ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು.
ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ (ಪ್ರಬಂಧಗಳು), ಪ್ರಪಂಚ ಪುಸ್ತಕ (ವಿಮರ್ಶಾ ಲೇಖನಗಳು), ಪಂಡಿತ ಭೀಮಸೇನ ಜೋಶಿ (ವ್ಯಕ್ತಿಚಿತ್ರ), ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು, ಹಾರಿಕೊಂಡು ಹೋದವನು (ಅನುವಾದಿತ ಕಥೆಗಳು), ವೆನಿಸ್ಸಿನಲ್ಲಿ ಸಾವು, ಹಳ್ಳಿ, ಪೋಸ್ಟ್ ಮ್ಯಾನ್ (ಅನುವಾದಿತ ಕಾದಂಬರಿಗಳು), ಮಾಸ್ಟರ್ ಬಿಲ್ಡರ್ (ಅನುವಾದಿತ ನಾಟಕ), ಶತಮಾನದ ಸಣ್ಣಕತೆಗಳು, ಸಣ್ಣಕತೆ 1983, ಕನ್ನಡ ಅತಿ ಸಣ್ಣಕತೆಗಳು, ನಾದದ ನವನೀತ, ಬೆಸ್ಟ್ ಆಫ್ ಕೇಫ (ಸಂಪಾದಿತ ಕೃತಿಗಳು).
ಇತಿಹಾಸದಂತಹ ಕಥಾ ಸಂಕಲನ, ಪ್ರಪಂಚ ಪುಸ್ತಕದಂತಹ ಪಾಶ್ಚಾತ್ಯ ಸಾಹಿತ್ಯ ಪರಿಚಯ, ನಾಪತ್ತೆಯಾದ ಗ್ರಾಮಫೋನು ಮತ್ತು ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ ಪ್ರಬಂಧ ಸಂಕಲನಗಳ ಮೂಲಕ ಓದಿನ ಅಭಿರುಚಿ ಬೆಳೆಸಿದವರು ದಿವಾಕರ್. ಪಾಶ್ಚಾತ್ಯ ಸಾಹಿತ್ಯದ ಓದಿನ ವಿಷಯಕ್ಕೆ ಬಂದರೆ ನರೇಂದ್ರ ಪೈ , ದಿವಾಕರ್ ಮತ್ತು ಗುರುರಾಜ್ ಕೋಡ್ಕಣಿ ನನಗೆ ದಾರಿ ತೋರಿದವರೆಂದರೆ ಅತಿಶಯೋಕ್ತಿ ಅಲ್ಲ. ಇಲ್ಲವಾದರೆ ಮಾರ್ಕೆಸ್ ಇತ್ಯಾದಿ ಲೇಖಕರ ಪರಿಚಯವೇ ಆಗುತ್ತಿರಲಿಲ್ಲ.
ಈ ಪುಸ್ತಕ ಅವರ ಕೆಲವು ಅತ್ಯುತ್ತಮ ಪ್ರಬಂಧಗಳ ಒಳಗೊಂಡಿದೆ. ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಅವರ ಬರಹಗಳ ಸಂಕಲನ ಇದು. ಡಿಕ್ಷನರಿಯಲ್ಲಿ ಪದ ಸೇರಿಸುವ ಬಗೆ ಇರಬಹುದು, ಹುಲಿಯ ಬಗೆಗಿನ ಸಾಹಿತ್ಯದ ಉಲ್ಲೇಖ ಇರಬಹುದು, ಪ್ರಸಿದ್ಧ ಪುರುಷರಿಗಿಂತ ಅವರ ಸುತ್ತಮುತ್ತ ಇರುವ ಉತ್ಸವ ಮೂರ್ತಿಗಳ ಕುರಿತು ಇರಬಹುದು,ಕೃಷ್ಣ ಮತ್ತು ರಾಮ ಎಂಬ ಎರಡು ಭಿನ್ನ ಅವತಾರಗಳ ದೇಶ ಕಂಡದ್ದು ಇರಬಹುದು,ಕಥಾ ಸಾಹಿತ್ಯದ ಕಾಲ್ಪನಿಕ ಊರುಗಳ ಕುರಿತಾಗಿರಬಹುದು,ಗಾಂಧೀಜಿಯ ಬಗೆಗಿರಬಹುದು, ಹಳೆಯ ಕಥಾ ಸಂಕಲನಗಳ ಬಗೆದ ಬರಹಗಳಾಗಿರಬಹುದು , ನಗರವೇ ಕಾದಂಬರಿಯಾದ ಯು.ಎಸ್.ಎ, ಮ್ಹಾನ್ಹಟನ್ ಟ್ರಾನ್ಸ್ಫರ್ ಕೃತಿಗಳ ಬಗ್ಗೆ, ಚಕ್ರವರ್ತಿ ರಾಜಗೋಪಾಲಾಚಾರಿ ಬರೆದ ಕಥೆಯೊಂದರ ಅನುವಾದ, ಅನಕೊಂಡಾ ಹಾವಿನ ಬಗೆಗಿನ ಲಘು ಬರಹ ಈ ಯಾವತ್ತೂ ಬರಹಗಳು ತಮ್ಮ ವಿವರಗಳಿಂದ ಹೊಳೆಯುತ್ತದೆ.
ಆದರೆ ಇಡೀ ಸಂಕಲನದಲ್ಲಿ ಸಂಗೀತದ ಬಗ್ಗೆ ಸಂಗೀತಗಾರರ ಬಗ್ಗೆ ಕೆಲ ಬರಹಗಳಿವೆ. ಅದು ಮತ್ತೆ ಮತ್ತೆ ಚಪ್ಪರಿಸಿ ಓದುವಂತೆ ಮಾಡುತ್ತದೆ. ಪಂಡಿತ ಭೀಮಸೇನ ಜೋಷಿ, ಬಾಲಮುರಳಿ ಕೃಷ್ಣ ಅವರ ಸಂಗೀತದ ವರ್ಣನೆ, ಸಂಗೀತಗಾರರು ಹಾಡುವಾಗಿನ ಸಾಭಿನಯ ಆಂಗಿಕ ಹಾವಭಾವಗಳು ಹೇಗೆ ಹಾಡನ್ನು ಆತ್ಮದ ಸಹಿತ ನಮ್ಮೊಳಗೆ ಇಳಿಸುತ್ತದೆ ಎಂಬ ಕುರಿತು, ಸುಗಮ ಸಂಗೀತವೆಂಬ ಪ್ರಕಾರದ ಕುರಿತು, ಕಾಳಿಂಗರಾಯರ ಗಾನದ ಬಗ್ಗೆ ಹೀಗೆ ಈ ಪುಟ್ಟ ಪುಸ್ತಕ ನಮಗೆ ಗೊತ್ತಿಲ್ಲದ ಗೊತ್ತಿರುವ ಹಲ ವಿಷಯಗಳ ಬಗ್ಗೆ ಮಾಹಿತಿಪೂರ್ಣ ಒಳನೋಟಗಳ ಕೊಡುತ್ತದೆ. ಇದನ್ನೆಲ್ಲ ಓದುವಾಗ ದಿವಾಕರ್ ಅವರ ಬಗೆಗಿನ ಗೌರವ ಇನ್ನಷ್ಟು ಹೆಚ್ಚುತ್ತದೆ. ಬರಿಯ ಮಾಹಿತಿ ನೀಡುವುದು ಮತ್ತು ಮಾಹಿತಿ ಅಡಕವಾದಂತೆ ಓದುಗ ಓದುವಂತೆ ಪ್ರಬಂಧ ಬರೆಯುವುದರ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ.