‘ಅಪರೂಪದ ಕತೆಗಳು’ ಕೆ.ವಿ.ತಿರುಮಲೇಶ್ ಅವರ ಕಥಾಸಂಕಲನ. ಕಳೆದ ಏಳೆಂಟು ವರ್ಷಗಳಲ್ಲಿ ಅವರು ಬರೆದ ಕೆಲವು ಕಥೆಗಳ ಸಂಕಲನ. ಜನರ ಗಮನ ಸೆಳೆಯದ ಕಥೆಗಳಿವು, ಆದ್ದರಿಂದ ಅಪರೂಪದ ಕಥೆಗಳಿವು ಎನ್ನುತ್ತಾರೆ ತಿರುಮಲೇಶ್. ಆದರೆ ಇನ್ನೂ ಯಾರೂ ಸಾಮಾನ್ಯವಾಗಿ ಹೇಳದ ಅಪೂರ್ವ ಕಥೆಗಳು ಎಂಬ ಅರ್ಥವೂ ಈ ಪದಗಳಿಗೆ ಇದೆ ಎಂದು ಕಾಣುತ್ತದೆ. ಅದು ಪ್ರತಿಯೊಬ್ಬ ಲೇಖಕನ ಆಸೆ. ಆದರೆ ನಿರ್ಣಯ ಓದುಗನಿಗೆ ಬಿಟ್ಟದ್ದು ಎಂಬುದು ತಿರುಮಲೇಶ್ವರ್ ಅವರ ಅಭಿಪ್ರಾಯ. ಈ ಸಂಕಲನದಲ್ಲಿ ಐತ, ಅರೇಬಿಯಾ, ಅತಿಥಿ ನಟಿ, ಅವಿನಾಶನ ಜನ್ಮದಿನ-1, ಅವಿನಾಶನ ಜನ್ಮದಿನ-2, ಭುಜ್, ಕಂದೀಲಿನ ಸ್ತ್ರೀ, ಸಿಂಗರೇನಿ ಸಿರಾಮಿಕ್ಸ್, ಮಾಯಾಬಝಾರ್, ನಿನಾದಗಳು, ಒಂಯ್ಕ, ಶುಭವಾಗತೈತೆ, ಅನೇಕ ಮಾರ್ಜಿನಲ್ ಮ್ಯಾನ್, ಕಾಡಿನ ಯಕ್ಷಿಯೂ ಕಾಡಗದ ರಾಣಿ, ಸಂಧ್ಯಾದೇವಿ, ಎಲ್ಲಿ ಮನಕಳುಕಿರದೋ ಎಂಬ 16 ಕಥೆಗಳಿವೆ. ಸೃಜನಾತ್ಮಕವಾಗಿ ಬರೆಯುತ್ತ ಲೇಖಕ ಹೆಚ್ಚು ಸ್ವಪ್ರಜ್ಞನಾಗುವುದು ಸರಿಯಲ್ಲ. ಸಾಧ್ಯವೂ ಇಲ್ಲ. ಆದರೂ ಲೇಖಕನನ್ನು ಹೆಚ್ಚೆಚ್ಚು ಸ್ವಪ್ರಜೆಗೆ ತಳ್ಳುವ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ - ಇದು ಹಿಂದಿಗಿಂತಲೂ ಇಂದು ಜಾಸ್ತಿ. ಯಾಕೆಂದರೆ, ನಮ್ಮದು ವೈಚಾರಿಕತೆಯ ಯುಗ, ಪ್ರಶ್ನೆಯ ಯುಗ, ಆವು ನನ್ನ ಬರಹಗಳನ್ನೂ ಬಾಧಿಸಿರಬಹುದು. ಅಂಥದೆಲ್ಲ ನನ್ನ ಕೈಮೀರಿದ ಪ್ರಮೇಯ. ಕತೆ ಕವಿತೆಗಳನ್ನು ಬರೆಯಲು ಅಪಾರವಾದ ಅನುಭವ ಬೇಕು ಎನ್ನುತ್ತಾರೆ, ನಿಜ. ಆದರೆ, ಅದರ ಜತೆಗೇ ಒಂದು ರೀತಿಯ ಮುಗ್ಧತೆಯೂ ಬೇಕಲ್ಲವೇ? ಅದೊಂದು ಶಲದ 'ಬಿಟ್ಟುಕೊಡುವ' ಮುಗ್ಧತೆ, ಆದದ್ದಾಗಲಿ ಎನ್ನುವಂಥದು. ಇಂಗ್ಲಿಷ್ನಲ್ಲಿ 'ಆಬಾಂಡನ್' ಎನ್ನುತ್ತಾರೆ. ನಿಯಂತ್ರಣದ ಜತೆಗೇ ಆಬಾಂಡನ್ ಕೂಡ ಬೇಕು. ಇದು ಬರಹವನ್ನು ಅನಿರೀಕ್ಷಿತತೆಗೆ ಒಡ್ಡುತ್ತದೆ. ಎಲ್ಲಾ ಲೇಖಕರ ಅನುಭವ ಇದು ಎಂದುಕೊಂಡಿದ್ದೇನೆ. ನನ್ನಂಥವರಿಗೆ ಪ್ರತ್ಯೇಕವಾಗಿಯೂ ಪ್ರಾಯೋಗಿಕತೆ ಇಷ್ಟ, ಪ್ರಾಯೋಗಿಕತೆ ಒಂದು ರಿಸ್ಕ್, ಆದರೆ ಅದಕ್ಕೆ ಏನೂ ಮಾಡುವ ಹಾಗಿಲ್ಲ.
ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ಅವರ ತಮ್ಮ ಕಾವ್ಯಕ್ಕೆ ಹಲವು ಪರಂಪರೆಗಳಿಂದ ತಾತ್ವಿಕತೆ, ಅನುಭವ ಮತ್ತು ಪ್ರತಿಮೆಗಳನ್ನು ತಂದಿದ್ದಾರೆ. ಶಬ್ದಗಳನ್ನು ಸಾಧ್ಯವಾದಷ್ಟೂ ನಿರಾಭರಣಗೊಳಿಸಿ ಬಳಲೆತ್ನಿಸಿದ ಎ.ಕೆ. ರಾಮಾನುಜನ್ ತರಹದ ಕನ್ನಡ ಕವಿಗಳ ಜೊತೆಗೆ ತಿರುಮಲೇಶ್ ಕೂಡ ಇದ್ದರು. ನಾಯಕ ಮತ್ತು ಇತರರು, ಜಾಗುವ ಮತ್ತು ಇತರರು, ಕೆಲವು ಕಥಾನಕಗಳು, ಕಳ್ಳಿಗಿಡದ ಹೂ ಕಥಾಸಂಕಲನಗಳು. ಆರೋಪ, ಅನೇಕ, ತರಂಗಾಂತರ ಕಾದಂಬರಿಗಳು. ವ್ಯಕ್ತಿ ಮತ್ತು ಪರಂಪರೆಗಳು, ಸಮ್ಮುಖ, ನಮ್ಮ ಕನ್ನಡ, ಅಸ್ತಿತ್ವವಾದ, ವಿಮರ್ಶಾ ಬರಹಗಳು. ತಿರುಮಲೇಶ್ ಅವರ ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಮಕ್ಕಳ ಸಾಹಿತ್ಯ ರಚನೆ ಮಾಡಿರುವ ತಿರುಮಲೇಶ್ ಅವರು ಎಜ್ರಾ ಪೌಂಡ್, ಚೀನಿ ಕವಿತೆಗಳನ್ನು ಅನುವಾದಿಸಿದ್ದಾರೆ. ತಿರುಮಲೇಶ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ --ಪ್ರಶಸ್ತಿ ಸಂದಿದೆ.
ಶೀರ್ಷಿಕೆಗೆ ತಕ್ಕಂತೆ ಇಲ್ಲಿದ್ದ ಹದಿನಾರೂ ಕತೆಗಳು ಅಪರೂಪದ ಕತೆಗಳೇ, ಮುನ್ನುಡಿಯಲ್ಲಿ ತಿರುಮಲೇಶರೇ ಹೇಳುವಂತೆ ಇಲ್ಲಿನ ಕತೆಗಳು ಅಪೂರ್ವದ ಕತೆಗಳೇ. ಹಾಗಾದರೆ ಯಾರೂ ಹೇಳದ ಕತೆಗಳೇ ಎಂದು ನೀವು ಪ್ರಶ್ನಿಸುವುದಾದರೆ, ಅವು ಯಾವ ನಿಟ್ಟಿನಲ್ಲಿ ಅಪುರೂಪ ಎನ್ನುವುದು ಓದುಗರ ನಿರ್ಣಯಕ್ಕೆ ಬಿಟ್ಟದ್ದು, ಏಕೆಂದರೆ ಕತೆಗಳ ಹೊಳಹು ಮತ್ತು ಅವುಗಳನ್ನ ಅರ್ಥೈಸಿಕೊಳ್ಳುವ ವಿಧಾನ ವೈಯಕ್ತಿಕವಾದದ್ದು.
ಬಾಲ್ಯದಿಂದ ಹಿಡಿದು ವೃದ್ಧಾಪ್ಯದವರ ಭಾವನೆಗಳನ್ನ ತೋರುವ ಕತೆಗಳಿವೆ, ವಿದೇಶಿ ವಿದ್ಯಾಮಾನದ ಕತೆಯಿದೆ, ಮನುಷ್ಯನ ಅಸಹಾಯಕತೆಯನ್ನ ವಿಕ್ಷಿಪ್ತತೆಯನ್ನ ವ್ಯಕ್ತಪಡಿಸುವ ಕತೆಯಿದೆ, ಥ್ರಿಲರ್ ಕತೆಯಿದೆ, ಹಾರರ್ ಕತೆಯೂ ಇದೆ. ಈ ಎಲ್ಲ ಕತೆಗಳು ತಿರುಮಲೇಶರ ಬರವಣಿಗೆಯಲ್ಲಿ ಕಾವ್ಯಾತ್ಮಕವಾಗಿ, ಸಹಜವಾಗಿ ಮೂಡಿಬಂದಿವೆ. “ಮುಸುಗು” ಕಾದಂಬರಿಯ ನಂತರ ತಿರುಮಲೇಶರ ಈ ಕತೆಗಳು ನನ್ನ ಪಾಲಿಗೆ ಮತ್ತೊಂದು ಅದ್ಭುತ ಓದು ಆದರೆ ಆರಂಭಿಕ ಓದುಗರಿಗೆ ನಾನು ಈ ಪುಸ್ತಕವನ್ನು ಓದಿ ಎಂದು ಸಲಹೆ ಮಾಡುವುದಿಲ್ಲ.