‘ತತ್ರಣಿ’ ದೀಪಾ ಜೋಶಿ ಅವರು ಬರೆದಿರುವ ಗತ ಶತಮಾನದ ಉತ್ಕ್ರಾಂತಿ ಕಥನವುಳ್ಳ ಕಾದಂಬರಿಯಾಗಿದೆ. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಆರಂಭವಾಗಿ, ಉತ್ತರಾರ್ಧದಲ್ಲಿ ಕೊನೆಗೊಳ್ಳುವ ನಡುವಿನ ಸುಮಾರು ಐವತ್ತು ವರ್ಷಗಳ ಕಥಾ ಜಗತ್ತು ದೀಪಾ ಜೋಶಿಯವರು ಈ ಕಾದಂಬರಿಯಲ್ಲಿ ಅನಾವರಣಗೊಳ್ಳುತ್ತದೆ. ಉತ್ತರ ಕರ್ನಾಟಕದ ರಾಣೆಬೆನ್ನೂರು ಕೇಂದ್ರವಾಗುಳ್ಳ ಮಾಧ್ವ ವೈದಿಕ ಕುಟುಂಬವೊಂದರ ಬದುಕಿನ ಹೋರಾಟದ ಕಥೆ ಇಲ್ಲಿದೆ.
ಹುಚ್ಚಾಚಾರ್ರ ಸಾವಿನ್ನ ಸನ್ನಿವೇಶದಿಂದ ಆರಂಭವಾಗುವ ಈ ಕಥಾನಕವು, ಅವರ ಮಗ ಭುಜಂಗಾಚಾರ್ರು ಬದುಕಿನ ಏಳುಬೀಳುಗಳ ಹೋರಾಟದಲ್ಲಿ ಸುದೀರ್ಘ ಬಾಳ ಯಾತ್ರೆಗಳಲ್ಲಿ, ತೀವ್ರ ಬಡತನ, ಸಾವು, ದುಃಖ, ಒದ್ದಾಟಗಳನ್ನು ಎದುರಿಸುತ್ತಾ, ಆ ಕುಲುಮೆಯಲ್ಲಿ ಬೆಂದು ಮಾಗುತ್ತಾ, ಎಂದೂ ಸಹನೆಯನ್ನು ಕಳೆದುಕೊಳ್ಳದೆ ಘನತೆಯಿಂದ ಬಾಳುತ್ತಲೇ ಸ್ಥಿತಪ್ರಜ್ಞ ಸ್ಥಿತಿಗೆ ತಲುಪುವ ಹಂತದಲ್ಲಿ ಅಂತ್ಯವಾಗುತ್ತದೆ.
ಕಳೆದು ಹೋದ ಕಾಲಘಟ್ಟವೊಂದನ್ನು ಪುನರ್ ಸೃಷ್ಟಿಸುವ ಕಾರ್ಯದಲ್ಲಿ ದೀಪಾ ಜೋಶೀಯವರು ತೋರಿದ ಸಂಯಮ, ಆ ಕಾಲದ ಶಾಸ್ತ್ರಗಳು ರೀತಿಮ ರಿವಾಜುಗಳು, ಸಾಮಾಜಿಕ ಸ್ಥಿತಿಗತಿಗಳು. ಮೊದಲಾದ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿ, ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ದಾಖಲಿಸಿದ ರೀತಿ ಅಪರೂಪದ್ದು
ಧಾರವಾಡದಲ್ಲಿ ಜನಿಸಿದ ಡಾ. ದೀಪಾ ಜೋಶಿ ಅವರು ಸದ್ಯ ಬೆಂಗಳೂರು ನಿವಾಸಿ. ಅನೇಕ ಖ್ಯಾತ ಮಾಸಿಕ, ಪತ್ರಿಕೆಗಳಲ್ಲಿ ನಿಯಮಿತವಾಗಿ ಲೇಖನ ಪ್ರಕಟಿಸಿದ್ದಾರೆ. ಉತ್ಠಾನ ಪತ್ರಿಕೆ ಸ್ಫರ್ಧೆಯಲ್ಲಿ ಎರಡನೇ ಬಹಿಮಾನ ಪಡೆದ ಕತೆಗಾರ್ತಿ ಅವರು. ಬದುಕು ಬಣ್ಣ ಮೊದಲ ಕಥಾ ಸಂಕಲನ. ಪ್ರಸ್ತುತ ಸಂಕಲನ ಕಸಾಪ ದತ್ತಿ ಪ್ರಶಸ್ತಿ ಗಳಿಸಿದೆ.
ಒಳ್ಳೆಯ ಓದು ಕೊಡುವ ಖುಷಿ ಬರೆದು ಮುಗಿಯುವಂತದ್ದಲ್ಲ. ದೀಪಾ ಜೋಶಿಯವರ ಈ ಕೃತಿ ಉತ್ತರ ಕರ್ನಾಟಕದ ರಾಣೆಬೆನ್ನೂರಿನ ಕಡೆಯದ್ದು. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಶುರುವಾಗಿ ಸುಮಾರು ಐವತ್ತು ವರ್ಷಗಳ ಕಾಲ ಒಂದು ಬಡ ಮಾಧ್ವ ಬ್ರಾಹ್ಮಣ ಕುಟುಂಬದ ಜೀವನವನ್ನು ಚಿತ್ರಿಸುವ ಕೃತಿ. ದೈನಂದಿನ ಜೀವನ ನಿರ್ವಹಣೆಯೇ ಕೃತಿಯ ಮೂಲ ದ್ರವ್ಯ. ಒಂದು ಸಾವಿನೊಂದಿಗೆ ಆರಂಭವಾಗುವ ಕೃತಿ ಇಡಿಯ ಬದುಕನ್ನು ನಿರ್ಭಾವುಕವಾಗಿ ಗಟ್ಟಿತನದಿಂದ ತೆರೆದಿಡುತ್ತದೆ.
ಹುಚ್ಚಾಚಾರ್ರ ಸಾವು ಕುಟುಂಬವನ್ನು ಅಲ್ಲಾಡಿಸಿದ ಬಗೆ, ಅವರ ಮಗ ಭುಜಂಗಾಚಾರ್ರು ಸಂಸಾರದ ನೊಗ ಹೊತ್ತು ನಡೆಸಲು ಪಟ್ಟ ಪಾಡು ,ಕುಟುಂಬದ ಸ್ತ್ರೀಯರ ಚಿತ್ರಣ, ಹೆಂಗಸರ ಗಟ್ಟಿ ವ್ಯಕ್ತಿತ್ವ ದರ್ಶನ ,ಕಾದಂಬರಿಯಲ್ಲಿ ದೀರ್ಘವಾಗಿ ಬರುವ ಬದರಿಯಾತ್ರೆಯ ವಿವರಣೆ, ಆಗಿನ ಕಾಲದ ರೀತಿ ರಿವಾಜು, ಆಚಾರಗಳು ,ಸಂಭಾಷಣೆ ಓಹ್! ಏನೆಂದು ಹೇಳಲಿ?
ಕಳೆದ ಮೂರು ನಾಲ್ಕು ದಿನಗಳಿಂದ ಎಲ್ಲಿ ಬೇಗ ಬೇಗ ಓದಿದರೆ ಮುಗಿದುಬಿಡುತ್ತದೋ ಎಂದು ಓದಿ ಸವಿದ ಕೃತಿ ಇದು. ನಿಸ್ಸಂಶಯವಾಗಿ ಕಳೆದ ಐದು ಆರು ವರ್ಷಗಳಲ್ಲಿ ನಾನೋದಿದ ಅತ್ಯುತ್ತಮ ಐದು ಕೃತಿಗಳಲ್ಲಿ ಇದೂ ಒಂದು.
ಇಡಿಯ ಕಾದಂಬರಿಯನ್ನು ಎರಡು ಬಾರಿ ಓದಿದೆ. ಒಂದೇ ಒಂದು ಸಾಲು ಅನಗತ್ಯ ಅನಿಸದ ಹಾಗೆ ಇದೆ. ಕತೆಯನ್ನು ,ಕತೆಯ ಪಾತ್ರಗಳ ಭಾವವನ್ನು ಇನ್ನಷ್ಟು ಹಿಗ್ಗಿಸಿ ಬರೆಯಬಹುದೇ ಹೊರತು ಇದನ್ನು ಹೃಸ್ವ ಮಾಡುವುದು ಸಾಧ್ಯವಿಲ್ಲ. ಉತ್ತರ ಕರ್ನಾಟಕದ ಭಾಷೆಯನ್ನು ಲೇಖಕಿ ಬಳಸಿಕೊಂಡ ಬಗೆ, ಆ ಕಾಲದ ಮಡಿ ಮೈಲಿಗೆ ರೀತಿ ರಿವಾಜುಗಳ ವರ್ಣನೆ, ಎಲ್ಲದಕ್ಕಿಂತ ಕಳಶಪ್ರಾಯವಾಗಿ ಬದರಿ ಯಾತ್ರೆಯ ಭಾಗ ಇದೆಯಲ್ಲ ಅದಂತೂ ಕಣ್ಣಿಗೆ ಕಟ್ಟಿದ ಹಾಗೆ ಬಂದಿದೆ.
ಆ ಕಾಲದ ಹೆಣ್ಮಕ್ಕಳ ಬವಣೆ , ಸಂಸಾರದಲ್ಲಿ ಬೆಂದು ಗಟ್ಟಿಯಾದ ಅನುಭವದ ಮಾತುಗಳು, ಗಂಡಸರ ಗಡಸುತನ ,ಕೋಪ, ಹುಡುಗರ ಹುಡುಗುಬುದ್ಧಿ ಯಾವ ವಿಷಯದಲ್ಲೂ ಒಂಚೂರು ಆಚೀಚೆ ಆಗದ ಹಾಗೆ ಕಟ್ಟಿಕೊಟ್ಟ ರೀತಿ.
ಇದು ಇವರ ಮೊದಲ ಕಾದಂಬರಿ ಎಂದರೆ ನಂಬುವುದು ಕಷ್ಟ.
ಇದನ್ನು ನಾನು ಓದಿ ಪಟ್ಟ ಖುಷಿಯನ್ನು ನೀವೂ ಅನುಭವಿಸಬೇಕು ಅನ್ನುವುದಷ್ಟೆ ನನ್ನ ಬಯಕೆ.
ಶ್ರೀನಿವಾಸ ವೈದ್ಯರ ' ಹಳ್ಳ ಬಂತು ಹಳ್ಳ' ಓದಿ ಯಾವ ಖುಷಿ ಅನುಭವಿಸಿದ್ದೆನೋ ಅದೇ ಸಂತೋಷ ಈ ಕೃತಿ ನೀಡಿತು
ಕನ್ನಡ ಸಾಹಿತ್ಯ ರಂಗದಲ್ಲಿ ಐತಿಹಾಸಿಕ ಕಾದಂಬರಿಗಳ ಸ್ಥಾನ ಬಹಳ ಎತ್ತರದ್ದು. ದುರ್ಗಾಸ್ತಮಾನ, ಹೊಯ್ಸಳೇಶ್ವರ ವಿಷ್ಣುವರ್ಧನ, ಚಿಕ್ಕವೀರ ರಾಜೇಂದ್ರ, ಚೆನ್ನಭೈರಾದೇವಿ, ಕೆ.ಎನ್. ಗಣೇಶಯ್ಯರ ಹೆಚ್ಚಿನೆಲ್ಲಾ ಕೃತಿಗಳು... ಇತಿಹಾಸದ ದೃಷ್ಟಿಯಲ್ಲೂ, ಸಾಹಿತ್ಯ ರಚನೆಯ ದೃಷ್ಟಿಯಿಂದಲೂ ಶ್ರೇಷ್ಠ ಎನಿಸುವ ಇಂದಿಗೂ ಎಂದಿಗೂ ಓದಲೇಬೇಕಾದಂಥ ಕಾದಂಬರಿಗಳಾಗಿವೆ. ಈ ಎಲ್ಲ ಐತಿಹಾಸಿಕ ಕಾದಂಬರಿಗಳ ನೆಲಗಟ್ಟು ಯಾವುದಾದರೂ ರಾಜ ಮನೆತನ, ಸಾಮ್ರಾಜ್ಯದ ಉನ್ನತಿ - ಅವನತಿಗಳ ಸುತ್ತಲಿದ್ದು ಆ ಕಾಲಘಟ್ಟದ ರಾಜಾಡಳಿತದ ಸ್ಥೂಲ ಚಿತ್ರಣ ನೀಡುವಲ್ಲಿ ಕೇಂದ್ರೀಕೃತವಾಗಿರುತ್ತವೆ.
ಇದಕ್ಕಿಂತ ಸ್ವಲ್ಪ ಭಿನ್ನವಾಗಿ; ಲಭ್ಯ ದಾಖಲಾತಿಗಳ ಜೊತೆಗೇ ಎಲ್ಲೂ ಯಾವತ್ತೂ ದಾಖಲಾಗದ ಜನಸಾಮಾನ್ಯರ ಜೀವನಕ್ಕೆ ತುಸುಮಟ್ಟಿಗೆ ಕಲ್ಪನೆಯೂ ಬೆರೆಸಿ ಹಿರಿಯರು ಕಿರಿಯರಿಗೆ ಹೇಳುತ್ತಾ ಬಂದ ಯಾವುದೋ ತಲೆಮಾರಿನ ಜೀವನಚಿತ್ರಣ ಕಟ್ಟುವುದು ಐತಿಹಾಸಿಕ ಕಾದಂಬರಿಯದೇ ಇನ್ನೊಂದು ಪ್ರಕಾರ. ಎಸ್.ಎಲ್. ಭೈರಪ್ಪನವರ ಸಾರ್ಥ, ಗೃಹಭಂಗ, ವಸುಧೇಂದ್ರರ ತೇಜೋ-ತುಂಗಭದ್ರಾ ಇತ್ಯಾದಿಗಳು ಈ ಪ್ರಕಾರದಲ್ಲಿ ಜನಮನ ಗೆದ್ದಂತವು. ದೀಪಾ ಜೋಷಿಯವರ "ತತ್ರಾಣಿ" ಕೂಡ ಇಂತಹದೇ ಒಂದು ಭಿನ್ನ ಇತಿಹಾಸದ ಕಥಾನಕ.
'ಬದುಕು ಕೇವಲ ಸುಖವಲ್ಲ, ದುಃಖವೂ ಅಲ್ಲ, ಅದು ಯಾವ ಮಾನದಂಡಕ್ಕೂ ಸಿಕ್ಕದ ಬಹುದೊಡ್ಡ ಬೆರಗು' ಎನ್ನುವ ಲೇಖಕಿ, ಬ್ರಾಹ್ಮಣ ಸಮುದಾಯದ ಬಡ ಕುಟುಂಬವೊಂದರ ದಿನದಿನದ ಏಳುಬೀಳಿನ ಕಥೆಯನ್ನು ಹೇಳುತ್ತಲೇ ಗತ ಶತಮಾನವೊಂದರ ಸಾಮಾಜಿಕ ಮತ್ತು ತಾಂತ್ರಿಕ ಪ್ರಗತಿಯ ಸೂಕ್ಷ್ಮತಂತುಗಳನ್ನು ಅಚ್ಚುಕಟ್ಟಾಗಿ ಕಥೆಯೊಂದಿಗೆ ಪೋಣಿಸಿದ್ದಾರೆ. ಹೊತ್ತು ತಿಳಿಯಲು ಗಡಿಯಾರವೊಂದು ಅನಗತ್ಯ, ಅದನ್ನು ತಂದ ದುಡ್ಡು ವ್ಯರ್ಥ ಎಂಬಲ್ಲಿಂದ ರಿಸ್ಟ್ ವಾಚ್ ಕೊಡದ ಹೊರತು ತಾಳಿ ಕಟ್ಟುವುದಿಲ್ಲ ಎಂದು ಮದುವೆಗಂಡು ಹಠಹಿಡಿಯುವ ತನಕ, ಟೆಲಿಗ್ರಾಮ್ನಿಂದ ಫೋನ್ ಕರೆಯ ತನಕ ಸದಾ ಸಾಗುತ್ತಲೇ ಇರುವ ಬದಲಾವಣೆಯ ಹಾದಿಯನ್ನು ಕತೆಯ ಉದ್ದಗಲಕ್ಕೂ ಅತ್ಯಂತ ಸಹಜಗತಿಯಲ್ಲಿ ಮಿಳಿತವಾಗಿಸಿದ್ದಾರೆ.
ಇಸವಿ 1930-32ರ ಸುಮಾರಿಗೆ ಗಾಂಧೀಜಿಯವರ ಪ್ರಭಾವದಲ್ಲಿ ಚಾಲನೆ ಪಡೆದ ಕರ ನಿರಾಕರಣೆ ಚಳುವಳಿಯು ಎಬ್ಬಿಸಿದ ಅಲೆಯೊಂದರ ಪರಿಣಾಮವು ಕೃಷಿಗೂ, ಕೃಷಿ ಕಂದಾಯಕ್ಕೂ ಯಾವ ರೀತಿಯಲ್ಲೂ ಸಂಬಂಧಪಡದ ಸರಾಪಿ ಅಂಗಡಿಯ ಹುಚ್ಚಾಚಾರರನ್ನು ತಟ್ಟಿ, ಧನಕನಕಗಳಿಂದ ಸಮೃದ್ಧವಾಗಿದ್ದ ಕುಟುಂಬವೊಂದು ರಾತ್ರೋರಾತ್ರಿ ಕುಟುಂಬದ ಆಧಾರವಾಗಿದ್ದ ಮನೆಯ ಹಿರಿಯನನ್ನೂ, ಸಕಲ ಸಂಪತ್ತನ್ನೂ ಕಳೆದುಕೊಳ್ಳುವುದು ಚರಿತ್ರೆಯ ಮಹಾಜ್ವಾಲೆಯಿಂದ ಹಬ್ಬಿದ ಸಣ್ಣದೊಂದು ಕಿಡಿ. ಆ ಕಿಡಿಯ ಉರಿಯಲ್ಲಿ ಬೆಂದೇಳುವ ಭುಜಂಗಾಚಾರರೆಂಬ ಭೀಷಣ ವ್ಯಕ್ತಿತ್ವವೊಂದರ ಜೀವನದ ಪಕ್ಷಿನೋಟದ ಸೊಗಸನ್ನು ತತ್ರಾಣಿ ಕಾದಂಬರಿ ಓದಿಯೇ ಸವಿಯಬೇಕು.
ಈ ವರ್ಷದ ಅತ್ಯುತ್ತಮ ಓದಿನಲ್ಲಿ ನಿಸ್ಸಂಶಯವಾಗಿ ಈ ಕಾದಂಬರಿಯೂ ಒಂದು.
2025ನೇ ವರ್ಷ ಒಳ್ಳೆಯ ಕಾದಂಬರಿಯಿಂದ ಪ್ರಾರಂಭವಾಯಿತು. ದೀಪಾ ಮೌಶಿ(ನನಗ)ಅವರ ಪುಸ್ತಕಕ್ಕಾಗಿ ಎಲ್ಲರಂತೆ ನಾನೂ ಕಾಯುತ್ತಿದ್ದೆ, ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿ ಭೇಟಿಯಾಗಿಯೂ ಬಂದಿದ್ದೆ. ಒಳ್ಳೆಯ ಕಾದಂಬರಿ ಎಂಬ ನಿರೀಕ್ಷೆ ಎಲ್ಲಿಯೂ ಸಹ ಸುಳ್ಳಾಗಲಿಲ್ಲ. ಕಾದಂಬರಿಯ ಬಗ್ಗೆ ವಿಸ್ತಾರವಾಗಿ ನಾನು ಬರೆಯುವುದಿಲ್ಲ ಕಾರಣ ಅದು ಓದುಗರನ್ನು ಮತ್ತು ಲೇಖಕರನ್ನು ನಿರಾಶೆಗೊಳಿಸುತ್ತದೆ. ಕಾದಂಬರಿಯು ಸ್ವಾತಂತ್ರಪೂರ್ವ ಕಾಲದಲ್ಲಿ ಮತ್ತು ನಂತರದಲ್ಲಿ ನಡೆದ ಕಥೆಯಾಗಿದೆ. ನಮ್ಮ ಅಜ್ಜಂದಿರ ಸರ್ವೇಸಾಮಾನ್ಯ ಹೇಳುತ್ತಿದ್ದ ಅನುಭವ ಕಥನ ಈ ಕಾದಂಬರಿಯಾಗಿದೆ. ಲೇಖಕಿಯರು ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದಂತೆ ಅವರ ತಂದೆಯ ಅನುಭವಗಳು, ತಾವು ಕಂಡಂತಹ ದೃಶ್ಯಗಳು ತಮಗೆ ಪುಸ್ತಕ ಬರೆಯಲು ಪ್ರೇರೇಪಿಸಿದವು ಎಂದು. ಕಾದಂಬರಿಯಲ್ಲಿ ಹುಚ್ಚಾಚಾರ್ಯರ ನಿಧನದ ತರುವಯ ಭುಜಂಗಾಚಾರ್ಯರು ತಮ್ಮ ಕುಟುಂಬದ ಸಮತೋಲನವನ್ನು ಎಷ್ಟು ಚಂದರೀತಿಯಲ್ಲಿ ಕಾಪಾಡುತ್ತಾರೆ. ತಮ್ಮದು ದೊಡ್ಡ ಸಂಸಾರವಿದ್ದರೂ ಜನರಿಗೆ ಸದಾ ಸಹಾಯಹಸ್ತರಾಗಿದ್ದವರು. ಅಷ್ಟೇ ಅಲ್ಲದೇ ಎಲ್ಲ ವಿದ್ಯೆಗಳಲ್ಲಿ ಕೈ ಹಾಕಿ ಪರಿಣಿತಿಯನ್ನು ಹೊಂದುವ ಉತ್ಸಾಹಿ ಅವರು. ಈ ಪುಸ್ತಕ ಓದಿದಾಗ ಜನರಿಗೆ ತಾನೂ ಭುಜಂಗಾಚಾರ್ಯ ರೀತಿಯಲ್ಲಿ ಬೆಳೆಯಬೇಕೆಂಬ ಹುಮ್ಮಸ್ಸು ಬೆಳೆಯಬಹುದೇನೋ! ಅದರ ಜೊತೆಗೆ ಅವರ ತಾಯಿ ಸುಂದರಾಬಾಯಿಯವರ ಮೃದುವಿದ್ದರೂ ಎದಕ್ಕೂ ಬಗ್ಗದ ಸ್ವಭಾವ. ಇದಷ್ಟೆ ಅಲ್ಲದೆ ಕಾದಂಬರಿಯ ಹೆಣ್ಣು ಪಾತ್ರಗಳಿಗೆ ಮಹತ್ವ ನೀಡಲಾಗಿದೆ. ಅಂದಿನ ಕಾಲದ ಮಹಿಳೆಯರ ಜೀವನಸ್ಥಿತಿಯನ್ನು ಬಹಳ ಚೆನ್ನಾಗಿ ಬರೆದಿದ್ದಾರೆ. ಕಾದಂಬರಿಯಲ್ಲಿ ಮರೆಯಲಾಗದ ಸನ್ನಿವೇಶ ಬರುವುದು ಬದರಿಯಾತ್ರೆಯದು. ಕಾದಂಬರಿಯಲ್ಲಿ ಅದೊಂದು roller coaster ride! ಅಲ್ಲಿಯೂ ಭುಜಂಗಾಚಾರ್ಯರರದೇ ಮೇಲುಗೈ! ಹೊರಗಿಂದ ಆಚಾರ್ಯರು ಕಠಿಣವಾಗಿದ್ದರೂ ಅವರದ್ದು ಮೃದು ಸ್ವಭಾವ ಮತ್ತು ಭಾವುಕ ಜೀವಿ. ಕನ್ನಡದಲ್ಲಿ ಹಿಂದೆ ನನಗೆ ಬಹಳ ಇಷ್ಟವಾದಂತಹ ಗೈರ ಸಮಜೂತಿ ಕಾದಂಬರಿಯ ಪಟ್ಟಿಗೆ ನಾನು ಇದನ್ನು ಸೇರಿಸಬಹುದು. ಕಾದಂಬರಿಯಲ್ಲಿ ಉತ್ತರ ಭಾಗದ ಕರ್ನಾಟಕದ ಭಾಷೆ ನನ್ನನ್ನು ಇನ್ನೊಂದಿಷ್ಟು ಓದಿಸುವಂತೆ ಮಾಡಿತು. ಒಟ್ಟಾರೆ ಬಹಳ ಅಚ್ಚುಕಟ್ಟಾದ ಕಾದಂಬರಿಯನ್ನು ಬರೆದಿದ್ದಾರೆ. 2025ರಲ್ಲಿ ಈ ಪುಸ್ತಕದ ಓದು ನಿಮ್ಮದಾಗಲಿ.
ಬಹಳ ದಿನಗಳ ನಂತರ ಒಂದೊಳ್ಳೆ ಪುಸ್ತಕದ ಓದು ಕೊಡುವ ಸುಖ ಅನನ್ಯ, ಇಂತಹ ಪುಸ್ತಕಗಳು ನಮ್ಮ ಭಾಷೆಯಲ್ಲಿ ವರ್ಷಕ್ಕೆ ಎರಡೇ ಬಂದರೂ ಈ ಕಾಲಘಟ್ಟದ ಉತ್ತಮ ಓದು ಮುಂದಿನ ಪೀಳಿಗೆಗೆ ದಕ್ಕಿದಂತಾಗುತ್ತದೆ.
ಒಂದು ಕುಟುಂಬದ ಕಥೆಯ ಮೂಲಕ ಸಾಗುವ ಕಥೆ, ಅದರ ಸುತ್ತಲಿನ ಪ್ರಪಂಚದ ಆಗುಹೋಗುಗಳನ್ನು ಸೆರೆಹಿಡಿದಿರುವುದೇ ಕಾದಂಬರಿಯ ಹೆಚ್ಚುಗಾರಿಕೆ, ಉದಾಹರಣೆಗೆ ಸ್ವತಂತ್ರ ಭಾರತದ ಮೊದಲ ಚುನಾವಣೆ ಒಂದು ಕುಟುಂಬದ ಅನ್ನಕ್ಕೆ ದಾರಿಯಾಗುವುದು, ಒಂದು ವಾಚು ಒಂದು ಮದುವೆಯ ದಿಕ್ಕನ್ನೇ ಬದಲಾಯಿಸಬಹುದಾದ ವಸ್ತುವಾಗಿದ್ದ ಕಾಲದ ಆ ವಿವರಣೆ, ಗ್ರಾಮಫೋನ್ ಹಳ್ಳಿಯ ಜನರಿಗೆ ಒಂದು ಅದ್ಭುತವಾಗಿ ಕಾಣಿಸುವುದು ಇವೆಲ್ಲದರ ಚಿತ್ರಣ ಆ ಕಾಲಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಈ ಕಾದಂಬರಿಯನ್ನು "ಸ್ವತಂತ���ರ ಪೂರ್ವ ಮತ್ತು ನೂತನ ಸ್ವತಂತ್ರ ಭಾರತದ ಕರ್ನಾಟಕದ ಆರ್ಥಿಕ, ಸಾಮಾಜಿಕ, ಕುಟುಂಬ ಪರಿಸ್ಥಿತಿ"ಗಳ ಮೇಲಿನ ಉತ್ತಮ ಪ್ರಬಂಧಕ್ಕೆ ಮೂಲ ವಸ್ತುವಾಗಿ ಉಪಯೋಗಿಸಬಹುದು.
ಈ ಕಾದಂಬರಿಯ ಮಗದೊಂದು ಮುಖ್ಯಾಂಶವೆಂದರೆ ಚಲನಶಕ್ತಿ ಮತ್ತು ಜೀವಂತಿಕೆ. ನಿಂತ ನೀರಂತೆ ಅಲ್ಲೇ ಕಟ್ಟಿ ಕೂರದೆ ಕಾದಂಬರಿಯ ವೇಗಚಲನವೇ ನಮ್ಮನ್ನು ವಿವಿಧ ಲೋಕಕ್ಕೆ ಸರಾಗವಾಗಿ ಕರೆಸಿಕೊಳ್ಳುತ್ತದೆ ಅದರಲ್ಲೂ ಬದರಿನಾಥ ದರ್ಶನದ ಭಾಗ ನಮ್ಮನ್ನು ಕುಂತ ಜಾಗದಲ್ಲೇ ಆ ಕಾಲದ ಭಾರತದ ದರ್ಶನವನ್ನು ಕಣ್ಣಿಗೆ ಕಟ್ಟುವಂತೆ ಮಾಡಿಸುತ್ತದೆ.
ಈ ವಸ್ತುವಿನ ಮುಖ್ಯ ಕಥೆ ಹುಚ್ಚಾಚಾರ್ರ ಕುಟುಂಬದ ಮೂರು ಸಂತತಿಯ ಕಥೆ, ಭುಜಂಗಾಚಾರ್ರು ಈ ಕುಟುಂಬವನ್ನು ಎತ್ತಿ ಹಿಡಿಯಲು ಪಡುವ ಕಷ್ಟಗಳು, ಅವರ ಹೃದಯವಂತಿಕೆ, ಅವರ ವಿವಿಧ ಕೈಗೆಲಸಗಳು ಓದುಗನ ಹೃದಯವನ್ನು ಛಿದ್ರಗೊಳಿಸುತ್ತದೆ, ಅವರ ಜೊತೆಗೆ ಬರುವ ಇತರ ಪಾತ್ರಗಳು ಸುಂದರಾಬಾಯಿ, ವಿಜಯ, ಶಾಂತ, ನಾನ್ಯಾ, ಶ್ರೀನಿ, ಗೌರವ್ವ, ಭೋಜಪ್ಪ, ವೆಂಕೂ ಮತ್ತು ಇತರೆ ಪಾತ್ರಗಳು ಕಥೆಯ ಸತ್ವವನ್ನು ತಮ್ಮದೇ ರೀತಿಯಲ್ಲಿ ಸುಪೋಷ್ಟಗೊಳಿಸುತ್ತವೆ. ಬಂಗಾರದ ಪೆಟ್ಟಿಗೆಯಿಂದ ಶುರುವಾಗಿ ಅದೇ ಪೆಟ್ಟಿಗೆಯಿಂದಲೇ ಮುಗಿಯುವ ಕಥೆ ಭುಜಂಗರನ್ನು ಸುಟ್ಟು ಕುಟ್ಟಿ ಬಂಗಾರರನ್ನಾಗಿ ಮಾಡಿಸಿರುತ್ತದೆ.
ಈ ಪುಸ್ತಕದ ಮುಖಪುಟ ಆಕರ್ಷಕವಾಗಿದೆ, ಈ ಪುಸ್ತಕವನ್ನು ಓದುವಂತೆ ಪ್ರೇರೇಪಿಸಿದ್ದೆ ಚಂದದ ಆ ಮುಖಪುಟ. ಭುಜಂಗಾಚಾರ್ರು ಕೇದಾರನಾಥಕ್ಕೆ ಹೋದಾಗ ಮಾರ್ತಾಂಡಭಟ್ಟರು ಕೇದಾರನಾಥಕ್ಕೆ ಅರ್ಪಿಸಲು ಕೊಟ್ಟ ಕಾಣಿಕೆಯನ್ನು ತಮ್ಮ ಶಲ್ಯಕ್ಕೆ ಕಟ್ಟಿಕೊಂಡಿದ್ದು ಒಂದು ಬಂಡೆಗೆ ಸಿಕ್ಕಿಹಾಕಿಕೊಳ್ಳುವ ಆ ಪ್ರಸಂಗವನ್ನು ಮುಖಪುಟ ಬಹು ಚಂದವಾಗಿ ಚಿತ್ರಿಸುತ್ತದೆ.
ತಮ್ಮ ಖುಷಿಗಾಗಿ ಬರೆದು ಓದುಗರಿಗೆ ಕಷ್ಟ ಕೊಡುವಂತೆ ಬರೆಯುವುದು ಇತ್ತೀಚಿನ ಬಹುತೇಕ ಕನ್ನಡ ಪುಸ್ತಕಗಳ ಮುಖ್ಯಗುಣ, ಇದರ ನಡುವೆ ಮೊದಲ ಕಾದಂಬರಿಯಲ್ಲೇ ಅನುಭವಿ ಲೇಖಕರಂತೆ ಓದುಗನ ಮಿಡಿತವನ್ನು ಕಂಡು ಕೊಂಡಿರುವಂತೆ ಬರೆದು ಗೆದ್ದಿದ್ದಾರೆ ಲೇಖಕರು. ಲೇಖಕರ ವಿಶಾಲ ಓದು ಮತ್ತು ಅನುಭವ ಈ ಕೃತಿಗೆ ಸಹಾಯ ಮಾಡಿದೆ ಎಂದು ನಂಬಿದ್ದೇನೆ.
ರಾಣಿಬೆನ್ನೂರು ಪ್ರಾಂತ ನನ್ನ ಪರಿಚಯದ ಪ್ರಾಂತ, ಅಲ್ಲಿನ ಪೂರ್ವ ಪರಿಸರದ ಪರಿಚಯ ಅದೇ ಊರಿನಲ್ಲಿ ಓದಿದ್ದು ನನ್ನ ಮಟ್ಟಿಗೆ ಇನ್ನೂ ಹೆಚ್ಚು ಖುಷಿ
ಬದುಕು ಪೂರ್ಣ ಸುಖವೂ ಅಲ್ಲ ಪೂರ್ಣ ದುಃಖವೂ ಅಲ್ಲ. ಮೇಲಾಗಿ ಬುದ್ಧಿಯ ವಿನಃ ಸುಖ ದುಃಖಗಳಿಗೆ ಅರ್ಥವೇ ಇಲ್ಲ. ಅಂತಹ ಬುದ್ಧಿಯು ಪಕ್ವವಾಗಿಬಿಟ್ಟರೆ ಮನುಷ್ಯ ಗೆದ್ದಂತೆ.
ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಆರಂಭವಾಗುವ ಕತೆಯು, ಬಡ ಬ್ರಾಹ್ಮಣ ಕುಟುಂಬವೊಂದರ ಕಷ್ಟ ನಷ್ಟಗಳ ಬದುಕಿನ ಹಿನ್ನಲೆಯಲ್ಲಿ ಸಾಗುತ್ತದೆ. ಆ ಕಾಲದ ಬದುಕಿನ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಲೇಖಕಿ ಗೆದ್ದಿದ್ದಾರೆ. ಅದರಲ್ಲೂ ಇದರಲ್ಲಿ ಬರುವ ಯಾತ್ರೆಯ ಚಿತ್ರಣವಂತೂ ಅಪೂರ್ವವಾದುದು.
One of the most beautiful novels I’ve read this year.
The story captures the “Circle of Life” in a profound and touching way. It shows how, despite going through numerous struggles, a person can remain strong, stay true to their values, and ultimately become a guiding light for others.
As someone born in 2002, this novel transported me to an entirely different world. The culture, the way of life, the simplicity—it was all so raw and real. People back then may not have had money or luxuries, but they were rich in love, faith, and emotional connection.
For me, the lifestyle portrayed in the story is beyond imagination. The way they lived, thought, and connected with each other—it felt like stepping into a forgotten, more meaningful world.
Kalappa’s regret after taking the family jewels truly stunned me. And Bhujanga Achar’s renunciation—even after discovering the truth about the jewels—left me speechless. His detachment wasn’t out of pride, but from a deep inner strength.
The language of the novel, the unfiltered emotion, and the way the story slowly builds—it's all beautifully done. There’s a certain honesty in the writing that makes it unforgettable.
This is a book that stays with you long after you finish it. A true gem for anyone who loves stories with depth and heart.
This entire review has been hidden because of spoilers.