#ಅಕ್ಷರವಿಹಾರ_೨೦೨೫ ಕೃತಿ: ಶ್ರೀ ಚಾಮುಂಡೇಶ್ವರಿ ಭವನ ಲೇಖಕರು: ವ್ಯಾಸರಾವ್ ನಿಂಜೂರ್ ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ವಿರಾಮದ ಓದಿಗೆ ಹೇಳಿ ಮಾಡಿಸಿದಂತಹ ಕಾದಂಬರಿ. ಒಂದು ಊರು. ಆ ಊರಿನಲ್ಲಿ ಪ್ರಾರಂಭವಾದ ಒಂದು ಹೋಟೆಲು. ಇಡೀ ಊರಿನ ವಿದ್ಯಮಾನವು ಆ ಹೋಟೇಲಿನ ಮೂಲಕವಿಸ್ತರಿಸಲ್ಪಡುವುದು, ವಿಮರ್ಶಿಸಲ್ಪಡುವುದು ಹಾಗೂ ಕ್ರಮೇಣವಾಗಿ ಇಂತಹ ವಿದ್ಯಮಾನಗಳು ತೆರೆಮರೆಗೆ ಸರಿದು ಕಾಲಗರ್ಭದಲ್ಲಿ ಲೀನವಾಗುತ್ತಲೇ ಇನ್ನೊಂದಿಷ್ಟು ಪ್ರಸಂಗಗಳು ಅಲ್ಲಿ ಜಾಗ ಮಾಡಿಕೊಳ್ಳುವುದು,ಮತ್ತೆ ಮತ್ತೆ ಇವುಗಳು ಪುನರಾವರ್ತನೆಯಾಗುತ್ತ ಕೆಲವು ವಿಚಾರಗಳು ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದರೆ ಇನ್ನೂ ಹತ್ತು ಹಲವು ಘಟನೆಗಳು ನಡೆದೇ ಇಲ್ಲವೇನೋ ಎಂಬಂತೆ ಜನಮಾನಸದಿಂದ ಮಾಸಿ ಹೋಗುತ್ತಾ ಎಂದಿನಂತೆ ಜನಜೀವನ ಸಹಜವಾಗಿ ತೆರೆದುಕೊಳ್ಳುವ ಮೂಲಕ ಕಾಲನ ಪ್ರವಾಹದಲ್ಲಿ ಎಲ್ಲವೂ ಬದಲಾಗುತ್ತ ಹೋಗುವುದೇ ನಿಜವಾದ ಸ್ಥಿರತೆಯನ್ನು ಕಾಯ್ದುಕೊಳ್ಳುವುದು, ಬೇರೆಲ್ಲಾ ಆ ಕ್ಷಣದ ಪ್ರತಿಕ್ರಿಯೆಗಳು ಎನ್ನುವಷ್ಟು ಸರಳವಾಗಿ ಕೃತಿಯು ಓದಿಸಿಕೊಳ್ಳುತ್ತದೆ.
ಕತೆ ನಡೆಯುವ ಸ್ಥಳ ಉಡುಪಿಯ ಆಸುಪಾಸಿನಲ್ಲಿಯಾದರೂ ಇದು ಯಾವುದೇ ಊರಿನಲ್ಲಿ ಬೇಕಾದರೂ ನಡೆಯಬಹುದಾದ, ನಡೆದಿರುವಂತಹ ಕತೆಯಾಗಿರಬಹುದು. ಊರಿನ ಹುಡುಗನೊಬ್ಬ ಮಾಡಿದ ತಪ್ಪಿಗೆ ಹೆದರಿ ಊರು ಬಿಟ್ಟು ಹೋಗುವುದು,ಅಕ್ಕಪಕ್ಕದ ಮನೆಯ ಯುವಕ ಯುವತಿಯರ ನಡುವೆ ಸಹಜವಾಗಿ ಅರಳಿರಬಹುದಾದಂತಹ ಪ್ರೇಮ ಕತೆಗಳು, ಊರಿಗೆ ಮೊದಲ ಬಾರಿಗೆ ಬಸ್ಸು ಬಂದಾಗ ಕಾತರದಿಂದ ಕಾಯ್ದ ಘಳಿಗೆಗಳು, ಮೊದಲ ಬಾರಿಗೆ ಕದ್ದು ಸೇದಿದ ಸಿಗರೇಟು,ಇಷ್ಟಪಟ್ಟ ಹುಡುಗಿಯ ಜೊತೆಯಲ್ಲಿ ಅತಿಯಾದ ಸಲಿಗೆಯಿಂದಾದ ಕಪಾಳಮೋಕ್ಷ, ತನ್ನ ಒಣ ಪ್ರತಿಷ್ಠೆಯನ್ನು ಮೆರೆಸಲು ನಡೆಸಿದ ಲೈಂಗಿಕ ದೌರ್ಜನ್ಯ, ಅನಿವಾರ್ಯವಾಗಿ ಎಂಬಂತೆ ನಡೆಯುವ ಗುಪ್ತಾನುಗುಪ್ತ ಸಂಬಂಧಗಳು, ಆಗಾಗ್ಗೆ ನಡೆಯುವಂತಹ ಬಣ ಜಗಳಗಳು, ಹೊಡೆದಾಟಗಳು, ಇವೆಲ್ಲವನ್ನೂ ಮೀರಿ ಬೆಳೆಯುವ ಊರೆಂಬ ಊರು, ಕೊನೆಯಲ್ಲಿ ಇವುಗಳೆಲ್ಲವನ್ನೂ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಂತಹ ಊರು ಜನರ ಬಾಯಿ ಮಾತಿನಲ್ಲಿ ನೆನಪಾಗಿ ಅರಳುವುದನ್ನು ನೋಡಿದಾಗ ತನ್ನ ಪ್ರಾದೇಶಿಕ ಗುಣ ವಿಶೇಷಣದಿಂದಲೇ ಸಾರ್ವತ್ರಿಕವಾಗಿ ಛಾಪನ್ನು ಮೂಡಿಸುತ್ತದೆ.
ಕತೆಯಲ್ಲಿ ಮೈ ಮನಸ್ಸುಗಳು ಬೆಚ್ಚಗಾಗುವ ವಿವರಣೆಗಳನ್ನು ಪದೇ ಪದೇ ಓದುವಾಗ ಕಿರಿಕಿರಿ ಅನಿಸಿದ್ದು ಸುಳ್ಳಲ್ಲ. ಆದರೆ ಲೇಖಕರು ಅದನ್ನು ಮರೆಮಾಚಿ ಗಂಭೀರವಾಗಿ ಕತೆಯನ್ನು ತೆಗೆದುಕೊಂಡಿದ್ದರೆ ಬಹಳಷ್ಟು ಕೃತಕದಂತೆ ಭಾಸವಾಗುವ ಸಾಧ್ಯತೆ ಸಹ ಇತ್ತು,ಕಾರಣ ಸಹಜ ಆಡುಭಾಷೆಯಲ್ಲಿ ತತ್ವ ಜಿಜ್ಞಾಸೆಗಿಂತ ರೋಚಕತೆಗೆ ಹೆಚ್ಚು ಪ್ರಾಶಸ್ತ್ಯ…
'ತೆಂಕನಿಡಿಯೂರಿನ ಕುಳುವಾರಿಗಳು ' ಓದಿದವರಿಗೆ ಅದರ ಭಾಷೆ ಮತ್ತು ಅದರಲ್ಲಿನ ಪ್ರಸಂಗಗಳ ತಾಜಾತನ ನೆನಪಿರಬಹುದು. ಅದು ಪ್ರಸಿದ್ಧವಾದೊಡನೆ ಅವರ ತೊಂಬತ್ತೊಂದರಲ್ಲಿ ಬಂದ ಈ ಹಳೆಯ ಕಾದಂಬರಿ ಮರುಮುದ್ರಣವಾಗಿದೆ. ಅಂಕಿತ ಪ್ರಕಟಿಸಿರುವ ಪುಸ್ತಕಕ್ಕೆ ಅವರ ಪ್ರಕಟನೆಯ ಇತರ ಎಲ್ಲ ಪುಸ್ತಕಗಳಂತೆ ಭಾರೀ ರೇಟು.ಇರಲಿ.
ಕೆಮ್ಮಣ್ಣುವಿನಲ್ಲಿ ಬ್ರಾಹ್ಮಣ ವಾಸುದೇವ ಉರುಫ್ ವಾಸಪ್ಪಯ್ಯ ತೆರೆದ 'ಚಾಮುಂಡೇಶ್ವರಿ ಭವನ' ಎಂಬ ಹೋಟ್ಲು ಮತ್ತು ಆ ಪರಿಸರದ ಜನಜೀವನ ಚಿತ್ರಣವೇ ಈ ಕಾದಂಬರಿ. ಬಸ್ಸು ಮೊದಲ ಬಾರಿಗೆ ರಸ್ತೆಗಿಳಿದ ಕಾಲದ್ದು ಕತೆ. ಹಾಗಾಗಿ ಹಳ್ಳಿಯ ತಮಾಷೆಗಳು, ಜನರ ಲಂಪಟತನ, ಸುದ್ದಿಗಳು,ಹರಟೆಗಳು,ಒಬ್ಬೊಬ್ಬರ ಜೀವನ ಕತೆಗಳು ಎಲ್ಲವನ್ನೂ ಒಳಗೊಂಡ ಸಂತೆ ಇದು. ಎಲ್ಲೂ ಭಾಷೆಯ ವಿಷಯದಲ್ಲಿ ರಾಜಿಯಾಗದೆ ಬರೆದ ಕಾರಣ ಇನ್ನೂ ಆಪ್ತವಾಗುತ್ತದೆ. ವ್ಯಕ್ತಿಗಳ ಜೀವನವನ್ನೂ, ಅವರ ಬಾಯಿ ಹರಟೆಯನ್ನೂ,ಕೊಂಚ ಓಪನ್ ಆಗಿ ಕಾಮವನ್ನೂ ಚಿತ್ರಿಸುವಲ್ಲಿ ವ್ಯಾಸರಾವ್ ಎತ್ತಿದ ಕೈ .ಹಾಗಾಗಿ ಇಡೀ ಕತೆಗೆ ಒಂದು ಲವಲವಿಕೆ ಪ್ರಾಪ್ತ ವಾಗಿದೆ. ಹಾಗೇ ಆಗಿನ ಜಾತಿ ವ್ಯವಸ್ಥೆ ಮೇಲು ಕೀಳು ಎಲ್ಲ ಇದ್ದ ಹಾಗೇ ತಂದ ಕಾರಣ (ಎಲ್ಲೂ ಸರಿ ತಪ್ಪುಗಳ ಹೇಳದೆ) ನೈಜ ಚಿತ್ರಣ ದೊರೆಯುತ್ತದೆ.
ಈ ಪ್ರಸಂಗ ಗಮನಿಸಿ.ಇದು ಇಷ್ಟವಾದರೆ ನೀವು ಧಾರಾಳ ಓದಬಹುದು
ತನ್ನ ವೃತ್ತಿಗೆ ಸಂಬಂಧವಾದ ರಂಜಕ ಕಥೆಗಳನ್ನು ವಿಶ್ವನಿಗೆ ಹೇಳುವ ಪರಿಪಾಠವೂ ಶಂಕ್ರನಿಗಿದೆ. ' ಒಮ್ಮೆ ಏನಾಯ್ತು ಗೊತ್ತುಂಟ ಒಡೆಯ' - ಎನ್ನುತ್ತಾನೆ ಶಂಕ್ರ 'ಏನಾಯ್ತು ಅಂತೀಯ' - ಕಣ್ಣಲ್ಲೆಲ್ಲ ಕುತೂಹಲ ವಿಶ್ವನಾಥನಿಗೆ. 'ಕುಂಜಾಲಿನ ದಾರಿಯಾಗಿ ಕೊಕ್ಕರ್ಣಿಗೆ ಹೋಗ್ತಿದ್ದೆ ಬಲ್ರಾ' 'ಹ್ಞೂ' 'ಕುಂಜಾಲು ಬಿಡುವಷ್ಟರಲ್ಲಿ ರಾತ್ರಿಯಾಯ್ತು. ಲಾಟೀನು ಹಚ್ಚಿ, ಗಾಡಿಯ ಮುಂಭಾರ ಕಡಿಮೆ ಮಾಡಿದೆ' 'ಯಾಕೆ' 'ತಗ್ಗಲ್ದ ಮಾರಾಯ್ರೆ, ಕೇಳ್ನಿ. ಎತ್ತುಗಳ ಕೊರಳ ಗಂಟೆ ಸಡಿಲಿಸಿದೆ.ಮೂಗುದಾರ ಮೆಲ್ಲನೆ ಹಿಡಿದು ಸವಾರಿ ಮಾಡ್ತಿದ್ದೆ. ದಾರೀಲಿ ಒಂದು ನರಹುಳುವೂ ಕಾಂಬುಕಿಲ್ಲೆ.ಸ್ವಲ್ಪ ಮಂಪರು ಬಂದಿತ್ತು ನನಗೆ.ಒಂದೇ ಸಲ ಸುಯ್ಞ್, ಸುಯ್ಞ್ ಅಂತ ಶಬ್ದ ಆಯ್ತು. ಎಂಥದೂಂತ ಕಾಂಬೊತ್ತಿಗೆ ಎತ್ತುಗಳು ಕೊರಳ ಗಂಟೆಯ ಶಬ್ದವನ್ನು ಜೋರು ಮಾಡುತ್ತಾ ಸುಯ್ಞ್ ಅನ್ತಿದ್ದವು.ಎದುರು ನೋಡಿದೆ.ಉಚ್ಚೆ ಬರುವಷ್ಟು ಹೆದರಿಕೆಯಾಯ್ತು ಮಾರಾಯ್ರೆ' ವಿಶ್ವ ನಕ್ಕು - ' ಯಾಕೊ' ಎಂದ. 'ಇದುರಿಗೆ ಹೆಬ್ಬುಲಿ.ಅದರ ಬೋಳೆ ಕಣ್ಣು ಕಂಡು ಎದೆ ಧಸಕ್ಕೆಂದಿತು' ' ಹೆಬ್ಬುಲಿ ನಿನ್ನನ್ನು ತಿನ್ನಲಿಲ್ವ?' 'ತಿನ್ನುವುದಾ? ಅದಕ್ಕಷ್ಟು ತಾಕತ್ತುಂಟ? ಇಲ್ಲಿ ಕೇಳಿ, ನಮ್ಮ ಕರಿಯ ಎತ್ತು ಉಂಟಲ್ಲ. ಅದು ಗಾಡಿಯ ಭಾರದ ಗೊಡವೆ ಇಲ್ಲದೆ ಒಮ್ಮೆಲೆ ಹುಲಿಗೆ ಹಾಯಲು ಹೋಯ್ತು ಮಾರಾಯ್ರ. ಏನು ಠೇಂಕಾರ ಅಂತೀರಿ ಅದಕ್ಕೆ! ಇದನ್ನು ಕಂಡದ್ದೇ ಸೈ, ಹುಲಿ ಹೆದರಿ ಕುಂಡೆಗೆ ಕಾಲು ಕೊಟ್ಟಿತು.ನಾನು ಗಾಡಿಯ ತಿರು ಬಿಗಿ ಹಿಡಿಯದಿದ್ದಿದ್ರೆ ಗಾಡಿ ಮಗುಚಿ ಬೀಳೋದೇ.ಏನೇ ಆಗಲಿ ಧೈರ್ಯ ಅಂದರೆ ಧೈರ್ಯ ನಮ್ಮ ಎತ್ತುಗಳದ್ದು'.
ಅಲ್ಲಲ್ಲಿ ರಸಿಕತೆ ಜಾಸ್ತಿ ಅನಿಸಿದರೂ ಒಟ್ಟಾರೆಯಾಗಿ ಕೊಲಾಜ್ ಮಾದರಿಯ ಚಿತ್ರಣ ಇರುವ ಕಾದಂಬರಿಯಲ್ಲಿ ಅದೇನೂ ಮೆರೆ ಮೀರಿತು ಅನಿಸುವುದಿಲ್ಲ. ಓದಿ. ಖುಷಿಪಡಿ.