ಕನ್ನಡ ಕಾದಂಬರಿ ಸಾರ್ವಭೌಮ, ಕನ್ನಡಮಾತೆಯ ಪ್ರೀಯ ಪುತ್ರ, ಕನ್ನಡ ಕಾಂತಿಯನ್ನು ರಾಜ್ಯದುದ್ದಕ್ಕೂ ಬೆಳಗಿಸಿದ ಮಾಂತ್ರಿಕ ಅ ನ ಕೃಷ್ಣರಾಯರ ಜೀವನದ ಒಂದು ತುಂಡು ಈ ಪುಸ್ತಕದಲ್ಲಿದೆ. ಅನಕೃ ಎಂಬುವು ಕನ್ನಡ ಸಾಹಿತ್ಯಾಸಕ್ತರ ಎದೆಯಲ್ಲಿ ಸಂಚಲನ ಮೂಡಿಸುವ ಅಕ್ಷರಗಳು. ಕನ್ನಡಿಗರ ಮತ್ತು ಕನ್ನಡದ ಏಳಿಗೆಗಾಗಿ ಶ್ರಮಿಸಿ, ಅವರಿಂದ ಏನನ್ನೂ ಅಪೇಕ್ಷಿಸದೇ ಇದ್ದರೂ ಅವರಿಗೆ ಸಿಕ್ಕಿದ್ದು ಅಪಚಾರ. ಅನೇಕ ಅನ್ಯಭಾಷಿಗರ ಮಧ್ಯೆ ಬೆರೆತು ಹೋಗಿದ್ದ ಕನ್ನಡವನ್ನು ಕರ್ನಾಟಕದ ಪ್ರತಿ ಮೂಲೆಯಲ್ಲಿ ತಮ್ಮ ಸಂಗಡಿಗರೊಂದಿಗೆ ಮೇಲೆತ್ತಿದ ಧೀಮಂತ ಅನಕೃ. ಯಾವ ಕಾಲದಲ್ಲಿ ಕನ್ನಡ ಎಂದರೆ ಹಾಸ್ಯಾಸ್ಪದ, ಹೀಗೆಳೆಯುತ್ತಿದ್ದರೋ ಆ ಕಾಲದಲ್ಲಿ ನಮ್ಮ ಭಾಷೆ ಯಾವ ಭಾಷೆಗಿಂತ ಕಮ್ಮಿಯಿಲ್ಲ ಎಂದು ತೋರಿಸಿದವರು. ಅನೇಕ ನವಸಾಹಿತಿಗಳಿಗೆ ದಿಕ್ಕು ತೋರಿಸಿ ಅವರಿಗೆ ಬೇಕಾದ ಸಹಾಯ ಮಾಡಿ ಅವರಿಗೆ ಹೆಸರು ಮಾಡಿ ಕೊಟ್ಟರು. ಅಷ್ಟೇ ಅಲ್ಲದೆ ಈ ಪುಸ್ತಕ ಓದಿದಾಗ ನನಗೆ ತಿಳಿಯಿತು ಅನಕೃ ಅವರು ಸಂಗೀತ ಮತ್ತು ನಾಟಕ ಪ್ರೇಮಿಗಳಾಗಿದ್ದರು ಎಂದು. ಸಂಗೀತದಲ್ಲಿ ಶ್ರಮಿಸುತ್ತಿದ್ದ ಹಲವಾರು ಕಲಾಕಾರರಿಗೆ ಬೇಕಾದ ಸಹಾಯ ನೀಡಿ ಅವರನ್ನು ಗೆಲ್ಲುವಂತೆ ಮಾಡಿದರು. ಕನ್ನಡಕ್ಕೆ ಶತ್ರುವಾಗಿದ್ದ ಮಹಾರಾಷ್ಟ್ರ ಮತ್ತು ತಮಿಳಿಗರ ಜಾಗದಲ್ಲೇ ಕನ್ನಡಿಗರ ಪರ ಭಾಷಣ ಮಾಡಿ ಅಲ್ಲಿ ಜನರಿಂದ ಟೀಕೆ ವ್ಯಕ್ತವಾದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೆ ತಮ್ಮ ಸಾಹಿತ್ಯ ಮತ್ತು ಕನ್ನಡ ಸೇವೆ ಮುಂದುವರೆಸಿದರು. ಇದೇ ಸಮಯದಲ್ಲಿ ಕನ್ನಡ ಸಾಹಿತ್ಯರತ್ನಗಳಾದ ಬಿಎಂಶ್ರೀ, ಮಾಸ್ತಿ ಮೊದಲಾದವರ ಪರಿಚಯವಾದರು. ಇಷ್ಟೇ ಅಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಶ್ರಮಿಸಿ ಅದರಿಂದ ಏನನ್ನೂ ಬಯಸದೆ ಸೇವೆಗೆ ತಯಾರಾದರು. ಆದರೆ ಮುಂದೆ ಯಾವ ಸಂಸ್ಥೆಗೆ ತಮ್ಮ ಜೀವದುದ್ದಕ್ಕೂ ಶ್ರಮಿಸಿದ್ದರೋ ಅದರಲ್ಲಿಯ ರಾಜಕೀಯದಿಂದ ಅವರಿಗೆ ಸಿಗಬೇಕಾದಂತಹ ಸ್ಥಾನಮಾನ ಸಿಗದಾತಂತಾಯಿತು. ಇದೆ ಸಮಯದಲ್ಲಿ ಅವರಿಗೆ ಬೇಕಾಗಿದ್ದಂತಹ ವಿಶ್ರಾಂತಿ, ಕೃತಿ ಬರೆಯಲು ಸಮಯ ಸಿಕ್ಕಂತಾಯಿತು. ಅವರು ಇಷ್ಟೆಲ್ಲ ಸಾಧನೆ ಮಾಡಿದಾಗ ಅವರ ವಯಸ್ಸು ೪೦ರ ಸಮೀಪ. ಅವರಿಗೆ ಮೊದಲು ಸಾಹಿತ್ಯ ಸಮ್ಮೇಳನಕ್ಕೆ ಅವರಿಗೆ ಆಹ್ವಾನ ಬಂದಾಗ ಅವರು ಅದನ್ನು ತಿರಸ್ಕರಿಸಿದರು ಕಾರಣ ಅವರಿಗೆ ಅವಾಗ ಕೇವಲ ೩೬ ವರ್ಷ! ಅದಾಗ್ಯೂ ಅವರಿಗೆ ಸಿಗಬೇಕಾದಂತಹ ಗೌರವ, ಪ್ರೀತಿ ಜನರಿಂದ ಸಿಗದಂತಾಯಿತು. ಗದಗಿಗೆ ಭಾಷಣಕ್ಕಾಗಿ ಬಂದಾಗ ಯಾವ ಜನಕ್ಕಾಗಿ ಅವರು ಅಷ್ಟು ಶ್ರಮಿಸಿದ್ದಾರೋ ಅವರಿಂದಲೇ ತಿರಸ್ಕಾರ ವ್ಯಕ್ತವಾಯಿತು. ಇದರಿಂದ ಅನಕೃ ಅವರಿಗೆ ಜೀವತಾವಧಿಯಲ ಕಾಲು ಭಾಗ ಕಳೆದುಹೋಯಿತು. ಕಾಲ ಉರುಳುತ್ತಾ ಹೋದಂತೆ ಅವರ ಜೀವನಾಸಕ್ತಿ ಕುಂಟುತ್ತಾ ಬಂದಿತು. ಅವರು ಇನ್ನೂ ಎಷ್ಟೋ ಸಂಶೋಧನೆ, ಬರವಣಿಗೆ ಮತ್ತು ಕೆಲಸಗಳನ್ನು ತಯಾರಾಗಿಟ್ಟುಕೊಂಡಿದ್ದರು ಆದರೆ ಅವೆಲ್ಲವೂ ಅಪೂರ್ಣಗೊಂಡವು. ತಮ್ಮ ೬೩ನೇ ವರ್ಷದಲ್ಲಿ ಅನಕೃ ಅವರು ತಮ್ಮ ಜೀವನಕ್ಕೆ ಕೊನೆಯ ನಮಸ್ಕಾರ ಹಾಕಿದ್ದರು. ಅವರು ಅಷ್ಟು ಕನ್ನಡಕ್ಕೆ ಶ್ರಮಿಸಿದ್ದರೂ ಕರ್ನಾಟಕದಲ್ಲಿ ಅನೇಕರಿಗೆ ಅವರಾರೆಂಬುದು ಇನ್ನೂ ತಿಳಿಯದೇ ಇರುವುದು ವಿಷಾದ.
ಕನ್ನಡದ ವಿಷಯದಲ್ಲಿ ಪ್ರಾತಸ್ಮರಣೀಯರಾದ ಅ.ನ.ಕೃಷ್ಣರಾಯರ ಆತ್ಮಕಥೆ. ಅಪೂರ್ಣವಾದ ಇದರ ಕೊನೆಯ ಕೆಲ ಪುಟಗಳ ಅವರ ಪತ್ನಿ ಬರೆದಿದ್ದರು. ಇದರೊಂದಿಗೆ 'ನನ್ನನ್ನು ನಾನೇ ಕಂಡೆ ' ಎಂಬ ಲೇಖನಗುಚ್ಛವಿದೆ. 'ವಿಶ್ವವಾಣಿ' 'ಕಥಾಂಜಲಿ' ಎಂಬ ಪತ್ರಿಕೆಯ ಸಂಪಾದಕ,ಪ್ರಕಾಶಕರಾಗಿ ಕಾದಂಬರಿ ಸಾರ್ವಭೌಮರಾಗಿ, ಕನ್ನಡ ಹೋರಾಟಗಾರರಾಗಿ ಇವರ ಬದುಕು ಆಸಕ್ತಿಕರ. ವೈಯಕ್ತಿಕ ವಿವರಗಳು ಇಲ್ಲದಿರುವುದು ನಕರಾತ್ಮಕ ಅಂಶ.