Yashwant Vithoba Chittal was a Kannada fiction writer born in Hanehalli, Uttara Kannada District
He completed his primary school education from his village school and his high school from the Gibbs High School, Kumta (1944).Later he did his Bachelors in science and Bachelors in technology both from Bombay University being a top ranker and gold medalist in the year 1955 and master's degree in chemical engineering from Stevens Institute of Technology, United States, and simultaneously pursued a career in science and technology along with literature. His contributions in the field of Polymer Science and synthetic resins was well recognized and he was selected as Fellow of Plastics and Rubber Institute, London.
He is well know for his short stories as well as novels earning him Karnataka Sahitya Academy Award, Sahitya Academy Award, Vardhamana Award, Adikavi Pampa Award etc
ಅಕ್ಷರವಿಹಾರ_೨೦೨೪ ಕೃತಿ: ಸಮಗ್ರ ಕತೆಗಳು (ಭಾಗ ೧ ಮತ್ತು ಭಾಗ ೨) ಲೇಖಕರು: ಯಶವಂತ ಚಿತ್ತಾಲ ಪ್ರಕಾಶಕರು: ಪ್ರಿಸಂ ಬುಕ್ಸ್, ಬೆಂಗಳೂರು
ಈ ಸಮಗ್ರ ಕತೆಗಳನ್ನು(ಒಟ್ಟು 66 ಕತೆಗಳು) ಓದುವುದಕ್ಕೆ ಮುಂಚೆಯೇ ಯಶವಂತ ಚಿತ್ತಾಲರ ಐದು ಕಾದಂಬರಿಗಳನ್ನು ಓದಿದ್ದೆ. ಈ ಕಥಾಸಂಕಲನಗಳನ್ನು ಓದಿಯಾದ ಮೇಲೆ ಅನಿಸಿದ್ದು ಮೊದಲು ಅವರ ಕತೆಗಳನ್ನು ಸ್ವಲ್ಪ ಮಟ್ಟಿಗಾದರೂ ಓದಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಎಂದು. ಆಗ ಅವರ ಸಮಗ್ರ ಕತೆಗಳು ಮುದ್ರಣದಲ್ಲಿರಲಿಲ್ಲ ಮತ್ತು ಮರುಮುದ್ರಣವಾದಾಗ ಪುಸ್ತಕಗಳ ಬೆಲೆ ಖರೀದಿಯನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡುವಂತೆ ಮಾಡಿದವು. ಆದರೆ ಈಗ ಅನಿಸುವುದು ಬೆಲೆಯ ಮುಖ ನೋಡಿ ಪುಸ್ತಕಗಳನ್ನು ಖರೀದಿಸಿ ಓದದೇ ಹೋಗಿದ್ದರೆ ಎಂತಹಾ ಅಪೂರ್ವ ಅನನ್ಯ ಅನುಭವದಿಂದ ವಂಚಿತನಾಗುತ್ತಿದ್ದೆ ಎಂದು. ಬಹುಶಃ ಕಾದಂಬರಿ ಲೋಕದ ಚಿತ್ತಾಲರು ನನ್ನೊಳಗಿಳಿಯಲು ತ್ರಾಸ ಕೊಡುತ್ತಿದ್ದರೆ ಕತೆಗಾರರಾಗಿ ಸಾವಕಾಶವಾಗಿಯಾದರೂ ನನ್ನೊಳಗೆ ಜಾಗ ಮಾಡಿಕೊಂಡರು. ಇದಕ್ಕೆ ಕಾರಣ ಅವರ ಶೈಲಿಯ ಬಗ್ಗೆ ನನಗಿದ್ದ ಅಪರಿಚಿತತೆಯೇ ಹೊರತು ಚಿತ್ತಾಲರಲ್ಲ. ಈಗ ಅವರ ಐದು ಕಾದಂಬರಿಗಳನ್ನು ಮತ್ತೆ ಓದಿ ದಕ್ಕಿಸಿಕೊಳ್ಳಬೇಕೆಂಬ ಒಲವು ಮೂಡಿದ್ದರೆ ಕತೆಗಾರರಾಗಿ ಅವರ ಪ್ರಭಾವ ಅರಿವಾದೀತು…
ಚಿತ್ತಾಲರು ಕಟ್ಟಿಕೊಡುವ ಕಥಾಲೋಕ ಒಂದು ಬಗೆಯಲ್ಲಿ ವಿಶಿಷ್ಟವಾದುದು ವಿಭಿನ್ನವಾದುದು. ಕೆಲವೊಮ್ಮೆ ಕತೆಯ ವಸ್ತು, ಪಾತ್ರಗಳಂತೆ ಕತೆಯನ್ನು ಕಟ್ಟಲು ಅವರು ಬಳಸುವ ಸನ್ನಿವೇಶಗಳು, ಪಾತ್ರಗಳ ಮನೋಭೂಮಿಕೆಗಳು, ಕತೆಯು ನಡೆಯುವ ಸನ್ನಿವೇಶಗಳು ಮತ್ತು ಪರಿಸರದ ದಟ್ಟ ವಿವರಗಳು, ಕತ್ತಲು ಬೆಳಕಿನ ಲಯ ವಿನ್ಯಾಸಗಳು, ಇವೆಲ್ಲವೂ ಒಂದಕ್ಕೊಂದು ತಳುಕು ಹಾಕಿಕೊಂಡು ಒಂದು ಬಗೆಯ ಸಂಕೀರ್ಣವಾದ ಅನುಭವ ಲೋಕವು ನಮ್ಮಲ್ಲಿಯೇ ಮೊಳಕೆಯೊಡೆಯುವಂತೆ ಮಾಡುವ ಕಲಾತ್ಮಕತೆ ಬಹು ಸಹಜವಾಗಿ ನಾವುಗಳು ಸಹ ಕತೆಯ ಒಳಗೆ ಸೇರಿಕೊಂಡಿದ್ದೇವೆಯೇನೋ ಎಂಬಂತಹ ಭಾವವನ್ನು ಸ್ಫುರಿಸುತ್ತವೆ. ಸಾಮಾನ್ಯವಾಗಿ ಯಾವುದೇ ಕತೆಯು ಬಾಹ್ಯ ಪ್ರಪಂಚದಲ್ಲಿ ಜರುಗಿ ಅಂತರಂಗವನ್ನು ಮುಟ್ಟುವುದಾದರೆ ಚಿತ್ತಾಲರವು ನಮ್ಮ ಮನಸ್ಸಿನ ಪರಿಧಿಯನ್ನು ನಿಧಾನವಾಗಿ ಸೇರಿಕೊಳ್ಳುತ್ತ ಅಂತರಂಗದ ಭೂಮಿಕೆಯಲ್ಲಿ ಅರಳುತ್ತವೆ. ಇನ್ನೊಂದು ಇಲ್ಲಿ ಗಮನ ಸೆಳೆಯುವ ಅಂಶವೆಂದರೆ ಸಮೃದ್ಧವಾದ ಭಾಷೆಯ ಬಳಕೆ. ಯಾವುದೇ ವಿಚಾರವನ್ನು ಓದುಗನಿಗೆ ಸರಿಯಾದ ಬಗೆಯಲ್ಲಿ ತಲುಪಿಸಲು ಭಾಷೆಯ ಬಳಕೆ ಹೇಗಿರಬೇಕು ಎಂದು ಇವರನ್ನು ಓದುವಾಗ ತಿಳಿಯುತ್ತದೆ. ಒಂದು ಭಾಷೆಯನ್ನು ಸರಿಯಾಗಿ ದುಡಿಸಿಕೊಂಡರೆ ಅದು ಎಂತಹ ಅದ್ಭುತ ಕಲಾಕೃತಿಯಾಗಿ ಬೆಳೆಯಬಲ್ಲುದು ಎಂಬುದಕ್ಕೆ ಚಿತ್ತಾಲರ ಕೃತಿಗಳೇ ಸಾಕ್ಷಿ…
ತೀವ್ರತರದ ಯಾತನೆ,ಒಂಟಿತನ,ದಟ್ಟ ವಿಷಾದದ ಛಾಯೆ, ವ್ಯಕ್ತಿಯೊಬ್ಬನ ನಿಗೂಢ ನಿರ್ಗಮನ ಅಥವಾ ಕೊಲೆ ಅಥವಾ ಆತ್ಮಹತ್ಯೆ, ಅರಬ್ಬೀ ಸಮುದ್ರ, ಹನೇಹಳ್ಳಿ, ಮುಂಬಯಿ ನಗರ, ಸಾವು, ಕಾಮ ಮುಂತಾದ ವಿಚಾರಗಳು ಅವರ ಅನೇಕ ಕತೆಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾಗುತ್ತವೆ. ಇವುಗಳು ಇಲ್ಲಿ ಅಭಿವ್ಯಕ್ತಿಗೊಳ್ಳುವಾಗ ಕೆಲವೊಮ್ಮೆ ಇದರ ಕಾರಣಗಳು ಪ್ರಕಟಗೊಂಡರೆ ಮತ್ತೊಮ್ಮೆ ಪರಿಣಾಮಗಳು ಮಗದೊಮ್ಮೆ ಬದುಕಿನಲ್ಲಿ ಈ ಎಲ್ಲದರವುಗಳ ಒಟ್ಟು ವೈಯಕ್ತಿಕ, ಸಾಮಾಜಿಕ ಪರಿಣಾಮಗಳು ಸಹ ಕಣ್ಣಮುಂದೆ ನಿಲ್ಲುತ್ತವೆ. ಕೆಲವು ಕತೆಗಳಲ್ಲಿ ಸಹಜತೆ ಎಷ್ಟು ನಿಷ್ಠುರವಾಗಿದೆ ಎಂದರೆ ಇದೆಂತಹಾ ಅಸಹಜತೆ ಎನಿಸುವಷ್ಟು. ಮೂರ್ನಾಲ್ಕು ಕತೆಗಳಲ್ಲಿನ ಮೃತ್ಯುಪ್ರಜ್ಞೆ ಎಷ್ಟು ಸಹಜವಾಗಿ ಗಾಢವಾಗಿದೆಯೆಂದರೆ ಆ ವಿಷಾದವನ್ನು ಮತ್ತೆ ಮತ್ತೆ ಓದಿ ಅನುಭವಿಸಬೇಕೆನಿಸುವಷ್ಟು. ಇಂತಹಾ ಕತೆಗಳನ್ನು ಬರೆದ ಅವರು ತಿಳಿಹಾಸ್ಯದ ವ್ಯಂಗದ ಚಾಟಿಯೇಟಿನ ಅನೇಕ ಕತೆಗಳನ್ನು ಸಹ ಬರೆದಿದ್ದಾರೆ. ಕೊನೆ ಕೊನೆಯ ಕತೆಗಳು ಕಾಲ ಸರಿಯುತ್ತಾ ಹೋದಂತೆ ಅವರು ಆದ ಬದಲಾವಣೆಗಳಿಗೆ ಯಾವ ರೀತಿ ಸ್ಪಂದಿಸುತ್ತಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಇಲ್ಲಿ ಕತೆಗಳನ್ನು ಸುಮಾರು ಎರಡು ತಿಂಗಳುಗಳ ಸಮಯ ತೆಗೆದುಕೊಂಡು ಓದಿದ್ದೇನೆ. ನನ್ನಲ್ಲಿ ಮೂಡಿದ ಹೊಸ ಭಾವ ಪ್ರಪಂಚದ ಅರಿವಿಗೆ ಅಕ್ಷರ ರೂಪ ಕೊಡಲು ನಿಜವಾಗಿಯೂ ನಾನು ಅಸಮರ್ಥ. ಕೆಲವೊಮ್ಮೆ ಓದುವಾಗ ಛೇ… ನಾನು ಸಹ ಅವರು ಜನಿಸಿದ ಮಣ್ಣಲ್ಲಿಯೇ ಹುಟ್ಟಿದ್ದರೆ ಈ ಕತೆಗಳು ಇನ್ನಷ್ಟು ಸ್ಪುಟವಾಗಿ ಅರ್ಥವಾಗುತ್ತಿದ್ದವು ಅನಿಸಿದ್ದಿದೆ. ಈ ಕತೆಗಳು ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಂತಹವುಗಳಲ್ಲ. ಒಂದೇ ಓದಿಗೆ ದಕ್ಕುವುದು ಸಹ ಅಷ್ಟು ಸುಲಭವಲ್ಲ. ಸಾವಕಾಶವಾಗಿ ಓದಿ ಮನನ ಮಾಡಿಕೊಳ್ಳುತ್ತಾ ಹೋದಂತೆ ಆಳ ಆಗಾಧತೆಗಳ ಬಗ್ಗೆ ತಿಳಿವು ಮೂಡೀತು. ನಾನಂತೂ ಮತ್ತೆ ಮತ್ತೆ ಅವರನ್ನು ಓದುವುದು ಶತಃಸಿದ್ಧ. ನೀವು ಸಹ ಅವರ ಕಥಾಲೋಕದಲ್ಲೊಂದು ಸುತ್ತು ವಿಹರಿಸಿ ಬನ್ನಿ… ಅವರು ಕಟ್ಟಿಕಡುವ ವಿಶಿಷ್ಟ ವಿನ್ಯಾಸದ ಕತೆಗಳ ಲೋಕ ನಿಮ್ಮ ಭಾವ ಪ್ರಪಂಚವನ್ನು ಅರಳಿಸದಿದ್ದರೆ ಮತ್ತೆ ಕೇಳಿ…
ಯಶವಂತ ಚಿತ್ತಾಲರ "ಸಮಗ್ರ ಕಥೆಗಳು 1" ಕೈಗೆತ್ತಿಕೊಂಡಾಗ ಇಷ್ಟೊಂದು ಕಥೆಗಳಿರುತ್ತವೆ ಅಂದ್ಕೊಂಡಿರಲಿಲ್ಲ. ಒಟ್ಟು 41 ಕಥೆಗಳಿವೆ! ಶುರುವಿನಲ್ಲಿ ಒಂದಾದ ಮೇಲೊಂದರಂತೆ ಪುಟ ತಿರುಗಿಸಿದ್ದೇ ಗೊತ್ತಾಗಲಿಲ್ಲ. ಚಿಕ್ಕ ಚಿಕ್ಕ ಕಥೆಗಳು, ಸಣ್ಣದೊಂದು ತಿರುವು ಕೊಟ್ಟು ಮುಗಿದುಬಿಡುತ್ತಿದ್ದವು. ಬಹುಶಃ ಲೇಖಕರು ಬರೆಯಲು ಶುರು ಮಾಡಿದಾಗ ಈ ತರಹ ನೇರವಾಗಿ, ಚುಟುಕಾಗಿ ಹೇಳುವ ಕಥೆಗಳನ್ನೇ ಹೆಚ್ಚು ಬರೆದಿರಬೇಕು. ಆದರೆ, ಓದುತ್ತಾ ಹೋದಂತೆ ಕಥೆಗಳು ದೊಡ್ಡದಾಗುತ್ತಾ ಹೋದವು. ಪ್ರಪಂಚದ ಬಗ್ಗೆ ಅವರ ತಿಳುವಳಿಕೆ, ಪದಗಳ ಬಳಕೆ, ವಿಷಯಗಳನ್ನು ನೋಡುವ ದೃಷ್ಟಿಕೋನ ಬದಲಾದಂತೆಲ್ಲಾ ಕಥೆಗಳಲ್ಲೂ ಆ ಬದಲಾವಣೆ ಕಾಣುತ್ತಿತ್ತು. ಪುಸ್ತಕದಲ್ಲಿ ಆ ಬೆಳವಣಿಗೆಯನ್ನು ಗಮನಿಸುವುದೇ ಒಂದು ಚೆಂದದ ಅನುಭವ.
ಇನ್ನೊಂದು ವಿಷಯವೆಂದರೆ, ಲೇಖಕರು ಮುಂಬೈಗೆ ಹೋದ ಮೇಲೆ ಅಲ್ಲಿನ ಜೀವನದ ಪ್ರಭಾವ ಅವರ ಕಥೆಗಳ ಮೇಲೆ ಚೆನ್ನಾಗಿಯೇ ಆಗಿದೆ. ಅಲ್ಲಿನ ಲೈಫ್ಸ್ಟೈಲ್, ಜನರ ರೀತಿ, ಓಡಾಡುವ ಜಾಗಗಳ ಹೆಸರುಗಳೆಲ್ಲಾ ಕಥೆಗಳಲ್ಲಿ ಬರುವುದರಿಂದ, ಓದುವಾಗ ನಮಗೂ ಆ ಪರಿಸರದ ಒಂದು ಚಿತ್ರಣ ಸಿಗುತ್ತದೆ. ನಾನು ಈ ಪುಸ್ತಕವನ್ನು ಪೂರ್ತಿ ಓದಲು 5 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡೆ. ಆಗಾಗ ಒಂದೆರಡು ಕಥೆಗಳನ್ನು ಓದುತ್ತಿದ್ದೆ. ಮೊದಲಿನ ಕಥೆಗಳು ಬೇಗ ಓದಿಸಿಕೊಂಡು ಹೋದವು, ಯಾಕೆಂದರೆ ಅವು ಹಿಡಿದಿಟ್ಟುಕೊಳ್ಳುವ ಹಾಗಿದ್ದವು.
ಆದರೆ, ಪುಸ್ತಕದ ಕೊನೆಯ ಭಾಗಕ್ಕೆ, ಅಂದರೆ ಸುಮಾರು 70% ಮುಗಿದ ಮೇಲೆ ಬರುವ ಕಥೆಗಳಲ್ಲಿ ಫಿಲಾಸಫಿ ಮಾತುಗಳು ಹೆಚ್ಚಾದವು ಎನಿಸಿತು. ಕೆಲವು ಕಥೆಗಳಲ್ಲಂತೂ ಈ ಫಿಲಾಸಫಿ ವಿಷಯಗಳು ಕಥೆಯನ್ನು ಸುಮ್ಮನೆ ಉದ್ದ ಮಾಡಿದ ಹಾಗೆನಿಸಿದ್ದು ಸುಳ್ಳಲ್ಲ. ಆದರೂ, ಒಟ್ಟಿನಲ್ಲಿ ಇದೊಂದು ಒಳ್ಳೆಯ ಕಥಾಸಂಕಲನ. ಚಿಕ್ಕ ಕಥೆಗಳಿಂದ ಹಿಡಿದು, ದೀರ್ಘವಾದ, ಹೆಚ್ಚು ಚಿಂತನೆಗೆ ಹಚ್ಚುವ ಕಥೆಗಳವರೆಗೆ ಓದಲು ಸಿಗುತ್ತದೆ.