ಛಂದೋಬದ್ಧವಾದ ರಚನೆಗಳು ತೀರ ವಿರಳವಾಗಿರುವ ಈಗಿನ ದಿನಗಳಲ್ಲಿ, ಈ ಬಗೆಯ ಕೃತಿಯು ಅತ್ಯಂತ ಸ್ವಾಗತಾರ್ಹವಾದದ್ದು.
ಇದರಲ್ಲಿ, ಲೇಖಕರ ಸ್ವಂತ ರಚನೆಯ ಸುಭಾಷಿತಗಳಷ್ಟೇ ಅಲ್ಲದೆ, ಸಂಸ್ಕೃತದ ಅನೇಕ ಸುಭಾಷಿತಗಳೂ, ವಿವೇಕ ಚೂಡಾಮಣಿ, ಶೂದ್ರಕ, ಭಾಸರಂತಹ ಕವಿ/ನಾಟಕಕಾರರ ಕೃತಿಗಳಿಂದ, ಅಷ್ಟೇ ಅಲ್ಲದೆ ಬೇರೆಬೇರೆ ಭಾಷೆಗಳ ಮೂಲದಿಂದ ಆಯ್ದ ಆಣಿಮುತ್ತುಗಳೂ ಕನ್ನಡದ ರೂಪವನ್ನು ಪಡೆದಿವೆ. ಇದು ಲೇಖಕರ ವಿದ್ವತ್ತಿಗೂ, ವ್ಯುತ್ಪತ್ತಿಗೂ ಪ್ರಮಾಣವಾಗಿದೆ. ಅವರು ತಿಳಿಯಾದ ಭಾಷೆ, ಸೊಗಸಾದ ಶೈಲಿಯಲ್ಲಿ, ಸರಳವಾದ ಮಾತುಗಳಲ್ಲಿಯೇ ಜೀವಬೋಧಕವಾದ ಸೂಕ್ತಿಗಳನ್ನು ಆತ್ಮೀಯವೆನಿಸುವಂತೆ ಹೇಳುವ ಪರಿ ತುಂಬಾ ಹೃದ್ಯವೆನಿಸುತ್ತದೆ.
ಕಾವ್ಯಕ್ಕೆ ಯುಕ್ತವಾದ ಲಯವನ್ನೂ, ಛಂದೋನಿಯಮಗಳನ್ನೂ ಪಾಲಿಸಿರುವುದರಿಂದ ಇಲ್ಲಿಯ ಪದ್ಯಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಪುಸ್ತಕದ ಮುನ್ನುಡಿಯಲ್ಲಿ, ಇಲ್ಲಿ ಬಳಕೆಯಾಗಿರುವ ಚೌಪದೀ ಛಂದಸ್ಸಿನ ಕಿರುಪರಿಚಯವು ಕಾವ್ಯ ರಚನಾಸಕ್ತರಿಗೆ ಬಹಳ ಪ್ರಯೋಜನಕಾರಿ. ಟ್ವಿಟ್ಟರಿನಲ್ಲಿ ಇವರ ರಚನೆಗಳಿಂದ ಪ್ರಭಾವಿತರಾಗಿ, ಹತ್ತಾರು ಜನರು ಚೌಪದಿಗಳನ್ನು ರಚಿಸಲು ತೊಡಗಿಕೊಂಡದ್ದನ್ನು ನಾನೇ ಕಂಡಿದ್ದೇನೆ. ಆ ದೃಷ್ಟಿಯಿಂದ ಕೂಡ ಈ ಕೃತಿಯು ಬಹಳ ವಿಶಿಷ್ಟವೆನಿಸಿದೆ. ಇಲ್ಲಿಯ ಸುಭಾಷಿತಗಳ ಸಾರವನ್ನು ಯಥೋಚಿತವಾಗಿ ಜೀವನದಲ್ಲಿ ಅಳವಡಿಸಿಕೊಳ್ಳುವುದಷ್ಟೇ ಅಲ್ಲದೆ, ಈ ಮುಕ್ತಕಗಳ ಸ್ಫೂರ್ತಿಯಿಂದ ಇನ್ನೂ ಅನೇಕರು ಉತ್ತಮವಾದ ಕಾವ್ಯರಚನೆಯಲ್ಲಿ ತೊಡಗಲಿ ಎಂದು ಆಶಿಸುತ್ತೇನೆ.