M. R. Dattathri is a bilingual novelist, poet, translator, and columnist from Bengaluru, India. After spending three decades as a senior IT professional in India and the US, he transitioned full-time to literature, publishing in both Kannada and English. His fiction blends incisive social observation with a global outlook shaped by years spent on two continents. Dattathri’s novels have earned many of Karnataka’s highest honours, including the Masti Prashasti (2019), Book Brahma Novel of the Year (2023), Vardhamana Prashasti (2023), and the Sunanda Belgaokar Award (2024). Two of his books have appeared in Telugu, and his latest English book—What’s Your Price, Mr Shivaswamy?—was released by Penguin Random House India in April 2025. In addition to five novels, he has published a poetry collection, several volumes of essays, and an acclaimed English edition of poems by Dr H. S. Venkateshamurthy, which he edited. Dattathri lives in Bengaluru, where he advocates for cross-cultural literary exchange. More information is available at www.dattathri.in.
ಆಹಾ... ಎಂತಹ ಸೊಗಸಾದ ಕಾದಂಬರಿವಿದು.... ಓದಿ ಮನಸ್ಸು ಮುದಗೊಂಡಿದೆ....
ರಾಜೀವ ಮತ್ತು ನಿರಂಜನರ ಕಥೆಯಿಂದ ಶುರುವಾಗುವ ಕಥೆ ಅನೇಕ ಉಪಕಥೆಗಳ ಮೂಲಕ ಪ್ರಶಾಂತವಾಗಿ ಸಾಗಿ, ಕೊನೆಗೆ ತೃಪ್ತ ಅಂತ್ಯದ ಮೂಲಕ ಜಡತ್ವವನ್ನು ಅಳಿಸಿ ಮನಸ್ಸನ್ನು ತಿಳಿಯಾಗಿಸುತ್ತದೆ.
ರಾಜೀವ ಮತ್ತು ನಿರಂಜನರ ಮೂಲಕ ತಂದೆ-ಮಗನ ಸಂಬಂಧವನ್ನು ಅಪ್ಯಾಯಮಾನವಾಗಿ ಲೇಖಕರು ಹನಿಗಣ್ಣಾಗುವಂತೆ ವಿವರಿಸಿದ್ದಾರೆ. ರಘುರಾಮ ಮತ್ತು ನಿರಂಜನ ಪಾತ್ರಗಳ ಮೂಲಕ ಸ್ನೇಹಕ್ಕೆ ಹೊಸ ಅರ್ಥವನ್ನು ಕಲ್ಪಿಸಿಕೊಟ್ಟಿದ್ದಾರೆ.
ದ್ವೀಪವ ಬಯಸಿ ಕಾದಂಬರಿಯನ್ನು ಓದಿ ದತ್ತಾತ್ರಿ ಸರ್ ಹತ್ರ ಮಾತನಾಡಿದಾಗ ಪ್ರೀತಿಯಿಂದ ಅವರೇ ಕಳಿಸಿಕೊಟ್ಟ ಪುಸ್ತಕವಿದು. ಅವರಿಗೆ ಎಷ್ಟು ಧನ್ಯವಾದಗಳು ಹೇಳಿದರೂ ಕಡಿಮೆಯೇ. ಓದಿ, ಓದಿಸಿ...... ಮತ್ತೆ ಮತ್ತೆ ಓದಿಸಿಕೊಳ್ಳುವ ಪುಸ್ತಕವಿದು ❤️
ಕಾದಂಬರಿಯ ಹೆಸರೇ ಆಕರ್ಷಕವಾಗಿದೆ. ಮಸುಕು ಬೆಟ್ಟದ ಕಡೆಗಿರುವ ದಾರಿ ಎಂಬರ್ಥ ಒಂದು, ಬೆಟ್ಟದ ದಾರಿ ಮಸುಕು ಮಸುಕಾಗಿರುವುದು ಇನ್ನೊಂದು. ಹಾಗೆಯೇ ಜೀವನದ ಅನೇಕ ಒಳನೋಟಗಳನ್ನು ಬಹಳ ಚೆನ್ನಾಗಿ ಹಲವು ಆಯಾಮಗಳಿಂದ ಕಾದಂಬರಿಯು ಉಣಬಡಿಸುತ್ತದೆ.
ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್ ಎಂಬ ವಿಚಿತ್ರ ನೆನಪಿನ ಖಾಯಿಲೆಯ ನಿರಂಜನ,ಅವನ ಜೀವನವನ್ನು ದಡ ಸೇರಿಸಲು ಒದ್ದಾಡುವ ತಂದೆ ರಾಜೀವ, ಆತುರಕ್ಕೆ ಬಿದ್ದು ತನ್ನ ಜೀವನವನ್ನು ಬಲಿಕೊಡುವ ರಘುರಾಮ, ರಘುರಾಮನ ಮುಗ್ಧ ಮಡದಿ ಪಲ್ಲವಿ,ಚಿತ್ರಕಲಾ ಕಲಾವಿದ ಮನೋಹರ ಹೀಗೆ ಒಂದೊಂದು ಪಾತ್ರಗಳ ತಳಮಳಗಳು ಓದುಗನನ್ನು ಸರಿಯಾಗಿ ತಟ್ಟುತ್ತವೆ. ಅದರಲ್ಲೂ ಯಾವುದನ್ನು ಮರೆಯದ ಖಾಯಿಲೆಯ ನಿರಂಜನನ ತಂದೆ ರಾಜೀವ ತನ್ನ ಕೊನೆಗಾಲದಲ್ಲಿ ಮರೆವಿನ ಖಾಯಿಲೆಗೆ ತುತ್ತಾಗುವುದು ಬದುಕಿನ ವೈರುಧ್ಯಗಳ ಸಾಕ್ಷಿ. ಪ್ರತಿಯೊಂದು ಪಾತ್ರವೂ ಜೀವನವೆಂಬ ಮಸುಕು ಬೆಟ್ಟದ ಕಡೆಗೆ ಸಾಗುವಾಗ ದಾರಿಯಲ್ಲಿ ಎದುರಿಸಬೇಕಾದ ಅನೀರಿಕ್ಷೀತ ಸನ್ನಿವೇಗಳು,ಸವಾಲುಗಳು ಮತ್ತು ಅವುಗಳನ್ನೆಲ್ಲವನ್ನೂ ಮೆಟ್ಟಿನಿಂತು ಮುಂದಕ್ಕೆ ಪಯಣಿಸುವ ಜೀವನೋತ್ಸಾಹವೇ ಒಟ್ಟು ಕೃತಿಯ ಜೀವಾಳ.
ಚಿಕ್ಕಮಗಳೂರಿನ ಸುತ್ತಲಿನ ಪರಿಸರ, ಬೆಟ್ಟಗುಡ್ಡಗಳು, ಮುಳ್ಳಯ್ಯನಗಿರಿಯ ಅಗಾಧತೆ, ಮೋಡ ಮಳೆಗಳ ಚಿತ್ರಣ ಬಹಳ ಹೃದಯಸ್ಪರ್ಶಿಯಾಗಿ ಓದಿಸಿಕೊಂಡು ಹೋಗುತ್ತವೆ. ಅದರಲ್ಲೂ ಮನುಷ್ಯ ಭಾವನೆಗಳಿಗೆ ಪ್ರಕೃತಿಯ ಸೊಬಗನ್ನು ತಳುಕುಹಾಕಿ ಕೊಡುವ ವಿವರಗಳು ಮತ್ತೆ ಮತ್ತೆ ಓದಿಸಿಕೊಳ್ಳುವ ಗುಣವನ್ನು ಹೊಂದಿವೆ. ಸಿದ್ಧ ಮಾದರಿಯನ್ನು ಬದಿಗಿರಿಸಿ ಹೊಸ ವಿಷಯಗಳನ್ನು ಆಯ್ದುಕೊಂಡು ಹೊಸ ವಿಚಾರಗಳಿಗೆ ತೆರೆದುಕೊಳ್ಳುವಂತೆ ಪ್ರೇರೇಪಿಸುವ ಕಾದಂಬರಿಕಾರರಾದ ದತ್ತಾತ್ರಿಯವರಿಗೆ ಶರಣು…..
Wow. What did I just read ? ಹೌದು, ಇದೇ ನನ್ನ ಮೊದಲ ಪ್ರತಿಕ್ರಿಯೆ. ಮಾನವ ಭಾವಜೀವಿ. ತನ್ನ ಅಸ್ತಿತ್ವ ಮತ್ತು ತನ್ನ ಯಾವುದೇ ಸಂಬಧಗಳಲ್ಲಿನ ಭಾವನಾತ್ಮಕತೆ ಹಸಿರಾಗಿರಬೇಕೆಂದರೆ ನೆನಪುಗಳು ಅತ್ಯಾವಶ್ಯಕ. ಅಂತಹ ನೆನಪುಗಳಲ್ಲಿ ಬದುಕುವ, ನೆನಪುಗಳನ್ನ ಸ್ಮರಿಸಿ ಆನಂದಿಸುವ, ದುಃಖಿಸುವ, ಶೋಧಿಸುವ ಪಾತ್ರಗಳ ಪಯಣವೇ ಎಂ. ಆರ್. ದತ್ತಾತ್ರಿಯವರ “ಮಸುಕು ಬೆಟ್ಟದ ದಾರಿ”.
ಇಲ್ಲಿ ಕಥೆಗಿಂತ ಪಾತ್ರಗಳು ಮೇಲುಗೈ ಸಾಧಿಸಿವೆ. ಪಾತ್ರಗಳು ಅದೆಷ್ಟು ಗಾಢವಾಗಿ, ಭಾವನಾತ್ಮಕವಾಗಿ ಸೃಷ್ಟಿಯಾಗಿವೆಯೆಂದರೆ ಕಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಇದಕ್ಕೆ ಕೊನೆಯೇನು? ಈ ಯಾವುದೇ ಪ್ರಶ್ನೆಗಳು ನನ್ನಲ್ಲಿ ಮೂಡಲಿಲ್ಲ. ದತ್ತಾತ್ರಿ ಸರ್ ಅವರೊಂದಿಗೆ ಮಾತನಾಡುವಾಗ “ ಸರ್, ಇಲ್ಲಿ ಪಾತ್ರ ರಚನೆ ಮತ್ತು ಪೋಷಣೆ, ಕಥೆಗೆ ಹೆಚ್ಚಿನ ಪುಷ್ಟಿ ಕೊಟ್ಟವು ಎನಿಸಿತು” ಎಂದಾಗ, “ಹೌದು, ಅದು ನಿಜ ಅದು ನನ್ನ ಬರವಣಿಗೆಯ ತಂತ್ರವೂ ಸಹ” ಎಂದು ಒಪ್ಪಿದರು.
ಕಥೆಯಲ್ಲಿ ನಿಗೂಢತೆಯಿಲ್ಲ ಆದರೆ ಸುಂದರವಾದ ಶೈಲಿ ಎಲ್ಲೂ ಬೇಸರ ಬರದಂತೆ ಓದಿಸಿಕೊಂಡು ಹೋಗುತ್ತದೆ, ಒಂದು ರೀತಿ ಈಗಾಗಲೇ ನೋಡಿದ ಸುಂದರವಾದ ತಾಣವೊಂದು ಯಾವ ಹೊಸ ನಿರೀಕ್ಷೆಗಳನ್ನು ಹುಟ್ಟಿಸದಿದ್ದರೂ ಅದನ್ನು ತಲುಪಲು ನಾವು ಬಳಸುವ ಸುಂದರ ದಾರಿಯೇ ಆ ಪಯಣವನ್ನು ಸಾರ್ಥಕಗೊಳಿಸಿದಂತೆ. ತಂದೆ ಮಗನ ಸಂಬಂಧದ ವಿವರಗಳು ಓದನ್ನು ಆರ್ದ್ರವಾಗಿಸಿದವು. ಒಂದೇ ಪ್ರಶ್ನೆಯೆಂದರೆ ಕೊನೆಯಲ್ಲಿ ಬರುವ ಡ್ರಾಯಿಂಗ್ ಶಿಕ್ಷಕನ ಪಾತ್ರ.
ಇತ್ತೀಚೆಗೆ ದತ್ತಾತ್ರಿರವರ ಒಂದೊಂದು ತಲೆಗೂ ಒಂದೊಂದು ಬೆಲೆ ಹಾಗು ದ್ವೀಪವ ಬಯಸಿ ಕಾದಂಬರಿ ಓದಿದಾಗ ಅವರ ಬರಹದ ಶೈಲಿ ತುಂಬಾ ಇಷ್ಟವಾಯಿತು, ಅವೆರಡು ಅದ್ಭುತ ಕಾದಂಬರಿ ಕೂಡ. ಮಸುಕು ಬೆಟ್ಟದ ದಾರಿ ಕೂಡ ಅದೇ ಸಾಲಿಗೆ ಸೇರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ, ಹಾಗು ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ತುಂಬಾ ಇಷ್ಟವಾಯಿತು.
ಮಸುಕು ಬೆಟ್ಟದ ದಾರಿಯು ಒಂದು ಕಥೆಯಲ್ಲಾ, ಹಲವಾರು ಕಥೆಗಳನ್ನು ಹೇಳುತ್ತವೆ. ಏನನ್ನೂ ಮರೆಯದೆ ಎಲ್ಲವನ್ನೂ ನೆನಪಿಡಬಲ್ಲ ಹೈಪರ್ ಥೈಮೆಷ್ಟಿಕ್ ಸಿಂಡ್ರೋಮ್ ಎಂಬ ಜ್ಞಾಪಕ ಸಮಸ್ಯೆಗೆ ಒಳಗಾದ ನಿರಂಜನ ಕಥೆಯಿದೆ. ಮಗನ ಸಮಸ್ಯೆಯನ್ನು ಅರಿತು ಆತನಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ರಾಜೀವನ ಕಥೆಯಿದೆ. ರಘುರಾಮನಿಗೆ ಗೆಳೆಯರಲ್ಲಿ ನಿರಂಜನನೆೇ ಅಚ್ಚುಮೆಚ್ಚು, ಅವರಿಬ್ಬರ ಸ್ನೇಹದ ಕಥೆಯಿದೆ, ರಘುರಾಮ, ಪಲ್ಲವಿ, ಮನೋಹರ, ಪಾಟೇಲ್ ಇನ್ನೂ ಹಲವಾರು ಪಾತ್ರಗಳು ಹಾಗು ಅವೆರೆಲ್ಲರ ಜೀವನವನ್ನೂ ಚಿತ್ರಿಸುತ್ತದೆ.
ಚಿಕ್ಕಮಗಳೂರಿನ ಪೋಲಿಸ್ ಇಲಾಖೆಯಲ್ಲಿ ಕಾನಸ್ಟೇಬಲ್ ಆಗಿ ಕೆಲಸ ಮಾಡುವ ರಾಜೀವನಿಗೆ ತನ್ನ ೭ ವರ್ಷದ ಮಗ ನಿರಂಜನನ ಜ್ಞಾಪಕಶಕ್ತಿಯು ಸಾಮಾನ್ಯಕ್ಕಿಂತ ಬೇರೆ ಎನ್ನುವುದು ಒಮ್ಮೆ ಅರಿವಾಗುತ್ತದೆ, ಕಾರಣ ನಿರಂಜನಿಗೆ ತಾನು ದೊಡ್ಡಮ್ಮನ ಮನೆಗೆ ಯಾವಾಗ ಹೋಗಿದ್ದೆ, ಯಾವ ಹೋಟಲ್ನಲ್ಲಿ ಎಂದು ದೋಸೆ ತಿಂದೆ, ಅಜ್ಜನ ತಿಥಿಯ ದಿನ ಎಂದು, ಹೀಗೆ ಹಲವಾರು ಪ್ರಸಂಗಗಳನ್ನು ದಿನಾಂಕ ಸಮೇತ ಹೇಳುತ್ತಿದ್ದುದು ಆಶ್ಚರ್ಯವಾಗುತ್ತಿತ್ತು, ಹೋದವರ್ಷ ಡಿಸೆಂಬರ್ ತಿಂಗಳಿಂದ ಪ್ರಾರಂಭಿಸಿ ಯಾವ ದಿನಾಂಕ ಕೇಳಿದರೂ ಅಂದು ಏನಾಯಿತೆಂದು ವರದಿ ಒಪ್ಪಿಸುವ ಮಗನನ್ನು ಕಂಡು ರಾಜೀವನು ಬೆಕ್ಕಸಬೆರಗಾದನು. ಆದರೆ ಓದಿನಲ್ಲಿ ಮಾತ್ರ ಏನೂ ನೆನಪು ಉಳಿಯುತ್ತಿರಲಿಲ್ಲ, ನಿರಂಜನನ ಶಾಲೆಯ ಟೀಚರ್ ಒಮ್ಮೆ ರಾಜೀವನಿಗೆ ನಿರಂಜನನ ಓದಿನ ಬಗ್ಗೆ ಗಮನ ಕೊಡುವುದಾಗಿ ತಿಳಿಸಿದ್ದರು, ಇಂದು ಹೇಳಿದ್ದು ಕೆಲ ಸಮಯವಾದ ನಂತರ ಮರೆತು ಹೋಗುವನೆಂದು ತಿಳಿಸಿದರು. ಓದಿನಲ್ಲಿ ಹಿಂದುಳಿದ ನಿರಂಜನನ್ನು ಕಂಡು ಆಶ್ಚರ್ಯವಾಯಿತು, ಬೇರೆ ಎಲ್ಲವೂ ದಿನಾಂಕ ಸಮೇತ ಹೇಳುವ ನಿರಂಜನನಿಗೆ ಶಾಲೆಯ ಓದಿನಲ್ಲಿ ಮರುವು ಏಕೆ ಎಂದು ಯೋಚನೆಗೀಡಾದನು. ಕಾರಣ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿರುವುದಕ್ಕಾಗಿ ಹೀಗಾಯಿತೆ, ಅಥವಾ ತಾನು ಪುನಃ ಮದುವೆ ಮಾಡಿಕೊಳ್ಳದೆ ಮನೆಯಲ್ಲಿ ಒಬ್ಬಂಟಿಗನಾಗಿರುವುದರಿಂದ ಹೀಗಾಯಿತೆ , ಕೆಲಸದ ಒತ್ತಡದಿಂದ ಮಗನ ಜೊತೆ ಸಮಯ ಕಳೆಯುತ್ತಿರಲಿಲ್ಲ ಆದ್ದರಿಂದ ಈ ಪರಿಸ್ಥಿತಿ ಉಂಟಾಯಿತೋ ಎಂದು ಆಲೋಚಿಸ ತೊಡಗಿದನು. ಅಕ್ಕ, ತಂಗಿ, ಗೆಳೆಯರು ೨ನೆ ಮದುವೆಯಾಗಲು ಸೂಚಿಸಿದರೂ ನಿರಂಜನ ದೃಷ್ಟಿಯಿಂದ ಆ ಬಂಧುತ್ವ ಬೇಡ ಎಂದು ವಿದುರನಾಗಿಯೇ ಉಳಿದನು. ಅತ್ತ ಡ್ಯೂಟಿ ಮಾಡಿಕೊಂಡು ಇತ್ತ ಮಗನನ್ನು ನೋಡಿಕೊಂಡು ರಾಜೀವನು ತುಂಬಾ ಕಷ್ಟ ಪಟ್ಟು ಜೀವನ ಸಾಗಿಸುತ್ತಿದ್ದನು. ನಿಜಕ್ಕೂ ಗಂಡು ಹೆಣ್ಣು ಇಬ್ಬರು ಇದ್ದರೇನೆ ಒಂದು ಕುಟುಂಬ ನಿಲ್ಲಲು ಸಾಧ್ಯ, ಓಡಲು ೨ ಕಾಲು ಬೇಕಾದಂತೆ, ಆದರೆ ನಿರಂಜನ ಪಾಲಿಗೆ ತಂದೆಯೇ ಎಲ್ಲವು. ಊರಿನ ಡಾಕ್ಟರ್ ಸಲಹೆಯಂತೆ ರಾಜೀವ ಬೆಂಗಳೂರಿನ ನಿಮಾನ್ಸ್ ಹಾಸ��ಪಿಟಲ್ ಆಗಿನ್ನ ನಿರ್ಮಾಣವಾಗುವ ಸಮಯದಲ್ಲಿ ನಿರಂಜನನ್ನು ತೋರಿಸಿದಾಗಲೆ ತಿಳಿಯಿತು ತನ್ನ ಮಗನಿಗೆ ಹೈಪರ್ ಥೈಮೆಷ್ಟಿಕ್ ಸಿಂಡ್ರೋಮ್ ಎಂಬ ಜ್ಞಾಪಕ ಸಮಸ್ಯೆ ಇದೆಯಂದು.
ರಘುರಾಮ ಹಾಗು ನಿರಂಜನ ಒಂದೇ ಕಡೆ ಓದಿದರು, ರಾಘುರಾಮನು ಓದಿ ಮುಂದೆ ಬಂದನು. ನಿರಂಜನ ತನಗೆ ಒಳ್ಳೆಯ ಸ್ನೇಹಿತನಾಗಿದ್ದನು. ನಿರಂಜನನ ಸಮಸ್ಯೆಯನ್ನು ಅರಿತ ರಘು ಅವನಿಗೆ ತುಂಬಾ ಹತ್ತಿರವಾಗಿದ್ದನು, ಪರಸ್ಪರರು ಸಹಾಯ ಮಾಡಿಕೊಂಡು ಸಮಯ ಸಿಕ್ಕಾಗ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಸಮಯ ಕಳೆಯುತ್ತಿದ್ದರು, ಲಾವಣ್ಯ ಎಂಬುವಳನ್ನು ಪ್ರೀತಿಸಿದ ರಘು ಆಕೆಗೆ ಪ್ರೇಮ ಪತ್ರ ಬರೆಯಲು ಮುಳ್ಳಯ್ಯನಗಿರಿ ಬೆಟ್ಟದಲ್ಲಿ ನಿರಂಜನ ಸಹಾಯ ಪಡೆದು ಅದನ್ನು ಲಾವಣ್ಯಗೆ ತಲುಪಿಸಿ ನಿರಾಶನಾಗಿದ್ದನು, ಲಾವಣ್ಯನ ತಂದೆಗೆ ಉಡುಪಿಗೆ ವರ್ಗವಾಗಿ ಸಂಸಾರ ಸಮೇತ ಊರನ್ನು ಬಿಟ್ಟರು. ಇದರಿಂದ ರಘುಗೆ ನಿರಾಶೆಯಾಯಿತು. ನಂತರ ಓದಿ ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿ ನಿರಂಜನನನ್ನು ಬಿಟ್ಟು ಹೋದನು, ಆದರೆ ಅವರ ಸ್ನೇಹ ಮುಂದುವರೆಯಿತು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಪ್ರೀತಿ. ರಘು ತನ್ನ ತಂದೆ ತಾಯಿಯರನ್ನು ಎದುರು ಹಾಕಿಕೊಂಡು ಪಲ್ಲವಿಯನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸುಖವಾಗಿದ್ದನು. ಇದೇ ಸಮಯದಲ್ಲಿ ಆತನ ಮ್ಯಾನೇಜರ್ ಪಾಟೀಲರ ಸಹವಾಸದಿಂದ ಒಂದು ಸ್ಕೀಮಿನೊಳಗೆ ಸಿಕ್ಕಿಹಾಕಿಕೊಂಡು ಕಂಪನಿಗೆ ನಷ್ಟವಾಗಿ ಇವನ ಮೇಲೆ ದೂರು ಬಂದು ಜೈಲಿಗೆ ಹೋಗುವ ಪ್ರಸಂಗ ಬಂದಾಗ ಮದುವೆಯಾಗಿ ಒಂದು ವರ್ಷವೂ ಆಗಿರಲಿಲ್ಲ ಪಲ್ಲವಿಯನ್ನು, ನಿರಂಜನನ್ನು ಬಿಟ್ಟು ನೇಣು ಹಾಕಿಕೊಂಡು ಅವರನ್ನು ಅನಾಥರನ್ನಾಗಿಸಿದನು.ಆ ಪ್ರಸಂಗ ಓದಿದಾಗ ಮನ ಕುಲುಕುತ್ತದೆ, ಏನೂ ತಪ್ಪು ಮಾಡದೆ ರಘು ಸ್ಕೀಮಿನಲ್ಲಿ ಸಿಲುಖಿ ಪ್ರಾಣ ಬಿಟ್ಟುದುದಲ್ಲದೆ, ಪಲ್ಲವಿಯ ಪರಿಸ್ತಿತಿ ಕುರಿತು ಕನಿಕರವಾಗುತ್ತದೆ, ಆ ಸಮಯದಲ್ಲಿ ಆಕೆ ಗರ್ಭಿಣಿಯಾಗಿರುವುದಲ್ಲದೆ, ಅತ್ತೆ ಮಾವಂದಿರ ನಿಂದನೆಯಿಂದ ತವರು ಮನೆಯಲ್ಲೆ ಇರುವ ಪ್ರಸಂಗ ಬರುತ್ತದೆ.
ನಂತರ ರಾಜೀವ ನಿರಂಜನನಿಗೆ ಅಂಗಡಿ ವ್ಯಾಪಾರ ಮಾಡುವುದಕ್ಕೆ ಸಹಾಯ ಮಾಡುತ್ತಾನೆ. ನಿವೃತ್ತಿಯಾಗಿದ ನಂತರ ರಾಜೀವ ನಿರಂಜನನೊಂದಿಗೆ ಸಮಯ ಕಳೆಯಲು ನಿರ್ಧರಿಸುತ್ತಾನೆ. ನಿರಂಜನ ಮೊದಲು ಸಿನಿಮಾ ಥಿಯೇಟರ್ ನಲ್ಲಿ ಕೆಲಸ ಮಾಡಿ ಅದು ಜ್ಞಾಪಕ ಸಮಸ್ಯೆಯಿರುವ ನಿರಂಜನನನ್ನು ಹೆಚ್ಚು ಕಾಲ ಅಲ್ಲಿರಿಸಲು ಅವಕಾಶವಾಗಲಿಲ್ಲ. ಮಗನ ಮದುವೆಯೂ ಆಗದೆ ಉದ್ಯೋಗವೂ ಇಲ್ಲದೆ ಆತನ ಯೋಚನೆಯಿಂದಲೇ ಮೆತ್ತಗಾಗಿ ಒಂದು ದಿನ ಪ್ಯಾರಾಲಿಸಿಸ್ ಗೆ ತುತ್ತಾಗಿ ಹಾಸಿಗೆ ಹಿಡಿಯುತ್ತಾನೆ. ಅಂತೂ ನಿರಂಜನ ಅತ್ತ ಅಪ್ಪನ ಸೇವೆ ಮಾಡಿಕೊಂಡು ತನ್ನ ಅಂಗಡಿ ವ್ಯಾಪಾರ ನೋಡಿಕೊಂಡು ಜೀವನವನ್ನು ಸಾಗಿಸುತ್ತಾನೆ. ರಾಜೀವ ತನ್ನ ಆಸ್ತಿಯನ್ನೆಲ್ಲಾ ನಿರಂಜನ ಹೆಸರಿಗೆ ಬರೆದು ನಂತರ ಮೆಮೋರಿ ಲಾಸ್ ಆಗಿ ನಿರಂಜನನನ್ನೇ ಮರೆತು ಹೋಗುವ ಪ್ರಸಂಗ ಎದುರಾಗುತ್ತದೆ. ರಾಜೀವ ಕೆಲವೇ ದಿನಗಳಲ್ಲಿ ಸಾಯುತ್ತಾನೆ, ಅದೇ ಸಮಯದಲ್ಲಿ ರಘವಿನ ಸಾವಿನ ಸುದ್ಧಿ ತಿಳಿದು ಒಟ್ಟಿಗೆ ಇಬ್ಬರು ಆಪ್ತರನ್ನು ಕಳೆದುಕೊಂಡು ಏಕಾಂಗಿಯಾಗುತ್ತಾನೆ.
ಪಲ್ಲವಿ ಸುರಭಿಗೆ ಜನ್ಮ ನೀಡುತ್ತಾಳೆ. ಶಾಲೆಗೆ ಸೇರಿಕೊಂಡು ಸಂಸಾರ ಸಾಗಿಸುತ್ತಾಳೆ, ರಘುವನ್ನು ಮರೆಯಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಾಗದು, ಸುರಭಿ ನಿರಂಜನನಿಗೆ ತುಂಬಾ ಹತ್ತಿರವಾಗಿದ್ದಳು, ಪಲ್ಲವಿ ತಾಯಿ ಸರಸ್ವತಿಗೆ ಪಲ್ಲವಿಯನ್ನು ನಿರಂಜನನಿಗೆ ಕೊಟ್ಟು ಮದುವೆ ಮಾಡುವುದಾಗಿ ಹಲವು ಬಾರಿ ಯೋಚಿಸಿದ್ದಳು ಆದರೆ ಮಗಳ ಬಳಿ ಹೇಳುವುದಾದರೂ ಹೇಗೆ, ಇವರ ಕುಟುಂಬಕ್ಕೆ ನಿರಂಜನ ತುಂಬಾ ನೆರವಾಗುತ್ತಾನೆ, ಹೀಗೆ ಒಮ್ಮೆ ಪಲ್ಲವಿ ನಿರಂಜನ ಮುಳ್ಳಯಂಗಿರಿ ಬೆಟ್ಟದಲ್ಲಿ ಮಾತನಾಡುವಾಗ ರಘುವಿನ ಬಗ್ಗೆ ಸುಮಾರು ಹೊತ್ತು ಮತನಾಡಿ ತಮ್ಮ ಮನಸ್ಸಿನಲ್ಲಿರುವ ದುಃಖವನ್ನು ಪರಸ್ಪರ ಹಂಚಿಕಳ್ಳುತ್ತಾರೆ. ಅಂದು ಪಲ್ಲವಿಯ ಸ್ಪರ್ಶವು ನಿರಂಜನನಿಗೆ ರೋಮಾಂಚನಕಾರಿಯಾಗಿ ಅದು ಆತ್ಮೀಯ ಸ್ಪರ್ಶವಾಗಿ ಮನಸ್ಸಿಗೆ ಅನ್ನಿಸುತ್ತದೆ, ಪರಸ್ತ್ರೀ ಭಾವವೇ ಬರಲಿಲ್ಲ ಹಾಗು ಸ್ನೇಹಿತನ ಪತ್ನಿ ಎಂದು ಆ ಕ್ಷಣ ಅನ್ನಿಸುವುದಿಲ್ಲ, ಏಕೆಂದರೆ ಆ ಸಮಯದಲ್ಲಿ ನಿರಂಜನ ರಘುರಾಮನಾಗಿದ್ದ, ಪಲ್ಲವಿ ರಘುರಾಮನ ಕೈ ಹಿಡಿದಿದ್ದಳು. ಕ್ರಮೇಣ ಪಲ್ಲವಿಗೆ ನಿರಂಜನ ಮೇಲೆ ಮನಸ್ಸಾಗುತ್ತದೆ, ನಿರಂಜನನಿಗೂ ಪಲ್ಲವಿಯ ಮೇಲೆ ಮನಸ್ಸಾಗುತ್ತದೆ, ಆದರೆ ಪಲ್ಲವಿಗೆ ರಘುವಿನ ನೆನಪಿನಿಂದ ನಿರಂಜನನಿಗೆ ತನ್ನ ಮನಸ್ಸಿನಲ್ಲಿರುವ ಮಾತನ್ನು ಹೇಳಲಾಗುವುದಿಲ್ಲ, ಕಡೆಗೆ ನಿರಂಜನನೇ ಒಂದು ಹೆಜ್ಜೆ ಮುಂದೆ ಇಟ್ಟು ಪಲ್ಲವಿಯ ಮನಸ್ಸಿನ ಮಸುಕು ಬೆಟ್ಟದ ದಾರಿಗೆ ಈತನು ಹಾದಿಯಾಗುತ್ತಾನೆ.
ಆಯ್ದ ಸಾಲುಗಳು: *ಕೆಲವು ವಸ್ತುಗಳು ಜೊತೆಯಲ್ಲಿದ್ದು ಮನಸ್ಸನ್ನು ಕಲಕುವಂತಿದ್ದರೆ ಕೆಲವು ದೂರವಾಗಿದ್ದು ಅದೇ ಕೆಲಸವನ್ನು ಮಾಡುತ್ತವೆ. ಒಂದು ದೊಡ್ಡ ವ್ಯತ್ಯಾಸವೆಂದರೆ, ಜೊತೆಯಲ್ಲಿ ಉಳಿದವು ಒಂದೇ ರೂಪದಲ್ಲಿ ಕಾಡಿದರೆ ಕಳೆದುಕೊಂಡವು ಮುಖ ಮರೆಸಿಕೊಂಡ ಡಕಾಯಿತರಂತೆ ವೇಷಾಂತರಗಳಲ್ಲಿ ಬಂದು ಮತ್ತೆ ಮತ್ತೆ ಅಪ್ಪಳಿಸುತ್ಚಿರುತ್ತವೆ. ಎಲ್ಲಿಯವರೆಗೆ ನೆನಪುಗಳು ಎನ್ನುವ ಮಿದುಳಿನ ಜೈವಿಕರಾಸಾಯನಿಕ ಕ್ರಿಯೆಯು ಕಾಲತೀತ ವಿಹಾರಿಯಾಗಿ ನಮ್ಮ ಭೂತ, ವರ್ತಮಾನ, ಭವಿಷ್ಯತ್ತುಗಳ ನಡುವೆ ಉಯ್ಯಾಲೆ ಜೀಕುತ್ತಲೇ ಇರುತ್ತದೋ ಅಲ್ಲಿಯವರೆಗೆ ಹೊಯ್ದಾಟಗಳಿಂದ ಬಿಡುಗಡೆಯಿಲ್ಲ. ಪ್ರತಿ ಮನುಷ್ಯನೂ ತನ್ನ ನೆನಪಿನ ಕೋಶಗಳೊಳಗೇ ಬಂಧು ಕಡೆಯವರೆಗೂ*.
ನಿರಂಜನನ ಮುಗ್ದತೆ,Hyperthaimestic syndrome ನಿಂದ ಬಳಲುತಿರುವ ಮಗನ ಜೀವನವನ್ನೂ ತೀರ ತಲುಪಿಸಲು ರಾಜೀವನ ಹೆಣಗಾಟ ,ರಘುರಾಮನ ದುಡುಕುಬುದ್ದಿ,ಪಲ್ಲವಿ ,ಮನೋಹರ ಎಲ್ಲ ಪಾತ್ರಗಳು ಮುದ ನೀಡುತ್ತವೆ.ಒಮ್ಮೆ ಓದಿ❤️
ಮಸುಕು ಬೆಟ್ಟದ ದಾರಿ ಲೇಖಕ ದತ್ತಾತ್ರಿ ಎಂ ಆರ್ ಅವರ ಎರಡನೇ ಕಾದಂಬರಿ. ಮರೆಯಲಾರದ ಖಾಯಿಲೆ (ಮರೆವಿನ ಖಾಯಿಲೆ ಅಲ್ಲ) ಇರುವ ಒಬ್ಬಾತನನ್ನ ಕೇಂದ್ರವಾಗಿರಿಸಿಕೊಂಡ ಕಾದಂಬರಿ.
ಜೀವನದ ಸಣ್ಣಪುಟ್ಟ ವಿವರಗಳೂ ಎಷ್ಟೇ ವರ್ಷಗಳು ಕಳೆದರೂ ಮರೆಯದೇ ಹೋಗುವ ನಿರಂಜನ ಈ ಕಥೆಯ ನಾಯಕ. ಆ ಕಾರಣದಿಂದಲೇ ಶಾಲಾ ಕಾಲೇಜುಗಳಲ್ಲಿ ಬೇರೆಯವರಂತೆ ಯಶಸ್ವಿಯಾಗದೇ ಹೋಗುವ ನಿರಂಜನನ ಐದಾರು ವರ್ಷದ ಬಾಲ್ಯದಿಂದ ಸುಮಾರು ೧೯೭೦ರ ವೇಳೆಗೆ ಆರಂಭವಾಗುವ ಕಥೆ, ಅವನ ಕುಟುಂಬ, ಅವನ ನೆರೆಹೊರೆ, ಗೆಳೆಯರ ಕಥೆಗಳೊಂದಿಗೆ ಬೆಸೆದುಕೊಳ್ಳುತ್ತಾ ಬೆಳೆದು, ಹೊಸ ಶತಮಾನ ಆರಂಭವಾಗುವ ಸಮಯದಲ್ಲಿ ಮುಗಿಯುತ್ತದೆ.
ಕಾದಂಬರಿ ಚಿಕ್ಕಮಗಳೂರಿನ ರತ್ನಗಿರಿ ಬೋರೆ, ಮತ್ತೆ ಮುಳ್ಳಯ್ಯನ ಗಿರಿ ಎರಡನ್ನೂ ಜೀವತುಂಬಿದ ಪಾತ್ರಗಳನ್ನಾಗಿಸಿರುವುದು ಬಹಳ ಹಿಡಿಸಿತು. ಎಪ್ಪತ್ತರ ದಶಕದ ಬೆಳೆಯುತ್ತಿರುವ ಬೆಂಗಳೂರು, ಮತ್ತೆ ಶತಮಾನದಂಚಿನ ಧಾವಿಸುವ ವೇಗದ ಬೆಂಗಳೂರು, ಜೀವನದಲ್ಲಿ ಕಾಣಸಿಗುವ ನ್ಯಾಯಾನ್ಯಾಯಗಳು — ಒಳ್ಳೆಯ, ಕೆಟ್ಟ, ಎಲ್ಲ ರೀತಿಯ ಪಾತ್ರಗಳ ಚಿತ್ರಣ , ಕತೆಯನ್ನು ವೈವಿಧ್ಯಮಯವಾಗಿ, ಸುಲಭವಾಗಿ ಓದಿಸಿಕೊಂಡು ಹೋಗುವಂತೆ ಮಾಡಿವೆ.
ಕತೆ ರಾಜೀವ್ ಮತ್ತು ಅವನ ಮಗ ನಿರಂಜನ್ನಿಂದ ಶುರುವಾಗುತ್ತದೆ. ನಿರಂಜನ್ಗೆ Hyperthymestic Syndrome ಇದೆ — ಅಂದರೆ ಜೀವನದಲ್ಲಿ ನಡೆದ ಪ್ರತಿಯೊಂದು ವಿಷಯವೂ ನೆನಪು ಇರುತ್ತದೆ. ದಿನಾಂಕ, ಸಮಯ, ವಾಸನೆ, ಬಣ್ಣ — ಎಲ್ಲವೂ. ಈ ವಿಷಯ ಹೊಸದಾಗಿ ಅನಿಸಿತು, ಅದಕ್ಕಾಗಿ ಓದಲು ಶುರುಮಾಡಿದೆ. ಆದರೆ ಈ ವಿಷಯ ಕಥೆಗೆ ದೊಡ್ಡ ಮಟ್ಟದಲ್ಲಿ ಉಪಯೋಗವಾಗೋದಿಲ್ಲ. ಮೊದಲ ಕೆಲವು ಪುಟಗಳಲ್ಲಿ ನಿರಂಜನ್ನ ನೆನಪುಗಳ ಬಗ್ಗೆ ಬರುತ್ತದೆ. ನಂತರ ಕಥೆ ಬೇರೆ ದಿಕ್ಕಿಗೆ ಹೋಗುತ್ತದೆ. ತಂದೆ-ಮಗನ ಸಂಬಂಧ ಮಾತ್ರ ತುಂಬಾ ಚೆನ್ನಾಗಿದೆ. ಅದರಿಂದಲೇ ಓದೋದರಲ್ಲಿ ಬೇಸರ ಆಗಲಿಲ್ಲ. ಮತ್ತೆ ಕಥೆ ರಘುರಾಮ್ ಅನ್ನೋ ಹುಡುಗನ ಕಡೆ ತಿರುಗುತ್ತದೆ. ಪುಸ್ತಕದಲ್ಲಿ ಹೊಸ ಹೊಸ ಪಾತ್ರಗಳು ಬರುತ್ತಲೇ ಇರುತ್ತವೆ. ಆದರೆ ಲೇಖಕರು ಕಥೆ ಕಟ್ಟಲು ಮತ್ತು ಪಾತ್ರಗಳನ್ನು ಬೆಳೆಸಲು ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಪುಸ್ತಕದ ಸುಮಾರು 70% ಓದಿದರೂ ಕಥೆ ಏನು ಅಂತ ಸ್ಪಷ್ಟವಾಗಿ ಗೊತ್ತಾಗೋದಿಲ್ಲ. ಓದಲು ತುಂಬಾ ತಾಳ್ಮೆ ಬೇಕು. ಕೆಲವು ಭಾಗಗಳು ಊಹಿಸಲು ಸುಲಭ. ಆದರೂ ಕೊನೆಯಲ್ಲಿ ಕಥೆ ಚೆನ್ನಾಗಿ ಕನೆಕ್ಟ್ ಆಗುತ್ತದೆ. ಅಂತ್ಯ ಒಳ್ಳೆಯದಾಗಿದೆ. ಒಟ್ಟಿನಲ್ಲಿ ನಿಧಾನವಾಗಿ ಸಾಗುವ ಕಥೆ, ಆದರೆ ಕೊನೆಗೆ ಹಿಡಿಸುತ್ತದೆ.
ರಾಜೀವ ನಿರಂಜನ ಎಂಬ ತಂದೆ ಮಗನ ಪಾತ್ರದ ಮೂಲಕ ಚಿಕ್ಕಮಗಳೂರಿನಲ್ಲಿ ಶುರು ಆಗುವ ಕಥೆ, ಮುಗಿಯುವ ಹೊತ್ತಿಗೆ ಹತ್ತು ಹಲವು ಪಾತ್ರಗಳನ್ನು ಹೊಂದುತ್ತದೆ.
ಈ ಪುಸ್ತಕದ ಹಲವು ಭಾಗಗಳು ಇಷ್ಟ ಆದವು. ಚಿಕ್ಕಮಗಳೂರು ಊರೇ ಒಂದು ಪಾತ್ರವಾಗಿ, ರಾಜೀವ ನಿರಂಜನ ನ ತಂದೆ ಮಗನ ಅನುಬಂಧ, ನಿರಂಜನ ರಘುರಾಮರ ಸ್ನೇಹ, ಕಥೆಯಲ್ಲಿ ಸಣ್ಣ ಪಾತ್ರವಾಗಿ ಬರುವ ವಿರೂಪಾಕ್ಷಪ್ಪ(ಕಥೆಯ ಕೊನೆಯ ಭಾಗದ ರಾಜೀವನ ಜತೆಗಿನ ಅವರ ಸಂಭಾಷಣೆ, one of the best in the book).
ಚಿತ್ರಕಲೆ ಬಗ್ಗೆ ಅಷ್ಟು ಆಸಕ್ತಿ ಇಲ್ಲದ ಕಾರಣಕ್ಕೋ ಏನೋ, ಮನೋಹರ ಪಾತ್ರದ ಸುತ್ತ ಬಂದ ವಿವರಣೆ, ಕಲೆಗೆ ಸಂಬಂಧಪಟ್ಟ ಒಂದಷ್ಟು ಪುಟಗಳು bore ಅನ್ಸಿದವು.
ಮಸುಕು ಬೆಟ್ಟದ ದಾರಿ ಓದಿ ಮುಗಿಸಿದೆ. ಎಮ್. ಆರ್. ದತ್ತಾತ್ರಿ ಅವರ ಎರಡನೇ ಕಾದಂಬರಿ. ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ್ದಾರೆ. ಆಕಸ್ಮಿಕವಾಗಿ, ಕುಪರ್ಟಿನೋ ಲೈಬ್ರರಿಯಲ್ಲಿ ಸಿಕ್ಕಿತು, ಲೈಬ್ರರಿಯ ದಪ್ಪ ರಟ್ಟಿನ ಪ್ರತಿ.
ಹೊಸ ತರಹದ ಪಾತ್ರವಿದೆ ಇದರಲ್ಲಿ, ನೆನಪಿನ ಮೂರ್ತ ರೂಪ. ಕಾದಂಬರಿಯ ತುಂಬ ಕಾಣುವದು ಸೂಕ್ಷ್ಮ ಅವಲೋಕನ, details, details, details! ಕವಿ ಸಂವೇದನೆಯ ಸೂಕ್ಷ್ಮ ದೃಷ್ಟಿ ಹಾಗೂ ವಿವರಗಳು ‘ದ್ವೀಪವ ಬಯಸಿ’ಯಲ್ಲಿಯೂ ಇದ್ದವು; ಇಲ್ಲಿ ಅವುಗಳದ್ದೇ ಮೆರವಣಿಗೆ. ಸನ್ನಿವೇಶಗಳನ್ನು ಅವುಗಳ ಎಲ್ಲ ಬಣ್ಣ ರುಚಿ ವಾಸನೆಗಳ ಸಮೇತ ಚಿತ್ರಿಸಿರುವ ರೀತಿಯಿಂದಾಗಿ ನಿರಂಜನನ ಅದ್ಭುತ ಶಕ್ತಿ ಕಾದಂಬರಿಯ ಪುಟಗಳಲ್ಲೆಲ್ಲ ಹರಡಿಕೊಂಡಿದೆ. ಹಲವು ಪಾತ್ರಗಳಿವೆ, ಕೆಲವು ದಟ್ಟವಾಗಿವೆ, ಕೆಲವು ಹೀಗೆ ಬಂದು ಹಾಗೇ ಹೋಗುತ್ತವೆ, ಬೆಟ್ಟ ಗುಡ್ಡಗಳೂ ಜೀವತಳೆದಿವೆ. ಆದರೆ ಯಾವ ಪಾತ್ರವೂ ವ್ಯರ್ಥವಾಗಿ ಬರುವದಿಲ್ಲ, ತನ್ನನ್ನು ತಾನು ಸ್ಮೃತಿಪಟಲದಲ್ಲಿ ಕೊರೆಯದೆ ಹೋಗುವದಿಲ್ಲ. ಸರಳವಾಗಿ, ಸುಲಲಿತವಾಗಿ ಓದಿಸಿಕೊಂಡು ಹೋಗುವ ಭಾಷೆ ಕೆಲವು ಕಡೆ ಕಾವ್ಯಾತ್ಮಕವಾಗುತ್ತದೆ, ಕತೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ, ಇಲ್ಲೇ ನಮ್ಮ ಸುತ್ತು ಮುತ್ತಿನಲ್ಲೇ ನಡೆಯುತ್ತಿವೆಯೇನೋ ಘಟನೆಗಳು ಎನ್ನುವಷ್ಟು ತನ್ಮಯಗೊಳಿಸುತ್ತದೆ. ಕೆಲವು ಕಡೆ ಇಂಗ್ಲೀಷ್ ನುಡಿಗಟ್ಟುಗಳ ಕನ್ನಡ ಅವತರಣಿಕೆ ಓದಿನ ನಡೆ ಸ್ವಲ್ಪ ತಡವರಿಸುವಂತೆ ಮಾಡುತ್ತವೆ. Artistic circle ಎನ್ನುವದು ಕಲಾ ವರ್ತುಲವಾಗುವ ಬದಲು ಕಲೆಯ ಜಗತ್ತಾಗಬಹುದು. Streetsmart ಎನ್ನುವದು ನಾಡಜಾಣತ್ವವಾದದ್ದು ಇಂಟರೆಸ್ಟಿಂಗ್ ಅನಿಸಿತು :-).
ಮನುಷ್ಯನಿಗೆ ನೆನಪುಗಳು ಬೇಕು. ಅವು ತನ್ನವೇ ಆದಾಗ ಅವು ವ್ಯಕ್ತಿತ್ವದ ಅನಾವರಣಕ್ಕೆ, ಬೆಳವಣಿಗೆಗೆ ಸಹಕಾರಿಯಾಗಿ ಬಾಳನ್ನು ಸಾರ್ಥಕಗೊಳಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ ನೆನಪುಗಳು ಬರೀ ಕಂಡ ಕಂಡ ಘಟನೆಗಳ ಬಗೆಗಾದರೆ, ಬಾಳಿನಲ್ಲಿ ಬಂದ ಇತರರ ಬಗ್ಗೆಯೇ ಆದರೆ ಮತ್ತು ಆ ನೆನಪುಗಳು ಹೇಳದೆ ಕೇಳದೇ ಪ್ರಕಟಗೊಳ್ಳುವ ರೀತಿಯ ಮೇಲೇ ತನ್ನ ಹಿಡಿತವೇ ಇಲ್ಲದೇ ಹೋದರೆ ಅಂತಹ ವ್ಯಕ್ತಿ ಬದುಕುವದಾದರೂ ಹೇಗೆ? ಬಾಳಿನ ಸಾರ್ಥಕ್ಯವನ್ನು ಕಂಡುಕೊಳ್ಳುವದು ಹೇಗೆ? ನಿರಂಜನನ ಪಾತ್ರ ಒಂದು ಸಾಧ್ಯತೆಯನ್ನು ಕಂಡುಕೊಳ್ಳುತ್ತದೆ. ಮಸುಕು ಬೆಟ್ಟದ ಹಾದಿ ತಿಳಿಯಾಗುತ್ತದೆ.
(ತುಂಬಾ ಹಿಂದೆ, ಮಸುಕು ಬೆಟ್ಟದ ದಾರಿ ಓದಿದ ಹೊಸತರಲ್ಲೇ ಬರೆದು ಅನಿಸಿಕೆ ಇದು. ಈಗ ಇಲ್ಲಿ ಹಾಕುತ್ತಿರುವೆ.)