ಪೂರ್ಣಿಮಾ ಅವರ ಈ ಕಾದಂಬರಿ ಅಧ್ಯಾಯಗಳಲ್ಲಿ ಬೆಳೆಯುವಾಗ ಓದುವ ಖುಷಿ ನನಗೆ ಸಿಕ್ಕಿತ್ತು. ಲಾಕ್ಡೌನ್ನ ದಿನಗಳಲ್ಲಿ ಈ ಕಥೆ,ಅದರ ಬೆಳವಣಿಗೆ ಕೊಟ್ಟ ಮಜಾ ಇನ್ನೂ ನೆನಪಿದೆ. ನಮಗೆಲ್ಲರಿಗೂ ಒಂದೊಂದು ಆಸೆಗಳಿರುತ್ತವೆ,ಕನಸುಗಳಿರುತ್ತವೆ. ಆದರೆ ಅದು ನೇರವೇರಲಾರದ್ದಕ್ಕೆ ನೆಪಗಳೂ ಇರುತ್ತವೆ. ಹಲವು ಬಾರಿ ಅದು ನಮ್ಮ ಸಮಾಧಾನಕ್ಕೆ ಒದಗುವುದು. ಇಲ್ಲಿ ಪೂರ್ಣಿಮಾ ಹಲವಾರು ಪದರಗಳಲ್ಲಿ ಈ ಮಿತಿಗಳ ಮೀರುವಿಕೆಯ ಶೋಧಿಸಿದ್ದಾರೆ. ನಾಯಕಿಯ ಕಂಫರ್ಟ್ ಝೋನ್ ಒಳಗಡೆಯ ಏಕತಾನತೆಯ ಬದುಕು, ಅದರೊಳಗೆ ಅರಳುವ ಹೊಸ ಗುರುತಿಸುವಿಕೆ, ಅದರಲ್ಲಿ ಹಾರಾಡುವ ಮೊದಲೇ ರೆಕ್ಕೆಗೆ ಕಟ್ಟಿದ ಭಾರಗಳು. ಹಾಗಾದರೆ ಇದೆಲ್ಲವೂ ಇಷ್ಟೆಯೇ ಎನ್ನುವಾಗಲೇ ನಿನ್ನೆ ಇದ್ದವರು ಇಂದಿಲ್ಲ ಎಂಬ ಸತ್ಯ ಕಂಡು ಆಕೆಯ ಇನ್ನಷ್ಟು ಅಂತರ್ಮುಖಿಯಾಗಿಸುತ್ತದೆ. ಅಚಾನಕ್ ಆಗಿ ಒದಗಿದ ಒಂದು ಸನ್ನಿವೇಶ ಆಕೆಗೆ ಇದೆಲ್ಲವ ಬಿಟ್ಟು ನನ್ನಿಷ್ಟದಲ್ಲಿ ಮುಳುಗಿದ್ದರೆ ಇನ್ನೂ ಸಾಧಿಸಬಹುದಿತ್ತೇ? ಎಂಬ ಹಂಬಲಕ್ಕೆ ಪೂರಕವಾಗಿ ಒದಗುತ್ತದೆ. ಆದರೆ ಗೂಡಲ್ಲಿ ಕೂತು ಹಂಬಲಿಸುವುದಕ್ಕೂ ಪಂಜರದೊಳಗೆ ಬಂಧಿಯಾಗಿ ಬಿಡುಗಡೆಯ ಕಾತರಕ್ಕೂ ವ್ಯತ್ಯಾಸ ಇದೆ ಎಂಬುದು ಆಕೆಯ ಅರಿವಿಗೆ ಬರುತ್ತದೆ.
ಕನಸಿನಂತಹ ಘಟನೆಗಳು ಇದೆಲ್ಲ ನಾಯಕಿ ಭ್ರಮೆ ಎಂಬಂತೆ ಓದುಗನಿಗೆ ಕಾಣುತ್ತದೆ. ಆದರೆ ಕಾದಂಬರಿಯ ಕೊನೆ ಬಂದಂತೆ ಇದನ್ನು ವಾಸ್ತವದೊಡನೆ ಮುಖಾಮುಖಿಯಾಗಿಸಿ ಯಾರೂ ಇಲ್ಲಿ ಅನಿವಾರ್ಯರಲ್ಲ .ಎಲ್ಲವೂ ಅಂದುಕೊಂಡ ಹಾಗೆ ಆಗುವುದು ಸಾಧ್ಯವೂ ಅಲ್ಲ ಸಾಧುವೂ ಅಲ್ಲ ಎಂಬುದು ತಿಳಿಯುತ್ತದೆ.
ನನಗೆ ನಿರಾಳ ಶೈಲಿ. ನಾಯಕಿಯ ಗೊಂದಲಗಳ ಚಿತ್ರಣ (ಬಹುಶಃ ಕನಸು ಕಟ್ಟಿಕೊಂಡು ಗೃಹಿಣಿಯಾದ ಬಳಿಕ ಅದೆಲ್ಲ ಹಿನ್ನೆಲೆಗೆ ಸರಿದ ಎಲ್ಲಾ ಮಹಿಳೆಯರ ಚಿತ್ರಣ ಇದು) ಕಾದಂಬರಿಯ ಅಂತ್ಯ ಬಹಳ ಹಿಡಿಸಿತು.
ಸುಮ್ಮನೇ ಬರೆಯುತ್ತಾ ಹೋದ ಹಾಗೆ ಕಂಡರೂ ಪೂರ್ಣಿಮಾರವರಿಗೆ ಬಹುಶಃ ಇದು ಹೊಮ್ಮಿಸುವ ಎಲ್ಲಾ ದನಿಗಳ ದಾಟಿಸುವಲ್ಲಿ ಯಶಸ್ವಿಯಾಗುತ್ತಾರೆ.
ಕೃತಿ ಓದುಗನಲ್ಲಿ ಹುಟ್ಟಿಸುವ ತಳಮಳವೇ ಅದರ ಯಶಸ್ಸಿಗೆ ಸಾಕ್ಷಿ.
ಇಜಯಾ- ಪದಗಳ ನಡುವೆ ಕನ್ನಡಿಯ ತುಣುಕುಗಳ ಕುಸುರಿಯಿರುವ ಕಾದಂಬರಿ
ಈ ಪುಸ್ತಕ ಕೈಸೇರಿದ ತಕ್ಷಣಕ್ಕೆ ಮಾಡಿದ ಕೆಲಸವೆಂದರೆ ಗೂಗಲ್ನಲ್ಲಿ ಇಜಯಾ ಪದದ ಅರ್ಥ ಹುಡುಕಿದ್ದು. According to Google Ijaya is a Hindu Girl name and it is Hindi originated name with multiple meanings. Ijaya name meaning is Sacrifice ಅಂತೆ. ಸರಿ ಮತ್ತೆ, ಇದೂ ಬೇರೆಲ್ಲ ಸಾಮಾಜಿಕ ಕಾದಂಬರಿಗಳ ತರಹವೇ ಹೆಣ್ಣು ಕುಟುಂಬಕ್ಕಾಗಿ ಮಾಡುವ ತ್ಯಾಗವನ್ನು ವಿಜೃಂಭಿಸುವ, ಹೊಗಳಿಕೆಯ ಹೊನ್ನ ಶೂಲದಿಂದ ಕೊಚ್ಚಿ ಕೊಲ್ಲುವ ಟೈಪಿನದ್ದು ಎಂಬ ನಿರಾಸೆಯೊಂದಿಗೇ ಓದಲು ಶುರುವಿಟ್ಟೆ. ನನ್ನ prediction ಸುಳ್ಳಾಗಿಸಿದ ಬರಹಗಾರ್ತಿಗೆ ಸಾವಿರ ಥ್ಯಾಂಕ್ಯೂಗಳು.
ನಾವು ಹುಡುಗಿಯರು ಕನಸು ಕಾಣುವುದನ್ನು ಕಲಿಯುತ್ತ ಅದರ ಜೊತೆಗೇ ಕನಸಿನ ಸಾಕಾರವನ್ನು ಮುಂದೂಡುವಂತ ಕಾರಣಗಳ ಸೃಷ್ಟಿ ಮತ್ತು ಪೋಷಣೆಯನ್ನೂ ಜೊತೆಗೇ ಕಲಿತಿರುತ್ತೇವೇನೋ. ಏನನ್ನೇ ಮಾಡಲು ಹೊರಟರೂ ಮೊದಲು ಓದು, ಕೆಲಸ, ಮದುವೆ,ಮಕ್ಕಳು ಎಂಬ ಜವಾಬ್ದಾರಿಗಳ never ending to-do list. ಒಂದೊಂದಾಗಿ ಮುಗಿಸಿ ಗೀಟೆಳೆದು ಕೈತೊಳೆದಷ್ಟೂ ಇನ್ನೊಂದು ಮತ್ತೊಂದು ಎಂದು ಸೇರಿಕೊಳ್ಳುತ್ತಾ ಹನುಮಂತನ ಬಾಲದಂತೆ ಉದ್ದವಾಗಿ ಬೆಳೆಯುತ್ತಲೇ ಹೋಗುವ ಜವಾಬ್ದಾರಿಗಳ ಸುಳಿಯಲ್ಲಿ ಸಿಕ್ಕು ಭೂಮಂಡಲವನ್ನೇ ಹೊತ್ತಿದ್ದೇನೋ, ಚಿತ್ತ ಅತ್ತಿತ್ತಾದರೆ ಆಕಾಶ ಕಳಚಿ ಬಿದ್ದೇಬಿಡುತ್ತದೇನೋ ಎಂಬ ಭ್ರಮೆಯಲ್ಲಿ ಧಾವಂತದಲ್ಲಿ ಒದ್ದಾಡುತ್ತಿರುತ್ತೇವಲ್ಲ ಅಂತ ನಮ್ಮೆಲ್ಲರ ಕಥೆಯೇ ಈ ಇಜಯಾಳದ್ದೂ ಕೂಡ.
ಮದುವೆಯಾಗಿ ಸ್ವಾತಂತ್ರ್ಯ ಕಳೆದುಕೊಂಡೆ ಎನ್ನುವ ಮಾತು ಹೆಚ್ಚಿನ ಗಂಡಸರ ಪಾಲಿಗೆ ವಾಟ್ಸಪ್/ ಫೇಸ್ಬುಕ್ಕಿನ ಫಾರ್ವರ್ಡ್ ಜೋಕುಗಳ ಸರಕು. ಆದರೆ ಹೆಂಗಸರ ಪಾಲಿಗೆ ನಿತ್ಯದ ಕಟು ಸತ್ಯ. ಮನೆಯ primary bread winner ಎನಿಸಿಕೊಂಡ ಸುಧಿಗೆ ಜವಾಬ್ದಾರಿಗಳು ಎಷ್ಟಿದ್ದರೂ ಸದಾಕಾಲ ಕಿವಿಯಲ್ಲಿ ಇಂಗ್ಲಿಷ್ ಸಂಗೀತ ಉಲಿಯುವ ಇಯರ್ಫೋನಿನ ಮೂಲಕ ತನ್ನದೆ ಆದ ಪರ್ಸನಲ್ ಸ್ಪೇಸ್ ಕಲ್ಪಿಸಿಕೊಳ್ಳುವುದು ಸುಲಭಸಾಧ್ಯವಾಗುತ್ತದೆ. ಅದೇ ಇಜಯಾಳಿಗೆ ಮನೆಯ ಒಳಹೊರಗಿನ ಎಲ್ಲ ಕೆಲಸ ಕಾರ್ಯಗಳ ನಂತರವೂ ಒಂದಷ್ಟು ಖಾಸಗಿ ಸಮಯಕ್ಕೆ ತತ್ವಾರ, ಸ್ವಂತಕ್ಕೆ ಏನೇ ಮಾಡಹೊರಟರೂ selfish ಎಂಬ ಚಂದದ ಬಿರುದು.
ಮಾಮೂಲಿ ಸಾಂಸಾರಿಕ ಕಥೆ ಹೇಳುತ್ತ ಹೇಳುತ್ತಲೇ ಓದುಗರ ಮನಸ್ಸಿಗೆ ಕನ್ನಡಿ ಹಿಡಿದು ಇದರಲ್ಲಿ ನಿನ್ನ ಪಾತ್ರ ಯಾವುದು ನೋಡಿಕೋ, ಕಾರಣಗಳು ಅಥವಾ ಕನಸುಗಳು -ಆಯ್ದುಕೋ ಎನ್ನುತ್ತಾರೆ ಲೇಖಕಿ ಪೂರ್ಣಿಮಾ ಮಾಳಗಿಮನಿ. ನಮ್ಮ ಆಸಕ್ತಿಗೆ, ಹವ್ಯಾಸಗಳಿಗೆ ಸಮಯವನ್ನೂ ಮನಸ್ಥಿತಿಯನ್ನೂ ನಾವೇ ಹೊಂದಿಸಿಕೊಳ್ಳಬೇಕೇ ಹೊರತು ಇನ್ಯಾರಿಂದಲೋ ನಿರೀಕ್ಷಿಸಲಾಗದು ಎನ್ನುವ ಮಾತು ಎಷ್ಟು ಸತ್ಯ ಅಲ್ಲವೇ!
ಕಾದಂಬರಿ ಓದುವಾಗ ತುಮ್ಹಾರಿ ಸುಲು, little womanನಿನ jo, ಕಾಸ್ಟ್ ಅವೇ ಇಂತದೇ ಇನ್ನಷ್ಟು ಸಿನಿಮಾಗಳು ನೆನಪಾದವು. ಸುಧಿ ಕೇಳುವ ಹಾಡುಗಳನ್ನು ಯೂಟ್ಯೂಬ್ನಲ್ಲಿ ಹುಡುಕಿ ಕೇಳಿದ್ದೂ ಆಯ್ತು. ನನ್ನ ಹವ್ಯಾಸ,ಕನಸನ್ನು ನನಸಾಗಿಸಲು ಮಂಜನಂತಾ ತಿಕ್ಕಲು ಗೆಳೆಯ ನನಗೂ ಸಿಕ್ಕಿದ್ದರೇ ಎಂಬ ಆಸೆಯೊಂದಿಗೇ "ಆಸರೆ ಬಯಸೋ ಅಷ್ಟು ವೀಕ್ ಇರಬಾರದು ಮೇಡಂ ಕನಸುಗಳು" ಎನ್ನುವ ಮಂಜನ ಮಾತು ಮನದಲ್ಲಿ ರಿಂಗಣಿಸುತ್ತದೆ.
ಪುಸ್ತಕ ಓದಿ ಅಚ್ಚರಿ , ಖುಷಿ, ಒಟ್ಟಿಗೆ ಆಯಿತು. ಓದಿದ ಮೇಲೆ ತುಂಬಾ ಕಾಡುವ ಕಾದಂಬರಿ. ಒಬ್ಬ ಮಹಿಳೆ, ವೈಯಕ್ತಿಕ ಜೀವನ, ವೃತ್ತಿ ಜೀವನದ ನಡುವಿನ ಹೊಯ್ದಾಟದ ನಡುವೆ ಕನಸಿನ ಕೂಸುಗಳ ಹೇಗೆ ಸಾಕುತ್ತಾಳೆ? ಎಂಬ ಕಥಾವಸ್ತುವಿನ ಸುತ್ತ ನೇಯ್ದಿರುವ ಈ ಕತೆ ಅದರ ನಿರೂಪಣೆಯಲ್ಲಿ ನೂರಕ್ಕೆ ನೂರು ಯಶಸ್ಸು ಕಂಡಿದೆ. ಎಷ್ಟೋ ಪುಸ್ತಕ ಓದಿದಾಗ ನಮ್ಮ ಕನಸುಗಳು ರೆಕ್ಕೆ ಕಟ್ಟೋ ಪ್ರಯತ್ನ ಮಾಡುತ್ತೆ. ಆದರೆ ಇನ್ನೇನು ಹಾರ ಬೇಕು ಅನ್ನಿವಾಗ ಖಾಲಿ ಹೊಟ್ಟೆ ಚುರುಗುಟ್ಟಿ ಭುವಿ ಮೇಲೆ ಚೆಲ್ಲಿರುವ ಕಾಳುಗಳ್ಳನ ಹೆಕ್ಕೊ ತರ ಆಗಿರುತ್ತೆ. ಈ ಪುಸ್ತಕ ಕನಸುಗಳಿಗೆ ಬರಿ ರೆಕ್ಕೆ ಕಟ್ಟಲ, ಜೊತೆಗೆ ಇಂಧನ ಕೂಡ ತುಂಬಿಸಿ ಗಟ್ಟಿಗೊಳಿಸುತ್ತೆ. ಕಥೆ ಮೊದಲ ಅರ್ಧ ಸದ್ದಿಲದೆ ಅರಳುವ ಹೂವಿನ ತರ ಅರಳಿ ನಿಂತರೆ ಕೊನೆಯ ಅರ್ಧ ಎಲ್ಲೆಲೋ ಸುತ್ತಿಸಿ ಕೊನೆಯ ನಿಲ್ದಾಣಕ್ಕೆ ಬರುವ ಬಸ್ ಪ್ರಯಾಣದಂತಿದೆ. ಪುಸ್ತಕದಲ್ಲಿ ಬಹಳ ಹಿಡಿಸಿದ್ದು ಅದರಲ್ಲಿ ಬರುವ ರೂಪಕಗಳು ( ಜೀವನ ಪೂರ್ತಿ ಗಳಿಕೆಯನ್ನು ಕೊಟ್ಟು ಕೊಂಡ ಮನೆಯಲ್ಲಿ ನಿದ್ದೆ ಬಾರದೆ , ಖಾಲಿ ಜೇಬಿನ ತುಂಬಾ , ತಾಜಾ ಗಾಳಿಯನ್ನು ತುಂಬಿಸಿಕೊಳ್ಳಲು ಅರಳಿ ಮರದ ಕೆಳಗೆ ಮಲಗಿದ ಮಾಲೀಕ... ಹೀಗೆ ಹತ್ತು ಹಲವು ಚೆಂದದ ಕಾವ್ಯಮಯ ರೂಪಕಗಳಿವೆ ) . ಪುಸ್ತಕದ ಅರ್ಪಣೆ ಕೂಡ ಭಿನ್ನವಾಗಿದೆ, ಮತ್ತೆ ಮತ್ತೆ ಓದೊ ತರ ಇದೆ. ಲೇಖಕಿಯವರ ಅಗಾಧ ಓದಿನ ವಿಸ್ತಾರದ ಅನಾವರಣವು ಕೃತಿಯಲ್ಲಿ ಆಗುತ್ತದೆ. ಪುಟ್ಟ ಪುಟ್ಟ ಪಾತ್ರಗಳಿಗೂ ಅದರದ್ದೇ ಆದ ವ್ಯಕ್ತಿತ್ವ ನೀಡಿ ಒಂದು ಇಮೇಜ್ ಸೃಷ್ಟಿಸಿರುವುದು ಇಷ್ಟ ಆಯಿತು. ಉದಾ : ಮಾವನ ಪಾತ್ರ, ಮಾಲಿನಿ ಪಾತ್ರ.. ಹೀಗೆ ಪೋಷಕ ಪಾತ್ರಗಳಿಗೂ ಅಷ್ಟೇ ಆಸ್ಥೆಯಿಂದ ಬಣ್ಣ ಹಚ್ಚಿರುವುದು ಶ್ಲಾಘನೀಯ. ಪುಸ್ತಕಪ್ರಿಯರು, ಕನಸುಕಾಣುವವರು, ಕನಸುಗಳಿಗೆ ಎಳ್ಳು ನೀರು ಬಿಟ್ಟವರೆಲ್ಲರೂ ಓದಲೇ ಬೇಕಾದ ಪುಸ್ತಕ. ಇದನ್ನೂ ಓದಲು ಸೂಚಿಸಿದಕ್ಕೆ ಗೆಳತಿ ಶಾಂತಲಾರವರಿಗೆ ಅನಂತ ಧನ್ಯವಾದಗಳು.
ಕನಸುಗಳು ಯಾರಿಗಿಲ್ಲ ಹೇಳಿ? ಹುಟ್ಟಿದ ಪ್ರತಿಯೊಬ್ಬನಿಗೂ ತನ್ನದೇ ಆದ ಕನಸುಗಳಿರುತ್ತವೆ…. ಆದರೆ ವಾಸ್ತವದಲ್ಲಿ ಎಷ್ಟು ಕನಸುಗಳು ನನಸಾಗುತ್ತವೆ??...... ವಿವಿಧ ಬಗೆಯ ಕನಸುಗಳನ್ನು ಕಾಣುವ ಮನಸ್ಸು ಅದನ್ನು ನನಸಾಗಿಸಲು ಏಕೆ ಲಗುಬಗೆಯಿಂದ ಸಿಧ್ಧವಾಗುವುದಿಲ್ಲ??.......ಮನದ ಪಂಜರದೊಳಿರುವ ಕನಸುಗಳು ವಾಸ್ತವದೊಂದಿಗೆ ಢಿಕ್ಕಿ ಹೊಡೆದು ಚೂರಾಗಲು ಕಾರಣಗಳೇನು??......ಎಲ್ಲರೂ ತಮ್ಮ ಕನಸುಗಳನ್ನು ಹೊಸಕಿ ಹಾಕಿ ಪರಿಸ್ಥಿತಿಯೊಂದಿಗೆ ರಾಜಿಮಾಡಿಕೊಂಡು ತಮ್ಮನ್ನು ತಾವೇ ಹೀಗಳೆಯುವ ಅಥವಾ ಇನ್ನಾವುದೋ ನೆಪಗಳನ್ನು ಹುಡುಕುವ ಅನಿವಾರ್ಯತೆ ಏಕೆ ಸೃಷ್ಟಿಯಾಗುವುದು?? ಈ ಎಲ್ಲ ಬಗೆಯ ಜಿಜ್ಞಾಸೆಯೇ "ಇಜಯಾ" ಕಾದಂಬರಿ…….
ಆಕೆ ಸಂಸಾರಸ್ಥೆ... ಜೊತೆಗೆ ಬ್ಯಾಂಕ್ ಉದ್ಯೋಗಿ. ಎರಡು ಮುದ್ದಾದ ಪುಟ್ಟ ಮಕ್ಕಳು. ಸದಾ ಕಾಳಜಿ ತೋರುವ ಗಂಡ... ಇದ್ದಕ್ಕಿದ್ದಂತೆ ಒಂದು ದಿನ ಸಹೋದ್ಯೋಗಿಯೊಬ���ಬರ ದುರಂತ ಅಂತ್ಯದ ವಾರ್ತೆ…. ಅದನ್ನೇ ನೆಚ್ಚಿಕೊಂಡು ಅಜ್ಞಾತವಾಗಿ ಕಳೆದುಹೋಗುವ ಮತ್ತೊಬ್ಬ ಸಹೋದ್ಯೋಗಿ….. ಈ ಎರಡು ಘಟನೆಗಳು ಇಜಯಾಳ ಮೇಲೆ ಇನ್ನಿಲ್ಲದ ಒತ್ತಡವನ್ನು ಸೃಷ್ಟಿಸಿ ತನ್ನ ಲೇಖಕಿಯಾಗುವ ಕನಸನ್ನು ನನಸು ಮಾಡಿಕೊಳ್ಳುವ ಮಾರ್ಗಗಳನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಮನೆಯ ಕೆಲಸ ಕಾರ್ಯಗಳ ಒತ್ತಡದ ನಡುವೆ ಈ ಕೆಲಸದಲ್ಲಿ ಆಕೆ ಯಶಸ್ವಿಯಾಗುತ್ತಾಳೆಯೇ? ಸಂಸಾರದ ಜಂಜಾಟದ ನಡುವೆ ಎದುರಾದ ಸವಾಲುಗಳು ಏನೇನು? ಲೇಖಕಿಯಾಗುವ ಕನಸಿಗೆ ಒತ್ತಾಸೆಯಾಗಿ ನಿಂತ ಮಂಜ ಯಾರು? ತಿಳಿಯಲು ಕಾದಂಬರಿ ಓದಿರಿ….
ಒಂದು ವ್ಯಕ್ತಿಯ ಜೀವನದಲ್ಲಿ ಕನಸುಗಳು ಮತ್ತು ತನ್ನ ಸುತ್ತಲಿನ ಸಮಾಜ ಎಷ್ಟು ಮುಖ್ಯವಾಗುತ್ತವೆ? ಒಂದು ವ್ಯಕ್ತಿಯಾಗಿ ನಮ್ಮ ಅನಿವಾರ್ಯತೆ ನಮ್ಮ ಕುಟುಂಬಕ್ಕೆ ಅಥವಾ ಸಮಾಜಕ್ಕೆ ಎಷ್ಟು ಅವಶ್ಯಕ? ನಮ್ಮ ಕನಸುಗಳಿಗೋಸ್ಕರ ಮುಖ್ಯವಾಹಿನಿಯಿಂದ ದೂರವಾಗಿ ಬಾಳಬೇಕೆ? ಅಥವಾ ಕನಸುಗಳ ಸಮಾಧಿಯ ಮೇಲೆ ನಮ್ಮ ಬದುಕನ್ನು ಮುಂದುವರೆಸಬೇಕೆ? ಯಾವುದಕ್ಕೆ ಹೆಚ್ಚು ಮಹತ್ವ?
"ಕನಸುಗಳೇ ಜೀವನ ಅಲ್ಲ…..ಆದರೆ ಕನಸುಗಳಿಲ್ಲದೆ ಜೀವಂತಿಕೆಯೇ ಇಲ್ಲ"....... ಕನಸುಗಳು ಮತ್ತು ವಾಸ್ತವ ಜೀವನವನ್ನು ಜೊತೆಯಾಗಿ ಹೇಗೆ ನಿಭಾಯಿಸಬೇಕು ಎಂಬುದು ನಮ್ಮ ಕೈಯಲ್ಲೇ ಇದೆ ಅಲ್ಲವೇ? ನಮ್ಮ ಮನಸ್ಸಿನ ಆಸೆ ಕನಸುಗಳಿಗೆ ಕೈಗನ್ನಡಿ ಈ ಕಾದಂಬರಿ…..
ಇಜಯಾ ಕಾದಂಬರಿಯ ಬಗ್ಗೆ ನನಗೆ ತಿಳಿದಾಗ ಮೊದಲು ಇದೆಂಥಾ ಶೀರ್ಷಿಕೆ ಎಂದು ಕುತೂಹಲವಾಯಿತು. ಪುಸ್ತಕ ಓದಲು ಶುರು ಮಾಡಿದಾಗಲೇ ತಿಳಿದಿದ್ದು ಇಜಯಾ ಎನ್ನುವುದು ಕಥಾನಾಯಕಿಯ ಹೆಸರು ಎಂದು. ಈ ಹೆಸರನ್ನು ನಾನೆಂದೂ ಕೇಳಿರದ ಕಾರಣ ಕಾದಂಬರಿ ಮತ್ತಷ್ಟು ಕುತೂಹಲ ಮೂಡಿಸಿತು. ಆದರೆ ಇದು ಯಾವ genreಕ್ಕೆ ಸೇರಿದ್ದು ಎಂದು ಹೇಳಲು ಸ್ವಲ್ಪ ಕಷ್ಟ. ಕಾದಂಬರಿ ಓದಲು ಪ್ರಾರಂಭಿಸಿದಾಗ ಇದು ತ್ರಿವೇಣಿ ಹಾಗೂ ಮತ್ತಿತರರ ಪುಸ್ತಕಗಳಂತೆ ಮಹಿಳಾ ಪ್ರಧಾನ ಕಾದಂಬರಿಯಂತೆ ಅನಿಸಿದರೂ, ಕಥೆ ರೋಚಕ ತಿರುವನ್ನು ಪಡೆದು psychological ಥ್ರಿಲ್ಲರ್ ಏನೋ ಅನ್ನಿಸಬಹುದು. ಹೆಸರು ಹೊಸದೆನಿಸಿದರು ಇಜಯಾ ನಮ್ಮಲ್ಲಿಯೇ ಒಬ್ಬಳು ಎನಿಸಿವಂತಹ ಪಾತ್ರವನ್ನು ಪೂರ್ಣಿಮಾ ಮಾಳಗಿಮನಿ ಕಟ್ಟುಕೊಟ್ಟಿದ್ದಾರೆ.
ಬಹುತೇಕ ಮದುವೆಯಾದ working womenನಂತೆ ಇಜಯಾಳಿಗೂ ಸಾಂಸಾರ ಹಾಗೂ ವೃತ್ತಿ ಜೀವನದ ಜವಾಬ್ದಾರಿ ಮತ್ತು ಒತ್ತಡಗಳ ನಡುವೆ ತಾನು ಲೇಖಕಿಯಾಗುವ ಕನಸನ್ನು ಮುಂದುವರೆಸಲಾಗದ ಪರಿಸ್ಥಿತಿ. ಆದರೂ ಈ ನಿಟ್ಟಿನಲ್ಲಿ ಸಣ್ಣ ಸಣ್ಣ ಹೆಜ್ಜೆಯಿಟ್ಟರೂ ಅವಳ ಕನಸುಗಳಿಗೆ ಹೆಚ್ಚು ಬೆಂಬಲ ಕೊಡದ ಮನೆಯ ವಾತಾವರಣ. ಹೀಗೆ ಆರಕ್ಕೇರದ ಮೂರಕ್ಕಿಳಿಯದ ಇಜಾಯಾಳ ಜೀವನ, ಮಂಜನ ಪಾತ್ರ ಪ್ರವೇಶದಿಂದ ಸಿನಿಮೀಯ ರೀತಿಯಲ್ಲಿ ಬದಲಾಗುವುದರೊಂದಿಗೆ ಪುಸ್ತಕದ ದಿಕ್ಕನ್ನೂ ಬದಲಾಯಿಸುತ್ತದೆ. ಹಾಗಾದರೆ, ಮಂಜನ ಪಾತ್ರ ಇಜಯಾ ಮತ್ತವಳ ಕನಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಇಜಯಾ ತನ್ನ ಕನಸಿನ ಹಾದಿಯಲ್ಲಿ ಮುನ್ನಡೆಯುವಳೇ? ಕಾದಂಬರಿಯ ಮುಖಪುಟದ ಮೇಲಿರುವ ಚಿತ್ರಕ್ಕೂ ಹಾಗೂ ಈ ಕಥೆಗೂ ಏನು ಸಂಬಂಧ? ಇಂತಹ ಹತ್ತು ಹಲವು ಪ್ರಶ್ನೆಗಳನ್ನು ಕಾದಂಬರಿಯೇ ಉತ್ತರಿಸುತ್ತದೆ.
ಮೇಲ್ನೋಟಕ್ಕೆ ಕಥೆ ಸರಳವೆನಿಸಿದರೂ ಅದು ಸಮುದ್ರದಷ್ಟೇ ಆಳವಾಗಿದೆ. ಮನುಷ್ಯ ಹಾಗೂ ಅವನ ಕನಸುಗಳು ಈ ಕಥೆಯ ಕೇಂದ್ರಬಿಂದುವಾಗಿದ್ದರೂ, ಸ್ನೇಹ-ಸಂಬಂಧ, ಗುಣ, ಸ್ವಭಾವ, ನಡುವಳಿಕೆ ಹೀಗೆ ಅವನ ಹಲವು ಮುಖಗಳ ಅನಾವರಣವಾಗಿದೆ. ಮನುಷ್ಯನ ಜೀವನ ಮತ್ತು ಕನಸುಗಳ ಬಗ್ಗೆ ಈ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಅತ್ಯಂತ ಸೂಕ್ಷ್ಮವಾಗಿ ತನ್ನ ನಿಲುವನ್ನು ತೆರೆದಿಡುತ್ತದೆ. ಇಜಯಾ ಹೇಳುವ ಹಾಗೆ ನಾವು ಪರಿಸ್ಥಿತಿಯ ಕೈ ಗೊಂಬೆಯಾಗಿ ನಮ್ಮೆಲ್ಲಾ ಕನಸುಗಳನ್ನು ಸಾಕಾರಗೊಳಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅಥವಾ ಮಂಜ ಹೇಳುವಂತೆ ನಮಗೆ ನಾವೇ ಚೌಕಟ್ಟನ್ನು ಹಾಕಿಕೊಂಡು ಅದರಲ್ಲಿ ಬಂಧಿಯಾಗಿ ನಮ್ಮ ಕನಸುಗಳನ್ನು ಮುಂದುವರಿಸಲಾಗದೆ ಕುಂಟು ನೆಪವೊಡ್ಡುತ್ತಿವೋ ಎಂಬುದು ಓದುಗರನ್ನು ಆಲೋಚಿಸುವಂತೆ ಮಾಡುತ್ತದೆ.
ಈ ಕಾದಂಬರಿಯ ದೊಡ್ಡ plus point ಇದರ ಪಾತ್ರ ಚಿತ್ರಣ. ಕಾದಂಬರಿಯಲ್ಲಿರುವ ಎಲ್ಲಾ ಪಾತ್ರಗಳಿಗೂ ಅದರದೇ ಆದ ತೂಕವಿದೆ ಹಾಗೂ ಓದುಗರ ಮನಸ್ಸನ್ನು ಮುಟ್ಟುತ್ತದೆ. ತನ್ನ ಆಸೆ ಕನಸುಗಳಿಗೆ ತೋರ್ಪಡಿಕೆಗೆ ಬೆಂಬಲಿಸುವ ಇಜಾಯಳ ಗಂಡ ಸುಧೀ, ತನ್ನ ಬೇಡಿಕೆಗಳನ್ನು ಈಡೇರಿಸುವ ಅಮ್ಮನನ್ನೇ selfish ಎಂದು ದೂಷಿಸುವ ಮಗಳು ಶಾರ್ವರಿ, ಇಜಾಯಳ ಮನಸ್ಸಿನ ಮೇಲೆ ಬಲವಾದ ಪ್ರಭಾವವನ್ನು ಬೀರಿ ಅವಳ ಬರಹವನ್ನು ಮುಂದುವರೆಸಲು ಹೊಸ ಉತ್ತೇಜನವನ್ನು ನೀಡುವ ಬಸಪ್ಪ ಹೀಗೆ ಎಲ್ಲಾ ಪಾತ್ರಗಳು ಒಂದಲ್ಲಾ ಒಂದು ವೈಶಿಷ್ಟ್ಯವನ್ನು ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಂಜನದ್ದು ಒಂದು ಬೃಹತ್ ಪಾತ್ರ ಮತ್ತು ವಿವರಣೆಗೆ ಮೀರಿದ್ದು. ಪ್ರತಿ ಬಾರಿ ಓದಿಗಾಗಲು ಹೆಚ್ಚು ಹೆಚ್ಚು ಪದರಗಳು ತೆರೆದುಕೊಳ್ಳುವಂತಹ ಮಂಜನ ಪಾತ್ರ ವೈಯಕ್ತಿಕವಾಗಿ ನನಗೆ ಬಹಳ intriguing ಅನಿಸಿತು.
ಇದರೊಂದಿಗೆ, ಇಜಯಾಳ ಸ್ವಗತಗಳು ಹಾಗೂ ಮಂಜನ ಹಿತನುಡಿಗಳು ಮತ್ತೆ ಮತ್ತೆ ಮೆಲುಕು ಹಾಕುವಂತೆ ಒತ್ತಾಯಿಸುತ್ತದೆ ಹಾಗೂ ಎಷ್ಟೋ ಬಾರಿ ನನಗೆ ಮಂಜ ಇಜಯಾಳ alter ego ಎಂದೇ ಅನಿಸುತ್ತಿತ್ತು. ಒಟ್ಟಾರೆ, ಒಂದೇ ಗುಟುಕಿಗೆ ಕುಡಿದರೂ ಕಾಫಿಯ ರುಚಿ ಹೇಗೆ ಬಹಳ ಹೊತ್ತು ಹಾಗೆಯೇ ಉಳಿಯುತ್ತದೆಯೋ ಅದೇ ರೀತಿ ೧೬೦ ಪುಟಗಳ ಕಾದಂಬರಿ ವೇಗವಾಗಿ ಓದಿಸಿಕೊಂಡು ಹೋದರೂ, ಓದಿ ಮುಗಿಸಿದ ಮೇಲೂ ಬಿಟ್ಟು ಬಿಡದ 'ಹುಳದಂತೆ' ಕಾಡುತ್ತದೆ.
ಕನಸು ಎಷ್ಟು ರೋಮಾಂಚಕ. ಆದ್ರೆ ಅದನ್ನ ನನಸಾಗಿಸುವತ್ತ ಎಷ್ಟು ಮಂದಿ ಕೆಲಸ ಮಾಡುತ್ತಾರೆ?? ಈ ಒಂದು ಸುಂದರ ಅಂಶ ಇಟ್ಟುಕೊಂಡು ಹೆಣೆದಿರುವ ಪುಸ್ತಕ ಇಜಯ. ಈ ಇಜಯಳನ್ನ ನಮ್ಮ ಸುತ್ತ ಮುತ್ತ ಇರುವ ಎಷ್ಟೊಂದು ವ್ಯಕಿಗಳಲ್ಲಿ ನೋಡಬಹುದು. Starting ಅಲ್ಲಿ ಕೌಟುಂಬಿಕ ಕಾದಂಬರಿ ಅನ್ನೋ ಥರ ಮಾಡಿ, ಮಧ್ಯದಲ್ಲಿ ಪತ್ತೇದಾರಿ ಥ್ರಿಲ್ಲರ್ ಥರ ಮಾಡಿ ಕೊನೆಯಲ್ಲಿ ತಲೆಯಲ್ಲಿ ಕೊರೆಯುವಂತ ಅಂಶದಿಂದ end ಮಾಡಿದ್ದಾರೆ. ಕಥೆಯಲ್ಲಿ ಬರುವ ಹೆಚ್ಚು ಕಮ್ಮಿ ಎಲ್ಲಾ ಪಾತ್ರಗಳು ತಮ್ಮದೇ ಆದ ಛಾಪಿಂದ ನೆನಪಿನಲ್ಲಿ ಉಳಿಯತ್ತೆ. ಇಜಯ ಮಂಜ ಪಾತ್ರಗಳ ಮೂಲಕ, ಓದುವಾಗ ಎಷ್ಟೋ ಬಾರಿ ನಮ್ಮನೆ ನಾವೇ ಪ್ರಶ್ನಿಸಿಕಳ್ಳಬೇಕಾದ ಎಷ್ಟೋ ಅಂಶಗಳು ಸಿಗುತ್ತವೆ.
A story that lets us introspect and at the same time wonder what if we drop dead one fine morning.. what about the dreams that we yearned for...people whom we cared for.. struggles that we went through..life that we have built until then. Should the dreams be pursued for our own satisfaction or should they be left on the backburner for the drama/life that surrounds us..