ಕರ್ಕಿ ಕೃಷ್ಣಮೂರ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯವರು. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಕೆಲಸದ ನಿಮಿತ್ತ ಮಸ್ಕತ್ ಹಾಗೂ ದುಬೈನಲ್ಲಿ ಕೆಲ ವರ್ಷ ನೆಲೆಸಿದ್ದು, ಪ್ರಸ್ತುತ ಬೆಂಗಳೂರಿನ ಕೊಲಿಯರ್ರ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದಾರೆ. ಓದು, ಸಿನೆಮಾ, ನಾಟಕ, ಪರ್ಯಟನೆ ಇವರ ಆಸಕ್ತಿಯ ಕ್ಷೇತ್ರಗಳು.
'ಮಳೆ ಮಾರುವ ಹುಡುಗ' 'ಗಾಳಿಗೆ ಮೆತ್ತಿದ ಬಣ್ಣ' ಅವರ ಕಥಾಸಂಕಲನಗಳು. 'ಚುಕ್ಕಿ ಬೆಳಕಿನ ಜಾಡು' ಕಾದಂಬರಿ ಪ್ರಕಟಿತ. 'ಸುಗಂಧಿ' ವಿಶೇಷಾಂಕದ ಸಂಪಾದಕರಾಗಿದ್ದರು. ‘ಮಾಸ್ತಿ ಕಥಾ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಆರ್.ಎನ್ ಹಬ್ಬು ದತ್ತಿ ಪ್ರಶಸ್ತಿ, ಸ್ವಸ್ತಿ ಪ್ರಕಾಶನದ ಬಹುಮಾನ’ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಹಲವು ಕಥೆಗಳು ಹಿಂದಿಗೆ ಅನುವಾದವಾಗಿವೆ. 'ಕಾಣದ ಗೆರೆಗಳು' ಕಥೆ ಪ್ರಜಾವಾಣಿ 2018ರ ದೀಪಾವಳಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ.
“ನನ್ ಮಾತ್ಕೇಳಿ, ಈ ಪುಸ್ತಕ ನಿಮ್ಗೆಲ್ಲಾದ್ರೂ ಸಿಕ್ಕರೆ ಮೊದಲು ತಗೊಂಡು ಓದಿ..” ಈ ರೀತಿಯಾಗಿ ಹೇಳುವಂತೆ ಮಾಡಿವೆ ಇಲ್ಲಿರುವ ಕಥೆಗಳು. ಜಯಂತ್ ಕಾಯ್ಕಿಣಿಯವರ ಮುನ್ನುಡಿ ಮತ್ತು ಪುಸ್ತಕದ ಶೀರ್ಷಿಕೆ ಹಾಗೂ ಮುಖಪುಟಕ್ಕೆ ಸೋತು ಎಂದೋ ತಂದ ಪುಸ್ತಕ ಇದು, ಇಂದು ಓದಿಸಿಕೊಂಡು ಗೆದ್ದಿದೆ, ಮತ್ತೆ ಅದರ ಮುಂದೆ ನಾನು ಸೋತಿದ್ದೇನೆ.
ಒಂಬತ್ತು ಕಥೆಗಳುಳ್ಳ ನೂರು ಪುಟಗಳ ಕಥಾಸಂಕಲನ ಇದು. ಬಹುತೇಕ ಕಥೆಗಳು ನಗರ ಸಂವೇದನೆಯ ಕಥೆಗಳಾದರೂ ಮಾನವಿಕ ಮೌಲ್ಯಗಳನ್ನ, ಮನುಷ್ಯನ ಸಂಕಟಗಳನ್ನ ನಿರೂಪಿಸುವ ಕಥೆಗಳಾಗಿದ್ದವು. ಪ್ರತಿ ಕಥೆಗಳಲ್ಲೂ ಕಾಣುವ ಪಾತ್ರಗಳ ಒಂಟಿತನ, ಅಸಹಾಯಕತೆ, ನಿರ್ಲಿಪ್ತತೆ ಇಲ್ಲಿನ ಶಕ್ತಿ. “ನಾನು ನಾನಲ್ಲ” ಮತ್ತು “ವೃತ್ತಗಳು” ಹೆಸರಿನ ಕಥೆಗಳಲ್ಲಿ ಒಂದು ಕಾದಂಬರಿಗೆ ಬೇಕಾಗುವ ವಸ್ತುವಿತ್ತು, ಹಾಗಿದ್ದರೂ ಒಂದು ಅವುಗಳನ್ನ ಕಥೆಯಾಗಿಸಿರುವುದು ಲೇಖಕರ ಸೃಜನಶೀಲತೆಯನ್ನ ತೋರುತ್ತೆ. ಬರವಣಿಗೆ top notch, Narration ನಿರರ್ಗಳ ಮತ್ತು ನಿರಾಯಾಸ. ಖಂಡಿತ ಓದಿ, highly recommemded.
ಗಾಳಿಗೆ ಮೆತ್ತಿದ ಬಣ್ಣ (ಛಂದ ಪ್ರಕಾಶನ) ಓದಿದ ನಂತರ ಅವರ ಮೊದಲ ಸಂಕಲನಕ್ಕೆ ಹುಡುಕಾಡಿದ್ದೆ. ಸಿಕ್ಕಿರಲಿಲ್ಲ. ಅದೃಷ್ಟ ಎಂಬಂತೆ ಮೊನ್ನೆ ಬೆಂಗಳೂರಿನಲ್ಲಿ ಸಿಕ್ಕಿತು.
ಕನ್ನಡದಲ್ಲಿ ನಂಗೆ ಭರವಸೆ ಅನಿಸಿದ ಹೊಸ ಕತೆಗಾರರಲ್ಲಿ ಕರ್ಕಿ ಕೃಷ್ಣಮೂರ್ತಿ, ಸಿಂಧೂ ರಾವ್(ಸರ್ವ ಋತು ಬಂದರು), ಕಣಾದ ರಾಘವ (ಗಂಡಕಿ ಝೋನ್,ಮೊದಲ ಮಳೆಯ ಮಣ್ಣು) ಇಷ್ಟ. ಆ ನಂಬಿಕೆಯ ಈ ಸಂಕಲನ ಸುಳ್ಳು ಮಾಡಲಿಲ್ಲ. ಮಳೆ ಮಾರುವ ಹುಡುಗ ,ವೃತ್ತಗಳು ಇವೆರಡು ಕತೆ ಬಿಟ್ಟರೆ ಬಾಕಿ ಎಲ್ಲ ಕತೆಗಳು 'ಓಹ್, ಇದೇ ಯೋಚನೆ ನಂಗೂ ಬಂದಿತ್ತಲ್ಲ' ಅನಿಸುವವು.ಹಾಗೆಯೇ ಬರೆಯಲು ಹೋದರೆ ಸಿಗದೆ ಮಾಯವಾಗುವವು. ಬೆಂಗಳೂರಿನಂತಹ ಮಹಾನಗರಕ್ಕೆ ಬಂದು ತಾವು ಬದಲಾಗಿ ಅತ್ತ ಊರಿಗೂ ಸಲ್ಲದೆ ,ಇತ್ತ ನಗರಕ್ಕೂ ಸಲ್ಲದವರ ಕತೆ, ಕೆಲಸಕ್ಕೆ ಅಂತ ಪರದೇಶಕ್ಕೆ ಹೋದವರ ಪಾಡು, ಅಸ್ತಿತ್ವಕ್ಕೋಸ್ಕರ ಹೋರಾಟ ಮತ್ತು ಆ ಹೋರಾಟದಲ್ಲಿ ತನ್ನ ಕಳಕೊಳ್ಳುವುದು ಇಲ್ಲಿನ ಬಹುತೇಕ ಕತೆಗಳ ಸ್ಥಾಯಿಭಾವ. ಹಾಗಾಗಿಯೇ ಇಷ್ಟವಾಗುತ್ತದೆ. ' ಅನಿಮಿತ್ತ' ಕತೆಯಲ್ಲಿ ಬರುವ ' ನಮಗೇ ಅರಿವಿಲ್ಲದಂತೆ ನಮ್ಮ ಮನಸ್ಸು ಅವರಿವರನ್ನು ಅರಸುತ್ತಲೇ ಇರುತ್ತದೆಯೇ? ನಾವು ಹುಡುಕುತ್ತಿರುವುದೇನೆಂದು ನಾವು ಬಲ್ಲೆವೆ?' ಎಂಬ ಬೆಚ್ಚಿ ಬೀಳಿಸುವ ಪ್ರಶ್ನೆ ಇಡೀ ಕತಾಸಂಕಲನದುದ್ದಕ್ಕೂ ಹಬ್ಬಿದ್ದು ಮಾತ್ರ ಗಾಢವಾಗಿ ಅನುಭವಕ್ಕೆ ಬರುತ್ತದೆ. ಸ್ವಸ್ತಿ ಪ್ರಕಾಶನದ ಬಹುಮಾನ ಪಡೆದ ಈ ಕೃತಿಯ ಪ್ರಕಾಶಕರೂ ಸ್ವಸ್ತಿ ಪ್ರಕಾಶನವೇ. ಕನ್ನಡದಲ್ಲಿ ಕತೆಗಳ ಬೆಳೆ ಹುಲುಸಾಗಿದೆ ಎಂಬ ನನ್ನ ನಂಬಿಕೆಗೆ ಪುಷ್ಟಿ ಕೊಟ್ಟ ಸಂಕಲನ.