ಬದುಕು ತನ್ನಿಚ್ಛೆಯಂತೆ ನಡೆಯದಾಗ, ತಾನೇನು ಹರಸಾಹಸ ಪಟ್ಟರೂ ಅದರ ಪಥ ಬದಲಾಗದೆ ನಿಶ್ಚಿತ ವಿಧಿಯತ್ತ ಸಾಗಿದಾಗ ಮನುಷ್ಯ ಅಸಹಾಯಕನಾಗುತ್ತಾನೆ.ಅವನೊಳಗೆ ಆಗ ಮುಂದಾಗುವುದನ್ನು ತಪ್ಪಿಸಲಾಗದ ವಿಷಾದ ಅಷ್ಟೇ ಸ್ಥಾಯಿಭಾವ.
ವಿವೇಕಾನಂದರ ಕಾಮತರ ಈ ಕಾದಂಬರಿ ಬದುಕಿನಲ್ಲಿ ನೋವುಂಡವನವದ್ದು. ಪ್ರಕೃತಿಯ ಮಡಿಲಲ್ಲಿ ಅದನ್ನು ಮರೆಯಲು ಯತ್ನಿಸಿದವನದ್ದು.
ಹೊರಗಿನ ಉರಿ ಗಿಂತ ಒಳಗಿನ ಉರಿ ನಮ್ಮನ್ನೇ ದಹಿಸುತ್ತದೆ ಎಂಬ ಮಾತು ಕಾದಂಬರಿಯಲ್ಲಿ ಬರುತ್ತದೆ. ಅಲ್ಲವೇ? ಮನಸಿನ ನೋವು ಮುಚ್ಚಿಟ್ಟುಕೊಂಡು ಕೊರಗಿ ಕೊರಗಿ ನಮ್ಮ ಆರೋಗ್ಯವೇ ಹದಗೆಡುವುದು.
ತನ್ನವರ ಕಳಕೊಂಡು ನೆಲೆಯ ಹಂಗಿಲ್ಲದೆ ಜೀವನದ ಕುರಿತಾಗಿ ನಿರೀಕ್ಷೆಗಳಿಲ್ಲದೆ ಹೊರಟವನ ಬದುಕು ತನ್ನ ತಿರುಗಣಿಯೊಳಗೆ ಮತ್ತೆ ಎಳಕೊಳ್ಳುತ್ತದೆ.. ಮತ್ತೇನಾಗುತ್ತದೆ ಅದೇ ಕಥೆ.
ಇದು ವಿವೇಕಾನಂದ ಕಾಮತ್ ರ ಈ ಹಿಂದಿನ ಎಲ್ಲಾ ಕಾದಂಬರಿಗಳಿಗಿಂತ ಭಿನ್ನ ಸ್ವರೂಪದ್ದು. ಬದುಕಿನ ಅನುಭವದ ತೂಕ ಉಳ್ಳದ್ದು. ಹಾಗಾಗಿಯೇ ಕಾದಂಬರಿ ಮುಗಿಸಿದಾಗ ಆವರಿಸಿಕೊಳ್ಳುವ ವಿಷಾದ ಭಾವ ನಮ್ಮದೂ ಆಗುತ್ತದೆ.
ವಿವೇಕಾನಂದ ಕಾಮತ್ ರವರ ಕಾದಂಬರಿ 'ಅಜ್ಞಾತ' ಕಾಯಕನಾಥನ ಭಾವನಾತ್ಮಕ ಪಯಣವನ್ನು ಅನುಸರಿಸುತ್ತದೆ. ತನ್ನ ಪತ್ನಿ ಮತ್ತು ಮಗನನ್ನು ಕಳೆದುಕೊಂಡಾಗ, ಅವನ ಜಗತ್ತು ಕುಸಿದು ಖಿನ್ನತೆಗೆ ಒಳಗಾಗುತ್ತಾನೆ. ಟಿಕೇಟ್ ಇಲ್ಲದೆ ರೈಲಿನ ಪಯಣ ಹಿಡಿದಾಗ ಹೊರಹಾಕಲ್ಪಟ್ಟ ಅವನನ್ನು, ರೈಲ್ವೆ ಸ್ಟೇಷನ್ನ ಹೊರಗಿದ್ದ ಕಾಡು ತನ್ನರಿವಿಲ್ಲದೆ ತನ್ನನ್ನು ಕರೆಯುತ್ತದೆ. ಅರಣ್ಯದ ಶಾಂತ ವಾತಾವರಣದ ಆಶ್ರಯದಲ್ಲಿ, ಅವನ ಕಳವಳಗೊಂಡ ಮನಸ್ಸು ನೆಮ್ಮದಿಯನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತದೆ.
ಕಥೆಯು ಕಾಯಕನಾಥನ ಏಕಾಂತದ ಬಯಕೆಯನ್ನು ಪ್ರಶ್ನಿಸುವ ಪಾತ್ರಗಳ ಗುಂಪನ್ನು ನಮಗೆ ಪರಿಚಯಿಸುತ್ತದೆ. ಅವನು ಅರಣ್ಯದ ಅಂಚಿನಲ್ಲಿ ನೆಲೆಸಿದಂತೆ, ಇತರರೂ ತಮ್ಮದೇ ಆದ ಆಶ್ರಯವನ್ನು ಹುಡುಕುತ್ತಾ ಬರುತ್ತಾರೆ, ಇದು ಆರಂಭದಲ್ಲಿ ಅವನಿಗೆ ನಿರಾಶೆಯನ್ನುಂಟುಮಾಡುತ್ತದೆ. ಆದರೂ ಈ ಸಂಪರ್ಕಗಳ ಮೂಲಕ ಅವನಲ್ಲಿ ಅನಿರೀಕ್ಷಿತವಾಗಿ ಕುಟುಂಬದ ಭಾವನೆ ಮೂಡಿ ಬರುತ್ತದೆ.
ಕಾಯಕನಾಥ ಮತ್ತು ಜಂಪಯ್ಯ ಎರಡು ಮುಖ್ಯ ಪಾತ್ರಗಳು. ಆದರೂ ಇಬ್ಬರ ವಿಚಾರಗಳು ತದ್ವಿರುದ್ಧ. ಕುಟುಂಬವನ್ನು ಕಳೆದುಕೊಂಡು ಏಕಾಂತವನ್ನು ಹುಡುಕುವವನು ಒಬ್ಬನಾದರೆ ಇನ್ನೊಬ್ಬ ಜೀವನ ಪೂರ್ತಿ ಅನ್ಯರ ಸೇವೆ ಮಾಡಿ ಈಗ ಸ್ವಂತ ಸೂರಿಗೆ ಹಂಬಲಿಸುವವನು.
ಕಾಯಕನಾಥನ ಸಂಭಾಷಣೆಯಲ್ಲಿರುವ ತಾತ್ವಿಕ ಚಿಂತನೆಗಳು ಅನೇಕ ಬಾರಿ ಪುನರಾವರ್ತಿತವಾಗಿ ಭಾಸವಾಗುತ್ತವೆ. Cliche ಡೈಲಾಗ್ಗಳು ಯುವ ಓದುಗರಿಗೆ ಸ್ವಲ್ಪ ಕಿರಿಕಿರಿ ಉಂಟು ಮಾಡಬಹುದು.
ಒನ್ ಟೈಮ್ ರೀಡ್. ಯುವ ಓದುಗರಿಗೆ ಮೆಚ್ಚಿಸುವಂತ ಕತೆ ಅನ್ನೋದು ಮಾತ್ರ ಚರ್ಚೆ ಮಾಡುವಂತ ವಿಷಯ.
ಪುಸ್ತಕ: ಅಜ್ಞಾತ ಲೇಖಕರು: ವಿವೇಕಾನಂದ ಕಾಮತ್ ಮೊದಲ ಮುದ್ರಣ:
ವಿವೇಕಾನಂದರ ಇತ್ತೀಚಿಗೆ ಬಿಡುಗಡೆಯಾದ ಪುಸ್ತಕ. ಅವರ ಹಿಂದಿನ ಪುಸ್ತಕಗಳಿಗಿಂತ ಈ ಪುಸ್ತಕ ವಿಭಿನ್ನ. ಅವರ ಹಿಂದಿನ ಪುಸ್ತಕಗಳನ್ನು ಓದಿ ಈ ಪುಸ್ತಕ ಓದಿದಾಗ ಇವರೇ ಬರೆದಿರಬಹುದೇ ಎಂಬ ಕುತೂಹಲ ಮೂಡುತ್ತದೆ. ಹಿಂದಿನ ಪುಸ್ತಕಗಳಲ್ಲಿ ಅವರು ಸಾಮಾಜಿಕತೆಗೆ ಹೆಚ್ಚು ಒತ್ತು ನೀಡಿದ್ದಾರೆ, ಇದರಲ್ಲಿಯೂ ಇದೆ ಆದರೆ ತತ್ವ ಮತ್ತು ಆಧ್ಯಾತ್ಮಿಕ ಅಂಶಗಳು ಅದರ ಜೊತೆಗೆ ಮಿಶ್ರಿತವಾಗಿವೆ. ಹೊಸ ಪ್ರಯತ್ನಕ್ಕೆ ಕೈಹಾಕಿ ಲೇಖಕರು ತಮ್ಮ ಬರವಣಿಗೆಯಲ್ಲಿ ಇನ್ನೊಂದು ಹಂತವನ್ನು ದಾಟಿದ್ದಾರೆ. ಪುಸ್ತಕದ ಕಥಾನಾಯಕ ಕಾಯಕನಾಥ ತನ್ನೂರು ಬಂಗಾಳವನ್ನು ಬಿಟ್ಟು ಜೀವನವನ್ನು ನಡೆಸುವ ಮಾರ್ಗವಾಗಿ ಕರ್ನಾಟಕವನ್ನು ನೆಲೆಯನ್ನಾಗಿ ಆಯ್ಕೆ ಮಾಡಿ ಕೂಲಿ ಕೆಲಸ ಮಾಡಿ ಸುಖದಿಂದಿರುತ್ತಾನೆ. ಮಾಡುವುದು ಗಟ್ಟಿ ಕೆಲಸವಾದರೂ ಕಾಯಕನಾಥನದು ಬಹಳ ಮೃದು ಸ್ವಭಾವ. ಮಡದಿ ಮತ್ತು ಮಗನೊಂದಿಗೆ ಸುಖವಾಗಿರುವಾಗ ಹಠಾತ್ತಾಗಿ ಅವರನ್ನು ಕಳೆದುಕೊಳ್ಳುತ್ತಾನೆ. ದೊಡ್ಡ ಕುಟುಂಬವಿದ್ದರೂ ಅವರವರು ತಮ್ಮ ಜೀವನದಲ್ಲಿ ತೊಡಗಿಸಿಕೊಂಡಿರುತ್ತಾರೆ ಅದಕ್ಕಾಗಿ ಕಾಯಕನಾಥನು ತನ್ನ ಮಡದಿ ಮತ್ತು ಮಗನ ಮೇಲೆ ಜೀವವನ್ನೇ ಇಟ್ಟುಕೊಂಡಿರುತ್ತಾನೆ. ಇನ್ನು ಅವರು ಅವನಿಗೆ ಮತ್ತೆ ಸಿಗದ ಹಾಗೆ ಕೈಬಿಟ್ಟು ಹೋದಾಗ ಅವನಿಗೆ ಆಗುವ ದುಃಖ ನಮಗೆ ಊಹಿಸುವುದು ಕಷ್ಟ. ಜೀವನದಲ್ಲಿ ವೈರಾಗ್ಯವನ್ನು ಹೊಂದಿ ಕಾಡು ಸೇರುತ್ತಾನೆ. ಆಗ ಅವನ ಮನದಲ್ಲಿ ಬಂದು ಹೋಗುವ ಭಾವಗಳು ಲೇಖಕರು ಚೆನ್ನಾಗಿ ಬರೆದಿದ್ದಾರೆ. ಹೀಗೆ ಕಾಡಿನಲ್ಲಿರುವಾಗ ಅವನಿಗೆ ಅಲ್ಲೊಬ್ಬ ಸರ್ಕಾರಿ ಅಧಿಕಾರಿ ಸಿಕ್ಕು ಅವನಿಗೆ ಜಂಪಣ್ಣನ ಪರಿಚಯ ಮಾಡಿಕೊಡುತ್ತಾರೆ. ಜಂಪಣ್ಣ ಅಲ್ಲೇ ಸಮೀಪದ ಹಳ್ಳಿಯ ಮನುಷ್ಯ. ಜಂಪಣ್ಣ ಹೇಗಾದರೂ ಕಾಯಕನಾಥನನ್ನು ತನ್ನ ಜಾಗಕ್ಕೆ ಕರೆದುಕೊಂಡು ಹೋಗಬೇಕೆಂಬ ಆಸೆಯಿಂದ ಆ ಅಧಿಕಾರಿ ಇಲ್ಲಿಗೆ ಕೆರೆದುಕೊಂಡು ಬಂದಿರುತ್ತಾರೆ. ಆದರೆ ಪರಿಸ್ಥಿತಿ ಬದಲಾಗುತ್ತದೆ! ಅವನೇ ಕಾಡಿನಲ್ಲಿ ಠಿಕಾಣಿ ಹೂಡುವ ಉಪಾಯ ಮಾಡುತ್ತಾನೆ. ಜಂಪಣ್ಣನು ಅನಾಥ. ಊರಿನಲ್ಲಿ ಸಹಾಯಕ್ಕಾಗಿ ಸದಾ ನಿಲ್ಲುವ ಸಹೃದಯಿ. ಅದಕ್ಕಾಗಿ ಊರಿಗೆ ಅವನು ಬೇಕಾದವನು. ಆದರೂ ಅವನು ಈ ಕಾಡಿನಲ್ಲಿ ಕಾಯಕನಾಥನೊಂದಿಗೆ ವಾಸ ಮಾಡಲು ಮುಂದಾಗುತ್ತಾನೆ. ವಾಸ್ತವದಲ್ಲಿ ಆ ಜಾಗ ಕಾಡಿಗೆ ಸೇರದೆ ಒಬ್ಬ ಶ್ರೀಮಂತನ ಜಾಗವಾಗಿರುತ್ತದೆ. ಇವರಿಬ್ಬರೂ ಆ ಜಾಗವನ್ನು ಅತಿಕ್ರಮಣ ಮಾಡಿ ವಾಸಿಸಲು ಶುರುಮಾಡುತ್ತಾರೆ. ಜಂಪಣ್ಣ ಅಲ್ಲಿ ತನ್ನ ಸ್ನೇಹಿತ ಶಿವಣ್ಣನ ಸಹಾಯದಿಂದ ಕೃಷಿ ಮಾಡಲು ಮುಂದಾಗುತ್ತಾನೆ. ಅಲ್ಲೇ ಒಂದು ಮನೆಯನ್ನೂ ಕಟ್ಟುತ್ತಾರೆ. ಇವೆಲ್ಲ ಜಂಪಣ್ಣನ ಉತ್ಸಾಹದ ಪ್ರತಿಫಲ. ಕಾಯಕನಿಗೆ ಅದರಲ್ಲಿ ಎಳ್ಳಷ್ಟೂ ಆಸಕ್ತಿಯಿಲ್ಲ. ಸದಾ ವೇದಾಂತ ಮತ್ತು ವೈರಾಗ್ಯದಲ್ಲೇ ಅವನ ಮನಸ್ಸು. ಆದರೂ ಜಂಪಣ್ಣ ನಿಧಾನವಾಗಿ ಅವನನ್ನು ಕಾರ್ಯಮುಖವಾಗಿ ಮಾಡುತ್ತಾನೆ. ಸಮಯ ಕಳೆದಂತೆ ಕಾಯಕನಾಥನು ಅಲ್ಲಿಯ ಪರಿಸರ ಮತ್ತು ತಾವು ಬೆಳೆಸಿದ ಗಿಡಗಳ ನಡುವೆ ಸಮಯ ಕಳೆಯುತ್ತಾನೆ. ವಿಚಾರವಶನಾಗುತ್ತಿದ್ದ ಅವನು ಕ್ರಮೇಣ ಬಹಿರ್ಮುಖಿಯಾಗುತ್ತಾನೆ. ಅಲ್ಲಿ ರತ್ನಾಳ ಮಗಳು ಕಮಲಿ ಗಂಡನ ಜೊತೆಗೆ ಜಗಳವಾಡಿ ಮಗನ ಸಮೇತ ಇಲ್ಲೇ ಕಾಡನ್ನು ಸೇರುತ್ತಾಳೆ. ಅವಳ ಮಗ ಪಾಂಡುರಂಗ ಕಾಯಕನಾಥನಿಗೆ ಬಹಳ ಸನೀಹವಾಗುತ್ತಾನೆ. ಹುಡುಗನನ್ನು ಕಂಡಾಗಲೊಮ್ಮೆ ಕಾಯಕನಿಗೆ ತಾನು ಕಳೆದುಕೊಂಡ ಮಗನ ನೆನಪಾಗುತ್ತಿರುತ್ತದೆ. ಹಾಗೆಯೇ ಕಮಲಿಯಲ್ಲಿ ತನ್ನ ಕಳೆದುಹೋದ ಪತ್ನಿ. ತಾವಿಬ್ಬರೂ ಒಂದೇ ದೋಣಿಯ ಪಯಣಿಗರು ಎಂದು ತಿಳಿದು ಮದುವೆಯಾಗುತ್ತಾರೆ. ಹೀಗೆ ಕಾಡಿನಲ್ಲಿ ಎಲ್ಲರೂ ಆರಾಮಾಗಿರುವಾಗ ಸ್ಥಳಕ್ಕೆ ಆ ಜಾಗದ ಮಾಲೀಕನ ಆಗಮನವಾಗುತ್ತದೆ. ಅದು ಅಲ್ಲಿಯ ಜನರಿಗೆ ಸಿಡಿಲುಬಡಿದಂತಾಗಿ ಮುಂದೆ ತಮ್ಮ ಬದುಕೇನು ಎಂಬುದೇ ದೊಡ್ಡ ಸವಾಲಾಗಿ ಉಳಿಯುತ್ತದೆ. ಇರುವಿಕೆಗಾಗಿ ಜಾಗದ ಶೋಧಕ್ಕೆ ಹೊರಟು ಹಿಂದಿರುವಾಗ ಕಾಡಿನ ಆ ಭಾಗವೆಲ್ಲವೂ ನಿರಂತರ ಹೊಡೆದ ಮಳೆಯಿಂದ ನೀರುಪಾಲಾಗಿರುತ್ತದೆ. ತನ್ನ ಮಡದಿ ಮಗುವನ್ನು ಹುಡುಕಲು ಕಾಯಕನಾಥ ಹೊರಟು ಬಹಳ ಹುಡುಕಿದಾಗ ಅವನಿಗೆ ಸಿಕ್ಕಿದ್ದು ಅವರ ಶವ! ಆ ಸಮಯದಲ್ಲಿ ಅವನ ಮನಸಿಗೆ ಬರುವ ನೋವು ನಮಗೆ ಊಹಿಸಲು ನಿಲುಕದಂತಹದು. ಕಥೆ ಇದಾದರೂ ಕಾದಂಬರಿಯಲ್ಲಿಯ ಆ ಭಾವನೆಗಳನ್ನು ಓದಿಯೇ ಅನುಭವಿಸಬೇಕು. ಓದುಗ ಎಷ್ಟೇ ಗಟ್ಟಿಗನಾಗಿದ್ದರೂ ಪುಸ್ತಕ ಓದಿದ ತರುವಾಯ ಅವನಿಗೆ ಅರಿವಿಲ್ಲದೆ ಮನಸ್ಸಿಗೆ ವೇದನೆಯಾಗುವುದು ಖಂಡಿತ. ಒಳ್ಳೆಯ ಕಾದಂಬರಿ ನೀಡಿದ್ದಕ್ಕೆ ಅಭಿನಂದನೆಗಳು.
ಕಾಯಕನಾಥನ ಬಾಳಿನಲ್ಲಿ ನಡೆದ ಎರಡು ದುರಂತಗಳು ಆತನ ಮನಸ್ಸಿಗೆ ಆಘಾತವನ್ನುಂಟುಮಾಡಿತ್ತು, ಹಾಗಾಗಿ ಆತನಿಗೆ ಬದುಕಿನಲ್ಲಿ ಯಾವ ಉತ್ಸಾಹವೂ ಇರಲಿಲ್ಲ, ಮಿನಾಲಿ ಸಾರಂಗನನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದಾಗ, ತನ್ನ ಪಾಡಿಗೆ ತಾನು ಅಜ್ಜರಕಾಡಿನಲ್ಲಿದ್ದಾಗ ತನ್ನ ಬಾಳಿನಲ್ಲಿ ಬಂದ ಜಂಪಯ್ಯ, ಕಮಲಿ, ಪಾಂಡುರಂಗರಿಂದ ಮತ್ತೆ ಹೊಸ ಜೀವನ ಸಾಗಿಸಲು ನಿರ್ಧರಿಸುವಾಗ ಕಮಲಿ ಪಾಂಡುರಂಗನನ್ನೂ ಕಳೆದುಕೊಂಡು ಪೂರ್ತಿಯಾಗಿ ದಗ್ಧನಾಗಿ ಹೋಗಿದ್ದ. ಕುಮುದಿನಿ ನದಿಯನ್ನು ನೋಡುತ್ತಾ ತಲ್ಲೀನನಾಗಿದ್ದ ಕಾಯಕನಾಥ ತನ್ನ ಬಾಳಿನಲ್ಲಿ ನಡೆದ ಪ್ರಸಂಗಗಳನ್ನು ನೆನೆಯುತ್ತಾ ಹೋಗುತ್ತಾನೆ.
ಕಾಯಕನಾಥ ಮತ್ತು ಮಿನಾಲಿ ಬಂಗಾಳದ ಯಾವುದೋ ಊರಲ್ಲಿ ಕೂಲಿ ಮಾಡಿಕೊಂಡಿದ್ದರು, ಇಬ್ಬರು ಇಷ್ಟ ಪಟ್ಟು ಓಡಿ ಹೋಗಿ ಮದುವೆಯಾಗಿ ಸುಖದಿಂದ ಕಾಲಕಳೆಯುತ್ತಿದ್ದರು, ಅಂತೂ ದಾಂಪತ್ಯ ಅನ್ಯೋನ್ನವಾಗಿತ್ತು, ಸಾರಂಗ ಹುಟ್ಟಿದನಂತರ ತಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಹೀಗೆ ಕಷ್ಟಪಟ್ಟು ಉತ್ತರ ಕರ್ನಾಟಕದಲ್ಲಿ ಕಟ್ಟಡ ಕೆಲಸದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದರು, ಕಾಯಕನಾಥ ಕಷ್ಟಪಟ್ಟು ಕನ್ನಡ ಕಲೆತ. ಒಂದು ದಿವಸ ಮಿನಾಲಿ ಕೆಲಸ ಮಾಡುವ ಜಾಗದಲ್ಲಿ ತಲೆ ತಿರುಗಿ ಬೀಳುತ್ತಾಳೆ, ಆಕೆಯನ್ನು ಉಳಿಸಿಕೊಳ್ಳಲು ಬಂಗಾಳಕ್ಕೆ ಹೋಗಿ ಪ್ರಯತ್ನಪಟ್ಟ ಆದರೆ ಆಕೆ ಉಳಿಯಲಿಲ್ಲ, ನಂತರ ಸಾರಂಗನಿಗೆ ಹಾವು ಕಚ್ಚಿ ಆತನನ್ನು ಆಸ್ಪತ್ರೆ ಸೇರಿಸುವ ಹೊತ್ತಿಗೆ ವಿಷವೇರಿ ತೀರಿಕೊಂಡ ಹೀಗೆ ಇವರಿಬ್ಬರನ್ನು ಕಳೆದುಕೊಂಡು ಏಕಾಂಗಿಯಾದ. ಬಂಗಾಳದಿಂದ ವಾಪಸ್ಸು ಬರುವಾಗ ಟಿಕೇಟ್ ಇಲ್ಲದೇ ರೈಲು ಪ್ರಯಾಣದ ಸಮಯದಲ್ಲಿ ಜೀವನದಲ್ಲಿ ಆಸೆ ಆಕಾಂಕ್ಷೆಗಳಿಲ್ಲದೆ ಮಾರ್ಗದ ಮಧ್ಯೆ ಕಾಡಿನಲ್ಲಿ ಇಳಿದುಬಿಟ್ಟ. ಇನ್ನು ತನ್ನ ಅಜ್ಞಾತವಾಸವನ್ನು ಈ ಕಾಡಿನಲ್ಲೇ ಕಳೆಯೋಣವೆಂದು ನಿರ್ಧರಿಸಿದ. ಆದರೆ ಅಲ್ಲಿದ್ದ ಅರಣ್ಯ ಇಲಾಖೆಯ ಅಧಿಕಾರಿ ಯೋಗೀಶ ಕಾಯಕನಾಥನನ್ನು ಅಲ್ಲಿರಲು ಬಿಡಲಿಲ್ಲ, ಉಳಿಯಲು ಅಜ್ಜರಕಾಡು ಪ್ರದೇಶವನ್ನು ತೋರಿಸಿ ಹೊರಟುಹೋದ. ಅಂತು ಕಾಡಿನಲ್ಲೇ ವಾಸಿಸಲು ಶುರುಮಾಡಿದ ಅಲ್ಲಿನ ಪ್ರಕೃತಿ ಕಂಡು ಬೆರಗಾದ, *ಪ್ರಾಣಿ, ಪಕ್ಷಿಗಳು ತಮ್ಮ ಉದರ ತುಂಬಿದ ಬಳಿಕ ಬೇರೆ ಗೊಡೆವಗೆ ಹೋಗದೆ ತಮ್ಮ ಪಾಡಿಗೆ ತಾವಿರುತ್ತವೆ, ಆದರೆ ಮನುಷ್ಯ ಎಂಬ ಪ್ರಾಣಿ ಎಷ್ಟು ಕ್ರೂರ*. ಬದುಕೇ ಬೇಡವೆನಿಸಿ ಕಾಡಿನಲ್ಲಿ ಕಳೆಯಲು ನಿರ್ಧರಿಸಿದ ಆದರೆ ತನ್ನ ಹೊಟ್ಟೆ ಕೇಳಬೇಕಲ್ಲ, *ಈ ಹಸಿವು ಎಷ್ಟು ಕ್ರೂರ, ಮನುಷ್ಯನಿಗೆ ಒಂದಾ ಎರಡಾ , ಕಾಮದ ಹಸಿವು, ಹೊಟ್ಟೆಯ ಹಸಿವು, ಜ್ಞಾನದ ಹಸಿವು, ಮಹತ್ವಾಕಾಂಕ್ಷೆಗಳ ಹಸಿವು ತನ್ನ ಜೀವನವಿಡೀ ಅದನ್ನು ತೀರಿಸಿಕೊಳ್ಳುವುದೇ ಅವನ ಧ್ಯೇಯವಾಗಿಬಿಡುತ್ತದೆ*. ಹೀಗೆ ಅಜ್ಜರ ಕಾಡಿನಲ್ಲಿ ಕುಮುದಿನಿ ನದಿಯ ತೀರದಲ್ಲಿ ತನ್ನ ಜೀವನ ಸಾಗಿಸಲು ಶುರುಮಾಡುತ್ತಾನೆ.
ಯೋಗೀಶರು ಮತ್ತೆ ಬರುವಾಗ ಕಾರಗದ್ದೆಯಿಂದ ಜಂಪಯ್ಯನನ್ನು ಕರೆತರುತ್ತಾರೆ, ಕಾಯಕನಾಥನ ಬಗ್ಗೆ ಗಮನ ಕೊಡಲು ಕರೆತರುತ್ತಾರೆ, ಆದರೆ ಕಾರೆಗದ್ದೆಯಲ್ಲಿ ಹಲವಾರು ಮನೆಗಳಲ್ಲಿ ಚಾಕರಿ ಮಾಡುತ್ತಾ ಸ್ವಂತ ಮನೆಯಿಲ್ಲದೇ ಪರದಾಡುತ್ತಿದ್ದ ಜಂಪಯ್ಯ ಈ ಅಜ್ಜರ ಕಾಡನ್ನು ನೋಡಿ ಅಲ್ಲಿ ಮನೆ ಮಾಡಲು ನಿರ್ಧರಿಸುತ್ತಾನೆ, ಯಾರದೋ ಜಾಗ ಎಷ್ಟು ವರ್ಷಗಳಾದರು ಅವರ ಸುಳಿವಿಲ್ಲ, ಅಂತೂ ಧೈರ್ಯ ಮಾಡಿ ಕಾಯಕನಾಥನ ಸಹಾಯದಿಂದ ನಿರ್ಮಿಸುತ್ತಾನೆ. ಕಾಯಕನಿಗೆ ಜಂಪಯ್ಯನ ದುರಾಸೆ ಕಂಡು ಮರಗುತ್ತಾನೆ *ಇರೋ ನಾಲ್ಕು ದಿನಕ್ಕೆ ಮನುಷ್ಯನಿಗೆ ಎಷ್ಟೆಲ್ಲಾ ಆಸೆ, ಹುಟ್ಟುವಾಗಲೇ ಸಾವನ್ನು ಹೊತ್ತುಕೊಂಡೇ ಬಂದಿರುತ್ತಾನೆ, ಆದರೂ ತಾನು ಬದುಕುವುದಕ್ಕೆ ಒಂದು ನೆಲ ಬೇಕು, ಅಲ್ಲಿ ಮನೆ ಕಟ್ಟಿ ಅದೇ ತನ್ನ ನೆಲ ಎಂದು ಭಾವಿಸುತ್ತಾನೆ, ಅದರೇ ಯಾವುದೂ ಶಾಶ್ವತವಲ್ಲ, ಒಂದಲ್ಲ ಒಂದು ದಿನ ತೆರಳಲೇಬೇಕು*. ಅಂತೂ ಜಂಪಯ್ಯ ತನ್ನ ಹಟದಿಂದ ಮನೆ ಮಾಡುತ್ತಾನೆ, ಧೃಡ ನಿರ್ಧಾರದಿಂದ ಕಾಯಕನಾಥನು ಜಂಪಯ್ಯನ ಮನೆಗೆ ಹೋಗದೆ ಕಡೆಗೆ ಅವನ ಬಲವಂತದಿಂದ ಜಗುಲಿಯಲ್ಲಿರಲು ನಿರ್ಧರಿಸುತ್ತಾನೆ, ಒಬ್ಬರು ಬಂದು ನೆಲಸಿದರೆ ಹೇಳಬೇಕೆ ಇನ್ನು ಸುಂದರವಾಗಿದ್ದ ಈ ಅಜ್ಜರ ಕಾಡಿನ ಪರಿಸರ ಹಾಳಾಗುವುದು ಖಂಡಿತ, ಆದರೆ ತನ್ನ ಮಾತನ್ನು ಯಾರು ಕೇಳಲು ಇಷ್ಟ ಪಡುವುದಿಲ್ಲ, ಕಾರಣ ತನ್ನ ಮನಸ್ಸಿಗೆ ಹತ್ತಿರವಾದವರನ್ನು ಕಳೆದುಕೊಂಡು ಜೀವನದಲ್ಲಿ ವಿರಕ್ತಿಭಾವ ಬೆಳೆದು ಇರೋವರೆಗು ಹೇಗೋ ಜೀವನ ನಡೆಸಿದರಾಯ್ತು ಎಂಬುದು ತನ್ನ ನಿರ್ಧಾರ.
ಅಂತೂ ತಾನು ಎಣಿಸಿದ್ದ ಹಾಗೆ ಆಯಿತು, ಜಂಪಯ್ಯ ಕಾರಗದ್ದೆಯಿಂದ ಶಿವಣ್ಣನನ್ನು ಕರೆತರುತ್ತಾನೆ, ಸುತ್ತಮುತ್ತಲಲ್ಲಿ ಹಣ್ಣು, ತರಕಾರಿ ಬೆಳೆಯಲು ಜಾಗ ನಿರ್ಧರಸಿ ತನ್ನನ್ನೂ ಸೇರಿಸಿಕೊಂಡು ಕಷ್ಟಪಟ್ಟು ಗಿಡಗಳನ್ನು ನೆಟ್ಟು ಕುಮುದಿನಿ ನದಿಯ ನೀರನ್ನು ಅದಕ್ಕೆ ಉಪಯೋಗ ಆಗುವಹಾಗೆ ಮಾಡುತ್ತಾರೆ, ಅಂತೂ ಮನುಷ್ಯ ತನ್ನ ಹೊಟ್ಟೆ ಪಾಡಿಗಾಗಿ, ಹಣ ಸಂಪಾದಿಸಲು ಪರಿಸರದಲ್ಲಿ ಸಿಗುವುದೆಲ್ಲವನ್ನೂ ಬಳಸುತ್ತಾನೆ, ಇಲ್ಲದೇ ಇದ್ದರೆ ಆತನಿಗೆ ಬದುಕಲೇ ಅಸಾಧ್ಯವಾಗುತ್ತದೆ, ಇರುವುದಕ್ಕೆ ಮನೆ ಎಂದು ಶುರುಮಾಡಿದ ಜಂಪಯ್ಯ, ಕಾಡಿನಲ್ಲಿ ಹಣ್ಣು ತರಕಾರಿ ಬೆಳೆದು ಅವನ್ನು ಮಾರಿ ಹಣ ಸಂಪಾದಿಸಿ ತನ್ನ ಹೊಟ್ಟೆಯ ಹಸಿವು, ಹಣದ ಹಸಿವೂ ತೀರಿಸಿಕೊಂಡ. ಕ್ರಮೇಣ ಅಲ್ಲಿ ಎಂಟು ಮನೆಗಳಾದವು, ಮನುಷ್ಯನ ಸಂಪರ್ಕವೂ ಹೆಚ್ಚಿತು.
ಶಿವಣ್ಣನ ಮನೆಯಲ್ಲಿ ತನ್ನ ಪತ್ನಿ ರತ್ನ ಹಾಗು ರತ್ನನ ತಂಗಿ ಕಮಲಿ, ಕಮಲಿಯ ಮಗ ಪಾಂಡುರಂಗ ವಾಸಿಸುತ್ತಿದ್ದರು, ಪಾಂಡುರಂಗ ಕಾಯನಿಗೆ ತುಂಬಾ ಹಚ್ಚಿಕೊಳ್ಳುವುದಕ್ಕೆ ಶುರುಮಾಡಿದ, ಪಾಂಡುರಂಗನಲ್ಲಿ ತನ್ನ ಮಗ ಸಾರಂಗನನ್ನು ಹಾಗು ಕಮಲಿಯಲ್ಲಿ ತನ್ನ ಪತ್ನಿ ಮಿನಾಲಿಯನ್ನು ಕಾಣುತ್ತಾನೆ, ಕಾಯಕನಾಥನಿಗೆ ಆಶ್ಚರ್ಯವಾಗುತ್ತದೆ, ಎಲ್ಲವನ್ನು ತ್ಯಜಿಸಿದ ತನಗೆ ಇವರಿಬ್ಬರ ಮೇಲೆ ಏಕೆ ಪ್ರೀತಿ ಬೆಳೆಯುತ್ತಿದೆ ಎಂದು ಯೋಚಿಸಲು ಶುರುಮಾಡುತ್ತಾನೆ. ಗಂಡನ ಹಾಗು ಅತ್ತೆಯ ಕಿರುಕುಳದಿಂದ ಕಮಲಿ ಅವರನ್ನು ತ್ಯಜಿಸಿ ಬಂದಿರುತ್ತಾಳೆ, ತಮ್ಮಿಬ್ಬರ ಜೀವನವೂ, ಹಾಗೆ ದಿನ ಕಳೆದಂತೆ ಪಾಂಡುರಂಗನು ಕಾಯಕನಿಗೆ ತುಂಬಾ ಹತ್ತಿರವಾಗುತ್ತಾನೆ, ಎಲ್ಲರ ಹಿತವಚನಗಳಿಂದ ಹಾಗು ಕಮಲಿಯ ಹಾಗು ತನ್ನ ನಿರ್ಧಾರದಿಂದ ಅವರಿಬ್ಬರು ಪ್ರಕೃತಿಯ ಸಮಕ್ಷಮದಲ್ಲಿ ಮದುವೆಯಾಗುತ್ತಾರೆ, ಶಿವಣ್ಣನ ಕುಟುಂಬ ಕಾರಗದ್ದೆಗೆ ಹೊರಟುಹೋಗುತ್ತದೆ, ತಾನು ಕಮಲಿ ರಂಗ ಶಿವಣ್ಣನ ಮನೆಯಲ್ಲಿ ಇದ್ದು ಜಂಪಯ್ಯನಿಗೆ ಸಹಾಯವಾಗುತ್ತಾ ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಾರೆ. ಕೆಲವೇ ಸಮಯದಲ್ಲಿ ಅಜ್ಜರಕಾಡಿನ ಮಾಲೀಕ ಬಂದು ಇವರನ್ನು ಒಂದೇ ದಿನದಲ್ಲಿ ಬಿಡಬೇಕು ಇಲ್ಲ ಪೋಲೀಸರಿಗೆ ತಿಳಿಸುವುದಾಗಿ ಎಚ್ಚರಕೊಟ್ಟು ಹೋಗುತ್ತಾನೆ, ಹೇಗೋ ಎರಡು ದಿನ ಸಮಯ ತೆಗೆದುಕೊಂಡು ಕಾರಗದ್ದೆಗೆ ಹೋಗುತ್ತಾರೆ, ಹೋದಾಗ ವಿಪರೀತ ಮಳೆ, ಆ ಮಳೆ ತಮ್ಮ ಜೀವನದಲ್ಲೇ ಎಂದೂ ಕಂಡಿರುವುದಿಲ್ಲ, ಅತಿ ಮಳೆಯಿಂದ ಪ್ರವಾಹ ವಾಗಿ ಕುಮುದಿನಿ ಸೇತುವೆ ಬಿದ್ದುಹೋಗಿ ಅಜ್ಜರ ಕಾಡಿನಲ್ಲಿದ್ದ ಮನೆಗಳು ಆ ಮಳೆಗೆ ಕೊಚ್ಚಿಕೊಂಡು ಹೋಗುತ್ತದೆ, ಕಮಲಿ ಪಾಂಡುರಂಗ ನೀರನಲ್ಲೇ ಕೊಚ್ಚಿಕೊಂಡು ಹೋಗುತ್ತಾರೆ.
ಅಂತೂ ಕಾಯನು ಜಂಪಯ್ಯನೊಡನೆ ತಾವು ಈ ಜನ್ಮದಲ್ಲಿ ಭೇಟಿಯಾದುದು, ಕಮಲಿ, ರಂಗ ಹೀಗೆ ಯಾವುದಾವುದೋ ಸಂಬಂಧದ ಹೆಸರಿನಲ್ಲಿ ಒಂದಾದುದು, ಮತ್ತೊಂದು ಜನ್ಮ ಹೇಗೋ ಏನೋ ನಾನೆಲ್ಲೋ ಇವರೆಲ್ಲೋ . ನೀನು ನನ್ನದು ಅಂತ ಮನೆ ಕಟ್ಟಿದೆ, ಅದು ಹಾಗು ಅದರ ಸುತ್ತಮುತ್ತಲಿನ ಜಾಗ ತನಗೇ ಬೇಕೆಂದು ಆಸೆಪಟ್ಟೆ, ಆದರೆ ಪ್ರಕೃತಿಯ ಮುಂದೆ ಇವೆಲ್ಲ ಯಾವ ಲೆಕ್ಕ, ಪ್ರವಾಹ ಬಂದು ಏನೂ ಉಳಿಯಲಿಲ್ಲ, ಅಂತೂ ಬದುಕಿನಲ್ಲಿ ಇದೊಂದು ಒಳ್ಳೆಯ ಪಾಠವೆಂದು ಜಂಪಯ್ಯನ ಬಳಿ ಕಾಯಕನಾಥನು ತನ್ನ ಮನಸ್ಸಿನ ತೊಳಲಾಟಗಳನ್ನು ತೋಡಿಕೊಂಡ. ಮಿನಾಲಿ, ಸಾರಂಗನನ್ನು ಕಳೆದುಕೊಂಡಾಗ ಬದುಕೇ ಬೇಡವೆನಿಸಿದಾಗ ತನಗೆ ಜಂಪಯ್ಯ, ಶಿವಯ್ಯರು ಬದುಕಲು ಮತ್ತೆ ಆಸರೆಯಾದರು, ನಂತರ ಕಮಲಿ, ಪಾಂಡುರಂಗ ತನ್ನ ಜೀವನದಲ್ಲಿ ಕೆಲವು ಸಮಯ ಇದ್ದು ಅವರೂ ಮರೆಯಾದರು. ಇನ್ನು ತಾನು ಬದುಕಿದ್ದೂ ಪ್ರಯೋಜನವೇನೆಂದು ತನ್ನ ಬದುಕಿನಲ್ಲಿ ನಡೆದ ಈ ಎರಡು ದುರಂತಗಳನ್ನು ಮರೆಯಲಾಗದೇ ಕುಮುದಿನಿ ನದಿಯನ್ನು ನೋಡುತ್ತಾ ತಲ್ಲೀನನಾಗಿದ್ದ ಕಾಯಕನಾಥ ತನ್ನ ಬಾಳಿನಲ್ಲಿ ನಡೆದ ಪ್ರಸಂಗಗಳನ್ನು ಹೀಗೆ ನೆನೆಯುತ್ತಾನೆ.
ಮನುಷ್ಯನ ಹುಟ್ಟು ಮತ್ತು ಸಾವಿನ ನಡುವೆ ಇರುವ ಜೀವಿತಾವಧಿಯಲ್ಲಿ ಅವನು ಸಾಧಿಸಬೇಕಾಗಿರುವುದು ಏನನ್ನು? ಒಂದಾದ ಮೇಲೊಂದರಂತೆ ಕಷ್ಟಗಳು ಬೆನ್ನತ್ತಿ ಬಂದರೆ ಮನುಷ್ಯ ಜೀವಿ ಏನು ಮಾಡಬೇಕು?ಪ್ರೀತಿ ಪಾತ್ರರು ಜೀವನ ಪಯಣ ಮುಗಿಸಿದರೆ ಅದು ಉಂಟು ಮಾಡುವ ಶೂನ್ಯವನ್ನು ತುಂಬಲು ಯಾರಿಂದಲಾದರೂ ಸಾಧ್ಯವೇ? ತನ್ನ ಜೀವನದಲ್ಲಿ ಉಂಟಾದ ಆಘಾತಗಳನ್ನು,ಒಳಗಿನ ಬೇಗುದಿಯನ್ನು ಶಮನ ಮಾಡಲು ನಾಗರಿಕ ಸಮಾಜದಿಂದ ವಿಮುಖರಾಗುವ ಮೂಲಕ ಸಾಧಿಸಲು ಸಾಧ್ಯವೇ? ಮಾನವ ಜನ್ಮದಲ್ಲಿ ಹುಟ್ಟಿದ ಮೇಲೆ ಯಾವತ್ತೂ ಸಂಘಜೀವಿಯಾಗಿರಲೇ ಬೇಕೇ? ವೈರಾಗ್ಯ ಎಂಬುದು ಕ್ಷಣಿಕ ಮಾತ್ರವೇ? ಎಲ್ಲಾ ವೈರುಧ್ಯಗಳ ಮೆಟ್ಟಿ ನಿಂತು ಮತ್ತೆ ಜೀವನ್ಮುಖಿಯಾಗಲು ಇರುವಂತಹ ಪ್ರೇರಕ ಶಕ್ತಿ ಯಾವುದು? ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಪೂರ್ವನಿರ್ಧಾರಿತವೇ ಅಥವಾ ಆಕಸ್ಮಿಕವೇ?ಇಂತಹ ಹಲವು ಜಿಜ್ಞಾಸೆಗಳ ಸುತ್ತ ಸುತ್ತುವ ಕಾದಂಬರಿ 'ಅಜ್ಞಾತ'.....
ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಮೇಲಿನ ಪ್ರಶ್ನೆಗಳು ನಮ್ಮನ್ನೂ ಕಾಡಿರಬಹುದು.ಬಹುಶಃ ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಕಾಡಿರಬಹುದಾದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕಂಡುಕೊಳ್ಳಲು ನಾವು ಸಮರ್ಥರ��? ಸಮರ್ಪಕವಾಗಿ ಉತ್ತರ ಕಂಡುಕೊಳ್ಳಲು ಹೆಣಗಾಡಿ ವಿಧಿಯನ್ನೋ ಅಥವಾ ಹಣೆಬರಹವನ್ನು ದೂಷಿಸುವುದು,ಮತ್ತೆ ಯಥಾ ಜೀವನಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುವುದು ಸಹಜ ಗುಣ. ಹಾಗಾದರೆ ನಮ್ಮೆಲ್ಲರ ಸಮಸ್ಯೆಗಳಿಗೆ ಏನು ಕಾರಣ? ವಿಧಿಯೇ? ದುರಾಸೆಯೇ? ಮನುಷ್ಯ ಅತಿ ಆಸೆಯಿಂದ ತನ್ನ ಅಂಕೆಯಲ್ಲಿ ಇಟ್ಟುಕೊಳ್ಳಲು ಬಯಸುವ ಪ್ರಕೃತಿಯೇ? ಇಂತಹ ಕ್ಲಿಷ್ಟಕರವಾದ ವಸ್ತವಿನ ಸುತ್ತ ಬಹಳ ಸರಳವಾಗಿ ಮತ್ತು ನಮ್ಮ ಸುತ್ತಮುತ್ತಲಿನ ಘಟನೆಗಳ ಮೂಲಕವೇ ಕಥೆಯನ್ನು ಹೆಣೆಯಲಾಗಿದೆ.
ನಮ್ಮ ಒಳ ಮನಸ್ಸನ್ನು ತೆರೆಯಲು ಪ್ರೇರೇಪಿಸುವ ಈ ಕೃತಿಯ ಕೆಲವು ಸಾಲುಗಳು ನಮ್ಮ ಮನಸ್ಸಿಗೆ ಕನ್ನಡಿ ಹಿಡಿದು ಆತ್ಮಾವಲೋಕನದ ದಾರಿ ತೋರಿಸುತ್ತದೆ… ಕಥೆಯಲ್ಲಿ ಬರುವ ಪಲ್ಲಟಗಳು ಮತ್ತು ಸ್ಥಿತ್ಯಂತರಗಳ ವಿವರಗಳನ್ನು ಇನ್ನಷ್ಟು ಹಿಗ್ಗಿಸಿದ್ದರೆ ಓದು ಮತ್ತಷ್ಟು ಆಪ್ತವಾಗುತ್ತಿತ್ತು ಎಂದು ನನಗನಿಸಿತು…
ಇಲ್ಲಿ ಎತ್ತಿರುವ ಮೂಲಭೂತ ಪ್ರಶ್ನೆಗಳಿಗೆ ಕಾದಂಬರಿಯಲ್ಲಿ ಉತ್ತರವಿದೆಯೇ ಅಥವಾ ನಾವೇ ಕಂಡುಕೊಳ್ಳಬೇಕೆ? ಉತ್ತರಗಳು ಎಲ್ಲರಿಗೂ ಒಂದೇ ಆಗಿರುತ್ತದೆಯೇ ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆಯೇ? ಕಾದಂಬರಿಯನ್ನು ಓದುವುದರ ಮೂಲಕ ತಿಳಿಯಬಹುದು ಅಥವಾ ಕಂಡುಕೊಳ್ಳಲು ಪ್ರಯತ್ನಿಸಬಹುದು…..