Born in Manjeshwar, Kasargod, Ramesh has seen his shares of highs and lows. He was brought up in a home furnished with dreams and determination. He has lived his life thoroughly in the greens in Kerala and graduated from Mangalore University. He moved to Bangalore to work as an HR professional with a bag filled with memories. It was only during his early 40s that he decided to write books and unleash the treasure he contained in his dreams, thoughts, and the past. He has traveled to various countries and cities in India which enhanced his understanding of our world. He goes through his day as a series of narration.
ಮೊದಲೆಲ್ಲ ವಾರ ವಾರ ಕಾದು ಮಂಗಳ ಓದುತ್ತಿದ್ದೆವು. ಕಾರಣ ಅದರಲ್ಲಿನ ಧಾರಾವಾಹಿಗಳು. ಸಾಮಾಜಿಕ ಕತಾಹಂದರ ಮತ್ತು ವಾರ ವಾರವೂ ಕಾಯುವಂತೆ ಮಾಡುವ ಟ್ವಿಸ್ಟ್ ಗಳು.
ರಮೇಶರ ಈ ಕಾದಂಬರಿ ಓದುವಾಗ ನನಗೆ ಆ ಕಾಲ ನೆನಪಾಯಿತು. ಡಾಕ್ಟರ್ ಬಳಿ ತನ್ನ ಗೆಳತಿಯ ಸಮಸ್ಯೆ ಪರಿಹಾರಕ್ಕೆ ಬರುವ ಪೂರ್ಣ ಅದಕ್ಕಾಗಿ ಇಡೀ ಕತೆಯನ್ನು ಹೇಳತೊಡಗುತ್ತಾನೆ. ಅವನ ಬಾಲ್ಯದಿಂದ ಶುರುವಾಗಿ ನೇತ್ರಳ ಪರಿಚಯ, ಅವರಲ್ಲಿ ಗೆಳೆತನ ಬೆಳೆದ ಬಗೆ, ಅದು ಅನುರಾಗವಾಗುವ ದಾರಿಯಲ್ಲಿ ಎದುರಾದ ಅಡ್ಡಿಗಳು,ಹೊಟ್ಟೆಪಾಡಿಗಾಗಿ ಕೆಲಸ ಹುಡುಕುವ ಕಷ್ಟಗಳು,ಮನೆಯ ತಾಪತ್ರಯಗಳು ಅವರನ್ನು ಬೇರೆಯಾಗಿಸುತ್ತದೆ ಅವರಲ್ಲಿ ಮುನಿಸೂ ಬೆಳೆಯುತ್ತದೆ. ಇದಾಗಿ ಮುಂದೋಡುವ ಕತೆ ನೇತ್ರಳ ಬಗ್ಗೆ ಹಲವಾರು ತಪ್ಪು ಕಲ್ಪನೆಗಳ ಹುಟ್ಟುಹಾಕುತ್ತದೆ. ಮತ್ತೆ ಸಿಗುವ ನೇತ್ರಳ ಬದುಕಿನಲ್ಲಿ ಹಲವಾರು ಬದಲಾವಣೆ ಬಂದಿದೆ. ಅವಳಿಗೆ ಮದುವೆಯಾಗಿರದಿದ್ದರೆ ಅವಳ ಮಗಳು ಎಂದು ಜೊತೆಯಲ್ಲಿರುವ ಕೂಸು ಯಾರದು? ಅವಳ ಬದುಕಿನಲ್ಲಿ ಬೀಸಿದ ಬಿರುಗಾಳಿ ಯಾವುದು? ಇದೆಲ್ಲವನ್ನೂ ತಿಳಿಯಲು ನೀವಿದನ್ನು ಓದಬೇಕು.
ಕಾದಂಬರಿ ಎರಡು ಕಾರಣಗಳಿಗೆ ಬಹಳ ಹಿಡಿಸಿತು ಒಂದು ಕತೆಯ ಕೊಂಡುಹೋದ ರೀತಿ. ಅಲ್ಲಲ್ಲಿ ಟ್ವಿಸ್ಟ್ ಇಟ್ಟು ಅದನ್ನು ಕೊನೆಯವರೆಗೆ ಓದಿಸಿಕೊಳ್ಳುವ ಹಾಗೆ ಬರೆದ ಬಗೆ ಇನ್ನೊಂದು ಭಾಷೆ. ಅಪ್ಪಟ ಗಡಿನಾಡಿನ ಕನ್ನಡದ ಈ ಭಾಷೆಯ ವಿಷಯದಲ್ಲಿ ರಾಜಿಯಾಗದ ಲೇಖಕರ ಶೈಲಿ ಮುದ ನೀಡಿತು.
#ಅಕ್ಷರವಿಹಾರ_೨೦೨೫ ಕೃತಿ: ಎರಡನೇ ದೇವರು ಲೇಖಕರು: ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಪ್ರಕಾಶಕರು: ಟೋಟಲ್ ಕನ್ನಡ, ಬೆಂಗಳೂರು
ಇದು ನಾನು ಓದಿದ ವರ್ಷದ ಮೊದಲ ಪುಸ್ತಕ. ಈ ಕೃತಿಯು ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು ಸರಾಗವಾಗಿ ಓದಿಸಿಕೊಳ್ಳುತ್ತದೆ. ನಾನು ಸಹ ಉಡುಪಿಯವನಾದ್ದರಿಂದ ಇಲ್ಲಿ ಬಳಸಿರುವ ಕರಾವಳಿ ಕನ್ನಡ ಓದುವ ಖುಷಿಯನ್ನು ದ್ವಿಗುಣಗೊಳಿಸಿತು. ಬೆಂಗಳೂರಿಗೆ ಬಂದ ಮೇಲೆ ಬಳಕೆಯಲ್ಲಿ ನಿಂತೇ ಹೋಗಿದ್ದ ‘ಸ್ವಯವಿಲ್ಲದವ’, ‘ ‘ಅಂಡೆಪಿರ್ಕಿ’, ‘ಮಂಡೆಸಮ ಇಲ್ಲವ’, ‘ಕಂಡ್ರಾಕುಟ್ಟಿ’, ಮುಂತಾದ ಪದಗಳು ಮತ್ತೆ ಕಚಗುಳಿಯಿಟ್ಟಂತೆ ಭಾಸವಾಯಿತು. ಕತೆಯನ್ನು ಬೆಳೆಸಿದ ರೀತಿ, ಪಾತ್ರಗಳನ್ನು, ಸನ್ನಿವೇಶಗಳನ್ನು ಒಂದಕ್ಕೊಂದು ಜೋಡಿಸಿದ ರೀತಿ, ಇನ್ನೇನು ಓದುಗನಿಗೆ ಕತೆಯ ಜಾಡು ಸಿಕ್ಕಿತು ಎನ್ನುವಷ್ಟರಲ್ಲಿ ರಪಕ್ಕನೆ ಸಿಗುವ ತಿರುವು ಓದುಗರ ಆಸಕ್ತಿ ಬೇರೆಡೆಗೆ ಸೆಳೆಯದಂತಿವೆ.
ಕತೆಯು ಸಸ್ಪೆನ್ಸ್ ವಿಭಾಗಕ್ಕೆ ಸೇರಿರುವುದರಿಂದ ಕತೆಯ ಎಳೆಯನ್ನು ಹೇಳಿದರೆ ರಸಭಂಗವಾಗುವ ಕಾರಣ ಅದನ್ನು ಹೇಳದಿರುವುದು ಒಳಿತು. ಆದರೆ ಇಲ್ಲಿ ಕತೆಯ ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ ಒಂದು ಘಟನೆ ನಡೆದಾಗ ಜೊತೆಗಿರುವ ಮನಸ್ಸುಗಳು ಯಾವ ರೀತಿಯ ಪ್ರತಿಕ್ರಿಯೆಯನ್ನು ತೋರಿಸುತ್ತವೆ ಎನ್ನುವುದನ್ನು ಚೆನ್ನಾಗಿ ಚಿತ್ರಿಸಿದ್ದಾರೆ.ಈ ಪುಸ್ತಕವು ಓದುಗರ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಂಡು ಹೋಗಲು ಇದುವೇ ಪ್ರಮುಖ ಕಾರಣ. ಕತೆಯ ಕೇಂದ್ರಬಿಂದುಗಳಾದ ಪೂರ್ಣಚಂದ್ರನಿಗೆ ಕೆಲಸದ ಕರೆಯೋಲೆ ಬಂದಾಗ ಅವನಲ್ಲಿ ಉಂಟಾಗುವ ಭಾವನೆಗಳ ವಿವರಗಳು, ಅವನ ಮನೆಯವರು ದೇವರಿಗೆ ಹೇಳುವ ಹರಕೆಗಳು,ಇನ್ನೊಂದು ಪಾತ್ರವಾದ ನೇತ್ರಾವತಿ ತನ್ನೆಲ್ಲಾ ವೈರುಧ್ಯಗಳ ನಡುವೆ ಈಜಾಡುವಾಗ ಅವಳಲ್ಲಿ ಸಹಜವಾಗಿ ಉಂಟಾಗಬಹುದಾದ ತುಮುಲಗಳು, ಪದವಿಯನ್ನು ಮುಗಿಸಿದ ಬಳಿಕ ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಅಲೆದಾಡುವ ಯುವಕರ ಬವಣೆಗಳು, ಬಹಳ ಸಲೀಸಾಗಿ ಅಷ್ಟೇ ಸಹಜವಾಗಿ ಮೂಡಿಬಂದಿವೆ.
ಇನ್ನು ಕೃತಿಯನ್ನು ಓದಿ ಮುಗಿಸಿದಾಗ ನಾನು ಊಹಿಸಿದ ಅಂತ್ಯ ಅರ್ಧ ಸತ್ಯವಾಗಿತ್ತು. ಇನ್ನೊಂದು ನನಗನಿಸಿದ್ದು ಏನೆಂದರೆ ಸತ್ಯ ಕಣ್ಣೆದುರಿಗೇ ಇದ್ದರು ನಾವು ನಮ್ಮದೇ ಆದ ಭ್ರಮಾತ್ಮಕ ಲೋಕದಲ್ಲಿ ವಿಹರಿಸುತ್ತೇವೆ. ಎಷ್ಟೊಂದು ತಪ್ಪು ತಿಳುವಳಿಕೆಗಳು, ಅಪನಂಬಿಕೆಗಳನ್ನಿಟ್ಟುಕೊಂಡು ಬದುಕನ್ನು ಸವೆಸುತ್ತೇವೆ. ಅವೆಲ್ಲವನ್ನೂ ಬದಿಗಿಟ್ಟು ಒಂದೇ ಒಂದು ಸಲ ಮನಬಿಚ್ಚಿ ಮಾತಾಡಿದರೆ ಕ್ಷಣಾರ್ಧದಲ್ಲಿ ಎಲ್ಲವೂ ತಿಳಿಯಾಗಿ ತಂಪಾಗುತ್ತದೆ. ನಾವುಗಳು ನಮ್ಮ ಭ್ರಮೆಗಳ ಅಧೀನರು. ಹಾಗಾಗಿ ಸತ್ಯ ಮತ್ತು ನಮ್ಮ ನಡುವೆ ನಾವುಗಳೇ ನಿರ್ಮಿಸಿದ ಗೋಡೆ. ಹಾಗೆ ನೋಡಿದರೆ ಸತ್ಯ ನಮ್ಮೆದುರಿಗೆ ತೆರೆದುಕೊಳ್ಳುವುದು ಎಂಬುದು ಸರಿಯಾದುದಲ್ಲ, ನಾವೇ ಸತ್ಯಕ್ಕೆ ಕುರುಡಾಗದೆ ತೆರೆದುಕೊಳ್ಳಬೇಕು ಎನಿಸಿತು. ಹೊಸ ವರ್ಷದ ಪ್ರಾರಂಭದಲ್ಲಿ ಒಂದು ಒಳ್ಳೆಯ ಓದು.
ಸಿನಿಮಾ ರೀತಿಯಲ್ಲಿ ಸಾಗುವ ಕಥೆಯಲ್ಲಿ ಕೊನೆಯವರೆಗೂ ಕುತೂಹಲ ಇರುತ್ತದೆ. ಅಲ್ಲಲ್ಲಿ ಪಾತ್ರಗಳು ಹದ ತಪ್ಪಿದೆ. ಆದರೂ ಅದನ್ನು ಮನ್ನಿಸಬಹುದು. ಒಂದು ಬಲವಾದ ಪಾತ್ರಗಳ ಹಿಂದೆ ಹಲವು ಪಾತ್ರಗಳು ಸ್ವಲ್ಪ ಮಂಕಾಗಿದೆ. ಒಂದು ಮುದ ನೀಡುವ ಕಥೆಗಾಗಿ, ಸರಳ ಸುಂದರ ಕಥೆಗಾಗಿ ಈ ಕಾದಂಬರಿಯನ್ನು ಓದಬಹುದು.