ಮಲೆನಾಡಿನ ಮಳೆ, ಗದ್ದೆ, ಕಾಡು, ಕಾಡು ಹಂದಿಬೇಟೆ, ಮಲೆನಾಡಿನ ಭಾಷೆ ಮುಂತಾದವು ಎಲ್ಲ ಮಲೆನಾಡಿನ ಜೀವನವನ್ನು ತುಂಬಾ ಚೆನ್ನಾಗಿ ಕಥೆಯ ಮೂಲಕ ತಿಳಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರ ಪ್ರಭಾವ ಇವರ ಕಥೆಗಳಲ್ಲಿ ಕಾಣಿಸುತ್ತೆ. ಅತಿಥಿ ಕಥೆ ಇಷ್ಟ ಆಯ್ತು. ಕಥೆಗಳು ಓದ್ತಾ ಇದ್ರೆ ಮಲೆನಾಡಲ್ಲಿ ಬೆಳೆದು ಬದುಕು ಕಟ್ಟಿಕೊಳ್ಳೊಕೆ ಬೇರೆ ಊರಿಗೆ ಹೋದೋರಿಗೆ ಮತ್ತೆ ನಮ್ಮೂರಿಗೆ ಓಡಿ ಹೋಗೋಣ ಅನ್ನಿಸದೆ ಇರೋಲ್ಲ. ಧೋ ಅಂತ ಸುರಿಯೋ ಮಳೆ, ಮಳೆಗಾಲದಲ್ಲಿ ಇರುವ ಹಿತವಾದ ಚಳಿ...
ನವಿಲು ಕೊಂದ ಹುಡುಗ ಒಂದು ಕಥಾ ಸಂಕಲನ. ಪ್ರತಿಯೊಂದು ಕಥೆಯೂ ನಮ್ಮನ್ನು ಮಳೆಗಾಲದ ಮಲೆನಾಡಿಗೆ ಕರೆದುಕೊಂಡು ಹೋಗುವುದರಲ್ಲಿ ಮೋಸವಿಲ್ಲ. ಎಲ್ಲ ಕಥೆಗಳು ಓಪನ್ ಎಂಡಿಂಗ್ ಇರುವ ಕಥೆಗಳಗಿರುವ ಕಾರಣ ಅದರ ಅಂತ್ಯವನ್ನು ನಾವು ಹೇಗೆ ಊಹಿಸಿಕೊಳ್ಳುತ್ತೇವೋ ಹಾಗೆಯೇ ಸಾಗುತ್ತದೆ. ಆದರೆ ಕಥೆಗಳು ನಮ್ಮನ್ನು ಒಮ್ಮೆ ಚಿಂತೆ ಗೆ ತಳ್ಳುವುದರಲ್ಲಿ ಸಂಶಯವಿಲ್ಲ. ಕಾಡು ಮಲ್ಲಿಗೆ, ನವಿಲು ಕೊಂದ ಹುಡುಗ, ಅತಿಥಿ ನನಗೆ ಇಷ್ಟವಾದ ಕಥೆಗಳು.
ಸಚಿನ್ರ ಕಥೆಗಳ ಓದುತ್ತಾ ಕಳೆದುಹೋಗಬಹುದು. ಬಿಡುಗಡೆ ಕಥೆ ಆ ಹುಡುಗರಿಗಷ್ಟೇ ಅಲ್ಲ ನಮಗೂ ಹೌದು. ಆ ಕೊರೆವ ದಾರ ತೇಜಸ್ವಿಯ ಸ್ವರೂಪವ ನೆನಪಿಸಿತೇ? ಆ ಬಾಲ್ಯದ ಹುಡುಗರು ಲಿಂಗ ಬಂದ ಕಥೆಯ ಮುಗ್ಧ ಹುಡುಗನೇ? ಅಪ್ರಸ್ತುತ ಪ್ರಸಂಗ ಆಹ್ಹಾ ಒಳ್ಳೆಯ ಲವ್ ಸ್ಟೋರಿ ತರಹ ಶುರುವಾಗಿದೆಯಲ್ಲ. ಕನ್ನಡದಲ್ಲಿ ಇತ್ತೀಚೆಗೆ ಒಳ್ಳೆಯ ಪ್ರೇಮ ಕಥೆ ಬಂದೇ ಇಲ್ಲ. ಎಲ್ಲ ಜಯಂತರ ಸಿನಿಮಾ ಹಾಡುಗಳಲ್ಲಿ, ಸಂದೀಪ್ ಈಶಾನ್ಯರ ಅಂಜಲಿ ಕವಿತೆಗಳಲ್ಲಿ (ಅದರೊಳಗೆ ನಗರ ಬದುಕಿನ ಏಕಾಕಿತನ,ಓದಿದ ಪುಟಗಳ ಭಾರವೂ ಇದ್ದ ಕಾರಣ ಪೂರ್ಣ ಪ್ರೇಮ ಅಲ್ಲ)ಮಾತ್ರ ಅಂತ ಬೇಸರದಲ್ಲಿದ್ದೆ .ಆದರೆ ಅನಾಮತ್ತಾಗಿ ಕಥೆ ಪಡಕೊಂಡ ತಿರುವು ಬಸ್ಸು ಹತ್ತಿ ಎಲ್ಲೋ ಇಳಿಯಬೇಕಾಗಿದ್ದವನ ಇಷ್ಟೇ ಹೋಗೋದು ಬಸ್ಸು ಅಂತ ಇನ್ನೆಲ್ಲೋ ಇಳಿಸಿದ ಹಾಗಾಯ್ತು. ಕಾಡುಮಲ್ಲಿಗೆ ಕಥೆ ಕೊನೆಯ ಪ್ಯಾರಾಕ್ಕೆ ಇಡೀ ಕಥೆಯ ಪ್ರಭೆ ಬದಲಾಯಿಸುವ ಶಕ್ತಿಯಿದೆ. ನವಿಲು ಕೊಂದ ಹುಡುಗ ಕನ್ನಡ ಸಾಹಿತ್ಯ ಈವರೆಗೆ ಕಂಡ ನೋಟದಂತೆಯೇ ಭಾಸವಾಗಿ ಅದು ನೀಡಬೇಕಾದ ಥ್ರಿಲ್ ನೀಡಲಿಲ್ಲ. ಅತಿಥಿ ಕೂಡ ಮಳೆಯೊಂದು ಮಾತ್ರ ನೆನಪಲ್ಲಿ ಉಳಿವ ಹಾಗಿನ ಕಥೆ. ಅದರ ನಿರೀಕ್ಷಿತ ಜಾಡು ಓದುಗನಿಗೆ ಗೊತ್ತಿರುವ ದಾರಿಯೇ ಅನಿಸಿತು. ಹಾವು ಮತ್ತು ಹುಡುಗಿ ಕನ್ನಡದವರಿಗೆ ಮರೆತೇ ಹೋದ ನವ್ಯದ ರೂಪಕಗಳ ಕಥೆಯಂತಾದರೂ ಓದುವಾಗ ಬಹಳ ಮಜ ಕೊಟ್ಟ ಕಥೆ. ಯಾವತ್ತೂ ಹಾಡುತ್ತಿದ್ದ ಹಾಡು ಕಥೆ ಮಾತ್ರ ಬಹಳ ಇಷ್ಟವಾಯಿತು. ಅದರಲ್ಲೂ ಹೆಣ್ಣನ್ನು ಪ್ರೀತಿಸುವವರೆಲ್ಲ ಮೊದಲು ಕಾಯುವುದನ್ನು ಕಲಿಯಬೇಕು ಎನ್ನುವ ,ಓದಿದೊಡನೇ ಮೈಯೆಲ್ಲ ಝಗಮಗ ಅನಿಸಿದ ಸಾಲು ಅದು ಹುಟ್ಟಿಸಿದ ಭಾವಗಳು ಎಲ್ಲ… ದೀಪಾವಳಿ ಕಥೆ ಅಲನಹಳ್ಳಿ ಕೃಷ್ಣರ ಶೈಲಿಯ ನೆನಪಿಸಿತು. ಕನ್ನಡಿ ಹಿಂದಿನ ಹುಡುಗಿ ಹೇಗೆ ಅಲುಗಿಸುತ್ತದೆ ಎಂದರೆ ಏರು ಯೌವ್ವನದಲ್ಲಿ ಒಬ್ಬ ಭಾವುಕ ಮನಸಿನ ಹುಡುಗ ಬರೆಯಬಹುದಾದ ಅತ್ಯುತ್ತಮ ಕಥೆ ಇದು. ಅಲ್ಲಿ ಏನು ಬೇಕೋ ಎಷ್ಟು ಬೇಕೋ ಅಷ್ಟೇ ಸರಿಯಾಗಿ ಒಂದು ಪದ ಆಚೀಚೆ ಆಗದಂತಿದೆ. ಕತೆಗಾರನ ಕತೆ ಸ್ವಗತ ಅಷ್ಟೇ.
ಸಚಿನ್ ಬರೆದ ಕತೆಯೊಂದು ಶುರುವಾಗುವ ಮುನ್ನದ ಈ ಸಾಲುಗಳು ಇದೆಲ್ಲದರ ಅರ್ಥವನ್ನು ಹಿಡಿದಿಡುತ್ತದೆ.
' ಇನ್ನಷ್ಟು ಚೆನ್ನಾಗಿ ಬದುಕಬೇಕೆನ್ನುವ ಆಸೆ, ಸಾವಿನ ಭಯ,ನಡು ರಾತ್ರಿಯಲ್ಲಿ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸುವ ಒಂಟಿತನ, ಮಹಾನಗರ ಕೊಡುವ ಅನಾಥಪ್ರಜ್ಞೆ, ಕಾಡಿನ ಮೌನ, ಮಳೆಗಾಲದ ಸಂಜೆ, ಊರಿನ ಸೆಳೆತ, ನಿಸರ್ಗದ ನಿಗೂಢತೆ, ಮುಗಿಯಲೇಬಾರದು ಅನ್ನಿಸುವ ಅಪರಿಚಿತ ದಾರಿ, ಸಿಗಲೇಬಾರದು ಅನ್ನಿಸುವ ಪ್ರೀತಿ…'
ಮಾರಾಯ್ರೇ, ಇಡೀ ಕನ್ನಡದ ನವ ಪೀಳಿಗೆಯ ತೊಂಬತ್ತು ಶೇಕಡಾ ಕಥೆಗಾರರ ಪ್ರೇರಕ ಶಕ್ತಿ ಇಷ್ಟೇ(ಬರೀ ಕನ್ನಡದ್ದು ಮಾತ್ರ ಅಲ್ಲ ಅನ್ನುವ ಅನುಮಾನವಿದೆ)
ಸಚಿನ್ ಬಾಲ್ಯಕ್ಕೆ ತಿರುಗಿಕೊಂಡಾಗ ಚೇತೋಹಾರಿಯಾಗಿ ಬರೆಯುತ್ತಾರೆ.ಮಳೆ ಅವರ ಕಥೆಗಳಿಗೆ ಹಿನ್ನೆಲೆ ಸಂಗೀತ ಒದಗಿಸುತ್ತದೆ. ಕೆಲವು ಕಥೆಗಳು ಬರೆಯಬೇಕು ಅಂತ ಬರೆದ ಹಾಗಿದೆ. ಹೆಚ್ಚಿನ ಕಥೆಗಳು ಲಹರಿ ಹುಟ್ಟಿ ಗುನುಗಿದ ಹಾಡಾಗಿದೆ.
ಬಹಳ ಖುಷಿ ಕೊಟ್ಟ ,ಪ್ರೀತಿಯ ಕಥೆಗಳು. ನಿಮ್ಮ ಕಥೆಯ ಗುಬ್ಬಿಮರಿಗಳಿಗೆ ರೆಕ್ಕೆ ಮೂಡಿ ಅವು ಹಾರಲಿ ನವೀನ್. .ಧನ್ಯವಾದಗಳು.
ನಾನೊಬ್ಬ ಪುಸ್ತಕ ಪ್ರೇಮಿ ಗುಂಪಿನಲ್ಲಿ ಬಂದ ಒಂದು ವಿಮರ್ಶೆಯನ್ನು ಓದಿ, ಈ ಪುಸ್ತಕವನ್ನು ಕೊಂಡೆ. ಒಟ್ಟು 10 ಕಥೆಗಳಿವೆ. ಸರಳ, ಸುಂದರ ನಿರೂಪಣೆ ಇದೆ. ಮಲೆನಾಡಿನ ವಿವರಣೆ ಅದ್ಭುತವಾಗಿದೆ. ಕಥೆಗಳನ್ನು ಓದಿದಾಗ, ಮಲೆನಾಡನ್ನು ಅಲ್ಲೇ ನಿಂತು ನೋಡಿದ ಅನುಭವ ಆಗುತ್ತದೆ. ಕಥೆಗಳಲ್ಲಿ ತುಂಬಾ ಹೊಸತನ ಕಾಣಿಸುತ್ತದೆ. ಹಾಸ್ಯ, ದುಃಖ, ಶೋಕ, ಸಾವು, ಭಯ ಎಲ್ಲಾ ಬಗೆಯ ಭಾವನೆಗಳು ಕಥೆಯಲ್ಲಿ ಇವೆ.
A mixed bag of stories. Except two - athithi and yavattoo haadutthidda haadu, which stretch credulity, others were good. Setting in malnad comes naturally to the author