ನಿಲ್ಲು ನಿಲ್ಲೇ ಪತಂಗ ಕಾದಂಬರಿ ನಿಮ್ಮನ್ನು ಒಂದೇ ಸಲಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಊರಿಗೆ ಹೊತ್ತೊಯ್ಯುತ್ತದೆ. ಅಲ್ಲಿ ಕರ್ವಾಲೋ ಚಿಕ್ಕಪ್ಪನಂತೆ ಕಾಣುವ ಫಣಿಕ್ಕರ್ ನಿಮಗೆ ಸಿಗುತ್ತಾರೆ. ಅವರ ಹುಡುಕಾಟದ ಹಾದಿಯಲ್ಲಿ ನೀವು ಊಹಿಸಿರದ ಅಪೂರ್ವ ಘಟನೆಯೊಂದು ನಡೆದು ಮೈತುಂಬ ಚಿಟ್ಟೆ ಮೂಡಿದಂತೆ ರೋಮಾಂಚನವಾಗುತ್ತದೆ. ಹರೀಶ್ ಕೇರ ಪುರಸೊತ್ತು ಸಿಕ್ಕಾಗೆಲ್ಲ ಕಾಡು ಸುತ್ತುತ್ತಿರುತ್ತಾರೆ. ಅವರಿಗೆ ಮನುಷ್ಯರಿಗಿಂತ ಮರಗಳೇ ಪ್ರಿಯ. ಮಾತಿಗಿಂತ ಮೌನವೇ ಆಪ್ಯಾಯಮಾನ. ಈ ಕತೆಯುದ್ದಕ್ಕೂ ಕಾಡಿಗಷ್ಟೇ ವಿಶಿಷ್ಟವಾಗಿರುವ ನೀರವ, ನಿಗೂಢ, ವಿಸ್ಮಯ ಮತ್ತು ವಿನೀತಗೊಳಿಸುವ ಗುಣ ದಟ್ಟ ಕಾಡಿನಂತೆ ಹಬ್ಬಿಕೊಂಡಿದೆ. ತಿಳಿನೀರಿನಂಥ ಭಾಷೆ, ಆಪ್ತರಂತೆ ಬಂದುಹೋಗುವ ಪಾತ್ರಗಳು, ಬೆರಗಿನ ಜತೆಗೇ ಎದುರಾಗುವ ಭಯವಿಹ್ವಲ ಸಂಗತಿಗಳು ಈ ಕಥನವನ್ನು ದೈನಿಕದ ಯಾತನಾಮಯ ಚಕ್ರಸುಳಿಯಿಂದ ಹೊರಗಿಟ್ಟಿವೆ. ಮುಟ್ಟಿದರೆ ಭಟ್ಟನೆ ನೀರಾಗಿಬಿಡುವ ಮಂಜುಹನಿ ನೆಲೆಸಿರುವ ಹುಲ್ಲುದಾರಿಯಲ್ಲಿ ಮುಂಜಾನೆ ಹೆಜ್ಜೆಹಾಕುತ್ತಾ ಹೋದಹಾಗೆ, ಎದುರಿನ ಕಣಿವೆಯಿಂದ ಇಷ್ಟಿಷ್ಟೇ ಮೂಡುವ ಸೂರ್ಯ ನಮ್ಮ ಚೈತನ್ಯವನ್ನು ಬೆಳಗುವಂತೆ, ಈ ಕತೆ ತೆರೆದುಕೊಳ್ಳುತ್ತಾ ಹೋದಂತೆ ಇನ್ನೊಂದು ಜಗತ್ತು ನಮ್ಮನ್ನು ಸ್ವಾಗತಿಸುತ್ತದೆ. ಈ ಮರುಳುಗೊಳಿಸುವ ಕದನಕ್ಕಾಗಿ ನಾನು ಹರೀಶ್ ಕೇರ ಅವರನ್ನು ಅಭಿನಂದಿಸುತ್ತೇನೆ. ಪೂರ್ಣಚಂದ್ರ ತೇಜಸ್ವಿ ನಮ್ಮನ್ನು ಅಷ್ಟೊಂದು ಪ್ರಭಾವಿಸದೇ ಹೋಗಿದ್ದರೆ ಇಂಥದ್ದೊಂದು ಕಾದಂಬರಿಯೇ ಸಾಧ್ಯವಾಗುತ್ತಿರಲಿಲ್ಲ. ಸಾಹಿತ್ಯ ಪರಂಪರೆಗೂ ಸಾಹಿತ್ಯಕ್ಕೂ ಇರುವ ಸಂಬಂಧವೇ ಅಂಥದ್ದು. ಇಂದು ಅರಳಿದ ಹೂವು ನಾಳೆ ಹುಟ್ಟಲಿರುವ ಹೂವಿನ ಗಿಡಕ್ಕೆ ಸಹಜಸ್ಫೂರ್ತಿ. - ಜೋಗಿ
ಪುಸ್ತಕವನ್ನು ಕೈಗೆತ್ತಿಕೊಂಡಾಗ ಅನಿಸಿದ್ದು: ಪಶ್ಚಿಮ ಘಟ್ಟದಲ್ಲಿ ಅಪರೂಪದ ಒಂದು ಚಿಟ್ಟೆ ಹುಡುಕುವ ತಂಡ, ಆ ತಂಡದಲ್ಲಿ ಕಾಣಿಸುವ ಪರಿಚಿತ ಮುಖಗಳು—ಇವೆಲ್ಲವೂ ಕರ್ವಾಲೋ ಪುಸ್ತಕದ ಛಾಯೆಯಂತೆ ಕಾಣಿಸಿತು. ಕಥೆ ಮುಂದೆ ಸಾಗುತ್ತಿದ್ದಂತೆ ಬೆಟ್ಟ ಕಾಡಿನ ನಡುವೆ ಸಾಗುವ ಪಯಣ, ಅಲ್ಲಿನ ಪ್ರಕೃತಿ ಸಂಪನ್ಮೂಲ, ನಾಗರಿಕತೆಯಿಂದ ಬಲು ದೂರ ಬದುಕುತ್ತಿರುವ ಜನಗಳು, ಅವರ ಸಮಸ್ಯೆಗಳು ಎಲ್ಲವನ್ನೂ ಲೇಖಕರು ಚೆನ್ನಾಗಿ ತೋರಿಸಿದ್ದಾರೆ. ಕರ್ವಾಲೋ ಓದಿರುವವರಿಗೆ ಇದು ಸ್ವಲ್ಪ ನೀರಸವೆನ್ನಿಸಿದರೂ, ಹೊಸ ಓದುಗರಿಗೆ ಖುಷಿ ಕೊಡುತ್ತದೆ.
ಮೊದಲಿಗೆ ಹೇಳಿಬಿಡುತ್ತೇನೆ, ಈ ಪುಸ್ತಕದ ಕವರ್ ಪೇಜ್ ಸೊಗಸಾಗಿದೆ. ಅಪಾರ ಅವರ design. ತೇಜಸ್ವಿ ಸ್ಕೂಟರ್, ಅದರ ಮೇಲೆ ಕೂತಿರುವ ಪತಂಗ, ಹವಾಯಿ ಚಪ್ಪಲಿ.. ಆಹಾ!
ಲೇಖಕರು ಮುನ್ನುಡಿಯಲ್ಲಿಯೇ ಸ್ಪಷ್ಟಪಡಿಸಿರುವಂತೆ, ಇದು ಪೂಚಂತೇ ಅವರಿಗೆ ಪ್ರೀತಿಯಿಂದ ಸಲ್ಲಿಸಿರುವ 'fan fiction tribute'. ಪುಟಗಳನ್ನು ಮಗುಚುತ್ತಾ ಹೋದಂತೆ ಈ ಕೃತಿ ನಮ್ಮನ್ನು ಸಹಜವಾಗಿಯೇ 'ಕರ್ವಾಲೋ' ಲೋಕಕ್ಕೆ ಕರೆದೊಯ್ಯುತ್ತದೆ. ಅದೂ ಕೂಡ ಜೀವವಿಕಾಸದ ಜಾಡನ್ನು ಹಿಡಿದು ಹೊರಡುವ ಕಥೆಯೇ.
* ಅಲ್ಲಿ ಹಾರುವ ಓತಿಯಾದರೆ, ಇಲ್ಲಿ ಪತಂಗ.
* ಅಲ್ಲಿ ಪ್ರೊ. ಕರ್ವಾಲೋ, ಇಲ್ಲಿ ಪ್ರೊ. ಪಣಿಕ್ಕರ್.
* ಅಲ್ಲಿನ ಮಂದಣ್ಣ (?) ಇಲ್ಲಿಯೂ ಇದ್ದಾನೆ!
ಇಲ್ಲಿ ತೇಜಸ್ವಿ ಅಭಿಮಾನಿಗಳಿಗೆ goosebumps ನೀಡುವ ಒಂದು ರೋಚಕ ಪ್ರಸಂಗವಿದೆ. ಆ ಕಥೆಯ ಗುಟ್ಟನ್ನು ಇಲ್ಲಿ ರಟ್ಟು ಮಾಡುವುದಿಲ್ಲ, ಅದನ್ನು ಪುಸ್ತಕದಲ್ಲಿ ಓದಿಯೇ ಸವಿಯಬೇಕು.
ಕಥೆಯ ನಿರೂಪಣೆ ಎಲ್ಲೂ ಅಡ್ಡದಾರಿ ಹಿಡಿಯದೆ ನೇರವಾಗಿ ಸಾಗುತ್ತದೆ. ಪಾತ್ರಗಳ ಆಳಕ್ಕೆ ಇನ್ನಷ್ಟು ಇಳಿದು ವಿಶ್ಲೇಷಣೆ ಮಾಡಿದ್ದರೆ ಕೃತಿಯ ತೂಕ ಮತ್ತಷ್ಟು ಹೆಚ್ಚುತ್ತಿತ್ತೇನೋ ಅನ್ನಿಸಿದ್ದು ಸುಳ್ಳಲ್ಲ. ಆದರೂ, ೧೨೦ ಪುಟಗಳ ಒಂದು ಕಿರು ಕಾದಂಬರಿಗೆ ಈ ಮಟ್ಟದ ವಿವರಣೆಗಳು ಸಂಪೂರ್ಣ ನ್ಯಾಯ ಒದಗಿಸಿವೆ.
ಹರೀಶ್ ಕೇರ ಅವರ “ನಿಲ್ಲು ನಿಲ್ಲೆ ಪತಂಗ” ಓದುತ್ತಿದ್ದರೆ ನಾವು ಚಾರ್ಮಾಡಿ ಘಾಟಿಯ ದಟ್ಟ ಕಾಡಿನಲ್ಲೇ ಅಲೆದಾಡಿದ ಅನುಭವವಾಗುತ್ತದೆ; ಕಣ್ಣೆದುರೇ ಎಲ್ಲೋ ಚಿಟ್ಟೆಗಳು ಹಾರಾಡುತ್ತಿರುವ ಭ್ರಮೆ ಮೂಡುತ್ತದೆ. ಕಾಡಿನ ಬಗೆಗಿರುವ ಲೇಖಕರ ಜ್ಞಾನವೂ ಕತೆಯಲ್ಲಿ ಎದ್ದು ಕಾಣುತ್ತದೆ. ಕತೆಯ ನಡುವೆ ರುಚಿಗೆ ತಕ್ಕಷ್ಟು ಉಣಬಡಿಸಿರುವ ಜೀವವಿಕಾಸದ ರೋಚಕ ಸಂಗತಿಗಳು, ಕಾಡಂಚಿನ ಜನರ ಬದುಕು ಹಾಗೂ ಮಾನವ-ವನ್ಯಜೀವಿ ಸಂಘರ್ಷದ ಎಳೆಗಳು ಕಾದಂಬರಿಯನ್ನು ಮತ್ತಷ್ಟು ಆಪ್ತವಾಗಿಸುತ್ತವೆ.
ಈ ವರ್ಷ ನಾನು ಓದಿದ ಮೊದಲ ಕೃತಿ.. ತೇಜಸ್ವಿ ಯವರಿಗೆ ಕೊಡುಗೆಯಾಗಿ ಈ ಪುಸ್ತಕವನ್ನು ಬರೆದಿದ್ದಾರೆ. ಒಂದು ರೀತಿಯ ಪತಂಗವನ್ನು ಹುಡುಕುವ ಗೋಜಿನಲ್ಲಿ ಚಾರ್ಮಾಡಿ ಘಾಟಿಯ ಬೆಟ್ಟಗಳ ನಡುವೆ ಹೋಗುವ ಒಂದು ವಿಜ್ಞಾನಿಗಳ ತಂಡ ಹಾಗೂ ಅವರಿಗೆ ಎದುರಾಗುವ ತಾಪತ್ರಯಗಳನ್ನು ಚೆನ್ನಾಗಿ ವಿವರಿಸಿದ್ದಾರೆ.. ಚಿಟ್ಟೆ,ಪತಂಗ,ಕೀಟ,ಮರ, ಸಸಿ,ನಿಸರ್ಗದ ಬಗ್ಗೆ ಭಾರಿ ಮಾಹಿತಿಯಿದೆ. ಒಂದು ಒಳ್ಳೆ ಓದು ..
150 ಪುಟಗಳ ಪುಟ್ಟ ಪುಸ್ತಕ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಗಿರಗಿರ ತಿರುಗಿಸಿ ಬಿಡತ್ತೆ. ಕಾಡನ್ನು ಆಳವಾಗಿ ಪ್ರೀತಿಸದೇ, ಅನುಭವಿಸದೇ ಇಂತಹದೊಂದು ವಿವರಣೆಯನ್ನು ಕಟ್ಟಿ ಕೊಡುವುದು ಅಸಾದ್ಯ. ಬರವಣಿಗೆಯಲ್ಲಿ ಕಾಡನ್ನು ತಂದ ರೀತಿಯೇ ಭಾರಿ ಚಂದ. ಬರೆಯುವಾಗಲೇ ಇಷ್ಟು ಹೇಳುವವರು ಎಷ್ಟು ಸ್ವತಃ ಅನುಭವಿಸಿರ ಬೇಕು ಅಂತ ಹೊಟ್ಟೆ ಕಿಚ್ಚಾಯಿತು.ಆದರೂ "ಪತಂಗದ" ವಿಚಾರ ಇನ್ನೂ ಸ್ವಲ್ಪ ವಿವರವಾಗಿ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸಿತು. ಪುಸ್ತಕ ಮುಗಿದರೂ ನಾನಿನ್ನೂ ಪತಂಗವನ್ನು ಹುಡುಕುತ್ತಲೇ ಇದ್ದೆ...
ಲೇಖಕರು ಹೇಳಿರುವಂತೆ ಈ ಕಾದಂಬ��ಿಯನ್ನು ಒಂದು Fan Fiction ಎಂದೇ ಕರೆಯಬಹುದು. ಈ ಕತೆಗೆ ತೇಜಸ್ವಿಯವರ ಸ್ಪರ್ಶವಿದೆ. ಅವರ ಕರ್ವಾಲೋ ಮತ್ತು ಕೊಂಚವಾಗಿ ಜುಗಾರಿ ಕ್ರಾಸ್ ಓದಿದ feel ಕೊಡುತ್ತೆ. ಅದಲ್ಲದೇ ಸುಮಾರು ವಿಚಾರಗಳ ಕುರಿತಾಗಿ ಕುತೂಹಲಕಾರಿ ಮಾಹಿತಿಯನ್ನು ನೀಡುತ್ತದೆ. ಒಂದೊಳ್ಳೆ 'ತೇಜಸ್ವಿ vibe' ಕಾದಂಬರಿ!