ಶ್ರೀನಿವಾಸ ವೈದ್ಯ ಅವರ ಕೃತಿಗಳನ್ನು ಓದಿದವರಿಗೆ ಅವರ ತಿಳಿಹಾಸ್ಯದ ಶೈಲಿ ಚಿರಪರಿಚಿತ. ಅದಕ್ಕೆ ಹೊಂದಿಕೊಂಡಂತೆ ಅವರು ಬಳಸುವ ಉತ್ತರ ಕರ್ನಾಟಕದ ಕಡೆಗಿನ ಕನ್ನಡ ಭಾಷೆ ಬರಹಗಳ ರುಚಿಯನ್ನು ದುಪ್ಪಟ್ಟಾಗಿಸುತ್ತದೆ. ಅವರ ಹಾಸ್ಯ ಶೈಲಿಯಲ್ಲಿ ಎಲ್ಲಿಯೂ ಅಶ್ಲೀಲತೆ ಕಾಣುವುದಿಲ್ಲ. ಎಂತಹುದೇ ಪ್ರಸಂಗಗಳಿದ್ದರೂ ಭಾಷಾಭಿವ್ಯಕ್ತಿಯು ಸಭ್ಯ ಚೌಕಟ್ಟಿನ ಎಲ್ಲೆ ಮೀರುವುದಿಲ್ಲ….
ಪ್ರಸ್ತುತ ಸಂಕಲನದಲ್ಲಿ ಹನ್ನೆರಡು ಹಾಸ್ಯ ಪ್ರಬಂಧಗಳಿವೆ. ಮೇಲ್ನೋಟಕ್ಕೆ ಓದುವಾಗ ಹಾಸ್ಯಮಯವಾಗಿ ಕಂಡರೂ ಒಟ್ಟಾರೆ ಸಮಾಜದ ಮೌಲ್ಯಗಳು ಕುಸಿಯುವುದರ ಬಗ್ಗೆ, ದೇಶದ ಭ್ರಷ್ಟ ವ್ಯವಸ್ಥೆಯ ಕುರಿತಾದ ಸಿನಿಕತೆಯ ಕುರಿತು, ನಮ್ಮ ಪ್ರಸ್ತುತ ಸಮಾಜದಲ್ಲಿ ಎಲ್ಲವನ್ನೂ ಸಹಿಸಿಕೊಂಡು ಎಲ್ಲದಕ್ಕೂ ಹೊಂದಿಕೊಂಡು ಬಾಳ್ವೆಯನ್ನು ಸವೆಸಬೇಕಾದ ಅನಿವಾರ್ಯತೆಯ ವಾಸ್ತವಿಕ ಚಿತ್ರಣವಿದೆ.ಜಡ್ಡುಗಟ್ಟಿದ ವ್ಯವಸ್ಥೆ ಮತ್ತು ಮನೋಸ್ಥಿತಿಗೆ ಹಿಡಿದ ಕೈಗನ್ನಡಿ ಇಲ್ಲಿನ ಬರಹಗಳು.
ಉದಾಹರಣೆಗೆ, 'ತಿಪ್ಪಾರಹಳ್ಳಿಯು ಬಲು ಸಮೀಪ' ಎಂಬ ಪ್ರಬಂಧದಲ್ಲಿ ನಿರೂಪಕನು ಬೆಂಗಳೂರಿನ ನಿವಾಸಿ. ತನ್ನ ಮನೆಯ ಮುಂದಿನ ರಸ್ತೆಯಲ್ಲಿ ತಿಪ್ಪೆಗುಂಡಿಯನ್ನು ನೋಡಿ ಬೇಸತ್ತವನು ನ್ಯೂಸ್ ಪೇಪರ್ ಎತ್ತಿಕೊಂಡಾಗ ಅಲ್ಲೂ ಬೋಫೋರ್ಸ್, ಯೂರಿಯಾ,ಬಿಹಾರದ ಬೂಸಾ ಮುಂತಾದ ಒಂದಕ್ಕಿಂತ ಒಂದು ಮಿಗಿಲಾದ ತಿಪ್ಪೆಗಳು ಕಾಣುತ್ತವೆ. ಅಷ್ಟೇ ಅಲ್ಲದೇ ಕಸದ ರಾಶಿಯಿಂದ ರೋಡುಗಳು ಎತ್ತರ ಎತ್ತರವಾಗಿ ಬೆಳೆಯುತ್ತಿದ್ದುದರಿಂದ ಬೆಂಗಳೂರಿನ ಎತ್ತರ ಸಮುದ್ರ ಮಟ್ಟಕ್ಕಿಂತ ದಿನೇ ದಿನೇ ಹೆಚ್ಚೆಚ್ಚು ಬೆಳೆದು ಹವೆ ತಂಪಾಗುತ್ತದೆ ಎಂಬ ಮಾತುಗಳು ಮುಖದಲ್ಲಿ ಮಂದಹಾಸ ಮೂಡಿಸಿದರೂ ಕಸದ ಸಮಸ್ಯೆಯ ಸವಾಲುಗಳ ಕಾಳಜಿ ಕಾಣುತ್ತದೆ. ಈ ಕಾರಣಕ್ಕಾಗಿ ಬೆಂಗಳೂರಿನ ಹೆಸರನ್ನು 'ತಿಪ್ಪಾಂಬುಧಿ' ಅಥವಾ 'ತಿಪ್ಪಸಾಗರ' ಎಂದು ಅಚ್ಚ ಕನ್ನಡಕ್ಕೆ ಬದಲಾಯಿಸಲು ತಮಿಳರ ಕಾಟ. 'ಹರಕೊಲ್ಲಲ್ ಪರ ಕಾಯ್ವನೇ?' ಎಂಬಂತೆ 'ದ್ರಾವಿಡರ್ ಕೊಲ್ಲಲ್ಪಟ್ಟರು ದೇವೇಗೌಡರ್ ಕಾಯ್ವರೇ?' ಎಂದು ನಗುವುಕ್ಕಿಸುವುದರ ಹಿಂದೆ ಹೆಚ್ಚುತ್ತಿರುವ ಪರಭಾಷಿಕರ ಪ್ರಾಬಲ್ಯದ ಕಳವಳವಿದೆ.
'ಹೊಂಡದಲ್ಲಿ ಬಿದ್ದವರು' ಎಂಬ ಬರಹದಲ್ಲಿ ಕೆ.ಇ.ಬಿ ಡಿಪಾರ್ಟ್ಮೆಂಟನವರು ಅಗೆದ ರಸ್ತೆಯ ಹೊಂಡಗಳು ಭ್ರಷ್ಟಾಚಾರದ ಮತ್ತು ಕೆಟ್ಟು ನಾರುತ್ತಿರುವ ಆಡಳಿತ ವ್ಯವಸ್ಥೆಯ ಹಾಗೂ ನಿಷ್ಕ್ರಿಯ ಸಮಾಜದ ದ್ಯೋತಕವಾಗಿ ಕಪನೀಪತಿಗೆ ಕಾಣುತ್ತದೆ. ಈ ಕಾರಣಕ್ಕಾಗಿ ಅವನು ಎಲ್ಲರನ್ನೂ ಬಯ್ಯುವವನೇ. ಲೇಖಕರ ಮಾತಿನಲ್ಲೇ ಹೇಳುವುದಾದರೆ, "ಸರಕಾರನ,ಸಮಾಜಾನ,ಮಂತ್ರಿಗಳನ್ನ, ರಾಜಕಾರಣಿಗಳನ್ನ,ಧರ್ಮಗುರುಗಳನ್ನ,ಪೋಲೀಸರನ್ನು,ಸಾಯಿತಿಗಳನ್ನ,ಸಾಯದೇ ಇದ್ದವರನ್ನ,ಬುಧ್ಧಿಜೀವಿಗಳನ್ನ, ಬುದ್ದುಜೀವಿಗಳನ್ನ ಯಾರಂತೀರಿ ಅವರನ್ನು ಬಯ್ದದ್ದೇ ಬಯ್ದದ್ದು…."
ಆದರೆ ವರ್ಷಗಳಿಂದ ಅಲ್ಲೇ ವಾಸವಿದ್ದು ಆ ಹೊಂಡವನ್ನು ಮುಚ್ಚಿಸುವಲ್ಲಿ ಅವನು ತೋರಿಸುವ ಔದಾಸೀನ್ಯ ಮಾತ್ರ ಎಲ್ಲಿಯೂ ಅವನನ್ನು ಚುಚ್ಚುವುದಿಲ್ಲ,ತನ್ನ ಕರ್ತವ್ಯದ ಕುರಿತು ಎಚ್ಚರಿಸುವುದೂ ಇಲ್ಲ…. ಆದರೆ ಮತ್ತೆ ಟೆಲಿಫೋನ್ ತಂಡದವರು ಹೊಂಡ ಅಗೆದಾಗ ಸತ್ ಪ್ರಜೆಯಾದ ಕಪನೀಪತಿ ಉತ್ಸಾಹಿತನಾಗುತ್ತಾನೆ….. ಕಾರಣ ಮತ್ತೆ ಅವನಿಗೆ ಬಯ್ಯಲು ಒಂದು ವಿಷಯ ಸಿಕ್ಕಿತು….. ಸಮಸ್ಯೆ ಹಾಗೆಯೇ ಉಳಿಯಿತು.
ಹೀಗೆ ನವಿರಾದ ಹಾಸ್ಯದ ಮೂಲಕ ನಗುವನ್ನು ಮತ್ತು ಪ್ರಾಮಾಣಿಕ ಕಳಕಳಿಯನ್ನು ಬಿಂಬಿಸುವ ಬರಹವನ್ನು ನೀವು ಸಹ ಓದಿ ನೋಡಿ… ಇಲ್ಲಿ ಬಿರುಗಾಳಿ ಮಳೆಗೆ ಭೂಮಿಯ ಮೇಲ್ಪದರ ಕಿತ್ತು ಹೋಗುವಂತೆ ಬಿದ್ದು ಬಿದ್ದು ನಗುವ ಪ್ರಸಂಗಗಳು ಕಡಿಮೆ ಇರಬಹುದು. ಆದರೆ ಜಿಟಿಜಿಟಿ ಮಳೆಯ ನೀರು ನಿಧಾನವಾಗಿ ಪದರಗಳೊಳಗೆ ಇಳಿದು ನೆಲವನ್ನು ಹಸನು ಮಾಡುವಂತೆ ಮನಸ್ಸಿನಾಳದಲ್ಲಿ ಇಳಿದು ತಂಪಾದ ಅನುಭವವನ್ನು ನೀಡುತ್ತವೆ.
12 ಹಾಸ್ಯ ಪ್ರಬಂಧಗನ್ನೊಳಗೊಂಡ ಪುಸ್ತಕ. ಅಷ್ಟೇನು ಹಾಸ್ಯಮಯವಾಗಿಲ್ಲ. ನೀವು ಬೀchi ಪುಸ್ತಕಗಳನ್ನ ಓದಿದ್ದರೆ ಈ ಪುಸ್ತಕ ಅಷ್ಟೇನು ನಿಮಗೆ ಹಿಡಿಸುವುದಿಲ್ಲ ಆದರೂ ಒಂದು ಬಾರಿ ಓದಬಹುದಾದಂತಹ ಪುಸ್ತಕ.