Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
ಸಪ್ನ ಬುಕ್ ಹೌಸಿನಲ್ಲಿ ಶೀರ್ಷಿಕೆಯಿಂದಲೇ ಮನ ಸೆಳೆದ ಅಪರೂಪದ ಪುಸ್ತಕವಿದು. "ಎಲ್ಲ ನದಿಗಳಿಗೂ ಕಡಲು ಇರುವುದಿಲ್ಲ" ಎಂಬ ಟ್ಯಾಗ್ ಇರುವ ಪುಸ್ತಕದ ಅಂತರಾಳ ಏನಿರಬಹುದು ಎಂದು ಪುಸ್ತಕ ಓದದೇ ಊಹಿಸಲು ಸಾಧ್ಯವೇ ಇಲ್ಲ. ನವಿರಾದ ಬರವಣಿಗೆ, ಅಚ್ಚುಕಟ್ಟಾದ ನಿರೂಪಣೆ, ಶ್ರದ್ಧೆಯಿಂದ ಕಸೂತಿ ಮಾಡಿದಂತೆ ಎನಿಸುವ ತಿರುವುಗಳು. ದಕ್ಷಿಣ ಕನ್ನಡ ಮತ್ತು ಕೇರಳದ ಸುತ್ತಮುತ್ತಾ ಕಟ್ಟಿಕೊಟ್ಟಿರುವ ಈ ಪುಸ್ತಕ ಒಟ್ಟಾರೆ ಒಂದು ರೋಲರ್ ಕೋಸ್ಟರ್ ರೈಡ್..!
ಹೆಸರಿನಲ್ಲೇ ನದಿಯಿದೆ. ನದಿಯಂತೆ ಹರಿಯುತ್ತದೆ ಈ ಪುಸ್ತಕ. ನಿರಂಜನ ಎಂಬುವವನ ಕೊಲೆಯ ಸುದ್ದಿಯಿಂದ ಆರಂಭವಾಗುತ್ತದೆ. ಮರ್ಡರ್ ಮಿಸ್ಟರಿ ಎಂದುಕೊಂಡರೇ ತಪ್ಪಾಗುತ್ತದೆ. ಮರ್ಡರ್ನ ಸುತ್ತಲೂ ಬರುವ ರಾಜಕೀಯ ಮತ್ತು ರಾಜಕೀಯೇತರ ವಿಷಯಗಳಲ್ಲದೇ ಈ ಪುಸ್ತಕದಲ್ಲಿ ಧಾರ್ಮಿಕ ಚಿಂತನೆಗಳಿವೆ, ಜಿಜ್ಞಾಸೆಗಳಿವೆ, ಮತಾಂಧರ ವಿರುದ್ಧ ಕರೆಗಳಿವೆ, ಸಾವು ನೋವುಗಳಿವೆ, ಸೋತ ಪ್ರೀತಿಯಿದೆ, ಅನೈತಿಕ(?) ಸಂಬಂಧಗಳಿವೆ ಹಾಗೂ ಪ್ರೇಮಿಗಳೂ ಇದ್ದಾರೆ. ಇಷ್ಟೆಲ್ಲಾ ತಿರುವು ಮತ್ತು ಹರವುಗಳಿರುವುದಕ್ಕೆ ಪುಸ್ತಕಕ್ಕೆ "ನದಿಯ ನೆನಪಿನ ಹಂಗು" ಎಂದು ಹೆಸರಿಟ್ಟರಾ?
ರಘುನಂದನ, ಆನಂದ, ಸೋಮಯಾಜಿ, ವೀಣಾ ಸರಸ್ವತಿ, ನಾಗೇಶ್ ಮಯ್ಯ, ಸುಗಂಧಿ ಮತ್ತು "ಇನ್ನೊಂದು ಪಾತ್ರ" ಪುಸ್ತಕದ ಮುಖ್ಯ ಭೂಮಿಕೆಯಲ್ಲಿ ಬರುತ್ತವೆ. ಆನಂದನ ಪ್ರೇಯಸಿ ಸುಗಂಧಿ ಕಾಡುತ್ತಾಳೆ. ಅವಳ ಚೆಲುವಿಗೋ ಅಥವಾ ಅವಳ ಕಥೆಗೋ ಕಾಣೆ, ಅವಳು ಪುಸ್ತಕದುದ್ದಕ್ಕೂ ಕಾಡುತ್ತಾಳೆ. ಆನಂದ ಬ್ರಾಹ್ಮಣ ಮತ್ತು ಸುಗಂಧಿ ಕೆಳಜಾತಿಯವಳು. ಜಾತಿಯೇ ಹೆಚ್ಚಾಯಿತಾ? ಪ್ರೀತಿಗಿಂತಲೂ? ದೇವರ ಮೇಲೆ ಭಕ್ತಿ ಇದೆಯಾ ಅಥವಾ ಭಯಗಳಿವೆಯಾ ಎಂಬ ಪ್ರಶ್ನೆಯೊಂದನ್ನು ಕೇಳುತ್ತಲೆ ಹೋಗುತ್ತಾಳೆ. ಮನ ಮೆಚ್ಚುವುದಕ್ಕೂ ನೈತಿಕ ಅನೈತಿಕದ ಹಂಗುಗಳಿದೆಯಾ. ನನಗಂತೂ ಇಲ್ಲ. ಸುಗಂಧಿಗೆ? ಆನಂದನಿಗೆ? ಸೋಮಯಾಜಿಗೆ?
ಜಾತಿ ಮತ್ತು ರೂಢಿಯ ಕುರಿತು ಬಂದಿರುವ ವಿಷಯಗಳು ಕೂಡ ಅತೀವವಾದ ಚಿಂತನೆಗಳಿಗೆ ಎಡೆಮಾಡಿಕೊಟ್ಟಿವೆ. ಸಾಂಸ್ಕೃತಿಕವಾಗಿ ಬದಲಾವಣೆಗಳಾಗಿವೆ. ತಂದವರು ಯಾರು? ತಂದವರ ವಿರುದ್ಧ ಸಂಪ್ರದಾಯ ನಿಷ್ಠ ಸಮಾಜದ ಧೋರಣೆಗಳೇನಾಗಿದ್ದವು ಎಂಬುದರ ಬಗ್ಗೆಯೂ ಉಲ್ಲೇಖಗಳಿವೆ.
ಎಲ್ಲ ನದಿಗಳಿಗೂ ಕಡಲು ಇರುವುದಿಲ್ಲ - ಎಲ್ಲದಕ್ಕೂ ಅಂತ್ಯವಿಲ್ಲ. ಅಂತ್ಯವಿದ್ದರೂ ಅದು ಕೇವಲ ನೆಪವಾಗಿರುತ್ತದೆ. ಕಣ್ಣೆದರು ಯಾವುದೋ ಒಂದು ವಿಷಯವಿಲ್ಲ ಎಂಬ ಮಾತ್ರಕ್ಕೆ ಅದು ನೆನಪಿನಿಂದ ಜಾರಿದೆ ಅಂತಲ್ಲ. ಅವು ಕಾಡುವುದು ನಿಲ್ಲಿಸಿರುತ್ತವೆ ಅಂತಷ್ಟೇ. ಆದರೆ ಒಂಟಿ ಕ್ಷಣಗಳಲ್ಲಿ ಕಾಡದೇ ಇರುವುದಿಲ್ಲ. ಒಮ್ಮೆಲೆ ಒತ್ತರಿಸಿಕೊಂಡು ಬರುತ್ತವೆ. ಏಕೆ ಈ ಮಾತು? ಉತ್ತರ ಪುಸ್ತಕದಲ್ಲಿ.
ಅಂದ ಹಾಗೇ, ಏನಾದಳು ಸುಗಂಧಿ? ನಿರಂಜನನ್ನು ಕೊಂದವರು ಯಾರು? ಕೊಲೆಯೋ ಆತ್ಮಹತ್ಯೆಯೋ? ಇಷ್ಟು ಕುತೂಹಲವನ್ನು ಮೊದಲಿಗೆ ಹುಟ್ಟಿಸಿ ಜೋಗಿಯವರು ಮುಂದಿನ ಭಾಗವನ್ನು ಸರಾಗವಾಗಿ ಓದಿಸಿಕೊಂಡಿದ್ದಾರೆ. ಸಮಯ ಮಾಡಿಕೊಂಡು ಓದಿ.
ಎಂದಿನಂತೆ ನೀವು ಈ ಪುಸ್ತಕವನ್ನು ಈಗಾಗಲೇ ಓದಿದ್ದರೆ ನಿಮ್ಮ ಅಭಿಪ್ರಾಯವನ್ನು ನನ್ನೊಂದಿಗೂ ಹಂಚಿಕೊಳ್ಳಿ!!!
ಕಳೆದೊಂದು ತಿಂಗಳಿಂದ ‘ಮಾಟಗಾತಿ’ ‘ಅಘೋರಿಗಳ ನಡುವೆ’ ‘ಬಿದಿರಿನ ಗಳ’ - ಇಂತಹ ಕಾದಂಬರಿಗಳನ್ನು ಓದಿ ಕ್ಷುದ್ರ ಲೋಕದ ಭಯಾನಕತೆಯೇ ಮನಸ್ಸನ್ನು ಆವರಿಸಿತ್ತು. ಮನಸ್ಸನ್ನು ಮತ್ತೆ ಹದ ಮಾಡಲು ಒಂದು ಒಳ್ಳೆಯ ಪುಸ್ತಕದ ಹುಡುಕಾಟದಲ್ಲಿದ್ದ ನನ್ನನ್ನು ಆಕರ್ಷಿಸಿದ್ದು ಜೋಗಿಯವರ ‘ನದಿಯ ನೆನಪಿನ ಹಂಗು’ ಎಂಬ ಕಾದಂಬರಿ. . ಉಪ್ಪಿನಂಗಡಿ ಗುರುವಾಯನಕೆರೆಯಲ್ಲಿ ನಡೆಯುವ ಈ ಕಥೆಯಲ್ಲಿ ಕ್ರಾಂತಿಯಿದೆ ,ಹೋರಾಟವಿದೆ, ಉತ್ಕಟ ಪ್ರೀತಿಯಿದೆ. ನಿರಂಜನನ ಕಣ್ಮರೆಯೊಂದಿಗೆ ಆರಂಭವಾಗುವ ಕಥೆ - ನಿರಂಜನ ಪ್ರತ್ಯಕ್ಷವಾಗುವಲ್ಲಿಗೆ ಕೊನೆಯಾಗುತ್ತದೆ. ಈ ನಡುವೆ ಬರುವ ಸ್ವಾಮೀಜಿ, ಪರಿಸರ ಪ್ರೇಮಿ ಕ್ರಾಂತಿಕಾರಿ ಆನಂದ, ಕಾಡುವ ಸುಗಂಧಿ , ನಕ್ಕು ಮಂಕಾದ ನರ್ಮದೆ, ಬದುಕಿನೊಂದಿಗೆ ಹೋರಾಡುವ ಸೋಮಯಾಜಿಗಳು,ಗಟ್ಟಿ ಕುಳ ರಘು ನಂದನ - ಹೀಗೆ ಹಲವು ದುರಂತ ಪಾತ್ರಗಳು ನೇತ್ರಾವತಿಯ ಉಪ ನದಿಗಳಂತೆ ಮಹತ್ವವಹಿಸುತ್ತದೆ. . ಆನಂದ ಸುಗಂಧಿಯ ರ ದುರಂತ ಅಂತ್ಯವಂತೂ ಅತ್ತಣ ಪುಸ್ತಕವನ್ನು ಬದಿಗಿಟ್ಟು ಚಿಂತಿಸುವಂತೆ ಬಿಡುವಂತೆ ಮಾಡಿತು. ರಘುನಂದನ - ನರ್ಮದೆ ಯ ಕಥೆಯಂತೂ ಘೋರ ವಿಧಿಯಾಟ. ರಘುವಿನ ಮೇಲೆ ಅನುಕಂಪ ಮೂಡಿದ್ದು ಕಥೆಯು ಸೃಷ್ಟಿಸಿದ ಮ್ಯಾಜಿಕ್ ಗೆ ಸಾಕ್ಷಿ ! . ನೇತ್ರಾವತಿ - ಕುಮಾರಧಾರಾ ನದಿಯ ಸಂಗಮದ ಉಲ್ಲೇಖ, ನನ್ನ ಮಾವ ಹೇಳಿದ ಸಂಗಮದ ಕಥೆಯನ್ನು ಮತ್ತೆ ನೆನಪಿಸಿತು. ಕಾದಂಬರಿ ಓದುತ್ತಾ ಅಲ್ಲೆಲ್ಲೋ ಉಪ್ಪಿನಂಗಡಿಯ ಬೀದಿಯಲ್ಲಿ ನಡೆದಾಡಿದ ಅನುಭವವಾಗಿದೆ. ಅಲ್ಲಿಯ ಸಹಸ್ರ ಲಿಂಗೇಶ್ವರ ದೇವಾಲಯದ ಆವರಣದಲ್ಲಿ , ನೇತ್ರಾವತಿಯ ನೋಡುತ್ತಾ ಕಾದಂಬರಿ ಓದಿದ್ದರೆ ಚೆಂದಿತ್ತೇನೋ !