ಪುಸ್ತಕದ ಮುನ್ನುಡಿಯಲ್ಲಿ ಅದ್ಭುತವಾದ ಸಾಲುಗಳು:
ಜೇಡಿಮಣ್ಣಿನ ಮುರುಕು ಬೊಂಬೆಯ ಹಿಡಿದು ಮಗು ನಲಿಯುವುದ ಕಂಡೆ. ಒಣಗಿದ್ದ ರೊಟ್ಟಿ ಚೂರನೇ ಕಡಿದು, ಕುಡಿಕೆಯಲ್ಲಿನ ಕಪ್ಪು ನೀರನೆ ಕುಡಿದು ತೃಪ್ತಿಯನು ತಬ್ಬಿದ ರೈತನನು ಕಂಡೆ ಸೌಖ್ಯವದು ಸುಲಭ, ಅದಕಾಗಿ ಜನ್ಮವನು ತೇಯುವೆವು ಏತಕೋ ನಾನರಿಯೆನಯ್ಯ, ಮಾವಿನಕೆರೆ ರಂಗಯ್ಯ
ಈ ಸಾಲುಗಳು ಲೇಖಕರ ಕೈಯಲ್ಲಿ ಹೇಗೆ ಮೂಡಿಬಂದವು ಅದೂ ಸ್ವಾರಸಿಕ ಸಂಗತಿಯೇ! ಅವರ ಪ್ರಯಾಣದ ಸಮಯದಲ್ಲಿ ಕಂಡ ಸನ್ನಿವೇಶವಿದು ಹಾಗೆಯೇ ಎಷ್ಟೋ ವಚನಗಳು ಹೀಗೆ ಒಮ್ಮೆಲೇ ಅವರ ಮನದಲ್ಲಿ ಏನೋ ನೋಡಿದಾಗ ಮೂಡಿದಂತಹವು ಅಂದರೆ ಅವರ ಕಣ್ಣಲ್ಲಿ ಇದ್ದಂತಹ ಆ ಕಾವ್ಯಮಯ ಸೃಷ್ಟಿ ಹೇಗಿರಬಹುದು! ಕನ್ನಡ ಸಾಹಿತ್ಯದಲ್ಲಿ ಇದೊಂದು ಅದ್ಭುತವಾದ ಪುಸ್ತಕ, ಓದಿ ಆನಂದಿಸಿ.