ಹಾಗೆಂದುಕೊಂಡ ಪರ್ವನ ಮನಸು ಗೊಂದಲದ ಗೂಡು. ಆಜ್ಞೇಯತಾವಾದಿ ಎನ್ನುತ್ತಾರಂತೆ ಕನ್ನಡದಲ್ಲಿ. ದೇವರಲ್ಲಿ ಅತಿಯಾಗಿ ವಿಶ್ವಾಸವಿರದ, ನಾಸ್ತಿಕತೆಯನ್ನೂ ಒಪ್ಪದ ಮನಸ್ಥಿತಿ ತನ್ನದು. ದೇವರು ಇರಲಿ, ಇರದಿರಲಿ ತನ್ನ ಬದುಕಿಗೆ ವ್ಯತ್ಯಾಸವೇನೂ ಆಗದು ಎನ್ನುವ ತರ್ಕ. ಅವನಿದ್ದರೆ ಅವನ ಪಾಡಿಗಿರಲಿ, ನಾನು ನನ್ನ ಪಾಡಿಗೆ ಎಂದುಕೊಂಡವನ ಬದುಕಲ್ಲಿ ಏನು ನಡೆಯುತ್ತಿದೆ ಎನ್ನುವುದು ಅರ್ಥವಾಗದ ಸ್ಥಿತಿ ಅವನಿಗೆ.
ಪರಮ ಆಸ್ತಿಕರಾದ ಹೆತ್ತವರು ತನ್ನ ತರ್ಕವನ್ನು ಅಲ್ಲಗಳೆಯುತ್ತಿದ್ದಾರೆ. ಗೆಳೆಯನಿಗೆ ವಿಷಯದ ಗಂಭೀರತೆಯನ್ನು ವಿವರಿಸುವುದು ಕಷ್ಟ. ಚಿಕ್ಕಪ್ಪನಿಗೆ ವಿವರಿಸಿ ಅರ್ಥ ಮಾಡಿಸೋಣ ವೆಂದರೆ ಅವನಿನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಎಲ್ಲಕ್ಕಿಂತ ಅಚ್ಚರಿಯೆಂದರೆ ಸ್ಮಶಾನದಲ್ಲಿ ಕೊನೆಯವರೆಗೂ ತನ್ನ ಜೊತೆಗೇ ಇದ್ದ ಹೆಂಡತಿಗೆ ಏನೆಂದರೇ ಏನೂ ನೆನಪಿಲ್ಲ. ಆಕೆ ಕೂಡ ಲೋಕಿಯ ಸಾವು ಸಹಜ ಸಾವು ಎನ್ನುತ್ತಾಳೆ. ಅವನ ಸಾವಿಗೆ ಮಾನಸಿಕ ಕಾಯಿಲೆಯೇ ಕಾರಣ ಎಂದು ವಾದಿಸುತ್ತಾಳೆ.
ಊಹುಂ..!! ಖಂಡಿತ ಇಲ್ಲ, ಅದು ಸಹಜ ಸಾವಲ್ಲ. ಮೇಲ್ನೋಟಕ್ಕೆ ಸಹಜವೆನ್ನಿಸಿದರೂ ಅಲ್ಲೊಂದಿಷ್ಟು ಅನುಮಾನಗಳಿಗೆ ಅವಕಾಶವಿದೆ. ಅಲ್ಲೊಂದು ವಿಲಕ್ಷಣತೆಯಿದೆ. ಯಾರ ಗಮನಕ್ಕೂ ಬಾರದ. ಒಂದೇನೋ ಅವ್ಯಕ್ತ ಅಸಹಜತೆಯಿದೆ.
ಒಂದಷ್ಟು ಒಳ್ಳೆಯ ಬರಹಗಾರರೆಲ್ಲ ಫೇಸ್ಬುಕ್ ಪಾಲಾಗಿ ತಮ್ಮತಮ್ಮ ಆಯ್ಕೆಯ ದಿಕ್ಕುಗಳ ಪರವಾಗಿ ಗಲಾಟೆ ಎಬ್ಬಿಸುತ್ತಾ ಸೃಜನಶೀಲತೆ ಅನ್ನೋ ಪದವನ್ನೇ ಮರೆತಂತಿರೋ ಹೊತ್ತಿನಲ್ಲಿ ಯಾವೊಂದಕ್ಕೂ ಅಂಟದೆ, ತನ್ನ ನಿಲುವು, ಅಭಿಪ್ರಾಯಕ್ಕಷ್ಟೆ ಬದ್ಧವಾಗಿ, ಅನಿಸಿದ್ದನ್ನು ಹೇಳಲು ಯಾವ ಸಂಕೋಚವನ್ನೂ ಇಟ್ಟುಕೊಳ್ಳದೇ ವೃಶ್ಚಿಕವಾಗಿ ಕುಟುಕುವ ಗುರು ಸರ್'ರ ಬರಹಗಳ ಯಾವತ್ತೂ ಅಭಿಮಾನಿ ನಾನು. ಅದರಲ್ಲೂ ಹಾರರ್ ಕಥೆಗಳ ಸೃಷ್ಟಿಯಲ್ಲಿ ಗುರುರಾಜ್ ಸರ್ ಪಳಗಿದ ಹಳೆಯ ಬಾಣಸಿಗ.
ದೃಶ್ಯ ಮಾಧ್ಯಮದಲ್ಲಂತೂ ಹಾರರ್ ಕಾನ್ಸೆಪ್ಟ್ ತನ್ನ ಭಯಜನಕ ಸ್ವಭಾವವನ್ನು ಯಾವತ್ತೋ ಕಳೆದುಕೊಂಡಾಗಿದೆ. ಅದದೇ ಬಿಳಿ ಸೀರೆ/ ಲಂಗದ ಮೋಹಿನಿಯರನ್ನು ನೋಡಿ ನೋಡಿ ಜನರಿಗೆ ಭಯದ ಬದಲಾಗಿ ನಗು ಬರಲು ಶುರುವಾದಾಗಲೇ ಹಾರರ್ ಜಾನರ್ ಇದು ತನ್ನ ಉಳಿವಿನ ಪ್ರಶ್ನೆ ಅಂದುಕೊಂಡು 'ಹಾರರ್ ಕಾಮಿಡಿ'ಯಾಗಿ ಬದಲಾಗಿದ್ದು ಈಗ ಹಳೆಯ ವಿಚಾರ. ಆದರೆ ಲಿಖಿತ ಸಾಹಿತ್ಯದಲ್ಲಿ ಹಾರರ್ ಇನ್ನೂ ತನ್ನ ಚಾರ್ಮ್ ಕಳೆದುಕೊಂಡಿಲ್ಲ ; Thanks to writers like ಗುರುರಾಜ್ sir.
ಇಗೋ ಈ ಸಾಲುಗಳನ್ನೇ ನೋಡಿ, "......ಗಾಳಿಯಲ್ಲಿ ಎದ್ದು ನಿಂತಿದೆ ಹೊದಿಕೆ. ಯಾರೋ ಹಿಡಿದು ನಿಲ್ಲಿಸಿದ್ದಾರೇನೋ ಎನ್ನುವ ಹಾಗೆ. ಹಾಗೆ ನಿಂತಿರುವ ಹೊದಿಕೆ ಮನುಷ್ಯರ ಹಾಗೆ ಹಿಮ್ಮುಖವಾಗಿ ನಡೆಯುತ್ತಿದೆ. ನಡೆಯುತ್ತ ಗೋಡೆಯತ್ತ ಹೋಗಿ ನಿಂತಿದೆ. ನಿಧಾನಕ್ಕರ ಗೋಡೆಯನ್ನು ಹಿಮ್ಮುಖವಾಗಿ ಏರುತ್ತ ಹೋಗಿ ಸೀಲಿಂಗ್'ನತ್ತ ಸರಿದಿದೆ..." ಎಂದು ಓದುತ್ತಿದ್ದರೆ ನಡುರಾತ್ರಿಯಲ್ಲ, ಕಡು ಮಧ್ಯಾಹ್ನದಲ್ಲೂ ಸಣ್ಣಗೆ ಹೃದಯ ಬಡಿತ ಅತ್ತಿತ್ತಾಗುತ್ತದೆ. ಓದುತ್ತ ಕುಳಿತಲ್ಲೇ ಅಕ್ಕಪಕ್ಕದಲ್ಲಿರುವ ಹೊದಿಕೆಗಳೆಲ್ಲ ತಮ್ಮ ತಮ್ಮ ಜಾಗಗಳಲ್ಲೇ ಇವೆಯಲ್ಲಾ ಎಂದು ಕಣ್ಣು ಖಾತರಿಪಡಿಸಿಕೊಳ್ಳುತ್ತದೆ. ಏರಿಳಿಯುವ ಶ್ವಾಸ ಕೊಂಚ ಹೆಚ್ಚೇ ಆಕ್ಸಿಜನ್ ಬೇಡುತ್ತದೆ. ಡೋಪಮೈನ್, ಅಡ್ರೆನಲಿನ್ನು ಏನೇನಿವೆಯೋ ಎಲ್ಲಕ್ಕೂ ಏಕಕಾಲಕ್ಕೆ ಮೆದುಳನ್ನು ಆಕ್ರಮಿಸೋ ಆತುರ. ಹಾಗೆ ಆತುರ ಸೃಷ್ಟಿಸುವಂತೆ ಬರೆಯುವುದು ಗುರುರಾಜರ ಶಕ್ತಿ.
ಒಂದು ತಮಾಷೆಯ ವಿಷಯವೆಂದರೆ, ದೆವ್ವಗಳಿಗೆ ಕಾಲು ಹಿಂದುಮುಂದಾಗಿರುತ್ತದೆ ಎನ್ನುತ್ತಾರೆ, ಅದೆಷ್ಟು ಸುಳ್ಳೋ ಸತ್ಯವೋ ನಾನಂತೂ ಕಂಡಿಲ್ಲ. ಆದರೆ ಘೋಸ್ಟ್ ರೈಟರ್ ಬಿರುದಾಂಕಿತ ಗುರು ಸರ್ ಬರೆಯೋ ಹೆಚ್ಚಿನ ವಾಕ್ಯಗಳು ಹಿಂದುಮುಂದಾಗೇ ಇರೋದು ಮತ್ತದು ಅವರ ಸಹಜ ಶೈಲಿ ಆಗಿರೋದು ಅವರ ಬರಹಗಳನ್ನು ಓದಿ ಗೊತ್ತಿರುವವರೆಲ್ಲರೂ ಗಮನಿಸಿರೋ ವಿಚಾರವೇ. ಒಂದೆರಡು ಪ್ಯಾರಾ ಓದುವುದರೊಳಗೆ ನಮಗದು ಅಭ್ಯಾಸವಾಗಿ ಹೋಗಿ ಸಹಜವಾಗಿ ಓದಿಸಿಕೊಂಡು ಹೋಗುತ್ತದೆ ಮತ್ತು ಅವರ ಕಥೆಗಳ ಅಸಂಖ್ಯಾತ ತಿರುವುಗಳಲ್ಲಿ ನಾವು ಓದುಗರು ಕಳೆದುಹೋಗಿರುತ್ತೇವೆ.
ಇನ್ನು ಅತಿಮಾನುಷ ಕಾದಂಬರಿಯ ವಿಷಯಕ್ಕೆ ಬಂದರೆ ಹೆಚ್ಚೇನೂ ಹೇಳಲಾರೆ. its a classic horror with all old scholl horror elements.. ಓದಿನ ವೇಗ ಚೆನ್ನಾಗಿದ್ದರೆ ಹಾರರ್ ಸಿನಿಮಾವೊಂದನ್ನು ನೋಡುವ ಕಾಲದಲ್ಲಿ ಓದಿ ಮುಗಿಸಬಹುದಾದ ಮತ್ತು ಅಷ್ಟೇ exhilelarating feel ಕೊಡೋ simply terrifying, neat and entertaining ಕಾದಂಬರಿ ಮಾತ್ರವಲ್ಲದೆ ಒಂದೊಳ್ಳೆ ಸಂದೇಶವನ್ನೂ ಕೊಡುತ್ತದೆ. ಹೆದರಿಸುವ ದೃಶ್ಯಗಳಷ್ಟೇ ಅಲ್ಲದೇ ಕೆಲವೊಂದು ಸದಾ ನೆನಪಿಡುವಂಥಾ quoteble ಸಾಲುಗಳೂ ಇವೆ. ಹಾರರ್ ಪ್ರಿಯರಿಗೆ ಖಂಡಿತಾ ಇದೊಂದು ಸೊಗಸಾದ ಓದು. Liked it.
ಓದಿಸಿಕೊಂಡು ಹೋಗುವ horror ಕಾದಂಬರಿ. ಹಾಗೆ ನೋಡಿದರೆ ಕನ್ನಡದಲ್ಲಿ ಈ ದೆವ್ವದ ಅಥವಾ ಮಾಟ-ಮಂತ್ರದ ಕತೆಗಳು ಸಿಗುವುದು ಕಷ್ಟ, ಸಿಕ್ಕರೂ ಅದರಲ್ಲಿ ಸಿಕ್ಕಾಪಟ್ಟೆ ಫ್ಯಾಂಟಸಿಯನ್ನ ತುರುಕಿರುತ್ತಾರೆ. ಆದರೆ ಅಷ್ಟೇನೂ fantasaty ಇರದ ಕಥೆಯಿದು. ಸ್ವಲ್ಪ ಓದಿದರೆ ಕಥೆಯ ಮುಂಭಾಗವನ್ನು ಊಹಿಸಬಹುದು ಆದರೆ ಬರವಣಿಗೆಯ ಶೈಲಿ ಚೆನ್ನಾಗಿದೆ. ಲೇಖಕರು ಹೇಳಿಕೊಂಡಂತೆಯೇ Lee Child ಮತ್ತು ಟಿ ಕೆ ರಾಮರಾವ್ ಅವರ ಅಭಿಮಾನಿಯಿವರು ಆದರೆ ಅವರ influence ಇವರ ಮೇಲಿಲ್ಲ ಆದರೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಮಾಡಿದ್ದಕ್ಕಾಗಿ ರವಿ ಬೆಳಗೆರೆಯವರ influence ಬರವಣಿಗೆಯಲ್ಲಿ ಇದ್ದಂತಿದೆ. ಬೆಳಗೆರೆಯವರ ಮಾಟಗಾತಿ;ಸರ್ಪ ಸಂಬಂಧ ಕಾದಂಬರಿಯ ಶೈಲಿಯನ್ನು ಹೊಂದಿದೆ. ಒಂದು ದಿನದಲ್ಲಿ ಹಿಡಿದು ಕುಳಿತರೆ ಬೇಜಾರಿಲ್ಲದೆ ಓದಿಸಿಕೊಂಡು ಹೋಗುತ್ತದೆ.
ಗುರು ಮತ್ತು ನನ್ನ ನಡುವಿನ ಸಮಾನ ಆಸಕ್ತಿ ಎಂದರೆ ನಾವಿಬ್ಬರೂ ದೊಡ್ಡ ಸ್ಟೀಫನ್ ಕಿಂಗ್ ಅಭಿಮಾನಿಗಳು. ಅವರ 'ಪ್ರತಿಜ್ಞೆ' ಕಾದಂಬರಿ, ಸ್ವಲ್ಪ ಮಟ್ಟಿಗೆ ಕಿಂಗ್ನ ' IT' ಸ್ಫೂರ್ತಿ ಪಡೆದುಕೊಂಡದ್ದು. ಕನ್ನಡದಲ್ಲಿ ಹಾರರ್ ಪ್ರಕಾರದಲ್ಲಿ ಕೃತಿಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಅಂತಹದ್ದರಲ್ಲಿ ಗುರುರಾಜರ ಮೂರನೇ ಕಾದಂಬರಿ ಕ್ಲಾಸಿಕ್ ಹಾರರ್ ಕಾದಂಬರಿಯ ಪ್ರಕಾರಕ್ಕೆ ನಿಷ್ಟವಾಗಿ ಬಂದದ್ದು ಖುಷಿಯ ಸಂಗತಿ. ಕತೆಯ ಬಗ್ಗೆ ಏನು ಹೇಳಿದರೂ ಅದು ಗುಟ್ಟು ಬಿಟ್ಟುಕೊಟ್ಟ ಹಾಗೆ.
ರವಿ ಬೆಳಗೆರೆಯ ಮಾಟಗಾತಿ ,ಸರ್ಪಸಂಬಂಧ ಓದಿದ್ದರೆ ನಿಮಗೆ ಅದೇ ವೈಬ್ ಇರುವ ಕೃತಿ ಇದು. ಪ್ರತೀ ಅಧ್ಯಾಯದ ಕೊನೆಗೆ ಟ್ವಿಸ್ಟು, ರೋಚಕ ಓದನ್ನು ಕೊಟ್ಟರೆ ಮಾಂತ್ರಿಕ ಸಾಧನೆಗಳ ಬಗೆಗಿನ ವಿವರಗಳು ಅವರ ಅಧ್ಯಯನಕ್ಕೆ ಸಾಕ್ಷಿ.
ವಾರಾಂತ್ಯಕ್ಕೆ ಹಿಡಿದು ಕೂತರೆ ಬಿಡದೆ ಓದಿಸಿಕೊಂಡು ಹೋಗುವ ಹಾರರ್ ಕಾದಂಬರಿ ಇದು.
ಹಾರರ್ ಸಿನಿಮಾ ತುಂಬಾ ಇಷ್ಟ ಪಡೋ ನನ್ಗೆ ಪುಸ್ತಕ ರೂಪದಲ್ಲಿ ಈ ಜಾನರ್ನ ಎರಡನೆಯ ಓದು. ಮೊದಲನೆಯದು ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ 'ಹಾಂಟೆಡ್ ಹೊಸಮನೆ'. ತುಂಬಾ ಇಷ್ಟಪಟ್ಟಿದ್ದೆ ಆ ಪುಸ್ತಕ. ಕತೆ ಕೂಡ ವಿಭಿನ್ನವಾಗಿ ಚೆನ್ನಾಗಿತ್ತು, ಹಾರರ್ ಎಲಿಮೆಂಟ್ಸ್ ಕೂಡ ಚಿಲ್ಲಿಂಗ್ ಇದ್ವು.
ಆಗ ಅರಿವಾಗಿದ್ದೇನೆಂದರೆ ಹಾರರ್ ಸಿನಿಮಾ ಮಾಡೋರು ಹೆಚ್ಚಿನೋರು ಬರೀ ಸೌಂಡ್ಗೆ ಜಾಸ್ತಿ ಪ್ರಾಮುಖ್ಯತೆ ಕೊಟ್ಟು ಟೊಳ್ಳು ಕತೆ ಬರ್ದು ಸಿನಿಮಾ ಮಾಡ್ತಾರೆ. ಪುಸ್ತಕ ಬರೆಯುವವರಿಗೆ ಆ ಸ್ವಾತಂತ್ರ್ಯ ಇಲ್ಲ. ಕತೆ ಇದ್ರೆ ಗೆಲ್ಲುತ್ತೆ ಇಲ್ಲ ಫುಸ್ ಆಗುತ್ತೆ.
ಗುರುರಾಜ ಕೊಡ್ಕಣಿ ಅತಿಮಾನುಷ ಪುಸ್ತಕದೊಂದಿಗೆ ಖಂಡಿತ ಗೆದ್ದಿದ್ದಾರೆ. ಇದು ನಾ ಓದುತ್ತಿರುವ ಅವರ ಮೊದಲ ಕಾದಂಬರಿ. ಒಂದೇ ವಾಕ್ಯದಲ್ಲಿ ಹೇಳೋದಾದರೆ ಗುರು ಅವ್ರು ಹಾರರ್ ವಿಷ್ಯದಲ್ಲಿ ನಿಪುಣ, ಅದಿಲ್ಲಿ ಎದ್ದು ಕಾಣುತ್ತೆ. ವಾಮಾಚಾರ ಇವ್ರ 'ಫೋರ್ಟೆ'(Forte). ಒಂದೊಳ್ಳೆ ಭಯ ಹುಟ್ಸೋ ಅಂತ ಕತೆ ಇಲ್ಲಿದ್ದೇ ಇದೆ. ಅದರ ಜೊತೆ ಬ್ಲ್ಯಾಕ್ ಮ್ಯಾಜಿಕ್ನ ಕುರಿತು ಅವರ ಅಪಾರ ಜ್ಞಾನ ಪ್ರದರ್ಶಿಸಿದ್ದಾರೆ.
ಒಂದು ಹೊದಿಕೆಯ ಸುತ್ತ ಶುರುವಾಗೋ ಕತೆ ಪುಸ್ತಕದ ಅರ್ಧದಷ್ಟು ಲೀನಿಯರ್ ಆಗೇ ಮುಂದುವರಿಯುತ್ತೆ. ಪಾತ್ರಗಳು ಅಲ್ಲಲ್ಲೇ ಕತೆ ಮುಂದುವರಿಯುತ್ತ ಹೋದ ಹಾಗೇ ಪರಿಚಯವಾಗುತ್ತವೆ. ಸ್ವಲ್ಪ ನಾನ್-ಲೀನಿಯರ್ ಇದ್ದಿದ್ರೆ, ಸೀನಿಮೆಟಿಕ್ ಆಗಿರೋದು.
ಕಾದಂಬರಿಯ ಎರಡನೆಯ ಭಾಗವೇ ಇದರ ಹಾಲ್ಮಾರ್ಕ್. ಕತೆ ವೇಗವಾಗಿ ಮುಂದುವರಿಯುತ್ತ ಕಣ್ಣು ಮೀಟುಕಿಸದೆ ಓದೋಕೆ ಪ್ರೆರೇಪಿಸುತ್ತದೆ. ವಾಮಾಚಾರದ ಹಲವು ಪ್ರಯೋಗಗಳ ವಿಶ್ಲೇಷಣೆ ಗಮನಾರ್ಹ. ಮತ್ತೆ ಹೇಳ್ತೇನೆ ಈ ವಿಷ್ಯದಲ್ಲಿ ಲೇಖಕರ ಜ್ಞಾನ ಅತ್ಯುನ್ನತ. ಕೊನೆಗೆ ಒಂದು ಅದ್ಭುತ ಟ್ವಿಸ್ಟ್, ಜೊತೆಗೆ ಒಂದು ತೃಪ್ತಿಪಡಿಸೋ ಅಂತ್ಯ.
ಲೇಖಕರ ಇನ್ನೊಂದು ಪುಸ್ತಕ 'ವೀಕ್ಷಿಪ್ತ' ನನ್ನ ರೀಡಿಂಗ್ ಲಿಸ್ಟ್ ನಲ್ಲಿದೆ. ಆದಷ್ಟು ಬೇಗ ಓದುವೆನು.
#ಪರಿಚಯ_೩_೨೦೨೬ ಕೃತಿ: ಅತಿಮಾನುಷ ಲೇಖಕರು: ಗುರುರಾಜ ಕೊಡ್ಕಣಿ ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಪತ್ತೇದಾರಿ ಅಥವಾ ಹಾರರ್ ಥ್ರಿಲ್ಲರ್ ಕಾದಂಬರಿಗಳಲ್ಲಿ ಲೇಖಕರು ಅತ್ಯಂತ ಎಚ್ಚರಿಕೆಯಿಂದ ಒಂದು ಭ್ರಮಾಲೋಕವನ್ನು ಸೃಷ್ಟಿಸಬೇಕು. ಆ ಲೋಕದಲ್ಲಿ ಓದುಗನು ತಾನಂದುಕೊಂಡಂತೆಯೇ ಕತೆಯು ನಡೆಯುತ್ತಿದೆ ಎಂದುಕೊಂಡು ಅಥವಾ ಅವನಲ್ಲ ಇವನು, ಇವನಲ್ಲ ಅವನು ಎಂದು ಊಹೆ ಮಾಡುತ್ತಾ ಮಂಡಿಗೆ ಮೆಲ್ಲುತ್ತಿರುವಾಗ ಅನಿರೀಕ್ಷಿತವಾಗಿ ಒಂದು ತಿರುವನ್ನು ನೀಡ�� ಅಧ್ಯಾಯವನ್ನು ಮುಗಿಸಿ ಮತ್ತಷ್ಟು ಗೊಂದಲದಲ್ಲಿ ಕೆಡವಿದರೆ ಕೃತಿಯು ಓದುಗನ ಕೈಯಿಂದ ಕೆಳಗಿಳಿಯುವುದೇ ಇಲ್ಲ. ಇದರ ಜೊತೆಗೆ ನಿರೂಪಣೆಯಲ್ಲಿ ಬಿಗಿಯನ್ನು ಕಾಯ್ದುಕೊಂಡರೆ ಯಾವ ಸಂಶಯಕ್ಕೆ ಆಸ್ಪದವಿಲ್ಲದಂತೆ ಒಂದು ಉತ್ತಮ ಕೃತಿಯಾಗಿ ಓದುಗನನ್ನು ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಇಂತಹ ಒಂದು ಸಂಪೂರ್ಣ ಪ್ಯಾಕೇಜ್ ಗುರುರಾಜ ಕೊಡ್ಕಣಿ ಅವರ "ಅತಿಮಾನುಷ".
ಪತ್ತೇದಾರಿ ಕೃತಿಯಾದ್ದರಿಂದ ಕತೆಯ ಯಾವುದೇ ಎಳೆಯನ್ನು ಹೇಳಿದರೂ ರಸಭಂಗವಾಗುವ ಸಾಧ್ಯತೆಯಿದೆ. ಆದ್ದರಿಂದ ಕತೆಯ ಯಾವುದೇ ವಿವರಣೆಗಳನ್ನು ಹೇಳುವುದು ಸೂಕ್ತವಲ್ಲ. ಆದರೆ ಲೇಖಕರು ಮಾಟ ಮಂತ್ರಗಳ ಪ್ರಯೋಗ, ಮಾನಸಿಕ ರೋಗಿಗಳ ಲಕ್ಷಣಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಅಧ್ಯಯನಗಳು ಅಭಿನಂದನಾರ್ಹ. ಅತಿ ಎನಿಸುವಂತಹ ಯಾವುದೇ ವಿವರಣೆಗಳಿಲ್ಲದೆ,ಅನಾವಶ್ಯಕ ಲೈಂಗಿಕತೆಯನ್ನು ತುರುಕದೆ, ಭಯಾನಕ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಅಕ್ಷರ ರೂಪದಲ್ಲಿ ಇಳಿಸಬಹುದು ಎಂಬುದನ್ನು ಲೇಖಕರು ಸಾಬೀತುಪಡಿಸಿದ್ದಾರೆ. ಕೃತಿಯ ಅಂತ್ಯವನ್ನು ಊಹಿಸಬಹುದು ಎಂಬ ಅಂಶವನ್ನು ಬಿಟ್ಟರೆ ತನ್ನ ಪ್ರಕಾರಕ್ಕೆ ನಿಷ್ಠವಾಗಿ ನ್ಯಾಯವನ್ನು ಒದಗಿಸಿದ ಕಾದಂಬರಿ. ಈ ಕಾದಂಬರಿಯನ್ನು ಹಳ್ಳಿ ಮನೆಯೊಂದರಲ್ಲಿ ಕುಳಿತು ರಾತ್ರಿಯ ನಿಶ್ಯಬ್ದದಲ್ಲಿ ನೀರವತೆಯಲ್ಲಿ ಒಬ್ಬನೇ ಕುಳಿತು ಓದಿದರೆ ಹೇಗಿರಬಹುದು ಎಂಬ ಆಲೋಚನೆಯೊಂದು ಮನಸ್ಸನ್ನು ಹಾದುಹೋದಂತಾಗಿ ಬೆಚ್ಚಿಬಿದ್ದದ್ದು ಸಹ ಆಯಿತು.
ಸಾಧಾರಣ ಬೂತ ಬಂದು ಹೆದ್ರಿಸೋದು, ಮಾಟಮಂತ್ರ ಆಗೋದು ಓದಿ ಬೋರ್ ಆಗಿದ್ಯ? ಗುರು ಒಂತರ ಬೇರೆ ತರಹದ್ದು ಒಂದು ಹಾರರ್ ಕಾದಂಬರಿ ಓದಬೇಕು ಅಂತ ಆಸೆ ಇದ್ಯ? ಹಾಗಾದ್ರೆ ಈ ಮಿಸ್ಟರಿ, ಟಿಸ್ಟು ಜೊತೆಗೆ ಹಾರರ್ ಇರೋ ಈ ಕಾದಂಬರಿ ನಿಮಗೆ ಇಷ್ಟವಾಗಬಹುದು.
ಕತೆ ಮುಗೀತು, ರಹಸ್ಯ ಬಯಲಾಯ್ತು ಆದ್ರೂ ಇನ್ನೂ ಅರ್ಧ ಕಾದಂಬರಿ ಬಾಕಿ ಇದ್ಯ ಅನಿಸೋವಾಗ್ಲೆ ಮತ್ತೇನೋ ಆಗಿ ಬಿಡುತ್ತೆ ಇಲ್ಲಿ, ಟಿಪಿಕಲ್ ಹಾರರ್ ಕಾದಂಬರಿಯ ಯೋಚನೆ ಮಾಡಿದ್ದ ಬಿಟ್ಟು ಇನ್ನೊಂದೇನೋ ಆಗಿ ಕತೆ ಸಾಗುತ್ತೆ. ಜಾಸ್ತಿ ಅನಿಸದೆ ಇದ್ರು ಒಂದಷ್ಟು ಕಾದಂಬರಿಯ ಮುಖ್ಯ ಜಾಗದಲ್ಲಿ ಉಳಿಯೋ ಪಾತ್ರಗಳಿವೆ, ಅವೇನೂ ಸುಮ್ನೆ ಪೇಜು ತುಂಬಿಸೋಕೆ ಬಂದವು ಅನಿಸಲ್ಲ ಯಾಕಂದ್ರೆ ಅವಕ್ಕೆ ಅದರದೇ ಆದ ಜಸ್ಟಿಪಿಕೇಷನ್ ಇದೆ. ಕಾದಂಬರಿ ನೇರನೇರ ಹೋಗ್ತಾ ಇದೆ ಅನಿಸಿದ್ರು (linear) ಕತೆಯಲ್ಲಿ ಏನಾದರು ಒಂದು ಟ್ವಿಸ್ಟು ಓದುಗನ್ನ ಹಿಡಿದಿಟ್ಟುಕೊಳ್ಳೋಕೆ ಬರುತ್ತಾನೆ ಇರುತ್ತೆ. ಕೆಲ ಕಾಡು ಜಾಸ್ತಿ ಆಯ್ತು ಅನಿಸಿದ್ರು ಕಾದಂಬರಿ ಕೊನೆಯ ಅವನ್ನ ಬ್ಯಾಲೆನ್ಸ್ ಮಾಡುತ್ತೆ. ಕಾದಂಬರಿ ಓದ್ತಾ ಓದ್ತಾ ಮುಂದೇನು ಆಗುತ್ತೆ ಅನ್ನೋ ನಿರೀಕ್ಷೆ ಜಾಸ್ತಿಯಾಗುತ್ತೆ ಹೋಗೋದ್ರಿಂದ ಮಾಟಮಂತ್ರದ ವಿವರಣೆ, ಪ್ರಯೋಗದ ವಿವರಣೆ ಇನ್ನಷ್ಟು ಬೇಕಿತ್ತು ಅನಿಸುತ್ತೆ. ಓದಿ, ಚೆನ್ನಾಗಿದೆ, ಜೈ!
ಒಂದು ಕಾದಂಬರಿ ಒಳ್ಳೆಯ ಕಾದಂಬರಿಯಾಗಬೇಕಾದರೆ ಏನು ಬೇಕು? ಅದು ಓದುಗನನ್ನು ಕೊನೆಯತನಕ ಬಿಡದೆ ಓದಿಸಿಕೊಂಡು ಹೋಗಬೇಕು. ಅತಿಮಾಮುಷ ಈ ಕಾದಂಬರಿ ಕೊನೆಯವರೆಗೂ ಏಕಾಗ್ರತೆಯಿಂದ ಓದಿಸಿಕೊಂಡು ಹೋಗುತ್ತದೆ. ಅದರಲ್ಲಿ ಸಂಶಯವಿಲ್ಲ. ಆದರೆ ಇನ್ನೂ ಸ್ವಲ್ಪ ಅಧ್ಯಯನ ಇರಬೇಕಿತ್ತು ಎನಿಸಿತು. ಲೇಖಕರು ಬಹಳಷ್ಟು ವಿಷಯಗಳಿಗೆ ವಿವರಣೆ ಕೊಟ್ಟರೂ ಕೂಡ ಕೆಲವು ಕಡೆ ಕತೆ ಸಾಧಾರಣವಾಗಿ ಸಾಗುತ್ತದೆ. ಕೆಲವು ಕಡೆ ಗಂಭೀರವಾಗುತ್ತದೆ. ಕೆಲವು ಕಡೆ ಸ್ವಲ್ಪ ಅಸಹಜವೆನಿಸುತ್ತದೆ. ಆದರೆ ಒಂದೇ ಸಲಕ್ಕೆ ಓದಿ ಕೆಳಗಿಡಬಹುದಾದ ಒಳ್ಳೆಯ ಪುಸ್ತಕ.