ತನ್ನ ಹಿಂದಿನ ಕಾಲದ ಗ್ರಾಮೀಣ ಬದುಕಿನ ನುಡಿ ಚಿತ್ರಗಳಂತಿರುವ ಕಥೆಗಳನ್ನೂ, ತನ್ನ ಕಾಲದ ತಲ್ಲಣಗಳಿಗೆ ಹಿಡಿದ ಕನ್ನಡಿಯಂತಿರುವ ಕಥೆಗಳನ್ನೂ ಒಂದೇ ಹದದಲ್ಲಿ ನಿಭಾಯಿಸಿದ ಸಂಜೋತಾರ ಇಲ್ಲಿನ ಕಥೆಗಳ ಓದು ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ.
- ಸುಬ್ರಾಯ ಚೊಕ್ಕಾಡಿ
“ಬೆಲಾಜಿಯೋದ ಗರ್ಭದೊಳಗೆ”
ಆಕರ್ಷಕವಾಗಿ ಓದಿಸಿಕೊಳ್ಳುವ ಕಥೆ. ಲಾಸ್ ವೇಗಾಸ್ನ ಹೊಸ ಪ್ರಪಂಚ ಕನ್ನಡ ಓದುಗರಿಗೆ ಮುದ ಕೊಡುವಂತೆ ವಿವರವಾಗಿ ಬಂದಿದೆ. ಈ ಕಥೆಗೆ ಇಂತಹದೇ ಅಂತ್ಯವೆಂಬುದು ಇಲ್ಲ. ಅದು ಬದುಕಿನ ನಿರಂತರತೆಗೆ ಸಂಕೇತವಾಗಿ ನಿಂತಿದೆ.
- ವಸುಧೇಂದ್ರ
“ಗರಿಕೆಹುಲ್ಲು”
ಗಮನ ಸೆಳೆಯುವ ಕಥೆ. ದೇಶದಾಚೆ ಈ ಕಥೆ ಅಡ್ಡಾಡುತ್ತದೆ. ಸಮುದಾಯಗಳ ಒಳತೋಟಿ; ಅನಾಥ ಪ್ರಜ್ಞೆಯ ನಡುವೆಯೂ ಬದುಕಿನ ಉತ್ಕಟತೆಯಿಂದ ಕಥೆ ಕಾಡುವ ಗುಣವನ್ನು ಹೊಂದಿದೆ. ವಿವರಗಳ ಸಾತತ್ಯ ಮತ್ತು ನಿರೂಪಣೆಯ ಸರಾಗತೆಯೂ ಕಥೆಯನ್ನು ಮಾಗಿಸಿದೆ. ಸಮಕಾಲೀನ ವಿದ್ಯಮಾನಗಳ ನಡುವೆಯೂ ಈ ಕಥೆ ಅನೇಕ ಹೊಳಹುಗಳನ್ನು ನೀಡುತ್ತದೆ.
- ಸುರೇಶ ನಾಗಲಮಡಿಕೆ
“ಮಿಸ್ ಬ್ರೆಂಡಾ”
ಹದವಾದ ಕಥೆ. ಇಳಿ ವಯಸ್ಸಿನ ಲವಲವಿಕೆ, ಜೀವಂತಿಕೆ, ಭಿನ್ನ ವ್ಯಕ್ತಿಗಳ ಮಧ್ಯದ ಸ್ನೇಹ, ಕೊಂಚ ವಿಷಾದ - ಇವೆಲ್ಲವನ್ನು ಕೊಂಚವೂ ಅತಿ ಮಾಡದೇ, ವಿವರಗಳಲ್ಲೇ ಕಳೆದೂ ಹೋಗದೇ ಕಟ್ಟಿಕೊಟ್ಟಿದ್ದಾರೆ. ಬ್ರೆಂಡಾ ವಾಚಾಳಿ ಅಲ್ಲ, ಕಿರಿಕಿರಿ ಅಲ್ಲ, ಅವಳ ಜೀವಂತಿಕೆ ಇರುವುದು ಅವಳ ಕೆಲಸದಲ್ಲಿ, ಅವಳ ಮೌನದಲ್ಲಿ.
ಸಂಜೋತಾ ಪುರೋಹಿತ್ ಬರೆದ ಇತರ ಯಾವ ಕೃತಿಗಳಾಗಲೀ ಬರಹಗಳಾಗಲೀ ಓದಿಲ್ಲದ ನನಗೆ ಈ ಕಥಾಸಂಕಲನ ಒಂದು ಬಗೆಯ blind date ರೀತಿಯಾಗಿತ್ತು. ಯಾವ ನಿರೀಕ್ಷೆಗಳೂ ಇಲ್ಲದಿದ್ದರೂ ಲೇಖಕಿ ಧಾರವಾಡ ಮೂಲದವರು ಎಂದು ತಿಳಿದಾಗ ಉತ್ತರ ಕರ್ನಾಟಕದ ಜವಾರಿ ಭಾಷೆಯ ಕತೆಗಳು ನನಗೆ ರುಚಿಸುವವೋ ಇಲ್ಲವೋ ಎಂಬ ಚಿಕ್ಕ ಅನುಮಾನವಂತೂ ಇತ್ತು.
ಸ್ವಲ್ಪ ಮಟ್ಟಿಗೆ ತೇಜಸ್ವಿಯವರ 'ಅಬಚೂರಿನ ಪೋಸ್ಟಾಫೀಸು' ಕತೆ ನೆನಪಿಸುವಂತಿದ್ದ ಸಂಕಲನದ ಮೊದಲ ಕತೆ "ತಾ'ಪತ್ರ'ಯ" ಓದುತ್ತಾ ಓದುತ್ತಾ Love at first site ಥರ love at first story ತರದ್ದೇನೋ ಆಯ್ತು ಅನ್ನಿಸುತ್ತೆ. ಓಕೆ, ಹೀಗೆ ಇಷ್ಟು ಸರಳ ಭಾಷೆಯಲ್ಲಿ, ಸುರಳೀತವಾದ ಬರವಣಿಗೆಯಲ್ಲಿ ಇದ್ದರೆ ಓದಬಲ್ಲೆ ಎಂಬ ಧೈರ್ಯ ಬಂದು ಮುಂದಿನ ಓದಿಗೆ ಉತ್ಸಾಹ ಬಂದಿತು.
ಸಂಕಲನದ ಹನ್ನೆರಡು ಕಥೆಗಳಲ್ಲಿ ಆರು ಈ ನೆಲದವಾದರೆ ಇನ್ನಾರು ಲೇಖಕಿ ಕಂಡ ಹೊರದೇಶದ ಬಣ್ಣದವು. ಹನ್ನೆರಡೂ ಕಥೆಗಳೂ ಭಿನ್ನ ವಸ್ತು ಮತ್ತು ಚೆಂದದ ನಿರೂಪಣೆಯವು.
ವ್ಯಕ್ತಿಗಳನ್ನಷ್ಟೇ ಅಲ್ಲದೆ ವಸ್ತುಗಳ ಜೊತೆಗೂ ಬಾಂಧವ್ಯ ಬೆಸೆದುಕೊಳ್ಳುವ 'ಮಣ್ಣೆತ್ತಿನ ಉಸಿರು', ಅಟ್ಯಾಚ್ಮೆಂಟ್ ಜೊತೆಗೆ ಡಿಟ್ಯಾಚ್ಮೆಂಟ್ ಕೂಡ ಮುಖ್ಯ ಎನ್ನುವ 'ಮಿಸ್ ಬ್ರೆಂಡಾ', ಪತ್ನಿ ವಿಯೋಗದ ಗಾಢ ಗಂಧದ 'ಒಂದು ಹೂವಿನ ನೆರಳು', ಜೀವನ ಪ್ರೀತಿಯ ಅಗ್ನಿತಾರೆ , ಬಿಡುಗಡೆಯ ಇನ್ನೊಂದು ಆಯಾಮ ತೋರಿಸುವ 'ಭಾವಕ್ಕೆ ಬಂಧ ಮುಕ್ತ' ಮತ್ತು 'ಇನ್ನೇನು ಬೆಳಗಾಗುತ್ತದೆ', ಮನೋವೈಜ್ಞಾನಿಕ ಹಾರರ್ 'ಗೊರಟೆ ಹೂವಿನ ಹುಡುಗಿ' ... ಆಹ್.. ಎಲ್ಲ ಕಥೆಗಳೂ ನನಗಿಷ್ಟವಾದವು.
ಸಂಜೋತಾರ ಮೊದಲ ಕತಾ ಸಂಕಲನ ಅವರ ಮೊದಲ ಕಾದಂಬರಿಯ ಓದಿನ ಹಿನ್ನೆಲೆಯಿಂದ ಗಮನಿಸಿದರೆ ಬಹುದೊಡ್ಡ ಜಿಗಿತವೇ ಸರಿ. ಬರೆದು ಬರೆದು ಮಾಗಿದ ವೈವಿಧ್ಯಮಯ ಕತೆಗಳು ನಿರೀಕ್ಷೆಗೂ ಮೀರಿ ಓದಿನ ಖುಷಿ ಹೆಚ್ಚಿಸಿದವು. ಒಂದು ಪತ್ರವೇ ಕಾರಣವಾಗಿ ಊರಿನ ಹಲವರ ಒಳಗನ್ನು ತೆರೆದಿಡುವ ತಾ'ಪತ್ರ'ಯ ಕಚಗುಳಿ ತರಿಸುವ ಓದು. ಮಿಸ್ ಬ್ರೆಂಡಾ ಕತೆಯು ವಿದೇಶದ ಬದುಕಿನ ಒಂದು ತುಣುಕಿನ ಜೊತೆಗೇ ಧನಾತ್ಮಕವಾಗಿ ಇಷ್ಟವಾಗುತ್ತದೆ. ಒಂದು ಹೂವಿನ ನೆಳಲು ನನಗೆ ಸಂಕಲನದಲ್ಲಿ ಬಹಳ ಇಷ್ಟವಾದ ಕತೆ. ಮಡದಿಯ ಸಾವಿನ ಬಳಿಕ ಪತಿ ಅವಳ ಕೊನೆಯ ಕ್ಷಣಗಳ ನೆನೆಯುವ ವಿವರಣೆ ನಮ್ಮನ್ನು ಬಹಳ ತಾಕುತ್ತದೆ. ಹಾಗೆಯೇ ಬೆಲಾಜಿಯೋನ ಗರ್ಭದೊಳಗೆ ,ಪಿತೃದೋಷ ಕತೆಗಳು ಲೇಖಕಿ ಎಲ್ಲರ ಹಾಗೆ ರಾಜಿಯಲ್ಲಿ ಸುಖಾಂತ್ಯ ಮಾಡಲು ಬರೆಯುವವರಲ್ಲ ಎಂದು ತೋರಿಸುತ್ತದೆ. ಈ ರಿಯಾಯಿತಿ ಕೊಡದ ಧೋರಣೆ ಬರಹಗಾರರಿಗೆ ಇರಬೇಕಾದ ದೊಡ್ಡ ಪ್ಲಸ್ ಅಂಶಗಳಲ್ಲಿ ಒಂದು. ಅಗ್ನಿತಾರೆ ಕತೆ ಕೂಡ ಸಂಬಂಧಗಳ ಚೌಕಟ್ಟಿನಲ್ಲಿ ಸರಿ ತಪ್ಪುಗಳ ವಿಶ್ಲೇಷಣೆ ಸಹಜ ಅನಿಸಿಬಿಡುತ್ತದೆ. ಹಳ್ಳಿಯ ಕತೆಗಳಲ್ಲಿ ಒಂಚೂರು ಒಳಗೊಳ್ಳುವಿಕೆ ಕಡಿಮೆ ಅನಿಸಿದರೂ ಅದು ಕತೆಯ ಸ್ವಾದಕ್ಕೆ ಕೊರತೆ ಅನಿಸಿಲ್ಲ.
ಸಂಕಲನದಲ್ಲಿ ಗೊರಟಿ ಹೂವಿನ ಹುಡುಗಿ ಎಂಬ ಸಣ್ಣ ಮಟ್ಟದ ಹಾರರ್ ಕತೆ ನನಗೆ ತಮಿಳಿನ 'ಪಿಸಾಸು' ಸಿನಿಮಾವ ನೆನಪಿಸಿತು. ಒಟ್ಟಾರೆಯಾಗಿ ಇಷ್ಟು ಚಂದದ ಕತೆಗಳ ಓದಬಹುದು ಎಂಬ ನಿರೀಕ್ಷೆ ಖಂಡಿತ ಇರಲಿಲ್ಲ. ಹಾಗಾಗಿ ಇಷ್ಟವಾಯಿತು.
ಹಳ್ಳಿ ಇಂದ ಲಾಸ್ ವೇಗಾಸ್, ಮಯಾಮಿ ವರೆಗಿನ ಕಥೆಗಳಿವೆ. ಪ್ರಶಸ್ತಿ ಪುರಸ್ಕೃತ ಕಿರುಚಿತ್ರಗಳನ್ನು ನೋಡಿದ ಅನುಭವ ಕೊಡೊ ಕತೆಗಳು. ನಂಗೆ ಕಾಡಿದ್ದು ಪಿತೃ ದೋಷ ಎಂಬ ಕಥೆ. ಇನ್ನೇನು ಬೆಳಗಾಗುತ್ತೆ, ನೆಲವೆಲ್ಲ ನಂದಬಟ್ಟಲು ಕಥೆಯಲ್ಲಿ ಹೆಣ್ಣು ಅಬಲೆ ಅಲ್ಲ ಅವಳು ಸಬಲೆ ಅಂತ ಹೇಳಿದ್ದಾರೆ . ಒಟ್ಟಾಗಿ ಯಾವ ಕಥೇನೂ ಓದಿ ಮರೆಯುವಂತದ್ದಲ್ಲ ....
A collection of well written short stories, each addressing a different subject, some based in the US, UK and some based in the Northern part of Karnataka. I liked Miss Brenda and Agnitare among the others.
ಗೋಡೆಗಳಿಗೆ ಹೊಳಪು ಬಂದಿತ್ತು. ಆದರೆ, ಅವರ ಹೊಳಪು ಮಾಯವಾಗಿತ್ತು. 💔
"ನೆಲವೆಲ್ಲಾ ನಂದಬಟ್ಟಲು" ಕಥಾಸಂಕಲನವು ಹೂವಿನ ತೋಟದಂತೆ. ಪ್ರತಿಯೊಂದು ಕಥೆಯೂ ಮನದ ತೋಟದಲ್ಲಿ ಭಾವನೆಗಳ ಸುಗಂಧ ಹರಡುತ್ತದೆ. ಓದುಗರ ಹೃದಯವನ್ನು ತಟ್ಟುವ ಆಳವಾದ ಪಾತ್ರಗಳು ಪ್ರತಿ ಸಾಲಿನಲ್ಲೂ ಜೀವಂತ.
ಅಂತ್ಯಗಳು ಅನಿರೀಕ್ಷಿತವಾದರೂ, ಹರಿಯುವ ನದಿಗೆ ಅಡ್ಡಿ ಬಿದ್ದಂತಾಗದೆ, ನಮ್ಮ ಊಹೆಯನ್ನು ಹೊಸ ದಿಕ್ಕಿಗೆ ಹರಿದುಕೊಂಡು ಹೋಗುವಂತೆ ಚಿಂತನೆಗೆ ದಾರಿ ಮಾಡಿಕೊಡುತ್ತವೆ.
ಸಂಕಲನವನ್ನು ಓದಿ ಮುಗಿಸಿದ ನಂತರವೂ ಮನದಲ್ಲಿ ಉಳಿದುಕೊಂಡು, ಮತ್ತೆ ಮತ್ತೆ ನೆನೆಸಿಕೊಳ್ಳುವ ಅನುಭವವನ್ನು ನೀಡುತ್ತದೆ.