ದಕ್ಷಿಣ ಕನ್ನಡ ಜಿಲ್ಲೆಯ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಈ ಕಾದಂಬರಿಯಲ್ಲಿ, ಕಾದಂಬರಿಗಾರ್ತಿ ಮಿತ್ರಾ ವೆಂಕಟರಾಜ ಅವರು ಪಾತ್ರಗಳ ಮೂಲಕ ಜೀವನದಲ್ಲಿ ಎದುರಾಗುವ ಘಟನೆಗಳಿಗೆ ಅವರ ಪ್ರತಿಕ್ರಿಯೆಗಳನ್ನು ಸ್ಪಷ್ಟವಾಗಿ ಚಿತ್ರಿಸಿದ್ದಾರೆ. ಹಳ್ಳಿಯಲ್ಲಿ ಪ್ರಮುಖವಾಗಿರುವ ಕುಟುಂಬಗಳ ರೀತಿ-ನೀತಿಗಳು ಇತರ ಸಾಮಾನ್ಯ ಕುಟುಂಬಗಳ ಮೇಲೆ ಬೀರುವ ಪರಿಣಾಮಗಳನ್ನು ಸಹ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಅವರು ಈ ಕಾದಂಬರಿಯನ್ನು ಎರಡು ಭಾಗಗಳಲ್ಲಿ ರಚಿಸಿ, ಜೀವನದ ಪರಂಪರೆ ಅಳಿದು ಹೋಗದಂತೆ ಇಂದಿನ ಓದುಗರಿಗೆ ಮುಟ್ಟಿಸುವುದರೊಂದಿಗೆ ಮುಂದಿನ ತಲೆಮಾರಿಗೆ ಸಹ ಒಂದು ಮೂಲದಾಖಲೆ ಉಳಿಸಿದ್ದಾರೆ.
#ಪರಿಚಯ_೧೭_೨೦೨೬ ಕೃತಿ: ಪಾಚಿ ಕಟ್ಟಿದ ಪಾಗಾರ ಸಂಪಾದಕರು: ಮಿತ್ರಾ ವೆಂಕಟ್ರಾಜ ಪ್ರಕಾಶಕರು: ಮನೋಹರ ಗ್ರಂಥಮಾಲಾ, ಧಾರವಾಡ
#ಸಾಹಿತ್ಯ_ಸುಗ್ಗಿ_೨೦೨೫ರಲ್ಲಿ ಬರೆದ ಲೇಖನಗಳಿಗಾಗಿ ಬಹುಮಾನವಾಗಿ ಶ್ರೀಮತಿ ವೀಣಾ ನಾಯಕ್ ಮೇಡಂ ಅವರ ಪ್ರಾಯೋಜಕತ್ವದಲ್ಲಿ ದೊರೆತ ಪುಸ್ತಕ.
ಈ ಪುಸ್ತಕವು ಇಷ್ಟವಾಯಿತು ಎಂದರೆ ಇಷ್ಟವಾಯಿತು, ಇಲ್ಲವೆಂದಾದರೆ ಇಲ್ಲ. ಪುಸ್ತಕದ ಶೀರ್ಷಿಕೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬದುಕನ್ನು ಬಿಂಬಿಸುವ ಕೃತಿ ಎಂಬುದನ್ನು ನೋಡಿ ಈ ಪುಸ್ತಕಕ್ಕೆ ನಾನೇ ಬೇಡಿಕೆ ಇಟ್ಟಿದ್ದೆ. ಕತೆ, ಕತೆಯು ನಡೆಯುವ ಪರಿಸರ, ಕತೆಯನ್ನು ಹೆಣೆದ ರೀತಿ ಎಲ್ಲವೂ ಚೆನ್ನಾಗಿದ್ದರೂ ಬಹುಮುಖ್ಯವಾಗಿ ಓದುಗನನ್ನು ತನ್ನೊಳಗೆ ಸೆಳೆದುಕೊಳ್ಳುವ ಗುಣವನ್ನು ಈ ಪುಸ್ತಕದಲ್ಲಿ ಎಲ್ಲಿಯೂ ಕಾಣಲಿಲ್ಲ. ಸರಿ ಸುಮಾರು ಇದೇ ಕಾಲಘಟ್ಟದ ಕತೆಯನ್ನು ಹೊಂದಿರುವ ನಾ. ಮೊಗಸಾಲೆ ಅವರ “ಉಲ್ಲಂಘನೆ”, ಬಿ.ಜನಾರ್ದನ ಭಟ್ ಅವರ “ಸ್ಥಿತ್ಯಂತರ”, ಚಂದ್ರಶೇಖರ ದಾಮ್ಲೆ ಅವರ “ನೆಲದ ನಂಟು” ಕೃತಿಗಳು ಒಂದು ಕಾಲಘಟ್ಟದಲ್ಲಿನ ಸಾಮಾಜಿಕ ಪಲ್ಲಟಗಳನ್ನು ಸಶಕ್ತವಾಗಿ ಚಿತ್ರಿಸಿದರೆ, ಈ ಕೃತಿಯು ಕೇವಲ ಒಂದು ತಲೆಮಾರಿನ ಎರಡು ಕುಟುಂಬಗಳ ಅನುದಿನದ ಜೀವನ ಕ್ರಮಕ್ಕೆ ಸೀಮಿತಗೊಳ್ಳುತ್ತದೆ. ಆ ಕುಟುಂಬದ ಪಾತ್ರಗಳ ಪೋಷಣೆಯು ಸಹ ಒಂದು ನಿಗದಿತ ಚೌಕಟ್ಟಿನಲ್ಲಿ ಪದೇ ಪದೇ ಸುತ್ತುವುದರಿಂದ,ಊರಿನ ಜಮೀನ್ದಾರಿ ಕುಟುಂಬವಾಗಿ ಸಹ ಅಲ್ಲಿನ ನಡೆಗಳು ಊರ ಮೇಲೆ, ಒಕ್ಕಲು ಮಕ್ಕಳ ಮೇಲೆ ಬೀರುವ ಪರಿಣಾಮಗಳನ್ನು ಚಿತ್ರಿಸುವಲ್ಲಿ ವಿಫಲವಾಗಿವೆ.
ಇನ್ನು ಇದನ್ನೊಂದು ಅಣ್ಣ ತಮ್ಮಂದಿರ ಕತೆಯೆಂದು ಪರಿಗಣಿಸಬಹುದಾದರೆ ಅಲ್ಲಿ ಸಹ ಆ ಸಂಬಂಧದ ಹಲವು ಒಳನೋಟಗಳು ಸಿಗುವುದಿಲ್ಲ. ಸ್ವೇಚ್ಛಾಚಾರದ ಅಣ್ಣನಿಗೆ ಉಸಿರೆತ್ತದ ತಮ್ಮ. ತನ್ನ ಮೂಗಿನ ನೇರದಡಿಯಲ್ಲಿ ನಡೆಯ ಬೇಕೆನ್ನುವ ಅಣ್ಣನಿಗೆ ತಮ್ಮನನ್ನು ಕಂಡರೆ ವಿಪರೀತ ಪ್ರೀತಿ. ಆದರೆ ಅವನು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದನ್ನು ಕಂಡರೆ ಅಸೂಯೆ, ಅಸಹನೆ. ಇಡೀ ಕಾದಂಬರಿಯಲ್ಲಿ ಇಂತಹುದೇ ಘಟನೆಗಳ ಪುನರಾವರ್ತನೆ. ಒಂದು ತರಹದ ಉಸಿರುಗಟ್ಟಿಸುವ ವಾತಾವರಣವನ್ನು ಓದುತ್ತಾ ಓದುಗನನ್ನು ಸಹ ಉಸಿರು ಕಟ್ಟಿಸುತ್ತದೆ. ಇದರ ನಡುವೆ ಬರುವ ಎರಡನೇ ಮಹಾಯುದ್ಧ, ಭಾರತದ ಸ್ವಾತಂತ್ರ್ಯ ಮುಂತಾದ ಘಟನೆಗಳು ಕೇವಲ ನೆಪಮಾತ್ರಕ್ಕೆ ತೇಲಿಕೊಂಡು ಹೋಗುತ್ತವೆ.
ಇದು ಲೇಖಕರು ಕಂಡಂತಹ ಒಂದು ಕುಟುಂಬದ ಕತೆ ಅಥವಾ ಅವರು ಕೇಳಲ್ಪಟ್ಟ ಯಾವುದೇ ಒಂದು ವ್ಯಕ್ತಿಯ ಕತೆಯಾಗಿದ್ದರೆ ಅದನ್ನು ಪ್ರಸ್ತಾವನೆಯಲ್ಲಿ ಹೇಳಿದ್ದರೆ ಒಂದು ಅಧಿಕೃತತೆಯನ್ನು ಪುಸ್ತಕವು ಪಡೆದುಕೊಳ್ಳುತ್ತಿತ್ತು. ಆದರೆ ಅಂತಹ ಪ್ರಸ್ತಾಪವೇ ಇಲ್ಲದಿರುವುದರಿಂದ ಒಟ್ಟಾರೆಯಾಗಿ ಕೃತಿಯು ಸೊರಗಿದೆ ಎಂದು ಹೇಳಬಹುದು.
ನಮಸ್ಕಾರ, ಅಮಿತ್ ಕಾಮತ್
This entire review has been hidden because of spoilers.