‘ಅಪರೂಪದ ಕತೆಗಳು’ ಕೆ.ವಿ.ತಿರುಮಲೇಶ್ ಅವರ ಕಥಾಸಂಕಲನ. ಕಳೆದ ಏಳೆಂಟು ವರ್ಷಗಳಲ್ಲಿ ಅವರು ಬರೆದ ಕೆಲವು ಕಥೆಗಳ ಸಂಕಲನ. ಜನರ ಗಮನ ಸೆಳೆಯದ ಕಥೆಗಳಿವು, ಆದ್ದರಿಂದ ಅಪರೂಪದ ಕಥೆಗಳಿವು ಎನ್ನುತ್ತಾರೆ ತಿರುಮಲೇಶ್. ಆದರೆ ಇನ್ನೂ ಯಾರೂ ಸಾಮಾನ್ಯವಾಗಿ ಹೇಳದ ಅಪೂರ್ವ ಕಥೆಗಳು ಎಂಬ ಅರ್ಥವೂ ಈ ಪದಗಳಿಗೆ ಇದೆ ಎಂದು ಕಾಣುತ್ತದೆ. ಅದು ಪ್ರತಿಯೊಬ್ಬ ಲೇಖಕನ ಆಸೆ. ಆದರೆ ನಿರ್ಣಯ ಓದುಗನಿಗೆ ಬಿಟ್ಟದ್ದು ಎಂಬುದು ತಿರುಮಲೇಶ್ವರ್ ಅವರ ಅಭಿಪ್ರಾಯ. ಈ ಸಂಕಲನದಲ್ಲಿ ಐತ, ಅರೇಬಿಯಾ, ಅತಿಥಿ ನಟಿ, ಅವಿನಾಶನ ಜನ್ಮದಿನ-1, ಅವಿನಾಶನ ಜನ್ಮದಿನ-2, ಭುಜ್, ಕಂದೀಲಿನ ಸ್ತ್ರೀ, ಸಿಂಗರೇನಿ ಸಿರಾಮಿಕ್ಸ್, ಮಾಯಾಬಝಾರ್, ನಿನಾದಗಳು, ಒಂಯ್ಕ, ಶುಭವಾಗತೈತೆ, ಅನೇಕ ಮಾರ್ಜಿನಲ್ ಮ್ಯಾನ್, ಕಾಡಿನ ಯಕ್ಷಿಯೂ ಕಾಡಗದ ರಾಣಿ, ಸಂಧ್ಯಾದೇವಿ, ಎಲ್ಲಿ ಮನಕಳುಕಿರದೋ ಎಂಬ 16 ಕಥೆಗಳಿವೆ.
ಸೃಜನಾತ್ಮಕವಾಗಿ ಬರೆಯುತ್ತ ಲೇಖಕ ಹೆಚ್ಚು ಸ್ವಪ್ರಜ್ಞನಾಗುವುದು ಸರಿಯಲ್ಲ. ಸಾಧ್ಯವೂ ಇಲ್ಲ. ಆದರೂ ಲೇಖಕನನ್ನು ಹೆಚ್ಚೆಚ್ಚು ಸ್ವಪ್ರಜೆಗೆ ತಳ್ಳುವ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ - ಇದು ಹಿಂದಿಗಿಂತಲೂ ಇಂದು ಜಾಸ್ತಿ. ಯಾಕೆಂದರೆ, ನಮ್ಮದು ವೈಚಾರಿಕತೆಯ ಯುಗ, ಪ್ರಶ್ನೆಯ ಯುಗ, ಆವು ನನ್ನ ಬರಹಗಳನ್ನೂ ಬಾಧಿಸಿರಬಹುದು. ಅಂಥದೆಲ್ಲ ನನ್ನ ಕೈಮೀರಿದ ಪ್ರಮೇಯ. ಕತೆ ಕವಿತೆಗಳನ್ನು ಬರೆಯಲು ಅಪಾರವಾದ ಅನುಭವ ಬೇಕು ಎನ್ನುತ್ತಾರೆ, ನಿಜ. ಆದರೆ, ಅದರ ಜತೆಗೇ ಒಂದು ರೀತಿಯ ಮುಗ್ಧತೆಯೂ ಬೇಕಲ್ಲವೇ? ಅದೊಂದು ಶಲದ 'ಬಿಟ್ಟುಕೊಡುವ' ಮುಗ್ಧತೆ, ಆದದ್ದಾಗಲಿ ಎನ್ನುವಂಥದು. ಇಂಗ್ಲಿಷ್ನಲ್ಲಿ 'ಆಬಾಂಡನ್' ಎನ್ನುತ್ತಾರೆ. ನಿಯಂತ್ರಣದ ಜತೆಗೇ ಆಬಾಂಡನ್ ಕೂಡ ಬೇಕು. ಇದು ಬರಹವನ್ನು ಅನಿರೀಕ್ಷಿತತೆಗೆ ಒಡ್ಡುತ್ತದೆ. ಎಲ್ಲಾ ಲೇಖಕರ ಅನುಭವ ಇದು ಎಂದುಕೊಂಡಿದ್ದೇನೆ. ನನ್ನಂಥವರಿಗೆ ಪ್ರತ್ಯೇಕವಾಗಿಯೂ ಪ್ರಾಯೋಗಿಕತೆ ಇಷ್ಟ, ಪ್ರಾಯೋಗಿಕತೆ ಒಂದು ರಿಸ್ಕ್, ಆದರೆ ಅದಕ್ಕೆ ಏನೂ ಮಾಡುವ ಹಾಗಿಲ್ಲ.