ಯುದ್ಧ/ ಹೋರಾಟ/ ಸಂಗ್ರಾಮ; ಅದು ಯಾರ ನಡುವೆಯೇ ಆಗಲಿ, ಯಾವುದರ ಸಲುವಾಗಿಯೇ ಆಗಲಿ , ಸ್ವಾಭಿಮಾನ, ಸ್ವಾತಂತ್ರ್ಯ, ಸರಿ ತಪ್ಪುಗಳ ಏನೇ ಕಾರಣಗಳಿರಲಿ ಅಲ್ಲಿ ಒಂದಷ್ಟು ಕೊಲ್ಯಾಟರಲ್ ಡ್ಯಾಮೇಜ್ ಅಂತಾರಲ್ಲ, ಅವು ಸರ್ವೇಸಾಮಾನ್ಯ.
ಅಂಥಾ ಒಂದು ಕೊಲ್ಯಾಟರಲ್ ಡ್ಯಾಮೇಜಿಗೆ ಒಂದು ಚಿಕ್ಕ 'ಗೈರ ಸಮಜೂತಿ' ಅಂದರೆ ತಪ್ಪು ತಿಳುವಳಿಕೆ ಅಥವಾ misconception ಕಾರಣವಾಗಿ ತನ್ಮೂಲಕ ತುಂಬುಜೀವವೊಂದರ ಹರಣವಾಗಿ ಅದರ butterfly effectನ ರೀತಿಯಲ್ಲಿ ಅಳಿದ ಜೀವಿಯ ಪರಿಧಿಯೊಳಗಿನ ಮತ್ತು ಆಚೆಗಿನ ಎಷ್ಟೆಲ್ಲ ಜೀವಗಳು ಹೇಗೆಲ್ಲ ಅದರ ಪ್ರಭಾವಕ್ಕೆ ಒಳಗಾಗುತ್ತವೆ, ಒದಗಿ ಬಂದ ಶೋಕವನ್ನು ಪ್ರತಿಯೊಬ್ಬರೂ ಸ್ವೀಕರಿಸುವ ರೀತಿ, ಎದುರಿಸಿ ಮುಂದುವರೆಯುವ ಬಗೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವ ಆಲೋಚನಾಕ್ರಮ, ಬದುಕಿನ ಧ್ಯೇಯ ಮತ್ತು ಸಾರ್ಥಕತೆ ಇವುಗಳೇ ಗೈರ ಸಮಜೂತಿ ಕಾದಂಬರಿಯ ಮುಖ್ಯ ಕಥಾಹಂದರ.
ಕಥೆಯ ಚೌಕಟ್ಟು ನೋಡಲು ಸರಳವಾಗಿಯೇ ಕಂಡರೂ ಲೇಖಕರು ಅದನ್ನು ಕೊಂಡೊಯ್ದಿರುವ ಆಳ, ವಿಸ್ತಾರವು ಅಗಾಧವಾಗಿದೆ. ಎರಡನೇ ಮಹಾಯುದ್ಧದ, ಭಾರತದ ಸ್ವತಂತ್ರಪೂರ್ವದಲ್ಲಿ ಶುರುವಾಗುವ ಕಥೆಯು ಸ್ವತಂತ್ರಾನಂತರದವರೆಗೂ ಸಾಗಿ ಉತ್ತರ ಕರ್ನಾಟಕದ ಬ್ರಾಹ್ಮಣ ಮನೆತನವೊಂದರ ಜೀವನ, ರೀತಿನೀತಿಗಳನ್ನು ಹೇಳುತ್ತಾ ಅಂದಿನ ಸಾಮಾಜಿಕ ವ್ಯವಸ್ಥೆಗೆ ಕನ್ನಡಿಯಾಗಿ ಮಡಿ ಹೆಂಗಸರ ಕಷ್ಟಕಾರ್ಪಣ್ಯ, ವಿಧವಾ ವಿವಾಹ, ವೇಶ್ಯಾವಿವಾಹ, ಸ್ತ್ರೀ ಸ್ವಾತಂತ್ರ್ಯ, ವಿದ್ಯಾಭ್ಯಾಸ ಇತ್ಯಾದಿ ವಿಷಯಗಳನ್ನು ಹಾದು ಕಠೋಪನಿಷತ್ತಿಗೆ ಪ್ರವೇಷ ಒದಗಿಸುತ್ತಾ ಸಾಗಿ ಎಲ್ಲ ಧರ್ಮಗಳಿಗಿಂತಲೂ ಮಾನವಧರ್ಮವೇ ಮೇಲು ಎಂಬ ಸಂದೇಶದೊಂದಿಗೆ ಮುಗಿಯುತ್ತದೆ.
ನನಗೆ ಅಷ್ಟೇನೂ ಪರಿಚಯವಿಲ್ಲದ, ಸರಾಗವಲ್ಲದ ಉತ್ತರ ಕರ್ನಾಟಕ ಶೈಲಿಯ ಆಡುಭಾಷೆಯಲ್ಲೇ ಸಾಗುವ ಕಥೆ ಒಂಚೂರೂ ಕಷ್ಟವಾಗದೇ ಓದಿಸಿಕೊಂಡು ಹೋದದ್ದು ನನಗೇ ಆಶ್ಚರ್ಯ. ಇಲ್ಲಿಯವರೆಗಿನ ನನ್ನ ಸಾಹಿತ್ಯಾತ್ಮಕ ಓದಿಗೆ ಇದೊಂದು ಮುಖ್ಯ ಮೈಲಿಗಲ್ಲು ಎನಿಸುವಷ್ಟು ವಿಶೇಷ ಕೃತಿ.
PS : ಕೇಳುಕಥೆ ಅಂದರೆ ಆಡಿಯೋಪುಸ್ತಕಗಳ ಅಭ್ಯಾಸವಿದ್ದರೆ i highly recommend ಗೈರ ಸಮಜೂತಿ audio book in storytel. ರಾಘವೇಂದ್ರ ಪಾಟೀಲರ ಕಾದಂಬರಿಯನ್ನು ರೇವತಿ ನಾಡಿಗೇರ್ ಅವರ ಧ್ವನಿಯು ಇನ್ನಷ್ಟು ಚೆಂದವಾಗಿಸಿದೆ.
ರಾಘವೇಂದ್ರ ಪಾಟೀಲ ಅವರ ತೇರು ಕಾದಂಬರಿಯನ್ನು ಓದಿದವರಿಗೆ ಅವರ ಭಾಷಾ ಶೈಲಿಯ ಪರಿಚಯವಿರುತ್ತದೆ. ಪ್ರಸ್ತುತ ಕಾದಂಬರಿಯಲ್ಲಿ ಸಹ ಅವರು ಆರಿಸಿಕೊಂಡ ಕಥಾವಸ್ತು ಮತ್ತು ಅದರ ನಿರೂಪಣೆಗೆ ಬಳಸಿಕೊಂಡ ಭಾಷೆ ನಿಸ್ಸಂದೇಹವಾಗಿ ಓದುಗರ ಮನಸ್ಸನ್ನು ಹಿಡಿದಿಡುತ್ತದೆ. ಎಷ್ಟರಮಟ್ಟಿಗೆ ಎಂದರೆ ಉತ್ತರ ಕರ್ನಾಟಕದ ಈ ಭಾಷೆಯನ್ನು ಬಿಟ್ಟುಬೇರೆ ಯಾವುದೇ ಪ್ರಾಂತ್ಯದ ಭಾಷೆಯನ್ನು ಬಳಸಿದ್ದರೆ ಕಥೆಯು ತನ್ನ ತೂಕವನ್ನೇ ಕಳೆದುಕೊಂಡುಬಿಡುತ್ತಿತ್ತೇನೋ ಅನ್ನುವಷ್ಟು... ಪುಟ್ಟ ಮಕ್ಕಳ ಮುಗ್ಧತೆ, ಕೈಗೆ ಬಂದ ಮಗನನ್ನು ಕಳೆದುಕೊಂಡ ತಂದೆಯ ಹತಾಶೆ, ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ತಾಯಿಯ ಸಂಕಟ, ಗಂಡನನ್ನು ಕಳೆದುಕೊಂಡು ವಿಧವೆ ಪಟ್ಟವನ್ನು ಹೊತ್ತ ಆಗಷ್ಟೇ ಯೌವನಕ್ಕ ಕಾಲಿರಿಸಿದ ಹದಿಹರೆಯದ ಯುವತಿಯ ಗೋಳಾಟಗಳನ್ನ ಅಕ್ಷರ ರೂಪಕ್ಕೆ ಇಳಿಸುವಲ್ಲಿ ಪಾಟೀಲರು ಭಾಷೆಯನ್ನು ದುಡಿಸಿಕೊಂಡ ರೀತಿಗೆ ನಮೋ ನಮಃ…..
ಬೆಟಗೇರಿ ಮತ್ತು ಐನಾಪುರ ಎಂಬ ಊರುಗಳ ನಡುವೆ ನಡೆಯುವ ಕಥೆಯ ಕೇಂದ್ರಬಿಂದು ವತ್ಸಲಾ ಅಥವಾ ವಚ್ಚಕ್ಕ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪೋಲಿಸರ ಗೈರ ಸಮಜೂತಿಯಿಂದಾಗಿ ವಚ್ಚಕ್ಕನ ಗಂಡ ಅಚ್ಯುತನ ಕೊಲೆಯಾಗುತ್ತದೆ. ಇಲ್ಲಿಂದ ಮುಂದೆ ತನ್ನ ನೋವನ್ನು ಮರೆಯಲು ವಚ್ಚಕ್ಕ ಅಕ್ಷರಾಭ್ಯಾಸಕ್ಕೆ ತೊಡಗುತ್ತಾಳೆ. ಅದಕ್ಕೆ ಬೆನ್ನೆಲುಬಾಗಿ ನಿಲ್ಲುವವರು ಅವಳ ಕಾಕಾ ಸತ್ಯಬೋಧರು. ಅಂದಿನ ಸಮಾಜದಲ್ಲಿ ವಿಧವೆಯಾಗಿ ಮಾಡಿ ಕೂತು ಹೆಣ್ಣು ಜೀವ ಎದುರಿಸಬೇಕಾಗಿದ್ದ ಸವಾಲುಗಳೇನು? ಅದರ ಪರಿಹಾರಕ್ಕಾಗಿ ಸತ್ಯಬೋಧರು ಕಂಡುಕೊಂಡ ಮಾರ್ಗದಲ್ಲಿ ಎದುರಾದ ಅಡಚಣೆಗಳು,ಅವರು ಅದನ್ನು ಮೀರಿ ನಿಂತು ತನ್ನ ಗುರಿಯನ್ನು ಸಾಧಿಸಿದ್ದು ಅಂದಿನ ಕಾಲದ ಹಿನ್ನೆಲೆಯಲ್ಲಿ ಗಮನಿಸಿದರೆ ಕ್ರಾಂತಿಕಾರಕ ನಿಲುವೆಂಬುದು ಸ್ಪಷ್ಟವಾಗುತ್ತದೆ. ಹೀಗೆ ಕಥೆಯು ಮುಂದುವರಿಯುತ್ತಾ ಎರಡನೇ ಮಹಾಯುದ್ಧ ಉಂಟುಮಾಡಿದ ತಲ್ಲಣಗಳು,ಭಾರತದ ಸ್ವಾತಂತ್ರ್ಯ ಚಳುವಳಿಯ ವಿವಿಧ ಹಾದಿಗಳು,ದೇಶ ವಿಭಜನೆಯ ದುರಂತ,ಗಾಂಧೀಜಿಯವರ ಹತ್ಯೆ ಮತ್ತು ಅದು ಒಂದು ಸಮುದಾಯದ ಮೇಲೆ ಬೀರಿದ ಪರಿಣಾಮಗಳು, ನಮ್ಮ ದೇಶದ ನಾಯಕರು ಪ್ರಜಾಸಮೂಹವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲರಾದದ್ದು ಅಥವಾ ರಾಜಕೀಯ ಲಾಭಕ್ಕೋಸ್ಕರ ಅಸಡ್ಡೆ ತೋರಿದ್ದು,ಕೋಮುದಂಗೆಗಳ ಮೂಲಕ ಉಂಟಾದ ಕಂದಕಗಳನ್ನು ಮುಚ್ಚಲು ವಿಫಲರಾದದ್ದು ಮುಂತಾದ ಅನೇಕ ವಿಚಾರಗಳನ್ನು ಒಳಗೊಳ್ಳುತ್ತಾ ಹೋಗುತ್ತದೆ.
ನನಗೆ ಅತ್ಯಂತ ಪ್ರಿಯವಾದದ್ದು ಕಠೋಪನಿಷತ್ತಿನ ಪಾಠದ ಭಾಗ. ಅತ್ಯಂತ ಕ್ಲಿಷ್ಟಕರ ವಿಷಯವನ್ನು ಸರಳ ಆಡುಭಾಷೆಯ ಮೂಲಕ ಪ್ರಸ್ತುತ ಪಡಿಸಿದ ರೀತಿ ಬೆರಗು ಮೂಡಿಸಿತು. ಸಂಸಾರಿಯಾಗಿದ್ದು ಕೂಡ ಯಾವುದಕ್ಕೂ ಮೋಹದ ಮೂಲಕ ಅಂಟಿಕೊಳ್ಳದೆ ನಿರ್ಲಿಪ್ತವಾಗಿ ಆತ್ಮೋಧ್ಧಾರದ ಕಡೆಗೆ ಸಾಗುವ ಕುರಿತಾದ ಈ ಪರಿಚ್ಛೇದದಲ್ಲಿ ತನ್ಮಯತೆಯಿಂದ ಕಳೆದುಹೋಗುತ್ತೇವೆ. ಕುಟುಂಬ ಬಂಧನದಲ್ಲಿರುವಂತೆಯೇ ಸ್ಥಿತಪ್ರಜ್ಞರಾಗಿ ಉನ್ನತಿಯ ಮಾರ್ಗದಲ್ಲಿ ನಡೆಯುವ ರೀತಿ ಮಾರ್ಮಿಕವಾಗಿದೆ.
ಯಾವುದೇ ವ್ಯಕ್ತಿ ತನ್ನ ಇತಿಮಿತಿಯೊಳಗೆ ನಿಸ್ವಾರ್ಥ ಮನೋಭಾವದಿಂದ ಬದುಕಿ ಜೀವಿಸಿದರೆ ಅದುವೇ ಮನುಕುಲಕ್ಕೆ ನಾವು ಸಲ್ಲಿಸುವ ಬಹುದೊಡ್ಡ ಸೇವೆ. ಇದಕ್ಕೆ ಯಾವುದೇ ಅಡೆತಡೆಗಳಿದ್ದರೂ ಪ್ರಕೃತಿಯೇ ಅದನ್ನು ನಿವಾರಿಸಿಕೊಡುತ್ತದೆ ಅನ್ನುವುದನ್ನು ಕಾದಂಬರಿಯ ಕೊನೆಯಲ್ಲಿ ಕಾವ್ಯಾತ್ಮಕವಾಗಿ ಬಣ್ಣಿಸಿದ್ದು ಬಹಳ ರಸವತ್ತಾಗಿದೆ.
ಗೈರ ಸಮಜೂತಿಯಲ್ಲಿಯ ಹುಡುಕಾಟ ದಿನನಿತ್ಯದ ನಮ್ಮ ಬದುಕಿನ ಹೋರಾಟವು ಹೌದು. ಈ ಹುಡುಕಾಟ ಹೋರಾಟಗಳಲ್ಲಿ ಮನುಷ್ಯತ್ವವನ್ನು ಬೆಳೆಸಿ ಉಳಿಸಿಕೊಂಡರೆ ಓದು ಸಾರ್ಥಕ. ಬಹುಕಾಲ ಕಾಡಬಲ್ಲ, ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕಾದಂತಹ ಅನೇಕ ವಿಚಾರಗಳನ್ನು ಒಳಗೊಂಡಿರುವ ಈ ಬೃಹತ್ ಕೃತಿ ಇತ್ತೀಚಿನ ಉತ್ತಮ ಓದು.
ಗೈರ ಸಮಜೂತಿ ಎಂದರೆ ತಪ್ಪು ತಿಳುವಳಿಕೆ (misunderstandings). ಸ್ವತಂತ್ರ ಪೂರ್ವದ ಹೋರಾಟದಲ್ಲಿ ಒಬ್ಬ ವ್ಯಕ್ತಿಯ wrong identity ಇಂದಾಗಿ ಘಟಿಸುವ ಪೋಲೀಸರ ಅನಿರೀಕ್ಷಿತ ಭೇಟೆಗೆ ಬಲಿಯಾಗುವುದು ಒಬ್ಬ ಅಮಾಯಕ ಅಚ್ಯುತ. ತನ್ನ ಗಂಡನನ್ನು ಕಳೆದುಕೊಳ್ಳುವ ಎಳೆವಯಸ್ಸಿನ ಮುಗ್ಧ ಬಾಲೆ ತನ್ನ ವಿಧವಾ ಮಡಿ ಜೀವನವನ್ನು ಕಟ್ಟಿಕೊಳ್ಳುವ ಬಗೆ ಕೃತಿಯ ಕಥಾವಸ್ತು ಎಂದರೆ ತಪ್ಪಾಗುತ್ತದೆ. ಇದರ ಜೊತೆಜೊತೆಗೆ ತನ್ನ ಸುತ್ತಲೂ ಹೆಣೆದುಕೊಳ್ಳುವ ಕುಟುಂಬ-ಸಮಾಜದ ಸ್ಥಿತಿ, ವೇದ ಉಪನಿಷತ್, ಸಂಸ್ಕೃತಿಯ ಜೊತೆ ಆಧ್ಯಾತ್ಮಿಕ ವಿಚಾರಗಳು, ಇತಿಹಾಸ ಪುರಾಣ, ಕಾವ್ಯ, ಜನಪದ, ವೈದ್ಯಕೀಯ ಪ್ರಸೂತಿ ಮತ್ತು ಕೃತಿಯ ಬೆಳಗಾವಿಯ ಸಮೃದ್ಧ ಘನಭಾಷೆ ಕೃತಿಯ ಗಟ್ಟಿತನವನ್ನು ಸಮೃದ್ಧಗೊಳಿಸುತ್ತದೆ. ಈ ಜವಾರಿ ಭಾಷೆಯ ಹಿಡಿತ ಪಾಟೀಲರಿಗೆ ದಕ್ಕಿರುವ ವರವೆನಿಸುತ್ತದೆ ಮತ್ತು ಅವರ ಎಲ್ಲಾ ಕೃತಿಗಳ ವಿಶೇಷತೆಯೆಂದರೆ ಶಾರೀರಿಕ ಕಾಮದ ಬಗ್ಗೆ ಒಂದು ವಾಕ್ಯನೂ ಬರೆಯದೇ ಇರೋದು. ಪ್ರೀತಿ-ಪ್ರೇಮ ಸಂಬಂಧಗಳ ನಡುವೆ ಅನೈತಿಕ ಬಾಂಧವ್ಯ ಬೆಳೆಸಿ ದೇಹ ತಿಕ್ಕಾಟಗಳ ವಿವರಣೆಗಳನ್ನು ಹೊಂದಿ ಪುಸ್ತಕ ಗಾತ್ರವನ್ನು ಹೆಚ್ಚಿಸುವ ಕೃತಿಗೆ ಕನ್ನಡದಲ್ಲಿ ಬರವಿಲ್ಲ, ಇಂತಹ ಕೃತಿಗಳು ಓದುಗನಲ್ಲಿ ರಸಾನುಭವ ಉಂಟುಮಾಡಲೆಂದೇ ಬರೆಯುವಂಥವು.. ಇವೆಲ್ಲವುಗಳ ನಡುವೆ ಮೌಲ್ಯಯುತ ಇಂತಹ ಕೃತಿಗಳನ್ನು ಓದಲು ಸಾವಧಾನಬೇಕು.
ಇಡೀ ಕಾದಂಬರಿ ರೂಪುಗೊಂಡಿರುವುದು ಬೆಟಗೇರಿ ಮತ್ತು ಐನಾಪುರ ಎಂಬ ಊರಿನೊಳಗಿನ ಮಾಧ್ವ ಬ್ರಾಹ್ಮಣ ಮನೆತ್ತನದೊಳಗೆ. ಕೃತಿಯನ್ನು ಓದುತ್ತಾ ಹೋದಂತೆ ಬ್ರಾಹ್ಮಣ ಮನೆಯೊಳಗಿರುವ ದಿನನಿತ್ಯ ಬದುಕನ್ನು ಓದುಗನಾದ ನಾನೂ ಅದೃಶ್ಯ ಪಾತ್ರವಾಗಿ ಜೀವಿಸಿದ್ದು ನಿಜ, ಈ ರೀತಿ ಭಾವನಾತ್ಮಕವಾಗಿ ಬರೆಯುವುದು ಲೇಖಕರ ಜೀವನಾನುಭವಗಳ ಮೇಲೆ ನಿರ್ಧರಿತವಾಗಿರುತ್ತದೆ ಮತ್ತು ಅದನ್ನು ಓದುಗನ ಅನುಭವಕ್ಕೆ ಒಡ್ಡಿಕೊಳ್ಳುತ್ತಾ ಕಣ್ಣಮುಂದೆ ಪಾತ್ರಗಳನ್ನು ಪರದೆಯಮೇಲೆ ಬಿಟ್ಟಂತೆ ಕುಣಿಸುವುದು ಲೇಖಕನ ಸೂಕ್ಷ್���ಗ್ರಹಿಕೆಗೆ ಬಿಟ್ಟದ್ದು, ಹಾಗೂ ಉತ್ತಮ ಲೇಖಕ ಅತ್ಯುತ್ತಮ ಓದುಗನಾಗಿರಬೇಕೆಂಬ ಜವಾಬುದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆಂದರೆ ತಪ್ಪಿಲ್ಲ. ಸೂರ್ಯ-ಚಂದ್��ರ ಮುಖೇನ ಪಾತ್ರಗಳ ಒಳಹೊಕ್ಕು ಅವರ ಮನಸ್ಥಿತಿಯನ್ನು ಚಿತ್ರಿಸುವ ಧಾಟಿ ಅಪೂರ್ವವೆನಿಸಿತು.
ಕೃತಿಯಲ್ಲಿ ಹೆಚ್ಚಾಗಿ ಹಿಡಿಸಿದ್ದೆಂದರೆ ಕುಮಾರಿಲನಾಥರ ಪಾತ್ರದ ಮೂಲಕ ವಿವರಿಸಿರುವ ವೇದ, ಉಪನಿಷತ್ತು, ಕಠೋಪನಿಷತ್ತಿನ ಭಾಗ. ಸಾವಿನ ಬಗ್ಗೆ ಇರುವ ಈ ಬ್ರಹ್ಮಜ್ಞಾನ ಗಾಢ ವಿಷಯವನ್ನು ಇಷ್ಟು ಸುಲಲಿತವಾಗಿ, ಸಂಕ್ಷಿಪ್ತವಾಗಿ, ಅರ್ಥಗರ್ಭಿತವಾಗಿ ವಿವರಿಸಿರುವುದು ನಿಜಕ್ಕೂ ನನ್ನನ್ನು ಅಚ್ಚರಿಗೊಳಿಸಿತು. ಸಂಸಾರದ ಮೋಹಕ್ಕೆ ಒಳಗಾಗದೆ, ಆತ್ಮಜ್ಞಾನ ತಿಳಿದಂಥಾ ಧೀರ ಹರ್ಷ ಶೋಕಗಳಿಗೆ ಒಳಗಾಗುದಿಲ್ಲ, ಅವಂಗ ಹರ್ಷ ಶೋಕಗಳ ಘಟನಾಗಳೂ ಅನುಭವಗಳೂ ಒದಗೂದೇ ಇಲ್ಲ ಅಂತಲ್ಲ, ಅವುಗಳ ಪರಿಣಾಮಕ್ಕ ಒಳಗಾಗುದಿಲ್ಲ ಅಂತ ಸರಳವಾಗಿ ಓದುಗನ ಮುಂದೆ ಇಟ್ಟಿದ್ದಾರೆ. ಜೊತೆಗೆ ವೇಶ್ಯೆಗೂ ಒಂದು ಜೀವನ ಕೊಟ್ಟು ಅರ್ಥ ಕೊಡುವಂತ ತಾಯಿತನ ದೊರಕಿಸಿ ಅದನ್ನ ಅನುಭವಿಸಲಾರದೇ ಸಾಯುವ ಜಬಾಲೆ, ಅನಾಥೆಯಾಗಿ ಜೀವನ ನಡೆಸುತ್ತಿದ್ದ ಹೆಂಗಸು ಅವಕ್ಕನಾಗಿ ತಾಯಿಯಾಗಿ ಬಡ್ತಿ ಪಡೆಯುವ ಪರಿ , ಬುದ್ಧಿಮಾಂದ್ಯವಾಗಿ ಹುಟ್ಟು ಪಡೆಯುವ ಸತ್ಯಕಾಮನ ಸಾವನ್ನು ಅಮೋಘವಾಗಿ ಚಿತ್ರಿಸಿದ್ದಾರೆ.ಇದೇ ಬ್ರಹ್ಮಜ್ಞಾನಿ ಕುಮಾರಿಲನಾಥವೆಂಬ ಪಾತ್ರ ಎಸ್.ಎಲ್ ಭೈರಪ್ಪನವರ “ಸಾರ್ಥ” ಕೃತಿಯಲ್ಲೂ ಬರುತ್ತದೆ.
“ಅಚ್ಯುತನ ಗೈರ ಸಮಜೂತಿಯ ಕೇಸು ನನ್ನನ್ನು ಅತ್ಯಂತ ಭಾವುಕನನ್ನಾಗಿ ಮಾಡಿ ತುಂಬಾ ಸಮಯ ಓದಲಿಕ್ಕೆ ಆಗದಷ್ಟು ಕಾಡಿತು, ಸತ್ಯಭೋದಾಚಾರ್ಯರ ಗೈರ ಸಮಜೂತಿನು ಕೂಡ ಓದುಗನ ಅಂತರಂಗವನ್ನು ಅಲ್ಲಾಡಿಸಿಬಿಡುತ್ತದೆ. ಇನ್ನು ಭಾರತೀಯ ಸಹಿಷ್ಣುಗಳು ಸ್ವತಂತ್ರ ನಂತರ ಎಲ್ಲೋ ನಡೆದ ಗಲಭೆಯ ಗೈರ ಸಮಜೂತಿಗೆ ಹಿಂದೂ-ಮುಸ್ಲಿಂ ಪ್ರಜೆಗಳು ಅಸಹಿಷ್ಣುಗಳಾಗಿ ರೂಪಾಂತರಗೊಳ್ಳುವ ಪರಿ ಅಂದಿಗೂ ಇಂದಿಗೂ ಪ್ರಮಾಣವಾರು ಹೆಚ್ಚೇ ಆಗುತ್ತಿದೆ. ಈ ತಪ್ಪು ತಿಳುವಳಿಕೆಗಳು ಕುಟುಂಬದೊಳಗಿರುವುದು ಸರ್ವೇ ಸಾಮಾನ್ಯ, ಅದೆಲ್ಲವನ್ನೂ ಮೀರಿ ಮನುಷ್ಯ ಮನುಷ್ಯನನ್ನೇ ದ್ವೇಷಿಸಿ ಕೊಲ್ಲುವ ಕೀಳುಮಟ್ಟದ ಮನಸ್ಥಿತಿಯ ಜಾತಿ-ಧರ್ಮಗಲಭೆ ಜನಗಳ ಸುಪ್ತ ಮನಸ್ಸಿನಲ್ಲಿ ಸೇಡಿನ ಮತ್ಸರವಾಗಿ ಇವತ್ತಿಗೂ ಅಚ್ಚಾಗಿ ಉಳಿದುಬಿಟ್ಟಿದೆ. ಗಾಂಧೀಜಿಯನ್ನು ಒಂದೇ ಸಲ ಕೊಂದಿದ್ದಾದ್ರೆ ಪರವಾಗಿಲ್ಲ, ಆದರೆ ಅವರ ಆಚಾರ ವಿಚಾರಗಳನ್ನು ರಾಜಕೀಯ ಷಡ್ಯಂತ್ರಗಳಿಗೆ ಒಡ್ಡಿ ಪದೇ-ಪದೇ ಕೊಲ್ಲುವುದು ಇಂದಿಗೂ ನಡೆದಿದೆ.
“ಬ್ರಿಟಿಷರ ಕಾಲಘಟ್ಟದಲ್ಲಿ ಅವರದೇ ಪಾರುಪತ್ಯ ನಡೆಸಿದರೂ ಅಭಿವ್ಯಕ್ತಿ ಸ್ವಾತಂತ್ರ ಇರಲಿಲ್ಲ, ಕೂಲಿ ಕಾರ್ಮಿಕರಾಗಿದ್ದರು ಆದರೆ ಸ್ವತಂತ್ರ ಪಡೆದು ನಮ್ಮವರೇ ಅಧಿಕಾರ ವಹಿಸಿಕೊಂಡರೂ ಅಧಿಕಾರದ ದುರ್ಬಳಕೆಯಿಂದ ರಾಜಕಾರಣಿಗಳು ಒಡ್ಡಿರುವ ಜಾತಿ, ಧರ್ಮದ ಬಿಕ್ಕಟ್ಟಿನಿಂದ ಜನಗಳ ಮನಸ್ಥಿತಿ ಇವತ್ತಿಗೂ ಕೂಪ ಮಂಡೂಕನಂತೆ ದ್ವೇಷದ ಉರಿಯ ಕಿಡಿಯಾಗಿ ಪ್ರತಿ ವ್ಯಕ್ತಿಯಲ್ಲೂ ಅಡಕವಾಗಿದ್ದು ಜ್ವಾಲಾಮುಖಿಯಂತೆ ಸ್ಫೋಟಗೊಳ್ಳಲು ಕಾತರಿಸುತ್ತಿದೆ.
ಕೃತಿಯಲ್ಲಿನ ವಿಧವಾ ಮಡಿವಂತಿಕೆ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಸೀಮಿತಗೊಂಡದ್ದು ಎನಿಸುತ್ತದೆ, ಇತರ ಸಮುದಾಯಗಳಲ್ಲಿನ ಕಟ್ಟಳೆಗಳನ್ನು ಅನುಭವಿಸುವವರು ವಿಭಿನ್ನವಾಗಿ ನೋಡಬಹುದು, ಪಾಲಿಸದೇ ಇರುವವರು, ಈ ಧಾರ್ಮಿಕ ವಿಧಾನಗಳನ್ನು ತಿರಸ್ಸ್ಕರಿಸುವವರು ಕೃತಿಯನ್ನು ಮೆಚ್ಚಿಕೊಳ್ಳದಿರಬಹುದು ಹಾಗೂ ಗಾಂಧಿ ತತ್ವವನ್ನು ದ್ವೇಷಿಸುವವರು ಕೃತಿಯನ್ನು ಸ್ವೀಕರಿಸುವುದು ಕಷ್ಟವೆನಿಸುತ್ತೆ ಯಾಕಂದರೆ ಪ್ರಸ್ತುತ ಕಾಲಘಟ್ಟದಲ್ಲಿ ವ್ಯಕ್ತಿ ಮಾಡಿದ ಒಳಿತನ್ನು ಬಿಟ್ಟು ಕೆಟ್ಟದನ್ನೇ ಆರಾಧಿಸುವ ಮನೋಭಾವ ಹೆಚ್ಚಾಗಿದೆ.
“ಸ್ವತಂತ್ರ ಪೂರ್ವ ಮತ್ತು ನಂತರದ ಜನರ ಜೀವನ, ರಾಜಕೀಯ ಸ್ಥಿತಿ ಕಾಲಕ್ಕೆ ನಮ್ಮನ್ನು ತೊಡಗಿಸಿಕೊಂಡು , ಬ್ರಾಹ್ಮಣ ಸಮುದಾಯದಲ್ಲಿನ ಜೀವನವನ್ನು ಅರಿಯುವ ದೃಷ್ಟಿಯಿಂದ ಓದಿದ್ದಲ್ಲಿ ಉತ್ತಮ ಕೃತಿಯೆನಿಸುವುದರಲ್ಲಿ ಸಂಶಯವಿಲ್ಲ.
ರಾಘವೇಂದ್ರ ಪಾಟೀಲರ ಅತ್ಯದ್ಭುತ ಕಾದಂಬರಿ. ಇದು ಪ್ರಕಟಣೆಗೊಂಡು ಮೂರೇ ದಿನಕ್ಕೆ ತಂದು ಎರಡು ದಿನಗಳಲ್ಲಿ ಮುಗಿಸಿದ ಕಾದಂಬರಿ. ಅವರ ಬರವಣಿಗೆ ಶೈಲಿ, ಆ ಕಥಾವಸ್ತು, ಕಥೆ ಹೆಣೆಯುವ ಕಲೆ ನಿಜವಾಗಲೂ ಗೈರ ಸಮಜೂತಯಲ್ಲಿ ಮೂಡಿ ಬಂದಿದೆ. ಒಂದು ಕುಟುಂಬದ ಕಥೆಯ ಮೇಲೆ ಹೆಣೆದಿರುವ ಕಥೆ. ಹೇಗೆ ತಪ್ಪು ಕಲ್ಪನೆಗಳಿಂದ ಉಂಟಾದ ತೊಂದರೆಗಳು ಹೇಗೆ ಒಂದು ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದೇ ಮೂಲ ಕಥೆ. ಗೈರ ಸಮಜೂತಿ ಅಂದರೆ ಮರಾಠಿಯಲ್ಲಿ ತಪ್ಪು ತಿಳುವಳಿಕೆ ಎಂದರ್ಥ