ಶ್ರೀನಿವಾಸ ವೈದ್ಯ ಅವರ ಪುಸ್ತಕಗಳೆಂದರೆ ನನಗೆ ಬಹಳ ಇಷ್ಟ. ಅವರ ಪುಸ್ತಕಗಳು ಕೊಟ್ಟ ಹಣಕ್ಕೆ ಯಾವತ್ತೂ ಮೋಸ ಮಾಡುವುದಿಲ್ಲ.ಅವರ ಕಾದಂಬರಿ, ಪ್ರಬಂಧಗಳು ಹರಟೆಗಳನ್ನು ಓದಿದ್ದೇನೆ. ಅಗ್ನಿಕಾರ್ಯ ಅವರು ಪ್ರಥಮ ಕಥಾಸಂಕಲನ. ಇದರಲ್ಲಿ ಐದು ಕಥೆಗಳಿವೆ. ಕಥೆಯ ಚೌಕಟ್ಟಿನಲ್ಲಿ ಜೀವಾನುಭವಗಳನ್ನು ನವಿರು ಹಾಸ್ಯದ ಮೂಲಕ ಓದುಗರಿಗೆ ವರ್ಗಾಯಿಸುವ ಕೌಶಲ್ಯ ಅವರಿಗೆ ಚೆನ್ನಾಗಿ ಸಿದ್ಧಿಸಿದೆ. ಹುಬ್ಬಳ್ಳಿ ಧಾರವಾಡದ ಮರಾಠಿ ಮಿಶ್ರಿತ ಕನ್ನಡವನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳುವುದು ಕಥೆಗಳ ಸೊಗಡನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸುತ್ತದೆ.
ಪ್ರಸ್ತುತ ಸಂಕಲನದಲ್ಲಿ ನನಗೆ ಇಷ್ಟವಾದ ಕಥೆ 'ಸಹಪ್ರಯಾಣ'. ಈ ಕಥೆಯ ನಿರೂಪಕ ಅಪ್ಪಣ್ಣ. ತನ್ನ ಬಂಧುಗಳೊಬ್ಬರ ಮದುವೆ ಕಾರ್ಯಕ್ರಮವನ್ನು ಮುಗಿಸಿ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾನೆ ತನ್ನ ಮಡದಿ ಮತ್ತು ಇತರರೊಂದಿಗೆ. ಹಾಗೆ ರೈಲು ಮುಂದೆ ಮುಂದೆ ಓಡುತ್ತಿರಬೇಕಾದರೆ ಇವನ ನೆನಪುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಲಾರಂಭಿಸುತ್ತವೆ. ಮೊದಲ ಭಗ್ನಪ್ರೇಮ,ಕೈಹಿಡಿದ ಪತ್ನಿ ಮಾಲಿನಿ ಮಕ್ಕಳು ಮರಿಗಳ ಸುತ್ತ ಈ ನೆನಪುಗಳ ಗಂಟು ಬಿಚ್ಚಿಕೊಳ್ಳುತ್ತಾ ತನ್ನ ಹೆಂಡತಿಯ ಮೇಲೆ ಸಂಶಯದ ಬೇರು ಚಿಗುರಿದ್ದರ ಬಳಿ ಸುತ್ತು ಹಾಕಲಾರಂಭಿಸುತ್ತದೆ. ಮಡದಿ ಮದುವೆಯೊಂದಕ್ಕೆ ಹೋದಾಗ ತನ್ನ ಕೆಟ್ಟ ಕುತೂಹಲದಿಂದ ಅವಳ ಟ್ರಂಕಿನ ಬೀಗ ಒಡೆದಾಗ ಒಳಗಡೆ ಕಂಡ ಒಂದು ಯುವಕನ ಫೋಟೋ ಮತ್ತು ಅದರ ಹಿಂಬದಿಯಲ್ಲಿ ಓದಲಾರದಂತೆ ಪದೇ ಪದೇ ಹೊಡೆದು ಹಾಕಿರುವ ವಾಕ್ಯಗಳು ಸಂಶಯದ ಬೀಜ ಮೊಳಕೆಯೊಡೆಯಲು ಕಾರಣ. ಫೋಟೋದಲ್ಲಿನ ಯುವಕ ಯಾರು? ಅವನಿಗೂ ಇವನ ಮಡದಿ ಮಾಲಿನಿಗೂ ಏನು ಸಂಬಂಧ? ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದರೂ ಅವನೇಕೆ ಈ ಕುರಿತಾಗಿ ಹೆಂಡತಿಯ ಜೊತೆ ಪ್ರಸ್ತಾಪ ಎತ್ತಲಿಲ್ಲ? ರೈಲಿನ ಪ್ರಯಾಣದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತೇ? ಎಂಬಲ್ಲಿಗೆ ಕಥೆ ಮುಗಿಯುತ್ತದೆ. ಬಾಳೆಂಬ ಪಯಣವನ್ನು ನಮ್ಮ ಕಣ್ಣ ಮುಂದೆ ತರಲು ಸಾಂಕೇತಿಕವಾಗಿ ರೈಲನ್ನು ಬಳಸಿದ್ದಾರೆ ಲೇಖಕರು. ಅಲ್ಲಿ ಎಲ್ಲಾ ಸ್ತರದ ಜನರು ಒಟ್ಟಿಗೆ ಹೊರಟಿದ್ದಾರೆ. ಅವರವರ ಗಮ್ಯ ಬಂದಾಗ ಹತ್ತುವವರು ಹತ್ತುತ್ತಿದ್ದಾರೆ. ಇಳಿಯುವವರು ಇಳಿಯುತ್ತಿದ್ದಾರೆ. ಕೆಲವೊಬ್ಬರು ಆ ರೈಲಿನಲ್ಲಿ ಪಯಣಿಸಲು ಮುಚ್ಚಿದ ಬಾಗಿಲನ್ನು ತೆರೆಯುವಂತೆ ಕೂಗಿಕೊಳ್ಳುತ್ತಿದ್ದಾರೆ. ರೈಲು ಒಮ್ಮೆ ನಿಧಾನವಾಗಿ ಒಮ್ಮೆ ವೇಗವಾಗಿ ಸಾಗುತ್ತಿದೆ. ಇವೆಲ್ಲವನ್ನೂ ಲೇಖಕರು ಪ್ರಜ್ಞಾಪೂರ್ವಕವಾಗಿಯೇ ತಂದಿದ್ದಾರೆ ಎನಿಸಿತು. ಜೀವನದಲ್ಲಿ ಕೆಲವೊಮ್ಮೆ ಅತ್ಯಂತ ಪ್ರಮುಖ,ನಿರ್ಣಾಯಕ ಎಂದೆನಿಸಿದ್ದು ಕಾಲಸರಿದಂತೆ ನಗಣ್ಯವಾಗುತ್ತ ಹೋಗುವ ಚಿತ್ರಣ ಇಲ್ಲಿದೆ.
ಹಾಗೆಯೇ 'ರುದ್ರಪ್ರಯಾಗ' ಕಥೆಯಲ್ಲಿ ಪುಣ್ಯಸಂಚಯಕ್ಕೆಂದು ಕೈಗೊಳ್ಳುತ್ತಿದ್ದ ತೀರ್ಥಯಾತ್ರೆಗಳು ಹೊಸತಲೆಮಾರಿನವರಿಗೆ ಕೇವಲ ಮೋಜಿನ ಪ್ರವಾಸವಾದದ್ದು ನೋಡಿ ಈ ಖೇದವೆನಿಸಿತು. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಧಾರ್ಮಿಕ ಶ್ರಧ್ಧಾಕೇಂದ್ರಗಳು ಕೇವಲ ಹೆಸರಿಗಷ್ಟೇ ಉಳಿದುಕೊಂಡು ಅವುಗಳ ಮೇಲಿರುವ ಶ್ರದ್ಧೆ ಭಕ್ತಿ ನಂಬಿಕೆಗಳು ಹೋಗಿ ಬರೀ ಮೋಜಿನ ತಾಣಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ….
ಇತರ ಕಥೆಗಳಾದ 'ಹಣತೆಗಳು' 'ಮತ್ತೊಂದು ಹಳೆಯ ಕತೆ' ಮತ್ತು 'ಅಗ್ನಕಾರ್ಯ' ಬಹಳ ಚೆನ್ನಾಗಿ ಓದಿಸಿಕೊಂಡು ಹೋಗುತ್ತವೆ. ಕೊನೆಯದಾಗಿ ಕಥೆಗಳು ಅಥವಾ ಯಾವುದೇ ಬರಹಗಳು ಜೀವನಾನುಭವವನ್ನು ಕೊಡುತ್ತವೆ. ಆದರೆ ಜೀವನಾನುಭವದ ಮೂಸೆಯಲ್ಲಿ ಕಥೆಗಳು ಅರಳಿದಾಗ ಅವುಗಳಿಂದ ದೊರಕುವ ಜೀವನೋತ್ಸಾಹ,ಚಿಮ್ಮುವ ಈ ಜೀವನಪ್ರೀತಿಯನ್ನು ವರ್ಣಿಸಲು ಪದಗಳಿಲ್ಲ… ಶ್ರೀನಿವಾಸ ವೈದ್ಯ ಅವರ ಕಥೆಗಳು ಈ ಸಾಲಿನಲ್ಲಿ ಮೊದಲನೆಯವು…….
ಹಣತೆಗಳು ಕತೆಯಲ್ಲಿ ನಿರೂಪಕನಿಗೆ ವಯಸ್ಸಾಗಿದೆ.ಶಹರದ ಅವನು ಆಗಾಗ ಏಕಾಂತ ಹುಡುಕಿಕೊಂಡು ಕೂತಿರುತ್ತಾನೆ. ಆಗ ಅವನಿಗೆ ತನ್ನೂರು ನೆನಪಾಗುತ್ತದೆ. ಅಲ್ಲಿನ ಜನ, ಆಗಿನ ಪರಿಸರ ಎಲ್ಲಾ.ಅವಾಗಿನ ನೆನಪಿನ ಹಣತೆ ನೆನಪಾಗುವವನಿಗೆ ಈಗಿನ ಜೀವನದ ಸುಖಗಳು ಯಾಕೆ ಅಷ್ಟು ಕಾಡುವುದಿಲ್ಲ ಅನಿಸುತ್ತದೆ. ಬಾಲ್ಯದಲ್ಲಿ ಶಾಲೆಗೆ ಹೋಗಲು ಹೆದರುತ್ತಿದ್ದವನೊಬ್ಬ ಪೋಲೀಸ್ ಆಗಬೇಕೆಂಬ ಆಸೆಯಿದ್ದವ ನೆನಪಾಗುತ್ತಾರೆ. ತಾನು ಸಿಗ್ನಲ್ ಜಂಪ್ ಮಾಡಿದಾಗ ಹಿಡಿದು ,ಹೋಗಲು ಬಿಟ್ಟವ ಅವನೇಯಾ ಎಂಬ ಸಂಶಯ ನಿರೂಪಕನಿಗೆ ಬಗೆಹರಿಯುವುದಿಲ್ಲ.
'ಮತ್ತೊಂದು ಹಳೆಯ ಕತೆ'ಯಲ್ಲಿ ಆರಾಣೆಗೆ ಸೇರು ಬೆಣ್ಣೆ ಸಿಗುವ ದಿನಗಳ ಕತೆ, ಅಪ್ಪ ಸತ್ತು ದೊಡ್ಡಪ್ಪನ ಹಂಗಲ್ಲಿರಬೇಕಾದ ಹುಡುಗ,ಅಮ್ಮ,ಅಕ್ಕ ಮತ್ತು ಅವರ ಆಳು ರಾಣ್ಯಾನ ಕತೆ. ಹೆಂಗಸಿನ ಚಟಕ್ಕೆ ಬಿದ್ದು ಹಾಳಾದ ರಾಣ್ಯಾನ ಕತೆ ವಿಷಾದ ಉಕ್ಕಿಸುತ್ತದೆ.
ರುದ್ರಪ್ರಯಾಗ ದಲ್ಲಿ ಗುರಣ್ಣ ,ತನ್ನ ದತ್ತಕಕ್ಕೆ ತಗೊಂಡು ಸಾಕಿದ ತಾಯಿ ಕೃಷ್ಣಕ್ಕನೊಂದಿಗೆ ತೀರ್ಥಯಾತ್ರೆಗೆ ಹೊರಟಿದ್ದಾನೆ. ಅವನ ಮೊಮ್ಮಗಳು ಸೂಸನ್ ಬಂದಿದ್ದಾಳೆ ಜೊತೆಗೆ. ಅವನಿಗೆ ತನ್ನ ದತ್ತಕಕ್ಕೆ ತಗೊಂಡಾಗಿಂದ ತನ್ನ ಮೇಲೆ ,ವ್ಯಕ್ತಿತ್ವದ ಮೇಲೆ ಹಿಡಿತ ಸಾಧಿಸಿದ ಕೃಷ್ಣಕ್ಕ, ಅಮೆರಿಕಕ್ಕೆ ಹೋಗಿ ಬಿಳಿಯವಳ ಕಟ್ಟಿಕೊಂಡ ಮಗ, ಮೊಮ್ಮಗಳು ಸೂಸನ್,ಇತ್ತ ಕೊರಗಲ್ಲೇ ತೀರಿ ಹೋದ ಹೆಂಡತಿ ಎಲ್ಲ ಗೋಜಲು ಅನಿಸುತ್ತದೆ.ಇಲ್ಲೂ ಅಂತ್ಯಕ್ಕೆ ನಲವತ್ತು ವರ್ಷದ ಮೊದಲಿನವ ,ಈಗ ಕಂಡವ ಅವನೆಯಾ ಎಂಬ ಗೊಂದಲವಿದೆ. ಭಾಷೆಯಲ್ಲಿ ಭಾವ ಹಿಡಿದದ್ದು ಈ ಕತೆಯ ಇದರ ಮುಖ್ಯ ಅಂಶ.
ಸಹಪ್ರಯಾಣ ಕತೆ ಒಂದು ಮದುವೆ ದಿಬ್ಬಣದ ರಾತ್ರಿ ರೈಲು ಯಾನದ ಕತೆ. ಹೊಸ ಜೋಡಿಯ ಆಟಗಳ ನೋಡುತ್ತಾ, ಪಕ್ಕದ ಬರ್ತನಲ್ಲಿ ಹೆಂಗಳೆಯರ ಕುಲು ಕುಲು ಮಾತುಗಳ ಕೇಳುತ್ತಾ, ನಡುರಾತ್ರೆ 'ಬಾಗಿಲು ತೆಗಿರಿ' ಅಂತ ಬಡಿದು ಹೋದ ಸಹಪ್ರಯಾಣಿಕ ತೆರೆದ ನೆನಪಿನ ಬಾಗಿಲ ಮೂಲಕ ಅಪ್ಪಣ್ಣ ರಾತ್ರಿ ಕಳೆಯುತ್ತಾನೆ. ಅವನ ಮೊದಲ ಪ್ರೇಮ ನೆನಪಾಗುತ್ತದೆ. ಈಗ ಮದುವೆಯಾಗಿ ಇಪ್ಪತ್ತು ವರ್ಷ ಕಳೆದಿದ್ದರೂ ಹೆಂಡತಿಯಾದ ಮಾಲಿನಿಯ ಜೊತೆಗಿನ ಸಂಗ ನೆನಪಾಗುತ್ತದೆ.ಇದರಲ್ಲಿನ ಒಂದು ಸಾಲು ಬಹಳ ಹಿಡಿಸಿತು 'ಮಾಲಿನಿ ತನ್ನ ತಾಯ್ತನದ ಸಂಭ್ರಮದಾಗ ಹೊಣೆಗಾರಿಕೆಯೊಳಗ ಕ್ರಮೇಣ ತಾನು ಅಪ್ಪಣ್ಣನ 'ಸಖಿ' ಅನ್ನುವುದನ್ನು ಮರೆತುಬಿಟ್ಟಿದ್ದಳು.ಅಷ್ಟೇ ಅಲ್ಲ ಅವನ ಅಜ್ಜೀನೋ,ಬಾಸ್ ಏನೋ ಅನ್ನೋಥರಾ ನಡಕೊಳ್ಳಿಕೆ ಹತ್ತಿದ್ದಳು.' ಹೆಂಡತಿಯ ಟ್ರಂಕ್ ನೋಡಿದ ಅಪ್ಪಣ್ಣನಿಗೆ ಸಂಶಯ ಬರುತ್ತದೆ. ಅದರಲ್ಲಿ ಇರುವ ಹುಡುಗನೊಬ್ಬನ ಹಳೆಯ ಪಟ ನೋಡಿ. ಅವನಿಗೆ ಅದರಲ್ಲಿ ಇರುವವನಿಗೂ ತನ್ನ ಹೆಂಡತಿಗೂ ಪ್ರೀತಿ ಇತ್ತೇ ಅನ್ನುವುದಕ್ಕೆ ಉತ್ತರ ಸಿಗುವುದಿಲ್ಲ. ಆದರೆ ಸಂಸಾರ ಸಾಗಿದ ಇಷ್ಟು ವರ್ಷದ ಬಳಿಕ ಅದೆಲ್ಲ ಮುಖ್ಯ ಅನಿಸುವುದಿಲ್ಲ. ಕೊನೆಗೆ ಅವಳಿಗೆ ತಕರಾರು ಇಲ್ಲದಿದ್ದರೆ ಇವಳೇ ಏಳು ಜನ್ಮಕ್ಕೂ ಸಿಗಲಿ ಅಂತ ಪ್ರಾರ್ಥಿಸುತ್ತಾನೆ. ಬದುಕಿನ ಇದ್ದ ಹಾಗೆಯೇ ಚಿತ್ರಿಸುವ ಮನೋಜ್ಞ ಕತೆ ಇದು.
ಅಗ್ನಿಕಾರ್ಯ ಕತೆಯಲ್ಲಿ ರೈಲು ಬುಕಿಂಗ್ ಕೌಂಟರಲ್ಲಿ ಕಾಯುತ್ತಾ ಕುಳಿತ ನಿರೂಪಕನಿಗೆ ಗಂಡನ ಅನಾದರಣೆಗೆ ಒಳಗಾದ ಹೆಂಡತಿ ಯಲ್ಲಿ ಮಾಯಕ್ಕ ಕಾಣುತ್ತಾಳೆ. ಮಾಯಕ್ಕ ಕತೆ ಹೇಳುತ್ತಿದ್ದದ್ದು.ಮದುವೆಯಾಗಿ ಹೋದದ್ದು, ಗಂಡನ ಮನೆಯವರ ಕ್ರೂರ ವರ್ತನೆ, ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿ ಅವಳು ಮುಸ್ಲಿಂ ಆದದ್ದು ,ಎಷ್ಟಾದರೂ ಕೊಟ್ಟ ಹೆಣ್ಣು ಕುಲದ ಹೊರಗೆ ಅನ್ನುವ ಮನೆಯವರ ವರ್ತನೆ ಕಾಡುತ್ತದೆ.
ಇದು ಶ್ರೀನಿವಾಸ ವೈದ್ಯರ ಮೊದಲ ಕತಾ ಸಂಕಲನ. ಏನನ್ನು ಬರೆದರೂ ಚಂದ ಬರೆವ ವೈದ್ಯರ ಓದುವುದೇ ಒಂದು ಖುಷಿ.