ಕುಂವೀ ಅವರ ಮೊದಲಿನ ಕೃತಿಗಳಾಗಲೀ ಕಥೆಗಳಾಗಲೀ ಓದಿದಾಗ ಕೊಡುವ ಮಜಾವೇ ಬೇರೆ. ಕೊಟ್ರ ಹೈಸ್ಕೂಲಿಗೆ ಸೇರಿದ್ದು ಇವತ್ತಿಗೂ ನನಗೆ ಗಮ್ಮತ್ ಅನಿಸಿದ ಕೃತಿ. ಅರಮನೆ ಕೃತಿಯ ಮೂರು ಮೂರು ಸಲ ಓದಲು ಯತ್ನಿಸಿದರೂ ಅದು ' ಖುಲ್ ಜಾ ಸಿಮ್ ಸಿಮ್ ' ಪಾಸ್ವರ್ಡು ನೆನಪಾಗದ ಹಾಗೆ ನನ್ನ ಒಳ ಬಿಟ್ಟುಕೊಳ್ಳಲಿಲ್ಲ. ಕೊನೆಯದಾಗಿ ಓದಿ ಮೆಚ್ಚಿಕೊಂಡ ಅವರ ಕೃತಿ ,ಅವರ ಆತ್ಮಕಥೆ ' ಗಾಂಧಿಕ್ಲಾಸು' ಆಮೇಲೆ ಶುರುವಾಯಿತು ನೋಡಿ. ಕತ್ತೆ,ಕೋತಿ ಕೊನೆಗೆ ನಾಯಿಯದು ಕೂಡ ಕಾದಂಬರಿಗಳು. ಹಿಂದೆ ಆಬಿದ್ ಸುರತಿ ಅವರು ಹಿಂದಿಯಲ್ಲಿ ಮಾತಾನಾಡುವ ಕತ್ತೆಯ ಮುಖ್ಯ ಪಾತ್ರವಾಗಿಟ್ಟುಕೊಂಡು ಹಲ ಕಾದಂಬರಿಗಳ ಬರೆದರು.ವ್ಯವಸ್ಥೆಯ ವಿಡಂಬನೆ ಅದು. ಕುಂ ವೀ ಸಮಸ್ಯೆ ಬೇರೆಯೇ. ಅವರ ಗಾಂಧಿ ಕ್ಲಾಸು ಮತ್ತು ಅದರ ಮೊದಲಿನ ರಾಯಲ ಸೀಮಾ ಕೃತಿ ಅವರು ಈ ಫ್ಯಾಕ್ಷನಿಸಂಗೆ ಮಾರು ಹೋದದ್ದರ ವರ್ಣನೆ ಮೊದ ಮೊದಲಿಗೆ ಮಜವೆನಿಸಿದ ಬರವಣಿಗೆ.
ಆದರೆ ಲೇಖಕನೊಬ್ಬ ಮಾತು ಮಾತಿಗೂ ಆ ಫ್ಯಾಕ್ಷನಿಸಂನ ಅತಿಯಾಗಿ ವರ್ಣಿಸಿದಾಗ ಏನಾಗುತ್ತದೆ ? ಅದಲ್ಲದೆ ಪ್ರತೀ ಕೃತಿಯಲ್ಲೂ ತಾನೊಬ್ಬ 'ರಚಯಿತ' ನು ಎಂದು ಕುಂ ವೀ ಬರೆದೂ ಬರೆದೂ ನೆನಪಿಸಿದರೆ? ಅದೆಲ್ಲ ಬಿಡಿ. ತನ್ನ ಕಾಮಿಕ್ ಬರವಣಿಗೆ ಬಗ್ಗೆ ತಾನೇ ಮೋಹಗೊಂಡು ಅದನ್ನೇ ತಿರುಗಿ ತಿರುಗಿ ಬರೆದರೆ ಉದಾಹರಣೆಗೆ ನಾಯಿಯ ಕುಂಯಿಗುಟ್ಟುವಿಕೆ ಮಾಲಕೌಂಸ್ ರಾಗದ ಹಾಗೆ ಎಂಬ ರೀತಿಯ ಉಪಮೆಗಳು ಮತ್ತೆ ಮತ್ತೆ ಅವರ ಕೃತಿಗಳಲ್ಲಿ ಕಾಣಿಸಿಕೊಂಡು ಓದಿದ್ದನ್ನೇ ಓದಿದ ಭಾವ ಕೊಡುತ್ತದೆ.
ಹೀಗಾಗಿ ಇತ್ತೀಚಿನ ಕುಂವೀ ಕೃತಿಗಳು ನಿರಾಸೆ ಹುಟ್ಟಿಸಿದ್ದವು. ಇದು ಅದಕ್ಕೆ ಮತ್ತೊಂದು ಸೇರ್ಪಡೆ ಅಷ್ಟೇ.
ಒಂದು ಎನ್ಕೌಂಟರ್ನ ಬಗ್ಗೆ ಬರೆಯುತ್ತಾ ಕುಂವೀ ಅದಕ್ಕೆ ಕಟ್ಟುವ ಪರಿವೇಶ ಮುಖ್ಯ ಮುದ್ದೆಗೆ ಬರಲೇ ಎಪ್ಪತ್ತು ಪುಟ ತಗೊಳುತ್ತೆ ಅಂದರೆ ಊಹಿಸಿ. ಅದಾಗಿ ಅಲ್ಪ ಸ್ವಲ್ಪ ವಿವರಣೆ ಬಳಿಕ ವಾಚಾಮಗೋಚರ ಶಂಕರ ಬಿದರಿಯವರ ಹೊಗಳಿಕೆಗೆ ಇಳಿಯುವುದು ವಿಪರ್ಯಾಸ. ಅವರೇ ಸ್ವತಃ ಕೊಟ್ಟ ಪ್ರೊಜೆಕ್ಟ್ ಎಂದು ಬಾರಿ ಬಾರಿ ಹೇಳುವ ಕಾರಣ ಅದರಲ್ಲಿ ಆಶ್ಚರ್ಯ ಪಡಲು ಏನೂ ಇಲ್ಲ. ಇಷ್ಟಾಗಿಯೂ ಒಂದೈವತ್ತು ಪುಟ ಸತ್ತವನ ಬಗ್ಗೆ ಅವ ಒಳ್ಳೆಯವನಾ ಕೆಟ್ಟವನಾ ಇದರ ಬಗ್ಗೆ ಇರುವುದು ನಮ್ಮ ಪುಣ್ಯ. ಆಂಧ್ರದ ರಾಯಲಸೀಮೆಯ ರಕುತ ಚರಿತ್ರೆ, ತನ್ನ ಬಗೆಗಿನ ಹಳಸಲು ಪುರಾಣ ಮತ್ತು ಅತಿಯಾದ ರೂಪಕಗಳು ಕೃತಿಯ ಹಾಳು ಮಾಡಿದೆ.
ಇದನ್ನು ಸರಳವಾಗಿ ಹೇಳಬೇಕಾದರೆ ದಶಕಗಳ ಹಿಂದೆ ತಾನು ಮಾಡಿದ ಎನ್ಕೌಂಟರ್ ಒಂದು ಪಾಪಭೀರುವೂ ,ಧರ್ಮಶ್ರದ್ಧೆಯುಳ್ಳವರೂ ಆದ ಶಂಕರ ಬಿದರಿಯವರ ಮನಸನ್ನು ಕೊರೆಯುತ್ತಾ ಇತ್ತು. ಹಾಗಾಗಿ ಅದರ ಪಾಪಪರಿಹಾರಕ್ಕೆ ಕೊಟ್ಟ ಸಮಜಾಯಿಷಿಯೇ ಈ ಕಾದಂಬರಿ ಎಂಬಂತೆ ಓದುಗನಿಗೆ ಭಾಸವಾಗುತ್ತದೆ. ಕುಂವೀಯವರ ರಾಯಲಸೀಮಾ, ಗಾಂಧಿಕ್ಲಾಸು ಓದಿದವರು ಇದನ್ನು ಓದಬೇಕಾದ ಅವಶ್ಯಕತೆ ಇಲ್ಲ ಎಂದು ನನ್ನ ಪ್ರಾಮಾಣಿಕ ಅನಿಸಿಕೆ.
ದೈತ್ಯ ಬರಹಗಾರ ಕುಂವೀ ತನ್ನ ಬರಹದ ಮಾಂತ್ರಿಕ ಶಕ್ತಿಗೆ ತಾನೇ ಮೋಹಗೊಂಡು ಅದರ ಉರುಳಿಗೆ ಸಿಕ್ಕ ಹಾಗೆ ಅನಿಸಿತು.