ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು.
ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ (ಪ್ರಬಂಧಗಳು), ಪ್ರಪಂಚ ಪುಸ್ತಕ (ವಿಮರ್ಶಾ ಲೇಖನಗಳು), ಪಂಡಿತ ಭೀಮಸೇನ ಜೋಶಿ (ವ್ಯಕ್ತಿಚಿತ್ರ), ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು, ಹಾರಿಕೊಂಡು ಹೋದವನು (ಅನುವಾದಿತ ಕಥೆಗಳು), ವೆನಿಸ್ಸಿನಲ್ಲಿ ಸಾವು, ಹಳ್ಳಿ, ಪೋಸ್ಟ್ ಮ್ಯಾನ್ (ಅನುವಾದಿತ ಕಾದಂಬರಿಗಳು), ಮಾಸ್ಟರ್ ಬಿಲ್ಡರ್ (ಅನುವಾದಿತ ನಾಟಕ), ಶತಮಾನದ ಸಣ್ಣಕತೆಗಳು, ಸಣ್ಣಕತೆ 1983, ಕನ್ನಡ ಅತಿ ಸಣ್ಣಕತೆಗಳು, ನಾದದ ನವನೀತ, ಬೆಸ್ಟ್ ಆಫ್ ಕೇಫ (ಸಂಪಾದಿತ ಕೃತಿಗಳು).
೨೦೨೬ ರಲ್ಲಿ ನನಗಿಷ್ಟವಾದ ಪ್ರಕಾರವಾದ ಕತೆ ಕಾದಂಬರಿಗಳನ್ನಷ್ಟೇ ಅಲ್ಲದೆ ಪ್ರಬಂಧ, ಲೇಖನ, ಬಿಡಿ ಬಿರಹಗಳನ್ನೂ ಒಂದಷ್ಟು ಓದಬೇಕು ಎಂದು ತೀರ್ಮಾನಿಸಿ ಯಾರ ಪ್ರಬಂಧಗಳಿಂದ ಶುರುವಿಡಬೇಕು ಎನ್ನುವ ಹುಡುಕಾಟದಲ್ಲಿರಬೇಕಾದರೆ ಪ್ರಮುಖವಾಗಿ ನನಗೆ ಕೇಳಿ ಬಂದದ್ದು ಎಸ್. ದಿವಾಕರ್ ಅವರ ಹೆಸರು. ಇವರ “ನಾಪತ್ತೆಯಾದ ಗ್ರಾಮಾಫೋನು” ಪ್ರಬಂಧ ಸಂಕಲನ ಓದೋಣ ಅಂದುಕೊಳ್ಳುತ್ತಿದ್ದವನು ಅದ್ಯಾಕೋ ಮೊದಲು ಕತೆಗಳು ಓದಿಬಿಡೋಣ ಎಂದು ಕೈಗೆತ್ತಿಕೊಂಡಿದ್ದು “ಇತಿಹಾಸ” ಎನ್ನುವ ಕಥಾಸಂಕಲನ. ಎಸ್. ದಿವಾಕರ್ ಅವರು ಸಣ್ಣ ಕತೆಗಳಿಗೆ ಹೆಸರುವಾಸಿ, ಬಹಳಷ್ಟು ಸಣ್ಣ ಕತೆಗಳನ್ನ ಕನ್ನಡಕ್ಕೆ ಅನುವಾದಿಸಿದ್ದಾರೆ, ಕನ್ನಡದ ಸಣ್ಣ ಕತೆಗಳ ಸಂಪಾದಕರೂ ಹೌದು. ವಿಮರ್ಶೆ ಮತ್ತು ಕಾವ್ಯ ಪ್ರಕಾರಕ್ಕೂ ಇವರ ಕೊಡುಗೆಯಿದೆ.
ಪುಸ್ತಕದ ಮುಖಪುಟ ಮತ್ತು ಶೀರ್ಷಿಕೆಯನ್ನು ನೋಡಿ, ಬಹುಶಃ ಇಲ್ಲಿ ಇತಿಹಾಸದ ಕಥೆಗಳಿರಬಹುದು ಎಂದು ಊಹಿಸಿದ್ದೆ. ಸಾಮಾನ್ಯವಾಗಿ ಕಥಾಸಂಕಲನಗಳಿಗೆ ಅದೊರೊಳಗಿನ ಒಂದು ಕತೆಯ ಶೀರ್ಷಿಕೆಯನ್ನೇ ಪುಸ್ತಕದ ಶೀರ್ಷಿಕೆಯನ್ನಾಗಿಸುತ್ತಾರೆ, ಇಲ್ಲೂ ಅದೇ ಆಗಿದೆ.
ಈ ಸಂಕಲನದಲ್ಲಿ ಎರಡು ಭಾಗಗಳಿವೆ, ಮೊದಲ ಭಾಗದಲ್ಲಿ ಅಸ್ತಿತ್ವವಾದಿ ದೃಷ್ಟಿಕೋನದ ಮತ್ತು ಮಾನವೀ ಜೀವನವನ್ನು ಚಿತ್ರಿಸುವ, ವಾಸ್ತವದ ಕ್ರೂರತೆಯನ್ನ, ಹೃದಯವಂತಿಕೆಯನ್ನ, ಹೃದಯಹೀನತೆಯನ್ನ ತೋರಿಸುವ ಕಥೆಗಳಿವೆ. ಇನ್ನೂ ಎರಡನೇ ಭಾಗದಲ್ಲಿ ಇರುವುದು ಫ್ಯಾಂಟಸಿ ಕತೆಗಳು, ಕಲ್ಪನಾಚಿತ್ರವುಳ್ಳ ಕತೆಗಳಾದರೂ ಅವುಗಳಲ್ಲಿ ಕಾಣಿಸುವುದು ಸಾಮಾಜಿಕ ಕಳಕಳಿ ಮತ್ತು ಮೂಲಭೂತ ಮಾನವೀ ಕಾಳಜಿ.