ಈ ಸಲ ಗ್ರಂಥಾಲಯಕ್ಕೆ ಹೋದಾಗ ಒಂದು ನಿರ್ಧಾರ ಮಾಡಿದ್ದೆ, ಅದೇನೆಂದರೆ ಈವರೆಗೆ ಓದಿರದ ಅಥವಾ ಇನ್ನೂ ಹೆಚ್ಚಾಗಿ ತೆರೆದುಕೊಳ್ಳದ ಪ್ರಕಾರದ ಪುಸ್ತಕಗಳನ್ನು ತಂದು ಓದುವುದು. ಹಾಗೆ ಹುಡುಕುವಾಗ ಸಿಕ್ಕ ಪುಸ್ತಕ ಮೇಲಿನದ್ದು. ಈ ನಿರ್ಧಾರ ನನಗೆ ಅಪರೂಪದ ಪುಸ್ತಕದ ಅದ್ಭುತ, ಅಪೂರ್ವವಾದ ಓದನ್ನು ದೊರಕಿಸಿತು. ಹಾಗಾಗಿ ಸಣ್ಣ ಮಟ್ಟಿಗೆ ನನ್ನ ಬೆನ್ನು ನಾನೇ ತಟ್ಟಿಕೊಳ್ಳಬಹುದು.
ನಮ್ಮಲ್ಲಿರುವ ಅನೇಕ ಭ್ರಮೆಗಳನ್ನು, ಆಷಾಢಭೂತಿತನವನ್ನು ಈ ಪುಸ್ತಕವು ಒಂದೇ ಏಟಿಗೆ ಹೊಸಕಿ ಹಾಕುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ನಡೆಸುತ್ತಿರುವ ಅಪಸವ್ಯಗಳನ್ನು ಕುರಿತಾದ ಜಾಣ ಕುರುಡನ್ನು ಬಗೆದು ಹಾಕುತ್ತದೆ. ಐಷಾರಾಮಿ ಬದುಕನ್ನು ಬೆನ್ನು ಹತ್ತಿರುವ ಮನುಜರು ಬದುಕಿನ ಮೌಲ್ಯಗಳಿಗೆ ವಿಮುಖವಾಗಿ ಬದುಕಿನ ನಿಜವಾದ ಅರ್ಥವನ್ನು ಕಂಡುಕೊಳ್ಳಲು ವಿಫಲವಾಗುವ ಬಗೆಗೆ ವಿಷಾದವನ್ನು ಕೃತಿಯು ಸೂಚಿಸುತ್ತದೆ. ಇದರ ಜೊತೆಗೆ ನಮ್ಮ ವ್ಯವಸ್ಥೆ, ದೊಡ್ಡ ದೊಡ್ಡ ಬಂಡವಾಳಶಾಹಿ ಕಂಪನಿಗಳ ದ್ವಂದ್ವ ನಿಲುವುಗಳು, ಸರಳ ಜೀವನದ ಹೆಸರಿನಲ್ಲಿ ನಾವುಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಸಣ್ಣಪುಟ್ಟ ತಪ್ಪುಗಳಿಗೆ ತೆರುತ್ತಿರುವ ಬೆಲೆಯನ್ನು ಕುರಿತು ಓದುವಾಗ ಅಯ್ಯೋ... ಛೇ... ಎಂದು ಅನಿಸಿತು.
ಬಹುರಾಷ್ಟ್ರೀಯ ಕಂಪನಿಗಳು ಕೊಡುವ ದೊಡ್ಡ ಮೊತ್ತದ ಸಂಬಳ, ಜೊತೆಯಲ್ಲಿಯೇ ಇನ್ನಿತರ ಸೌಲಭ್ಯಗಳ ಬೆನ್ನು ಹತ್ತಿ, ನಮ್ಮದಾದ ಜೀವನ ಮೌಲ್ಯಗಳನ್ನು ಕಡೆಗಣಿಸುತ್ತಾ, ಪ್ರಕೃತಿಯೊಂದಿಗೆ ಅನುಸರಿಸಿಕೊಂಡು ಬದುಕಿ ಬಾಳಬೇಕಾಗಿದ್ದ ಜನಾಂಗ, ತನ್ನಂತೆಯೇ ಇತರ ಜೀವಿಗಳಿಗೆ ಬದುಕುವ ಹಕ್ಕು ಇದೆ ಎಂಬುದನ್ನು ಮರೆತು ನಡೆಸಿದ ಆಟಾಟೋಪಗಳಿಂದ, ಯಾವುದು ಸಹಜವಾಗಿರಬೇಕಿತ್ತೋ ಅದನ್ನು ಬದಿಗೊತ್ತಿ, ತಂತ್ರಜ್ಞಾನದ ಹೆಸರಿನಲ್ಲಿ ನಡೆಸಿದ ಅಪಸವ್ಯಗಳ ಬಗ್ಗೆ ನಾವೆಲ್ಲರೂ ಪಾಲುದಾರರು ಎನ್ನುವ ಕಹಿ ಸತ್ಯವನ್ನು ತಿಳಿಸುತ್ತದೆ.
ಹಾಗಾದರೆ ಈ ಪುಸ್ತಕವು ಅಭಿವೃದ್ಧಿಯ ತಂತ್ರಜ್ಞಾನದ ವಿರೋಧಿಯೇ... ಖಂಡಿತಾ ಅಲ್ಲ. ಆದರೆ ಎಷ್ಟೇ ಒಳ್ಳೆಯ ವಿಷಯವಿರಲಿ,ವಿಚಾರವಿರಲಿ ಅದಕ್ಕೊಂದು ಮಿತಿ ಇರುತ್ತದೆ, ಇರಬೇಕು. ಆದರೆ ಇಂದು ಎಲ್ಲಾ ಮಿತಿಗಳನ್ನು ದಾಟಿದರ ಪರಿಣಾಮವಾಗಿ ಒಂದು ಸಮಾಜವಾಗಿ ನಾವು ದುರಂತದೆಡೆಗೆ ಸಾಗುತ್ತಿದ್ದೇವೆ. ಇದಕ್ಕೆ ಪರಿಹಾರ ಇದೆಯೇ... ಖಂಡಿತಾ ಇದೆ. ನಮ್ಮೊಳಗಿನ ಧ್ವನಿಗೆ ಕಿವಿಕೊಟ್ಟು ಅದರಂತೆ ನಡೆದರೆ ಸಾಕು. ಹಾಗೆ ಒಂದು ಸ್ವಲ್ಪ ಬದಲಾವಣೆ ಕಂಡರೆ ನಿಜವಾಗಿ ಈ ಪುಸ್ತಕವನ್ನು ಓದಿದಂತೆ, ಓದಿ ಅರ್ಥ ಮಾಡಿಕೊಂಡಂತೆ ಎಂದು ಲೆಕ್ಕ.
ಅಂದ ಹಾಗೆ ಈ ಪುಸ್ತಕವನ್ನು ಬರೆದವರು ಹೆಸರಾಂತ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡಿ, ಈ ಬದುಕು ನನ್ನದಲ್ಲದ್ದು ಎಂಬ ಧ್ವನಿಗೆ ಕಿವಿಕೊಟ್ಟು ಕೃಷಿಕನಾದ ವಸಂತ ಕೇಶವ ಕಜೆ. ತಳುಕು ಬಳುಕಿನ ಬದುಕಿಗೆ ತಿಲಾಂಜಲಿ ಇಟ್ಟು, ಮರಳಿ ಮಣ್ಣಿಗೆ ನಡೆದ ದಾರಿಗೆ ಪೂರಕವಾದ ಅವರ ಯೋಚನಾ ಲಹರಿಗಳನ್ನು, ಅದರ ಜೊತೆಗೆ ಎದುರಾಗಬಹುದಾದ ಸವಾಲುಗಳನ್ನು, ಆ ಸವಾಲುಗಳನ್ನು ಮೆಟ್ಟಿ ನಿಲ್ಲಲು ಬೇಕಾಗುವ ಆತ್ಮಸ್ಥೈರ್ಯವನ್ನು ಕುರಿತಾದ ಹಲವು ಒಳನೋಟಗಳು ಕೃತಿಯಲ್ಲಿವೆ.
ಓದುವಾಗ ಪುಟ ಪುಟವೂ ಪಾಪಪ್ರಜ್ಞೆಯಿಂದಲೇ ಓದಿದೆ. ಇದರಲ್ಲಿನ ಹಲವು ಲೇಖನ 'ಹಸಿರುವಾಸಿ' ಪತ್ರಿಕೆಯಲ್ಲಿ ಬಂದಿವೆ. ಇಡಿಯಾಗಿ ತಮ್ಮ ಯಾತ್ರೆಯನ್ನು , ಐಟಿಯಿಂದ ಮಣ್ಣಿಗೆ ಮರಳಬೇಕಾದ ಸಮಯದ ಚಿಂತನೆಗಳನ್ನು, ನಾವೆಷ್ಟು 'ಘೋರವಾಗಿ' ಬದುಕುತ್ತಿದ್ದೇವೆ ಎಂಬುದನ್ನು ವಿವರಿಸಿದ ಲೇಖಕರಿಗೆ ವಂದನೆ. ಇದನ್ನು ಓದಿ ಈಗಿನ ಈ ಅವಲಂಬನೆ ಕೊಂಚವಾದರೂ ನಾನು ಕಡಿಮೆ ಮಾಡಿಕೊಂಡರಷ್ಟೇ ನಿಜವಾಗಿ 'ಓದಿದಂತೆ' . ಆದ್ದರಿಂದ ಇದನ್ನು ಇನ್ನೂ ಓದುತ್ತಾ ಇದ್ದೇನಷ್ಟೇ. ಜೀವನ ನಡೆಸಲು ಪರಿಸರ ನಾಶದ ಉದ್ಯೋಗ ಮಾಡುತ್ತಿರುವ ನಮಗೆಲ್ಲ ಇದನ್ನು ಓದುವಾಗ ಪಾಪಪ್ರಜ್ಞೆ ಕಾಡುತ್ತದೆ. 'ಪಡೆದ ಜೀವನವನ್ನೇ ಬಯಸಿದಂತಿದೆ ' ಎನ್ನುವ ಸಾಹಸಿಗೆ ನಮನ.
ಅವರ ಸಾಲುಗಳು ಈ ಕೆಳಗಿನವು “ITಯಿಂದ ಮೇಟಿಗೆ” ಪುಸ್ತಕವು ಓದುವವರಿಗೆ ತೆರೆದುಕೊಂಡು ಇಂದಿಗೆ 19 ದಿನಗಳು ಸಂದಿವೆ. ಸಾವಿರ ಪ್ರತಿಗಳಲ್ಲಿ 900 ಪ್ರತಿಗಳು ಮುಗಿದು ಸುಮಾರು ನೂರಕ್ಕೂ ಕಡಿಮೆ ಪ್ರತಿಗಳು ಉಳಿದಿವೆ. ಒಂದು ಪ್ರತಿ ಖರೀದಿಸಿ, ಓದಿ, ಮತ್ತೆ ಇಪ್ಪತ್ತೈದು ಪ್ರತಿ, ಹತ್ತು ಪ್ರತಿ, ಐದು ಪ್ರತಿ, ಮೂರು ಪ್ರತಿ ಹೀಗೆ ಬೇರೆ ಬೇರೆ ಸಂಖ್ಯೆಯಲ್ಲಿ ಮತ್ತೆ ಪಡೆದುಕೊಂಡ ಓದುಗರು ‘ಪುಸ್ತಕದ ಆಶಯವು ನಮಗೆ ಇಷ್ಟವಾಗಿದೆ’ ಎಂದು ಸೂಚಿಸಿದ್ದಾರೆ. ಪುಸ್ತಕದ ಸಹ ಪ್ರಕಾಶಕರಲ್ಲಿ ಅನೇಕರು ಮತ್ತು ಇತರೆ ಓದುಗರು ಬೇರೆ ಬೇರೆ ಮಾಧ್ಯಮಗಳಲ್ಲಿ ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಅನೇಕರು ನನಗೇ ನೇರವಾಗಿ ಕಾಲ್ ಮಾಡಿದ್ದಾರೆ. ಶ್ರೀವತ್ಸ ಜೋಷಿಯವರು ತಮ್ಮ ಅಂಕಣದಲ್ಲಿ ಈ ಪುಸ್ತಕದ ಬಗ್ಗೆ, ಅದರ ಬಗ್ಗೆ ಶ್ರೀಮತಿ ವಿದ್ಯಾ ದತ್ತಾತ್ರಿ ಅವರು ಬರೆದ ಮಾತುಗಳ ಸಹಿತ ಬರೆದುದು ಇನ್ನಷ್ಟು ಓದುಗರು ಆಸಕ್ತಿ ವಹಿಸಲು ಕಾರಣವಾಗಿದೆ. ಪ್ರಕಾಶಕರಾದ ಡಿವಿಜಿ ಬಳಗ ಮತ್ತು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಇವೆಲ್ಲ ನಡೆದಿವೆ.
ಇನ್ನು ಮುಂದೆ ಪುಸ್ತಕವನ್ನು ಖರೀದಿಸಬೇಕೆಂದಿರುವವರು ಈ ಕೆಳಗಿನ ವಿಧಾನಗಳ ಮೂಲಕ ಪಡೆದುಕೊಳ್ಳಬಹುದು. ೧) ನನ್ನಿಂದ ನೇರವಾಗಿ (ACCOUNT NUMBER - 115601502333, NAME - VASANTHA KESHAVA KAJE, IFSC CODE - ICIC0001156, BANK - ICICI) ಅಥವಾ UPI Id : 9008666266@icici) ೨) “ಕನ್ನಡ ಲೋಕ” ವೆಬ್ ಸೈಟ್ ಮೂಲಕ. https://www.kannadaloka.in/index.php?... ೩) ಪುತ್ತೂರಿನಲ್ಲಿ ‘ಅಮೃತ ಸಾವಯವ ಮಳಿಗೆ’ಯಲ್ಲಿ ೪) ಮೈಸೂರು “ಇಂದ್ರಪ್ರಸ್ಥ” ಸಾವಯವ ತೋಟ