ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು.
ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ (ಪ್ರಬಂಧಗಳು), ಪ್ರಪಂಚ ಪುಸ್ತಕ (ವಿಮರ್ಶಾ ಲೇಖನಗಳು), ಪಂಡಿತ ಭೀಮಸೇನ ಜೋಶಿ (ವ್ಯಕ್ತಿಚಿತ್ರ), ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು, ಹಾರಿಕೊಂಡು ಹೋದವನು (ಅನುವಾದಿತ ಕಥೆಗಳು), ವೆನಿಸ್ಸಿನಲ್ಲಿ ಸಾವು, ಹಳ್ಳಿ, ಪೋಸ್ಟ್ ಮ್ಯಾನ್ (ಅನುವಾದಿತ ಕಾದಂಬರಿಗಳು), ಮಾಸ್ಟರ್ ಬಿಲ್ಡರ್ (ಅನುವಾದಿತ ನಾಟಕ), ಶತಮಾನದ ಸಣ್ಣಕತೆಗಳು, ಸಣ್ಣಕತೆ 1983, ಕನ್ನಡ ಅತಿ ಸಣ್ಣಕತೆಗಳು, ನಾದದ ನವನೀತ, ಬೆಸ್ಟ್ ಆಫ್ ಕೇಫ (ಸಂಪಾದಿತ ಕೃತಿಗಳು).
ದಿವಾಕರ್, ಈಗಿನ ಓದುಗರಿಗೆ ಹೆಚ್ಚು ಪ್ರಸ್ತುತ... ನಮಗೆಲ್ಲ ಸಾಹಿತ್ಯ ಅಭ್ಯಾಸಕ್ಕೆ ಒಬ್ಬ ಮಾರ್ಗದರ್ಶಿರೆಂಬುವವರೇ ಇಲ್ಲ... ಸಿಕ್ಕಿದ್ದನೆಲ್ಲ ಓದುವುದು ನನ್ನ ಪ್ರಕಾರ ಒಳ್ಳೆಯ ಬೆಳವಣಿಗೆ ಅಲ್ಲ... ಒಂದು ಪುಸ್ತಕ ಓದುವುದು ಅಂದರೆ ನಮ್ಮ ಆಯುಷ್ಯದ ಕೆಲ ಸಮಯವನ್ನು ಮುಡಿಪಾಗಿ ಇಡುವುದು.. ಹಾಗಾಗಿ ನಮ್ಮ ಓದು ಜಾಗ್ರತೆಯಿಂದ ಇರಬೇಕು ಎನ್ನುವುದು ನನ್ನ ಅನಿಸಿಕೆ. ಹೀಗೆ, ಹೇಗೆ ಮತ್ತು ಏನು ಓದಬೇಕು ಎಂದು ತಕ್ಕ ಮಟ್ಟಿಗೆ ಮಾರ್ಗದರ್ಶಕರಾಗಿರುವುದು ನನಗೆ ದಿವಾಕರ್ ರವೆರೇ ಎನ್ನಬೇಕು... ಅಮೇರಿಕನ್, ಲ್ಯಾಟಿನ್ ಅಮೇರಿಕನ್, ಸ್ಪಾನಿಶ್, ಪೋಲಿಷ್, ಗ್ರೀಕ್ ಸಾಹಿತ್ಯದ ಮುಖ್ಯ ಕೃತಿಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿಕೊಟ್ಟು ಓದಿಸಿದ ಕೀರ್ತಿ ಇವರದ್ದು.
ಇಷ್ಟೇ ಏಕೆ ಕನ್ನಡದ ಮರೆತು ಹೋದ ಕೆಲ ಹೊತ್ತಿಗೆಗಳನ್ನು, ಲೇಖಕರನ್ನು ಪರಿಚಯಿಸಿದ ಕೀರ್ತಿಯು ಇವರದ್ದೇ.. ಉದಾಹರಣೆಗೆ : ರಾಘವೇಂದ್ರ ಖಾಸನೀಸರನ್ನು ನನಗೆ ಪರಿಚಯಿಸಿದ್ದು ಇವರೇ (ತಬ್ಬಲಿಗಳು ಎಂಬ ಅದ್ಭುತ ಕಥೆಯ ಮೂಲಕ). ಇಲ್ಲೂ ಜಾಗತಿಕ ಮತ್ತು ಕನ್ನಡ ಸಾಹಿತ್ಯದ ಉತ್ತಮ ಕೃತಿಗಳ ಪರಿಚಯದ ಮೂಲಕ, ಲೇಖಕರ ಒಡನಾಟದ ವಿವರಣೆಯ ಮೂಲಕ ಇಷ್ಟವಾಗುತ್ತಾರೆ. "ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ" ಎಂಬ ಲೇಖನವಂತೂ ಹೃದಯ ತುಂಬುವಷ್ಟು ಇಷ್ಟವಾಗುತ್ತದೆ..
ಪ್ರಬಂಧಗಳ ಸಂಕಲನವಾದ ಈ ಕೃತಿ ದಿವಾಕರ್ ಅವರ ಓದಿನ ವಿಸ್ತಾರದ ಜೊತೆಗೆ ಅವರ ಇತರ ಆಸಕ್ತಿ ವಿಷಯಗಳಾದ ಸಂಗೀತ, ಚಿತ್ರಕಲೆ, ಸಿನಿಮಾ ದೂರದರ್ಶನಗಳ ಬಗೆಗಿನ ಅವರ ಟಿಪ್ಪಣಿಗಳು ಪ್ರಾಯಶಃ ನಮ್ಮನೂ ಬಹುಮುಖಿಯಾಗಿಸಬಲ್ಲವು. ಶೀರ್ಷಿಕೆ ಪ್ರಬಂಧವಾದ 'ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ' ಪ್ರತಿಯೊಬ್ಬ ಪುಸ್ತಕ ಪ್ರೇಮಿ ಒದಲೇಬೇಕಾದುದು; ಈ ಪ್ರಬಂಧವು ನಮಗೇ ಪುಸ್ತಕಗಳನ್ನು ಓದುವ, ಗ್ರಹಿಸುವ, ಅನುಭವಿಸುವ, ಚಿಂತಿಸುವ ಬಗ್ಗೆ ದಾರಿದೀಪ ಎನ್ನಬಹುದು...👌👌👌
ಕನ್ನಡದಲ್ಲಿ ಪ್ರಬಂಧಗಳು ಎಂಬ ಪ್ರಕಾರದ ಹೆಸರು ಕೇಳಿದಾಕ್ಷಣ ನನಗೆ ಹೊಳೆವ ಹೆಸರುಗಳು ಎಸ್ ದಿವಾಕರ್, ಎಲ್ ಎಸ್ ಶೇಷಗಿರಿರಾವ್ , ಕೆ.ಸತ್ಯನಾರಾಯಣ ಮತ್ತು ರಘುನಾಥ್ ಚ ಹ.ಇವರಲ್ಲಿ ಎಸ್ ದಿವಾಕರ್ ಮತ್ತು ಎಲ್ ಎಸ್ ಶೇಷಗಿರಿರಾವ್ ನನಗೆ ಕಬ್ಬಿಣದ ಕಡಲೆಯಾಗಿದ್ದ ಪಾಶ್ಚಾತ್ಯ ಸಾಹಿತ್ಯ ಪ್ರಕಾರವ ಪರಿಚಯಿಸಿದವರು. ದಿವಾಕರ್ ರ ಪ್ರಪಂಚ ಪುಸ್ತಕ ಮತ್ತು ಶೇಷಗಿರಿರಾವ್ ಅವರ ಇಂಗ್ಲೀಷ್ ಸಾಹಿತ್ಯ ಚರಿತ್ರೆ ಈ ದಿಸೆಯಲ್ಲಿ ಪ್ರಮುಖ ಕಾಣಿಕೆಗಳು. ಇನ್ನು ಅಂಕಣಬರಹಗಳೆಂಬ ಪ್ರಬಂಧಗಳ ವಿಷಯಕ್ಕೆ ಬಂದರೆ ಓ ಎಲ್ ನಾಗಭೂಷಣ ಸ್ವಾಮಿ ಅವರ 'ಏಕಾಂತ ಲೋಕಾಂತ' ಎಂಬ ಪುಟ್ಟ ಪುಸ್ತಕ ನನಗೆ ಯಾವತ್ತಿಗೂ ಖುಷಿ ಕೊಡುವ ಓದು. ಹಾಗೆಯೇ ಯಶವಂತ ಚಿತ್ತಾಲರ 'ಸಾಹಿತ್ಯದ ಸಪ್ತಧಾತುಗಳು' ಕೂಡ.ಇನ್ನು ಅಕ್ಷರ ಕೆವಿ ಅವರ 'ಅಂತಃಪಠ್ಯ ಮತ್ತು ಇತರ ಪ್ರಬಂಧಗಳು' (ಇದು ನನಗೆ ಜ ನಾ ತೇಜಶ್ರೀ ಅವರಿಂದ ಮದುವೆಗೆ ಸಿಕ್ಕ ಉಡುಗೊರೆ) ನನಗೆ ಎಲೆ ಅಡಿಕೆ ಮೆಲ್ಲುವಾಗಿನ ಆಸ್ವಾದನೆಯ ಸುಖ ಕೊಟ್ಟಿವೆ. ಇವರೊಂದಿಗೆ ರವಿಕುಮಾರ್ ಕಾಶಿ ಕೂಡ ಹೆಸರಿಸಬಹುದಾದ ಲೇಖಕರು. ಎಸ್ ದಿವಾಕರ್ ಅವರ ಎರಡು ಪ್ರಬಂಧ ಸಂಕಲನಗಳು ಈಗಷ್ಟೇ ಮುಗಿಸಿದೆ . 'ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ' ಮತ್ತು 'ಒಂದೊಂದು ನೆನಪಿಗೂ ಒಂದೊಂದು ವಾಸನೆ' .ತಮ್ಮ ಹೆಸರುಗಳಿಂದ ಮತ್ತು ಚಂದದ ಮುಖಪುಟಗಳಿಂದ ಸೆಳೆವ ಇವುಗಳ ಒಳಗಿನ ವಿಷಯ ವೈವಿಧ್ಯ ಬೆರಗು ಹುಟ್ಟಿಸುತ್ತದೆ.ಗುಬ್ಬಚ್ಚಿಗಳ ಬಗ್ಗೆ ಬರೆವಷ್ಟೇ ಕೌತುಕಮಯವಾಗಿ ಸಂಗೀತದ ಬಗ್ಗೆ, ಕಲೆಯ ಬಗ್ಗೆ ಬರೆವ ರೀತಿ, ಬೆಂಗಳೂರಿನ ಬಗೆಗಿನ ಪ್ರಬಂಧದಲ್ಲಿ ನಗರದ ಇತಿಹಾಸದ ಜೊತೆಗೆ ಈಗ ತಲುಪಿರುವ ದುಸ್ಥಿತಿಯ ಕುರಿತಾಗಿ ಮಡುಗಟ್ಟಿದ ವಿಷಾದ, ಗಾಂಧೀಜಿ ಪ್ರಭಾವಕ್ಕೆ ಒಳಗಾದ ರೋನಾಲ್ಡ್ ಡಂಕನ್ ಬಗ್ಗೆ, ಹೀಗೆ ಹಲವಾರು ಸಂಗತಿಗಳ ಸಂಯೋಜನೆ ಅಚ್ಚರಿ ಹುಟ್ಟಿಸುತ್ತದೆ. ಒಂದು ಪ್ರಬಂಧದಲ್ಲಿ ವೀ ಸಿ ಬಗ್ಗೆ ಬರೆಯುತ್ತಾ ಅವರಂತಹ ಜ್ಞಾನ ಸಂಪತ್ತು ಇದ್ದರೆ ವಿದೇಶದಲ್ಲಿ ಅವರನ್ನು ಮೆರೆಸುತ್ತಿದ್ದರು ನಮ್ಮಲ್ಲಿ ಇಳಿವಯಸ್ಸಲ್ಲಿ ಆರ್ಥಿಕ ಚಿಂತೆಯಲ್ಲಿ ಮುಳುಗುವಂತೆ ಮಾಡಿದರು ಎಂದು ಬರೆದಿದ್ದಾರೆ. ವೀ ಸಿ ಜ್ಞಾನ ಸಂಪತ್ತು ಬಗ್ಗೆ ಎಸ್ ದಿವಾಕರ್ ವಿವರಣೆ ಕೇಳುವಾಗ ನನಗೆ ದಿವಾಕರ್ ಅವರ ಜ್ಞಾನವೇನು ಕಡಿಮೆಯೇ! ಎಂದನಿಸಿದ್ದು ಸುಳ್ಳಲ್ಲ!