ಕೆಲವು ಪುಸ್ತಕಗಳ ಬಗ್ಗೆ ಬರೆಯಲು,ಓದಲು ,ಅರ್ಥ ಮಾಡಿಕೊಳ್ಳಲು 'ಅರ್ಹತೆ' ಇದೆಯೇ ಎಂದು ನನಗೆ ಅನುಮಾನವಾಗುತ್ತದೆ. ಇತ್ತೀಚೆಗೆ ಗುರುಗಳಾದ ಗುರುಪ್ರಸಾದ್ ಆಚಾರ್ಯ ಅವರು ಕೊಟ್ಟ ತೀರ್ಥರಾಮ ವಳಲಂಬೆಯವರ ' ಧ್ಯಾನ' ಮತ್ತು 'ದೇಶ ಕಾಲ ಬದುಕು ಮತ್ತು ದೇವರು' ಇಷ್ಟರವರೆಗೆ ಅಸ್ಪಷ್ಟವಾಗಿದ್ದ ಅನೇಕ ಚಿಂತನೆಗಳ ಸ್ಪಷ್ಟಪಡಿಸಿಕೊಳ್ಳಲು ನೆರವಾಯಿತು. ಶ್ರೀಯುತ Janardana Bhat ಅವರ ಸಂಪಾದಕತ್ವದಲ್ಲಿ ಹೊರಬಂದ ರಸಿಕ ಪುತ್ತಿಗೆಯವರ ಈ ಪುಸ್ತಕ ಈ ದಿಸೆಯಲ್ಲಿ ಇನ್ನಷ್ಟು ಮಾಹಿತಿ ನೀಡಿತು. ರಸಿಕ ಪುತ್ತಿಗೆಯವರ ಮಕ್ಕಳ ಕತೆಗಳ ಓದುಗ ನಾನು. ಅವರು ಇದನ್ನೆಲ್ಲ ಬರೆದದ್ದು ಗೊತ್ತೇ ಇರಲಿಲ್ಲ. ನುಡಿಸಿರಿಯಲ್ಲಿ ಕಂಡಾಗ ಖುಷಿಯಾಗಿ ಎತ್ತಿಕೊಂಡದ್ದು. ಗಹನ ವಿಚಾರಗಳ ಸರಳವಾಗಿ ಹೇಳಿದರೂ ಪ್ರವೇಶ ಇಲ್ಲದ ಕಾರಣ ಇದೆಲ್ಲ ಹೌದೇ ಎಂಬ ಕೌತುಕವೂ, ಬಾಲ್ಯದಿಂದ ಅನುಭವಕ್ಕೆ ಬಂದ (ಮೂಗು ಮುಚ್ಚಿ ಜಪ ಮಾಡುತ್ತಿದ್ದ ಕಾಲದ್ದು) ಹಲ ಧನಾತ್ಮಕ ಸಂಗತಿಗಳೂ ಇದನ್ನು ಓದುವಾಗ ನೆನಪಿಗೆ ಬಂತು.
ಯಂತ್ರ ಭಾಗ ಮತ್ತು ಮಂತ್ರ ಭಾಗ ಎಂಬೆರಡು ಭಾಗಗಳ ಈ ಪುಸ್ತಕ ' ಯಂತ್ರ ಮತ್ತು ಮಂತ್ರ' ಗಳನ್ನು ಚರ್ಚಿಸುತ್ತದೆ. ಇದನ್ನು ಓದುವಾಗ ' ಅರವತ್ತನಾಲ್ಕು ವಿದ್ಯೆಗಳು' ಎಂಬ ಧಾರವಾಡದಿಂದ ಪ್ರಕಟಿತ ಮನೆಯ ಅಟ್ಟದಲ್ಲಿದ್ದ (ಹೇಳುವುದಕ್ಕೇನು? ಅದರಲ್ಲಿ ಕಾಮಶಾಸ್ತ್ರ ಕದ್ದು ಮುಚ್ಚಿಓದುತ್ತಿದ್ದೆ. ಅದೇ ಪದ್ಮಿನಿ, ಚಿತ್ತಿನಿ ಇತ್ಯಾದಿ ನಾಲ್ಕು ಲಕ್ಷಣ ಎಲ್ಲ ಇತ್ತು) ಎಂಬ ಪುಸ್ತಕ ಕೂಡ ನೆನಪಾಯಿತು.
ಹಾಗಾಗಿ ಇದು ಸಂಪೂರ್ಣವಾಗಿ ಅರಿವಿಗೆ ಬಂತು ಎಂದು ಖಂಡಿತಾ ಹೇಳಲಾರೆ.ಆದರೆ ಉಪನಯನವಾದ ಬಳಿಕ ಕಲಿತದ್ದು 'ಶಕ್ತಿಯುಳ್ಳದ್ದು' ಹೌದು ಎಂಬ ಅರಿವೂ, ಯಾವ ಶಕ್ತಿಯನ್ನೂ ಒಳ್ಳೆಯದಕ್ಕೆ ಮತ್ತು ದುರುಪಯೋಗವಾಗದಂತೆ ಬಳಸಿಕೊಳ್ಳಬೇಕು ಅನ್ನುವುದನ್ನು ಇದರ ಪುಟ ಪುಟಗಳೂ ಸಾರಿ ಹೇಳುತ್ತವೆ.