'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.
ಇನ್ನೊಂದು ಪುಸ್ತಕ ಓದಿದರೆ ಈ ಸರಣಿಯ ಶಿಖರಪ್ರಾಯ ಕೃತಿಯಾದ ದುರ್ಗಾಸ್ತಮಾನ ಓದುವುದಕ್ಕೆ ಅರ್ಹತೆ ಬರುತ್ತದೆ ಎಂದು ಮನಸಿನಲ್ಲೇ ಒಂದು ಸ್ವಗತ ಹೇಳಿಕೊಂಡು ಕಸ್ತೂರಿ ಕಂಕಣವನ್ನು ಕೈಗೆತ್ತಿಕೊಂಡೆ. ಪುಸ್ತಕಗಳು ಬಂದ ದಿನದಿಂದಲೂ ಒಂದು ವಿಶೇಷ ಕುತೂಹಲ ಉಳಿಸಿಕೊಂಡ ಪುಸ್ತಕವಿದು. ಸರಣಿಯ ಉಪಾಂತ್ಯವೆಂಬ ಕಾರಣಕ್ಕೋ ಅಥವಾ ಶೀರ್ಷಿಕೆಯೆಡೆಗಿನ ಸೆಳೆತಕ್ಕೋ ಗೊತ್ತಿಲ್ಲ. ಈ ಪುಸ್ತಕವನ್ನು ಬಹಳ ಪ್ರೀತಿಸಿದ್ದೆ. ಯಾವ ಪೂರ್ವನಿರ್ಧರಿತ ಮನಸ್ಸನ್ನು ಈ ಪುಸ್ತಕದೊಳಗೆ ಇಳಿದೆ. ತ.ರಾ.ಸುರವರು ನಿರೀಕ್ಷೆ ಹುಸಿಗೊಳಿಸಲಿಲ್ಲ. ಅವರಿಗೆ ಇನ್ನೊಂದು ನಮನ..!
ಈ ಹಿಂದಿನ ರಾಜ್ಯದಾಹ ಪುಸ್ತಕದಂತೆ ಈ ಕಸ್ತೂರಿ ಕಂಕಣವೂ ಕೂಡ ಒಂದು ಪುಸ್ತಕದ ಪ್ರಿಕ್ವೆಲ್. ಹೇಳಿದರೆ ರಸಭಂಗವಾಗಬಹುದು ಎಂಬ ಸಣ್ಣ ಅಳುಕಿದೆ. ಮುಂದೆ ಬರುವ ಸಾಲುಗಳಲ್ಲಿ ಯಾವ ಪಾತ್ರದ ಹೆಸರನ್ನು ತೆಗೆದುಕೊಳ್ಳದೇ ಇದೇ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಮತ್ತು ರೋಚಕತೆಯನ್ನು ನಿಮಗೂ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಕೊಲೆ, ಅಕಾಲಿಕ ಮರಣ ಅಥವಾ ರಾಜಕೀಯ ಅತಂತ್ರದ ಥೀಮ್ ಬಿಟ್ಟು ಹೊಸದೊಂದು ವಿಷಯದ ಮೂಲಕ ಲೇಖಕರು ಓದುಗರಿಗೆ ಹೊಸತನದ ಸಿಹಿಯನ್ನು ಉಣಬಡಿಸಿದ್ದಾರೆ. ಸೀರ್ಯದ ನಾಯಕರು ದುರ್ಗದ ನಾಯಕರ ಮಗಳನ್ನು ತಮ್ಮ ಸೊಸೆಯನ್ನಾಗಿ ಮಾಡಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿ ಕಳಿಸುವ ರಾಜಸದೊಂದಿಗೆ ಶುರುವಾಗುವ ಕಥೆಯಲ್ಲಿರುವ ತಿರುವುಗಳು ಹೀಗೆ ನಡೆದಿತ್ತೇನೋ ದುರ್ಗದ ಇತಿಹಾಸ ಎಂದು ಓದುಗನ ಹುಬ್ಬೇರಿಸುವಂತೆ ಮಾಡುತ್ತದೆ.
ದುರ್ಗದ ಸಾಮಂತರಾದ ಹಿರಿಯೂರಿನ ಪಾಳೇಗಾರರ ರಾಜನಿಷ್ಠೆ, ಸೀರ್ಯ ಮತ್ತು ತರೀಕೆರೆಯವರ ಪ್ರಲೋಭನೆಗಳು, ರಾಜಕೀಯ ಒಳಸಂಚುಗಳ ಕುರಿತು ಕಲ್ಪನೆಗಳಿಗೆ ಬಣ್ಣ ಬಳಿಯುತ್ತಾ ೨೭೦+ ಪುಟಗಳನ್ನು ಒಂಚೂರು ಸುಸ್ತಾಗಿಸದೇ ಒಂದೇ ಓದಿಗೆ ಮುಗಿಸುವಷ್ಟು ಸೊಗಸಾಗಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಇಲ್ಲಿಯೂ ದಳವಾಯಿಗಳಿದ್ದಾರೆ, ಪ್ರಧಾನಿಗಳು ತರ್ಕಬದ್ಧವಾದ ಚಿಂತನೆಗಳು ಓದುಗನಿಗೆ ಔತಣದಂತಿವೆ. ವಿವಾಹದ ವಿನಂತಿಯ ರಾಜಸದಿಂದ ಶುರುವಾದ ಕಥೆಯ ಸರಿತೆ ಎಲ್ಲೆಲ್ಲು ಹರಿಯಿತು? ಪುಸ್ತಕ ನಿಮಗಾಗಿ ಉತ್ತರಿಸಲಿದೆ.
ಮಣ್ಣ ಮೇಲಿನ ಮೋಹದಿಂದ ದುಷ್ಪ್ರೇರಿತರಾಗಿ ಯಾವ ಮಟ್ಟಕ್ಕೆ ಇಳಿಯಬಲ್ಲರು ಎಂಬುದು ತಿಳಿಯಬೇಕಾದರೇ ಈ ಇಡೀ ಸರಣಿಯನ್ನು ಆವಾಹಿಸಿಕೊಳ್ಳಿ..!
ಇನ್ನೊಂದು ಅಕ್ಷರ ಹೆಚ್ಚು ಬರೆದರೂ ಉತ್ಸಾಹದಲ್ಲಿ ಕಥೆಯನ್ನು ಹೇಳಿಬಿಡಬಹುದು. ನೀವೆನಾದರೂ ದುರ್ಗಾಸ್ತಮಾನ ಓದಬೇಕು ಎಂದುಕೊಂಡಿದ್ದರೇ ಈ ಏಳು ಪುಸ್ತಕಗಳನ್ನು ಓದಿ ನಂತರ ಆ ದೈತ್ಯ ಕೃತಿಯನ್ನು ಶುರುಮಾಡಿ. ಆಗ ದುರ್ಗಾಸ್ತಮಾನ ಕೃತಿಯನ್ನು ಮತ್ತಷ್ಟು ಆಸ್ವಾದಿಸಬಹುದು, ಕನ್ನಡದ ಆಧುನಿಕ ಗದ್ಯಶಿಲ್ಪಿ ತ.ರಾ.ಸುಬ್ಬರಾಯರನ್ನು ಆರಾಧಿಸಬಹುದು.
ಎಂದಿನಂತೆ, ಈ ಪುಸ್ತಕ ಓದಿದ್ದರೆ ನಮ್ಮೊಂದಿಗೂ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ! ಶುಭವಾಗಲಿ
ವಿವಾಹ ! ಎರಡು ಕುಟುಂಬಗಳನ್ನು, ಹಲವು ಮನಸುಗಳನ್ನು ಬೆಸೆಯುವ ಕಾರ್ಯ. ಎಲ್ಲರ ಒಳಿತಿಗಾಗಿ ಹಲವು ದೃಷ್ಟಿಕೋನದಿಂದ ಪರಾಮರ್ಶಿಸಬೇಕಾದ ಮಹತ್ಕಾರ್ಯ. ಇನ್ನು ರಾಜ ಮನೆತನಗಳ ವಿವಾಹ ಗಳ ಬಗ್ಗೆ ಹೇಳಬೇಕೇ ?! ಸ್ವಪ್ರತಿಷ್ಠೆಗೋಸ್ಕರ ಕೆಲ ವಿವಾಹ ಗಳಾದರೆ, ಒಳ ಸಂಚಿನ ರಾಜಕಾರಣಕ್ಕಾಗಿ ಕೆಲ ಸಂಬಂಧಗಳು ಹುಡುಕಿಕೊಂಡು ಬರುತ್ತವೆ. ದುರ್ಗದ ದಂತಕಥೆಗಳು ಕಾದಂಬರಿ ಸರಮಾಲೆಯ ಏಳನೆಯ ಮಣಿ ‘ಕಸ್ತೂರಿ ಕಂಕಣ’ ದಲ್ಲೀ ಇಂತಹದೇ ಒಂದು ವಿವಾಹದ ಸೋಗಿನಲ್ಲಿ ನಡೆಯುವ ಕುಟಿಲ ರಾಜಕೀಯದ ರುದ್ರ ನರ್ತನವಿದೆ !! . ಕಸ್ತೂರಿ ರಂಗಪ್ಪ ನಾಯಕರ ಮಗಳ ಜಾತಕವನ್ನು ಕೇಳಿಕೊಂಡು ಸೀರ್ಯಾದ ನಾಯಕರು ಕಳಿಹಿಸುವ ಪತ್ರದಿಂದ ಆರಂಭವಾಗುವ ಕಥೆ, ಯೋಚನೆಗೂ ನಿಲುಕದ ತಿರುವನ್ನು ಪಡೆದು ಸರ್ಜೇ ನಾಯಕರ ರೌದ್ರಾವತಾರದೊಂದಿಗೆ ಕೊನೆಗೊಳ್ಳುತ್ತದೆ. ತರೀಕೆರೆಯ ವೆಂಕಪ್ಪಯ್ಯ ನ ಕುಟಿಲ ರಾಜಕಾರಣ, ಹಿರಿಯೂರಿನ ಪಾಳೇಗಾರ ಕೆಂಚಣ್ಣ ನಾಯಕರ ನಿಷ್ಠೆ, ಕಸ್ತೂರಿ ರಂಗಪ್ಪ ನಾಯಕರ ಭ್ರಾತೃತ್ವ , ಸರ್ಜಾ ನಾಯಕರ ಬಿಸಿ ರಕ್ತ - ಇವೇ ಈ ಕಾದಂಬರಿಯ ಅಡಿಪಾಯ. . 272 ಪುಟಗಳನ್ನು ಎಲ್ಲಿಯೂ ಸಪ್ಪೆಯಾಗಿಸದೆ ಬಲು ರೋಚಕವಾಗಿ ಪೋಣಿಸುದ್ದು ಲೇಖಕರ ಜಾಣ್ಮೆಯೇ ಸರಿ ! ತರಾಸು ರಿಗೇ ಮಗದೊಮ್ಮೆ ನಮಸ್ಕರಿಸುತ್ತಾ, ಇಲ್ಲಿಯ ವರೆಗೆ ಏಳು ಮೆಟ್ಟಿಲನ್ನು ಒಂದೇ ಉಸಿರಿಗೆ ಏರಿ ಕೊನೆಯ ಹಂತವಾದ , ಈ ಕಾದಂಬರಿ ಮಾಲೆಯ ಶಿರೋಮಣಿಯಾದ ‘ದುರ್ಗಾಸ್ತಮಾನ’ ವನ್ನು ಕಾಣಲು ಗಟ್ಟಿ ಮನಸು ಮಾಡಿಕೊಂಡು ಹೊರಟಿದ್ದೇನೆ. ಕೊನೆಯ ಬಾರಿ ದುರ್ಗದಲ್ಲಿ ಅಲೆದಾಡಿ ಮತ್ತೆ ಸಿಗುವೇ!
ನಮ್ಮ ಭಾರತದ ಇತಿಹಾಸದ ಒಂದು ವಿಶ್ಲೇಷಣೆ ಮಾಡ್ತಾ ಹೋದರೆ, ಮಧ್ಯಕಾಲ ಮತ್ತು ಮಧ್ಯಕಾಲದ ನಂತರದ ಭಾರತದ ಸಂದರ್ಭಗಳಲ್ಲಿ, ವಿವಾಹವು ಅತ್ಯಂತ ಪ್ರಮುಖ ಪಾತ್ರವಹಿಸಿದೆ. ಆವಾಗ ಏನು ಇಂದಿಗೂ ಅದು ಸತ್ಯವೇ! ರಾಜಕೀಯ, ಶಾಂತಿ ಒಪ್ಪಂದಗಳು ಮತ್ತು ಸಂಧಾನಗಳಿಗೆ ಕಾರಣವಾಗಿದೆ ಮತ್ತು ಅದೆಷ್ಟೋ ಸಂಕೀರ್ಣ ಪರಿಸ್ಥಿತಿಯಲ್ಲಿ ಮದುವೆ ಹಲವು ಯುದ್ಧಗಳಿಗೆ ಕಾರಣವೂ ಆಗಿದೆ.
ಚಿತ್ರದುರ್ಗದ ಇತಿಹಾಸದಲ್ಲಿ ನೆಡೆದ ಇಂತಹದ್ದೊಂದು ಪ್ರಮುಖ ವಿವಾಹದ ಆಮಂತ್ರಣದ ಪ್ರಸಂಗವನ್ನ ತ. ರಾ. ಸು. ಅವರು ತಮ್ಮ ಈ ಸರಣಿ ಕಾದಂಬರಿಯಲ್ಲಿ ವಿವರಿಸಿದ್ದಾರೆ. ಸಿರ್ಯಾದ ನಾಯಕ, ತರಿಕೇರೆಯ ನಾಯಕರ ಬೆಂಬಲದಿಂದ, ಕಸ್ತೂರಿ ರಂಗಪ್ಪ ನಾಯಕರಿಗೆ ತನ್ನ ಮಗನಿಗೆ ನಾಯಕರ ಮಗಳನ್ನು ಬಯಸಿ ಜಾತಕವನ್ನ ಕಳುಹಿಸುವಂತೆ ಮನವಿ ಮಾಡುತ್ತಾನೆ. ಈ ಪ್ರಸಂಗದಲ್ಲಿ; ಸಿರ್ಯಾದವರು ಕುತಂತ್ರದಿಂದ ನೆಡೆಸುವ ರಾಜಕೀಯ ಷಡ್ಯಂತ್ರಗಳು ಮತ್ತು ಅವರದ್ದೇ ಪತನ, ರಾಜನಿಷ್ಠ ಸರ್ಜಾ ನಾಯಕರ ಧೈರ್ಯ ಮತ್ತು ಚಾತುರ್ಯ ಹಾಗೂ ಹಿರಿಯೂರಿನ ಕೆಂಚಣ್ಣ ನಾಯಕರ ಪಾಳೆಯಗಾರರ ಮೇಲಿನ ಗೌರವಾಭಕ್ತಿಗಳನ್ನ ಆಧುನಿಕ ಗದ್ಯ ಶಿಲ್ಪಿ ತ. ರಾ. ಸು.ರವರು ಅತ್ಯಂತ ರೋಚಕವಾಗಿ, ಭಾವನಾತ್ಮಕವಾಗಿ ಬರೆದಿದ್ದಾರೆ. ಎಂತಹ ಓದುಗರನ್ನೂ ಈ ಕಾದಂಬರಿಯು ಸೆಳೆಯುತ್ತದೆ. ಅದರಲ್ಲಿ ಬೇರೆ ಮಾತಿಲ್ಲ!
ತ.ರಾ.ಸು ಅವರ ಚಿತ್ರದುರ್ಗ ಇತಿಹಾಸದ ಕುರಿತ ಕಾದಂಬರಿ ಮಾಲೆಯ ಏಳನೆಯ ಕೃತಿ.
ಸುಮಾರು ಐದು ದಶಕಗಳ ಕಾಲ ಆಳಿ ಮುಂದಿನ ತಲಮಾರುಗಳಿಗೆ ಭದ್ರ ಬುನಾದಿಯನ್ನು ಹಾಕಿದ ಕಸ್ತೂರಿ ರಂಗಪ್ಪನಾಯಕರು ಚಿತ್ರದುರ್ಗ ಕಂಡ ಶ್ರೇಷ್ಠ ಪಾಳಯಗಾರರಲ್ಲಿ ಮೊದಲಿಗರು.
ಸೀರ್ಯ ಮತ್ತು ತರೀಕೆರೆಯವರ ಷಡ್ಯಂತ್ರದ ರಾಜಕಾರಣ, ಅದಕ್ಕೆ ಚಿತ್ರದುರ್ಗ ಮತ್ತು ಹಿರಿಯೂರಿನವರ ಪ್ರತಿತಂತ್ರ, ಈ ಕಾದಂಬರಿಯ ಮುಖ್ಯ ವಸ್ತು. ಒಂದು ಪತ್ತೇದಾರಿ ಕಾದಂಬರಿಯ ಹಾಗೆ ಓದಿಸಿಕೊಂಡು ಹೋಗುತ್ತದೆ.
ಬೇಡದ ವಿವಾಹದ ಪ್ರಸ್ತಾವನೆಯ 'ರಂಗಸಿದ್ಧತೆ'ಯಾಗಿ, ಆ 'ವಿವಾಹದ ಊರುಳು' ಸೀರ್ಯದವರ ಪಾಲಿಗೆ ಮೃತ್ಯುವಾಗಿ, ಕೊನೆಗೆ 'ಕಸ್ತೂರಿ ಕಂಕಣ'ದಿಂದ ಸೀರ್ಯದವರ ವಂಶ ನಿರ್ವಂಶವಾಗುತ್ತದೆ.
ಇಲ್ಲಿ ಹಿರಿಯೂರಿನ ಪಾಳೆಯಗಾರ ಕೆಂಚಣ್ಣ ನಾಯಕರ ನಿಷ್ಠತೆ ಮತ್ತು ನಾಯಕತ್ವ ಗಮನಾರ್ಹ.