Well, “ಹೋರಾಟದ ಹಾದಿ" is easily the best biography I’ve read in my life. H.N’s life is an inspiration for everyone who wish to excel in any walk of life — beating the odds. H.N, a village kid, whose primary education was in Kannada, went on to obtain his Phd from Ohio university, in the U.S and also served as a professor for a year at the Illinois university, has reiterated throughout this life that nothing is impossible. He later rose the position of the vice-chancellor of the Bangalore University as well. Well, isn’t his life nothing short of a miracle ? This 500 pages book is worth a read. Go for it, it’s engrossing. You’ll feel proud to be a Kannadiga !!
ಎಚ್. ನರಸಿಂಹಯ್ಯನವರು ಅತ್ಯಂತ ಪ್ರಾಮಾಣಿಕವಾಗಿ ತಮ್ಮ ಆತ್ಮಚರಿತ್ರೆಯನ್ನು ಬರೆದಿದ್ದಾರೆ ಎನ್ನುವುದಷ್ಟೇ ಅಲ್ಲದೆ, ಈ ಪುಸ್ತಕ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುವುದು ಅದರ ಇನ್ನೊಂದು ಹೆಗ್ಗಳಿಕೆ. ಓರ್ವ ವ್ಯಕ್ತಿ ತಮ್ಮ ಒಂದು ಜೀವಮಾನದಲ್ಲಿ ಇಷ್ಟೆಲ್ಲಾ ಮಾಡಲು ಸಾಧ್ಯವಾ ಎಂದು ಆಶ್ಚರ್ಯ ಪಡುವಷ್ಟು ಸಾಧನೆಗಳನ್ನು ತಮ್ಮ ಸರಳ ಜೀವನದಲ್ಲಿ ಮಾಡಿ ತೋರಿಸಿದ ಧೀಮಂತ ವ್ಯಕ್ತಿ ಎಚ್. ಎನ್. ಇವರನ್ನು ಅನುಸರಿಸುವುದು ಕಷ್ಟಸಾಧ್ಯ, ಆದರೆ ಇವರ ವ್ಯಕ್ತಿತ್ವದಿಂದ ಸ್ವಲ್ಪವಾದರೂ ಸ್ಫೂರ್ತಿ ಪಡೆಯಬಹುದೇನೋ ಎನ್ನುವ ಒಂದು ಆಶಯ, ಅಷ್ಟೇ.
#ಪರಿಚಯ_೩೨_೨೦೨೬ ಕೃತಿ: ಹೋರಾಟದ ಹಾದಿ ಲೇಖಕರು: ಡಾ.ಎಚ್.ನರಸಿಂಹಯ್ಯ ಪ್ರಕಾಶಕರು: ಅಭಿನವ ಪ್ರಕಾಶನ, ಬೆಂಗಳೂರು
ಕೆಲವೊಂದು ಪುಸ್ತಕಗಳು ಗ್ರಂಥಾಲಯದಲ್ಲಿ ಅಥವಾ ಮನೆಯ ಕಪಾಟಿನ ಸಾಲಿನಲ್ಲಿ ಪದೇ ಪದೇ ಕಣ್ಣಿಗೆ ಬಿದ್ದು ನನ್ನನ್ನು ಎತ್ತಿಕೋ ಎನ್ನುತ್ತಿರುತ್ತವೆ. ಕೆಲವೊಮ್ಮೆ ಹಾಗೇ ಪಕ್ಕಕ್ಕೆ ಸರಿಸಿ, ಅಲ್ಲಲ್ಲಿ ಕಣ್ಣಾಡಿಸಿ ಮತ್ತೆ ವಾಪಸ್ಸು ಇಡುವುದು ಮಾಮೂಲಿಯಾಗಿ ಎಲ್ಲಾ ಓದುಗರ ಕೆಲಸ. ಹೀಗೆ ಹಲವು ಸಲ ಪುನರಾವರ್ತಿತವಾಗಿ ಗಟ್ಟಿ ಮನಸ್ಸಿನಿಂದ ಪುಸ್ತಕವನ್ನು ಓದಿ ಮುಗಿಸಿದಾಗ, ಅಯ್ಯೋ… ಇದನ್ನು ಓದಲು ಇಷ್ಟೇಕೆ ತಡಮಾಡಿದೆ ಎಂದು ಹಳಹಳಿಸುತ್ತೇವೆ ನೋಡಿ, “ಹೋರಾಟದ ಹಾದಿ” ಎಂಬ ಆತ್ಮಕಥನ ಈ ವರ್ಗಕ್ಕೆ ಸೇರುತ್ತದೆ. ಸಾಮಾನ್ಯವಾಗಿ ಇಂತಹ ಕೃತಿಗಳನ್ನು ಸ್ವಲ್ಪ ಮುಂಚೆ ಓದಿದ್ದರೆ ಇನ್ನಷ್ಟು ಸಂವೇದನಾಶೀಲತೆಯನ್ನು, ಬದುಕನ್ನು ಅನುಭವಿಸುವ ದೃಷ್ಟಿಕೋನವನ್ನು, ಬದುಕಿನ ಉದ್ದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳಲು ನೆರವಾಗುತ್ತಿತ್ತೇನೋ ಎಂಬುದು ಈ ನಿರಾಶೆಯ ಮೂಲ.
ನರಸಿಂಹಯ್ಯ ಎಂಬ ಹಳ್ಳಿಹುಡುಗ ಡಾ. ಎಚ್. ನರಸಿಂಹಯ್ಯನವರಾಗಿ, ತಾವು ಓದಿದ ಶಾಲೆಯಲ್ಲಿ ಅಧ್ಯಾಪಕನಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಮೇಲ್ಮನೆಯ ಶಾಸಕರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮತ್ತು ಒಂದು ಹಂತದಲ್ಲಿ ರಾಷ್ಟ್ರಪತಿ ಚುನಾವಣೆಗೆ ಹೆಸರು ಪ್ರಸ್ತಾಪವಾಗುವವರೆಗೆ ಬೆಳೆದು ಬಂದ ದಾರಿ ಇದೆಯಲ್ಲ, ಅದೊಂದು ಅದ್ಭುತ ಪಯಣ. ಕಡುಬಡತನದಲ್ಲಿನ ಈ ಹುಡುಗ ಗೌರಿಬಿದನೂರಿನ ಸಮೀಪದ ಹೊಸೂರು ಎಂಬ ಗ್ರಾಮದಿಂದ ನಡೆದುಕೊಂಡು ಬೆಂಗಳೂರು ಸೇರಿ, ಶಿಕ್ಷಣವೇ ತನ್ನನ್ನು ಮೇಲೆತ್ತಲು ಸಾಧ್ಯ ಎಂದು ಅಚಲವಾಗಿ ನಂಬಿಕೊಂಡು, ಒಂದೊಂದೇ ಹಂತಗಳನ್ನು ದಾಟುತ್ತಾ,ಅಮೆರಿಕೆಯಲ್ಲಿ ಪಿ.ಎಚ್.ಡಿ. ಪದವಿ ಪಡೆದುಕೊಂಡು ತನಗೆ ಬದುಕು ಕೊಟ್ಟ ಸಂಸ್ಥೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟ ಈ ಯಶೋಗಾಥೆ ಸ್ಫೂರ್ತಿಯನ್ನು ಉಕ್ಕಿಸುತ್ತದೆ. ತನ್ನ ವೈಯಕ್ತಿಕ ಕಷ್ಟನಷ್ಟಗಳನ್ನು ಬದಿಗಿಟ್ಟು “ಕ್ವಿಟ್ ಇಂಡಿಯಾ” ಚಳುವಳಿಯಲ್ಲಿ ಭಾಗವಹಿಸಿ, ಜೈಲು ಪಾಲಾದಾಗ ಅವರ ಪದವಿ ಕೋರ್ಸ್ ನಿಂತೇ ಹೋಗುತ್ತದೆ. ಅಲ್ಲಿಂದ ಮುಂದೆ ಪದವಿಯನ್ನು ಗಳಿಸಿ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ “ಮೈಸೂರು ಚಲೋ” ಚಳುವಳಿಗೆ ಧುಮುಕಿದರು. ಈ ಎರಡೂ ಬಹುಮುಖ್ಯವಾದ ಕಾಲಘಟ್ಟದಲ್ಲಿ ತನ್ನ ವೈಯಕ್ತಿಕ ಸಮಸ್ಯೆಗಳು ಬಗೆಹರಿದರೆ ಸಾಕು ಎಂದು ಅವರು ಸುಮ್ಮನಿರಬಹುದಿತ್ತು. ಆದರೆ ಅವರಲ್ಲಿ ಇದ್ದ ಸ್ಪಷ್ಟತೆ, ನಿಖರತೆಗಳನ್ನು ಹೇಳಲು ಇದನ್ನು ಉದಾಹರಿಸಬೇಕಾಯಿತು.
ಮುಂದೆ ವಿವಿಧ ಹುದ್ದೆಗಳನ್ನು ಅಲಂಕರಿಸಿದಾಗ ಸಹ ಅದೇ ನಿಷ್ಠೆ ಪ್ರಾಮಾಣಿಕತೆ ಎಲ್ಲಾ ಕೆಲಸಗಳಲ್ಲಿ ಎದ್ದು ಕಾಣುತ್ತದೆ. ಯಾರ ಮುಲಾಜಿಗೆ ಒಳಗಾಗದೆ, ಒಂದು ಬಗೆಯ ನಿರ್ಲಿಪ್ತ ಅನೌಪಚಾರಿಕವಾದ ಆಡಳಿತ ಶೈಲಿಯಿಂದ ಹೆಚ್ಚಿನವರ ಮನವನ್ನು ಗೆಲ್ಲುತ್ತಾರೆ. ಹುದ್ದೆಗಳು ಬದಲಾದಾಗ ಅವರ ನಡೆನುಡಿಗಳು ವೇಷಭೂಷಣಗಳು ಯಾವ ಬದಲಾವಣೆಯನ್ನು ಕಾಣಲಿಲ್ಲ. ತನಗೆ ಸರಿ ತೋರದ್ದನ್ನು, ಸಮಾಜದಲ್ಲಿನ ಶೋಷಣೆಯನ್ನು, ಮೂಢನಂಬಿಕೆಗಳನ್ನು ಪ್ರಶ್ನಿಸುವಾಗ ಭಾಷೆಯು ಹದ ಮೀರಲಿಲ್ಲ. ತಪ್ಪನ್ನು ತಪ್ಪೆಂದರು,ತನ್ನದೇ ತಪ್ಪಾದಾಗ ತಿದ್ದಿಕೊಂಡು ಮುನ್ನಡೆದರು. ತನ್ನ ಬದುಕಿನ ಪೂರ್ತಿ ಸಮಾಜಕ್ಕೆ ಒಂದಲ್ಲ ಒಂದು ರೀತಿ ತನ್ನ ಕೈಲಾದ ಸಹಾಯವನ್ನು ಮಾಡಿದ ದೃಷ್ಟಾಂತಗಳನ್ನು ಓದುವಾಗ, ಇಂತಹ ಪರಿಪೂರ್ಣ ಬದುಕನ್ನು ಬದುಕಿದ ವ್ಯಕ್ತಿಯು ನಮ್ಮ ನಡುವೆ ಇದ್ದರು ಎಂಬುದು ಗರ್ವ ಪಡುವಂತಹ ವಿಚಾರ.
ನಾನು ಸಾಹಿತಿಯಲ್ಲ ಎಂದು ಹೇಳುತ್ತಲೇ ತನ್ನ ಬದುಕಿನ ಕತೆಯನ್ನು ಹೇಳುವ ನರಸಿಂಹಯ್ಯನವರ ಬರಹದ ಶೈಲಿ ಯಾವ ಸಾಹಿತಿಗಳ ಬರಹಕ್ಕೆ ಕಡಿಮೆ ಇಲ್ಲ. ಅವರೇ ಪಕ್ಕದಲ್ಲಿ ಕುಳಿತು ಕತೆ ಹೇಳಿದ ಶೈಲಿಯ ಬರಹದಲ್ಲಿನ ಆಪ್ತತೆಯನ್ನು ಓದಿಯೇ ಅನುಭವಿಸಬೇಕು. ಬಾಲ್ಯದ ಕಷ್ಟವನ್ನು ಓದುವಾಗ ಮರುಗುತ್ತಾ, ವಿದ್ಯಾಭ್ಯಾಸದ ಸಮಯದಲ್ಲಿ ಎದುರಿಸಿದ ತೊಂದರೆಗಳಿಗೆ ಕಣ್ಣಂಚಲ್ಲಿ ನೀರು ತುಳುಕಿಸುತ್ತಾ, ಔದ್ಯೋಗಿಕ ಜೀವನದಲ್ಲಿ ಪದೋನ್ನತಿ ಪಡೆದಾಗ ಹೆಮ್ಮೆಪಡುತ್ತಾ, ಅವರ ಹೊಸ ಯೋಚನೆ, ಯೋಜನೆಗಳಿಗೆ ಬೆರಗಾಗುತ್ತಾ, ಹಿಡಿದ ಕಾರ್ಯವನ್ನು ಸಾಧಿಸಿಯೇ ಬಿಡುವ ಛಲಗಾರಿಕೆಗೆ ತಲೆಬಾಗುತ್ತಾ, ನಡುನಡುವೆ ಅವರ ಹಾಸ್ಯಕ್ಕೆ ಹಗುರಾಗುತ್ತಾ, ಮತ್ತೊಮ್ಮೆ ಬಿದ್ದು ಬಿದ್ದು ನಕ್ಕರು ಸುಸ್ತಾಗುವ ಒಂದು ಅಪೂರ್ವ ಅನುಭವವನ್ನು ಈ ಆತ್ಮಕಥನ ನೀಡಿದೆ. ಬದುಕಿನ ಶ್ರೇಷ್ಠತೆ ಇರುವುದು ಸರಳತೆಯಲ್ಲಿ, ಅನೌಪಚಾರಿಕತೆಯಲ್ಲಿ ಎನ್ನುವುದು ಈ ಕೃತಿಯು ನಮಗೆ ಹೇಳಿಕೊಡುವ ಅಮೂಲ್ಯವಾದ ಜೀವನ ಪಾಠ.