ಸಂಶೋಧನಾ ವಿಜ್ಞಾನಿಯಾಗಿರುವ ಚೀಮನಹಳ್ಳಿ ರಮೇಶಬಾಬು ಚಿಂತಾಮಣಿ ತಾಲ್ಲೂಕಿನ ಚೀಮನಹಳ್ಳಿಯವರು. ‘ಪ್ರಶ್ನೆ ಮತ್ತು ದೇವರು’, ‘ಎರಡು ಲೋಟಗಳು’, ‘ಮಾಯಾ ಸರೋವರ’ ಎಂಬ ಕವಿತಾ ಸಂಗ್ರಹಗಳನ್ನು ‘ನಾಗ್ದಾಳೆ’ ಎಂಬ ಖಂಡಕಾವ್ಯವನ್ನು ‘ಹಸ್ತಬಲಿ’ ಎಂಬ ಕಥಾ ಸಂಕಲನ ಹಾಗು ‘ಹದ’, ‘ಬಲಿಹಾರ’, ‘ಟೈರ್ಸಾಮಿ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಕಾಡು ಹುವ್ವು’ ಇವರ ಸಂಪಾದಕತ್ವದಲ್ಲಿ ಬಂದಿರುವ ಅನುವಾದಿತ ಕವಿತೆಗಳ ಸಂಗ್ರಹ. ಮಾಸ್ತಿ ಕಾದಂಬರಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಬೆಟಗೆರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ, ವೀಚಿ ಉದಯೋನ್ಮುಖ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ಬಹುಮಾನಗಳನ್ನು ಪಡೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಷ್ಟು ಚಂದಕ್ಕೆ ಓದಿಸಿಕೊಂಡ ಕೃತಿ ನೆನಪಿಲ್ಲ. ತೊಗಟರ ಬದುಕಿನ ಬಗ್ಗೆ ಹೇಳುತ್ತಲೇ ಕತೆ ಅತೃಪ್ತ ಕಾಮದ ವಿವರಗಳ ಚಿತ್ತಭಿತ್ತಿಯಲ್ಲಿ ಕೆತ್ತುವ ಪರಿ ಅನನ್ಯ. ಹಾಗೆಯೇ ಆಹಾರದ ವಿವರಗಳ ವಿವರಣೆ ಕೂಡ. ಕಾದಂಬರಿ ಶುರು ಮಾಡಿದಾಗ ಕೆಳಗಿಡಲು ಮನಸೇ ಬರಲಿಲ್ಲ. ಸಾಮಾನ್ಯವಾಗಿ ಹಳ್ಳಿಯ ಭಾಷೆಯ ಕತೆಗಳು ಅಂದರೆ ಮೂಗುಮುರಿಯುವ ನಾನು ಇದನ್ನು ಹೇಗೆ ಓದಿದೆ ಎಂದರೆ ..ಚೀಮನಹಳ್ಳಿ ರಮೇಶಬಾಬು ಅವರ ಕಥನ ಶೈಲಿಗೆ ಸಲಾಂ.