ಗುರುಗಳಾದ ಕೆ.ಎಸ್. ನಾರಾಯಣಾಚಾರ್ಯರು ಆಶೀರ್ವಾದರೂಪವಾಗಿ "ವಿಶ್ವರೂಪ- ಗೀತಾಸಾರ ಸಂಗ್ರಹ" ಎಂಬ ಈ ಪುಟ್ಟ ಪುಸ್ತಕವನ್ನು ನನಗೆ ನೀಡಿದರು. ಲೇಖಕಿ ಶ್ರೀಮತಿ ನಿರ್ಮಲಾ ಶರ್ಮಾ (ನಿರ್ಮಲಕ್ಕ) ನನಗೆ ಪರಿಚಯವಾಗಿದ್ದು ಆಚಾರ್ಯರ ಪ್ರವಚನಗಳಲ್ಲಿ. ಮೊದಲಿನಿಂದಲೂ ವಾಟ್ಸಪ್ಪ್ ಮೂಲಕ ಅವರು ತಮ್ಮ ಕವನಗಳನ್ನೂ, ಸಣ್ಣಕಥೆಗಳನ್ನೂ ಆಚಾರ್ಯರ ಶಿಷ್ಯರಾದ ನಮ್ಮೆಲ್ಲರಿಗೆ ಕಳುಹಿಸುತ್ತಿದ್ದರಿಂದ ನಿರ್ಮಲಕ್ಕರವರ ಬರವಣಿಗೆಯ ಶೈಲಿ ನನಗೆ ಚಿರಪರಿಚಿತ.
ಪುಸ್ತಕದ ಬಗೆಗೆ ಒಂದೆರಡು ಮಾತು: ೧೩೫ ಪುಟಗಳ ಈ ಪುಸ್ತಕ ೧೯ ಅಧ್ಯಾಯಗಳನ್ನು ಹೊಂದಿದೆ. ಗೀತೆಯ ಪ್ರತಿ ಅಧ್ಯಾಯಕ್ಕೆ ೩-೫ ಪುಟಗಳ ಸಾರಾಂಶವನ್ನು ಸರಳವಾದ ಭಾಷೆಯಲ್ಲಿ ಹೊರತಂದಿದ್ದಾರೆ. ಈ ವಾಕ್ಯಗಳು ಕೇವಲ ಅನುವಾದವೆಂದೆನಿಸದೆ ಲೇಖಕಿ ತಾವು ಸ್ವತಃ ಅನುಭವಿಸಿ ಬರೆದಂತಿದೆ. ಅಲ್ಲಲ್ಲಿ ಆಚಾರ್ಯರ ಮಾತುಗಳೂ ಪ್ರತಿಧ್ವನಿಸುತ್ತವೆ. ಯಾವುದಾದರೂ ಕ್ಲಿಷ್ಟಕರವಾದ ಸಂದರ್ಭ ಉಂಟಾಗಿ ಅದಕ್ಕೆ ಕೂಡಲೇ ಉತ್ತರ ಸಿಗದಿದ್ದಾಗ ಈ ಪುಸ್ತಕವನ್ನು ಒಂದು quick reference ಅನ್ನಾಗಿ ಬಳಸಬಹುದು. ಸಂಪಾದಕರಾದ ಎಂ. ಎ. ಸುಬ್ರಹ್ಮಣ್ಯರವರ ಹಿಂದಿನ ಪುಸ್ತಕಗಳಂತೆ ಈ ಪುಸ್ತಕದಲ್ಲಿಯೂ ಚಿತ್ರಗಳು ಸೊಗಸಾಗಿ ಮೂಡಿಬಂದಿವೆ.
ನಿರ್ಮಲಕ್ಕರವರು ತಮ್ಮ ಬರವಣಿಗೆಯನ್ನು ಹೀಗೆ ಮುಂದುವರಿಸುತ್ತಾ ಇನ್ನೂ ಹೆಚ್ಚು ಹೆಚ್ಚು ಕೃತಿಗಳನ್ನು ಹೊರತರಬೇಕೆಂದು ನಾನು ಆಶಿಸುತ್ತೇನೆ.