ಶಾನ್ತಲದೇವಿಯ ಬಾಳಿನ ಸುತ್ತ ಬಾಲ್ಯದಿಂದ ಸಾಯುಜ್ಯವರೆಗೆ, ಆಗಿನ ಕಾಲದ ಕಲೆ, ಸಂಸ್ಕೃತಿ, ಶಿಲ್ಪ, ಧರ್ಮ, ಸಾಹಿತ್ಯ, ಜನಜೀವನ, ರಾಜಕೀಯ ಹೋರಾಟ, ಆರ್ಥಿಕ ಪರಿಸ್ಥಿತಿ, ಕುತಂತ್ರಗಳು, ಮೇಲಾಟ, ಸಂಚು, ಮಾನವೀಯ ದೌರ್ಬಲ್ಯಗಳ ಸೆಳೆತ, ಪಿಸುಣುತನ, ರಾಷ್ಟ್ರರ್ದೋಹ, ರಾಷ್ಟ್ರನಿಷ್ಠೆ, ವ್ಯಕ್ತಿನಿಷ್ಠೆ, ಯುದ್ಧಗಳು, ಕರಾಳ ಸ್ವಾರ್ಥ, ಹೀಗೆ ಹಲವು ಮುಖಗಳು ಹರಡಿ ನಿಂತಿವೆ. ಭಿನ್ನತೆ, ವೈವಿದ್ಯಗಳಿಂದ ಕೂಡಿದೆ. ಈ ಭಿನ್ನತೆ ವೈವಿದ್ಯಗಳಲ್ಲಿ ಏಕತೆಯನ್ನು ಕಾಣಿಸಲು ನಾನು ಪ್ರಯತ್ನಿಸಿದ್ದೇನೆ. ನಿಜವಾದ ಮಾನವೀಯ ಮೌಲ್ಯಗಳತ್ತ ಗಮನ ಹರಿಸಿದ್ದೇನೆ. ಲೌಕಿಕ ವಿಚಾರಗಳ ಸೆಳೆಯಲ್ಲಿ ಪಾರ ಲೌಕಿಕ ವಿಚಾರಗಳು ಅಂತರ್ವಾಹಿನಿಯಾಗಿ ಹರಿದಿವೆ.
C. K. Nagaraja Rao was an Indian writer, dramatist, stage artist, director, journalist and social activist, who wrote in Kannada.
He was the first recipient of the Moortidevi Award instituted by Bharatiya Jnanpith for his magnum opus "Pattamahadevi Shantaladevi" in 1983. The same work received "Best Creative Literary Work" award by the Karnataka Sahitya Academy in 1978.
ಇತ್ತೀಚೆಗೆ ಏನೋ ಓದುತ್ತಿದ್ದಾಗ ಹೊಯ್ಸಳ ಸಾಮ್ರಾಜ್ಯದ ಕುರಿತಾದ ವಿಷಯ ಸಿಕ್ಕಿತು. ಆಗ ಸಿ.ಕೆ. ನಾಗರಾಜರಾವ್ ಅವರು ಬರೆದ “ಪಟ್ಟಮಹಾದೇವಿ ಶಾನ್ತಲದೇವಿ” ಪುಸ್ತಕವನ್ನು ಓದಲೇಬೇಕೆಂಬ ಹಂಬಲವಾಯಿತು. ಇದಕ್ಕೆ ಮೊದಲು ಕೆ.ವಿ.ಅಯ್ಯರ್ ಅವರ “ಶಾಂತಲಾ” ಕೃತಿಯನ್ನು ಓದಿದ್ದರು ಸಹ ಈ ಪುಸ್ತಕದ ಕುರಿತಾದ ಬರಹಗಳನ್ನು ಓದಿ, ನನ್ನಲ್ಲಿದ್ದ ಆಸೆ ಇನ್ನಷ್ಟು ಪ್ರಬಲವಾಯಿತು. ಆದರೆ ಪುಸ್ತಕದ ಬೆಲೆ ಸಿಕ್ಕಾಪಟ್ಟೆಯಾದ್ದರಿಂದ ಖರೀದಿಸಲು ಹಿಂದೇಟು ಹಾಕಿ, ಪುಸ್ತಕ ಅವಲೋಕನ ಬಳಗದಲ್ಲಿ ಎರವಲು ಸಿಗಬಹುದೇ ಎಂದು ಕೇಳಿದ್ದೆ. ಅದಕ್ಕೆ ತಕ್ಕಂತೆ ಇದೇ ಗುಂಪಿನ ಸದಸ್ಯರಾದ ಶ್ರೀಮತಿ ಮತ್ತು ಶ್ರೀ ಸಿ.ಎನ್.ಆರ್.ರಾವ್ ಅವರು ಈ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ನನ್ನ ಓದುವ ಹಂಬಲಕ್ಕೆ ನೀರೆರೆದು ಸಹಕರಿಸಿದರು. ಆ ಇಬ್ಬರು ಹಿರಿಯರಿಗೆ ನಾನು ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೇ. ಏಕೆಂದರೆ ಇಂತಹ ಘನ ಕೃತಿಗಳನ್ನು ಓದುವುದು ಇಡೀ ಜೀವಮಾನದಲ್ಲಿ ಒಂದು ಬಾರಿ ದಕ್ಕಬಹುದಾದ ಅನುಭವ. ಒಂದು ವೇಳೆ ಪುಸ್ತಕವು ಸಿಗದಿದ್ದರೆ ಅಂತಹ ಅಭೂತಪೂರ್ವ ಅನುಭವದಿಂದ ವಂಚಿತನಾಗುತ್ತಿದ್ದೆ ಎಂಬುದು ಅಕ್ಷರಶಃ ಸತ್ಯ.
ಸಿ.ಕೆ. ನಾಗರಾಜರಾವ್ ಅವರು ಸತತ ಎಂಟತ್ತು ವರ್ಷಗಳ ಕಾಲ ನಡೆಸಿದ ಅಧ್ಯಯನ ಮತ್ತು ಸಂಶೋಧನೆಯ ಫಲಶೃತಿಯೇ ಈ ಬೃಹತ್ ಕಾದಂಬರಿ. ಅವರ ಪ್ರಾಸ್ತಾವಿಕ ಮಾತುಗಳಲ್ಲಿ ಕೃತಿಯನ್ನು ರಚಿಸಲು ದೊರೆತ ಪ್ರೇರಣೆ, ಎದುರಾದ ಸವಾಲುಗಳು, ದೊರೆತಂತಹ ಆಕರಗಳನ್ನು ಬಳಸಿ ತಮ್ಮ ಕಲ್ಪನೆಗೆ ಹೊಂದಿಕೊಳ್ಳುವಂತೆ ನಿಜವಾದ ವ್ಯಕ್ತಿಗಳ ಜೊತೆಗೆ ಕಾಲ್ಪನಿಕ ಪಾತ್ರಗಳನ್ನು ಬೆಳೆಸಿದ ಬಗೆ, ಬರೆಯಲು ತೆಗೆದುಕೊಂಡ ಸಮಯ, ಪುಸ್ತಕ ಪ್ರಕಟಿಸಲು ಎದುರಾದ ಸವಾಲುಗಳ ಬಗೆಗೆ ಬರೆದಿರುವ ನುಡಿಗಳು ಕೃತಿಯ ಮಹತ್ವವನ್ನು ಸೂಚ್ಯವಾಗಿ ತೆರೆದಿಡುತ್ತವೆ. ಅಷ್ಟೇ ಅಲ್ಲದೇ ಕೃತಿಯನ್ನು ಓದುತ್ತಾ ಹೋದಂತೆ ಎಲ್ಲಿಯೂ ಅವರು ಉತ್ಪ್ರೇಕ್ಷೆಯನ್ನು ಪ್ರಕಟಿಸಿಲ್ಲ ಎಂಬುದು ಮನದಟ್ಟಾಗುತ್ತದೆ. ಸಾವಿರದ ಎಂಟುನೂರ ನಲವತ್ತ್ನಾಲ್ಕು ಪುಟಗಳ ಈ ಪುಸ್ತಕವನ್ನು ಇಪ್ಪತ್ತೈದು ದಿನಗಳಲ್ಲಿ ಓದಿ ಮುಗಿಸಿದ್ದೇನೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಒಂದು ಬಾರಿ ಪುಸ್ತಕ ಓದಲು ಪ್ರಾರಂಭಿಸಿದ ಮೇಲೆ ಬೇರೆ ಯಾವುದೇ ಸಿನಿಮಾ, ವೆಬ್ ಸಿರೀಸ್ಗಳಾಗಲಿ ನೋಡಿಲ್ಲ ಅಥವಾ ಇತರ ಯಾವುದೇ ಬರಹಗಳನ್ನು ಓದಿಲ್ಲ. ಹೆಚ್ಚು ಕಡಿಮೆ ಈ ಅವಧಿಯಲ್ಲಿ ದಿನಪತ್ರಿಕೆಗಳನ್ನು ಓದುವುದನ್ನು ಬಿಟ್ಟುಬಿಟ್ಟಿದ್ದೆ ಎಂದರೆ ಪುಸ್ತಕವು ಹಿಡಿಸಿದ ಗುಂಗು ಯಾವ ತರಹದ್ದು ಎಂಬ ಅಂದಾಜು ಸಿಗಬಹುದು.
ಇನ್ನು ಪುಸ್ತಕದ ವಿಚಾರಕ್ಕೆ ಬರುವುದಾದರೆ ಶಾನ್ತಲದೇವಿಯ ಬಾಲ್ಯದಿಂದ ಪ್ರಾರಂಭವಾಗಿ ಸಾಯುಜ್ಯವನ್ನು ಹೊಂದುವವರೆಗೆ ಕತೆಯು ವಿಸ್ತಾರವಾಗಿ ಹರಡಿಕೊಂಡಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಶಾನ್ತಲೆಯ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯು ಬಾಲ್ಯದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಯಾವುದೇ ವಿಚಾರವನ್ನಾಗಲಿ ಕೂಲಂಕಷವಾಗಿ ವಿಮರ್ಶಿಸಿ ನಂತರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಅನೇಕಾನೇಕ ಘಟನೆಗಳು ಕತೆಯುದ್ದಕ್ಕೂ ಕಾಣಸಿಗುತ್ತವೆ. ತನಗೆ ವಿರುದ್ಧವಾಗಿ ನಡೆದುಕೊಂಡವರನ್ನು ಸಹ ದ್ವೇಷಿಸದೆ ಆ ನಡವಳಿಕೆಗೆ ಕಾರಣೀಭೂತವಾದ ಅಂಶಗಳನ್ನು ಪತ್ತೆ ಹಚ್ಚಿ, ಅವರುಗಳ ತಪ್ಪಿನ ಬಗ್ಗೆ ಅರಿವು ಮೂಡಿಸುವ ಮೂಲಕ ವಿರೋಧಿಗಳ ಹೃದಯದಲ್ಲಿ ಸ್ಥಾನವನ್ನು ಗಳಿಸುವ ಚಾಕಚಕ್ಯತೆಯಿಂದ ಶಾನ್ತಲದೇವಿಯ ಹೆಸರು ಅಜರಾಮರವಾಗಿ ಪೀಳಿಗೆಯಿಂದ ಪೀಳಿಗೆಗೆ ಉಳಿದುಕೊಂಡು ಹೋಗಿದೆ. ಇದರ ನಡುವೆ ಮನುಷ್ಯ ಸಹಜ ನಡವಳಿಕೆಗಳು, ಧಾರ್ಮಿಕ ವಿಚಾರಗಳು, ಕಲೆ, ಸಾಹಿತ್ಯ, ವಾಸ್ತುಶಿಲ್ಪ, ರಾಜಕೀಯ ಒಳಸುಳಿಗಳು, ಯುದ್ಧತಂತ್ರದ ಹತ್ತು ಹಲವು ಮಜಲುಗಳ ಕುರಿತಾದ ಜಿಜ್ಞಾಸೆಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ವೈಯಕ್ತಿಕವಾಗಿ ಚೆನ್ನಕೇಶವ ಮಂದಿರ, ಹೊಯ್ಸಳೇಶ್ವರ ದೇವಾಲಯ, ಬೆಳುಗೊಳದ ಗೊಮ್ಮಟ ಗಿರಿ, ಶಿವಗಂಗೆಯ ವಿವರಗಳನ್ನು ಓದುವಾಗ ಆದಷ್ಟು ಬೇಗ ಈ ಮೂರು ಸ್ಥಳಗಳನ್ನು ನೋಡಲೇಬೇಕು ಎಂಬ ಬಯಕೆ ಮನಸ್ಸಿನಲ್ಲಿ ಮೂಡುತ್ತಿತ್ತು.
ಇಷ್ಟು ದೊಡ್ಡ ಕೃತಿಯಲ್ಲಿ ಯಾವುದೇ ವಿವರಗಳು ಪುನರಾವರ್ತನೆ ಅನಿಸುವುದಿಲ್ಲ ಅಥವಾ ಪದೇ ಪದೇ ಇಣುಕಿ ರಸಭಂಗವನ್ನುಂಟು ಮಾಡುವುದಿಲ್ಲ. ಉದಾಹರಣೆಗೆ ಪಟ್ಟಾಭಿಷೇಕದ ಸಂದರ್ಭವನ್ನು ಒಂದು ಬಾರಿ ಅಮೂಲಾಗ್ರವಾಗಿ ವಿವರಿಸಿದ ನಂತರ ಇನ್ನುಳಿದ ಪಟ್ಟಾಭಿಷೇಕದ ವಿವರಗಳು ನಾಲ್ಕೈದು ಸಾಲುಗಳಲ್ಲಿ ಬಂದು ಹೋಗುತ್ತವೆ. ಇನ್ನೂ ಒಂದು ಗಮನಸೆಳೆದ ಅಂಶವೆಂದರೆ ಲೇಖಕರ ಬರವಣಿಗೆಯ ಲಾಲಿತ್ಯ. ಆಹಾ… ಅದನ್ನು ಓದುವುದೇ ಒಂದು ಸುಖ … ಓದುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಶೈಲಿ. ಇಲ್ಲಿನ ಭಾಷೆಯಲ್ಲಿ ಹಳ್ಳಿಯ ಸೊಗಡು, ಮಹಾರಾಜನ ಗಾಂಭೀರ್ಯ,ತಾಯಿಯ ಮಮತೆ,ತಂದೆಯ ಶಿಸ್ತು, ಆಚಾರ್ಯರ ಆಶೀರ್ವಾದ, ಕುಹಕಿಗಳ ವ್ಯಂಗ್ಯ, ಸ್ವಾರ್ಥಿಗಳ ಪಿಸುಣತನ, ದಂಡನಾಯಕನ ಕಟ್ಟಾಜ್ಞೆ ಎಲ್ಲವೂ ಸಮ ಪ್ರಮಾಣದಲ್ಲಿ ಮಿಶ್ರಿತವಾಗಿ ಎಲ್ಲೂ ಅತಿರೇಕಕ್ಕೆ ಹೋಗದೆ ಹಿಡಿಸುವ ಗುಂಗು ಇದೆಯಲ್ಲಾ ಅದನ್ನು ಅನುಭವಿಸುವ ಸಲುವಾಗಿಯಾದರೂ ಓದಬೇಕು. ದುರದೃಷ್ಟವಶಾತ್ ಇಂತಹಾ ಮಹತ್ತರವಾದ ಕೃತಿಗಳು ದುಬಾರಿಯಾದ ಕಾರಣದಿಂದ ಓದುಗರ ಕೈಸೇರದಿರುವುದು ದುರಂತವೇ ಸರಿ.
ಇಲ್ಲಿ ಪರಿಚಯಿಸುವಾಗ ಯಾವುದೇ ಘಟನೆಗಳನ್ನು ಉಲ್ಲೇಖಿಸಿದಿರಲು ಕಾರಣ ಒಂದು ಎಲ್ಲಿಂದ ಪ್ರಾರಂಭಿಸಿ ಎಲ್ಲಿಗೆ ಕೊನೆಗೊಳಿಸ ಬೇಕೆಂಬುದುರ ಬಗೆಗಿನ ಅನುಮಾನ, ಮತ್ತೊಂದು ರಾಣಿಯ ಕುರಿತಾದ ಕತೆಯಾದ್ದರಿಂದ ಸಹಜವಾಗಿ ಅವಳ ಏಳುಬೀಳುಗಳ ವಿವರಗಳು. ಆದರೆ ಲೇಖಕರು ಅದನ್ನು ಲಂಬಿಸಿರುವ ಪರಿಗೇ ಎಂತಹವರಾದರೂ ಮರುಳಾಗಲೇಬೇಕು. ಕಣ್ಣಿಗೆ ಕಟ್ಟುವಂತಹ ವಿವರಗಳು, ಕಣ್ಣ ಮುಂದೆಯೇ ಘಟನೆಗಳು ನಡೆದಂತೆ ಭಾಸವಾಗುವ ಹಲವು ಪುಸ್ತಕಗಳನ್ನು ನೆನಪಿಸಿಕೊಳ್ಳಬಹುದು, ಆದರೆ ಇಲ್ಲಿರುವ ವರ್ಣನೆಯು ಇತರೆ ಕೃತಿಗಳಿಗಿಂತ ಒಂದಂಶ ಮೇಲು, ಒಂದು ಹೆಜ್ಜೆ ಮುಂದೆ… ಅವಕಾಶವಾದರೆ ಪುಸ್ತಕದ ಓದುವ ಹವ್ಯಾಸವನ್ನು ಬೆಳೆಸಿಕೊಂಡವರಿಗೆ ಹೇಳುವ ಮಾತು ಇಷ್ಟೇ, ಒಂದು ವರ್ಷದಲ್ಲಿ ಖರೀದಿಸಬಹುದಾದ ಪುಸ್ತಕಗಳ ಮೊತ್ತವನ್ನು ಹಾಗೆಯೇ ಇಟ್ಟು ಈ ಪುಸ್ತಕಗಳನ್ನು ಖರೀದಿಸಿ ಓದಿ. ಖಂಡಿತವಾಗಿಯೂ ನಿರಾಸೆಯಾಗಲಾರದು, ಒಂದು ಅದ್ಭುತ, ಅತ್ಯಪೂರ್ವ ಅನುಭವ ನಿಮ್ಮದಾಗುತ್ತದೆ ಎಂದು ಮಾತ್ರ ಹೇಳಬಲ್ಲೆ…
**Pattamahadevi Shantaladevi** is a richly researched historical novel by C.K. Nagaraja Rao that delves into the lives of King Vishnuvardhana (formerly Prince Bittideva) and Queen Shantala Devi of the Hoysala Empire. Divided into two parts, it traces their individual journeys to power and then navigates the tumultuous political landscape fueled by religious conflicts.
Part 1 - meticulously portrays the adolescence of Bittideva and Shantala, offering a glimpse into their personal growth and transformation. The writing vividly illustrates the historical context, seamlessly weaving in details about Jainism, Vaishnavism, Shaivism, and their respective beliefs. Food culture and clashes between Kannada kingdoms like the Chalukyas and Kadambas further enrich the narrative.
Part 2 - shifts focus to the political turmoil born from religious differences. It's here that the story truly shines. The author masterfully captures the helplessness of Vishnuvardhana and Shantala as they struggle to quell the rising tensions. This emotional depth sets this novel apart from K.V. Iyer's "Shantala," offering a unique perspective on the era.
While the ending might spark questions, it undoubtedly leaves a lasting impression. It ignites a desire to delve deeper into history, prompting readers to visit iconic sites like Shravanabelagola, Belur, and Halebidu.
ಸಿ ಕೆ ನಾಗರಾಜರಾವ್ ರವರು ಈ ಕೃತಿಯನ್ನು ೧೯೬೮ ರಲ್ಲಿ ಪ್ರಾರಂಭಿಸಿ ೧೯೭೬ರಲ್ಲಿ ಮುಗಿಸುತ್ತಾರೆ, ಜಕಣಾಚಾರಿಯ ಕುರಿತು ಕಾದಂಬರಿ ಬರೆಯುವ ಸಮಯದಲ್ಲಿ ಶಾನ್ತಲದೇವಿ ಬಂಜೆಯಲ್ಲ, ಆಕೆಗೆ ನಾಲ್ಕು ಮಕ್ಕಳು ಹಾಗು ಆಕೆಯು ಆತ್ಮಹತ್ಯೆ ಮಾಡಿಕೊಂಡಿಲ್ಲವೆಂಬುದನ್ನು ಸುಳಿವು ಸಿಕ್ಕಾಗ ಇಡೀ ಪೊಸ್ಸಳ ವಂಶದ ಕುರಿತು ಸಂಶೋಧನೆ ನಡೆಸಲು ತೊಡಗುತ್ತಾರೆ, ೧೮೨೪ ಪುಟಗಳನ್ನೊಳಗೊಂಡ ಈ ಕಾದಂಬರಿಯನ್ನು ಪಟ್ಟು ಹಿಡಿದು ಓದಲು ಶುರುಮಾಡಿದ��, ಕೆಲಸದ ಒತ್ತಡ ಎಷ್ಟೇ ಇದ್ದರೂ ಆಫೀಸಿನ ಕ್ಯಾಬ್ ನಲ್ಲಿ ಓದಲು ಶುರುಮಾಡಿದೆ, ಈ ಬೃಹತ್ ಕೃತಿಯನ್ನು ಓದುತ್ತಿದ್ದಾಗ ನನ್ನ ಸಹೋದ್ಯೋಗಿಗಳು ಏನು ನೀವು ದೊಡ್ಡ ಗ್ರಂಥವನ್ನೇ ಓದುತ್ತಿದ್ದೀರಾ ಎಂದು ಕೇಳಿದ್ದೂ ಉಂಟು. ನಾನು ಓದುವುದನ್ನು, ಅದೂ ಕನ್ನಡ ಪುಸ್ತಕಗಳನ್ನು ಓದುವುದನ್ನು ನೋಡಿ ಅವರಿಗೂ ಕುತೂಹಲವಾಗಿ ನನ್ನ ಕೆಲವು ವಿಮರ್ಶೆಗಳನ್ನು ಓದಿ ಮೆಚ್ಚಿದ್ದರು. ಮನೆಯಲ್ಲಿ ನನ್ನ ಮಗನೂ ಸಹ ಅಪ್ಪ ಇನ್ನು ಎಷ್ಟು ಪುಟಗಳಿವೆ ಬೇಗ ಬೇಗ ಓದಿ ನಂತರ ವೀರರಂಗ ವಿಷ್ಣುವರ್ಧನ, ಪೃಥ್ವೀವಲ್ಲಭ ಪುಸ್ತಕಗಳೇ ಓದಬೇಕೆಂದು ಅವನೇ ನಿರ್ಧರಿಸಿಯಾಯಿತು.
೨ ಭಾಗಗಳನ್ನು ಓದಲು ನನಗೆ ಸರಿ ಸುಮಾರು ಓಂದು ತಿಂಗಳೇ ಹಿಡಿಯಿತು, ಆ ಇಡೀ ಮಾಸದಲ್ಲಿ ನನ್ನಲ್ಲಿ ಶಾನ್ತಲದೇವಿ, ಸನ್ನಿಧಾನ ವಿಷ್ಣುವರ್ಧನ ಇನ್ನೂ ಕೆಲವು ಪಾತ್ರಗಳ ಗುಂಗಿನಲ್ಲಿದ್ದೆ, ಶಾನ್ತಲದೇವಿಯ ಬಾಲ್ಯದಿಂದ ಹಿಡಿದು ಸಾಯುಜ್ಯದವರೆಗೆ ಈ ಕಾದಂಬರಿ ಪೋಸ್ಸಳ ರಾಷ್ಟ್ರದ ಕಥೆಯನ್ನು ಸವಿಸ್ತಾರವಾಗಿ ಹೇಳುತ್ತದೆ. ಡಣ್ಣಾಯಕ ಮರಾಸಿಂಗ ಹಾಗು ಮಾಚಿಕಬ್ಬೆಯ ಮಗಳಾದ ಜೈನ ಕುಟುಂಬಕ್ಕೆ ಸೇರಿದ ಶಾನ್ತಲದೇವಿ ವಿಷ್ಣುವರ್ಧನನ್ನು ಮದುವೆಯಾಗಿ, ರಾಣಿಯಾಗಿ ನಂತರ ಪಟ್ಟಮಹಾದೇವಿಯಾಗುವುದಲ್ಲದೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಈಕೆಯು ಹೇಳಿದರೆ ಅದನ್ನೇ ಪರಿಗಣಿಸುವಷ್ಟು ಹೆಸರು ಪಡೆದುಕೊಂಡಿದ್ದಳು, ತನ್ನನ್ನು ಪ್ರೀತಿಸುವವರನ್ನಲ್ಲದೆ ತನ್ನನ್ನು ದ್ವೇಷಿಸುವವರನ್ನೂ ಪ್ರೀತಿಸುವ ಮನೋಭಾವವಿತ್ತು.
ಮೊದಲನೆಯ ಭಾಗ: ಮೊದಲನೆಯ ಭಾಗದಲ್ಲಿ ರಾಜ ವಿನಯಾದಿತ್ಯ, ಯುವರಾಜ ಎರೆಯಂಗಪ್ರಭು, ಪಟ್ಟಮಹಾದೇವಿ ಏಚಲದೇವಿ, ಈ ದಂಪತಿಗಳ ಮಕ್ಕಳಾದ ಬಲ್ಲಾಳ, ಬಿಟ್ಟಿದೇವ, ಉದಯಾದಿತ್ಯ, ಮಾಚಿಕಬ್ಬೆಯ ಮಗಳಾದ ಶಾನ್ತಲದೇವಿಯ ಬಾಲ್ಯದ ಕಥೆಯನ್ನು ಓದುವುದು ಒಂದು ಅದ್ಭುತ ಅನುಭವ, ಬಾಲ್ಯದಲ್ಲೇ ಸಂಗೀತ, ನೃತ್ಯ, ಕಲೆಗಳಲ್ಲಿ ಪ್ರವೀಣಳಾದ ಶಾನ್ತಲದೇವಿಯನ್ನು ಆಕೆಯ ಗುರುಗಳು ಬೋಕಿಮಯ್ಯ, ಏಚಲದೇವಿ ಮೆಚ್ಚಿಕೊಳ್ಳುವುದನ್ನು ಸಹಿಸಲು ಸಾಧ್ಯವಾಗದ ಡಣ್ಣಾಯಕ ಪತ್ನಿ ಚಾಮವ್ವೆಗೆ ತನ್ನ ಮಕ್ಕಳಾದ ಪದ್ಮಲದೇವಿ, ಬೊಮ್ಮಲದೇವಿಯನ್ನು ಹೇಗಾದರೂ ಮಾಡಿ ಏಚಲೀದೇವಿಯ ಕುಮಾರರಿಗೆ ಮದುವೆಮಾಡಿಕೊಡಲು ಮಾಡುವ ಕಿತಾಪತಿಗಳು ಅಷ್ಟಿಷ್ಟಲ್ಲಾ, ಈಕೆ ಎಷ್ಟೇ ದ್ವೇಷಿಸುತ್ತಿದ್ದರೂ ಶಾನ್ತಲದೇವಿ ಆಕೆಯನ್ನು ಪ್ರೀತಿಯಿಂದಲೇ ಕಾಣುತ್ತಿದ್ದಳು, ಬೆಳಗೊಳದ ಗೊಮ್ಮಟೇಶ್ವರನನ್ನು ಕುರಿತು , ಚಂದ್ರಗಿರಿ ಬೆಟ್ಟ ಹಾಗು ಧರ್ಮದ ಬಗ್ಗೆ ಬಾಲ್ಯದಲ್ಲೇ ಪ್ರಶ್ನೆಗಳನ್ನು ಕೇಳುವ ಶಾನ್ತಲದೇವಿಯನ್ನು ಕಂಡು ಗುರುಗಳು ಬೋಕಿಮಯ್ಯ ಆಶ್ಚರ್ಯಚಕಿತರಾಗುತ್ತಿದ್ದರು, ಅದೇ ಸ್ಥಳದಲ್ಲೇ ಬಿಟ್ಟಿದೇವನಿಗೆ ಶಾನ್ತಲದೇವಿಯ ಮೇಲೆ ಪ್ರೀತಿ ಹುಟ್ಟುತ್ತದೆ, ಚಾಲುಕ್ಯ ಚಕ್ರವರ್ತಿ ವಿಕ್ರಮಾದಿತ್ಯನಿಗೆ ಯುದ್ಧದಲ್ಲಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಆತನಿಗೆ ನೆರವಾಗಿ ಎರೆಯಂಗಪಾರಭುಗಳು ಯುದ್ಧದಲ್ಲಿ ಹೋರಾಡಿ ಗೆದ್ದಾಗ ಪೋಸ್ಸಳರಿಗೂ ಚಾಲುಕ್ಯರಿಗೂ ಸ್ನೇಹ ಬೆಳೆದರೂ, ಯುವರಾಜ ಎರೆಯಂಗಪ್ರಭುಗಳನ್ನು ಮಹಾರಾಜನ ಪದವಿಗೆ ಪಟ್ಟಗಟ್ಟಳು ವಿನಯಾದಿತ್ಯರು ನಿರ್ಧರಿಸುವಾಗ ವಿಕ್ರಮಾದಿತ್ಯನಿಗೆ ತಮ್ಮನ್ನು ಒಂದು ಮಾತೂ ಸಹ ಕೇಳದೆ ಈ ನಿರ್ಧಾರ ತೆಗೆದುಕೊಂಡಿರುವುದನ್ನು ಸಹಿಸಲು ಸಾಧ್ಯವಾಗುವುದಿಲ್ಲ, ಅಂದಿನಿಂದ ಚಾಲುಕ್ಯರಿಗೂ, ಪೊಸ್ಸಳರಿಗೂ ವೈರತ್ವ ಹುಟ್ಟುತ್ತದೆ, ಪಟ್ಟಕ್ಕೆ ಏರುವ ಮೊದಲೇ ಎರೆಯಂಗಪ್ರಭುಗಳು ಅಕಾಲ ಮರಣಕ್ಕೆ ತುತ್ತಾಗುತ್ತಾರೆ, ಇದೇ ಕೊರಗಿನಲ್ಲಿ ವಿನಯಾದಿತ್ಯ ಪ್ರಭುಗಳೂ ಮರಣಹೊಂದುತ್ತಾರೆ, ನಂತರ ಏಚಲದೇವಿಯೇ ಮಾರ್ಗದರ್ಶನ ನೀಡುತ್ತಾ ಕುಮಾರ ಬಲ್ಲಾಳನಿಗೆ ಪಟ್ಟಕಟ್ಟಿ, ಆತನಿಗೆ ಚಾಮವ್ವೆಯ ೩ ಮಕ್ಕಳನ್ನು ಮದುವೆ ಮಾಡಿಕೊಡುತ್ತಾಳೆ. ಇಷ್ಟವಿಲ್ಲದಿದ್ದರೂ ಬಲ್ಲಾಳನು ಮದುವೆಯಾಗಿ ಕೆಲವು ಸಂವತ್ಸರ ಸಂತೋಷದಿಂದಿದ್ದರೂ ಬಲ್ಲಾಳನ ಕೊನಯ ಹೆಂಡತಿ ಗರ್ಭ ಧರಿಸಿದಾಗ ಮೊದಲನೆಯ ಪತ್ನಿ ಪದ್ಮಲದೇವಿ ಮಾಡುವ ಕುತಂತ್ರಗಳು ಸಾಕಷ್ಟು, ತಾಯಿ ಮಾಡಿದ ರೀತಿಯೇ ಮಗಳೂ ಮಾಡುತ್ತಿರುವುದನ್ನು ನೆನೆದು ಎಲ್ಲರಿಗೂ ಮನಸ್ಸಿಗೆ ಆಘಾತವಾಗುತ್ತದೆ, ಕಾರಣ ಇಷ್ಟೆ ಪದ್ಮಲದೇವಿ ಗರ್ಭ ಧರಿಸಿ ತನ್ನ ಕುಮಾರನೇ ಮುಂದೆ ರಾಜನಾಗಬೇಕೆನ್ನುವ ಬಯಕೆ, ಪತ್ನಿಯರ ಜೊತೆ ನೆಮ್ಮದಿಯಿಂದ ಬಾಳದೆ ಬಲ್ಲಾಳನು ಆ ಕೊರಗಿನಲ್ಲೇ ಕೊನೆಯುಸಿರು ಎಳೆಯುತ್ತಾನೆ. ನಂತರ ಬಿಟ್ಟಿದೇವ ರಾಜನಾಗಿ ಶಾನ್ತಲದೇವಿಯು ಪಟ್ಟೆಹಾದೇವಿಯಾಗುವವರೆಗೂ ಒಂದನೆ ಭಾಗದಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ. ದೋರಸಮದ್ರ, ಬೆಳಗೊಳ, ಜಾವಗಲ್ಲು, ಈಗಾಗಲೇ ನೋಡಿದ್ದರೂ ಈ ಕಾದಂಬರಿಯನ್ನು ಓದಿದ ನಂತರ ಮತ್ತೊಮ್ಮೆ ಹೋಗಿ ಬರಬೇಕೆನ್ನುವ ಆಸೆ ಹುಟ್ಟಿದೆ.
ಎರಡನೆಯ ಭಾಗ: ಬಿಟ್ಟಿದೇವನು ರಾಜನಾದರೂ, ಸನ್ನಿಧಾನದ(ಬಿಟ್ಟಿದೇವ) ಮಾತನ್ನು ಹಾಗು ಪಟ್ಟಮಹಾದೇವಿ ಶಾನ್ತಲದೇವಿಯ ನಿರ್ಧಾರವನ್ನೇ ಎಲ್ಲರೂ ಅಂತಿಮ ನಿರ್ಧಾರವಾಗಿ ಪರಿಗಣಿಸುತ್ತಿದ್ದರು, ಚಾಲುಕ್ಯರು, ಚೋಳರು, ಅದಿಯಮನು ಇನ್ನಿತರರು ದಂಡೆತ್ತಿ ಬಂದರೂ ಬಿಟ್ಟಿದೇವನು ಅವರೆಲ್ಲರನ್ನೂ ಸೆದೆಬಡಿದು ಹಲವು ಬಿರುದುಗಳಿಗೆ ಪಾತ್ರನಾಗುತ್ತಾನೆ ಹಾಗು ತನ್ನ ರಾಜ್ಯವನ್ನೂ ವಿಸ್ತರಿಸುತ್ತಾನೆ, ಯುದ್ಧದ ರೀತಿ ನೀತಿಗಳು, ಯೋಜನೆಗಳನ್ನು ನೆನೆದರೆ ಆಶ್ಚರ್ಯವಾಗುತ್ತದೆ, ಶತ್ರುಗಳನ್ನು ಹೇಗೆ ದಾಳಿ ಮಾಡಿ ಸೋಲಿಸಿ ಅವರನ್ನು ಹಿಮ್ಮೆಟ್ಟಿಸಬೇಕೆನ್ನುವ ಯೋಜನೆಗಳು ಅದ್ಭುತ. ಇದೇ ಯುದ್ಧದ ಸಮಯದಲ್ಲಿ ಎಲ್ಲಿಂದಲೋ ಬಂದು ಪೊಸ್ಸಳ ರಾಷ್ಟ್ರದಲ್ಲಿ ಆಶ್ರಯ ಪಡೆದ ಬೊಮ್ಮಲದೇವಿ, ರಾಜಲದೇವಿಯರು ಬಿಟ್ಟಿದೇವನಿಗೆ ಕೆಲವು ಯುದ್ಧಗಳಲ್ಲಿ ನೆರವಾಗುತ್ತಾರೆ, ಬೊಮ್ಮಲದೇವಿ ಒಂದು ಸಲ ಸನ್ನಿಧಾನದ ಪ್ರಾಣವನ್ನೂ ಕಾಪಾಡಿದಾಗ ಆಕೆಯ ರೂಪ ಲಾವಣ್ಯಕ್ಕೆ ಮಾರುಹೋಗುತ್ತಾರೆ. ಇದನ್ನು ಅರ್ಥ ಮಾಡಿಕೊಂಡ ಶಾನ್ತಲದೇವಿ, ಅವರಿಬ್ಬರನ್ನೂ ಬಿಟ್ಟಿದೇವನಿಗೆ ಮದುವೆಯಾಗಲು ಅನುಮತಿ ನೀಡುತ್ತಾಳೆ, ಮೂರು ಪತ್ನಿಯರಲ್ಲಿ ಯುದ್ಧದಲ್ಲಿ ಬಿಟ್ಟಿದೇವನಿಗೆ ಬೊಮ್ಮಲದೇವಿ ಸದಾ ನೆರವಾಗುತ್ತಿದ್ದಳು, ಆ ಸಮಯದಲ್ಲಿ ಶಾನ್ತಲದೇವಿ ತನ್ನ ರಾಜ್ಯಾಡಳಿತವನ್ನು ಮುಂದುವರೆಸುತ್ತಿದ್ದಳು, ರಾಜಲದೇವಿ ಶಾನ್ತಲದೇವಿಗೆ ನೆರವಾಗುತ್ತಿದ್ದಳು.
ಬಿಟ್ಟಿದೇವ, ಶಾನ್ತಲದೇವಿಯ ಮಗಳು ಯಾವುದೋ ರೋಗಕ್ಕೆ ತುತ್ತಾದಾಗ ಯಾವ ವೈದ್ಯರಿಂದಲೂ ಗುಣಪಡಿಸಲು ಸಾಧ್ಯವಾಗುವುದಿಲ್ಲ ಆಗ ಚೋಳ ರಾಜ್ಯದಿಂದ ಬಂದ ಶ್ರೀಮದಾಚಾರ್ಯರು ಗುಣಪಡಿಸಿದಾಗ ಬಿಟ್ಟಿದೇವನಿಗೆ ಆಶ್ಚರ್ಯ. ನಂತರ ಬಿಟ್ಟಿದೇವನು ಮತಾಂತರಗೊಳ್ಳಲು ನಿರ್ಧರಿಸಿದಾಗ ಶಾನ್ತಲದೇವಿಯು ರಾಜನೇ ಮತಾಂತರಗೊಂಡರೆ ರಾಜ್ಯದಲ್ಲಿ ಧರ್ಮದಿಂದ ಅನಾಹುತಗಳಾಗುತ್ತವೆ ಎಂದು ಎಷ್ಟು ತಡೆಯಲು ಪ್ರಯತ್ನಪಟ್ಟರೂ ಬಿಟ್ಟಿದೇವನು ಮತಾಂತರಗೊಂಡು ಅಂದಿನಿಂದ ವಿಷ್ಣುವರ್ಧನ ಎಂದು ಹೆಸರಿಗೆ ಪಾತ್ರನಾಗುತ್ತಾನೆ, ಇತ್ತ ಶಾನ್ತಲದೇವಿ ತನ್ನ ಜೈನ ಧರ್ಮವನ್ನು ಬಿಡದೇ ಅದೇ ಧರ್ಮವನ್ನು ಮುಂದುವರೆಸಿಕೊಂಡು ಹೋಗುತ್ತಾಳೆ, ನಂತರ ವೈಷ್ಣವ ಧರ್ಮ, ಜೈನ ಧರ್ಮದವರು ಮಾಡುವ ಕಿತಾಪತಿಗಳು, ಜೈನರನ್ನು ವೈಷ್ಣವ ಧರ್ಮಕ್ಕೆ ಮತಾಂತರಗೊಳಿಸಲು ಮಾಡುವ ಕುತಂತ್ರಗಳು ಸಾಕಷ್ಟು. ನಂತರ ಜಕಣಾಚಾರ್ಯರಿಂದ ಬೇಲೂರಿನ ಚೆನ್ನಕೇಶವನ ವಿಗ್ರಹ ಹಾಗು ದೇವಸ್ಥಾನದ ನಿರ್ಮಾಣ, ದೋರಸಮುದ್ರದಲ್ಲಿ ಯಮಳ ಶಿವಾಲಯ, ತಲಕಾಡಿನಲ್ಲಿ ಕೀರ್ತಿನಾರಾಯಣನನ್ನು, ಬೆಳಗೊಳದಲ್ಲಿ ಶಾಂತಿನಾಥಸ್ವಾಮಿಯನ್ನು ಸ್ಥಾಪಿಸಿ ವೈಷ್ಣವ ಧರ್ಮ, ಶೈವ ಧರ್ಮ, ಜೈನ ಧರ್ಮ, ಈ ಮೂರು ಧರ್ಮಗಳನ್ನು ಸರಿಸಮಾನವಾಗಿ ಕಾಣುವಲ್ಲಿ ಯಶಸ್ವಿಯಾಗುತ್ತಾಳೆ. ಕೊನೆಯಲ್ಲಿ ಬೊಮ್ಮಲದೇವಿಗೆ ಪಟ್ಟಕಟ್ಟಿ, ಸಲ್ಲೇಖನ ವ್ರತ ಕೈಗೊಂಡು ಶಾನ್ತಲದೇವಿ ತನ್ನ ಕೊನೆಯುಸಿರು ಎಳೆಯುತ್ತಾಳೆ. ಆಕೆಯ ಸಾವಿನ ನಂತರವೂ ಕೆಲವು ಯುದ್ಧದಲ್ಲಿ ವಿಷ್ಣುವರ್ಧನನು ಹೋರಾಡಿ, ಗೆದ್ದು ವೀರರಂಗ ವಿಷ್ಣುವರ್ಧನ, ಕೀರ್ತಿನಾರಾಯಣ ಎನ್ನುವ ಬಿರುದುಗಳನ್ನು ಪಡೆದುಕೊಳ್ಳುತ್ತಾನೆ.
ಇನ್ನೊಂದು ವಿಚಾರವೆಂದರೆ ಈ ಕಾದಂಬರಿಯಲ್ಲಿ ಪಟ್ಟಾಭಿಷೇಕ, ಯುದ್ಧಪ್ರಸಂಗ, ಮದುವೆ, ಇನ್ನಿತರೆ ಆಚರಣೆಗಳು ಒಂದು ಕಡೆ ಸವಿಸ್ತಾರವಾಗಿ ಮತ್ತೆ ಕೆಲವು ಕಡೆ ಚೊಕ್ಕವಾಗಿ ವಿವರಿಸಿ ಹೇಳಿದ್ದಾರೆ, ಹೀಗೆ ಶಾನ್ತಲದೇವಿಯ ಬಾಲ್ಯದಿಂದ ಸಾಯುಜ್ಯದವರೆಗೂ ಆಗಿನ ಕಾಲದ ಕಲೆ, ಸಂಸ್ಕ್ರತಿ, ಶಿಲ್ಪ, ಧರ್ಮ, ಸಾಹಿತ್ಯ, ಜನಜೀವನ, ರಾಜಕೀಯ ಹೋರಾಟ, ಆರ್ಥಿಕ ಪರಿಸ್ಥಿತಿ, ಕುತಂತ್ರಗಳು, ಮಾನವೀಯ ದೌರ್ಬಲ್ಯಗಳು, ಪಿಸುಣುತನ, ರಾಷ್ಟ್ರದ್ರೋಹ, ರಾಷ್ಟ್ರನಿಷ್ಠೆ, ಯುದ್ಧಗಳು, ಸ್ವಾರ್ಥ ದೃಹೀಗೆ ಹಲವು ಮುಖಗಳುದಾಟಿ ನಿಂತಿವೆ.
ಒಟ್ಟು 1824 ಪುಟಗಳ ಎರಡು ಸಂಪುಟಗಳ ಬೃಹತ್ ಕೃತಿ ಪಟ್ಟಮಹಾದೇವಿ ಶಾನ್ತಲದೇವಿ. ಕೆ ವಿ ಅಯ್ಯರ್ ಅವರು ಬರೆದ ಶಾಂತಲಾ ಕೃತಿಯನ್ನೂ ಸಹ ಓದಿದ್ದೇನೆ. ಶಾಂತಲಾ ದೇವಿ ಕುರಿತು ನನಗೆ ಚಿಕ್ಕ ವಯಸ್ಸಿನಿಂದಲೇ ತಿಳಿದಿತ್ತು. ಆದರೆ, ಸಮಗ್ರ ವ್ಯಕ್ತಿಯಾಗಿ, ಒಂದು ರಾಷ್ಟ್ರದ ಶಕ್ತಿಯಾಗಿ ಆಕೆ ಮನಸ್ಸಲ್ಲಿ ಅಚ್ಚೊತ್ತಿ ನಿಂತದ್ದು ಸಿ ಕೆ ನಾಗರಾಜರಾವ್ ಅವರ ಈ ಕೃತಿ ಓದಿದ ಮೇಲೆಯೇ. ಅಯ್ಯರ್ ಅವರ ಶಾಂತಲಾ ಕೃತಿ ಓದಿದ ಮೇಲೆ ರಸ ಸ್ವಾದನೆಯ ದೃಷ್ಟಿಯಿಂದ ಅದು ಶ���ರೇಷ್ಠ ಎನಿಸಿದರೂ ನನಗೆ ಅಲ್ಲಲ್ಲಿ ಕೆಲವು ಅಂಶಗಳು ಸಮಂಜಸ ಎನಿಸಿರಲಿಲ್ಲ. ಅದರಲ್ಲಿ ಮುಖ್ಯವಾಗಿ ಆಕೆಯ ಸಾಯುಜ್ಯದ ಕುರಿತಾದ ವಿಷಯಗಳು. ಪ್ರತಿಭೆ, ಸೌಂದರ್ಯ, ವಿವೇಚನೆ, ಸಹಿಷ್ಣುತೆ, ಜೀವನ ಕಲೆ ಹೀಗೆ ಎಲ್ಲದರಲ್ಲಿಯೂ ಶ್ರೇಷ್ಠ ಗುಣಗಳನ್ನು ಮೈಗೂಡಿಸಿಕೊಂಡ ಶಾಂತಲಾ ದೇವಿ ಶಿವಗಂಗೆ ಬೆಟ್ಟದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು ಎಂಬುದು ನನಗೇಕೋ ಅರಗಲಾರದಾಗಿತ್ತು.
ಸಿ ಕೆ ನಾಗರಾಜರಾವ್ ಅವರ ಈ ಬೃಹತ್ ಕೃತಿಯನ್ನು ನಾನು ಓದಬೇಕೆಂದು ನಿರ್ಣಯಿಸಲು ಕಾರಣ ಈ ಮೇಲೆ ತಿಳಿಸಿದ ಅಂಶ ಎನ್ನಬಹುದು. ಬಿಟ್ಟು ಬಿಡದೆ ಓದಿಸಿಕೊಂಡು ಹೋಯಿತು ಈ ವಿಸ್ತಾರ ಗದ್ಯ. ಇದು ಮುಖ್ಯವಾಗಿ ಲೇಖಕರ ಲೇಖನಿಗೆ ಸಲ್ಲಬೇಕಾದ ಗೌರವ. ಇದು ಅವರ ಹಿಡಿದಿಡುವ ಶಕ್ತಿ.
ಅಯ್ಯರ್ ಅವರ ಶಾಂತಲೆಗೂ ಸಿ ಕೆ ನಾಗರಾಜರಾವ್ ರವರ ಶಾನ್ತಲದೇವಿಗೂ ಕೆಲವು ವ್ಯತ್ಯಾಸಗಳಿವೆ. ಆಕೆಯ ಪ್ರತಿಭೆ, ಕಲಾ ನಿಪುಣತೆ, ಸೌಂದರ್ಯ ಇವೆಲ್ಲವೂ ಒಂದೇ ಆಗಿದ್ದರೂ ಸಿ ಕೆ ನಾಗರಾಜರಾವ್ ಅವರ ಪಟ್ಟಮಹಾದೇವಿ ಶಾನ್ತಲದೇವಿ ಸಮ ಚಿತ್ತಳು, ದೂರ ದೃಷ್ಟಿ ಉಳ್ಳವಳು, ಸಮಷ್ಠಿ ಚಿಂತನೆಯ ಪ್ರತೀಕಳು, ಪರಮತ ಸಹಿಷ್ಣುವು, ಅಚಲ ಶ್ರದ್ಧೆ ಉಳ್ಳವಳು, ಎಲ್ಲರಲ್ಲಿಯೂ ಗುಣವನ್ನು ಗುರುತಿಸಿ ನಡೆಯುವವಳು ಹೀಗೇ ಹೇಳುತ್ತಲೇ ಸಾಗಬಹುದು.
ಆಕೆಯ ಬಾಲ್ಯದಿಂದಲೇ ಆಕೆಯ ಸಂಸ್ಕಾರ ಆಕೆಯನ್ನು ಮಹತ್ತರವಾದುದೆಡೆಗೆ ಕೊಂಡೊಯ್ಯುತ್ತದೆ. ಎರೆಯಂಗ ಪ್ರಭು ಮತ್ತು ಏಚಲ ದೇವಿಯವರ ಪುತ್ರರು ಬಲ್ಲಾಳ, ಬಿಟ್ಟಿದೇವ ಮತ್ತು ಉದಯಾದಿತ್ಯ. ಆಸ್ಥಾನದ ಡಣ್ಣಾಯಕರಾದ ಮರಿಯಾನೆ ಮತ್ತು ಅವರ ಪತ್ನಿ ಚಾಮವ್ವೆ (ಈಕೆ ಪ್ರಧಾನಿ ಗಂಗರಾಜರ ತಂಗಿ) ತಮ್ಮ ಮಕ್ಕಳಾದ ಪದ್ಮಲೆ, ಚಾಮಲೆ ಮತ್ತು ಬೊಪ್ಪ ದೇವಿ ಯವರನ್ನು ಅರಮನೆಯ ಸೊಸೆಯರನ್ನಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೇಗೆಲ್ಲಾ ಸಂಚುಗಳಿಗೆ ಎಡೆ ಮಾಡಿಕೊಟ್ಟಿತು. ತಮ್ಮ ಮಗಳು ಪದ್ಮಲೆ ಪಟ್ಟಮಹಾದೇವಿಯಾಗಲೇ ಬೇಕು ಎಂದು ಹಠ ಹಿಡಿದದ್ದು, ಬಿಟ್ಟಿದೇವನಿಗೆ ಶಾಂತಲೆ ಇಷ್ಟವಾಗಿ ಈ ಕಡೆ ಆತ ಸೊಪ್ಪು ಹಾಕದೆ ಇದ್ದದ್ದು. ಕೊನೆಗೆ ರಗಳೆಗಳೆ ಆಗಿ ಚಾಮವ್ವೆ ವಾಮಾಚಾರದ ಮೊರೆ ಹೋಗಿ, ಅದು ಕಾಕತಾಳೀಯ ಎಂಬಂತೆ ಎರೆಯಂಗ ಪ್ರಭುಗಳ ಜೀವಕ್ಕೆ ಕುತ್ತಾಗುತ್ತದೆ. ಇದನ್ನೆಲ್ಲ ಅರಿತ ಬಲ್ಲಾಳ ತಾನು ಪ್ರೀತಿಸಿದರೂ ಸಹ ರಾಷ್ಟ್ರಕ್ಕೆ ಒಳಿತಲ್ಲ ಎಂದು ಪದ್ಮಲೆಯನ್ನು ದೂರ ಇಡುತ್ತಾನೆ.
ಇದೆಲ್ಲ ಬಯಲಾಗಿ ಚಾಮವ್ವೆಗೆ ನಿಜವಾಗಿ ಪಶ್ಚಾತ್ತಾಪವಾಗಿ ಆಕೆ ರೋಗಕ್ಕೆ ತುತ್ತಾಗಿ ಅಸುನೀಗುತ್ತಾಳೆ. ಮತ್ತೆ ಸಂಧಾನವಾಗಿ, ಸಮಾಲೋಚನೆಯಾಗಿ ಮೂರು ಜನ ಸೋದರಿಯರು ಮಹಾರಾಜ ಬಲ್ಲಾಳನನ್ನೆ ಮದುವೆಯಾಗುವುದು ಎಂದು ನಿಶ್ಚಯವಾಗಿ ಮದುವೆಯೂ ಜರುಗುತ್ತದೆ. ಆದರೂ ಸೋದರಿಯರಲ್ಲಿಯೂ ಸವತಿ ಮಾತ್ಸರ್ಯ ತಲೆದೋರಿ ಮಹಾರಾಣಿ ಪದ್ಮಲೆಯ ವಿವೇಚನಾ ರಹಿತ ನಡೆಯಿಂದಾಗಿ ಹೊಯ್ಸಳ ವಂಶ ಮಹಾರಾಜ ಬಲ್ಲಾಳನನ್ನು ಕಳೆದುಕೊಳ್ಳುತ್ತದೆ. ಬಲ್ಲಾಳನ ನಂತರ ಆತನ ಪುತ್ರರು ಯಾರೂ ಇಲ್ಲದ ಕಾರಣ ಅನಪೇಕ್ಷಿತವಾಗಿ ಬಿಟ್ಟಿದೇವ ಮಹಾರಾಜನಾಗುತ್ತಾನೆ ಮತ್ತು ಆತನ ಮಡದಿ ಶಾಂತಲಾದೇವಿ ಪಟ್ಟಮಹಾದೇವಿಯಾಗುತ್ತಾಳೆ. ರಾಜಮಾತೆ ಏಚಲ ದೇವಿ ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪುತ್ತಾಳೆ. ಆಕೆಗೆ ಮಹಾರಾಜ ಬಿಟ್ಟಿದೇವನಿಗೆ ಬಹು ಪತ್ನಿಯರಿರುವುದು ಇಷ್ಟವಿರುವುದಿಲ್ಲ. ಆದರೆ ರಾಜಕೀಯ ಕಾರಣಗಳಿಂದ ಪೂರ್ವ ಚಾಲುಕ್ಯ ವಂಶದ ಕುವರಿಯರಾದ ಬಮ್ಮಲದೇವಿ ಮತ್ತು ರಾಜಲದೇವಿಯರು ರಾಣಿಯರಾಗುತ್ತಾರೆ.
ಈ ಮಧ್ಯೆ ರಾಜಕುಮಾರಿ ಹರಿಯಲದೇವಿಯ ರೋಗ ಗುಣವಾಗದ ಸ್ಥಿತಿ ತಲುಪಿ ಆಚಾರ್ಯ ಶ್ರೀ ರಾಮಾನುಜರು ಅದೇ ಸಮಯಕ್ಕೆ ಆಗಮಿಸಿ ಗುಣಪಡಿಸಿದ್ದರಿಂದ ಬಿಟ್ಟಿದೇವನು ಜನ್ಮಾಪಿ ಜೈನ ಧರ್ಮೀಯನಾಗಿದ್ದರು ಶ್ರೀವೈಷ್ಣವ ತತ್ವದಲ್ಲಿ ನಂಬಿಕೆಯೂ ನೆಲೆಯೂರಿ ಆತ ಬಿಟ್ಟಿದೇವನಿಂದ ಮಹಾರಾಜ ವಿಷ್ಣುವರ್ಧನನಾಗುತ್ತಾನೆ. ಇದರ ಕುರಿತು ಸಾಕಷ್ಟು ಚರ್ಚೆಗಳು ನಡೆದು, ಚೋಳ ರಾಜ್ಯದಿಂದ ಆಚಾರ್ಯರು ಅತೃಪ್ತರಾಗಿ ಈ ಕಡೆ ಬಂದದ್ದರಿಂದ ಅವರಿಗೆ ಆಶ್ರಯ ನೀಡಿ, ಮಹಾರಾಜರು ಅವರ ಅನುಯಾಯಿಗಳಾದ ಮೇಲೆ ಆಗಬಹುದಾದ ರಾಜಕೀಯ, ಸಾಮಾಜಿಕ ಬದಲಾವಣೆಗಳ ಬಗೆಗೆ ಆಳವಾದ ಚಿಂತನೆ ನಡೆದು ಮತ ಪರಿವರ್ತನೆಗೆ ಸಮ್ಮತಿ ದೊರೆತಿರುತ್ತದೆ. ಆದರೆ ಪಟ್ಟಮಹಾದೇವಿ ಶಾಂತಲಾದೇವಿ ತನ್ನ ಧರ್ಮವನ್ನು ಬದಲಾಯಿಸಲು ಇಚ್ಛಿಸದೇ ಆಕೆ ಜೈನ ಮತಾನುಯಾಗಿಯೇ ಉಳಿಯುತ್ತಾಳೆ. ಇದರಿಂದ ಸಾಮರಸ್ಯವೇನು ಕದಡುವುದಿಲ್ಲ. ಸ್ವತಃ ಶಾಂತಲಾ ದೇವಿಯವರ ತಂದೆ ಹೆಗ್ಗಡೆ ಮಾರಸಿಂಗಮಯ್ಯ ಅವರು ಶೈವರು ತಾಯಿ ಮಾಚಿಕಬ್ಬೇ ಜಿನಭಕ್ತಳು. ಈ ಸಾಮರಸ್ಯದ ಬೆಳಕು ಶಾಂತಲಾ. ಆದ್ದರಿಂದ, ಇದನ್ನು ಆಕೆ ಅಷ್ಟೇ ಸಹಜವಾಗಿ ಸ್ವೀಕಾರ ಮಾಡುತ್ತಾಳೆ ಅಲ್ಲದೆ ವೇಲಾಪುರಿಯಲ್ಲಿ ಚೆನ್ನ ಕೇಶವ ಮತ್ತು ಸೌಮ್ಯ ನಾಯಕಿಯ ದೇವಸ್ಥಾನದ ಬೃಹತ್ ಕಾರ್ಯಕ್ಕೆ ಕಂಕಣ ಬದ್ಧಳಾಗಿ ನಿಲ್ಲುತ್ತಾಳೆ. ಅದರ ಫಲವನ್ನು ಇವತ್ತಿಗೂ ನಾವು ಕಾಣಬಹುದು. ನಮಗೆ ಶಾಸನಾದಿಗಳಿಂದ ಮಹಾರಾಜ ವಿಷ್ಣುವರ್ಧನನ ನಂತರ ರಾಣಿ ಲಕ್ಷ್ಮೀ ದೇವಿಯ ಪುತ್ರ ನರಸಿಂಹ ಆಳಿದ ಎಂದು ಮಾತ್ರ ತಿಳಿದು ಬರುತ್ತದೆ. ರಾಣಿ ಲಕ್ಷ್ಮೀ ದೇವಿಯ ಪೂರ್ವಪರ ಯಾವುದೂ ಎಲ್ಲಿಯೂ ತಿಳಿಯುವುದಿಲ್ಲ. ಲೇಖಕರು ಕವಿಗೆ ಇರುವ ಕಲ್ಪನಾ ವಿಲಾಸದಿಂದ ರಸ ಸ್ವಾದನೆಗೆ ಭಂಗಬರಲಾಗದಂತಹ ಮಾರ್ಪಾಡುಗಳನ್ನು ಮಾಡಿಕೊಂಡು ವಿಸ್ತಾರವಾಗಿಯೇ ಲಕ್ಷ್ಮೀ ದೇವಿಯವರ ಅವರ ತಂದೆ ತಿರುವರಂಗದಾಸರ ಪಾತ್ರ ಪೋಷಣೆಯನ್ನು ಮಾಡಿದ್ದಾರೆ.
ಈ ಸಮಯದಲ್ಲಿ ಆದ ಚೋಳರಿಂದಾದ ಯುದ್ಧದ ವರ್ಣನೆಗಳು ಸೊಗಸಾಗಿ ಮೂಡಿವೆ, ವೇಲಾಪುರಿಯಲ್ಲಿ ಭರದಿಂದ ಸಾಗಿದ ಶಿಲ್ಪ ಕಲಾ ರಚನೆ. ಜಕಣಾಚಾರಿ ಡಂಕಣಾಚಾರಿಯ ಎಲ್ಲ ಕಥೆಯೂ ಎಳೆ ಎಳೆಯಾಗಿ ರೂಪುಗೊಂಡಿದೆ. ಸಮಾಜದಲ್ಲಿ ಸಾಮಾನ್ಯವಾಗಿ ಮಹಾರಾಜನ ಮತ ಪರಿವರ್ತನೆಯಿಂದ ಆಗಬಹುದಾದ ಸೂಕ್ಷ್ಮಾತಿ ಸೂಕ್ಷ್ಮ ಬದಲಾವಣೆಗಳು, ತಾತ್ಪೂರ್ತಿಕ ಹಿನ್ನಲೆ, ರಾಜಕೀಯ - ಸಾಮಾಜಿಕ ಅಸಮಾಧಾನಗಳು, ವೈಮನಸ್ಸು, ಘರ್ಷಣೆ, ಮತೀಯ ತಿಕ್ಕಾಟಗಳು, ಗೊಂದಲಗಳು, ಪಿತೂರಿ ಸಂಚುಗಳು ಎಲ್ಲವೂ ರೂಪ ತಾಳಿವೆ.
ಕೊನೆಗೆ ಈ ಎಲ್ಲದರಿಂದ ಬೇಸತ್ತ ಶಾಂತಲಾ ದೇವಿ, ಸಾಮರಸ್ಯ ಬಯಸಿ ಮುಂದಾದ ಮದುವೆಯಿಂದಲೇ ರಾಜ್ಯಾದ್ಯಂತ ಹರಡಿದ ಮತೀಯ ವೈಮನಸ್ಸು ತಾಂಡವವಾಡುವುದು ಸಹಿಸಲಾಗದೆ, ತನ್ನ ಅರಮನೆಯಲ್ಲಿ ಮತ್ತೆ ಸವತಿ ಮಾತ್ಸರ್ಯ ತಲೆದೋರಿ ಮಹಾರಾಜನಿಗೆ ಅಸಮಾಧಾನದ ಪ್ರಸಂಗಗಳು ಬಂದುದರಿಂದ ನೊಂದ ಶಾಂತಲಾ ದೇವಿ ಸಲ್ಲೇಖನ ವ್ರತ ಕೈಗೊಂಡು ಇಹಲೋಕವನ್ನು ತ್ಯಜಿಸುತ್ತಾಳೆ. ಆಕೆಗೆ ಮಕ್ಕಳು ಇದ್ದರು ಎಂದು ಲೇಖಕರು ತಿಳಿಸುತ್ತಾರೆ. ಇದು ಅಯ್ಯರ್ ಅವರ ಕೃತಿಯಲ್ಲಿನ ಉಲ್ಲೇಖಕ್ಕೂ, ಸಾಮಾನ್ಯವಾಗಿ ತಿಳಿದುಬರುವ ಜನ ವಾಹಿನಿಯಿಂದ ಬಾಯಿಂದ ಬಾಯಿಗೆ ಸಾಗಿ ಬರುವ ಕಥೆಗೂ ವ್ಯತ್ಯಾಸವಿದೆ. ಶಾಂತಲಾದೇವಿಗೆ ಬಲ್ಲಾಳ, ಚಿಕ ಬಿಟ್ಟಿ, ವಿನಯಾದಿತ್ಯ ಎಂಬ ಪುತ್ರರು ಹರಿಯಲ ದೇವಿ ಎಂಬ ಪುತ್ರಿಯೂ ಇದ್ದರೆಂದು ತಿಳಿಸುತ್ತಾರೆ. ಲಕ್ಷ್ಮೀದೇವಿಯ ಪುತ್ರ ನರಸಿಂಹನಿಗೆ ಪಟ್ಟವಾಗಬೇಕು ಎಂಬ ಹಠ ತಲೆದೋರಿ ಅರಮನೆಯ ವಾತಾವರಣ ಕಲುಷಿತವಾಗಿತ್ತು ಎಂಬುದಾಗಿ ಲೇಖಕರು ತಿಳಿಸುತ್ತಾರೆ. ಮಹಾರಾಜರು ಶ್ರೀ ವೈಷ್ಣವ ತತ್ವವನ್ನು ಒಪ್ಪಿಕೊಂಡವರು, ಅವರ ನಂತರವೂ ಅದೇ ತತ್ವ ಪರಿಪಾಲನೆ ಮಾಡುವ ನರಸಿಂಹ ಉತ್ತರಾಧಿಕಾರಿ ಆಗಬೇಕು, ಜೈನ ಮತೀಯರಲ್ಲ ಎಂಬಷ್ಟರ ಮಟ್ಟಿಗೆ ರಾಜ್ಯಾದ್ಯಂತ ಮತೀಯ ಭಿನ್ನಾಭಿಪ್ರಾಯ ಬೆಳೆದಿತ್ತು ಎಂಬುದನ್ನು ಸಹ ಲೇಖಕರು ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಮನನೊಂದ ಮಹಾರಾಣಿ ಶಾಂತಲಾ ದೇವಿ ಸಲ್ಲೇಖನಕ್ಕೆ ಶರಣಾಗುತ್ತಾಳೆ.
ಅಯ್ಯರ್ ಅವರ ಕೃತಿಯಿಂದ ಶಾಂತಲಾ ದೇವಿಯ ಬಗೆಗೆ ಮತ್ತಷ್ಟು ತಿಳಿಯಬೇಕೆಂಬ ಆಸೆ ಬಲಿತು ಈ ಬೃಹತ್ ಕೃತಿಯನ್ನು ಓದಿ ಆಕೆಯ ವ್ಯಕ್ತಿತ್ವಕ್ಕೆ ಮನಸೋತಿರುವೆ. ಎಂತಹ ಅದಮ್ಯ ಆದರ್ಶ ಶಾಂತಲಾ ದೇವಿಯದು. ದೂರದೃಷ್ಟಿ, ಸಮದರ್ಶಿತ್ವ, ಸಮಯ ಪ್ರಜ್ಞೆ, ಸಹಿಷ್ಣುತೆ ಈ ಎಲ್ಲವೂ ನನ್ನನ್ನು ನಿಬ್ಬೆರಗುಗೊಳಿಸಿದವು. ಇಂತಹ ವ್ಯಕ್ತಿಗಳಿಂದ ಮಾತ್ರ ಇಂದು ಸಾಕ್ಷಿಯಾಗಿ ನಿಂತಿರುವ ದೇವಾಲಯಗಳ ಸೃಷ್ಟಿ ಕಾರ್ಯ ಸಾಧ್ಯ. ಕೆ ವಿ ಅಯ್ಯರ್ ಅವರು ವಿವರಿಸಿದ ಶಾಂತಲೆಯ ಸಾಯುಜ್ಯಕ್ಕಿಂತ ಸಿ ಕೆ ನಾಗರಾಜರಾವ್ ಅವರು ತಿಳಿಸಿರುವ ಶಾಂತಲೆಯ ಅಂತ್ಯ ವಸ್ತುನಿಷ್ಠವಾಗಿದೆ ಮತ್ತು ಸತ್ಯಕ್ಕೆ ಹತ್ತಿರ ಎನಿಸಿತು.
ಬಹಳ ಸೊಗಸಾದ ಮೇರು ಕೃತಿ. ಆ ಮಹಾದೇವಿಯ ವ್ಯಕ್ತಿತ್ವಕ್ಕೆ ಯಾರಾದರೂ ಸರಿ ಮಾರುಹೋಗಲೆ ಬೇಕು. ಅಮೋಘ ವ್ಯಕ್ತಿತ್ವದ ಶಾಂತಲಾದೇವಿಗೆ ಅನಂತ ನಮಸ್ಕಾರಗಳು. ಈ ಕೃತಿಯಿತ್ತ ಸಿ ಕೆ ನಾಗರಾಜರಾವ್ ರವರಿಗೆ ಎಷ್ಟು ನಮನಗಳು ಸಲ್ಲಿಸಿದರೂ ಸಾಲದು.
This entire review has been hidden because of spoilers.