ಫಾತಿಮಾ ರಲಿಯಾ, ತಮ್ಮ ತಾಯಿಗೆ ಕ್ಯಾನ್ಸರ್ ಬೇನೆ ಬಂದಾಗ, ಅವರ ಜತೆಯಲ್ಲಿದ್ದು ಆಸ್ಪತ್ರೆಯಲ್ಲಿ ಕಳೆದ ಅನುಭವ ಕಥನವಿದು. ಆದರೆ ಇದರ ಪರಿಧಿ ಕೇವಲ ತಾಯಿಯ, ಕಾಯಿಲೆಯ ಮತ್ತು ಆಸ್ಪತ್ರೆಲೋಕದ ವಿವರಗಳಿಗೆ ನಿಲ್ಲುವುದಿಲ್ಲ. ತಾಯ ಕಥನದ ಜತೆಗೆ, ಆಸುಪಾಸಿನ ಬದುಕಿನಲ್ಲಿ ನಡೆವ ಹಲವು ವಿದ್ಯಮಾನಗಳನ್ನೂ, ಹಲವರ ವೇದನೆ ಮತ್ತು ಸಂತಸಗಳನ್ನು ಸಮುದಾಯ ಪ್ರಜ್ಞೆಯಲ್ಲಿ ಒಳಗೊಳ್ಳುತ್ತ, ಕಾದಂಬರಿಯಂತೆ ವಿಸ್ತರಣೆ ಪಡೆಯುತ್ತದೆ. ಹೀಗಾಗಿಯೇ ಇದು ಕರಾವಳಿಯ ಅಥವಾ ಭಾರತದ ಸಾಮಾಜಿಕ ಕಾಯಿಲೆಗಳ ಕಥನವಾಗುವುದಕ್ಕೆ ನಿಲ್ಲುವುದಿಲ್ಲ. ಇಲ್ಲಿನ ವ್ಯಕ್ತಿ ಮತ್ತು ಸ್ಥಳಗಳ ಹೆಸರನ್ನು ಬದಲಿಸಿದರೆ, ಎಲ್ಲ ದೇಶದ ಎಲ್ಲ ಕಾಲದ ಮನುಷ್ಯರ ಕಥನವೂ ಆಗುವಂತೆ ಅರಳಿಕೊಳ್ಳುತ್ತದೆ. ಈ ಕಥನದ ಮುಖ್ಯ ಪಾತ್ರವಾದ ಅಮ್ಮ, ಸಾವಿನ ಸಮೀಪ ಹೋಗಿಬರುತ್ತ, ಮಗಳಿಗೆ ಬದುಕಿನ ಪಾಠಗಳನ್ನು ಕಲಿಸುತ್ತ, ಎಲ್ಲರ ತಾಯಾಗುತ್ತಾಳೆ, ದಾರ್ಶನಿಕಳಾಗುತ್ತಾಳೆ. ಇಲ್ಲಿನ ರೂಪಕ ಭಾಷೆಯ ಸೂಕ್ಷ್ಮ ಗದ್ಯವು ಕೆಲವೆಡೆ ಕವಿತೆ ಓದುವ ಅನುಭವ ಕೊಡುತ್ತದೆ. ಇಲ್ಲಿರುವ ವಿಷಾದ ಮತ್ತು ಉತ್ಕಟತೆಗಳು, ಸಾವಿನ ಸನ್ನಿಧಿಯಲ್ಲಿ ಚಿಗುರುವ ಜೀವನಮೀಮಾಂಸೆ ಆಗುತ್ತವೆ. - ಡಾ. ರಹಮತ್ ತರೀಕೆರೆ
ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯಾಗಿರುವ ಪೆರ್ನೆಯ ಅಬ್ದುಲ್ ರಶೀದ್ ಮತ್ತು ಆಯಿಶಾ ದಂಪತಿಯ ಮಗಳು. ಕಲ್ಲಡ್ಕ, ಪೆರ್ನೆ, ಉಪ್ಪಿನಂಗಡಿ, ಪುತ್ತೂರು ಗಳಲ್ಲಿ ವಿದ್ಯಾಭ್ಯಾಸ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವೀಧರೆ. ಗೃಹಿಣಿ. 2020ರಲ್ಲಿ ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ರಲ್ಲಿ ಮೊಗವೀರ ಸಾಹಿತ್ಯ ಪ್ರಶಸ್ತಿ, 2022ರಲ್ಲಿ ಸಮಾಜಮುಖಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಅಪ್ರಕಟಿತ ಕವನ ಸಂಕಲನಕ್ಕಾಗಿ ವಿದ್ಯಾಧರ ಪ್ರತಿಷ್ಠಾನ ಕೊಡಮಾಡುವ ದ.ರಾ. ಬೇಂದ್ರೆ ಸಾಹಿತ್ಯ ಪ್ರಶಸ್ತಿ ದೊರಕಿದೆ. ಇವರ 'ಕಡಲು ನೋಡಲು ಹೋದವಳು' ಕೃತಿಗೆ ಲಂಕೇಶ್ ಪ್ರಶಸ್ತಿ ಮತ್ತು ಅವ್ವ ಪ್ರಶಸ್ತಿ 2023ರಲ್ಲಿ ದೊರಕಿದೆ. 2023ರಲ್ಲಿ ಸಂಕಥನ 'ಒಡೆಯಲಾರದ ಒಡಪು' ಕಥಾಸಂಕಲನ ಪ್ರಕಟಿಸಿದೆ.
ಹದಿನಾರು ಹದಿನೇಳರ ಹುಡುಗಿಯ ಅಮ್ಮನಿಗೆ ಕ್ಯಾನ್ಸರ್ ಬಂದಾಗಿನ ಆಸ್ಪತ್ರೆ ವಾಸದ ಕತೆ. ಮುಸ್ಲಿಂ ಸಮುದಾಯದ ಬರಹಗಾರ್ತಿ ಆದ ಕಾರಣ ಆದಷ್ಟೂ 'ಗೆರೆ' ಮೀರದ ಹಾಗೆ ಪ್ರಾಮಾಣಿಕ ಅಭಿವ್ಯಕ್ತಿ ಇದೆ. ಆದರೆ ' ಪಾಪ, ಮುಸ್ಲಿಂ ಹಾಗಾಗಿ ಜಾಸ್ತಿ ಬರೆಯಲಾಗುವುದಿಲ್ಲ' ಎಂಬ ನಾವು ನೋಡುವ ರೀತಿ ಯಾವಾಗ ಬದಲಾಗುತ್ತದೆ? ಎಳಸು ಕಂಗಳ ಬರವಣಿಗೆ.
ಹದಿನಾರು ವರ್ಷದ ಹುಡುಗಿ ಅಮ್ಮಂಗೆ ಬಂದ ಕ್ಯಾನ್ಸರ್ ಅನ್ನು ಹೇಗೆ ಎದುರಿಸ್ತಾಳೆ ಅನ್ನುವ ಅನುಭವ ಕಥನ. ಅಪ್ಪನ ಬಗ್ಗೆ ಒಂದೆರೆಡು ಕಡೆ ಬಿಟ್ಟರೆ ಹೆಚ್ಚೇನು ಹೇಳಿಲ್ಲ. ಅಪ್ಪನ ಸಹಾಯ ಇರಲಿಲ್ಲವಾ ಗೊತ್ತಿಲ್ಲ. ಲೇಖಕಿಯು ಭೇಟಿಯಾದಂತಹ ಬೇರೆ ರೋಗಿಗಳ ಕಥೆಯೂ ಇದೆ. ಎಲ್ಲೂ ಲೇಕಖಿ ಋಣಾತ್ಮಕವಾಗಿ ಬರೆದಿದ್ದು ಕಾಣಲಿಲ್ಲ. ಎಂತಾ ಕಠಿಣ ಸಮಯದಲ್ಲೂ ಆತ್ಮ ವಿಶ್ವಾಸ ಕಳೆದು ಕೊಳ್ಳದೆ ಎದುರಿಸಿದ ಅವ್ರ ಆತ್ಮವಿಶ್ವಾಸಕ್ಕೆ ಸಲಾಂ.