ಜಾತಿ ಮತ್ತು ಅಸ್ಪೃಶ್ಯತೆಯ ಕುರಿತಾಗಿ ನಾನು ಈಗಾಗಲೇ ನಾಲ್ಕು ಅಥವಾ ಐದು ಕಾದಂಬರಿಗಳನ್ನು ಕನ್ನಡದಲ್ಲಿ ಓದಿದ್ದೇನೆ. ಅಷ್ಟೂ ಪುಸ್ತಕಗಳು ನನಗೆ ಮೆಚ್ಚುಗೆಯಾಗಿವೆ ಎನ್ನುವುದು ವಿಶೇಷತೆ. ಒಂದೇ ವಿಷಯದ ಕುರಿತಾಗಿ ಐದಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಓದಿದರೂ ಇನ್ನಷ್ಟು ಓದಬೇಕೆಂಬ ಹಂಬಲ ಮೂಡಿಸುವುದರ ಕಾರಣ ಕಾಲು ಕಾಲಿಗೂ ತೊಡರುವ ಈ ಜಾತಿಯೆನ್ನುವ ಸಾಮಾಜಕ ಪಿಡುಗೋ? ಅಥವಾ ತಮ್ಮ ಪ್ರಾಂತ್ಯದಲ್ಲಿ ತಮ್ಮ ಅನುಭವಕ್ಕೆ ಬಂದಂತಹ ಜಾತಿ ಸಮಸ್ಯೆಯ ಜಟಿಲತೆಯನ್ನೂ ಸೂಕ್ಷ್ಮತೆಯನ್ನೂ ತಿಳಿಸುವ ಲೇಖಕರ ದೃಷ್ಟಿಕೋನವೋ? ಕಾರಣ ಏನೇ ಇರಲಿ, ಜಾತಿ ಅಥವಾ ಅಸ್ಪೃಶ್ಯತೆಯ ಸಮಸ್ಯೆ ಬಹಳ ಆಳ ಮತ್ತು ಸೂಕ್ಷ್ಮವಾದುದು. ಈ ವಿಷಯದ ಕುರಿತು ಹೆಚ್ಚಿನ ಓದಿನ ಅವಶ್ಯಕೆತೆಯಿದೆ. ಕೇವಲ ಬೌದ್ಧಿಕ ಬೆಳವಣಿಗೆಗೆ ಮಾತ್ರವಲ್ಲ, ಸಮಾಜದ ಏಳಿಗೆಗೂ ಸಹ. ಪೀಠಿಕೆ ಇಲ್ಲಿಗೆ ಅಂತ್ಯ, ಮುಂದೆ ಪುಸ್ತಕದ ಕುರಿತು.
ಇನ್ಸ್ಟಾಗ್ರಾಮ್ ಪರಿಚಿತರೊಬ್ಬರು ವೈದೇಹಿಯವರ “ಅಸ್ಪೃಶ್ಯರು” ಓದಿ ಎಂದು ಹೇಳಿದಾಗ, ಕೃತಿಯ ಶೀರ್ಷಿಕೆ ನನ್ನನ್ನು ಬಹಳ ಆಕರ್ಷಿಸಿದ್ದಲ್ಲದೆ ಅಸ್ಪೃಶ್ಯತೆಯ ಕುರಿತು ಮಹಿಳಾ ಲೇಖಕಿಯೊಬ್ಬರ ದೃಷಿಕೋನವನ್ನು ತಿಳಿಯುವ ಕುತೂಹಲವೂ ನನ್ನಲ್ಲಿ ಮೂಡಿತು. ಶೀರ್ಷಿಕೆಯಿಂದಲೇ ಹೇಳಬಹುದು ಇದೊಂದು ಸಾಮಾಜಿಕ ಪಿಡುಗಿನ ಕುರಿತಾದದ್ದೆಂದು. ಕುಂದಾಪುರ ಪ್ರಾಂತ್ಯದ ಕಾಲ್ಪನಿಕ ಕಿರುಕುಟುಂಬವೊಂದರಲ್ಲಿ ನೆಡೆಯುವ ಕಥೆ ಇಲ್ಲಿದೆ. “ಅಸ್ಪೃಶ್ಯ” ಎಂದರೆ ಮುಟ್ಟಬಾರದ ಎಂದು ಅರ್ಥ ಕೊಡುತ್ತದೆ. ಕಥೆಯಲ್ಲಿ ಎರಡು ರೀತಿಯ ಅಸ್ಪೃಶ್ಯತೆಯನ್ನು ಕಾಣಬಹುದು. ಒಂದು, ಈ ಕುಟುಂಬದ ಕೆಲವರಲ್ಲಿ ಶೂದ್ರರ ಕುರಿತು ಇದ್ದ ಕೀಳುಮಟ್ಟದ ಮನೋಭಾವ ಮತ್ತು ಎರಡನೆಯದು ತಮ್ಮ ನಂಬಿಕೆಗಳನ್ನೇ ತಮ್ಮ ಮಕ್ಕಳ ಮೇಲು ಹೇರಿ ಅವರನ್ನೂ ತಮ್ಮಂತೆಯೇ ಅಸ್ಪೃಶ್ಯ ಮನದವರನ್ನಾಗಿ ಮಾಡುವ ಪ್ರಯತ್ನ.ಹೀಗಿರುವಾಗ ಇಲ್ಲಿ ನಿಜವಾಗಿಯೂ ಅಸ್ಪೃಶ್ಯರು ಯಾರು? ಇದು ಓದುಗರಾದ ನಮ್ಮ ಚಿಂತನೆಗೆ ಬಿಟ್ಟದ್ದು. ಲೇಖಕಿಯವರು ಹೇಳುವಂತೆ ಎಲ್ಲ ಶರೀರಗಳಲ್ಲೂ ಜಾತಿ ವಾಸವಾಗಿರಲಿಕ್ಕಿಲ್ಲ, ಅಲ್ಲಲ್ಲಿ ಮನುಷ್ಯನು ಇರಬಹುದು.
ಪಾತ್ರಗಳ ಸಂಭಾಷಣೆ ಕುಂದಾಪುರ ಕನ್ನಡದಲ್ಲಿರುವುದರಿಂದ ಆರಂಭದಲ್ಲಿ ಓದಲು ಕೊಂಚ ಕಷ್ಟವಾಯಿತು. ಒಂದೇ ವಾಕ್ಯವನ್ನು ಮೊದಮೊದಲು ಮೂರು ಬಾರಿ ಓದಿದ್ದು ನಿಜ. ಹತ್ತು ಅಥವಾ ಹದಿನೈದು ಪುಟಗಳನ್ನು ಓದುವುದರೊಳಗೆ ಭಾಷೆ ಹಿಡಿತಕ್ಕೆ ಬರುತ್ತದೆ, ವಿಷಯದ ಗಂಭೀರತೆ ಹೆಚ್ಚಾದಂತೆಲ್ಲ ಬಿಡದೆ ಓದಿಸಿಕೊಳ್ಳುತ್ತದೆ. ಮರಳಿ ಮಣ್ಣಿಗೆ ಮತ್ತು ಪುನರ್ವಸು ಓದುವಾಗಲೂ ಹೀಗಿಯೇ ಆಗಿದ್ದುಂಟು. ಇಂದು ಅವೆರಡು ಪುಸ್ತಕಗಳು ನನ್ನ ಬಹು ಮೆಚ್ಚಿನವು. ಬಹಳ ತಿಂಗಳುಗಳ ನಂತರ ನಾನೊಂದು ಪುಸ್ತಕವನ್ನು ೨೪ ಘಂಟೆಗಳ ಒಳಗೆ ಓದಿದ್ದು ಖುಷಿಯಿದೆ. ಕಿರು ಕಾದಂಬರಿಯಾದ “ಅಸ್ಪೃಶ್ಯರು”ವನ್ನು ಪುಸ್ತಕ ಪ್ರೇಮಿಗಳೆಲ್ಲರೂ ಓದಲೇಬೇಕಾದ್ದು ಎಂದು ಯಾವುದೇ ಅಳುಕಿಲ್ಲದೆ ಹೇಳುತ್ತೇನೆ.
ನಾನು ಓದಿದ (ಕೇಳಿದ) ವೈದೇಹಿಯವರ ಮೊದಲ ಕಾದಂಬರಿ ಇದು. ಸ್ಟೋರಿ ಟೆಲ್ನಲ್ಲಿ ಅವರ ಮಗಳು ಪಲ್ಲವಿ ರಾವ್ ಇದಕ್ಕೆ ದನಿಯಾಗಿದ್ದಾರೆ. ಕಾದಂಬರಿಯ ಉದ್ದಕ್ಕೂ ಅಸ್ಪೃಶ್ಯತೆಯ ಮಜಲುಗಳ ವಿಶಧೀಕರಣ ನಮ್ಮ ನಮ್ಮ ಸಾಮಾಜಿಕ ಮೌಲ್ಯಗಳು ಮತ್ತು ಅಷಾಡಭೂತಿತನಗಳಿಗೆ ಸವಾಲು ಒಡ್ಡುತ್ತವೆ. ಕುಂದಾಪ್ರ ಭಾಷೆಯನ್ನು ಓದುವಕ್ಕಿಂತ ಕೇಳುವುದೇ ಹಿತ, ಹಾಗಾಗಿ ಇದು ಆಡಿಯೋ ಪುಸ್ತಕಕ್ಕೆ ಹೇಳಿ ಮಾಡಿಸಿದ ಕಾದಂಬರಿ.
ವೈದೇಹಿಯವರ ಕಥೆಯಾಧಾರಿತ ಅಮ್ಮಾಚಿಯೆಂಬ ನೆನಪು, ಗುಲಾಬಿ ಟಾಕೀಸ್ ಚಿತ್ರಗಳನ್ನು ನೋಡಿದಾಗ ಅವರ ಪುಸ್ತಕಗಳನ್ನೊಮ್ಮೆ ಓದಬೇಕೆಂದುಕೊಂಡಿದ್ದೆ. ನಾನು ಓದಿದ ವೈದೇಹಿಯವರ ಮೊದಲ ಪುಸ್ತಕ ಅಸ್ಪೃಶ್ಯರು ಜಾತಿ ವ್ಯವಸ್ಥೆಯ ಆಧಾರದ ಮೇಲೆ ರಚಿಸಲಾಗಿದೆ. ಈ ಕಾದಂಬರಿ ಕುಂದಾಪುರ ಭಾಗದ ಅಂದಿನ ಕಾಲದ ಜನ ಜೀವನ ಚಿತ್ರಿಸುತ್ತದೆ. ಜೊತೆಗೆ ಕುಂದಾಪ್ರ ಕನ್ನಡ ಹಾಗು ಅಲ್ಲಿನ ಗ್ರಾಮ್ಯ ಸೊಗಡಿನ ಕಂಪನ್ನು ಬೀರಿದೆ.
ಅಸ್ಪೃಶ್ಯ ಎಂದರೆ ಮುಟ್ಟಲಾಗದ ಎಂಬ ಅರ್ಥಕೊಡುವುದಲ್ಲವೆ. ಈ ಕಾದಂಬರಿ ಅಸ್ಪೃಶ್ಯತೆಯ ಹಲವೂ ಆಯಾಮಗಳನ್ನು ಕೊಡುವ ಕೃತಿಯಾಗಿದೆ. ಬರೀ ಕೀಳು ಜಾತಿಯವರನ್ನು ಮುಟ್ಟಿಸಿಕೊಳ್ಳುವುದು ಅಥವಾ ಮುಟ್ಟುವುದಲ್ಲದ ಅಸ್ಪೃಶ್ಯತೆಯೊಂದಿಗೆ ಇಲ್ಲಿ ಮಡಿ ಮೈಲಿಗೆಗಳ ಕಟ್ಟು ಪಾಡಿಗೆ ಬಿದ್ದು ನೆಮ್ದದಿಯ ಜೀವನ ಅಸ್ಪೃಶ್ಯಗೊಂಡಿದೆ. ಗಂಡ ಹೇಳಿದಂತೆ ಕೇಳುವ, ಹೊಡೆದರೆ ಹೊಡೆಸಿಕೊಳ್ಳುವ ಮದುವೆಯಾದ ಹೆಂಗಸಿನ ಭಾವನೆಗಳು ಅಸ್ಪೃಶ್ಯಗೊಂಡಿದೆ. ಮನೆಮಗಳು ತನ್ನ ಭವಿಷ್ಯವನ್ನು ತಾನೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಆಸ್ಪೃಶ್ಯಗೊಂಡಿದೆ.
ಇಲ್ಲಿ ಯಾರನ್ನ ದೂರುವುದೆನ್ನುವ ಪ್ರಶ್ನೆಗಳು ಸುಳಿಯುತ್ತಲೆ ಇರುತ್ತದೆ. ಅತ್ಯಂತ ಕೀಳು ಜಾತಿಯಲ್ಲಿ ಹುಟ್ಟಿದವಳನ್ನು ಬ್ರಾಹ್ಮಣನೊಬ್ಬ ಮದುವೆಯಾಗುತ್ತಾನೆ. ನೀನು ಜಾತಿ ಕೆಡಿಸಿದೆಯಂತ ಅವಳ ಮನೆಯವಳು ಅವಳನ್ನು ಮನೆಯಿಂದ ಹೊರಹಾಕುತ್ತಾರೆ. ಅವಳ ಹೆರಿಗೆ ಸಮಯದಲ್ಲಿ ಅವಳ ಗಂಡನ ಮನೆಯವರು ಕೆಲವೊಬ್ಬರು ಅವಳ ಆರೈಕೆಗೆ ಮುಂದಾಗುವವರೇ ಹೊರತು ಅವಳ ಮನೆಯಿಂದ ಒಬ್ಬರು ಬಂದವರಿಲ್ಲ. ಈಗ ಕಾಡುವ ಪ್ರಶ್ನೆ ಏನೆಂದರೆ ನಿಜವಾದ ಅಸ್ಪೃಶ್ಯರು ಮೇಲು ಜಾತಿಯವರ ಆಥವಾ ಕೀಳು ಜಾತಿಯವರ? ಹೀಗೆ ಕೆಲವೊಂದು ಸಂದರ್ಭ ನಮ್ಮನ್ನು ನಾವೇ ಪ್ರಶ್ನಿಸುವಂತೆ ಮಾಡುತ್ತದೆ.
ನೀವ್ಯಾಕೆ ಓದಿ ಉದ್ದಾರವಾಗುದಿಲ್ಲವೆಂದು ಹೀಗೆ ಮೇಲ್ಜಾತಿಯವರು ಕೆಳ ಜಾತಿಯವರನ್ನು ಕೇಳಿದಾಗ, 'ನಾವು ಓದಿ ಕೆಲಸ ಹಿಡಿದರೆ ನಿಮ್ಮ ಮನೆಯ ತೆಂಗಿನ ಮರ ಹತ್ತುವುದ್ಯಾರು? ಬಾವಿ ಕೆಸರು ತೆಗೆಯುದ್ಯಾರು? ನೀರು ಹೊರುವುದ್ಯಾರು? ನಮಗೆ ಇಷ್ಟೇ ಸಾಕು ಇದರಲ್ಲಿಯೇ ಜೀವನ ಸಾಗಿಸುತ್ತೇವೆ. ಓದು ಕೆಲಸವೆಲ್ಲ ನಮಗಲ್ಲವೆಂದು ಅವರ ಮಿತಿಯನ್ನು ಅವರೇ ರೂಪಿಸಿಕೊಂಡಿರುವಾಗ ಅವರನ್ನು ಉದ್ದಾರ ಮಾಡುವುದಾದರೂ ಯಾರು?
ತಮಗಿಂತ ಮೇಲ್ಜಾತಿಯವರು ಮುಟ್ಟಿಸಿಕೊಂಡಾಗಾ ' ಏನಾಗುತ್ತದೆ ನಾವೂ ಮನುಷ್ಯರೆ' ಎನ್ನುವವರು ತಮಗಿಂಗ ಕೀಳು ಜಾತಿಯವರನ್ನು ಮುಟ್ಟಿಕೊಂಡಾಗ ಮಡಿಯಂತ ಓಡಿ ಹೋಗಿ ಸ್ನಾನ ಮಾಡುತ್ತಾರೆ. ಇಂತಹ ಮನಸ್ಥಿತಿಗೆ ಔಷಧಿಯಾದರೂ ಎಲ್ಲಿಂದ ಹುಡುಕುವುದು?
ಇನ್ನೂ ಹೇಳಬೇಕೆಂದರೆ ಕೆಲವೊಂದು ಪಾತ್ರಗಳು ತುಂಬಾ ಕಾಡುವುದು. ಮಡಿ, ಮೈಲಿಗೆಯಿಂದ ತುಂಬಿರುವ ಮನೆಯಲ್ಲಿ ಧೈರ್ಯವಾಗಿ ಎಲ್ಲರನ್ನು ಎದುರಿಸುವ ಸರೋಜ ತುಂಬ ಇಷ್ಟವಾಗುತ್ತಾಳೆ. ನನ್ನ ಅಕ್ಕನ ತರ ಭಾವನೆ ಸತ್ತ ಬಾವನಂತ ಗಂಡನನ್ನು ಮದುವೆಯಾಗುವ ಬದಲು ನನ್ನನ್ನು ಸುಖವಾಗಿ ನೋಡಿಕೊಳ್ಳುವವನು ಕೀಳುಜಾತಿಯವನಾದರೂ ಆಗಬಹುದು ಎಂದು ಧೈರ್ಯದಿಂದ ಹೇಳುತ್ತಾಳೆ. ಹಾಗೇ ವಾಸುದೇವ ಆಚಾರ್ಯ, ಶೀನ, ಭಾಸ್ಕರ, ಶಾರಿ, ಪುಟ್ಟ, ಶಿವ ಪಾತ್ರಗಳು ತುಂಬಾ ಚೆನ್ನಾಗಿರುವವು.
ಬಾಲ್ಯದಲ್ಲಿ ಆಡಿದ ಆಟಗಳು. ತೆಂಗಿನ ಓಲೆಯ ವಾಚು, ಪಿಂಪಿರ್ಕಿ (ವಿಸೀಲು), ಪೇಪರ್ ದೋಣಿ, ಹಲಸಿನ ಹಪ್ಪಳ, ಮಹಡಿ ಮನೆ ಹೀಗೆ ಇಲ್ಲಿ ಬರುವ ಕೆಲವೊಂದು ಸನ್ನೀವೇಶಗಳು 20-25 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಿತ್ತು. ಮಕ್ಕಳ ತುಂಟಾಟ, ಅವರ ಕೂತೂಹಲ, ಅವರು ಕೇಳುವ ಪ್ರಶ್ನೆಗಳು, ಭೂತದ ಕತೆಗಳು ಹಳೆಯ ನೆನಪುಗಳನ್ನಂತು ಮೆಲುಕು ಹಾಕಿಸಿತ್ತು. ಇದರಲ್ಲಿ ಬರುವ ಮಕ್ಕಳ ಪಾತ್ರಗಳಲ್ಲಿ ನಾನು ಬೇರಂತೆ ಅನಿಸಿತ್ತು.
ಭೈರಪ್ಪ, ಕಾರಂತರನ್ನು ಇಷ್ಟಪಡುವವರಿಗೆ ಈ ಕಾದಂಬರಿ ಇಷ್ಟವಾಗುದೇನು ಕಷ್ಟವಲ್ಲ. ಸಮಾಜದ ಪಿಡುಗುಗಳು, ಆಚಾರ ವಿಚಾರಗಳು, ಮನುಷ್ಯನ ಹಾಗೇ ಸಮಾಜದ ಮೇಲೆ ಹೇಗೆ ಪ್ರಭಾವ ಬೀರುವುದೆಂದು ತಿಳಿಸಿ ಕೊಡುವ ಈ ಕಾದಂಬರಿ ಪ್ರತಿಯೊಬ್ಬರು ಓದಬೇಕಾಗಿರುವ ಪುಸ್ತಕ.
ಸಣ್ಣ ಪುಸ್ತಕ. ಒಂದು ಸಣ್ಣ ಊರಿನಲ್ಲಿ ಜಾತಿ ಎಂಬುದು ಹೇಗೆ ಮನೆಯ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ರೀತಿ thoughts ಇದೆ ಎಂದು ಚೆನ್ನಾಗಿ ಕಥೆ ಕಟ್ಟಿ ಕೊಟ್ಟಿದಾರೆ. ಪೂರ್ತಿ ಅಲ್ಲದೆ ಇದ್ದರೂ ಹೆಚ್ಚಿನ ಭಾಗ ಕುಂದಗನ್ನಡ ಅಲ್ಲಿ ಇದೆ.
This novella is a typical Vaidehi. Knitting story is an art and Vaidehi has very soft hands here. Asprushyaru , in particular , has a ordinary story-line with beautiful characters. Vaidehi takes the question of untouchability to another dimension and asks how disruptive the idea of caste and untouchability can be. The question of "untouchable " is probed right from its meaning of " should not touch" to " can not touch " ! The emotional values of an illiterate society are depicted with care. It's a good read in total.
ಅಸ್ಪೃಶ್ಯ ಪದಕ್ಕೆ ಹೊಸ ಆಯಾಮ ಕೊಡುವ ಕಾದಂಬರಿ ಇದು. ಮೂಲತಃ ಕುಂದಾಪುರದವನ್ನಾದ್ದರಿಂದ ಕುಂದಗನ್ನಡ ಸೊಗಡು, ಪದಗಳು ತುಂಬಾ ಮುದ ನೀಡಿದವು. ಜಾತಿ ಅನ್ನುವುದು ಎಂತಹಾ ಕಗ್ಗಂಟು ಎನ್ನುವುದು ಈ ಪುಸ್ತಕ ಓದಿ ಮುಗಿಸಿದ ಮೇಲೆ ಕೊರೆಯುತ್ತದೆ!