ಸುಮ್ಮನೆ ಹೀಗೆ ಊಹಿಸಿಕೊಳ್ಳಿ.ನಿಮ್ಮ ಬಳಿ ಒಂದೈದು ಎಕರೆ ಜಮೀನಿದೆ.ಆದರೆ ನೀವು ಅದರ ಮಾಲೀಕರಲ್ಲ.ಕಷ್ಟ ಪಟ್ಟು ದುಡಿಯುತ್ತೀರಿ.ಮಳೆಗಾಲದಲ್ಲಿ ಬಿತ್ತನೆಯಿಂದ ಹಿಡಿದು, ಬೆಳೆ ಬೆಳೆದ ನಂತರ ಅದರ ರಕ್ಷಣೆಯನ್ನೂ ಬಹಳ ಶ್ರದ್ಧೆಯಿಂದ ಮಾಡುತ್ತೀರಿ. ಜೊತೆಗೆ ಮನೆಯಿಂದ ಒಂದಿಷ್ಟು ಜನ ಜಮೀನುದಾರರ ಮನೆಯಲ್ಲಿ ‘ಬಿಟ್ಟಿ ಕೆಲಸ’ಕ್ಕೆಂದು ಹೋಗಬೇಕು. ಮನೆಯ ಮಕ್ಕಳಿಗೆ ಓದುವ ಭಾಗ್ಯವಿಲ್ಲ.ಸಾಲು ಸಾಲು ದೌರ್ಜನ್ಯಗಳ ಜೊತೆಗೆ ಗೇಣಿದಾರನಾಗಿ ಜೀವನ ಸಾಗಿಸಬೇಕು. ಹೇಗಿರಬಹುದು ಈ ಬದುಕು ? ಕಷ್ಟ ಪಟ್ಟು ದುಡಿಯುವವರು ಒಬ್ಬರಾದರೆ ‘ಗೇಣಿ’ಯ ಹೆಸರಲ್ಲಿ ದುಪ್ಪಟ್ಟು ವಸೂಲು ಮಾಡಿ ತಿಂದು ತೆಗುವವರು ಬೇರೆಯವರು. ಹೀಗೆ ಒಂದು ದಿನ ಒಡೆಯರ ಮೋಸ ಬಯಲಾಗುತ್ತದೆ. ಅಲ್ಲೊಂದು ಹೋರಾಟ ನಡೆಯುತ್ತದೆ. ಅದೇ ಉಳುವವನೇ ಹೊಲದೊಡೆಯ ಎಂಬ ಧ್ಯೇಯದ 'ಕಾಗೋಡು ಚಳುವಳಿ'ಗೆ ನಾಂದಿಯಾಗುತ್ತದೆ.
ನಾ. ಡಿಸೋಜ ಅವರ “ಕೊಳಗ”, ಕಾಗೋಡು ಚಳುವಳಿಗೆ ಕಾರಣವಾಗಿರಬಹುದಾದ ಘಟನೆಗಳ ಕುರಿತಾದ ಒಂದು ಸರಳ ಸುಂದರ ಕಾದಂಬರಿ. ಇಲ್ಲಿ ಗೇಣಿದಾರರ - ಜಮೀನುದಾರರ ಸಂಬಂಧದ ಸೂಕ್ಷ್ಮ ವಿವರಣೆಯಿದೆ,ಮಲೆನಾಡಿನ ಜನ ಜೀವನ - ಹಬ್ಬಗಳ ಸೊಗಸಾದ ವರ್ಣನೆಯಿದೆ,ಆಗಿನ ಕಾಲದ ಜಮೀನುದಾರರ ಶೋಷಣೆಗಳ ಮೇಲೂ ಲೇಖಕರು ಬೆಳಕು ಚೆಲ್ಲಿದ್ದಾರೆ.ಲೇಖಕರು ಬಳಸಿರುವ ಮಲೆನಾಡಿನ ಸೊಗಡಿನ ರೂಪಕಗಳು ಗಮನ ಸೆಳೆಯುತ್ತದೆ . ಉದಾ : “ಕೆರೆಯ ದಂಡೆಯ ಮೇಲೆ ಕುಳಿತ ಮೀಂಜುಲಿಗ ನೀರಿನಲ್ಲಿ ಮೀನು ಸರಿದಾಡುವುದನ್ನು ಕಂಡು ಛಂಗನೆ ಹಾರು ಅದನ್ನು ಹಿಡಿಯುವಂತೆ” - ಈ ಸಾಲಿನಲ್ಲಿ ಗೌಡರ ಗೇಣಿದಾರರ ಮೇಲೆ ಸಾಧಿಸಿರುವ ಹಿಡಿತವನ್ನು ಕಾಣಬಹುದು.
325 ಪುಟಗಳ ನವಿರಾದ ಕಾದಂಬರಿ ಇದು. ಮಲೆನಾಡಿನ ಕೃಷಿ ಪದ್ಧತಿ,ಆಗಿನ ಕಾಲದ ಜಮೀನುದಾರರ ನಡವಳಿಕೆಗಳು, ಕೃಷಿಕರು ಎದುರಿಸುತ್ತಿದ್ದ ಕಷ್ಟಗಳು, ಕಾಗೋಡು ಚಳುವಳಿ - ಇವುಗಳನ್ನು ತಿಳಿದುಕೊಳ್ಳಲು ಈ ಕಾದಂಬರಿ ಓದಿ.
ಕನ್ನಡದಲ್ಲಿ ತಣ್ಣಗೆ ತಮ್ಮ ಪಾಡಿಗೆ ತಾವು ಸಂಯಮದಲ್ಲಿ ಬರೆದ ಇಬ್ಬರು ಮಹನೀಯರಿದ್ದಾರೆ ಒಬ್ಬರು ದಿವಂಗತ ವ್ಯಾಸರಾಯ ಬಲ್ಲಾಳರು ಇನ್ನೊಬ್ಬರು ನಾ ಡಿಸೋಜಾ.
ನಾ ಡಿಸೋಜಾ ಮುಳುಗಡೆಯ ಬಗ್ಗೆ ಬರೆದ ದ್ವೀಪ,ಒಡ್ಡು ಓದಿದ್ದೆ. ಕುಂಜಾಲು ಕಣಿವೆಯ ಕೆಂಪು ಹೂ ಇಷ್ಟವಾಗಿತ್ತು. ಒಂದಿಡೀ ಊರಿನ ಪರಿಸರವ ,ಅಲ್ಲಿನ ಸ್ಥಿತ್ಯಂತರವ ವಿವರಗಳಾಗಿ ಬಿಡಿಸಿಡುವುದರಲ್ಲಿ ನಿಷ್ಣಾತರು ಅವರು.
ಕೊಳಗ ,ಕಾಗೋಡು ಸತ್ಯಾಗ್ರಹದ ಮೊದಲಿನ ಗೇಣಿದಾರರ, ಭೂ ಮಾಲಿಕರ ಬದುಕನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಒಬ್ಬ ಭೂಮಾಲಿಕನ ಕೈ ಕೆಳಗೆ ಗೇಣಿದಾರನಾಗಿದ್ದ ದ್ಯಾವ ಅವರೊಂದಿಗೆ ಮನಸ್ತಾಪ ಬಂದು ಇನ್ನೊಬ್ಬರಲ್ಲಿ ಹೋಗುವುದರೊಂದಿಗೆ ಕತೆ ಬೆಳೆಯುತ್ತದೆ. ಗೇಣಿದಾರರ ಬದುಕಿನ ಕಷ್ಟಗಳ ಎಷ್ಟು ಚಂದ ವಿವರಿಸಿದ್ದಾರೆ ಎಂದರೆ ಗೊತ್ತಾಗದೇ ಕಣ್ಣು ತೇವವಾಗುತ್ತದೆ. ಶೋಷಣೆಗಾರರು ಅವರು ಮಾಡುತ್ತಿರುವುದು ಶೋಷಣೆ ಅಲ್ಲ ಇದು ತಮ್ಮ ಕರ್ಮ ಎಂಬಂತೆ ಅನುಭವಿಸಿಕೊಂಡು ಬರುತ್ತಿದ್ದ ಗೇಣಿದಾರರ ಬದುಕನ್ನು ಹೇಗೆ ಕಾಗೋಡು ಚಳುವಳಿ ಬದಲಾಯಿಸಿತು ಎಂದು ಕಾದಂಬರಿ ಹೇಳುತ್ತದೆ. ಇಲ್ಲಿ ಚಳುವಳಿಯ ಕುರಿತು ವಿವರಗಳು ಕಡಿಮೆ. ಅದಕ್ಕಿಂತ ಮೊದಲಿನ ಬದುಕು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. ಇಡೀ ಕಾದಂಬರಿಯಲ್ಲಿ ಕೊಳಗ ಒಂದು ಪ್ರತಿಮೆಯಾಗಿ ಬರುತ್ತದೆ.
ಇನ್ನೊಂದು ಮಾತು ಮುದ್ರಣದ ಬಗ್ಗೆ. ಗೀತಾಂಜಲಿ ಪ್ರಕಾಶನದ ಮುದ್ರಣದ ಈ ದಪ್ಪ ರಟ್ಟಿನ ಪುಸ್ತಕ ಕಣ್ಸೆಳೆಯುವಂತಿದೆ. ನೋಡುತ್ತಿರುವಂತೆ ಕೈಗೆತ್ತಿಕೊಳ್ಳುವಷ್ಟು ಚೆನ್ನಾಗಿದೆ.
ತಿಂಗಳ ಹಿಂದೆಯಷ್ಟೇ ಡಾ.ನಾ.ಡಿಸೋಜ ನಮ್ಮನ್ನೆಲ್ಲಾ ಅಗಲಿದರು. ಅವರು ಇಹಲೋಕವನ್ನು ತ್ಯಜಿಸಿದ್ದರೂ ಕೂಡ ತಮ್ಮ ಸಾಹಿತ್ಯಕೃಷಿಯ ಮೂಲಕ ಸದಾ ಜೀವಂತವಾಗಿರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಬಯಸುತ್ತಾ “ಕೊಳಗ”ವನ್ನು ಪರಿಚಯಿಸೋಕೆ ಮುಂದಾಗುತ್ತೇನೆ.
ಮಲೆನಾಡು ಎಂದೊಡನೆ ತಟ್ಟನೆ ನೆನಪಾಗುವುದು ಅಲ್ಲಿನ ದಟ್ಟ ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಡುಗಳು, ಮನಸೂರೆಗೊಳಿಸುವ ಪ್ರಕೃತಿ ಸೌಂದರ್ಯ. ಆದರೆ ಪುಸ್ತಕಗಳು ಮೇಲೆ ತಿಳಿಸಿದವುಗಳ ಜೊತೆಜೊತೆಗೆ ಮಲೆನಾಡಿನ ಮುಖ್ಯ ಸಮಸ್ಯೆಗಳನ್ನ ನಮ್ಮ ಮುಂದಿಟ್ಟಿವೆ. ಕೆಲವು ಪುಸ್ತಕಗಳಿಂದ ಕೌಟುಂಬಿಕ ಸಮಸ್ಯೆ, ಜಾತಿ ಸಮಸ್ಯೆ, ಮತ್ತು ಮುಳುಗಡೆಯಂತಹ ಸಮಸ್ಯೆಯನ್ನೂ ಪರಿಚಯಿಸಿವೆ. ಡಿಸೋಜಾ ಅವರ “ಕೊಳಗ”ವೂ ಸಹ ಅಂತಹ ಒಂದು ಗಂಭೀರ ಸಮಸ್ಯೆಯ ಕುರಿತಾದದ್ದು. ಹೀಗೊಂದು ಪದ್ಧತಿ ಇತ್ತು ಎನ್ನುವುದೂ ನನಗೆ ತಿಳಿದಿರಲಿಲ್ಲ. ಭೂಮಾಲಿಕರು ತಮ್ಮ ಗೇಣಿದಾರರನ್ನು ನೆಡೆಸಿಕೊಳ್ಳುತ್ತಿದ ರೀತಿ. ಕಾಗೋಡು ಹೋರಾಟಕ್ಕೆ ಕಾರಣವಾದ ಪರಿಸ್ಥಿತಿ. ಆ ಹೋರಾಟಕ್ಕ್ಕೂ ಮತ್ತು ಕೊಳಗ, ನೊಗ, ನೇಗಿಲುಗಳಿಗಿರುವ ಸಂಬಂಧ, ಇವೆಲ್ಲವುಗಳನ್ನು ಹತ್ತಿರದಿಂದ ಕಂಡಿದ್ದ ಲೇಖಕರು ಆಗಿನ ವಸ್ತುಸ್ಥಿಯನ್ನು ಕಾದಂಬರಿಯ ಮೂಲಕ ಪುನರ್ನಿರ್ಮಾಣ ಮಾಡಿದ್ದಾರೆ. ಮಲೆನಾಡಿನಲ್ಲಿನ ದೀವರ ಎಂಬ ಜನಾಂಗದ ನೋವಿನ ಬದುಕನ್ನ, ದೈನಿಕ ಭವಣೆಯನ್ನ, ಅವರ ಆಚಾರ ವಿಚಾರ ಹಬ್ಬ ಹರಿದಿನಗಳನ್ನು ವರ್ಣಮಯವಾಗಿ ಚಿತ್ರಿಸಿದ್ದಾರೆ. ಮನರಂಜನೆಗಷ್ಟೇ ಅಲ್ಲ ಕಾದಂಬರಿಗಳು, ಸಮಸ್ಯೆಯ ಆಳಕ್ಕೆ ಕರೆದೊಯ್ದು ಚಿಂತಿಸುವಂತೆ ಮಾಡುತ್ತವೆ ಕೂಡ. “ಕೊಳಗ” ಆ ರೀತಿಯ ಒಂದು ಕಾದಂಬರಿ.
ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ ಭೂಮಾಲೀಕರು ಹಾಗೂ ಗೇಣಿದಾರರ ನಡುವೆ ಇದ್ದ ಸಂಬಂಧಗಳು ಮತ್ತು ಕಾಗೋಡು ಚಳುವಳಿಗೆ ಪ್ರೇರಕವಾದ ಅಂಶಗಳನ್ನು ಒಳಗೊಂಡಿದೆ ಪುಸ್ತಕ. ಭೂಮಾಲೀಕರ ದಬ್ಬಾಳಿಕೆ ಮತ್ತು ಗೇಣಿದಾರರ ದೈನೇಸಿ ಬದುಕನ್ನು ಇಲ್ಲಿ ನಾ.ಡಿಸೋಜಾರವರು ಕಟ್ಟಿಕೊಟ್ಟಿದ್ದಾರೆ.
ಭೂ ಹಿಡುವಳಿದಾರರು ಗೇಣಿದಾರರನ್ನು ಶೋಷಿಸುತ್ತಿದ್ದ ಬಗೆ, ಅಹಂಕಾರ ದರ್ಪ, ತಾವು ಮಾಡಿದ್ದೇ ಸರಿ ಅನ್ನೋ ಮನೋಭಾವ, ಇದಕ್ಕೆ ಒತ್ತಾಸೆಯಾಗಿ ನಿಲ್ಲುತ್ತಿದ್ದ ಸರಕಾರದ ಅಧಿಕಾರಿಗಳು ಒಂದೆಡೆಯಾದರೆ, ಒಕ್ಕಲುಗಳ ಅಸಹಾಯಕತೆ, ಬಡತನ, ಅನಿಶ್ಚಿತತೆ ಹಾಗೂ ಜೀವನಕ್ಕಾಗಿ ಮಾಲೀಕರನ್ನೇ ಅವಲಂಬಿಸಬೇಕಾದ ಸ್ಥಿತಿಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇವರುಗಳ ಅಸಹಾಯಕತೆಯನ್ನು ಬಳಸಿಕೊಂಡು ಮಾಲೀಕರು ಮಾಡುತ್ತಿದ್ದ ಮೋಸ ಹಾಗೂ ಸರಕಾರದ ಸವಲತ್ತುಗಳನ್ನು ಬಳಸಿಕೊಳ್ಳುತ್ತಿದ್ದ ರೀತಿ ಇಲ್ಲಿ ಯಥಾವತ್ತು ಚಿತ್ರಿಸಲಾಗಿದೆ. ಗೇಣಿಯ ಜೊತೆ ಒಡೆಯರ ಮನೆಯಲ್ಲಿ ಮಾಡಬೇಕಾದ ಬಿಟ್ಟಿ ಕೆಲಸ, ಹಬ್ಬ-ಹರಿದಿನಗಳು, ರೋಗರುಜಿನಗಳ ಸಂದರ್ಭದಲ್ಲಿ ಮಾಲೀಕರನ್ನು ಅವಲಂಬಿಸಿಕೊಂಡಿರ ಬೇಕಾದುದು ಅಂದಿನ ಶೋಚನೀಯ ಪರಿಸ್ಥಿತಿಯನ್ನು ತಿಳಿಸುತ್ತದೆ.
ಮಲೆನಾಡಿನ ಹಬ್ಬಗಳು (ವಿಶೇಷವಾಗಿ ಮಳೆಗಾಲದ ಹಬ್ಬಗಳು), ದೀವರ ಜನಾಂಗದ ಬದುಕಿನ ರೀತಿ ರಿವಾಜುಗಳು ಸಹ ಇಲ್ಲಿ ಅನಾವರಣಗೊಳ್ಳುತ್ತವೆ. ರೈತರು, ಕೃಷಿ ಸಲಕರಣೆಗಳು, ಪಶು ಪಕ್ಷಿಗಳು ಹಾಗೂ ಭೂಮಿತಾಯಿಯ ನಡುವಿನ ಅವಿನಾಭಾವ ಸಂಬಂಧಗಳನ್ನು ಮನೋಜ್ಞವಾಗಿ ವಿವರಿಸಲಾಗಿದೆ.
ಎಲ್ಲವನ್ನೂ ಪ್ರಶ್ನಿಸುವ ಇಂದಿನ ಕಾಲದಲ್ಲಿ, ತಮಗೆ ಅನ್ಯಾಯವಾಗುತ್ತಿದ್ದರೂ ಅದನ್ನು ಪ್ರಶ್ನಿಸದೆ ಗೇಣಿದಾರರು ಜೀವನವನ್ನು ಸವೆಸುತ್ತಿದ್ದ ಬಗೆಯನ್ನು ಕಂಡರೆ ಆಶ್ಚರ್ಯವಾಗುತ್ತದೆ. ರೈತರ ಮನಸ್ಸಿನೊಳಗೆ ನಡೆಯುವ ತುಮುಲಗಳನ್ನು ನಾ.ಡಿಸೋಜ ಅವರು ಬಣ್ಣಿಸಿದ ರೀತಿಗೆ ಕರುಳು ಕಿವುಚುವ ಅನುಭವ ಆಗುತ್ತದೆ.
ಮುಖಪುಟ ವಿನ್ಯಾಸ ಪುಸ್ತಕವನ್ನು ಓದಲೇಬೇಕು ಅನಿಸುವಷ್ಟರ ಮಟ್ಟಿಗೆ ಆಕರ್ಷಕವಾಗಿದೆ.
ಶತ - ಶತಮಾನಗಳಿಂದ ನಡೆದು ಬರುತ್ತಿದ್ದ ಪದ್ಧತಿಯ ವಿರುದ್ಧ ದನಿಯೆತ್ತಿದ ರೈತರ ಕಥೆಯನ್ನ ಡಾ.ನಾ.ಡಿಸೋಜ ತಮ್ಮ ' ಕೊಳಗ ' ದಲ್ಲಿ ಹೇಳಿದ್ದಾರೆ. ಒಂದು ' ಕೊಳಗ ' ಹೇಗೆ ಹೋರಾಟವನ್ನಾರಂಭಿಸಿತು , ಮುಂದೆ ಮುರಿದ ನೊಗ ನೇಗಿಲುಗಳು ಹೇಗೆ ದೊಡ್ಡ ಚಳುವಳಿಗೆ ಕಾರಣವಾದವು ಎಂಬುದನ್ನು ತಿಳಿದುಕೊಳ್ಳಲು ಈ ಪುಸ್ತಕ ಓದಲೇ ಬೇಕು. ಇದು ಯಾವುದೋ ಕಾಲ್ಪನಿಕ ಕಥೆಯಲ್ಲ ನಿಜವಾದ ಕಥೆ ನಾವು ಇಂದು ಜೀವಿಸುತ್ತಿರುವ ಇದೇ ಸಮಾಜದಲ್ಲಿ ಹಲವಾರು ವರ್ಷಗಳ ಹಿಂದೆ ' 'ಜಮೀನ್ದಾರಿ ಪದ್ಧತಿ ' ಇತ್ತ��. ತಮ್ಮ ಧಣಿಗಳು ಕೊಡುವ ಎಲ್ಲಾ ಹಿಂಸೆಗಳನ್ನು , ಅವರ ಶೋಷಣೆಗಳನ್ನು ಸಹಿಸುತ್ತಾ ಗೇಣಿದಾರರು ಹೇಗೆ ಜೀವಿಸುತ್ತಿದ್ದರು ಅವರ ಜೀವನ ಶೈಲಿ ಹೇಗಿತ್ತು ಅವರ ರೀತಿ - ರಿವಾಜುಗಳು , ಆಚಾರ - ವಿಚಾರಗಳ ಕುರಿತು ವಿಸ್ತಾರವಾಗಿ ತಿಳಿಸಿದ್ದಾರೆ. ಕಥಾನಾಯಕ ' ಹುಚ್ಚ' ನ ಪಾತ್ರ ಮುಖ್ಯವಾದುದು. ವಿದ್ಯೆ ಹೇಗೆ ಬದಲಾವಣೆ ತರಬಹುದು ಎಂಬುದಕ್ಕೆ ಕಥೆಯಲ್ಲಿ ಬರುವ ' ಹುಚ್ಚ ' , ' ಗಣಪತಿ' ಯರೇ ಸಾಕ್ಷಿ. ' ಕರಿಯಮ್ಮ' ನ ಪಾತ್ರವನ್ನು ಲೇಖಕರು ಸಶಕ್ತವಾಗಿ ಚಿತ್ರಿಸಿದ್ದಾರೆ.
ಹೀಗೆ ಒಂದು ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದವರು ಹಳ್ಳಿಹಳ್ಳಿಗೆ ಭೇಟಿ ನೀಡಿ ನೊಗ, ಜೊತ್ತಕ, ಕೂಣಿ, ಮಂಕರಿ, ಕೊಳಗ ಇತ್ಯಾದಿಗಳನ್ನು ಆರಿಸಿ, ಸಂಗ್ರಹಿಸಿ ಹೋಗುತ್ತಿದ್ದುದನ್ನು ನೋಡಿ ಜನರಿಗೆ ಕುತೂಹಲ ವಿಷಯವಾಗಿ ಕಾಣುತ್ತದೆ, ಎಜ್ಜಿಬಿಷನ್ ನಾಗೆ ಇಡತಾರಂತೆ, ಅಲ್ಲಿ ಆ ಆ ವಸ್ತುಗಳ ಮೇಲೆಲ್ಲಾ ಹೆಸರು ಬರೆದು ಸಾಲಾಗಿ ಇಡತಾರಂತೆ, ಇಂಗ್ಲೀಷ್ ಮಾತಾಡೋರೆಲ್ಲಾ ನೋಡಿಕೊಂಡು ಹೋಗುತ್ತಾರಂತೆ ಎಂದು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು. ಕಾಗೋಡು, ಮಣಗದ್ದೆ, ಸೂರಗುಪ್ಪೆ, ಅತ್ತಿಸಾಲು, ಸಣ್ ಮನೆ, ತಡಗಳಲೆ ಪ್ರದೇಶಗಳಿಗೆ ಹೋಗಿ ಸಂಗ್ರಹಿಸುತ್ತಿದ್ದರು. ಹುಚ್ಚಪ್ಪನ ಮಗ ಎಲ್ಲೋ ಮೂಲೆಯಲ್ಲಿದ್ದ ಆ ವಸ್ತುಗಳನ್ನು ಜೋಡಿಸುತ್ತಿರುವಾಗ ಮಗನಿಂದ ಕಾರಣ ತಿಳಿದಾಗ ಎಲ್ಲೋ ಮೂಲೆಯಲ್ಲಿರುವ ಬದಲು ಇವರಿಗಾದರೂ ಉಪಯೋಗವಾಗಲೆಂದು ಮನಸ್ಸಿನೊಳಗೆ ಅನ್ನಿಸಿದರೂ ಆ ವಸ್ತಗಳನ್ನು ಕಂಡಾಗ ತನ್ನ ತಂದೆ ತಾಯಿ ಹಾಗು ತಾನು ಪಟ್ಟ ಕಷ್ಟಗಳು ಒಂದಾ ಎರಡಾ ಲೆಕ್ಕವಿಲ್ಲದಷ್ಟು ಎಂದು ದುಃಖಪಡುತ್ತಾನೆ.
ತಡಗಳಲೆ ಹುಚ್ಚನ ತಂದೆ ದ್ಯಾವ ಮರಸದಿಂದ ತಡಗಳಲೆಗೆ ಬಂದಾಗ ಸುಮಾರು ೧೪ ವರ್ಷ, ಮರಸ ಬಿಟ್ಟು ತಾವು ಬಂದ ಕಾರಣ ಬಾಲ್ಯದಲ್ಲಿ ಅರ್ಥವಾಗದಿದ್ದರೂ ಕ್ರಮೇಣ ಅರ್ಥಮಾಡಿಕೊಂಡ, ಗಾಡಿ ಹೊಡೆಯುವುದು, ನೇಗಿಲು ಹೂಡುವುದು ಹಾಗು ಇನ್ನಿತರೆ ಕೆಲಸಗಳಲ್ಲಿ ಹುಚ್ಚನು ಪ್ರವೀಣನಾಗಿದ್ದ. ಹುಚ್ಚನ ತಂದೆ ದ್ಯಾವ ಮರಸದಲ್ಲಿ ಲಿಂಗೇಗೌಡರ ಜಮೀನಿನಲ್ಲಿ ಗೇಣಿದಾರನಾಗಿ ಕೆಲಸಮಾಡುತ್ತಿದ್ದ. ಭೂಮಾಲಿಕರ ಜಮೀನಿನಲ್ಲಿ ಸಾಗುವಳಿ ಮಾಡಿ ಒಡೆಯರು ನಿಗದಿಪಡಿಸಿದಂತೆ ಗೇಣಿಯನ್ನು ಕೊಡಬೇಕಾಗಿತ್ತು. ಅದರ ಜೊತೆಗೆ ಇಂತಿಷ್ಟು ಹುಲ್ಲು, ತರಕಾರಿ, ಹಣ್ಣು ಇತರೆ ಯಾವುದಾದರು ಪದಾರ್ಥವನ್ನು ಒಡೆಯರ ಮನೆಗೆ ಹೋದಾಗಲೆಲ್ಲಾ ಕೊಡಬೇಕಾಗಿತ್ತು. ಜಮೀನು ಗೌಡರದ್ದು, ತಾವು ಅವರಿಗೆ ಗೇಣಿ ಕೊಡಬೇಕು ಇದು ತಮ್ಮ ಸ್ವಂತದ್ದಲ್ಲ ಎಂದು ಬಾಲ್ಯದಲ್ಲೇ ಹುಚ್ಚ ಅರ್ಥಮಾಡಿಕೊಂಡನು. ದ್ಯಾವನಿಗೆ ನಾಗಿ ಮೈಲು ಹಾಗು ಹುಚ್ಚ ೩ ಮಕ್ಕಳು, ಅವರೆಲ್ಲರೂ ಗೌಡರ ಮನೆಯಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದರು. ಗೌಡರಿಗೆ ಇವರುಗಳು ಬಿಡುವಿರುವುದನ್ನು ಸಹಿಸಲಾಗದೇ ಯಾವುದಾದರೂ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಹುಚ್ಚನಿಗೆ ಗೌಡರ ಮಕ್ಕಳನ್ನು ಶಾಲೆಗೆ ಬಿಡುವುದು, ಊಟದ ಸಮಯದಲ್ಲಿ ಊಟ ಕೊಟ್ಟು ಬರುವುದು ಹೀಗೆ. ದ್ಯಾವನ ಹೆಂಡತಿ ಕರಿಯಮ್ಮ ಹಾಗು ಮಕ್ತಳು ನಾಗಿ ಮೈಲಿಯರಿಗೆ ಗೌಡರ ಮನೆಯಲ್ಲಿ ಕೆಲಸ. ಹುಚ್ಚನು ಶಾಲೆಗೆ ಸೇರಿಕೊಂಡಾಗ ಗೌಡರ ದಬ್ಬಾಳಿಕೆಯಿಂದ ಓದುವುದು ನಿಂತಿತು, ಇದರಿಂದ ಗೇಣಿದಾರರ ಮಕ್ಕಳೆಲ್ಲಾ ಗೌಡರ ಮನೆಕೆಲಸ ಮಾಡಿಕೊಂಡೆ ಜೀವನ ಸಾಗಿಸುತ್ತಿದ್ದರು.
ದ್ಯಾವ ಸಾಗುವಳಿ ಮಾಡುತ್ತಾ, ಕರಿಯಮ್ಮ ಹಾಲು, ತುಪ್ಪ, ತರಕಾರಿ , ಸೊಪ್ಪು ಮಾರಿಕೊಂಡು ತಮ್ಮ ಸಂಸಾರವನ್ನು ಕಷ್ಟಪಟ್ಟು ಸಾಗಿಸುತ್ತಿದ್ದರು. ಒಂದು ದಿನ ದ್ಯಾವ ಸಿಟ್ಟಿನಿಂದ ಮನೆಗೆ ಬಂದು ಇನ್ನು ಮರಸದ ಋಣ ತೀರಿತು ಇನ್ನು ಆ ಒಡೆಯರ ಗದ್ದೆಯಲ್ಲಿ ಪ್ರಾಣ ಹೋದರು ಸಾಗುವಳಿ ಮಾಡುವುದಿಲ್ಲವೆಂದು ಕಾರಣ ಯಾರಿಗೂ ತಿಳಿಸದೆ ತಡೆಗಳಗೆ ಬಂದಾಗ ಸಾಗುವಳಿ ಮಾಡಲು ಆಶ್ರಯ ಕೊಟ್ಟಿದ್ದೆ ಸ್ವಾಮಿಗೌಡರು. ಜಾಗ ಬೇರೆ ಅಷ್ಟೆ ಇಲ್ಲಿಯೂ ಕೂಡ ಸಾಗುವಳಿ ಮಾಡಿ ಗೇಣಿಕೊಡುವುದೇ ಕ್ರಮ. ಗೌಡರ ಮನೆಯ ಮುಂದೆ ತಮ್ಮ ಗಾಡಿ ಹೋಗುವಾಗ ತಮ್ಮ ಕಾಲುಗಳನ್ನು ಇಳಿಬಿಡಬಾರದು, ಅವರನ್ನು ಭೇಟೆಯಾಗಲು ಬರುವಾಗ ಪಂಚೆ ಎತ್ತಿ ಕಟ್ಟಿರಬೇಕು ಹೀಗೆ ಒಂದಲ್ಲಾ ಹಲವು ಶರತ್ತುಗಳು. ದ್ಯಾವ ಬಂದು ತಿಂಗಳುಗಳಾದವು ಎಂದಿನಂತೆಯೇ ಒಡೆಯರ ದರ್ಬಾರು ನಡೆದಿತ್ತು, ಬಿಟ್ಟಿ ಆಳುಗಳ ದುಡಿಮೆ ಮುಂದುವರದಿತ್ತು. ದ್ಯಾವನಿಗೆ ಕೇರಿಯಲ್ಲಿ ಬರಮ, ಬೆನವ ಇನ್ನಿತರರು ಪರಿಚಯವಾದರು ಅವರ ಪಾಡು ಇವನ ಹಾಗೆಯೇ. ಇದರ ನಡುವೆ ಹಬ್ಬ ಮಾಡಬೇಕು ಗೌಡರಲ್ಲಿ ಸಾಲ ಕೇಳಬೇಕು ತೀರುಸುವಾಗಿ ಬಡ್ಡಿ ಕೊಡಬೇಕು ಆದರೆ ಗೌಡರ ಹೆಂಡತಿ ಮಾದೇವಮ್ಮ ಗೇಣಿದಾರರನ್ನು ಕಂಡರೆ ಎಲ್ಲಿಲ್ಲದ ಗೌರವ, ಆಕೆಯು ಗಂಡನಿಗೆ ತಿಳಿಯದೆ ಇವರಿಗೆ ಸಹಾಯ ಮಾಡುತ್ತಿದ್ದಳು, ಗೌಡರು ಎಂಥವರೇ ಆದರೂ ಮಾದೇವಮ್ಮನನ್ನು ನೋಡಿದರೆ ಊರಿನವರಿಗೆ ಎಲ್ಲಿಲ್ಲದ ಗೌರವ. ಹೀಗೆ ದಿನಗಳು ಉರುಳಿದವು ಒಂದು ದಿನ ಕರಿಯಮ್ಮನ ಬಳಿ ದ್ಯಾವ ತಾವು ಮರಸ ಬಿಟ್ಟುಬರಲು ಕಾರಣ ತಿಳಿಸಿದ, ಹೆಣ್ಣಿನ ಚಟವಿದ್ದ ಲಿಂಗೇಗೌಡರಿಗೆ ಕರಿಯಮ್ಮನ ಮೇಲೆ ಕಣ್ಣಿತ್ತು ಅದನ್ನು ತಿಳಿದು ಅಲ್ಲಿಂದ ಸಂಸಾರ ಸಮೇತ ತಡೆಗಳಲೆಗೆ ಬಂದುಬಿಟ್ಟಿದ್ದ, ಈ ವಿಷಯ ತಿಳಿದು ಕರಿಯಮ್ಮನಿಗೂ ಅಸಹ್ಯವಾಯಿತು, ಹುಚ್ಚನಿಗೂ ಅರ್ಥವಾಯಿತು. ಭತ್ತವನ್ನು ಕಾಪಾಡಲು ರಾತ್ರಿ ಸಮಯ ಕಾನಭೇಟೆ ಹೋಗುವುದು ವಾಡಿಕೆ, ಹಾಗೆ ಹೋದ ದ್ಯಾವ ಕಾಡು ಹಂದಿ ಆಕ್ರಮಣದಿಂದ ಗಾಯಗೊಂಡು ಹಾಸಿಗೆ ಹಿಡಿದನು. ಗೌಡರು ನೆರವಾಗಲಿಲ್ಲ, ಸರಕಾರಿ ಆಸ್ಪತ್ರೆಗೆ ಕರಕೊಂಡು ಹೋಗಿ ಅವರೇ ನೋಡಿಕೊಳ್ಳುತ್ತಾರೆಂದಾಗ ದುಃಖವಾಯಿತು. ಪ್ರಾಣ ಅಡವಿಟ್ಟು ಭತ್ತ ಕಾಪಾಡಬೇಕು ಆದರೆ ಗೌಡರು ತಮಗೆ ನೆರವಾಗದಿರುವುದನ್ನು ಕಂಡು ದುಃಖವಾಯಿತು. ಮಾದೇವಮ್ಮ ಹಾಗು ಬೆನವನ ಸಹಾಯದಿಂದ ದ್ಯಾವ ಸಾವಿನಿಂದ ಪಾರಾದರೂ ಹೆಚ್ಚಿನ ತಿಂಗಳು ಆತ ಉಳಿಯಲಿಲ್ಲ. ನಂತರ ಜವಾಬ್ದಾರಿಯೆಲ್ಲಾ ಹುಚ್ಚನ ಮೇಲೆ ಬಿದ್ದಿತು.
ನಂತರ ಒಡೆಯರು ಹುಚ್ಚನಿಂದ ದ್ಯಾವ ಮಾಡಿಸಿಕೊಳ್ಳುತ್ತಿದ್ದ ಕೆಲಸವೆನ್ನೆಲ್ಲಾ ಮಾಡಿಸಿಕೊಳ್ಳತೊಡಗಿದರು. ಹುಚ್ಚ ಸಾಲ ಮಾಡಿ ನಾಗಿ ಮೈಲಿಯರಿಗೆ ಮದುವೆ ಮಾಡಿದ. ಬೆನವನ ಮಗಳಾದ ಮಲ್ಲಿಯನ್ನು ಮದುವೆಯಾದ. ಕ್ರಮೇಣ ತಾವು ಗೌಡರಿಗೆ ಭತ್ತ ಕೊಡುತ್ತಿರುವಾಗ ಗೌಡರು ಮಾಡುವ ಮೋಸವನ್ನು ಕಂಡುಕೊಳ್ಳುತ್ತಾನೆ. ಒಡೆಯರಿಗೆ ಎಂಟು ಹತ್ತಿ ಚೀಲ ಗೇಣಿ ಭತ್ತ ಕೊಡುತ್ತೇವೆ, ಚೀಲ ಎಂದರೆ ಅರವತ್ತು ಸೇರು ಸರಿಸುಮಾರು ೨೦ ಕೊಳಗ. ನಾವು ಅಳೆದುಕೊಡುವುದು ಸರಕಾರಿ ಕೊಳಗವಾದರೆ ಈ ಲೆಕ್ಕ ಸರಿ. ಮರದ ಕೊಳಗವಾದರೆ ಎಂಭತ್ತು ಸೇರಾಗುತ್ತದೆ, ನಮಗೆ ಸಾಲ ಕೊಡುವಾಗ ಸರಕಾರಿ ಕೊಳಗದಲ್ಲಿ ಗೌಡರು ಕೊಡುತ್ತಾರೆ, ಗೇಣಿ ತೆಗೆದುಕೊಳ್ಳುವಾಗ ಮರದ ಕೊಳಗ. ಇದರ ಜೊತೆಗೆ ಪೆಚ್ಚಿನ ಭತ್ತ, ಸಾಲದ ಭತ್ತ, ಹುಲಿ ಭತ್ತವನ್ನೂ ಮರದ ಕೊಳಗದಲ್ಲೇ ಅಳೆದು ಕೊಟ್ಟಾಗ ಆಗುವ ಮೋಸವನ್ನು ಎಲ್ಲಿರಿಗೂ ತಿಳಿಹೇಳಿದ. ಇದರಿಂದ ಎಲ್ಲರಿಗೂ ಆಶ್ಚರ್ಯವಾಯಿತು, ತಾವೆಲ್ಲರೂ ಒಂದಾಗಲೇಬೇಕು, ಪ್ರತಿಭಟಿಸಲೇಬೇಕೆಂದು ನಿರ್ಧರಿಸಿದರು. ಅವರಿಗೆ ನೆರವಾದವನು ದೀವರ ಕುಟುಂಬಕ್ಕೆ ಸೇರಿದವನಾದ ಗಣಪತಿ, ಭೂಮಾಲಿಕರಿಂದ ಗೇಣಿದಾರರಿಗೆ ಆಗುತ್ತಿರುವ ಅನ್ಯಾಯಗಳಲ್ಲಿ ಒಂದು ಗೇಣಿದಾರರ ಗಮನಕ್ಕೆ ಈಗ ಬಂತಲ್ಲ ಎಂದು ಗಣಪತಿಗೆ ಸಂತಸವಾಯಿತು. ಶೋಷಣೆ ಅನ್ನುವುದಕ್ಕೆ ಬೇರೆ ಬೇರೆ ರೂಪಗಳು, ದಾರಿಗಳು ಇದ್ದವು ಇವುಗಳೆನ್ನೆಲ್ಲ ಬಳಸುವುದರ ಮೂಲಕ ಭೂಮಾಲಿಕರು ತಮ್ಮ ಶ್ರೀಮಂತಿಕೆಯನ್ನು ಅಧಿಕಗೊಳಿಸುತ್ತಾ ನಡೆದಿದ್ದರು.
ಭೂಮಾಲಿಕರಾದ ತಾವು ಸರಕಾರಕ್ಕೆ ಕಂದಾಯ ಕೊಡಬೇಕು ಗೇಣಿ ಆಳು ಹೇಗೆ ಅಳೀಲಿ ಅಳೀದೇ ಇರಲಿ, ಕಂದಾಯಾನ ತಪ್ಪಿಸಲು ಸಾಧ್ಯವಿಲ್ಲ ಹೀಗಾಗಿ ಗೇಣಿದಾರರ ಶಕ್ತಿ ಮುರಿಯಬೇಕೆಂದು ತೀರ್ಮಾನಿಸಿದರು ಅದೇ ಸಮಯದಲ್ಲಿ ಗೇಣಿದಾರರು ತಾವು ಸರಕಾರದ ಕೊಳಗದಾಗೇನೆ ಗೇಣಿ ಕೊಡುವುದಾಗಿ ಒಡೆಯರಲ್ಲಿ ಹೇಳಿದರು, ಅಂದು ಭೂಮಾಲಿಕರಿಗೆ ಮೊದಲ ಬಾರಿ ಸೋಲಾಗುತ್ತದೆ, ಇದು ಎಲ್ಲಾ ಕಡೆ ನಡೆಯಿತು ನಂತರ ಭೂಮಾಲಿಕರೆಲ್ಲಾ ಒಗ್ಗಟ್ಟಾಗಿ ಮರದ ಕೊಳಗದಲ್ಲೇ ಕೊಡಬೇಕು ಇಲ್ಲ ಗೇಣಿ ಬೇಡ ಸಾಗುವಳಿ ಬೇಡ ತಮ್ಮ ಜಾಗ ಬಿಟ್ಟು ಹೊರಟು ಹೋಗಿ ಎಂದು ಶರತ್ತು ಹಾಕಿದರು. ತಡಗಳಲೆ ಸ್ವಾಮಿಗೌಡರು ತಮ್ಮ ಹಣ ಬಲದಿಂದ ಕುತಂತ್ರಹೂಡಿ ಹುಚ್ಚಾ,ಬರಮ,ಬೆನವ, ಗಣಪತಿ ಯವರನ್ನು ಕಳುವಿನ ಕೇಸಿನಲ್ಲಿ ಸಿಕ್ಕಿಸಿದಾಗ ತಮಗೆ ನೆರವಾದದ್ದೇ ವಕೀಲ ಭೀಮಾಚಾರ್ಯರು ಅವರ ಸಮರ್ಥವಾದ ವಾದದಿಂದ ಸರಿಯಾದ ಸಾಕ್ಷಾಧಾರ ಇಲ್ಲವೆಂದು ಕೋರ್ಟು ಇವರನ್ನು ಬಿಡುಗಡೆಮಾಡುತ್ತದೆ. ಹೀಗೆ ಒಂದು ದಿನ ಬೆನೆವ, ಹುಚ್ಚಾ, ಮಂಜ ಇನ್ನಿತರರು ಗದ್ದೆಯಲ್ಲಿ ಸಾಗುವಳಿ ಮಾಡುವುದನ್ನು ಕಂಡ ಸ್ವಾಮಿಗೌಡರು ಅವರ ಆಳುಗಳ ಸಹಾಯದಿಂದ ನೇಗಿಲನ್ನು ಸೀಳುಹಾಕಿದರು, ನೊಗವನ್ನು ತುಂಡು ಮಾಡಿದರು, ಅಲ್ಲಿರುವ ಎಲ್ಲರನ್ನೂ ಒಡೆದರು, ಆ ದೃಶ್ಯ ಅಷ್ಟು ಭಯಾನಕವಾಗಿದ್ದನ್ನು ಕಂಡು ಜನರು ಕಣ್ಣೀರಿಟ್ಟರು. ಈ ಸುದ್ಧಿ ಹರಡಿ ಗಣಪತಿ ರೋಷಗೊಂಡ, ನಂತರ ಎಲ್ಲರೂ ಸೇರಿ ಸಾಗರ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
*ಭೂಮಾಲಿಕರಿಗೆ ಧಿಕ್ಕಾರ, ರೈತ ಹೋರಾಟಕ್ಕೆ ಜಯವಾಗಲಿ, ಉಳುವವನೇ ಹೊಲದೊಡೆಯ ಗೇಣಿಪದ್ಧತಿಯನ್ನು ತೆಗೆದುಹಾಕಿ ಎಂದು ಪ್ರತಿಭಟಿಸಿದರು. ಪೇಟೆಗೆ ಬರಲು ಅಂಜುತ್ತಿದ್ದವರು, ತಲೆ ಎತ್ತಿ ಇಡೀ ಸಾಗರದಲ್ಲಿ ಕೂಗುತ್ತಾ ನಡೆದರು, ಈ ಚಳುವಳಿ ತುಂಬಾ ದಿನ ನಡೆಯಿತು, ಎಲ್ಲರೂ ಜೈಲುಪಾಲಾದ್ರು, ಹಳ್ಳಿಜನ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ, ಕೊಳಗದಿಂದ ಶುರು ಆದ ಚಳುವಳಿ, ಆದರೆ ಇದೊಂದು ನೆಪ, ಭೂಮಾಲಿಕರನ್ನೇ ನಾವು ಕೊಳಗ���ಲ್ಲೇ ಅಳದದ್ದು, ನೊಗ ನೇಗಿಲು ಕತ್ತರಿಸಿದ ಪಾಪ ಅವರಿಗಂಟಿಕೊಂಡಿತು. ಭೂಸುದಾರಣೆ ಕಾನೂನು ಬಂದಮೇಲೆ ನಾವೆಲ್ಲ ಭೂಮಾಲಿಕರಾದವಿ, ಈಗ ನಮ್ಮ ಜನಕ್ಕೆ ಗೌರವ, ಮರ್ಯಾದೆ ಸಿಗುತ್ತಿದೆ, ನಮ್ಮವರು ಡಾಕ್ಟರ್, ಇಂಜಿನಿಯರ್ ಗಳಾಗಿ ಮುಂದೆ ಬಂದಿದ್ದಾರೆ, ಎಲ್ಲರ ಮುಂದೆ ಮಾತನಾಡುವ ಧೈರ್ಯವೂ ಇದೆ, ಹೀಗೆ ಏನೆಲ್ಲಾ ಕಷ್ಟಪಟ್ಟದ್ದೆಂದು ತನ್ನ ಮಗ ಸಾಲಾಗಿ ನಿಲ್ಲಿಸಿದ ವಸ್ತುಗಳನ್ನು ಅದರಲ್ಲೂ ಸರಕಾರ ಹಾಗು ಮರದ ಕೊಳಗೊವನ್ನು ಕಂಡು ಹುಚ್ಚ ಕಣ್ಣೀರಿಟ್ಟನು*.
ಈ ಕಾದಂಬರಿಯಲ್ಲಿ ದೀವರ ಜನಾಂಗದ ಬದುಕಿನ ರೀತಿ ನೀತಿಗಳನ್ನು, ಹಾಗು ಅವರು ಆಚರಿಸುತ್ತಿದ್ದ ಹಬ್ಬಗಳನ್ನು, ಭೂಮಾಲಿಕರ ದಬ್ಬಾಳಿಕೆ, ಗೇಣಿದಾರರ ಕಷ್ಟ ಕಾರ್ಪಣ್ಯಗಳನ್ನು ಸುಂದರವಾಗಿ ವಿವರಿಸಿದ್ದಾರೆ.
ಕೊಳಗ... ಇದುವರೆಗೆ ಧಾನ್ಯವೋ, ಅಡಿಕೆಯೋ ಅಳೆಯುವ ಒಂದು ಮಾನಕ ಮಾತ್ರ ಆಗಿದ್ದಿದ್ದು, ಇಂದು ಅದು ಬೇರೆಯೇ ರೂಪದಲ್ಲಿ ಗೋಚರಿಸುತ್ತಿದೆ. ಕೊಳಗದ ಮೋಸದ ಪ್ರತ್ಯಕ್ಷ ಸಾಕ್ಷಿ ನಾನು. ಆದರೆ ಇದೇ ಕೊಳಗದ ಮೋಸವೊಂದು ಚಳುವಳಿಯಾಗಿ, ಸಾಮಾಜಿಕ ನ್ಯಾಯದ ಅಸ್ತ್ರವಾಗಿ ಕುಂತಿದ್ದರ ಕಥೆಯೇ ರೋಚಕ. ಕಾಗೋಡು ಎಂಬ ಮಗ್ಗುಲಿನ ಗ್ರಾಮದಲ್ಲೇ ನಡೆದ, ದೀವರ ಅವಮಾನ, ಹೋರಾಟಗಳ ಗಾಥೆ ಕಣ್ಣಲ್ಲಿ ನೀರು ತರಿಸುವಷ್ಟು ಸಶಕ್ತ ಬರವಣಿಗೆ ಡಿಸೋಜಾ ರದ್ದು. ಒಂದು ಧನ್ಯತೆಯಿದೆ ಈ ಪುಸ್ತಕ ಓದಿದ್ದಕ್ಕೆ.. ಕೇವಲ ನಾಲ್ಕು ತಾಸಲ್ಲಿ, ಒಂದು ನಿಮಿಷವೂ ಬಿಡದೆ ತಡೆಕದಿಂದ ಓದಿದ ಮೊದಲ ಕಾದಂಬರಿ ಇದು.