ಇದು ಗ್ರಾಮೀಣ ಪ್ರದೇಶದಲ್ಲಿ ಸಾಗುವ ಕಥೆಯಾದ್ದರಿಂದ ರೈತಾಪಿ ಜನರ ಬೆವರುಪ್ಪಿನ ಆಡುಮಾತನ್ನೇ ಇಲ್ಲಿ ಬಳಸಿದ್ದೇನೆ. ಇದು ಮೂರು ಪದರುಗಳಾಗಿ ಬಿಚ್ಚಿಕೊಳ್ಳುವ ಕಥೆ. ಗ್ರಾಮ್ಯ ಜೀವನ, ನಗರೀಕರಣ, ಈ ಎರಡರ ನಡುವೆ ಸಿಲುಕಿ ನಲುಗುತ್ತಿರುವ ಹಳೆ ಮತ್ತು ಹೊಸ ತಲೆಮಾರುಗಳು ಈ ಕಥೆಯಲ್ಲಿ ಕಾಣಸಿಗುತ್ತವೆ. ಹಾಲೆಂಬ ಪದಾರ್ಥವು ಹೆಪ್ಪಿನ ಹನಿಯಿಂದ ಮೊಸರಾಗುವುದಕ್ಕೂ, ನಿಂಬೆಯ ಹನಿಯಿಂದ ಒಡೆದುಹೋಗುವುದಕ್ಕೂ ಇರುವ ವ್ಯತ್ಯಾಸವೇ ಈಗಿನ ಹುಡುಗರಿಗೆ ಗೊತ್ತಿಲ್ಲ. ಹಾಗೆಂದೇ ಈ ಕಥೆ ಬರೆದಿದ್ದೇನೆ. ನಮ್ಮ ಹಳ್ಳಿ ಬಿಟ್ಟು ಐವತ್ತು ವರ್ಷ ದಾಟಿದರೂ, ಅಲ್ಲಿಗೆ ಹೋದಾಗಲೆಲ್ಲಾ ನಾನಿನ್ನೂ ಅಲ್ಲಿಯ ಬೆಳೆಕುಪ್ಪೆ , ದನದ ಕೊಟ್ಟಿಗೆ, ಹುಲ್ಲು ಬಣವೆ, ಎತ್ತಿನಗಾಡಿಗಳ ಸುತ್ತಲೇ ತಿರುಗುತ್ತಿರುತ್ತೇನೆ. ದನಕಾಯುವ ಹುಡುಗರ ಆಟೋಟಗಳು, ಅವರು ಹಾಯಾಗಿ ಅಲೆಯುತ್ತಾ ಹೆಣೆದು ಹಾಡುವ ಪೋಲಿ ಹಾಡುಗಳು ನನ್ನ ಮನದಲ್ಲಿ ಮಾಸದೆ ಈಗಲೂ ಹಸಿರಾಗಿವೆ.
ನಾಲ್ಕನೇ ಎಕರೆ - ಶ್ರೀರಮಣ / ಅನುವಾದ- ಅಜಯ್ ವರ್ಮಾ ಅಲ್ಲೂರಿ.
ಬೆನ್ನು ಬಗ್ಗಿಸಿ ದುಡಿವ ರೈತ ದೇಶದ ಬೆನ್ನೆಲುಬು ಅಂತ ಎಲ್ಲರೂ ಭಾವುಕರಾಗಿ ಹೇಳುತ್ತಾರೆ. ಹಳೆಯ ಸಂಪ್ರದಾಯಗಳ ಸೊಗಸೇ ಬೇರೆ ಎಂದು ಕೂಡ ಹೆಮ್ಮೆಯಿಂದ ಹೇಳುತ್ತಾರೆ. ಆದರೆ ಅವರ ಕಷ್ಟಗಳನ್ನು ಯಾರು ಗಮನಿಸಿದ್ದಾರೆ? ಆ ಸಂಪ್ರದಾಯಗಳ ಯಾರು ಇನ್ನೂ ಆಚರಿಸುತ್ತಿದ್ದಾರೆ ಎಂದು ಹುಡುಕಿದರೆ ಸೊನ್ನೆ ಕಾಣುತ್ತದೆ. ಈ ನೀಳ್ಗತೆ ರೈತರ ಬದುಕಷ್ಟೇ ಅಲ್ಲದೆ ಹಣ ಬಂದಾಗ ಬದಲಾಗುವ ಸಂಬಂಧಗಳನ್ನೂ ಹೇಗೆ ಕೃಷಿಯ ನೆಚ್ಚಿಕೊಂಡ ಹಳ್ಳಿಯೊಂದು ಆರ್ಥಿಕವಾಗಿ ಬೆಳೆಯುತ್ತಾ ಒಳಗೊಳಗೇ ಟೊಳ್ಳಾಗುವುದನ್ನೂ ಸಶಕ್ತವಾಗಿ ಚಿತ್ರಿಸುತ್ತದೆ. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನೂ ಇಲ್ಲಿ ಕೂಡ ಧ್ವನಿಸುತ್ತದೆ. ಅನುವಾದ ಅನಿಸದಷ್ಟು ಸಹಜವಾಗಿ ಅಜಯ್ ಇದನ್ನು ಕನ್ನಡಕ್ಕೆ ತಂದಿದ್ದಾರೆ. ಅನುವಾದಕ್ಕೆ ಪೂರ್ಣಾಂಕ. ಸೃಜನ್ ಎಳೆದ ಗೆರೆಗಳು ಕತೆಯ ರುಚಿ ಹೆಚ್ಚಿಸಿದೆ. ಮಿಥುನ ಓದಿ ಇಷ್ಟಪಟ್ಟವರಿಗೆ ಇದೂ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಅನುವಾದಕ್ಕೆ ಬಳಸಿದ ಭಾಷೆ ಇದನ್ನು ಕನ್ನಡದ ಕತೆಯೇ ಆಗಿಸಿದೆ. ಖುಷಿಯಾಯ್ತು.
ಶ್ರೀರಮಣರ ಮತ್ತೊಂದು ಪುಸ್ತಕದ ಅನುವಾದ ಬರುವ ವಿಷಯ ಗೊತ್ತಾದಾಗ ಅಬ್ಬಾ! ಅದೆಷ್ಟು ಖುಷಿಯಿತ್ತು. But..., ಅನುವಾದಕರೇ ಹೇಳಿರುವಂತೆ ಶ್ರೀರಮಣರ ಮಿಥುನ ಕಥಾಸಂಕಲನದ ಕಥೆಗಳೆದುರು ನಾಲ್ಕನೇ ಎಕರೆ ಕೊಂಚ ಸಪ್ಪೆಯೇ. ಮಿಥುನ, ಸೋಡಾಗೋಲಿ, ಧನಲಕ್ಷ್ಮಿ, ಬಂಗಾರದ ಕಡಗ ಇವೆಲ್ಲ ಕಥೆಗಳಂತೆ ನಾಲ್ಕನೇ ಎಕರೆಯಲ್ಲೂ ಮುಖ್ಯ ಪಾತ್ರಗಳ ಮುಗ್ಧತೆ, ಸರಳ,ನೇರ ಸ್ವಭಾವ ಮನಸೆಳೆಯದೇ ಇರದು. ಕಥೆ ಅಧುನಿಕ ಕೃಷಿ ಪದ್ದತಿಯನ್ನು ನಂಬಿದ ರೈತರ ಪಾಡು, ನಗರೀಕರಣದ ಆಯಾಮಗಳ ಸುತ್ತ ಸುತ್ತಿದಂತೆ ಭಾಸವಾದರೂ ಲೇಖಕರ ಮುಖ್ಯ ಗುರಿ ಹಿಂದಿನಂತೆಯೇ ಇಲ್ಲೂ ಸಹ ಮನುಷ್ಯ ಮನುಷ್ಯರ ನಡುವಣ ಸಂಬಂಧ-ಬಂಧನ ಎಂತಲೇ ನನಗನಿಸಿತು. ಜೊತೆಗೇ ದುಡ್ಡು ಮನುಷ್ಯ ಸಂಬಂಧಗಳ ಮೇಲೆ ಎಸಗುವ ಪರಿಣಾಮವನ್ನು ಹೇಳಲು ಕಥೆ ಇನ್ನೊಂದೆರಡು ಅಧ್ಯಾಯ ಸಾಗಿದ್ದರೆ ಚೆನ್ನಾಗಿತ್ತೇನೋ ಅಂತಲೂ ಎನಿಸಿತು. ಮುಖ್ಯವಾಗಿ ನನ್ನ ತಕರಾರು ಅಜಯ್ ವರ್ಮಾ ಅಲ್ಲೂರಿಯವರ ಮೇಲೆಯೇ. ಬೇರೆಲ್ಲ ವಿಷಯದಲ್ಲೂ ಅನುವಾದ ಅಚ್ಚುಕಟ್ಟಾಗಿಯೇ ಇದೆ. ಗ್ರಾಮ್ಯ ತೆಲುಗಿನ ಕಥೆಯನ್ನು ಕನ್ನಡದ ಅದರಲ್ಲೂ ಉತ್ತರ ಕರ್ನಾಟಕದ ಬಳಕೆಯ ಕನ್ನಡದ ಶೈಲಿಗೆ ಅನುವಾದಿಸುವಾಗ ಪೆದಕಾಪು ಎಂಬ ಪದವನ್ನು ಮಾತ್ರವೇ ಮೂಲರೂಪದಲ್ಲೇ ಉಳಿಸಿಕೊಂಡದ್ದೇಕೋ ನನಗೆ I repeat ನನಗೆ ಇಷ್ಟವಾಗಲಿಲ್ಲ. ಪ್ರತಿಬಾರಿ ಆ ಪದವನ್ನು ಓದುವಾಗಲೂ ಇದು ಕನ್ನಡದ್ದಲ್ಲ ಎನ್ನುವ ಭಾವ ಕಾಡಿ ಅನುವಾದಿತ ಪುಸ್ತಕ ಎಂಬ ನೆನಪು ಮುನ್ನೆಲೆಗೆ ಬಂದು ಕಥೆಯನ್ನು ಸವಿಯಲು ತೊಡಕಾಯ್ತು.
ಮಿಥುನ ಓದಿದ ನಂತರ ಎನಿಸಿದಂತೆ ಇದನ್ನೂ ಕೂಡ ತೆಲುಗಿನಲ್ಲಿಯೇ ಓದುವ ಆಸೆಯಿದೆ. Hope to fulfill that someday soon. __________
ಇಷ್ಟವಾದ ಸಾಲು -“ನೀರಿಗಿಂತಲೂ ರಕುತ ಗಟ್ಟಿ, ಜೇನಿಗಿಂತಲೂ ಹಸಿರು ನೋಟಿನ ಬಣ್ಣ ಗಟ್ಟಿ. ------------------ Little out of context- *“ಕಾಳು ಮೆಣಸಿನ ಹಡಗು ಮುಣಿಗಿ ಹೋದಂಗ ಇವು ಅಳಾದೇನೋ ನಂಗ ತಿಳಿವಲ್ದು” - ಈ ಸಾಲನ್ನು ಓದುವಾಗ ಕಾಳುಮೆಣಸಿನ ಹಡಗು ರೆಫರೆನ್ಸ್ ತೇಜೋ ತುಂಗಭದ್ರವನ್ನು ನೆನಪಿಸಿತು. ಹೀಗೆ ಒಂದು ಪುಸ್ತಕ ಓದುವಾಗ ಅದರ ಯಾವುದೋ ಒಂದು ತಂತಿ ಇನ್ಯಾವುದೋ ಪುಸ್ತಕದ ನೆನಪಿನ ಎಳೆ ಮೀಟುವುದು ನನಗೆ ಬಹಳ ಖುಷಿ. * ಲೇಖಕರ ಮಾತು ಓದುವಾಗ ಅವರ ವೈಯಕ್ತಿಕ ಅನುಭವಗಳು ಆಹಾ! ಎಷ್ಟು ಚೆಂದ. ಅವರು ಇಷ್ಟೆಲ್ಲ ಸತ್ವಯುತ ಜೀವನ ಕಂಡಿದ್ದೇ ನಮ್ಮ ಪಾಲಿಗೆ ಕಥೆಗಳ ರೂಪದಲ್ಲಿ ದಕ್ಕುತ್ತಿದೆಯಲ್ಲ how lucky we are ಎನಿಸದಿರದು. ಪುಸ್ತಕದುದ್ದಕ್ಕೂ ಅಲ್ಲಲ್ಲಿ ಸಿಗುವ ಸೃಜನರ ರೇಖಾಚಿತ್ರಳು simply beautiful.
ಈ ಕಥೆಗೆ ಮೂರು ಆಯಾಮಗಳಿವೆ... ಹಿರಿಗೌಡ ನೆಲದ ನಂಟನ್ನು ಬಿಡಿಸಲಾಗದೆ ಒದ್ದಾಡುವ ಆಯಾಮ... ಹಿರಿಗೌಡನ ಮಗ ಶಿವು ನೆಲವಿದ್ದು ಏನು ಮಾಡಲಾಗದೆ ಒದ್ದಾಡುವ ಆಯಾಮ... ಇವೆರಡರ ಕಥೆಯನ್ನು ಕೇಳಿ ಯಾರು ಸರಿ ಎಂದು ಒದ್ದಾಡುವ ನಿರೂಪಕನ ಆಯಾಮ.... ಮೂರನೆಯ ಆಯಾಮ ನಮಗೆ ಆಪ್ತವಾಗುತ್ತದೆ, ಕಾರಣ ನಾವು ಕೂಡ ಪೆದಕಾಪು ಮತ್ತು ಆತನ ಮಗನ ತೊಲಳಾಟಕ್ಕೆ ಮರುಗಿ ಯಾರು ಸರಿ ಎಂಬ ಪ್ರಶ್ನೆಗೆ ಉತ್ತರವಾಗಲು ಇಚ್ಚಿಸುತ್ತೇವೆ.
ನಗರಿಕರಣ ಮತ್ತು ಜಾಗತೀಕಾರಣದ ವಿರೂಪ ಸ್ಥಿತಿಯನ್ನು ಹೇಳುವ ಕಥೆಗಳು ಬಹಳವಿದ್ದರೂ... ಹಳೆಯ ಹಳ್ಳಿ ಸೊಗಡನ್ನು, ಕೃಷಿಯ ಸಾಂಪ್ರದಾಯಿಕ ಆಚರಣೆಗಳನ್ನು ಮನಕ್ಕೆ ಹಿತವೆನ್ನಿಸುವ ಹಾಗೆ ಹೇಳಿದ ಉದಾಹರಣೆಗಳು ಕಡಿಮೆ... ಈ ನೀಳ್ಗತೆ ಅಂತಹ ನೆನಪುಗಳನ್ನು ಮೊಗೆದು ಬುತ್ತಿಯಲ್ಲಿ ಕಟ್ಟಿಕೊಡುತ್ತದೆ.
ಪೆದಕಾಪು ಹೇಳುವ ಕಥೆಗಳು ಮನಸ್ಸಿಗೆ ಬಹಳ ಹತ್ತಿರವಾಗುತ್ತವೆ... ನಾಲ್ಕನೆಯ ಎಕರೆಯನ್ನುವ ಶೀರ್ಷಿಕೆಗೆ ನಿಜ ಅರ್ಥ ಅಂತ್ಯದಲ್ಲಿ ತೆಗೆದುಕೊಳ್ಳುವ ಪರಿ ಇಷ್ಟವಾಗುತ್ತದೆ, ಅಲ್ಲಿ ಪೆದಕಾಪು ಮತ್ತು ಆತನ ಮಗ ಶಿವು ಎತ್ತರಕ್ಕೆ ಏರುತ್ತಾರೆ.
ಅನುವಾದಕರೇ ಹೇಳುವ ಹಾಗೆ ಇದು ಸುಲಭವಾಗಿ ಅನುವಾದ ಮಾಡಬಲ್ಲ ವಸ್ತುವಲ್ಲ... ಅದರಲ್ಲೂ ಮೂಲ ಗ್ರಾಮ್ಯ ಭಾಷೆಯನ್ನು ಅಭ್ಯಾಸ ಮಾಡಿ, ನಮ್ಮ ರಾಯಚೂರಿನ ಗ್ರಾಮ್ಯ ಭಾಷೆಗೆ ಅಳವಡಿಸಿ, ಮೂಲ ಕೃತಿಯ ಸ್ವರೂಪಕ್ಕೆ ಹಾನಿ ಮಾಡದಂತೆ ಅನುವಾದ ಮಾಡುವುದು ಹಠಯೋಗವೇ ಸರಿ. ಅನುವಾದದ ಅನುಭವವಿರುವ ಅಜಯರಿಗೆ ಈ ಕಾರ್ಯದಲ್ಲಿ ವಿಜಯ ದೊರೆತಿದೆ...
ಭಾಷೆಯನ್ನು ಇನ್ನೂ ಸರಳವಾಗಿಸಬಹುದಿತ್ತು, ಕೆಲ ಭಾಗಗಳು ಕಠಿಣವಾಗಿ ಎರಡೆರಡು ಭಾರಿ ಓದುವ ಹಾಗೆ ಮಾಡಿಸುತ್ತದೆ.
ಸೃಜನ್ ರವರ ರೇಖಾಚಿತ್ರಗಳು ಕಥೆಗೆ ಪೂರಕವಾಗಿದ್ದು ಚಂದವಾಗಿ ಮೂಡಿ ಬಂದಿದೆ.