ನೇತಾಜಿ ಸುಭಾಷ್ ಚಂದ್ರ ಬೋಸ್ -ಭಾರತೀಯ ಇತಿಹಾಸದ ಧ್ರುವತಾರೆ, ಅವರು ರಾಜಕೀಯವಾಗಿ ಕ್ರಿಯಾಶೀಲರಾಗಿದ್ದ ಅಲ್ಪ ಸಮಯದಲ್ಲೇ ತನ್ನ ಖಚಿತ ನಿರ್ಧಾರ, ನಿಶಿತಮತಿಗಳಿಂದ ಒಂದು ಹೊಸ ಸಂಚಲನವನ್ನೇ ಸೃಷ್ಟಿಸಿದರು. ನೇತಾಜಿ ಬದುಕಿನ ಅನೇಕ ಅದ್ಭುತ, ಅಪ್ರಕಟಿತ, ರೋಚಕ ಘಟನಾವಳಿಗಳನ್ನು ಪೋಣಿಸಿ ಕನ್ನಡದ ಹಿರಿಯ ಚಿಂತಕ ಡಾ. ಜಿ.ಬಿ. ಹರೀಶ ಬರೆದಿರುವ ಅನನ್ಯ ಕಾದಂಬರಿಯೇ -ಮಹಾಕಾಲ. ತ್ರಿವಳಿ ಸರಣಿಯ ಮೊದಲ ಸಂಪುಟದ ಹೆಸರು – ಸೃಷ್ಟಿ . ಇದು ಇದುವರೆಗೆ ಬಚ್ಚಿಟ್ಟ, ಮುಚ್ಚಿಟ್ಟ ಇತಿಹಾಸದ ಅಪೂರ್ವ ಅನಾವರಣ.
ನೇತಾಜಿ ಅವರು ವಿಮಾನ ಪತನದಲ್ಲಿ ಮರಣ ಹೊಂದಿರಲಿಲ್ಲವೇ? ಹಾಗಾದರೆ ಎಲ್ಲಿ ಹೋದರು ಏನಾದರು? 1947ರಲ್ಲಿ ಸ್ವಾತಂತ್ರ ಸಿಗುವುದರಲ್ಲಿ ಅವರ ಪಾತ್ರವಿತ್ತೆ? ಇವೆಲ್ಲ ಪ್ರಶ್ನೆಗಳಿಗೆ ನಿಮಗೆ ಈ ಕಾದಂಬರಿಯ ಮುಖಾಂತರ ಉತ್ತರ ಸಿಗಬಹುದು! ಜಿ ಬಿ ಹರೀಶ್ ಅವರ ಅಧ್ಯಯನಗಳೇ ಹಾಗೆ ಎಲ್ಲೆಲ್ಲೋ ವಿಷಯಗಳನ್ನು ಕಲೆಹಾಕಿ ನಿಖರವಾದ ಮಾಹಿತಿಯನ್ನು ನೀಡುತ್ತಾರೆ ಅದರಲ್ಲಿ ಈ ಪುಸ್ತಕವೂ ಹೌದು. ಇದು ನೇತಾಜಿಯವರ ಸಂಪೂರ್ಣ ಜೀವನಚರಿತ್ರೆಯಲ್ಲ. ಕಥೆ ಶುರುವಾಗುವುದೇ ಅವರು ಸ್ವಾತಂತ್ರ ಹೋರಾಟಕ್ಕೆ ಧುಮುಕಿದಾಗ. ಅಲ್ಲಿಂದ ಅವರ ಮತ್ತು ಇನ್ನಿತರ ಹೋರಾಟಗಾರರೊಂದಿಗೆ ನಡೆದ ಚರ್ಚೆ ಮತ್ತು ಅವರುಗಳಿಂದ ನೇತಾಜಿ ಪ್ರಭಾವಿತರಾಗಿದ್ದು ಈ ಪುಸ್ತಕದಲ್ಲಿ ಬರೆಯಲಾಗಿದೆ. ಹಾಗೆ ನೋಡಿದರೆ ಎಲ್ಲರಿಗೆ ತಿಳಿದಂತೆ ನೇತಾಜಿಯವರು ಸಾವರಕರ್ ಅವರಿಂದ ಪ್ರೇರೇಪಿತರಾಗಿ ಅವರ ಕೆಲವು ಸಲಹೆಗಳಿಗೆ ಮಾನ್ಯ ನೀಡಿ ಮುನ್ನಡೆದವರು. ಹಾಗೆಯೇ ಭಾರತೀಯ ಆಧ್ಯಾತ್ಮಿಕ ಜೀವನಶೈಲಿಯನ್ನು ಅವರು ಹೊಂದಿದವರು. ದೇವಿಯ ಆರಾಧಕರು ಮತ್ತು ಯೋಗದಲ್ಲಿ ಸಿದ್ಧಿಯನ್ನು ಪಡೆದಿದ್ದವರು. ಈ ಕೆಲವು ಮಾಹಿತಿಗಳು ನಮಗೆ ಸರಳವಾಗಿ ಎಲ್ಲಿಯೂ ಸಿಗುವುದಿಲ್ಲ. ಇಂತಹ ಪುಸ್ತಕಗಳು ನಮ್ಮ ಜನಗಳಿಗೆ ಬೇಕು. ನಮ್ಮ ಸ್ವಾತಂತ್ರ ಹೋರಾಟಗಾರರ ಬಗ್ಗೆ ಆಳವಾಗಿ ತಿಳಿಯಲು ಇಂತಹ ಪುಸ್ತಕಗಳು ನಮಗೆ ಬೇಕು.