ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ಎಲ್ಲಾ ಪತ್ರಿಕೆಗಳ ವಿಶೇಷಾಂಕಗಳನ್ನು ಬರೆಯುತ್ತಿರುತ್ಥಾರೆ. ಕನ್ನಡದ ಪ್ರಮುಖ ಅಕಾಡೆಮಿ ಹಾಗು ಸಾಹಿತ್ಯ ಪರಿಷತ್ತು ಪ್ರಕಟಿಸುವ ಸಂಪಾದನಾ ಕೃತಿಗಳಲ್ಲಿ ಲೇಖನ ಮತ್ತು ವೈಜ್ಞಾನಿಕ ಕಥೆಗಳು ಪ್ರಕಟವಾಗಿವೆ ದಿಬ್ಬದ ಬಂಗಲೆ, ಎರಡನೆಯ ಹೆಜ್ಜೆ, ಸೂರ್ಯ ಗರ್ಭ, ಮಹಾ ಯುದ್ಧ, ನಾನು ಅಘೋರಿಯಲ್ಲ, ಕಾಶ್ಮೀರದಲ್ಲೊಂದು ಸಂಜೆ, ಮಹಾ ಪತನ ಕೆಂಪು ಚಕ್ರಗಳು, ಹಸಿವು ಗೆದ್ದ ಹುಡುಗಿ ( ಹೋರಾಟ – ಇರೋಮ ಶರ್ಮಿಳಾ ಚಾನು – ಕಥಾನಕ), ಯಾವ ಪ್ರೀತಿಯೂ ಅನೈತಿಕವಲ್ಲ - ಮನೋ ವೈಜ್ಞಾನಿಕ, ಅವನು ಶಾಪಗ್ರಸ್ಥ ಗಂಧರ್ವ, ಕಾಶ್ಮೀರವೆಂಬ ಖಾಲಿ ಕಣಿವೆ ಇವರ ಹಲವು ಕಾದಂಬರಿಗಳು. ಮೂರನೆಯ ಆಯಾಮದಲ್ಲಿ, ತಡವಾಗಿ ಬಿದ್ದ ಮಳೆ (ಕಥಾ ಸಂಕಲನ)ಜನಪ್ರಿಯ, ಮೂರನೆಯ ಕಣ್ಣು (ಜನಪ್ರಿಯ ವಿಜ್ಞಾನ ಸಾಹಿತ್ಯ),. ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಮಾಧ್ಯಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜೀವ ಗಾಂಧಿ ಎಕ್ಸೆಲೆನ್ಸಿ ಗೋಲ್ಡ್ ನ್ಯಾಶನಲ್ ಅವಾರ್ಡ್, ಡಾ. ಶಿವರಾಮ್ ಕಾರಂತ ಪ್ರಶಸ್ತಿ, ಕರ್ನಾಟಕ ಭೂಷಣ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಕೆಲವು ಐತಿಹಾಸಿಕ ಹೆಸರುಗಳು ಹೆಸರಷ್ಟೇ ಆಗಿರುವುದಿಲ್ಲ, ಹೆಸರಿನ ಹಿಂದೆ ವಿಜೃಂಭಣೆ, ವ್ಯಕ್ತಿತ್ವ,ಆಡಳಿತ ನಿರ್ಧಾರಗಳಿಂದ ತಮ್ಮ ವರ್ಚಸನ್ನು ಕಾಲಕ್ಕೂ ಮೀರಿ ಅಜರಾಮರರಾಗಿ ಕಂಗೊಳಿಸುತ್ತಾರೆ. ಅಂತಹ ಕೆಲವು ಇತಿಹಾಸಗಳನ್ನು ರಚಿಸುವಾಗ ಅಕ್ಷರ ಹದ ತಪ್ಪಿದರೆ ಇತಿಹಾಸ ಹಾದರವಾಗುತ್ತದೆ. ಲೇಖಕನು ತನ್ನ ಯಾವುದೋ ಸೂತ್ರ-ಸಿದ್ಧಾಂತಕ್ಕೆ ಸಿಲುಕಿ ಸತ್ಯವು ಬೀದಿಯಲ್ಲಿ ನಿಂತು ಕಳೆದುಹೋದ ಹಸುಳೆಯಂತಾಗಿ ಅಬಲೆಯಾಗಿ ಕಣ್ಮರೆಯಾಗುತ್ತಾಳೆ. ಈ ಕೃತಿಯಲ್ಲಿ ಲೇಖಕರು ತಮ್ಮ ಶಕ್ತಿ ಮೀರಿದ ಪ್ರಜ್ಞೆ, ಪ್ರಯತ್ನ ಮತ್ತು ಸೃಜನಶೀಲತೆಯಿಂದ ಇತಿಹಾಸದ ಸತ್ಯಕ್ಕೆ ನ್ಯಾಯ ಒದಗಿಸಿದ್ದಾರೆಂದು ಉಲ್ಲೇಖಿಸಬಹುದು.”
“ಕೆಲವು ಇತಿಹಾಸಗಳನ್ನು ಓದಿದಾಗ ನಡೆದಿದ್ದೆಲ್ಲವೂ ಎಷ್ಟೋ ವರ್ಷಗಳ ಹಿಂದೆಯಾದರೂ ಇವತ್ತಿಗೂ ಅವರನ್ನು ಸ್ಮರಿಸುವಾಗ ಹೃದಯ ತುಂಬಿ ಬರುತ್ತದೆ. ಶಾಲೆಯಲ್ಲಿದ್ದಾಗ ಇಮ್ಮಡಿ ಪುಲಿಕೇಶಿ ಬಗ್ಗೆ ಸ್ವಲ್ಪವೇ ಓದಿದ್ದು ಅದೂ ಅಂಕಗಳ ಸಲುವಾಗಿಯಷ್ಟೇ . ತದನಂತರ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಸೆಕೆಂಡ್ ಗಳ ದೃಶ್ಯ ನೋಡಿದಾಗ ವಾವ್ ಎನಿಸಿದರೂ ವ್ಯಕ್ತಿಗತ ಪೂರ್ಣ ಇತಿಹಾಸ ತಿಳಿಯುತ್ತಿರಲಿಲ್ಲ. ಇಮ್ಮಡಿ ಪುಲಿಕೇಶಿಯ ಆಡಳಿತದ ಬಗ್ಗೆ ಇಷ್ಟು ಸಂಪೂರ್ಣ ವಿವರ ಕುರಿತ ಕೃತಿ ಅಚ್ಚುಕಟ್ಟಾಗಿ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾರೆ ಲೇಖಕರು. ಕೃತಿಯ ಮುನ್ನುಡಿಯಲ್ಲಿರುವ ಕೆಲವು ಸಾಲುಗಳು ಓದುಗನ ಸಮಯ ಮತ್ತು ಬೆಲೆಗೆ ತಕ್ಕುದಾಗಿವೆ ಮತ್ತು ಲೇಖಕರೇ ತಮ್ಮ ಬರವಣಿಗೆಗೆ ಸವಾಲೊಡ್ಡಿ ನಿಂತಿದ್ದಾರೆ.”
“ಪಲ್ಲವರು, ಕದಂಬರು, ಮೌರ್ಯರು, ಆಳುಪರು, ಗಂಗರು, ಮಾಳವರು, ಗುರ್ಜರು ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿದ್ದಾರೆ.”
“ಸಂಪೂರ್ಣ ದಕ್ಷಿಣವನ್ನೆಲ್ಲ ಗೆದ್ದ ಮತ್ತು ದಕ್ಷಿಣಾ ಪಥೇಶ್ವರನೆಂದು ಬಿರುದಾಂಕಿತನಾದ ಮೊಟ್ಟ ಮೊದಲ ಮತ್ತು ಕೊನೆಯ ಕನ್ನಡದ ಮಹಾಸಾಮ್ರಾಟ ಇಮ್ಮಡಿ ಪುಲಕೇಶಿ. ಅಖಂಡ ಎರಡು ದಶಕಗಳ ಕಾಲ ಸಂಪೂರ್ಣ ದಕ್ಷಿಣ ಭಾರತವನ್ನಾಳಿದ್ದಲ್ಲದೇ ಜಗತ್ತಿನ ಮೊದಲ ಐದು ಮಹಾಯುದ್ಧದಲ್ಲಿ ಒಂದಾದ ರೇವಾ ನದಿ ತೀರದ ಯುದ್ಧವನ್ನೂ ಗೆದ್ದ ದಾಖಲೆ ಅವನೊಬ್ಬನದ್ದೇ. ಶಿಲ್ಪ ಕಲೆ, ಲಲಿತಕಲೆ ಮತ್ತು ಗುರುಕುಲಗಳಿಗೆ ನ್ಯಾಯ ಒದಗಿಸಿದ, ಎದುರಾಳಿಗಳೇ ಇಲ್ಲದಂತೆ ಜನಾನುರಾಗಿ ಆಡಳಿತ ನಡೆಸಿದ ಅವನಿಗೆ ಮುಳುವಾಗಿದ್ದು ಅವನ ಒಳ್ಳೆಯತನಗಳೆ. ಮೊಟ್ಟಮೊದಲ ನೌಕಾಸೇನೆ ಹೊಂದಿ ಕರ್ಣಾಟ ಅಜೇಯ ಬಲಂ ಎಂಬ ಬೃಹತ್ ಸೈನ್ಯ ಕಟ್ಟಿ ಕನ್ನಡದ ಕಂಪನ್ನು ದಕ್ಷಿಣದುದ್ದಕ್ಕೂ ಬಿತ್ತಿದ ಚಕ್ರವರ್ತಿ.
ಈ ಕಾದಂಬರಿಯು 7ನೇ ಶತಮಾನದ ದಕ್ಷಿಣ ಭಾರತದ ಅತ್ಯಂತ ಪ್ರಭಾವಶಾಲಿ ಸಾಮ್ರಾಜ್ಯವಾದ ಬಾದಾಮಿ ಚಾಲುಕ್ಯರ ಮತ್ತು ಅವರ ಶ್ರೇಷ್ಠ ದೊರೆ ಇಮ್ಮಡಿ ಪುಲಿಕೇಶಿಯ ಜೀವನ ಚರಿತ್ರೆಯನ್ನು ಆಧರಿಸಿದೆ. ಪ್ರಮುಖ ಅಂಶಗಳು: ಅಧಿಕಾರಕ್ಕಾಗಿ ಹೋರಾಟ: ತನ್ನ ಚಿಕ್ಕಪ್ಪ ಮಂಗಲೇಶನ ವಿರುದ್ಧ ಹೋರಾಡಿ, ಕಳೆದುಹೋಗಿದ್ದ ಚಾಲುಕ್ಯರ ಸಿಂಹಾಸನವನ್ನು 'ಎರೆಯ' (ಪುಲಿಕೇಶಿ) ಹೇಗೆ ಮರಳಿ ಪಡೆದನು ಎಂಬುದು ಕಥೆಯ ಆರಂಭಿಕ ಭಾಗ. ದಿಗ್ವಿಜಯಗಳು: ಇಮ್ಮಡಿ ಪುಲಿಕೇಶಿಯು ದಕ್ಷಿಣದ ಕದಂಬರು, ಗಂಗರು ಮತ್ತು ಪಶ್ಚಿಮದ ಮೌರ್ಯರನ್ನು ಸೋಲಿಸಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ ರೋಚಕ ಇತಿಹಾಸ ಇಲ್ಲಿದೆ. ನರ್ಮದಾ ನದಿಯ ಯುದ್ಧ: ಉತ್ತರ ಭಾರತದ ಚಕ್ರವರ್ತಿ ಹರ್ಷವರ್ಧನನನ್ನು ನರ್ಮದಾ ನದಿಯ ತಟದಲ್ಲಿ ಸೋಲಿಸಿ, ಅವನ ದಕ್ಷಿಣದ ದಂಡಯಾತ್ರೆಯನ್ನು ತಡೆದ ಪುಲಿಕೇಶಿಯ ಶೌರ್ಯದ ವಿವರಣೆ ಈ ಪುಸ್ತಕದ ಹೈಲೈಟ್. ಈ ಜಯದಿಂದ ಆತ 'ದಕ್ಷಿಣಾಪಥೇಶ್ವರ' ಎಂಬ ಬಿರುದು ಪಡೆದನು. ಸಂಸ್ಕೃತಿ ಮತ್ತು ಕಲೆ: ವಾತಾಪಿ (ಬಾದಾಮಿ) ಮತ್ತು ಐಹೊಳೆಯ ವಾಸ್ತುಶಿಲ್ಪ, ಕಲೆ ಹಾಗೂ ಅಂದಿನ ಕಾಲದ ಕನ್ನಡಿಗರ ಶ್ರೀಮಂತ ಸಂಸ್ಕೃತಿಯನ್ನು ಲೇಖಕರು ಇಲ್ಲಿ ಚಿತ್ರಿಸಿದ್ದಾರೆ. ಸಂಘರ್ಷ ಮತ್ತು ಅಂತ್ಯ: ಪಲ್ಲವ ದೊರೆ ನರಸಿಂಹವರ್ಮನೊಂದಿಗಿನ ಸುದೀರ್ಘ ಸಂಘರ್ಷ ಮತ್ತು ಚಾಲುಕ್ಯ ಸಾಮ್ರಾಜ್ಯದ ಏರಿಳಿತಗಳನ್ನು ಇದು ಒಳಗೊಂಡಿದೆ.
ಲೇಖಕ ಸಂತೋಷ್ ಮೆಹಂದಳೆಈ ಪುಸ್ತಕ ಬರೆಯಲು ಸುಮಾರು 4 ವರ್ಷ ಸಂಶೋಧನೆ ಮಾಡಿದ್ದಾರೆ ಅಂತ ಪುಸ್ತಕದಲ್ಲೇ ಹೇಳಿದ್ದಾರೆ. ಇದು ಕಲ್ಪಿತ ಕತೆ, ಆದರೆ ನಿಜವಾದ ವ್ಯಕ್ತಿಗಳು ಮತ್ತು ಘಟನೆಗಳ ಮೇಲೆ ಆಧಾರಿತ. ಪುಸ್ತಕ ಮುಖ್ಯವಾಗಿ 3 ಭಾಗಗಳಾಗಿ ಇದೆ — ಇಮ್ಮಡಿ ಪುಲಿಕೇಶಿಯ ಜನನ, ನಂತರ ದಕ್ಷಿಣ ಭಾರತವನ್ನು ಗೆದ್ದದ್ದು, ಮುಂದೆ ಉತ್ತರ ಭಾರತದ ಹರ್ಷವರ್ಧನನ್ನು ಸೋಲಿಸಿದದ್ದು, ಕೊನೆಯಲ್ಲಿ ಇಮ್ಮಡಿ ಪುಲಿಕೇಶಿಯ ಪತನ. ನನಗೆ ಹೆಚ್ಚು ಇಷ್ಟವಾದದ್ದು ಲೇಖಕರ ಸಂಶೋಧನೆ. ಪ್ರತಿ ಘಟನೆಗೆ ಅವರು ಯಾವ ಪುಸ್ತಕ ಅಥವಾ ಮೂಲದಿಂದ ತೆಗೆದುಕೊಂಡಿದ್ದಾರೆ ಅಂತ ಪುಟದ ಕೊನೆಯಲ್ಲಿ ಲಿಂಕ್ ಅಥವಾ ರೆಫರೆನ್ಸ್ ಕೊಟ್ಟಿದ್ದಾರೆ. ಇಮ್ಮಡಿ ಪುಲಿಕೇಶಿ ಬಗ್ಗೆ ತಿಳಿಯಲು ಇದು ಒಳ್ಳೆಯ ಪುಸ್ತಕ ಅಂತ ಅನಿಸಿತು. ಆದ್ರೆ ಓದಲು ಸುಲಭ ಪುಸ್ತಕ ಅಲ್ಲ. ಕೆಲ ಕಡೆ ನಿಧಾನವಾಗಿ ಸಾಗುತ್ತದೆ. ನನ್ನ ತಾಳ್ಮೆಯನ್ನು ಪರೀಕ್ಷಿಸಿದ್ದು ನಿಜ