ನಾನು ಮೂರ್ಖನ ಮಾತುಗಳು ಎಂಬ ಪುಸ್ತಕ ಅದು ಬಂದಾಗಲೇ ನೋಡಿದ್ದೆ. ಆದರೆ ಹೇಳಿ ಕೇಳಿ ಉಪೇಂದ್ರರ ಸಹವರ್ತಿ.ಅದರ ಮೇಲೆ ಕ್ಯಾಚಿ ಟೈಟಲ್. ಎಂತ ಸಾವು ಇದು ಯಾರು ಓದ್ತಾರೆ ಅಂತ ತೆರೆದು ನೋಡಲೂ ಹೋಗಿರಲಿಲ್ಲ. ಅದಾದ ಬಳಿಕ ಅಲ್ಲಿ ಇಲ್ಲಿ ಅಹೋರಾತ್ರರ ಮಾತುಗಳ ಉದ್ಧರಿಸುವ ಕೆಲ ಫೇಸ್ಬುಕ್ ಗೆಳೆಯರ ಗಮನಿಸಿದ್ದೆ. ಆದರೊಂದು ದಿನ ಯಾರದೋ ಪೋಸ್ಟ್ ಫಾಲೋ ಮಾಡ್ತಾ sound cloudನಲ್ಲಿ ಅಹೋರಾತ್ರರ ಮಾತುಗಳನ್ನೇ ಹಾಡಾಗಿಸಿದ್ದನ್ನು ಕೇಳಿ ಬಹಳ ಇಷ್ಟಪಟ್ಟಿದ್ದೆ.
ಕೂಡಲೇ ಗುರುಗಳಾದ Yathiraj Veerambudhi ಅವರನ್ನು ಸಂಪರ್ಕಿಸಿ " ಸರ್, ಅವರನ್ನು ಓದಬೇಕಲ್ಲ. ನಂಗೆ ಅವರ ಬೆಸ್ಟ್ ಪುಸ್ತಕ ಸಲಹೆ ಮಾಡಿ" ಅಂತ ಕೇಳಿದೆ. ಅವರು ಮರುಟಪಾಲಿನಲ್ಲೇ ' ಮೂರ್ಖನ ಮಾತುಗಳು' ಪುಸ್ತಕ ಕಳಿಸಿ." ಇದನ್ನ ಓದಿ ನೋಡಿ ಪ್ರಿಯ ಪ್ರಶಾಂತ " ಅಂತ ಬರೆದಿದ್ದರು. ನಾನು " ಧನ್ಯವಾದ " ಅಂತಂದು ಸುಮ್ಮನಾಗಿದ್ದೆ. ನಮ್ಮ ಮನೆಗೆ ಅತ್ತೆ ಮಾವ ಉಳಕೊಳ್ಳಲು ಬಂದಾಗ ಮಾವ ನನ್ನ ಪುಸ್ತಕಗಳ ರ್ಯಾಂಡಮ್ ಆಗಿ ತಡಕಾಡಿ ತಮಗೆ ಖುಷಿ ಅನ್ನಿಸಿದ್ದನ್ನು ಓದಿ, ಇಷ್ಟಾವಾಗದಿದ್ದರೆ ಅರ್ಧ ಓದಿ ಅಲ್ಲೇ ಇಡುತ್ತಾರೆ.ಕೆಲವೊಮ್ಮೆ ಅವರಿಗೆ ಬಹಳ ಇಷ್ಟವಾದ ಪುಸ್ತಕ " ಪ್ರಶಾಂತು, ನೋಡಪ್ಪ ಈ ಪುಸ್ತ್ಕ ಬಹಳ ಇಷ್ಟ ಆಯ್ತು" ಅಂತ ಹೇಳಿ ಬಿಡ್ತಾರೆ. ಸಾಮಾನ್ಯವಾಗಿ ಒಂದು ಸಲ ಬಂದರೆ ಈ ರೀತಿಯಾಗಿ ನಾಲ್ಕಾರು ಪುಸ್ತಕ ಓದಿ ಹೇಳುವುದುಂಟು ಅವರು. ಈ ಸಲ ಬಂದವರಿಗೆ ಈ ಪುಸ್ತಕ ಕಂಡಿದೆ. ನಾನು ಅತ್ಲಾಗಿ ಡ್ಯೂಟಿ,ಮನೆ,ನನ್ನ ಮರ್ಲು ಕೆಲಸಗಳ ನಡುವೆ ಈ ಮಾವ ಎರಡು ದಿನ ಆದರೂ ಇದೊಂದೇ ಪುಸ್ತಕ ಹಿಡಕೊಂಡಿರುವುದು ನೋಡಿ " ಏನಪ್ಪಾ?" ಅನಿಸಿ ," ಏನು ಮಾವ ಚೆನ್ನಾಗಿದೆಯಾ?" ಅಂತ ಕೇಳಿದೆ. ಅವರು ಅಕ್ಷರಶಃ ತಲೆದೂಗುತ್ತಾ " ಭಾಳಾ ಫೈನ್ ಆಗಿದೆ ಕಣಪ್ಪಾ.. ಇವರು ಬರ್ದಿರೋದು ಬೇರೆ ಓದ್ಬೇಕು.ಭಾಳ ಚೆನ್ನಾಗಿದೆ" ಅಂದರು. ಅದಕ್ಕೆ ನಮ್ಮತ್ರ ಬೇಕಲದಲ ಸ್ಟಾಕು. ಅದೂ ಅಲ್ಲದೆ ಟೈಟಲ್ ನೋಡಿ ಯಾವುದೋ ಆಧ್ಯಾತ್ಮ ಅಂದುಕೊಂಡು ಆಮೇಲೆ ಆಮೇಲೆ ಅಂತ ಮುಂದೂಡಿದವ ನಾನು. ಮಾವ ಓದಿ ಮುಗಿಸಿದ ಬಳಿಕ ಬೇರೆಲ್ಲ ಬದಿಗಿಟ್ಟು ಅದನ್ನು ಓದಲು ಶುರುಮಾಡಿದೆ. ಅಹೋರಾತ್ರರ ' ಇವನು' ಸಂಬೋಧನೆ, ಚಿಕ್ಕ ಚೊಕ್ಕ ನಿರೂಪಣೆ ಇಷ್ಟವಾಗ್ತಾ ಹೋಯ್ತು. ಆದರೆ ಬರಹಗಾರನ ಮಾತು ತಟ್ಟನೆ ನಾಟುವುದು ಅವನ ಬರಹದಲ್ಲಿ ನಮ್ಮ ಬದುಕಿನ ಅನುಭವದ ರೆಫರೆನ್ಸ್ ಬಂದಾಗ. ಅವರು 'ಸಾಲ ಎಂಬ ಶೂಲ'ದ ಕುರಿತು ಒಂದು ಅಧ್ಯಾಯ ಬರೆದಿದ್ದರು ನೋಡಿ. ಹಿಡಕೊಂಡು ಬಿಡ್ತು.ಒಂದ್ಸಲ ಓದಿದವ.ಮತ್ತೆ ಇಡಿಯಾಗಿ ಇನ್ನೊಮ್ಮೆ ನಿಧಾನವಾಗಿ ಓದಿದೆ.ಈ ಟ್ಯೂನಿಂಗ್ ಅಂತಾರಲ್ಲ ಅದಾಯ್ತು. ಹಾಗಾಗಿ ವರ್ಷದ ಕೊನೆಗೆ ಮೂರ್ಖನ ಮಾತುಗಳ ಹೊಳಪು ನನ್ನ ಸೆಳೆದುಕೊಂಡು ಬಿಟ್ಟಿತು. ಈ ಪುಸ್ತಕ ಓದುವ ಮೊದಲು sound cloud app ಹಾಕಿ ಅದರಲ್ಲಿ Ahoratra ಅಂತ ಕೊಟ್ಟು ಅವರ ಮಾತನ್ನೇ ಹಾಡುಗಳಾಗಿಸಿದ್ದ ಕೇಳಿ. ಅದು ಇಷ್ಟವಾದರೆ ಮಾತ್ರ ಈ ಪುಸ್ತಕ ಓದಿ.
ಎಲ್ಲ ಆಹಾರ ಎಲ್ಲರಿಗೂ ರುಚಿಸೊಲ್ಲ ನೋಡಿ. ಅದಕ್ಕೆ ಹೇಳಿದೆ. ನಿನ್ನೆ Jameel Sawanna ಅವರ ಪೋಸ್ಟ್ ನೋಡಿದ ಬಳಿಕ ಪುಸ್ತಕವೊಂದು ಎಂಟನೇ ಮುದ್ರಣ ಕಾಣಬೇಕಾದರೆ ಅದರಲ್ಲಿ ಹೂರಣವೂ ಇರಬೇಕಲ್ಲ ಅಂತ ಅನಿಸಿ ಇದನ್ನು ಬರೆದೆ.
ಲೇಖನ ಸಂಕಲನಗಳೆಂದರೆ ಒಂದು ರೀತಿಯ ಮೂಗು ಮುರಿಯುವಿಕೆ ನನಗೆ ಅಂಟಿಕೊಂಡು ಬಂದಿತ್ತು. ಕಾದಂಬರಿಗಳೆಂದರೇ ಇಷ್ಟ ಅಲ್ಲೊಂದು ಪೂರ್ಣವಾದ ನೋಟ ಇದೆ ಎಂದು ನನ್ನನ್ನು ನಾನು ಸಮರ್ಥಿಸಿಕೊಂಡದ್ದು ಇದೆ. ಆ ಧೋರಣೆಯನ್ನು ಇತ್ತೀಚೆಗೆ ಇಷ್ಟಿಷ್ಟೇ ಕ್ಷೀಣಿಸುತ್ತಿರುವುದರಲ್ಲಿ ಮೂರ್ಖನ ಮಾತುಗಳು ಪುಸ್ತಕದ ಪಾತ್ರ ಸ್ವಲ್ಪ ಜಾಸ್ತಿಯೇ. ಪುಸ್ತಕ ತೆರೆಯುವ ಮುನ್ನ ಸಂಪೂರ್ಣ ಖಾಲಿಯಾಗಿತ್ತು ಮನಸ್ಸು. ಲೇಖಕ ಅಹೋರಾತ್ರ ಅವರ ಮೊದಲ ಪುಸ್ತಕ ಮತ್ತು ವ್ಯಕ್ತಿಗತವಾಗಿ ಪರಿಚಯವೂ ಇರದ ಕಾರಣ ಯಾವ ನಿರೀಕ್ಷೆಗಳೂ ಇರದೇ ಓದಲು ಶುರುವಿಟ್ಟೆ. ನಟ ಉಪೇಂದ್ರರವರು ಬರೆದುಕೊಟ್ಟಿರುವ ಹಿನ್ನುಡಿಯನ್ನು ಮೊದಲೇ ಓದಿಕೊಂಡಿದ್ದು ಪುಸ್ತಕ ಓದಲು ಮತ್ತಷ್ಟು ಪುಷ್ಟಿ ಕೊಟ್ಟಿತ್ತು.
ಚಿತ್ರ ನಿರ್ದೇಶಕರಾದ ಗುರುಪ್ರಸಾದ್ರವರು ಬರೆದಿರುವ ವಿನೂತನ ಶೈಲಿಯ ಮುನ್ನುಡಿಯಲ್ಲೇ ಪುಸ್ತಕ ಅರ್ಧ ಕುತೂಹಲ ಹುಟ್ಟಿಸಿಬಿಡುತ್ತದೆ. ಮುನ್ನುಡಿಯಲ್ಲಿ ಹೀಗೊಂದು ಮಾತಿದೆ. "ಜ್ಞಾನ ಎಂದರೆ ನಮಗೆ ಗೊತ್ತಿರುವುದಲ್ಲ ನಮಗೆ ಗೊತ್ತಿಲ್ಲದೇ ಉಳಿದಿರುವುದು ಜ್ಞಾನ ಅಂತಾ". ಇಂತಹ ವಿವೇಚನೆಗೆ ಮರುಳಾಗಿ ಅದು ಕಲಿಯೋ ಹಂಬಲ, ಕುತೂಹಲ ಎಂದು ಫ್ಯಾನ್ಸಿಯಾಗಿ ವಾದ ಮಾಡಲು ಹೊರಟರೂ ಮನಸ್ಸಿನಲ್ಲೇ ಅದನ್ನು ಅಪ್ರಯತ್ನಪೂರ್ವಕವಾಗಿ ಒಪ್ಪಿಕೊಂಡುಬಿಟ್ಟಿದ್ದೆ. ಅಷ್ಟು ಹೊತ್ತಿಗೆ ಅಹೋರಾತ್ರರ ಬೆಳಕು ನನ್ನ ಮೇಲೆ ಬೀಳಲಾರಂಭಿಸಿತು.
ಪುಸ್ತಕದ ಒಡಲಿಗಿಳಿಯುವ ಮುನ್ನ ಅಹೋರಾತ್ರರ ಹೆಸರಿನಲ್ಲಿರುವ ಗಾಂಭೀರ್ಯಕ್ಕೆ ಒಂದು ಪ್ರಣಾಮ.
ಮೂಲವಾಗಿ ಮೂರ್ಖನ ಮಾತುಗಳು ಲೇಖನಗಳ ಸಂಕಲನ. ಅಲ್ಲಲ್ಲ ಅನುಭವದ ಭಾವಬುತ್ತಿ. ಅಹೋರಾತ್ರರವರಿಗೆ ಬದುಕು ಕಲಿಸಿದ ಎಷ್ಟೋ ವಿಷಯಗಳನ್ನು ಸ್ನೇಹಿತನಂತೆ ಆತ್ಮೀಯವಾಗಿ ಹೇಳುತ್ತಾ ಹೋಗುತ್ತಾರೆ. ಹಾಗೆಂದಹ ಇದು ಸುಖಸಂಸಾರಕ್ಕೆ ಹನ್ನೆರಡು ಸೂತ್ರಗಳು ಥರ ಎನ್ನಲಾರೆ. ಊಹೆಗೆ ನಿಲುಕದಷ್ಟು ಎತ್ತರದಲ್ಲಿರುವ ಆಲೋಚನೆಗಳ ಭಂಡಾರವೇ ಇದು. ಪುಸ್ತಕದ ಕೊನೆಯಾಗಬಾರದು ಎಂದು ಯಾವುದೋ ಒಂದು ವಿಚಿತ್ರ ಶಕ್ತಿ ಹೇಳಿಸುತ್ತಿರುತ್ತದೆ. ಇಲ್ಲಿರುವುದು ವಿಚಾರವಾದವಲ್ಲ. ಮೇಲ್ನೋಟಕ್ಕೆ ವೈಚಾರಿಕ ಎನಿಸಿದರೂ ವಿಚಾರವಾದದ ಆಚೆಗಿನ ಭಾವದಲ್ಲಿ ಓದುಗನ ಚಿಂತನೆಗಳು ಐಕ್ಯವಾಗುತ್ತಿರುತ್ತವೆ.
ಆಧ್ಯಾತ್ಮ, ದೇವರು, ಧರ್ಮ, ಆತ್ಮ, ಆರೋಗ್ಯ, ಕಮೀಟ್ಮೆಂಟ್, ಪಾಶ್ಚಿಮಾತ್ಯ, ಪೌರ್ವಾತ್ಯ ಸಂಸ್ಕ್ರತಿಯೆಂದು ಹಲವಾರು ಗೊಂದಲಗಳನ್ನು ಪ್ರಸ್ತುತ ಕಾಲ ಸೃಷ್ಟಿಸಿದೆ. ಅದರೆಡೆಗೆ ಅಹೋರಾತ್ರರ ನಿಲುವುಗಳನ್ನು ಓದಿ. ಆಪ್ಯಾಯಮಾನವಾಗಿ "ಕಣ್ರೀ" ಎಂದು ಹೇಳುವ ಪ್ರೀತಿಗೆ ಪುಸ್ತಕ ಮತ್ತಷ್ಟೂ ಪ್ರಿಯವೆನಿಸುತ್ತದೆ. ಕೊನೆಕೊನೆಗೆ ಈ ವಿಷಯಗಳೆಲ್ಲ ಈ "ಮೂರ್ಖ"ನಿಗೆ ಹೇಳಿದವರಾರು ಎಂಬ ಪ್ರಶ್ನೆ ಮೂಡಬಹುದು. ಅದಕ್ಕೂ ಅಹೋರಾತ್ರರವರು ಉತ್ತರಿಸಿದ್ದಾರೆ. ಇನ್ನೊಂದು ಗಮನಿಸಲೇ ಬೇಕಾದ ವಿಷಯ "ನಾನು" ಎಂಬುದನ್ನು ಸಂಪೂರ್ಣವಾಗಿ ಕೊಂದಿದ್ದಾರೆ. ಹೇಗೆ ಎಂದು ಮೂರ್ಖನ ಮಾತುಗಳಲ್ಲೇ ತಿಳಿಯಿರಿ.
ಮೇಲೆ ಹೇಳಿದಂತೆ, ಇದರಲ್ಲಿರುವುದು ವಿಚಾರವಾದವಲ್ಲ, ವ್ಯಕ್ತಿತ್ವ ವಿಕಸನದಂತಹ ದೊಡ್ಡ ವಿಷಯವೂ ಅಲ್ಲ. ಇಲ್ಲಿರುವುದು ಲೇಖಕರ ಅನುಭವಾಮೃತ. ಈ ಅಪೂರ್ವವಾದ ಅಮೃತದ ರುಚಿ ಸವಿದಿಲ್ಲವಾದಲ್ಲಿ ಬೇಗನೇ ಇದೊಂದು ಪುಸ್ತಕ ಓದಿ.
ಎಂದಿನಂತೆ ಈಗಾಗಲೇ ಓದಿದ್ದಲ್ಲಿ ನಿಮ್ಮ ಅಭಿಪ್ರಾಯ ನನ್ನೊಂದಿಗೂ ಹಂಚಿಕೊಳ್ಳಿ.
This is the first book I read from this author. A good read. Such rich experiences since such young age! His writing style is also catchy. Seems he is a blessed soul.
I would not have been able to like such books 2 years ago ;) Since Corona outbreak, circumstances and time has come such that I started digging deep into 'adhyatma' though I always had a leaning towards it.