'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.
ಪುಸ್ತಕ : ಚದುರಂಗದ ಮನೆ ಪ್ರಕಾರ : ಕಾದಂಬರಿ ಲೇಖಕರು : ತರಾಸು ಪುಟಗಳು : 198
ಚದುರಂಗದ ಮನೆ ತರಾಸು ಅವರು 1960 ರಲ್ಲಿ ಬರೆದ ಕಾದಂಬರಿ. ಲೇಖಕರು ಮುನ್ನುಡಿಯಲ್ಲಿ ತಾವಾಗಿ ಹೇಳಿರುವ ಕಾರಣ ಕಾದಂಬರಿಯ ಉದ್ದೇಶ ಮನೋರಂಜನೆಯಷ್ಟೇ ಎಂದು ನಾವೂ ಅರ್ಥಮಾಡಿಕೊಳ್ಳಬಹುದು. ಈ ಕಥೆ ಪುಸ್ತಕವಾದ ಆರು ದಶಕಗಳ ಬಳಿಕ ಓದುವಾಗ ಆ ಕಾಲದಲ್ಲಿ ಮನೋರಂಜನೆ ಎಂಬ ಪದದ ಪರಿಭಾಷೆ ಏನಾಗಿತ್ತು? ಎಂದು ತಿಳಿಯುವ ಕುತೂಹಲವೂ ಮೂಡುತ್ತದೆ.
ಚದುರಂಗದ ಮನೆ ಹೆಸರೇ ಹೇಳುವಂತೆ ಒಂದು ಭೌತಿಕ ಮನೆಯ ಕಥೆ. ಇದು ಆ ಕಾಲದ ಮರಾಠಾ ಸೈನ್ಯವೊಂದರಲ್ಲಿ ಅಧಿಕಾರಿಯಾಗಿದ್ದ ವ್ಯಕ್ತಿ ಒಬ್ಬನ ಜೀವನದ ಕಥೆ. ಅಂತಹ ಒಬ್ಬ ವ್ಯಕ್ತಿ, ಕಥಾ ನಾಯಕ ಮಾಧವರಾಯ ಅದೇಕೆ ಕರ್ನಾಟಕದ ನಾಗರವಳ್ಳಿ ಎಂಬ ಊರಿಗೆ ಬಂದು ಸನ್ಯಾಸಿಯ ಹಾಗೆ ಜೀವನ ನಡೆಸಿದ? ಎಂಬ ಕುತೂಹಲ ಹುಟ್ಟಿಸುವ ಕಥಾಭಾಗದೊಂದಿಗೆ ಚದುರಂಗದ ಮನೆ ಆರಂಭವಾಗುತ್ತದೆ.
ಮುಂದೆ ತನ್ನ ಬಳಿ ಇದ್ದ ಸಂಪತ್ತನ್ನು ಬಳಸಿ ಅದೇ ಊರಿನಲ್ಲಿ ಜೀವನ ಕಟ್ಟಿಕೊಳ್ಳುವ ಮಾಧವರಾಯ ತನಗಾಗಿ ಮನೆಯೊಂದನ್ನೂ ಕಟ್ಟಿಕೊಳ್ಳುತ್ತಾನೆ. ಅದುವೇ ಮುಂದೆ ಚದುರಂಗದ ಮನೆ ಎಂದು ಹೆಸರು ಪಡೆಯುವ ಮನೆ. ಚದುರಂಗದ ಆಟದಲ್ಲಿ ಅತೀವ ಆಸಕ್ತಿ ಹೊಂದಿದ ಮಾಧವರಾಯನಿಗೆ ಚಂದ್ರಯ್ಯ ಹಾಗೂ ಶ್ಯಾಮಯ್ಯಂಗಾರರು ಎಂಬ ಆಟಗಾರರ ಪರಿಚಯವಾಗುತ್ತದೆ. ಒಳ್ಳೆಯ ಆಟಗಾರರನ್ನು ಯಾವಾಗಲೂ ಮೆಚ್ಚುವ ಮಾಧವರಾಯನಿಗೆ ಶ್ಯಾಮಯ್ಯಂಗಾರರ ಒಂದು ವಿಶೇಷ ಆಸೆ ಚದುರಂಗಕ್ಕೆ ಸಂಬಂಧ ಪಟ್ಟ ದೊಡ್ಡ ಸಾಹಸವೊಂದಕ್ಕೆ ಕೈ ಹಾಕುವ ಹಾಗೆ ಮಾಡುತ್ತದೆ. ತಮ್ಮ ಆಸೆ ಪೂರೈಸಿಕೊಳ್ಳಲು ಪ್ರಯತ್ನಿಸುವಾಗ ಮಾಧವರಾಯನಿಗೆ ಶ್ರೀರಂಗಪಟ್ಟಣದ ವೇಶ್ಯೆ ನಾಗರತ್ನಳ ಪರಿಚಯವಾಗುತ್ತದೆ.
ಮಾಧವರಾಯ, ಚಂದ್ರಯ್ಯ ಹಾಗೂ ಶ್ಯಾಮಯ್ಯಂಗಾರರು ಸೇರಿ ಚದುರಂಗದ ಆಟದ ಬಗೆಗಿನ ತಮ್ಮ ವಿಶೇಷ ಆಸೆಯನ್ನು ಸಾಕಾರಗೊಳಿಸುವುದೇ ಮುಂದಿನ ಕಥೆ.
ಮೂಲತಃ ಸೈನಿಕನಾಗಿದ್ದ ಮಾಧವರಾಯನಿಗೆ ಸಂಪತ್ತು ಹೇಗೆ ಸಿಕ್ಕಿತು? ಅಷ್ಟೊಂದು ಸಂಪತ್ತು ಇದ್ದ ಬಳಿಕವೂ ಆತ ಸನ್ಯಾಸಿಯ ಜೀವನ ಏಕೆ ಸಾಗಿಸುತ್ತಿದ್ದ? ಎಂಬೆಲ್ಲಾ ಪ್ರಶ್ನೆಗಳಿಗೆ ಸಿಗುವ ಉತ್ತರಗಳು ಕಥೆಯಲ್ಲಿ ಆರಂಭಿಕ ಉತ್ಸಾಹ ಮೂಡಿಸಲು ಕಾರಣವಾಗುತ್ತವೆ. ವಿಶೇಷ ಚದುರಂಗದ ಆಟದ ಆಯೋಜನೆಯ ಕಲ್ಪನೆ, ತಯಾರಿ, ಅದನ್ನು ಕಾರ್ಯರೂಪಕ್ಕೆ ತರುವುದು, ಆ ಕಾರ್ಯಕ್ರಮದ ವೈಭವ ಮುಂತಾದವುಗಳು ಕಥೆಯನ್ನು ಕುತೂಹಲದಿಂದ ಓದುವ ಹಾಗೆ ಮಾಡುತ್ತವೆ. ನಾಗರತ್ನಳ ಮಗಳು ನೀಲಾ ಹಾಗೂ ವೇಶ್ಯೆ ಇಂದಿರೆಯ ಪಾತ್ರಗಳು ಹಸಿಬಿಸಿ ಶೃಂಗಾರ ದೃಶ್ಯಗಳಿಗೆ ಕಾರಣವಾಗುತ್ತವೆ.
ಸುಮಾರು 200 ಪುಟಗಳ ಈ ಕಾದಂಬರಿಯಲ್ಲಿ ಬರುವುದು ಕೆಲವೇ ಕೆಲವು ಪಾತ್ರಗಳು ಹಾಗೂ ಅಂತಹ ಪ್ರತಿಯೊಂದು ಪಾತ್ರವೂ ಕಥೆಯಲ್ಲಿ ಸೊಗಸಾಗಿ ಚಿತ್ರಿತವಾಗಿದೆ. ಮಾಧವರಾಯ, ಶಂಕರಮ್ಮ, ಚಂದ್ರಯ್ಯ, ಶ್ಯಾಮಯ್ಯಂಗಾರರು, ನಾಗರತ್ನ, ನೀಲಾ, ಲಲಿತಮ್ಮ ಎಂಬೆಲ್ಲಾ ಪಾತ್ರಗಳು ತಮ್ಮ ಸ್ವಾಭಾವಿಕ ವರ್ತನೆಗಳಿಂದಾಗಿ ಸುಲಲಿತ ಓದಿಗೆ ಕಾರಣವಾಗುತ್ತವೆ. ಪ್ರತಿಯೊಂದು ಪಾತ್ರದ ಪರಿಕಲ್ಪನೆ ಸ್ಪಷ್ಟವಾಗಿದ್ದರೂ, ತಮ್ಮ ಗುಣ ನಡತೆಗಳಲ್ಲಿ ದೋಷ ಹೊಂದಿರುವ ಶ್ಯಾಮಯ್ಯಂಗಾರರು ಯಾವುದೇ ವಿಶೇಷ ಕಾರಣವಿಲ್ಲದೇ ಮಾಧವರಾಯನ ನಡತೆಯ ಬಗ್ಗೆ ಕಣ್ಣಿಡುವುದು, ಆ ಬಗ್ಗೆ ತಕರಾರು ಮಾಡುವುದು ಮಾತ್ರ ವಿಚಿತ್ರ ಎನಿಸುತ್ತದೆ.
ಕಥೆ ಬರೆದದ್ದು 1960ನೇ ಇಸವಿಯಲ್ಲಾದ್ದರಿಂದ ಕಥೆಯೂ ಅದೇ ಕಾಲಘಟ್ಟದ್ದು ಅಂದುಕೊಂಡಿದ್ದ ನನಗೆ ಕಥೆಯಲ್ಲಿ ಇದ್ದಕ್ಕಿದ್ದಂತೆಯೇ ಟಿಪ್ಪು ಸುಲ್ತಾನನ ಪ್ರವೇಶವಾದಾಗ ಇಲ್ಲಿಯವರೆಗೆ ಓದಿದ್ದು ಇನ್ನೂರು ವರ್ಷಗಳ ಹಿಂದಿನ ಕಥೆಯೇ? ಎಂದನಿಸಿದ್ದು ಸುಳ್ಳಲ್ಲ.
ಚದುರಂಗದ ಮನೆಯಲ್ಲಿ ವಿಶೇಷ ಎನಿಸುವ ಕಥೆಯೇನೂ ಇಲ್ಲ. ಇಲ್ಲಿ ಕಥೆಗಿಂತ ಅಡೆತಡೆಯಿಲ್ಲದ ಓದೇ ಮುಖ್ಯವಾಗುತ್ತದೆ. ಗಮ್ಯಕ್ಕಿಂತ ಪಯಣವೇ ಸುಂದರವಾಗಿ ಕಾಣಿಸುತ್ತದೆ. ಲೇಖಕರು ತಮ್ಮ ಓದುಗರ ಮನೋರಂಜನೆಗಾಗಿಯೇ ಬರೆದ ಕಥೆ ಎಂದು ಹೇಳಿರುವಾಗ ಅವರು ನೀಡಲು ಉದ್ದೇಶಿಸಿದ ಮನೋರಂಜನೆ ಯಾವುದು? ಎಂದು ತಿಳಿಯುವ ಕುತೂಹಲವಿರುವವರು ಓದಲೇ ಬೇಕಾದ ಕಥೆ ಇದು. ತುಂಬಾ ದೊಡ್ಡ ಕಥೆಯಲ್ಲವಾದರೂ ಇದೊಂದು ಒಳ್ಳೆಯ ಓದಿಗೆ ಕಾರಣವಾಗುವ ಕಾದಂಬರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ತರಾಸು ಅವರ ಅದ್ಭುತ ಕಥನ ಶೈಲಿ ಹಾಗೂ ನಿರೂಪಣೆ ಕಥೆಯುದ್ದಕ್ಕೂ ಎದ್ದು ಕಾಣುತ್ತದೆ.
ಈ ಓದಿನ ಸಮಯದಲ್ಲಿ ಮೆಚ್ಚುಗೆಯಾಗದ ಒಂದೇ ಒಂದು ಅಂಶವೆಂದರೆ ಅಂತ್ಯದಲ್ಲಿ 'ಆಸಕ್ತಿಯಿಂದ ಓದುತ್ತಿರುವ ಪುಸ್ತಕವನ್ನು ಯಾರೋ ಒಬ್ಬರು ಕಸಿದುಕೊಂಡು ಓಡಿದ ಹಾಗೆ ಆಗುವ ಅನುಭವ...!'
The book initially brought interest in the plot. The ending was very abrupt and it didn't seem logical conclusion to me. The protagonist gets embroiled in relationship with a prostitute. The prostitute learns of the secret of the protagonist and the story ends. It doesn't go any further. It seemed a very unnatural ending.