ಇದು ಒಂದು ಪ್ರಕೃತಿಯ ಕುರಿತಾದ ಕಾದಂಬರಿ. ಪ್ರಕೃತಿಯ ಸಂರಕ್ಷಣೆ ಮತ್ತು ಅದರ ಬಗೆಗಿನ ಜನ ಸಾಮಾನ್ಯರ ನಿಲುವು ಎಲ್ಲವೂ ಈ ಕಾದಂಬರಿಯ ಪಾತ್ರಗಳು. ಅಬ್ಬೆ ಎಂಬ ಜೇಡದ ನಿಗೂಢ ಪರಿಕಲ್ಪನೆ ಇಲ್ಲಿ ಉತ್ತಮವಾಗಿ ನಿರೂಪಿಸಲಾಗಿದೆ.
ಉಡುಪಿ ಜಿಲ್ಲೆಯ ಹಾಲಾಡಿಯವರಾದ ಶಶಿಧರ ಹಾಲಾಡಿಯವರು, ಕನ್ನಡ ಎಂ.ಎ. ಪದವಿಯಲ್ಲಿ ಮೊದಲ ರಾಂಕ್ ಮತ್ತು ಒಂದು ಚಿನ್ನದ ಪದಕ ಗಳಿಸಿದ್ದಾರೆ. ಛಾಯಾಗ್ರಹಣ, ಪರಿಸರ, ಚಾರಣ ಮತ್ತು ಸಾಹಿತ್ಯ ಇವರ ಹವ್ಯಾಸಗಳು. ಗ್ರಾಮೀಣ ಬದುಕು ಮತ್ತು ಪರಿಸರ ಚಿಂತನೆಗಳ ಹಲವು ಅಂಕಣಗಳನ್ನು ಬರೆದಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ವಿಷಯವನ್ನು ಒಳಗೊಂಡ ಇವರು ರಚಿಸಿದ ಅಬ್ಬೆ ಕಾದಂಬರಿಯನ್ನು ನಾಲ್ಕು ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿಶ್ವವಾಣಿಯಲ್ಲಿ "ಶಶಾಂಕಣ" ಅಂಕಣವನ್ನು ಪ್ರತಿ ಶುಕ್ರವಾರ ಬರೆಯುತ್ತಿದ್ದಾರೆ.
ಅಬ್ಬೆ ಅಂದ್ರೆ ತಾಯಿ ಅನ್ಕೊಂಡು ಪುಸ್ತಕ ಕೊಂಡೆ ಆದ್ರೆ ಅದು ಬಯಲು ಸೀಮೆಯ ಒಂದು ಜೇಡ ಅಂತ (ಕಲ್ಪನೆ!?) ಮೊದಲ ಕೆಲವು ಪುಟಗಳು ಓದಿ ಅರ್ತ ಆಯ್ತು. ಕೊನೆಗೂ ಅದು ಸತ್ಯವೋ ಸುಳ್ಳೋ ಅಂತ ಗೊತ್ತಾಗ್ಲಿಲ್ಲ . ಲೇಖಕರು ಅವರ ಮೊದಲ ಪೋಸ್ಟಿಂಗ್ ಆದ ಕಲ್ಕೆರೆ ಊರಿನ ಅನುಭವ ಹಂಚಿಕೊಂಡಿದ್ದಾರೆ . ಬಯಲು ಸೀಮೆ ಹೇಗೆ ತನ್ನದೇ ಆದ ನಿಗೂಢತೆ ಹೊಂದಿರುತ್ತೆ. ಅಲ್ಲಿನ ಜನಗಳ ನಡತೆ, ಜೀವನ , ಆಪ್ಯತೆಯೆಲ್ಲ ತುಂಬಾ ಚೆನ್ನಾಗಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಹೇಗೆ ಬಯಲು ಸೀಮೆಯಲ್ಲಿ ಇದ್ದಂತಹ ಕಾಡು ನಾಶ ಆಯ್ತು , ಅದು ಹೇಗೆ ಮತ್ತೆ ಕೊನೆಗೆ ಬೇಲಿಯಿಂದ ರಕ್ಷಣೆಗೆ ಒಳಪಡುತ್ತೆ ಅದರಲ್ಲಿ ಕಥಾನಾಯಕನ ಪಾತ್ರ . ಬ್ಯಾಂಕ್ ಉದ್ಯೋಗದಲ್ಲಿ ನೆಡೆಯುವ ಒಳ ರಾಜಕಾರಣ ಎಲ್ಲ ಇದೆ.
ಶಶಿಧರ ಹಾಲಾಡಿಯವರ ಈ ಕೃತಿ ಹಲವಾರು ಅಂಶಗಳಿಂದ ಒಳ್ಳೆಯ ಓದಿನ ಅನುಭವ ನೀಡಿತು. ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿ ಊರಿಗೆ ಬರುವ ಅನನುಭವಿ ಯುವಕ, ಅಲ್ಲಿ ವೃತ್ತಿಯ ಅನುಭವಗಳು ,ಮ್ಯಾನೇಜರ್ನ ಕಾಟ, ಸಹೋದ್ಯೋಗಿಗಳ ಮೋಜು ಮಸ್ತಿ ಇವೆಲ್ಲದರ ನಡುವೆ ಅವನ ಪರಿಸರ ಕುರಿತಾದ ಕುತೂಹಲ ಅವನನ್ನು ಇವರ ಜೊತೆ ಸೇರದೆ ಗುಡ್ಡ ಬೆಟ್ಟ ಅಲೆಯುವ ಸಾಹಸಕ್ಕೆ ಪ್ರೇರೆಪಿಸುತ್ತದೆ. ಇದರ ಜೊತೆ ಸ್ಥಳೀಯ ಕಾಲೇಜಿನ ಪ್ರಾಂಶುಪಾಲರ ಸಹವಾಸ ,ಅವರೆಲ್ಲರ 'ಕರ್ವಾಲೋ' ನೆನಪಿಸುವ ಯಾತ್ರೆಯೊಂದಕ್ಕೆ ತೆರಳುವ ಹಾಗೆ ಮಾಡುತ್ತದೆ. ಕಾದಂಬರಿ ಮಜವಾಗಿದೆ. ಅನುಭವಸ್ಥರಿಗೆ ತಮ್ಮ ಕೆಲಸದ ಆರಂಭದ ದಿನಗಳಲ್ಲಿ ಇದೆಲ್ಲ ಅನುಭವಕ್ಕೆ ಬಂದಿರುತ್ತದೆ.
ಕೃತಿಯ ಬಗ್ಗೆ ಇರುವ ಏಕೈಕ ಅತೃಪ್ತಿ ಎಂದರೆ ಹಲವಾರು ವಿಷಯಗಳು ಪದೇ ಪದೇ ಪದೇ ಪುನರಾವರ್ತನೆಗೊಂಡಿವೆ. ಅಬ್ಬೆ ಎಂಬ ಜೇಡನ ಬಗೆಗಿನ ವಿಷಯಗೞು ,ಸಹೋದ್ಯೋಗಿಗಳ ಪಾರ್ಟಿ ವಿಷಯ ಇದೆಲ್ಲ ಹತ್ತು ಹದಿನೈದು ಸಲ ಅವವೇ ಸಾಲುಗಳು ಎದುರಾಗಿ ಕೊಂಚ ಅತೃಪ್ತಿ ಮೂಡಿಸುತ್ತದೆ. ಇದೊಂದು ವಿಷಯ ಬಿಟ್ಟರೆ ಬಹಳ ಒಳ್ಳೆಯ ಓದಿನ ಅನುಭವ ಕೊಡುವ ಕೃತಿ.
ಕೃತಿ: ಅಬ್ಬೆ ಲೇಖಕರು: ಶಶಿಧರ ಹಾಲಾಡಿ ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಒಳ್ಳೆಯ ಓದಿನ ಅನುಭವವನ್ನು ನೀಡಿದ ಕಾದಂಬರಿ. ತನ್ನ ಹುಟ್ಟೂರಾದ ಕರಾವಳಿಯಿಂದ ಬಯಲು ಸೀಮೆಯ ಊರಾದ ಅರಸೀಕೆರೆಯ ಕಲ್ಕೆರೆಗೆ ಬ್ಯಾಂಕ್ ನೌಕರರು ಮೊದಲ ಬಾರಿಗೆ ಬರುವುದರ ಮೂಲಕ ಕತೆಯು ಶುರುವಾಗುತ್ತದೆ. ಮೊದಲ ಬಾರಿಗೆ ಆ ಊರಿಗೆ ಬಂದಾಗ ಒಂದು ತರಹದ ಭ್ರಮನಿರಸನವಾಗುತ್ತದೆ. ತಾನು ಬೆಳೆದ ಊರು ಮತ್ತು ನೌಕರಿಗಾಗಿ ಬಂದ ಊರಿನ ನಡುವಿನ ಅಂತರಗಳು ಒಂದು ತರಹದ ಅಪರಿಚಿತತೆಯ ವಾತಾವರಣವನ್ನು ಕಲ್ಪಿಸುತ್ತದೆ.
ದಿನಕಳೆದಂತೆ ಊರಿನ ಸಂಸ್ಕೃತಿ,ಆಚಾರ ವಿಚಾರಗಳು,ಊರಿನಲ್ಲಿ ನಡೆಯುವ ಸಣ್ಣಪುಟ್ಟ ಬೆಳವಣಿಗೆಗಳು ಕತೆಯ ನಾಯಕ ಶಿವರಾಂ ಅವರಿಗೆ ಊರಿನ ಎಲ್ಲ ಬೆಳವಣಿಗೆಗಳ ಕುರಿತು ಆಸಕ್ತಿ ಮೂಡುವಂತೆ ಮಾಡುತ್ತದೆ. ಊರಿನ ಹಲವು ಮಂದಿ “ಅಬ್ಬೆ” ಎಂಬ ವಿಷಪೂರಿತ ಜೇಡನ ಕಡಿತದಿಂದ ಮರಣ ಹೊಂದುವ ವಿದ್ಯಮಾನವು ಶಿವರಾಂನ ಆಸಕ್ತಿಯನ್ನು ಕೆರಳಿಸಿ ಅದರ ಬಗೆಗಿನ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಲು ಪ್ರೇರೇಪಿಸುತ್ತದೆ. ಇದು ಒಂದು ಕಡೆಯಾದರೆ ಅವರು ಕೆಲಸ ಮಾಡುವ ಬ್ಯಾಂಕಿನ ನಿರ್ವಾಹಕರು ಮತ್ತು ಇತರ ಸಿಬ್ಬಂದಿಗಳ ನಡುವಿನ ವೈಯಕ್ತಿಕ ಮನಸ್ತಾಪಗಳು, ರಾಜಕೀಯ ಗುಂಪುಗಾರಿಕೆಗಳ ಬಗ್ಗೆ ಅನೇಕ ವಿವರಗಳು ಬರುತ್ತವೆ. ಬಹುಶಃ ಸರ್ಕಾರಿ ಕಛೇರಿಗಳಲ್ಲಿ ಮೊದಲ ಬಾರಿಗೆ ಕೆಲಸ ಮಾಡಲು ಹೋದಾಗ ಮೇಲಾಧಿಕಾರಿಗಳ ಕೆಳಗೆ ಒದ್ದಾಡಿರುವ ಅನೇಕರಿಗೆ ಈ ವಿಷಯ ಚೆನ್ನಾಗಿ ಮನದಟ್ಟಾಗುತ್ತದೆ.
ಇನ್ನೂ ಒಂದು ತೆರೆದುಕೊಳ್ಳುವ ಕತೆಯೆಂದರೆ, ಒಂದು ಕಾಲದಲ್ಲಿ ರಕ್ಷಿತಾರಣ್ಯ ಪ್ರದೇಶವಾಗಿದ್ದು, ಈಗ ಬರಡು ನೆಲವಾಗುತ್ತ ಸಾಗಿರುವ ಕಲ್ಕೆರೆ ಪಕ್ಕದ ಗರುಡನಗಿರಿ ಮತ್ತು ಹಿರೇಕಲ್ಲು ಬೆಟ್ಟ. ಈ ಕಾಡಿನ ನಾಶ ಮತ್ತು ಅಪರೂಪದ ಸಸ್ಯ ಹಾಗೂ ಪ್ರಾಣಿ ಸಂಕುಲದ ನಾಶಗಳಲ್ಲಿ ಹಳ್ಳಿಯ ಜನರ ಮುಗ್ಧತೆ,ಅತಿಯಾಸೆಯ ಪ್ರಭಾವಗಳು ಮತ್ತು ಆಳುವ ಸರ್ಕಾರಗಳ ದಿವ್ಯ ನಿರ್ಲಕ್ಷ್ಯದ ಪ್ರಸ್ತಾಪವಿದೆ. ಕಾಲೇಜು ಪ್ರಾಂಶುಪಾಲರಾದ ಡಾ. ಕಲ್ಲೂರಾಯರ ಜೊತೆಗೆ ಸೇರಿ ನಡೆಸುವ ಈ ಎರಡು ಬೆಟ್ಟಗಳ ಚಾರಣಗಳ ವಿವರಗಳು ಬಹಳ ರಸವತ್ತಾಗಿ ಮೂಡಿಬಂದಿವೆ. ಪ್ರಾಣಿಗಳ ಕಳ್ಳ ಸಾಗಾಣೆಯ ಜಾಲ, ನಿಧಿ ಶೋಧನೆಯ ಹೆಸರಿನಲ್ಲಿ ಮನುಷ್ಯರು ನಡೆಸುವ ಅಪಸವ್ಯಗಳನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದ ರೀತಿ ಇಷ್ಟವಾಯಿತು.
“ಅಬ್ಬೆ” ಎನ್ನುವ ವಿಷಕಾರಿ ಜೇಡ ಇರುವುದು ನಿಜವೇ? ಅದು ಮನುಷ್ಯನನ್ನು ಸಾಯಿಸುವಷ್ಟು ವಿಷಕಾರಿಯೇ? ಬ್ಯಾಂಕಿನ ಹಾವು ಮುಂಗುಸಿ ಆಟದಲ್ಲಿ ಗೆದ್ದವರು ಯಾರು? ಎರಡು ಬೆಟ್ಟಗಳಲ್ಲಿ ನಡೆಸಿದ ಚಾರಣಗಳಲ್ಲಿ ಸಂಗ್ರಹಿಸಿದ ಮಾಹಿತಿಯ ಮೂಲಕ ಏನಾದರೂ ಹೊಸ ಸಂಶೋಧನೆಗಳು ನಡೆದವೇ? ಕರಾವಳಿಯ ದಟ್ಟ ಹಸಿರು ಮತ್ತು ಬಯಲು ಸೀಮೆಯ ಬೋಳು ಜಮೀನುಗಳಲ್ಲಿ ಯಾವುದು ಹೆಚ್ಚು ಅಥವಾ ಯಾವುದು ಕಡಿಮೆ? ಮುಂತಾದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಕಾದಂಬರಿಯನ್ನು ಓದಬಹುದು.
ಒಂದು ಹಳ್ಳಿಯ ಒಳಗೆ ಏನೇನು ಅಡಗಿರಬಹುದು ಎನ್ನುವುದನ್ನು ಅಮೂಲಾಗ್ರವಾಗಿ ವಿವರಿಸಿದ ಈ ಕೃತಿಯು ಇಷ್ಟವಾಯಿತು. ಒಂದೇ ಒಂದು ಆಕ್ಷೇಪ ಏನೆಂದರೆ ನಿರೂಪಣೆಯಲ್ಲಿ ಸ್ವಲ್ಪ ಧಾವಂತ ಮತ್ತು ಪುನರಾವರ್ತನೆಗಳನ್ನು ಕಡಿಮೆ ಮಾಡಿದ್ದರೆ ಒಳ್ಳೆಯದಿತ್ತು.
ಅದ್ಭುತವಾದ ಕಾದಂಬರಿ. ಲೇಖಕರ ವೃತ್ತಿಯ ಹಳೆಯ ನೆನಪುಗಳು, ಮತ್ತು ಅವರ ಹವ್ಯಾಸಗಳನ್ನು ಸೇರಿಸಿ ಬರೆದ ಕಥಾನಕ ನನ್ನನ್ನು ಬೇಗ ಓದಿಸಿಕೊಂಡು ಹೋಯಿತು ಮತ್ತು ಎಲ್ಲೂ ಸಹ ನಿಧಾನವೆಂದು ಅನ್ನಿಸಲಿಲ್ಲ. ಕಲ್ಕೆರೆ ಎಂಬ ಊರಲ್ಲಿ ಅಡಗಿದ್ದ ಅನೂಹ್ಯ ಸಂಗತಿಗಳನ್ನು ಲೇಖಕರು ಅನಾವರಣಗೊಳಿಸಲು ನಡೆಸುತ್ತಿದ್ದ ಪ್ರಯತ್ನದಲ್ಲಿ ನಾವೂ ಸಹ ಭಾಗಿಯಾಗಬೇಕೆಂಬ ಬಯಕೆ ಬಂದದ್ದು ಸುಳ್ಳಲ್ಲ. ಕಲ್ಕೆರೆ ಎಂಬ ಊರು, ಡಾ. ಕಲ್ಲೂ ರಾಯರು, ಕೆಂಚಪ್ಪ, ಅಲ್ಲಿ ನಾಯಕನು ಪ್ರಕೃತಿಯೊಂದಿಗೆ ಬೆರೆಯುವ ರೀತಿ ಇವೆಲ್ಲವೂ ತೇಜಸ್ವಿಯವರ ಕಥೆಗಳ ಮುಂದುವರೆದ ಪಾತ್ರಗಳು ಎಂಬಂತೆ ಭಾಸವಾಯಿತು. ಇದರ ಮಧ್ಯೆ ಅಬ್ಬೆ ಎಂಬ ನಿಗೂಢ ಜೇಡದ ಕಾಣದ ಪಾತ್ರ. ಲೇಖಕರಿಗಿರುವ ಕಥೆ ಹೆಣೆಯುವ ಸಾಮರ್ಥ್ಯವನ್ನು ತೋರಿಸಿತು. ಕಾದಂಬರಿ ಮುಗಿಸಿದಾಗ ಅನ್ನಿಸಿದ್ದು ಅಬ್ಬೆ ಜೇಡದ ಬಗ್ಗೆ ಉಪಸಂಹಾರವಾಗದೇ ಇದ್ದದ್ದು. ಅದಕ್ಕಾಗಿ ಕಾದಂಬರಿಯ ನಾಯಕ ಮತ್ತೆ ಕಲ್ಕೆರೆಗೆ ಬರುವನೇ? ಬರಲಿ ಎಂಬುದು ನನ್ನ ಆಶಯ.