ಗಂಗವ್ವ ಗಂಗಾಮಾಯಿ
ಶಂಕರ ಮೊಕಾಶಿ ಪುಣೇಕರ
ಇತ್ತೀಚೆಗೆ ಅವಧೇಶ್ವರಿ ಕಾದಂಬರಿ ಓದಿ ಮುಗಿಸಿದಾಗ ಕೆಲವು ಪಾತ್ರಗಳು ಹಾಗು ಸನ್ನಿವೇಶಗಳು ಮನಸ್ಸಿನಲ್ಲಿಯೇ ಉಳಿದುಬಿಟ್ಟಿದೆ, ಆ ಕಾದಂಬರಿ ಇಷ್ಟವಾದ್ದರಿಂದ ಪುಣೇಕರ ರವರ ಇತರ ಕಾದಂಬರಿಗಳನ್ನು ತರೆಸಿಕೊಂಡು ಅದರಲ್ಲಿ ಗಂಗವ್ವ ಗಂಗಮಾಯಿ ಕಾದಂಬರಿ ಓದಿ ಮುಗಿಸಿದಾಗ ಈ ಕಾದಂಬರಿಯು ಇಷ್ಟವಾಯಿತು.
ಮುಖ್ಯ ಪಾತ್ರಗಳು: ಗಂಗವ್ವ, ಗಂಗವ್ವನ ಮಗ ಕಿಟ್ಟಿ, ಗಂಗವ್ವನ ತಮ್ಮ ರಾಘಪ್ಪ, ದೇಸಾಯರು, ದೇಸಾಯರ ಮಕ್ಕಳು ಅಚ್ಯುತ, ವಸಂತ. ರಾಘಪ್ಪನ ಹೆಂಡತಿ ಚಂಪಕ್ಕ, ಮಕ್ಕಳು ರತ್ನಾ, ಶಾಂತ. ರಾಘಪ್ಪನ ಸಖಿ ಮೆಹಬೂಬಜಾನ್.
ದೇಸಾಯರು ಕಾಶಿಯಾತ್ರೆಗೆ ಹೊರಟದ್ದನ್ನು ಕಂಡು ಗಂಗವ್ವನೂ ಕಾಶಿಯಾತ್ರೆಗೆ ಹೊರಟಳು. ವಿಶ್ವನಾಥ, ಕಾಲಭೈರವ,ಬಿಂದುಮಾಧವ, ಗಂಗಾಮಾತೆಯ ದರ್ಶನ ಮಾಡಿಕೊಂಡು ಯಾತ್ರೆ ಮುಗಿಸಿ ಗಂಗಾಜಲ ತುಂಬಿಸಿಕೊಂಡು ಬರುವಾಗ ಅದು ಸಾವಿನ ಸಂಕೇತವಾಗಿ ಕಂಡಿದ್ದರಿಂದ, ಇಲ್ಲ ತಾನು ಸಾಯಬಾರದು ಕಿಟ್ಟಿಗೋಸ್ಕರ ಬದುಕಲೇ ಬೇಕೆಂದು ಗಂಗಾಜಲವನ್ನು ಚೆಲ್ಲಿಬಿಡುತ್ತಾಳೆ. ಕಾದಂಬರಿ ಉದ್ದಕ್ಕೂ ಆಕೆಯ ಗಟ್ಟಿತನ, ಕಿಟ್ಟಿಯ ಮೇಲಿದ್ದ ಹಿಡಿತನವನ್ನು ಮೆಚ್ಚಬೇಕಾದದ್ದೆ. ಗಂಡನನ್ನು ಕಳೆದುಕೊಂಡನಂತರ ಕಿಟ್ಟಿಯನ್ನು ಬೆಳೆಸಲು ಕಷ್ಟಪಡುತ್ತಾಳೆ, ಆಕೆಯು ಕಿಟ್ಟಿಗಾಗಿಯೇ ಧೃಡ ಸಂಕಲ್ಪದಿಂದ ಜೀವಿಸಿದ್ದು, ಕಿಟ್ಟಿಗೆ ಮದುವೆ ಮಾಡಿ, ಜವಾಬ್ದಾರಿ ವಹಿಸಿ, ಮೊಮ್ಮಕ್ಕಳನ್ನು ನೋಡಿ ಕಣ್ಣು ಮುಚ್ಚಬೇಕೆಂಬುದೇ ಆಕೆಯ ಬಯಕೆ. ಅಂಥದ್ದರಲ್ಲಿ ಒಂದು ದಿನ ರಾಘಪ್ಪನ ಪ್ರವೇಶವಾಗುತ್ತದೆ, ತನ್ನ ತಮ್ಮ ರಾಘಪ್ಪನೆಂದರೆ ಕಿಡಿಕಾರುತ್ತಾಳೆ, ತಾನು ಕಷ್ಟದಲ್ಲಿದ್ದಾಗ ತನ್ನನ್ನು ಎಂದೂ ಕಾಣಲೂ ಬರದೆ ಇರುವವನು ಕಿಟ್ಟಿ ಸರ್ಕಾರಿ ನೌಕರಿ ಸೇರಿದನೆಂದು ತಿಳಿದು ತನ್ನ ಮಗಳಾದ ರತ್ನಾಳನ್ನು ಕಿಟ್ಟಿಗೆ ಕೊಟ್ಟು ಮದುವೆ ಮಾಡಬೇಕೆಂಬ ಕುತಂತ್ರ ಹೂಡುತ್ತಾನೆ, ಅದು ಗಂಗವ್ವನಿಗೂ ತಿಳಿದಿರುವ ಸಂಗತಿಯೇ. ರಾಘಪ್ಪನೆಂದರೆ ಸದಾ ದ್ವೇಷ ಕಾರಣ ತನ್ನ ಕಷ್ಟಕಾಲದಲ್ಲಿ ತನಗೆ ನೆರವಾಗಿಲ್ಲವೆಂದು ಹಾಗು ತನ್ನ ಗಂಡನ ಸಾವಿಗೆ ರಾಘಪ್ಪನೇ ಇರಬಹುದೆಂದು ಮತ್ತೊಂದು ಕಾರಣ.
ಮಾಮಲೇದಾರರ ಕಛೇರಿಯಲ್ಲಿ ಕೆಲಸ ಮಾಡುವ ಕಿಟ್ಟಿಗೆ, ಕೆಲಸದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುತ್ತಾನೆ, ಪ್ರತಿ ಹೆಜ್ಜೆಗೂ ಅವಮಾನ ಎದುರಿಸುತ್ತಾ ತನ್ನ ಕೆಲಸವನ್ನು ಸಾಗಿಸುತ್ತಾನೆ, ಆ ಕೆಲಸದಲ್ಲಿ ಕಿಟ್ಟಿಗೆ ಅನುಭವ ಕಡಿಮೆ ಆದರೂ ತನ್ನ ಸಹೋದ್ಯೋಗಿಯಾದ ಜಾರ್ಜ್ ಇವನು ಮಾಡುವ ಕೆಲಸಕ್ಕೆ ಆಸರೆಯಾಗುತ್ತಾನೆ. ಮನೆಗೆ ಬಂದ ರಾಘಪ್ಪನನ್ನು ಅವಮಾನ ಪಡಿಸಿ ಕಳುಹಿಸಿದಾಗ ಕಿಟ್ಟಿ ಗಂಗವ್ವನ ಮೇಲೆ ಮುನಿಸಿಕೊಳ್ಳುತ್ತಾನೆ ಕಾರಣ ತನ್ನ ಕಛೇರಿಯಲ್ಲಿ ರಾಘಪ್ಪನು ಎಲ್ಲರಿಗೂ ತಿಳಿದಿರುವ ವ್ಯಕ್ತಿಯೆಂದು, ಅವರ ಸಹಾಯ ತನಗೆ ಅಗತ್ಯವೆಂದು ಆಕೆಯ ಮೇಲೆ ಕೋಪಿಸಿಕೊಳ್ಳುತ್ತಾನೆ. ಅಂತೂ ಮೆಹಬೂಬಜಾನ ಸಂಗೀತ ಕಾರ್ಯಕ್ರಮದಲ್ಲಿ ಮಾಮಲೇದಾರರ ಪರಿಚಯ ಮಾಡಿಸಿಕೊಟ್ಟಾಗ ತನಗೆ ಕಛೇರಿಯಲ್ಲಿ ಅನುಕೂಲವಾಗುತ್ತದೆ. ಅಂದಿನಿಂದ ರಾಘಪ್ಪನು ತನಗೆ ಆದರ್ಶ ವ್ಯಕ್ತಿಯಾಗಿ ಕಾಣುತ್ತಾನೆ. ಗಂಗವ್ವ ತನ್ನಲ್ಲಿದ್ದ ಹಣವನ್ನು ದೇಸಾಯರ ಬಳಿ ಜೋಪಾನವಾಗಿ ಇಟ್ಟಿರುತ್ತಾಳೆ, ಕಿಟ್ಟಿಗೆ ಆ ಸುದ್ಧಿ ಒಮ್ಮೆ ದೇಸಾಯರ ಮಗ ವಸಂತನಿಂದ ತಿಳಿದಾಗ ತಾಯಿಯ ಮೇಲೆ ಕಿಡಿಕಾರುತ್ತಾನೆ. ತಮ್ಮ ಹಣವನ್ನು ತಾವು ಕೇಳುವಾಗ ದೇಸಾಯರಿಂದ ಆಗುವ ಅವಮಾನಗಳಿಂದ ತಾಯಿಯ ಬಳಿ ಮಾತಾಡುವುದನ್ನೇ ಕಡಿಮೆ ಮಾಡುತ್ತಾನೆ. ಅಂತೂ ರಾಘಪ್ಪ ದೇಸಾಯರ ಸಂಧಾನದಿಂದ ಗಂಗವ್ವನಿಗೆ ಇಷ್ಟವಿಲ್ಲದಿದ್ದರೂ ರತ್ನಾಳನ್ನು ಕಿಟ್ಟಿಗೆ ಮದುವೆ ಮಾಡಿಸುತ್ತಾರೆ. ಹಣದ ವಿಷಯದಲ್ಲಿ ಮೆಹಬೂಬಜಾನ ರಾಘಪ್ಪನಿಗೆ ಸಹಾಯ ಮಾಡಿ ರಾಘಪ್ಪನಿಂದ ದೂರವಾಗುತ್ತಾಳೆ. ಮೊದಮೊದಲು ಅತ್ತೆ ಸೊಸೆಯರಲ್ಲಿ ಜಗಳಗಳಾದಗ ಕಿಟ್ಟಿಗೆ ಯಾರ ಪರ ವಹಿಸಬೇಕೊ ತಿಳಿಯುತ್ತಿರಲಿಲ್ಲ. ಕಿಟ್ಟಿ, ರತ್ನಾ, ರಾಘಪ್ಪನಿಂದ ಸದಾ ಅವಮಾನಿತಗೊಂಡ ಗಂಗವ್ವ ಕಿಟ್ಟಿಯನ್ನು ರಾಘಪ್ಪನ ಬಲೆಗೆ ಬೀಳದ ಹಾಗೆ ಕಾಪಾಡಿಕೊಂಡು ಬರುತ್ತಾಳೆ. ಕ್ರಮೇಣ ಕಿಟ್ಟಿ ಹಾಗು ರತ್ನಾ ಗಂಗವ್ವನ ಬೆಲೆ ತಿಳಿದು ಆಕೆಯ ಜೊತೆ ಹೊಂದುಕೊಂಡು ಹೋಗುತ್ತಾರೆ.
ಇತ್ತ ದೇಸಾಯರ ಆಸ್ತಿಯ ಮೇಲೆ ರಾಘಪ್ಪನಿಗೆ ಕಣ್ಣು ಬಿದ್ದು ದೇಸಾಯರ ಮಗ ವಸಂತನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿ, ತನ್ನ ಮಗಳಾದ ಶಾಂತಳನ್ನು ವಸಂತನನ್ನು ಒಲಿಯುವ ಹಾಗೆ ಮಾಡಿ ಅದರಲ್ಲಿ ಸಫಲನಾಗುತ್ತಾನೆ, ಶಾಂತಳನ್ನು ಮದುವೆಯಾಗಲು ಹಾಗು ರಾಘಪ್ಪನ ಪ್ರೇರಣೆಯಿಂದ ವಸಂತನು ದೇಸಾಯರಲ್ಲಿ ಆಸ್ತಿಯಲ್ಲಿ ತನ್ನ ಪಾಲು ಕೊಡಲು ಕೇಳಿದಾಗ ಕಪಾಳ ಮೋಕ್ಷವಾಗುತ್ತದೆ. ಇದೇ ಸಮಯದಲ್ಲಿ ದೇಸಾಯರು ಮತ್ತೊಂದು ಕಡೆ ಮುಂಬಯಿಯಲ್ಲಿದ್ದ ತನ್ನ ಮಗ ಅಚ್ಯುತನಿಂದ ರಾಘಪ್ಪನ ತಮ್ಮನಾದ ವೆಂಕಟರಮಣನ ಸುದ್ಧಿಯನ್ನು ಪತ್ತೆ ಹಚ್ಚಿ ಅವನ ಪಾಲಿನ ಆಸ್ತಿಯನ್ನು ಮೋಸಮಾಡಿ ರಾಘಪ್ಪ ದಕ್ಕಿಸಿಕೊಂಡಿರುವನೆಂದು ಆತನ ಪಾಲು ಆತನಿಗೆ ಕೊಡತಕ್ಕದ್ದಂದು ಬೆದರಿಕೆಹಾಕುತ್ತಾನೆ, ಕಿಟ್ಟಿಯನ್ನು ದತ್ತು ತೆಗೆದು ಕೊಳ್ಳುವುದೆಂದು ಮದುವೆಯ ಸಮಯದಲ್ಲಿ ರಾಘಪ್ಪ ಗಂಗವ್ವನಿಗೆ ಮಾತು ಕೊಟ್ಟಿರುತ್ತಾನೆ, ಕಿಟ್ಟಿ ತನ್ನ ಆಸ್ತಿಗೆ ವಾರಸುದಾರನಾಗಲು ತಪ್ಪಿಸಲು ಚಂಪಕ್ಕನನ್ನು ಒಲಿಸಿ ಗಂಡು ಮಗು ಪಡೆಯಲು ಪ್ರಯತ್ನಪಟ್ಟು, ಆ ಪ್ರಯತ್ನದಲ್ಲಿ ಚಂಪಕ್ಕನನ್ನು ಹಾಗು ಪುಟ್ಟ ಗಂಡು ಮಗುವನ್ನು ಕಳೆದುಕೊಂಡು ಹಾಗು ತನ್ನ ಸಖಿ ಮೆಹಬೂಬಜಾನನ್ನು ಕಳೆದುಕೊಂಡು ಹಾಗು ದೇಸಾಯರ ಮುಂದೆ ಸೋಲು ಒಪ್ಪಿಕೊಳ್ಳದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇತ್ತ ಗಂಗವ್ವ ರಾಘಪ್ಪನನ್ನು ಕಳೆದುಕೊಂಡ ದುಖದಿಂದ ಹಾಗು ಆತನ ಮೇಲೆ ಕೊನೆಯವರೆಗೂ ಹಗೆ ಸಾಧಿಸಿದ ಕಾರಣ ವ್ಯಥೆಗೊಳ್ಳುತ್ತಾಳೆ. ತಾಯಿ ತಂದೆಯಿಲ್ಲದ ರತ್ನಾ, ಶಾಂತಳನ್ನು ತನ್ನ ಮಕ್ಕಳ ಹಾಗೆ ಸಾಕುತ್ತಾಳೆ.
ಈ ಕಾದಂಬರಿಯಲ್ಲಿ ಗಂಗವ್ವ-ರಾಘಪ್ಪರ ದೀರ್ಘದ್ವೇಷ, ಕಿಟ್ಟಿಯ ಮನೋದೌರ್ಬಲ್ಯ, ಜಾರ್ಜ್ ಹಾಗು ಮೆಹಬೂಬಾನರ ಔದಾರ್ಯ, ಅಚ್ಯುತನ ಯೌವನೋತ್ಸಾಹ, ಚಂಪಕ್ಕನ ಮರಣ, ತಾಯಿ ಗರ್ಭವತಿಯಾದಳೆಂದು ತಿಳಿದ ರತ್ನಾ ತನಗೆ ಮಕ್ಕಳಾಗದಿರುವುದನ್ನು ನೆನೆದು ಅಸೂಯೆ ಪಡುವುದು, ಇವುಗಳನ್ನು ಪುಣೇಕರರು ಮುನುಷ್ಯರ ಮನೋಭಾವನೆಗಳನ್ನು ಈ ಪಾತ್ರಗಳ ಮೂಲಕ ಸುಂದರವಾಗಿ ಚಿತ್ರಿಸಿದ���ದಾರೆ.
*ಕಾರ್ತಿಕೇಯ*