ನಾನು ಬೆಂಗಳೂರು ಸೇರುವ ಸಮಯದಲ್ಲಿ ಮೂಡಿಗೆರೆ ನಿದ್ರಾವಸ್ಥೆಯಲ್ಲಿತ್ತು. ಹ್ಯಾಂಡ್ ಪೋಸ್ಟ್ ಒಂದೂರು, ಮೂಡಿಗೆರೆ ಇನ್ನೊಂದೂರು. ಅಲ್ಲಿಂದ ಬಿಳಿಕೊಳದಲ್ಲಿರುವ ಆಸ್ಪತ್ರೆ ಮತ್ತೊಂದೂರು. ನೀರವತೆಯನ್ನೇ ಹೊದ್ದು ಮಲಗಿದ್ದ ಮೂಡಿಗೆರೆ, ಮಳೆಗಾಲದಲ್ಲಿ ಇನ್ನಿಲ್ಲದಂತೆ ತೋಯಿಸಿ, ಚಳಿಗಾಲದಲ್ಲಿ ಮೈ ಒಡೆಸಿ, ಬೇಸಿಗೆಯ ಧೂಳಿನಲ್ಲಿ ರೇಜಿಗೆ ಹುಟ್ಟಿಸಿ, ತನ್ನ ಪಾಡಿಗೆ ತಾನಿರುತ್ತಿತ್ತು.
ಯಾವ ದಿಕ್ಕಿನಿಂದ ಮೂಡಿಗೆರೆಗೆ ಪ್ರವೇಶ ಮಾಡಿದರೂ, ಯಾವುದಾದರೂ ಒಂದು ಗದ್ದೆ ಬಯಲನ್ನು ದಾಟಿಕೊಂಡೇ ಬರಬೇಕಿತ್ತು. ಅಕ್ಕ ಪಕ್ಕದಲ್ಲಿರುವ ಪೋಲಿಸ್ ಸ್ಟೇಷನ್ ಮತ್ತು ತಾಲ್ಲೂಕು ಕಛೇರಿಯಗಳಂತೂ ಯಾವಾಗಲೂ ಬಣಗುಟ್ಟುತ್ತಾ, ನಿದ್ರಾವಸ್ಥೆಯಲ್ಲಿದ್ದಂತೆ ಕಾಣುತ್ತಿದ್ದವು. ಶುಕ್ರವಾರ ಸಂತೆ ಮತ್ತು ಹಬ್ಬದ ದಿನಗಳನ್ನು ಹೊರತು ಪಡಿಸಿದರೆ, ಮೂಡಿಗೆರೆಯಲ್ಲಿ ವಿಶೇಷವನ್ನು ಹುಡುಕಬೇಕಿತ್ತು.
ಬೆಳಗಾದರೆ, ಮಧ್ಯಾಹ್ನವಾಗಲು ಕಾಯಬೇಕಿತ್ತು. ಅಲ್ಲೊಂದು, ಇಲ್ಲೊಂದು ಕಾರು, ಜೀಪು, ಬೈಕುಗಳು ಬುರು ಬುರು ಎಂದು ಹೋಗುತ್ತಿದ್ದವು. ಯಾವ ಅಂಗಡಿಯಲ್ಲಿ ಕೆಲಸ ಇರುತ್ತದೋ, ಆ ಅಂಗಡಿಯ ಮುಂದೆ ಗಕ್ಕನೆ ನಿಂತು ಬಿಡುತ್ತಿದ್ದವು. ಯಾವುದೋ ಊರಿನಿಂದ ಧರ್ಮಸ್ಥಳಕ್ಕೂ ಮತ್ತು ಧರ್ಮಸ್ಥಳದಿಂದ ಬೇರೆ ಊರಿಗೂ ಹೋಗುವ ಬಸ್ಸುಗಳು ಬಸ್ ಸ್ಟ್ಯಾಂಡಿನೊಳಗೆ ಬಂದು, ಹೋಗುವುದನ್ನು ಬಿಟ್ಟರೆ, ಹೆಚ್ಚು ಸದ್ದು ಮಾಡುತ್ತಿದ್ದದ್ದು ಟಿಲ್ಲರ್ ಗಳು ಮಾತ್ರ. ಅವೂ, ಆಗೊಮ್ಮೆ, ಈಗೊಮ್ಮೆ.
ಆಗ ತೇಜಸ್ವಿಇದ್ದರು, ಬಾಸೇಗೌಡರ ಆನೆ ಗೋಪಾಲ ಇತ್ತು. ಅತ್ಯುತ್ತಮ ವ್ಯಕ್ತಿತ್ವದ ಕಮ್ಯೂನಿಸ್ಟ್ ನಾಯಕ ಬಿ ಕೆ ಸುಂದರೇಶ್ ಇದ್ದರು, ಆದರೆ ನಕ್ಸಲ್ ಗಳು ಇರಲಿಲ್ಲ. ತೇಜಸ್ವಿಯವರು ಬರೆಯುತ್ತಿದ್ದರೂ, ಮೂಡಿಗೆರೆಯ ಜನಗಳಿಗೆ ಅವರ ಬರವಣಿಗೆಯ ಪರಿಚಯವಿರಲಿಲ್ಲ. ಅಥವಾ, ಓದುವುದನ್ನು ಹೆಚ್ಚಾಗಿ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನುಳಿದಂತೆ ಸ್ಥಳೀಯವಾಗಿ ಹಳೆ ಕೋಟೆ ರಮೇಶ್ ಸಾಹಿತ್ಯದ ಬಗ್ಗೆ ಸ್ವಲ್ಪ ತಲೆ ಕೆಡಿಸಿಕೊಂಡಿದ್ದರು ಅಂತ ಕಾಣುತ್ತೆ. ಬಿಟ್ಟರೆ ಕೆಂಜಿಗೆ ಪ್ರದೀಪ್ ರವರು ಸಹ 1989ರಲ್ಲಿ ಬರೆಯಲು ಶುರು ಮಾಡಿದ್ದರೋ, ಇಲ್ಲವೋ ನನಗೆ ಗೊತ್ತಿಲ್ಲ.
ವರ್ಷಗಳು ಕಳೆಯುತ್ತಾ, ನಾನು ಮೂಡಿಗೆರೆಗೆ ಹೋದಾಗೆಲ್ಲ ಒಂದಲ್ಲೊಂದು ಬದಲಾವಣೆ ಕಂಡೆ. ಮೊದಲು ಜನಪ್ರತಿನಿಧಿಗಳು ಎಲ್ಲರಂತೆ ಇನ್ನೊಬ್ಬ ಪ್ರಜೆಯಾಗಿದ್ದರೆ, ಈಗ ಅವರ ಮನೆ, ಸುತ್ತ, ಮುತ್ತ ಜನಗಳ ಹಿಂಡು ಇರುತ್ತುದೆ. ಪೋಲಿಸ್ ಸ್ಟೇಷನ್, ತಾಲ್ಲೂಕು ಕಛೇರಿ ಯಾವಾಗಲೂ ಗುಜುಗುಡುತ್ತಿರುತ್ತದೆ. ಸುಂದರೇಶ್, ತೇಜಸ್ವಿ, ಬಾಸೇಗೌಡರ ಆನೆ ಎಲ್ಲ ನೆನಪು ಮಾತ್ರ. ಕಾರು, ಜೀಪುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವಂತಿಲ್ಲ. ಟಾರ್ ರಸ್ತೆಯ ಮೇಲೆ ಕಾರಿನ ಚಕ್ರದ ಯಾವುದೇ ಭಾಗ ಇದ್ದರೂ, ಪೋಲಿಸ್ ಬಂದು ಫೈನ್ ಹಾಕುತ್ತಾರೆ. ನಕ್ಸಲ್ ಗಳು ಎಲ್ಲೆಲ್ಲಿ ಓಡಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಆಗಾಗ ಗುಸುಗುಸು ಮಾತುಗಳು ಕೇಳಿ ಬರುತ್ತಿರುತ್ತವೆ.
ಮುಂಚೆಲ್ಲ ಮಲೆನಾಡು ಮನೆಗಳ ಲೈನ್ ಮನೆಗಳಲ್ಲಿ ಸ್ಥಳೀಯ ಜನರೇ ಇರುತ್ತಿದ್ದರು. ಈಗೆಲ್ಲ ಸ್ಥಳೀಯರಿಗೆಂದು ಕಾಲೋನಿಗಳನ್ನು ಮಾಡಿ, ಅಲ್ಲಿ ಸೈಟುಗಳನ್ನು ಹಂಚಿದ ಮೇಲೆ, ಅಸ್ಸಾಮಿನವರು ಮತ್ತು ಬಯಲುಸೀಮೆಯವರು ಮಾತ್ರ ಇರುತ್ತಾರೆ. ಹೋಂ ಸ್ಟೇಗಳು ಬಂದ ಮೇಲೆ, ಆಳುಗಳು ಹೋಂ ಸ್ಟೇ ಕೆಲಸಕ್ಕೆ ಬೇಕಾದರೆ ಬರುತ್ತಾರೆ ಹೊರತು, ತೋಟದ ಕೆಲಸಕ್ಕಲ್ಲ. ಗದ್ದೆಗಳಂತೂ ಹುಡುಕಬೇಕು.
ಈ ನೆಡುವೆ, ಮಲೆನಾಡಿನ ಜೀವನದ ಅಂತರಾತ್ಮ ಹೇಗೆ ಬದಲಾಗಿದೆ ಎನ್ನುವುದು ನನಗೆ ಹೆಚ್ಚಾಗಿ ಅರ್ಥವಾಗಿರಲಿಲ್ಲ. ನಕ್ಸಲರು ಇದ್ದಾರೆ ಎಂದರೂ, ಅವರ ಜೊತೆ `ಸಹಬಾಳ್ವೆ’ ಹೇಗೆ, ಸಾಮಾನ್ಯ ಜನಗಳ ಮನಸ್ಥಿತಿ ಮತ್ತು ಸಾಮಾಜಿಕ ಚಿಂತನೆಗಳ ಮೇಲೆ ಬೀರಿರುವ ಪರಿಣಾಮದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಅ ಸಮಯದಲ್ಲಿ ನನ್ನ ಕೈಗೆ ಸಿಕ್ಕಿದ್ದು ಪೂರ್ಣೇಶ್ ಮತ್ತಾವರ ಬರೆದ `ದೇವರಿದ್ದಾನೆ ಎಚ್ಚರಿಕೆ’. ಮಲೆನಾಡಿನ ಪರಿಸರದಲ್ಲಿನ ಮೌಢ್ಯ, ಭ್ರಷ್ಟತೆಯನ್ನು ನಿವಿರಾದ ಭಾಷೆಯಲ್ಲಿ ಹೇಳುತ್ತಾ, ಅಲ್ಲಿನ ವರ್ಗ ಸಂಘರ್ಷ ಮತ್ತು ಸೈದ್ದಾಂತಿಕ ಹೆಸರಿನಲ್ಲಿ ಅವ್ಯಾಹತವಾಗಿ ನೆಡೆದು ಬಂದಿರುವ ಶೋಷಣೆಯನ್ನು ನಿರಾಯಾಸವಾಗಿ ಹೇಳುವ ಪರಿ ಆಶ್ಚರ್ಯವಾಯಿತು.
ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಪೂರ್ಣೇಶ್, ನನಗೆ ಫೇಸ್ಬುಕ್ ಗೆಳೆಯರು. ಫೇಸ್ಬುಕ್ಕಿನಲ್ಲಿ ಬರುವ ಕೆಲವೇ ಕೆಲವು ಸಂಕೋಚ ಸ್ವಭಾವದ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಹಕ್ಕಿಗಳ ಫೋಟೋಗಳನ್ನು ಅದ್ಭುತವಾಗಿ ತೆಗೆಯುವ ಪೂರ್ಣೇಶ್, ಹಕ್ಕಿಗಳಷ್ಟೇ ನಾಚಿಗೆ ಸ್ವಭಾವದವರು ಎಂದು ನನಗೆ ಅನಿಸಿದೆ.
ಹದಿಮೂರು ಸಣ್ಣ ಕಥೆಗಳಿರುವ ಈ ಪುಸ್ತಕದ ಬಗ್ಗೆ ನನಗಿರುವ ಆಕ್ಷೇಪಗಳನ್ನು ಮೊದಲು ಹೇಳಿಬಿಡುತ್ತೇನೆ. ಮೊದಲನೆಯದಾಗಿ, ಮೂಡಿಗೆರೆ, ಪಡುಗೆರೆಯಾಗಿ ಬದಲಾಗುವುದು ನನಗಂತೂ ಇಷ್ಟವಿಲ್ಲ . ಕ್ರಾಂತಿ ಮತ್ತು ವರ್ಗ ಸಂಘರ್ಷಗಳ ಬಗ್ಗೆ ಬರೆಯುವಾಗ, ಕಪ್ಪು ಬಾವುಟಎರಡನೆಯದಾಗಿ, ಕ್ರಾಂತಿಯ ಕನವರಿಕೆ ಮತ್ತು ಕನಸಿನಲ್ಲೊಂದು ಸಂದರ್ಶನ, ಈ ಪುಸ್ತಕದ ಕಪ್ಪು ಚುಕ್ಕಿಗಳು.
ಸ್ವಾಮೀಜಿಯು ಕ್ಯಾನ್ವಾಸಿಗೆ ಬಂದರು ಬಹಳ ಮುದ್ದಾದ (Cute) ಕಥೆ. ಆದರೆ, ಆ ಪಾತ್ರಗಳ ಹಿನ್ನೆಲೆ ಮತ್ತು ಆ ಪಾತ್ರಧಾರಿಗಳನ್ನು ಚಿಕ್ಕಮಗಳೂರಿನ ಹೊರಗಿನವರಿಗೆ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ, ಆ ಕಥೆ ಜಿಲ್ಲೆಗೆ ಸೀಮಿತವಾಗಿ ನಿಲ್ಲುತ್ತದೆ ಎಂದು ನನಗೆ ಅನ್ನಿಸಿತು.
ಆದರೆ, ನನಗೆ ಪುಸ್ತಕದ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದ್ದು ಮೊದಲನೇ ಕಥೆಯಾದ `ದೇವರಿದ್ದಾನೆ ಎಚ್ಚರಿಕೆ’. ಜಾತೀಯತೆಯ ಕಂದರ ಕಳೆದ ಒಂದೆರೆಡು ದಶಕಗಳಲ್ಲಿ ಹೆಚ್ಚಾಗಿದೆ ಎಂದು ನನಗೂ ತಿಳಿದಿದೆ. ಆದರೆ, ಪ್ರತಿ ಜಾತಿ ಎನ್ನುವುದು ಅದರಿಂದ ದೊರಕುವ ಲಾಭ, ನಷ್ಟದ ಲೆಖ್ಖಾಚಾರದಲ್ಲಿ ಕೇಂದ್ರೀಕೃತವಾಗಿದೆಯೇ ಹೊರತು, ಯಾರೂ ಕಟ್ಟುಪಾಡುಗಳನ್ನು ಲೆಕ್ಕಿಸುವ ಮನಸ್ಥಿತಿಯಲ್ಲಿಲ್ಲ. ಈ ಕಥೆಯು ನನಗೆ ಮುಲ್ಕ್ ರಾಜ್ ಆನಂದರ `Untouchable’ ಕಾದಂಬರಿಯ ಮೂಸೆಯಿಂದ ಹೊರಹೊಮ್ಮಿದಂತೆ ಅನ್ನಿಸಿತು. ಆ ಮೂಸೆಯಿಂದ ಸಮಾಜ ಹೊರಬಂದು ಬಹಳ ಸಮಯವಾಗಿದೆ. ಅಲ್ಲಿಂದೀಚೆ, ಶೂದ್ರರು ಹೆಚ್ಚು ಬ್ರಾಹ್ಮಣಿಕೆಯಲ್ಲೂ, ಬ್ರಾಹ್ಮಣರು ಕೆಲವು ಮಜಲುಗಳನ್ನು ಕೆಳಗಿಳಿದು ತಮ್ಮ ದಾರಿಯನ್ನು ನೋಡಿಕೊಳ್ಳುವತ್ತ ಸಮಾಜ ನೆಡೆದಿದೆ. ಅದರ ಮಧ್ಯವೂ, ಈಗಲೂ ಇಷ್ಟೊಂದು ಕಟ್ಟು ಪಾಡುಗಳನ್ನು ಮೂಡಿಗೆರೆ ಅಥವಾ ಚಿಕ್ಕಮಗಳೂರಿನ ಯಾವುದಾದರೂ ಭಾಗದಲ್ಲಿ ಉಳಿಸಿಕೊಂಡಿದ್ದರೆ, ಅದು ನನಗೆ ಆಶ್ಚರ್ಯವಾಗುತ್ತದೆ.
ಆದರೆ, ಎರಡನೇ ಕಥೆಯಾದ ಬೈನು ಕಳ್ಳು ಮಹಿಮೆ ಓದುವ ಹೊತ್ತಿಗೆ ಪುಸ್ತಕ ನಿಧಾನವಾಗಿ ನನ್ನನ್ನು ಆವರಿಸಿಕೊಳ್ಳಲು ಆರಂಭಿಸಿತು. ಮುಂದೆ, ಮರಿಲೋಕಾಯುಕ್ತರು, ಮೂರ್ತಪ್ಪ ಮೇಷ್ಟ್ರು, ಸಣ್ಣನಿಂಗುವಿನ ಹೊಸ ವರುಷದ ಪ್ರತಿಜ್ಞೆ ಓದಿದಾಗ, ಪೂರ್ಣೇಶ್ ಗೆ ಇರುವ ನವಿರಾದ ಹಾಸ್ಯಪ್ರಜ್ಞೆ ಇಷ್ಟವಾಯಿತು.
ಮಲೆನಾಡಿನ ಇಂದಿನ ಸಾಮಾಜಿಕ ಪರಿಸ್ಥಿತಿಯ ಆತ್ಮವನ್ನು ಸೂಕ್ಷ್ಮವಾಗಿ ಬಿಡಿಸಿದ `ನಿರೀಕ್ಷೆ’ ಮತ್ತು `ಅವ್ರು ಬಂದಿದ್ದರು’ ಅದ್ಭುತವಾದ ಕಥೆಗಳು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಅದೇ ನಿಟ್ಟಿನಲ್ಲಿ ಮಲೆನಾಡಿನಲ್ಲಿ ಬದುಕುವವರ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸುವುದರಲ್ಲಿ `ಪಡೆದ ಅಡ್ವಾನ್ಸ್’ ಮತ್ತು `ಅರಣ್ಯ ರಕ್ಷಕರು’ ಯಶಸ್ವಿಯಾಗಿದೆ. ರಾಜಕೀಯವನ್ನು ತಲೆಗೇ ಹಾಕಿಕೊಳ್ಳದೇ ಬದುಕುತ್ತಿದ್ದ ಮಲೆನಾಡಿನಲ್ಲಿ, ರಾಜಕೀಯ ಎಲ್ಲಾ ರಂಗಗಳಲ್ಲಿ ಹೊಕ್ಕಿರುವುದನ್ನು `ತಾವರೆಕೆರೆ’ ಕಥೆ ಯಶಸ್ವಿಯಾಗಿ ಚಿತ್ರಿಸಿದೆ.
ಈ ಕಥೆಗಳನ್ನು ಓದುತ್ತಿದ್ದಾಗ, ಪೂರ್ಣೇಶ್ ತಮ್ಮ ಮನಸ್ಸಿನಲ್ಲಿದ್ದ ಎಷ್ಟೋ ವಿಷಯಗಳನ್ನು ನೇರವಾಗಿ ಹೊರ ಹಾಕಿಲ್ಲ ಎನ್ನುವುದು ನನ್ನ ಭಾವನೆ. ಅವರು ಕೆಲಸ ಮಾಡುತ್ತಿರುವ ಶಿಕ್ಷಣ ಕ್ಷೇತ್ರವೂ ಬಹಳಷ್ಟು ರಾಜಕೀಯ ಹಸ್ತಕ್ಷೇಪಕ್ಕೆ ಒಳಗಾಗಿರುವುದು ಒಂದು ಕಾರಣ ಎಂದು ನನಗನ್ನಿಸುತ್ತದೆ. ಈ ಪುಸ್ತಕದ ಮೂರ್ನಾಲ್ಕು ಕಥೆಗಳಾದರೂ, ಮೂಡಿಗೆರೆ ಸೀಮೆಯಿಂದ ಇತ್ತೀಚೆಗೆ ಹೊರಬಂದ ಕಥೆಗಳಲ್ಲಿ, ಅತ್ಯುತ್ತಮ ಎನ್ನುವ ಸಾಲಿಗೆ ನಿಲ್ಲುತ್ತಿದ್ದವು.
ಈ ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ, ಬಂಧನ ಸಿನೆಮಾದ ಹಾಡಿನ ಸಾಲೊಂದು ನೆನಪಾಯಿತು: `ತುಟಿಮೇಲೆ ಬಂದಂಥ ಮಾತೊಂದೆ ಒಂದು, ಎದೆಯಲ್ಲಿ ಉಳಿದದ್ದು….?’
The writing is exemplary and realistic with attention to detail. The characters are unassumingly funny and humane to the core. I would recommend this book to you. If you want to get a glimpse of malenadu region and its social issues through interesting short stories, don’t miss out on this book. As a reader, you feel like a fly traversing through malenadu. You can finish reading this book in one sitting. Hope to read more of Mr. Poornesh Mathavars’s writing in the coming days.