‘ಅನಾರ್ಕಲಿಯ ಸೇಫ್ಟಿಪಿನ್’ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಕತಾ ಸಂಕಲನ. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಸಂಕಲನದಲ್ಲಿ ಜಯಂತ ಕಾಯ್ಕಿಣಿ ಅವರ ವಿಭಿನ್ನ ಕತೆಗಳು ಸಂಕಲನಗೊಂಡಿವೆ. ಇಲ್ಲಿ ಕುತನಿ ಕುಲಾವಿ, ಭಾಮೆ ಕೇಳೊಂದು ದಿನ, ಬೆಳಕಿನ ಬಿಡಾರ, ವಾಯಾ ಚಿನ್ನದ ಕೇರಿ, ಎವರ್ ಗ್ರೀನ್, ಕಾಗದದ ಚೂರು, ಹಲೋ..ಮೈಕ್ ಟೆಸ್ಟಿಂಗ್, ಅನಾರ್ಕಲಿಯ ಸೇಫ್ಟಿಪಿನ್ ಹಾಗೂ ಮೃಗನಯನಾ ಎಂಬ ಒಂಬತ್ತು ಕತೆಗಳು ಸಂಕಲನಗೊಂಡಿದ್ದು, ಕಾಯ್ಕಿಣಿಯವರ ಪದ್ಯಗಳಷ್ಟೇ ಈ ಕಥೆಗಳು ಆಪ್ತವಾಗಿ ಓದುಗರನ್ನು ಹಿಡಿದಿಡುತ್ತವೆ.
Jayanth Kaikini is an Indian poet, short stories author and a lyricist working in Kannada cinema. ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು.[೩] ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ,ಸಂಭಾಷಣೆಗಾರನಾಗಿ, ಅಂಕಣಕಾರ ನಾಗಿ, ನಾಟಕಕಾರನಾಗಿ, ಕಥೆಗಾರನಾಗಿ, ಮತ್ತು ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.
ಕಥೆ ಕಟ್ಟುವುದಕ್ಕೆ ಬಹುತೇಕ ಕಥೆಗಾರರಲ್ಲಿ ಒಂದು ಅಲಿಖಿತ ಸೂತ್ರವೊಂದಿದೆ... ಕಥೆಯ ಆದಿ, ಪಾತ್ರ ಪರಿಚಯ, ಕಥೆಯನ್ನು ಪೋಷಿಸಿ ಬೆಳೆಸುವುದು , ನಂತರ ಅದಕ್ಕೊಂದು ಅಂತ್ಯವೊಂದನ್ನು ಕೊಡುವುದು... ಇದು ಸೂತ್ರ... ಈ ಸೂತ್ರದ ಪ್ರತಿಮೆಯನ್ನು ಹೊಡೆದು ತಮ್ಮದೆ ಶೈಲಿಯ ಅಂಕು ಡೊಂಕಾದ ಪ್ರತಿಮೆಯ ರೂಪದಲ್ಲಿ ಕಟ್ಟಿ ಓದುಗನಿಗೆ ಮತ್ತೆಂತದೋ ಸುಖ ಅನುಭವ ಕೊಡುವ ವಿಚಿತ್ರ ಧೈರ್ಯ ಜಯಂತ ಕಾಯ್ಕಿಣಿರವರಿಗೆ ಇದೆ.
ಇವರ ಬಹುತೇಕ ಕಥೆಗಳಿಗೆ ಆದಿಯು ಇಲ್ಲ, ಅಂತ್ಯವಂತೂ ಮೊದಲೇ ಇಲ್ಲ... ಆದರೂ ಇಷ್ಟವಾಗುತ್ತವೆ, ಕಾರಣ ಆ ಕಥೆಗಳ ಅಲಂಕಾರ ಮತ್ತು ಕಥಾ ವಿವರ.... ಬಿಸಿಲುಕೋಲು ನಮಗೆ ಬಿಸಿಲುಕೋಲಾಗೆ ಕಾಣುತ್ತದೆ, ಆದರೆ ಜಯಂತರಿಗೆ ಅದು ಯಾರೋ ಛಾವಣಿಗೆ ಹೊದಿಸುವ ಹಂಚಿನಿಂದ ಬ್ಯಾಟರಿ ಬಿಟ್ಟಂತೆ ಕಾಣುತ್ತದೆ, ಗೋಡೆಯ ಮೇಲೆ ಗಾಳಿಗೆ ಕ್ಯಾಲೆಂಡರ್ ಮೂಡಿಸುವ ಕಲೆಯ ವಿವರ ಕೊಡುವ ಕಥೆಗಾರ, ಇಷ್ಟವಾಗದೆ ಇರಲು ಸಾಧ್ಯವೇ ಇಲ್ಲ...
ನೂರಾರು ಕಥೆಗಳನ್ನು ಓದಿರುವ ನನ್ನಂತ ಅಲ್ಪನಿಗೆ ನೆನಪಿಗೆ ಕೂರುವುದು ಹತ್ತಾರು ಕಥೆಗಳಷ್ಟೇ, ಅದರಲ್ಲಿ 8-9 ಕಥೆಗಳು ಜಯಂತರದಾಗಿರುತ್ತದೆ(ಉದಾ: ಅಮೃತಬಳ್ಳಿ ಕಷಾಯ, ನೀರು, ಸೇವಂತಿ ಹೂವಿನ ಟ್ರಕ್ಕೂ, ತುಫಾನ್ ಮೆಲ್,ನೊ ಪ್ರೆಸೆಂಟ್ಸ್ ಪ್ಲೀಸ್, ಬಣ್ಣದ ಕಾಲು)... ಅಂತಹ ಮೇರು ಕಥಾ ಪ್ರೌಢತೆ ಇವರ ಕಥೆಗಳದ್ದು... ಇಲ್ಲಿ ಅದು ಮುಂದುವರೆದು ಗೆದ್ದಿದೆ.. ಇತ್ತೀಚಿನ 8 ವರ್ಷಗಳಲ್ಲಿ ಅವರು ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ಬರೆದ 9 ಕಥೆಗಳ ಸಂಕಲನ ಈ ಕೃತಿ....ಮಳೆ ನೀರಿಗೆ ಮಣ್ಣಿನಲ್ಲಿ ಹುಟ್ಟುವ ಪರಿಮಳದಷ್ಟೇ ಹಿತ ಅನುಭವ ಕೊಡುವ ಸಂಕಲನ....
ಇಲ್ಲಿನ ಕಥೆಗಳಲ್ಲಿ ಮುಖ್ಯವಾಗಿ ಕಾಣುವುದು ಮಧ್ಯಮ ವರ್ಗದ ಸಂಸಾರಿಗಳ ಜೀವನ ಮತ್ತು ಇಲ್ಲಿನ ಎಲ್ಲ ಕಥೆಗಳಲ್ಲಿ ಊರು ಕೇರಿಗಳು ಕಥೆಗಳ ಬಹು ಮುಖ್ಯ ಪಾತ್ರವಾಗಿ ಸುತ್ತಮುತ್ತಲಿನ ವಾತಾವರಣದ ವಿವರ ಕಥೆಗೆ ನೇರವಾಗಿ ಸಂಬಂಧಿಸಿರುತ್ತದೆ.
ಮತ್ತೆ ಇನ್ನೆಷ್ಟು ವರ್ಷ ಕಾಯಬೇಕೋ ಮತ್ತೊಂದು ಗುಚ್ಛಕ್ಕೆ....
ಯಾವುದೇ ಒಂದು ಪುಸ್ತಕವನ್ನು ಓದುವಾಗ ಆ ಕಥನದೊಳಗೋ, ಕಥೆಯ ಯಾವುದೇ ಒಂದು ಪಾತ್ರದೊಳಗೆ ಅಥವಾ ಇಡೀ ಕಥೆಯ ಒಳಗೆ ಓದುಗ ಇಳಿದಿರುತ್ತಾನೆ. ಈ ಕೃತಿಯನ್ನು ಓದುತ್ತಿರುವಾಗ ಅನಿಸಿದ್ದು ಏನೆಂದರೆ ಈ ಕಥೆಗಳಲ್ಲಿರುವ ಪಾತ್ರಗಳು, ಸನ್ನಿವೇಶಗಳು, ಕಥೆ ನಡೆಯುವ ಪರಿಸರಗಳು ನಮ್ಮೊಳಗೆ ಇಳಿದು ಬಿಟ್ಟು ನಮ್ಮದೇ ಕಥೆಗಳಾತ್ತವೆ. ನಮಗೆ ತಿಳಿಯದೆಯೇ ನಮ್ಮೊಳಗೊಂದು ಕಥೆ ಹುಟ್ಟಿದಂತೆ ಭಾಸವಾಗುತ್ತದೆ. ಇಲ್ಲಿಯವರೆಗೆ ಕಾಣಲಾಗದಿದ್ದ ಅಮ್ಮ ಅಪ್ಪ ನಮ್ಮೊಳಗೆ ಕಾಣಲಾರಂಭಿಸುತ್ತಾರೆ. ದಿನಾ ಕಾಣುವ ಟ್ಯಾಕ್ಸಿ ಡ್ರೈವರ್ ಹೊಸಬನಂತೆ ಕಾಣುತ್ತಾನೆ. ಅಷ್ಟೇ ಯಾಕೆ ವಾಸವಿರುವ ಮನೆಯ ಒಂದು ಮೂಲೆ ಇದುವರೆಗೆ ನೀನು ನನ್ನನ್ನು ಗಮನಿಸಲೇ ಇಲ್ಲವಲ್ಲ ಎಂದು ಅಣಕಿಸಿದಂತೆ ಭಾಸವಾಗುತ್ತದೆ. ಜೀವನದ ಭಾಗವೇ ಆಗಿದ್ದರೂ ಅಷ್ಟಾಗಿ ಗಮನಿಸದ ಹೊಸ ಲೋಕವನ್ನೇ ತೋರಿಸುತ್ತಾರೆ ಜಯಂತ ಕಾಯ್ಕಿಣಿ ಅವರು…..
ಈ ಕಥಾ ಸಂಕಲನದ ಎಲ್ಲಾ ಕಥೆಗಳೂ ಬಹಳ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಮಧ್ಯಮ ವರ್ಗದ ಜನರ ಬದುಕು, ಹೈಸ್ಕೂಲು ಓದುತ್ತಿರುವ ನವ ತರುಣರು, ಕಾಲೇಜು ಮುಗಿಸಿ ಊರಲ್ಲೇ ನೆಲೆನಿಂತು ಕಾಳಜಿ ತೋರುವ ಯುವಕರು, ಬೆಂಗಳೂರು ಸೇರಿದ ಎಲ್ಲಿಯೂ ಸಲ್ಲದ ಇಂಜಿನಿಯರುಗಳು, ಪಕ್ಕದ ಮನೆಯ ಟ್ಯಾಕ್ಸಿ ಡ್ರೈವರ್, ಗೋಕರ್ಣ ಬೆಂಗಳೂರು ಮುಂಬಯಿ ಶಹರಗಳೇ ಇಲ್ಲಿನ ಕಥೆಗಳ ಜೀವಾಳ. ಕಾಯ್ಕಿಣಿ ಅವರು ಕಟ್ಟಿಕೊಡುವ ದಿನಚರಿಯ ಸೂಕ್ಷ್ಮಾತಿಸೂಕ್ಷ್ಮ ವಿವರಗಳು, ಅರೇ…. ನಾವು ಬದುಕಿನ ಹೋರಾಟ ಹುಡುಕಾಟ ಮತ್ತು ಹಾರಾಟಗಳಲ್ಲಿ ಎಂತಹಾ ಅಮೂಲ್ಯವಾದ ಘಳಿಗೆಗಳನ್ನು ಮಣ್ಣುಪಾಲು ಮಾಡಿ ಇನ್ನೆಲ್ಲೋ ಹುಡುಕುತ್ತಿರುವೆವಲ್ಲಾ ಎಂಬ ಭಾವನೆಯನ್ನು ಮೂಡಿಸುತ್ತದೆ.
ಚಲಿಸುತ್ತಿದ್ದ ಬಸ್ಸೊಂದು ಗಕ್ಕನೆ ನಿಂತು ಪ್ರಯಾಣಿಕರು ತಮ್ಮ ತಮ್ಮ ಗಮ್ಯವನ್ನು ಸೇರಿದಂತೆ ಇಲ್ಲಿನ ಕಥೆಗಳು ಮುಕ್ತಾಯವಾಗುತ್ತವೆ. ಪಾತ್ರಗಳು ಅದಲು ಬದಲಾಗಬಹುದು, ಆದರೆ ಪಯಣ ಮತ್ತೆ ಮುಂದುವರಿಯುತ್ತದೆ. ಮತ್ತೊಂದು ಹೊಸ ಕಥೆ, ಹೊಸ ಜೀವನ ಅಲ್ಲಿಂದ ಪ್ರಾರಂಭವಾಗಿರುತ್ತದೆ, ಕಥೆಗೆ ಕೊನೆಯೇ ಇಲ್ಲದಂತೇ…..
'ಬೆಳಕಿನ ಬಿಡಾರ' 'ಎವರ್ ಗ್ರೀನ್' ಮತ್ತು 'ಭಾಮೆ ಕೇಳೊಂದು ದಿನ' ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ನಾನು ಸೂಚಿಸುವುದು ಕಾಯ್ಕಿಣಿ ಅವರ ಪುಸ್ತಕಗಳು. ಎಂತಹವರಿಗೂ ಓದುವ ಆಸಕ್ತಿಯನ್ನು ಕೆರಳಿಸುವ ಶಕ್ತಿ ಅವರ ಬರಹಗಳಿಗಿದೆ.
ಮಕ್ಕಳು ಇಷ್ಟವಾದ ಚಾಕಲೇಟನ್ನು ಸ್ವಲ್ಪ ಸ್ವಲ್ಪವೇ ತಿಂದು ನಾಳೆಗೂ ಇಡುವ ಆಸೆಯಲ್ಲಿ, ತಿನ್ನಲಾರದೇ ಇಟ್ಟುಕೊಳಲ್ಲು ಆಗದೇ ಪೇಚಾಡುವಂತೆ ಈ ಪುಸ್ತಕ ಓದಿದರೆ ಮುಗಿದು ಬಿಡುತ್ತಲ್ಲಾ ಅನ್ನುವ ಮನಸ್ಥಿತಿಯಲ್ಲೇ ಓದಿಸಿಕೊಂಡು ಹೋಯಿತು. ಕೆಲವು ಕತೆಗಳನ್ನು ಹಲವು ಬಾರಿ ಓದಿದೆ. ಬರುವ ರೂಪಕಗಳನ್ನೇ ಮತ್ತೆ ಮತ್ತೆ ಓದಿ ಸಂಭ್ರಮಿಸಿದೆ. ಕಾಯ್ಕಿಣಿಯವರ ಕತೆಗಳು, ಪಾತ್ರಗಳು ಸದಾ ಮನಸ್ಸಲಿ ಉಳಿಯುತ್ತವೆ. ಈ ಸಂಕಲನ ಅದಕ್ಕೆ ಹೊರತಲ್ಲ. ಪಾತ್ರಗಳಿಗೆ ಚೆಂದ ಚೆಂದದ ಹೆಸರುಗಳಿವೆ. ಪ್ರತಿ ಕತೆಯೂ ಈ ಸಂಕಲನದ ಬೆಸ್ಚ್ ಕತೆ ಇದೇ ಅಂತ ಅನಿಸುಹಾಗಿದೆ. ನನಗೆ ಅನಾರ್ಕಲಿಯ ಸೇಫ್ಟಿ ಪಿನ್ನು ಹಾಗೂ ಭಾಮೆ ಕೇಳೊಂದು ದಿನ ಮೆಚ್ಚುಗೆ ಆಯ್ತು. ಚಾರ್ ಮಿನಾರ್ ಓದಿ ಸ್ವಲ್ಪ ನಿರಾಸೆ ಆಗಿತ್ತು. ಆದರೆ ಈ ಪುಸ್ತಕ ನಿರೀಕ್ಷೆ ಮೀರಿತ್ತು. ಮತ್ತೆ ಮತ್ತೆ ಓದ ಬಹುದಾದ ಸಿಹಿ ಮಿಠಾಯಿ. ಒಮ್ಮೆ ಸವಿದು ನೋಡಿ
ಈ ವರ್ಷ ಓದಿದ ಕೊನೆ ಪುಸ್ತಕ. ಒಳ್ಳೆ ಪುಸ್ತಕದಿಂದ ವರ್ಷ ಮುಗಿಸುತ್ತ ಇದ್ದೀನಿ ಅನ್ನೋ ಖುಷಿ ಇದೆ.
ಪ್ರತಿ ಕಥೆಯೂ ಚೆನ್ನಾಗಿದೆ. ಪ್ರತಿ ಕಥೆ ಓದಿದಾಗ oh ಇದೆ best ಅನ್ಸತ್ತೆ (ಈ ರೀತಿ ನಂಗೆ ಎಲ್ಲಾ ಕಥೆಗೂ ಅನ್ನಿಸಿತು 😜)
ಪ್ರತಿ ಕಥೆಯ ಪಾತ್ರಧಾರಿಯ ಹೆಸರು ತುಂಬಾ different ಆಗಿ ಇದೆ. Infact ಕಥೆ ಅಲ್ಲಿ ಬಂದಿರೋ ಹೆಚ್ಚಿನ ಪಾತ್ರಗಳ ಹೆಸರನ್ನ ವ್ಯಕ್ತಿಗೆ ಇಟ್ಟಿದು ನಂಗೆ ಗೊತ್ತೇ ಇಲ್ಲ.ಇವರ ಕಥೆಗಳಲ್ಲಿ ಬರೀ ವ್ಯಕ್ತಿ ಅಲ್ಲದೆ ಸುತ್ತಮುತ್ತಲ ಜಾಗ, ವಸ್ತು, ಪ್ರಕೃತಿ ಎಲ್ಲವೂ ಪಾತ್ರವಾಗತ್ತೆ. ಇವರ ಕಥೆಯ ಮಜಾ ಓದಿಯೇ ಸವಿಯಬೇಕು, ಯಾಕಂದ್ರೆ ಅದನ್ನ ಹೇಳೋಕೆ/ವಿವರಿಸೋಕೆ ಹೋದ್ರೆ ಆಗೋದೇ ಇಲ್ಲ.
ಇದು ನಾನು ಓದಿದ ಕಾಯ್ಕಿಣಿರವರ ಮೊದಲ ಕೃತಿ, ಒಟ್ಟಾಗಿ ೯ ಕತೆಗಳನ್ನು ಒಳಗೊಂಡಿದೆ, ಒಂದೊಂದು ಕಥೆಯೂ ಅದ್ಭುತವಾಗಿದೆ ಹಾಗು ಕಥೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವಂತಹುದೆ ಆಗಿವೆ. ಅದರಲ್ಲೂ ಸಹ *ಭಾಮೆ ಕೇಳೊಂದು ದಿನ, ಬೆಳಕಿನ ಬಿಡಾರ, ವಾಯಾ ಚಿನ್ನದ ಕೇರಿ, ಅನಾರ್ಕಲಿಯ ಸೇಫ್ಟಿಪಿನ್* ೨ಬಾರಿ ಓದಿ ಖುಷಿಪಟ್ಟೆ, ಅಷ್ಟು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ ಹಾಗು ಅವರ ಬರೆಯುವ ಶೈಲಿ ತುಂಬಾನೆ ಇಷ್ಟವಾಯಿತು.
ನಾವು ಸದಾ ಕಾಣುವ ನಮ್ಮ ಸುತ್ತಮುತ್ತಲಿನವರ ಮನುಷ್ಯರ ಮನಸನ್ನು ಗ್ರಹಿಸಿ ಅವರ ಕಥೆಯನ್ನು ಕಾಯ್ಕಿಣಿರವರು ಸೊಗಸಾಗಿ ಹೇಳುವ ರೀತಿ ಬೆರಗುಗೊಳಿಸುತ್ತದೆ. ಚಿಕ್ಕಂದಿನಿಂದ ಒಂದೇ ಊರಲ್ಲಿ ಬೆಳೆದು ತಂದೆಗೆ ಕೆಲಸದ ಮೇರೆ ಮುಂಬಯಿಗೆ ವರ್ಗವಾದಾಗ ಆ ಹಳ್ಳಿಯನ್ನು ಹಾಗು ಮಿತ್ರರನ್ನು ಬಿಟ್ಟು ಹೋಗುವಾಗ ಆಗುವ ಸಂಕಟ ಹಾಗು ಆತನು ಓದಿ ಒಳ್ಳೆ ಹುದ್ದೆಯಲ್ಲಿದ್ದು ಕೆಲಸದ ಮೇರೆಗೆ ತನ್ನ ಊರಿಗೇ ಬಂದು ತಾನು ವಾಸಿಸುತ್ತಿದ್ದ ಮನೆಯನ್ನು, ಊರಿನ ಗೆಳೆಯರನ್ನು ಪುನಃ ಕಂಡಾಗ ಆಗುವ ಖುಷಿ.
ದಿನ ಬೆಳಿಗ್ಗೆ ಮನೆ ಮನೆಗೂ ಸುದ್ಧಿ ತಲುಪಿಸುವ ಅಂದರೆ ಪೇಪರ್ ಹಾಕುವ ಹುಡಗನಿಗೆ ತಾನು ಹಾಕುವ ಪೇಪರ್ ರಿಂದ ಸುದ್ಧಿ ತಿಳಿಯುವ ಜನರನ್ನು ಕಂಡು ಆ ಪೇಪರ್ ನಲ್ಲಿ ಏನಿರುವುದೆಂಬ ಕುತೂಹಲದಿಂದ ತಾನೂ ಓದಿದಾಗ ಆಗುವ ಖುಷಿ, ಹಾಗೆ ಯಾರೋ ಒರ್ವ ಮನೆಯವರು ಹೊಸದಾಗಿ ಖರಿದಿಸಿದ ಶೂಷ್ ತಮ್ಮ ಕಾಲಿಗೆ ಆಗದೇ ಇದ್ದಾಗ ಪೇಪರ್ ಹಾಕುವ ಹುಡುಗನಿಗಾದರೂ ಉಪಯೋಗವಾಗಲೆಂದು ಕೊಟ್ಟಾಗ ಆ ಶೂಷ್ ಧರಿಸಿ ಊರೂರು ಅಲೆದು ತನ್ನ ಮಿತ್ರರಿಗೆ, ಮನೆಯವರಿಗೆ ತೋರಿಸುತ್ತಾ ಖುಷಿ ಪಡುವ ಪ್ರಸಂಗಗಳು ಅತ್ಯದ್ಭುತವಾಗಿದೆ.
ತಾಳೆಮದ್ದಲೆಯೇ ಜೀವನವೆಂದು ಗೋಕರ್ಣದಲ್ಲಿ ವಾಸಿಸುವ ತಂದೆ ತನ್ನ ಮಗನ ಬಗ್ಗೆ ಮಿತ್ರರ ಬಳಿ ತನ್ನ ಮಗನು ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿಕೊಂಡು, ಒಳ್ಳೆ ಉದ್ಯೋಗ ಮಾಡುತ್ತಿರುವನೆಂದು ಹೆಮ್ಮೆಯಿಂದ ಹೇಳಿಕೊಂಡಾಗ ತನ್ನ ಮಗನ ಕೀರ್ತಿಯನ್ನು ಸಾರುತ್ತಾ ಖುಷಿ ಪಡುವುದನ್ನು ಹಾಗು ಒಮ್ಮೆ ತಾಳೆಮದ್ದಲೆ ನಡೆಸಿಕೊಡುವುದಕ್ಕಾಗಿ ಬೆಂಗಳೂರಿಗೇ ಬಂದಾಗ ಬೆಂಗಳೂರಿನಂತ ಮಹಾನಗರವನ್ನು, ಮಗನ ಮನೆಯನ್ನು ಕಂಡು ಬೆರಗಾಗುವ ತಂದೆ ತಾಯಿಯರ ಕಥೆ ಓದಿದಾಗ ನಮ್ಮ ಕುರಿತು ಸದಾ ಪ್ರೀತಿ ತೋರಿಸುವ ನಮ್ಮ ತಂದೆ ತಾಯಿಯರು, ಅವರು ಎಲ್ಲೇ ಇರಲಿ ನಮಗೆ ಖಂಡಿತ ನೆನಪಾಗುತ್ತಾರೆ ಅಷ್ಟು ಆಳವಾಗಿ ಈ ಭಾಮೆ ಕೇಳೊಂದು ದಿನ ಕಥೆಯನ್ನು ಓದುವಾಗ ಮಗ್ನರಾಗಿ ಬಿಡುತ್ತೇವೆ.
ಬಟ್ಟೆ ಒಗೆಯುವುದು, ಅದನ್ನು ಇಸ್ತ್ರೀ ಮಾಡಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೊರಡುವವರಿಗೆ ತಲುಪಿಸುತ್ತಾ ಜೀವನ ನಡೆಸುವ ತಂದೆಗೆ ತನ್ನ ಮಗನಾದರೂ ಓದಿ ಮುಂದೆ ಬರಬೇಕೆಂಬ ಆಸೆ ಆಕಾಂಕ್ಷೆ, ಮಗ ಕೆಲಸಕ್ಕೆ ಅಂತ ಮುಂಬಯಿಗೆ ಹೋದಾಗ ಸುಮಾರು ವರ್ಷಗಳಾದರೂ ಊರಿಗೆ ಮರಳದಿದ್ದಾಗ ಆತನನ್ನು ಕಾಣಲು ಹೋದ ತಂದೆ ತನ್ನ ಮಗ ಸಿನಿಮಾ ಸ್ಟೂಡಿಯೋದಲ್ಲಿ ಕೆಲಸ ಮಾಡುತ್ತಿರುವುದನ್ನು ಕಂಡು ಸಮಾಧಾನ ಪಟ್ಟುಕೊಳ್ಳುತ್ತಾನೆ, ಹೀಗೆ ತಾನು, ತನ್ನ ಮಗ ಹಾಗ ಆತನ ಮಿತ್ರರೆಲ್ಲಾ ಸೇರಿ ಮುಂಬಯಿಯಲ್ಲಿ ಹಲವಾರು ಟೂರಿಷ್ಟ್ ಸ್ಥಳಗಳನ್ನು ವೀಕ್ಷಿಸಿದಾಗ, ಬಟ್ಟೆ ಓಗೆಯುವುದೇ ತನ್ನ ವೃತ್ತಿಯಾದ್ದರಿಂದ ದೋಬೀಘಾಟ್ ನೋಡಿದಾಗ ಖುಷಿಯಾಗುತ್ತದೆ,ಆತನಿಗೆ ದೋಬೀಘಾಟ್ ಅಸಂಖ್ಯ ಬಟ್ಚೆಗಳನ್ನು ಒಗೆಯುವ ಕಾಶಿಯಂತೆ ಕಾಣುತ್ತದೆ.
ಸಿನಿಮಾದಲ್ಲೇ ನಟಿಸಿಬೇಕು ಎಂಬ ಹಟವಿಟ್ಟುಕೊಳ್ಳದೆ ಸೀರಿಯಲ್ ಆದರೂ ಸರಿ ತಮ್ಮ ಜೀವನವನ್ನು ನಡೆಸಬೇಕಾದಲ್ಲಿ ಅನಿವಾರ್ಯವೆಂದು ತಮ್ಮ ಜೀವನದಲ್ಲಿ ಎಷ್ಟೇ ಏರು ತಗ್ಗುಗಳಿದ್ದರೂ ನಿಜಜೀವನದಲ್ಲಿ ಅದನ್ನು ತೋರಿಸಿಕೊಳ್ಳಲಾಗದೆ ಸೀರಿಯಲ್ ನಲ್ಲಿ ನಟಿಸುವ ಇಬ್ಬರ ಗೆಳತಿಯರ ಮನಕುಲುಕುವ ಕಥೆಯನ್ನು ಕಾಣಬಹುದು. ಹಾಗು ಇವರುಗಳ ಮಧ್ಯ ಇದ್ದು ಸದಾ ಪಿಕಪ್ ಮಾಡಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಲುಪಿಸುವ ಟ್ಯಾಕ್ಸಿ ಡ್ರೈವರ್ ಕಥೆಗಳು ಕಾಣಿಸಿಕೊಳ್ಳುತ್ತವೆ. ಅನಿ ಚಮೇಲಿ ಇಬ್ಬರು ಗೆಳೆತಿಯರು ದೇವಗಡ ದ್ವೀಪವನ್ನು ಕಾಣಲು ಸಮುದ್ರದಲ್ಲಿ ಲಾಂಚಿನಲ್ಲಿ ಹೋಗುವಾಗ ಅಲ್ಲಿ ಗೆಳೆಯರು ನೀರಿನಲ್ಲಿ ಖುಷಿಯಾಗಿ ಆಟವಾಡುವುದನ್ನು ಕಂಡು ತನ್ನ ಹಾಗು ಚಮೇಲಿಯ ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಸಮುದ್ರವನ್ನು ನೋಡುತ್ತಾ ಮನಸ್ಸಿಗೆ ಆಗುವ ಸಮಾಧಾನ ಹಾಗು ಲಾಂಚ್ ನಡೆಸುವ ಹುಡುಗನ ಬಾಯಲ್ಲಿ ಅನಿ ಹೆಸರು ಅನಾರ್ಕಲಿ ಆದಾಗ ಪಟ್ಟ ಖುಷಿ ಅಷ್ಟಿಷ್ಟಲ್ಲ. ಹೀಗೆ ಒಂದೊಂದು ಕಥೆಯೂ ಅತ್ಯದ್ಭುತವಾಗಿದೆ. ಹಾಗು ನಮಗರಿವಿಲ್ಲದೇನೆ ಧಿಡೀರನೆ ಕಥೆಗಳು ಮುಕ್ತಯವಾಗುವ ರೀತಿಯೂ ಸಹ ಸೊಗಸಾಗಿದೆ. ಮುಕ್ತಯವಾದರೂ ಮತ್ತೊಂದು ಕಥೆಯಲ್ಲಿ ಪಾತ್ರಗಳು ಬೇರೆ ಆಗಬಹುದು ಆದರೆ ಅವೆಲ್ಲವೂ ನಮ್ಮ ಸುತ್ತಮುತ್ತಲಿನಲ್ಲಿ ತುಂಬ ಹತ್ತಿರದಲ್ಲಿ ನಡೆಯಯವಂತೆ ಭಾಸವಾಗುತ್ತದೆ. ಸಣ್ಣ ಕಥೆಗಳನ್ನು ಓದಲು ಇಷ್ಟ ಪಡುವವರು ಓದಲೇಬೇಕಾದ ಪುಸ್ತಕ.
ಸಿನಿಮಾ ಶೈಲಿಯ ಕತೆಗಳು ಇದಾಗಿದ್ದವು. ನಾನು ಇದುವರೆಗೂ ಓದಿರದ ಬರವಣಿಗೆ ಶೈಲಿಯಾಗಿತ್ತು. ಸ್ವಲ್ಪ ಕಷ್ಟಪಟ್ಟು ಓದಿದ ಪುಸ್ತಕ ಅನ್ನಬಹುದು..ಕಾರಣ ಆ ಸಾಹಿತ್ಯದ ಹೊಸತನ ಹಾಗೂ ವಿಭಿನ್ನತೆ. ಕಾಯ್ಕಿಣಿ ಸರ್ ಸಿನಿಮಾ ರಂಗದಲ್ಲಿ ಎಷ್ಟು ಪ್ರಮುಖರೋ, ಅಷ್ಟೇ ಪ್ರಾಮುಖ್ಯತೆ ಅವರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿದೆ ಎಂದು ನನಗೆ ಅರಿವಾಯಿತು. ಹೀಗೆ ಒಮ್ಮೆ ಸಪ್ನಾ ಬುಕ್ ಹೌಸ್ ಗೆ ಹೋದಾಗ ಸುಮ್ಮನೆ ಕೈಗೆತ್ತಿಕೊಂಡ ಪುಸ್ತಕವಿದು. ಕತೆಗಳು ಓದ್ತಾ ಹೋದಂತೆ ಒಂದು ಸಿನಿಮಾ ನೋಡಿದ ಅನುಭವವಾಗತ್ತೆ. ಕತೆಯೊಳಗೊಂದು ಕತೆ.. ಸರಿಯಾಗಿ ಗಮನವಿಟ್ಟು ಓದದೇ ಹೋದರೆ ಕಥಾ ಲೋಕದಲ್ಲಿ ದಾರಿ ತಪ್ಪುವುದಂತು ಖಂಡಿತ 😆 ಕರಾವಳಿ, ಅದರಲ್ಲೂ ಎಷ್ಟೊಂದು ಕತೆಗಳಲ್ಲಿ ನಮ್ಮೂರಿನ ಕುರಿತಾಗಿದ್ದಿದ್ದು ಬಹಳ ಖುಷಿಯಾಯಿತು. ಒಂದ್ಸಲ ಓದಿದಾಗ, "ಅರೇ! ಏನಾಯಿತು, ಇಷ್ಟೇನಾ?" ಅಥವಾ "ಏನಿತ್ತು ಇದರಲ್ಲಿ?" ಅನ್ನಿಸುವಂತಹ ಅನುಭವವಾಗತ್ತೆ. ಆದರೆ ಕಥೆಯ ಆಳ ಬಹಳವಿದೆ ಅಂತ ಕೂತು ಮೆಲುಕು ಹಾಕಿದಾಗ ಮಾತ್ರ ತಿಳಿಯತ್ತೆ. 'ಭಾಮೆ ಕೇಳೊಂದು ದಿನ', 'ಅನಾರ್ಕಲಿಯ ಸೇಫ್ಟಿಪಿನ್ ', 'ಮೃಗನಯನಾ' ಕಥೆಗಳು ನನ್ನ ಮನಸ್ಸಿಗೆ ತುಂಬಾ ಇಷ್ಟವಾದವು. ಒಂದ್ಸಲ ಓದಿ ಇಷ್ಟೂ ಬರೀತೀನಿ ಅಂತ ಅಂದುಕೊಂಡಿರಲಿಲ್ಲ.. ಆದರೂ ಬರೆದಿದ್ದೀನಿ. ನಾನೇ ಮತ್ತೊಮ್ಮೆ ಓದಬೇಕಾಗಿರೋಂತ ಪುಸ್ತಕವಿದು.. ಒಮ್ಮೆಲೆಗೆ ಎಲ್ಲಾ ಅರ್ಥವಾಗಲ್ಲ. ಅಬಸ್ಟರಾಕ್ಟ್ ರೀತಿಯ ಛಾಯೆಯಿರುವ ಪುಸ್ತಕ ಓದಬೇಕು ಅನ್ನಿಸಿದರೆ, ಇದನ್ನ ಒಮ್ಮೆ ಓದಿ 😌 ಈ ಪುಸ್ತಕದ ಮೂಲಕ ಕಾಯ್ಕಿಣಿಯವರ ಬರವಣಿಗೆಯ ಅಭಿಮಾನಿಯಾದೆ ನಾನು 😇 ಧನ್ಯವಾದಗಳು 🙏🏻
ಶನಿವಾರದ ಮುಕ್ತ ನೀರವದ ಮದ್ಯಾಹ್ನದಲ್ಲಿ ಕೂತು ಓದಿದ "ಅನಾರ್ಕಲಿಯ ಸೇಫ್ಟಿಪಿನ್"
ಪೂರ್ಣಚಂದ್ರ ತೇಜಸ್ವಿ ಹೇಗೆ ಕಾಡಿನ ಮದ್ಯೆ ಮನೆ ಕಟ್ಟಿ ಕೂತು, ಪ್ರಕೃತಿಯನ್ನು ಆಸ್ವಾದಿಸಿ, ಅದರಲ್ಲೇ ತಲ್ಲೀನನಾಗಿ ಅದನ್ನೇ ಬರೆದ್ರೋ, ಜಯಂತ್ ಕಾಯ್ಕಿಣಿ ಶಹರುಗಳಲ್ಲಿ ಜೀವನ ಕಟ್ಟಿಕೊಂಡು, ಅದನ್ನೇ ತನ್ನ ಕಥಾ ಪ್ರಪಂಚ ಮಾಡಿಕೊಂಡೋರು.
ಮನುಷ್ಯನ ಬದುಕು, ನೋವು-ನಲಿವು, ಸುಖ-ದುಃಖ, ಪ್ರೀತಿ-ಪ್ರೇಮ ಆತನ ಸಣ್ಣ ಸಣ್ಣ ಭಾವನೆಗಳು, ಆತನ ಮುಖದ ಸಣ್ಣ ನೆರಿಗೆಯ ಬಗ್ಗೆಯೂ ಬರಿತಾ, ಕಾಯ್ಕಿಣಿ ನಮ್ಮನ್ನೇ ಅವರ ಕಥೆಯ ಪಾತ್ರ ಮಾಡೋರು.
ಕಾಯ್ಕಿಣಿ ಅವರ ಸಣ್ಣ ಕಥೆಗಳ ಕಡ್ತ ಇದು. ಈ ಕೃತಿಯ ವಿಶೇಷ ಆಕರ್ಷಣೆ ಜಯಂತ್ ಕಾಯ್ಕಿಣಿ ಅವರ ಬಾಂಬೆ ಪ್ರೀತಿ. ಇದರಲ್ಲಿರುವ ಪ್ರತಿ ಪುಟದಲ್ಲೂ ಅದು ಎದ್ದು ಕಾಣುತ್ತದೆ. ಕಾಯ್ಕಿಣಿ ೨೨ ವರ್ಷ ಈ ಮಹಾನಗರದ ಜನಸಾಗರದಲ್ಲಿ ಈಜಿ ಬಂದೋರು. ಅಲ್ಲಿನ ಲೋಕಲ್ ಟ್ರೈನ್ ನಿಂದ ಶುರುವಾಗಿ ಮಾರುತಿ ಲೇನ್ ವರೆಗೆ, ನಾರಿಮನ್ ಪಾಯಿಂಟ್ ನಿಂದಾ ಮಹಾಲಕ್ಷ್ಮಿ ಸ್ಟಾಪ್ ವರೆಗೆ.. ಬಾಂಬೆ ಜೀವನದ ಪ್ರತಿಯೊಂದು ಅಂಶವೂ ಅವರ ಮಿದುಳು ಮತ್ತು ಹೃದಯದಲ್ಲಿ ಆಳವಾಗಿ ಇಳಿದಿದೆ .
ಶಿವಾಜಿ ನಾತ್ಯಮಂದಿರದಲ್ಲಿ "ಸೌಭದ್ರಾ".. ಪೃಥ್ವಿಯಲ್ಲಿ "ಜುಲೂಸ್".. Peak hours ನಲ್ಲಿ ಲೋಕಲ್ ಟ್ರೈನ್, India gate.. Hmm.. ಇದು ಮಿನಿ "ಬಾಂಬೆ ದರ್ಶನ"
ತರ್ಕಗಳ ಆಚೆಗಿನ ಯಾವುದೋ ಒಂದು ಅರ್ಥವಾಗದ ಸಮಾಧಾನ ಈ ಪುಸ್ತಕ ಓದಿ ಕೆಳಗಿಟ್ಟಾಗ.