ಅದ್ಭುತ ಓದಿನ ಅನುಭವವನ್ನು ನೀಡಿದ ಪುಸ್ತಕ. ಈ ಕೃತಿಯ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಈ ಪುಸ್ತಕವು ನನ್ನೊಳಗೆ ಎಬ್ಬಿಸಿದ ಕಂಪನಗಳನ್ನು, ಹರಡಿದ ಭಾವ ತರಂಗಗಳನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ. ಅದು ಏನಿದ್ದರೂ ಓದಿ ಅನುಭವಿಸಬೇಕಾದದ್ದು. ಇಲ್ಲಿ ನಮ್ಮ ನಡುವೆ ಇದ್ದ ಸಾಹಿತ್ಯ ಲೋಕದ ದಿಗ್ಗಜರು, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಜಗತ್ಪ್ರಸಿದ್ಧ ಕಲಾವಿದರು ಹಾಗೂ ತಮ್ಮ ಪಾಡಿಗೆ ತಮ್ಮ ಕೆಲಸವನ್ನು ಮುಗಿಸಿ ಎಲೆಮರೆಯ ಕಾಯಿಯಂತೆ ಉಳಿದು ಹೋದ ಅಪರೂಪದ ವ್ಯಕ್ತಿಗಳ ವೈಯಕ್ತಿಕ ಜೀವನ ಚಿತ್ರಗಳ ಜೊತೆಗೆ ಅವರು ಬಿಟ್ಟು ಹೋದ ಹೆಜ್ಜೆ ಗುರುತುಗಳನ್ನು ಪರಿಚಯಿಸಿ ಕೊಡುತ್ತದೆ. ಒಟ್ಟು 127 ಲೇಖನಗಳ ಗುಚ್ಛವನ್ನು ಓದುವಾಗ, ಅಲ್ಲಲ್ಲಿ ಕಣ್ಣು ಮಂಜಾಗಿ, ಗಂಟಲು ಕಟ್ಟಿದಂತಾಗಿ, ವಿಷಾದದ ಎಳೆಯೊಂದು ಹಾದು ಹೋದರೆ, ಇನ್ನೂ ಕೆಲವು ಒಂದು ಬಗೆಯ ಸಂತೃಪ್ತಿಯ ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತೆ ಮಾಡುತ್ತದೆ.
ಬದಕಿನ ಬಗ್ಗೆ ಹಲವು ಒಳನೋಟಗಳನ್ನು ಈ ಪುಸ್ತಕವು ನೀಡುತ್ತದೆ. ಒಂದು ವ್ಯಕ್ತಿಯ ಜೀವನದಲ್ಲಿನ ಹಲವು ಮಜಲುಗಳು, ಬದುಕಿನ ಹಲವು ಘಟ್ಟಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ರೀತಿ ನೀತಿಗಳು, ಒಂದೇ ತರಹದಲ್ಲಿ ಕಾಣಬಹುದಾದ ಹಲವು ವಿಚಾರಗಳು ವಿವಿಧ ರೀತಿಯ ವ್ಯಕ್ತಿಗಳಲ್ಲಿ ಉಂಟು ಮಾಡುವ ಪರಿಣಾಮಗಳು, ಆ ಪರಿಣಾಮಗಳ ಫಲಿತಾಂಶಗಳು ಹೇಗೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ರೀತಿಗಳ ಕುರಿತಾದ ಒಳನೋಟಗಳು ಜೀವನದ ಏರುಪೇರುಗಳಲ್ಲಿ ಸೂಕ್ಷ್ಮವಾಗಿ ಕಾಣಸಿಗುತ್ತವೆ. ಹೇಳಬೇಕೆನಿಸುವ ಇನ್ನೊಂದು ವಿಚಾರ ಪುಸ್ತಕದಲ್ಲಿ ಅತಿಯಾದ ಹೊಗಳುವಿಕೆ, ತೆಗಳುವಿಕೆ ಕಂಡು ಬರುವುದಿಲ್ಲ. ಇದ್ದದ್ದನ್ನು ಇರುವ ರೀತಿ ಪ್ರಸ್ತುತಪಡಿಸಿದ ರೀತಿ ಇಷ್ಟವಾಯಿತು. ಲೇಖಕರು ನಡೆಸಿದ ಕ್ಷೇತ್ರಕಾರ್ಯ,ಉತ್ಸಾಹ ಅವರ ಬಗೆಗೆ ಅಭಿಮಾನ ಮೂಡಿಸಿತು. ಲೇಖಕರ ಪದಪ್ರಯೋಗ, ವಾಕ್ಯಗಳ ರಚನೆ, ಭಾಷೆಯ ಮೇಲಿನ ಹಿಡಿತ ಎಲ್ಲವೂ ಉತ್ಕಟವಾಗಿದ್ದು ಮತ್ತೆ ಮತ್ತೆ ಕನ್ನಡವನ್ನು ಪ್ರೀತಿಸುವಂತೆ ಮಾಡುತ್ತದೆ.
ಈ ಪುಸ್ತಕವು ಯಾಕೆ ಮಹತ್ವದ್ದು ಎಂದು ಅರಿಯಬೇಕಾದರೆ ಒಂದು ಅಧ್ಯಾಯದ ಕುರಿತು ಗಮನಿಸಿ. ನಮ್ಮಲ್ಲಿ ಮಧುಗಿರಿ ರಾಮು ಅವರ ಬಗ್ಗೆ ಎಷ್ಟು ಜನರಿಗೆ ಗೊತ್ತು. ಅವರ ಕಾಲದಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದ ಕಲಾವಿದ. ಯೌವನದಲ್ಲಿ ಒಂದು ತರಹದಲ್ಲಿ ಅಡಾವುಡಿಯಾಗಿದ್ದ ವ್ಯಕ್ತಿ ಮೇರುಕಲಾವಿದನಾಗಿ ಮಾರ್ಪಾಟು ಹೊಂದಿ ರಾಷ್ಟ್ರಪತಿ ಭವನದಲ್ಲಿ ತನ್ನ ಛಾಪನ್ನು ಮೂಡಿಸಿದ ಕರ್ನಾಟಕದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಮಹಾನುಭಾವರ ಬಗ್ಗೆ ತಿಳಿದದ್ದು ಈ ಪುಸ್ತಕವನ್ನು ಓದಿದಾಗ. ಅದರಲ್ಲೇನು ಹೆಚ್ಚುಗಾರಿಕೆ ಅಂತೀರಾ… ತ.ರಾ.ಸು ಅವರ ಕಾದಂಬರಿ “ನಾಗರಹಾವು” ಮತ್ತು ಸಿನಿಮಾ ಇವರ ಜೀವನ ಆಧಾರಿತ ಎಂದು ಹೇಳಿದರೆ ತಾನಾಗಿಯೇ ಗೊತ್ತಾಗುತ್ತದೆ.
ಸದಭಿರುಚಿಯ ಪತ್ರಿಕೆಯೊಂದನ್ನು ನಡೇಸಬೇಕೆಂದು ನಿರ್ಧರಿಸಿ, ಬರಹಗಳನ್ನು ಬರೆದು, ಪುಟ ವಿನ್ಯಾಸವನ್ನು ಮಾಡಿ ಆಸಕ್ತರಿಗೆ ಸ್ವತಃ ಅಂಚೆಯ ಮೂಲಕ ಪತ್ರಿಕೆಯನ್ನು ತಲುಪಿಸುತ್ತಿದ್ದ ಲೇಖಕರ ಶ್ರದ್ಧೆ, ಭಾಷಾಭಿಮಾನವನ್ನು ಏನೆಂದು ಕರೆಯುವುದು. ಅದೂ ಬರೋಬ್ಬರಿ ಒಂಬತ್ತು ವರ್ಷಗಳ ಕಾಲ ಯಾವುದೇ ಜಾಹೀರಾತು ಅಥವಾ ಇನ್ಯಾವುದೋ ಮುಲಾಜಿಗೆ ಒಳಗಾಗದೆ. ಅವರ ನಿಧನದ ನಂತರ ಅವರ ನೆನಪಿಗಾಗಿ ಅವರ ಪತಿಯು ಪುಸ್ತಕ ರೂಪದಲ್ಲಿ ಇದನ್ನು ಪ್ರಕಟಿಸಿದ್ದಾರೆ. ಆದರೆ ಹೆಚ್ಚಾಗಿ ಗಮನಕ್ಕೆ ಬಾರದ ಈ ಪುಸ್ತಕ ಈಗ ಲಭ್ಯವಿಲ್ಲದಿರುವುದು ದುಃಖಕರ ಸಂಗತಿ. ಪುಸ್ತಕದ ಹಲವು ವ್ಯಕ್ತಿಗಳಂತೆ ಇದು ಸಹ ಎಲೆಮರೆಯ ಕಾಯಿಯಾಗಿಯೇ ಉಳಿಯಿತು ಎಂಬ ಭಾವ ಕಾಡುತ್ತಿದೆ.
ಸರಿಸುಮಾರು ಒಂಬತ್ತು ವರ್ಷಗಳ ಕಾಲ ಕೈ ಬರಹದಲ್ಲಿ ನಾಲ್ಕಾರು ಪುಟ ಬರೆದು ಅದರ ಪುಟ ವಿನ್ಯಾಸ ಮಾಡಿ ಪ್ರತಿ ತೆಗೆದು ತಾನಾಗೇ ಆಸಕ್ತರಿಗೆ ಕಳುಹಿಸುತ್ತಿದ್ದ ಬಿ.ಎಸ್.ವೆಂಕಟಲಕ್ಷ್ಮೀ ಅವರ ಪತ್ರಿಕೆಯೇ 'ಚರ್ಚೆಗೊಂದು ಚಾವಡಿ'. ಈ ಲೇಖನಗಳ ವಸ್ತುನಿಷ್ಟತೆ ,ವಿಷಯ ವೈವಿಧ್ಯ, ಖಚಿತತೆ ಮತ್ತು ಒಳನೋಟಗಳಿರುವ ಬರಹಗಳ ಸಂಕಲನ. ಕನ್ನಡದ ಪ್ರಖ್ಯಾತ ಲೇಖಕರು, ಅವರ ಬದುಕು, ಬರಹ, ಸಂಗೀತಗಾರರ ಜೀವನ ಹೀಗೆ ಏನುಂಟು ಏನಿಲ್ಲ ಅನ್ನುವ ಹಾಗಿಲ್ಲ.ಅಪ್ಪಟ ರಾಜಕೀಯದ ಸೋಂಕಿಲ್ಲದ ಕೆಲವೊಮ್ಮೆ ಮುಂದೆ ಓದಲು ಮನಸು ಭಾರವಾಗುವ ಬರಹಗಳು. 2009ರಲ್ಲಿ ಕಾಲವಾದ ಲೇಖಕಿಯ ಈ ಬರಹಗಳನ್ನು ಅವರ ಪತಿ ಪ್ರಕಟಿಸಿದ್ದಾರೆ.
ಬಹಳ ಚೆನ್ನಾಗಿದೆ . ತೀರಾ ಮೊನ್ನೆಯವರೆಗೆ ಇವರ ಬಗ್ಗೆ ಗೊತ್ತೇ ಇರಲಿಲ್ಲ ಅನ್ನುವುದು ಹೇಳಬೇಕೆನಿಸಿದ ವಿಷಯ.
This entire review has been hidden because of spoilers.