ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು.
ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ (ಪ್ರಬಂಧಗಳು), ಪ್ರಪಂಚ ಪುಸ್ತಕ (ವಿಮರ್ಶಾ ಲೇಖನಗಳು), ಪಂಡಿತ ಭೀಮಸೇನ ಜೋಶಿ (ವ್ಯಕ್ತಿಚಿತ್ರ), ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು, ಹಾರಿಕೊಂಡು ಹೋದವನು (ಅನುವಾದಿತ ಕಥೆಗಳು), ವೆನಿಸ್ಸಿನಲ್ಲಿ ಸಾವು, ಹಳ್ಳಿ, ಪೋಸ್ಟ್ ಮ್ಯಾನ್ (ಅನುವಾದಿತ ಕಾದಂಬರಿಗಳು), ಮಾಸ್ಟರ್ ಬಿಲ್ಡರ್ (ಅನುವಾದಿತ ನಾಟಕ), ಶತಮಾನದ ಸಣ್ಣಕತೆಗಳು, ಸಣ್ಣಕತೆ 1983, ಕನ್ನಡ ಅತಿ ಸಣ್ಣಕತೆಗಳು, ನಾದದ ನವನೀತ, ಬೆಸ್ಟ್ ಆಫ್ ಕೇಫ (ಸಂಪಾದಿತ ಕೃತಿಗಳು).
ಒಂದೊಳ್ಳೇ non fiction read. ಪ್ರಬಂಧಗಳನ್ನು ಇಷ್ಟಪಡುವವರು ಓದಲೇಬೇಕಾದ ಸಂಗ್ರಹಯೋಗ್ಯ ಪುಸ್ತಕ. ಓದುವುದೂ ಒಂದು ಕಲೆ, ನಾವೇಕೆ ಕತೆ ಕಾದಂಬರಿ ಓದುತ್ತೆವೆ, ಆಧ್ಯಾತ್ಮ, ಕಲಾವಿದ ಮತ್ತು ಕಲೆ, ಮೌನ ಇತ್ಯಾದಿ ಪ್ರಬಂಧಗಳು ಬಹಳವೇ ಇಷ್ಟವಾದವು.
***********
ಪುಸ್ತಕಗಳನ್ನು ಓದುವ ಕ್ರಮವೇ ಬೇರೆ. ಓದುಗರು ಸಾಮಾನ್ಯವಾಗಿ ಎರಡು ರೀತಿ ಪುಸ್ತಕ ಓದುತ್ತಾರೆ. ಕತೆಯೋ, ಕಾದಂಬರಿಯೋ ಆದರೆ ಕಥಾನಕದ ಪಾತ್ರ, ಘಟನೆಗಳನ್ನು ಅನುಸರಿಸಿಕೊಂಡು ಕೊನೆಯ ಪುಟಕ್ಕೆ ದೌಡಾಯಿಸುವಂತೆ ಒಂದೇ ಉಸಿರಿಗೆ ಸರಸರ ಓದುವುದು ಒಂದು ಬಗೆ. ಒಂದು ಪಠ್ಯದ ಆಂತರಿಕ ಅರ್ಥವನ್ನು ಗ್ರಹಿಸುವುದಕ್ಕೆಂದು ವಿಶೇಷವಾಗಿ ಪರಿಶೀಲಿಸುತ್ತ, ಶಬ್ದಗಳ ಸದ್ದಿಗೆ ಅಥವಾ ಶಬ್ದಗಳು ಬಿಟ್ಟುಕೊಡುವ ಸೂಚನೆಗೆ ಅಥವಾ ಕಥಾನಕದಲ್ಲಿ ಅಡಗಿರುವ ಧ್ವನಿಗೆ ಕಿವಿಗೊಟ್ಟು ಸಂತೋಷ ಪಡುತ್ತ ಕಟ್ಟೆಚ್ಚರದಲ್ಲಿ ಓದುವುದು ಇನ್ನೊಂದು ಬಗೆ. ಯಾವ ಬಗೆಯಲ್ಲೇ ಓದಲಿ, ಓದುವುದು ಓದಿದ್ದಕ್ಕೆ ಸೇರಿ ಸೇರಿ ಮೊತ್ತ ಹೆಚ್ಚುವಂತೆ ಮಾಡುತ್ತದೆ. ಅಂದರೆ ಓದುಗನ ಪ್ರತಿಯೊಂದು ಹೊಸ ಓದೂ ಅವನು ಈಗಾಗಲೇ ಓದಿರುವುದಕ್ಕೆ ಪೂರಕವಾಗುತ್ತದೆ - ಪುಸ್ತಕದಿಂದ
ಇದೊಂದು ಪುಸ್ತಕದ ಓದು ಹಲವಾರು ಪುಸ್ತಕಗಳ ಓದಿಗೆ ಸಮ. ಎಸ್.ದಿವಾಕರರ ಅಧ್ಯಯನ ಹಾಗೂ ಅನುಭವದ ಸ್ವರೂಪವೇ ಈ ಪ್ರಬಂಧ ಸಂಕಲನ. ಗೊತ್ತಿರುವ ವಿಷಯಗಳನ್ನು ತೆಗೆದುಕೊಂಡು ಗೊತ್ತಿರದ ವಿಷಯಗಳ ಬಗ್ಗೆ ತಿಳಿಸಿಕೊಡುವ ಆ ಬಗೆ ತುಂಬಾ ಇಷ್ಟವಾಯಿತು.
ಈ ಪ್ರಬಂಧಗಳ ಸಂಕಲನದಲ್ಲಿ ಒಟ್ಟು ೬೯ ಪ್ರಬಂಧಗಳಿವೆ. ಪ್ರತಿಯೊಂದು ಪ್ರಬಂಧವೂ ಲೇಖಕರಾದ ಎಸ್.ದಿವಾಕರ್ ಅವರ ವಿಸ್ತಾರವೂ ಆಳವೂ ಆದ ಓದು, ಸಾಮಾನ್ಯವಾಗಿ ಉಪೇಕ್ಷೆಗೆ ಒಳಪಟ್ಟ ಜನ ಜೀವನವನ್ನು ಸೂಕ್ಷ್ಮವಾಗಿ ಗಮನಿಸುವ ರೀತಿ,ಸುತ್ತಲಿನ ಪರಿಸರ,ಪ್ರಾಣಿ ಪಕ್ಷಿಗಳು ಕ್ರಿಮಿಕೀಟಗಳ ಕುರಿತಾದ ಅವರ ಆಸಕ್ತಿಗೆ ಸಾಕ್ಷಿ.
ಪ್ರತಿ ಪ್ರಬಂಧದಲ್ಲಿ ನಮಗೆ ಗೊತ್ತಿರದ ಅನೇಕ ವಿಷಯಗಳ ಕುರಿತು ಭರಪೂರ ಮಾಹಿತಿ ಸಿಗುತ್ತದೆ. ಯಾವುದೇ ಒಂದು ವಿಷಯದ ಕುರಿತಾಗಿ ಅಥವಾ ವಿದ್ಯಮಾನದ ಬಗೆಗೆ ಇರುವ ಬರಹಗಳಲ್ಲಿ ಯಾವುದೇ ಅನಾವಶ್ಯಕ ವಿವರಗಳಿಲ್ಲದೇ ಎಲ್ಲಾ ವರ್ಗದವರಿಗೂ ಅರ್ಥವಾಗುವಂತೆ ಸರಳವಾಗಿವೆ. ಕೆಲವೊಂದು ಹೆಸರೇ ಕೇಳಿರದ ದೇಶಗಳ ಲೇಖಕರು,ಅಲ್ಲಿನ ಸಾಂಸ್ಕೃತಿಕ ನಂಬಿಕೆಗಳು ಹಾಗೂ ಅವರ ಸಾಹಿತ್ಯ ಕೃತಿಗಳು ಮತ್ತು ನಮ್ಮ ಸಂಸ್ಕೃತಿ ಮತ್ತು ಪರಿಸರದ ಜೊತೆಗೆ ಅವು ತಾಳೆಯಾಗುವುದನ್ನ ಓದುವಾಗ ಅಚ್ಚರಿಯಾದರೆ, ನಮ್ಮಲ್ಲಿಯೇ ಇದ್ದ ಲೇಖಕರು, ಸಂಗೀತಗಾರರು ಮುಂತಾದವರ ವಿವರಗಳು ಮನಸ್ಸಿಗೆ ಕಚಗುಳಿಯಿಡುತ್ತವ
ಇಲ್ಲಿನ ಬರಹಗಳು ನನ್ನ ಅಭಿರುಚಿಗೆ ತಕ್ಕಂತೆ ಕೆಲವು ಬಹಳ ಇಷ್ಟವಾದವು ಮತ್ತೆ ಕೆಲವು ಸಪ್ಪೆ ಎನಿಸಿತು. ಇದಕ್ಕೆ ಕೆಲವು ವಿಚಾರಗಳ ಬಗ್ಗೆ ನನಗಿರುವ ಅಲ್ಪಜ್ಞಾನ ಅಥವಾ ಮಾಹಿತಿ ಕೊರತೆ ಕಾರಣವಾಗಿರಬಹುದು. ಆದರೆ ಕನ್ನಡ ಸಾಹಿತ್ಯಪ್ರಿಯರು ಓದಲೇಬೇಕಾದ ಪುಸ್ತಕಗಳಲ್ಲಿ ಇದು ಕೂಡ ಒಂದು. ಏಕಪ್ರಕಾರದ ಪುಸ್ತಕಗಳ ಏಕತಾನತೆಯಿಂದ ಹೊರಬರಲು ಮತ್ತು ಜೀವನದ ಸಣ್ಣ ಪುಟ್ಟ ವಿಚಾರಗಳಲ್ಲಿನ ಸಂತೋಷವನ್ನು ಅನುಭವಿಸುವಂತೆ ಮಾಡಲು ಪ್ರೇರೆಪಿಸುವ ಇಂತಹ ಪುಸ್ತಕಗಳು ಅವಶ್ಯಕ.
ಕನ್ನಡ ಸಾಹಿತ್ಯ ಓದುವ ಅಭ್ಯಾಸ ಇಟ್ಟುಕೊಂಡವರಿಗೆ ದಿವಾಕರ್ ಸರ್ ಅವರ ಪರಿಚಯ ಹೊಸದಾಗಿ ಮಾಡಿಕೊಡಬೇಕಾಗಿಲ್ಲ. ನನಗೆ ಅವರ ಪ್ರಪಂಚ ಪುಸ್ತಕ ಎಂಬ ಜಗತ್ತಿನ ಒಳ್ಳೆಯ ಕೃತಿಗಳ ಪರಿಚಯದ ಓದಿನಿಂದಲೇ ಪಾಶ್ಚಾತ್ಯ ಸಾಹಿತ್ಯದ ಆಸಕ್ತಿ ಬೆಳೆಯಿತು. ಈ ಸಂಕಲನ ತನ್ನ ವಿಸ್ತಾರ ವೈವಿಧ್ಯದಿಂದ ಬೆರಗು ಮೂಡಿಸುತ್ತದೆ. ಇಲ್ಲಿ ಒಂದು ವಸ್ತು ವಿಷಯವ ತೆಗೆದುಕೊಂಡು ದಿವಾಕರ್ ಅವರ ಲಹರಿ ಹರಿದಾಡಿದ ಬಗೆ ಅವರ ವಿಷಯವ್ಯಾಪ್ತಿಯ ಪರಿಚಯ ಮಾಡಿಸುತ್ತದೆ. ಅಷ್ಟಾದರೂ ಅವರು ಮೂಲವಿಷಯ ಬಿಟ್ಟುಕೊಡುವುದಿಲ್ಲ. ಸಂಗೀತದ ಬಗೆಗಾಗಿ,ನಶ್ಯದ ಬಗೆಗಾಗಲಿ,ಸಾಹಿತ್ಯ,ಇರುವೆ ಏನು ಬೇಕು ನಿಮಗೆ ಎಲ್ಲವೂ ಇಲ್ಲಿದೆ. ಕೊಳಕಿಲ್ಲದ ,ನಂಜಿಲ್ಲದ ಬರವಣಿಗೆ ಇದು. ಬೋಧಪ್ರದವೂ ಹೌದು ,ಲಾಲಿತ್ಯವೂ ಹೌದು. ಬಹುಶಃ ಕನ್ನಡದ ಅತ್ಯುತ್ತಮ ಹತ್ತು ಪ್ರಬಂಧ ಸಂಕಲನಗಳ ಸಾಲಿನಲ್ಲಿ ಇದಕ್ಕೆ ಜಾಗವಿದೆ. ಇಲ್ಲಿರುವ ಹಲವು ಪ್ರಬಂಧಗಳ ನಾನೀಗಲೇ ಓದಿದ್ದೆ. ಆದರೆ ಮತ್ತೆ ಓದಿ ಮೆಲುಕು ಹಾಕುವ ಸುಖವೇ ಬೇರೆ.