ಲೇಖಕಿ ವಸುಮತಿ ಉಡುಪ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯಲ್ಲಿ 1948 ಏಪ್ರಿಲ್ 18ರಂದು ಜನಿಸಿದರು. ತಾಯಿ ತ್ರಿಪುರಾಂಬ, ತಂದೆ ರಂಗಾಭಟ್ಟರು. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರು ಬರೆದ ಕಥೆಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ವಿವಿಧ ಭಾಷೆಗೆ ಅನುವಾದಗೊಂಡಿವೆ.
ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ವಸುಮತಿ ಅವರ ಪ್ರಮುಖ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ ಅವರ ಕತಾ ಸಂಕಲನ. ‘ಸೀತಾಳದಂಡೆ’ ಮತ್ತೊಂದು ಪ್ರಬಂಧ ಸಂಕಲನ. ಅವರ ಹಲವಾರು ಕತೆಗಳು ಹಿಂದಿ, ತೆಲುಗು ಭಾಷೆಗೆ ಅನುವಾದಗೊಂಡಿದೆ. ಅವರ ಸಾಹಿತ್ಯ ಸೇವೆಗೆ ‘ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ಗ್ರಂಥಾಲಯ ಕಾದಂಬರಿ ಬಹುಮಾನ, ಮುಂಬೈ ಕನ್ನಡಿಗರ ಕೂಟದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ, ಕಥಾರಂಗಂ ಸಂಸ್ಥೆಯಿಂದ ಕನ್ನಡ ಕವಿತಾ ಪ್ರಶಸ್ತಿ, ದು.ನಿಂ. ಬೆಳಗಲಿ ಸಾಹಿತ್ಯ ಪ್ರಶಸ್ತಿ ಮುಂತಾದವು ಅವರನ್ನರಸಿವೆ. ಇವರ ಅಭಿಜಿತನ ಕತೆಗಳು (ಮಕ್ಕಳ ಸಾಹಿತ್ಯ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ.
ನನಗೊಂದು ಆಶ್ಚರ್ಯ ಏನೆಂದರೆ ವಸುಮತಿ ಉಡುಪರ ಕಥೆಗಳ ,ಕಾದಂಬರಿಗಳ ಯಾರೂ ಯಾಕೆ ತೆರೆಗೆ ಅಳವಡಿಸಲಿಲ್ಲ ಅಂತ. ಸಂಬಂಧಗಳ ಬಗ್ಗೆ ,ಕುಟುಂಬ ಜೀವನದ ಬಗ್ಗೆ ಎಲ್ಲಕ್ಕಿಂತ ಮುಖ್ಯ ಗೋಡೆಗಳಿಗೆ ಕಿವಿಗಳಿದ್ದರೆ,ಬಾಯಿಯಿದ್ದರೆ ಅವು ಆಡುವ ಗುಟ್ಟುಗಳ,ಪಿಸುಮಾತನ್ನು ಇವರಷ್ಟು ಚೆನ್ನಾಗಿ ಬರೆದವರು ಕಡಿಮೆ. ಮನಸಿನ ಆಳಕ್ಕೆ ಪಾತಾಳಗರಡಿ ಹಾಕಿ ಬರೆವ ಶೈಲಿಯಿಂದ ಎಷ್ಟೋ ಸಲ ಓದಲು ಭಯ. ಯಾಕೆ ಗೊತ್ತಾ? ಇವರ ಬರಹಗಳಲ್ಲಿ ಕಾಣುವುದು ನಮ್ಮ ಅಮ್ಮ,ಅಜ್ಜಿ ,ದೊಡ್ಡಮ್ಮ,ಚಿಕ್ಕಮ್ಮ ಮುಂತಾದ ಹಿರಿಯರ ನಿಟ್ಟುಸಿರು..ಅದನ್ನು ನಿರ್ಲಕ್ಷಿಸಿದೆವೋ ಅನ್ನುವ ಭಾವ ನಮಗೆ ಕಾಣುತ್ತದೆ. ವಸುಮತಿ ಉಡುಪ ಕನ್ನಡದ ನಿಜವಾದ ಅರ್ಥದ ಸಾಮಾಜಿಕ ಬರಹಗಾರ್ತಿ.