ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾದ ದೇವುಡು ಅವರು ಬಹುಮುಖ ಪ್ರತಿಭೆಯ ವಿದ್ವಾಂಸರು. ದೇವುಡು ಅವರ ಕೃತಿ ರಚನೆ ಚಾರಿತ್ರಿಕ ಹಿನ್ನೆಲೆ, ಮನೋವೈಜ್ಞಾನಿಕ ಹಿನ್ನೆಲೆ, ಪೌರಾಣಿಕ ಆಧಾರಿತ, ಸಾಮಾಜಿಕ ಹಿನ್ನೆಲೆ ಮಕ್ಕಳ ಸಾಹಿತ್ಯ – ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಹರಿದು ಬಂದಿರುವುದು ಒಂದು ವಿಶೇಷ.
ದೇವುಡು(೧೮೮೬ ಡಿಸೆಂಬರ್ ೨೯ - ೧೯೬೨ ಅಕ್ಟೋಬರ್ ೨೭) ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು. ಅವರು ಅನೇಕ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ "ಮಹಾಕ್ಷತ್ರಿಯ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.