ಕನ್ನಡದ ಬೃಹತ್ ಕಾದಂಬರಿಗಳಲ್ಲಿ ಒಂದಾದ "ಸಮರಸವೇ ಜೀವನ" ಗೋಕಾಕರದ್ದೇ ಕೃತಿ. ಬಹುಷಃ ಭಾರತದ ಬೇರಾವ ಭಾಷೆಗಳಲ್ಲಿ ಇಷ್ಟು ಬೃಹತ್ ಗಾತ್ರದ ಕಾದಂಬರಿ ಇರಲಿಕ್ಕಿಲ್ಲವೇನೋ! ಕಾದಂಬರಿ ತನ್ನ ಗಾತ್ರದಲ್ಲಿ ಮಾತ್ರವಲ್ಲ ತನ್ನ ವಸ್ತು ವಿಶೇಷಗಳಿಂದಲೂ ಸಾಹಿತ್ಯಾಸಕ್ತರ ಹಾಗೂ ವಿಮರ್ಶಕ ವರ್ಗದವರ ಮನ ಗೆಲ್ಲುವಂತಿರುವುದು ಗಮನಾರ್ಹ ಸಂಗತಿ. ಲೇಖಕರ ಆತ್ಮಚರಿತ್ರೆಯನ್ನು ನೆನಪಿಸಬಲ್ಲ ಈ ಕಾದಂಬರಿಯ ಭಾಗಗಳ ರಚನೆಯ ಹಿನ್ನೆಲೆ ಹಾಗೂ ಜೀವನ ಚರಿತ್ರೆಯ ಸಾಂದರ್ಭಿಕ ವಿವರಗಳು ಗ್ರಂಥದ ಆಕರ ಮೌಲ್ಯವನ್ನು ಹೆಚ್ಚಿಸುತ್ತವೆ.
‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಅನಂತರ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ಶಿಕ್ಷಣ ಪಡೆದು ವಿದೇಶದಿಂದ ಬಂದ ಮೇಲೆ ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ, ಅನಂತರ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ, ಧಾರವಾಡದ ಕನಾಟಕ ಕಾಲೇಜಿನಲ್ಲಿ (1952) ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ (1966) ಗಳಾಗಿ ಮತ್ತು ಸಿಮ್ಲಾದ ಇನ್ಸ್ಟಿಟ್ಯೂಟ್ ಆಫ್ ಸ್ಟಡೀಸ್ ನಿರ್ದೇಶಕ (1970) ಆಗಿ ಕಾರ್ಯ ನಿರ್ವಹಿಸಿದ್ದರು. ಆಂಧ್ರದ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಗೋಕಾಕರು, ಪಿ. ಇ. ಎನ್. ಅಧಿವೇಶನಕ್ಕೆ ಜಪಾನಿಗೆ ತೆರಳಿದರು. ಬೆಲ್ಜಿಯಂನಲ್ಲಿ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಜ್ಞಾನಪೀಠ ಪ್ರಶಸ್ತಿಯೂ ಸೇರಿದಂತೆ ಗೋಕಾಕರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ (1958), ಅಮೆರಿಕಾದ ಫೆಸಿಫಿಕ್ ವಿಶ್ವವಿದ್ಯಾಲಯ, ಕರ್ನಾಟಕ, ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಗಳನ್ನು ನೀಡಿವೆ. ಪರಿಷತ್ತು ಬಳ್ಳಾರಿಯಲ್ಲಿ ನಡೆದ 40ನೇ ಕನ್ನಡ ಸಾಹಿತ್ಯ ಸಮ್ಮೇಳನ (1958) ಅಧ್ಯಕ್ಷ ಪದವಿಗೆ ಆಯ್ಕೆ ಮಾಡಿ ಗೌರವಿಸಿದೆ. ದ್ಯಾವಾ ಪೃಥಿವಿ ಖಂಡಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಭಾಷಾ ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಗೋಕಾಕ ವರದಿ ಕರ್ನಾಟಕದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತು ಅರವಿಂದ ಭಕ್ತರೂ, ಬೇಂದ್ರೆ ಆರಾಧಕರೂ ಆಗಿದ್ದ ಗೋಕಾಕರು 1992ರ ಏಪ್ರಿಲ್ 28ರಂದು ಮುಂಬಯಿಯಲ್ಲಿ ನಿಧನರಾದರು
1ಸಮರಸವೇ ಜೀವನ (ಇಜ್ಜೋಡು) ಬೃಹತ್ ಕಾದಂಬರಿ, ನವ್ಯತೆ ಹಾಗೂ ಕಾವ್ಯ ಜೀವನ, ವಿಶ್ವಮಾನವ ದೃಷ್ಟಿ, ಸೌಂದರ್ಯಮೀಮಾಂಸೆ, ಆಂಗ್ಲ ಸಾಹಿತ್ಯಕ್ಕೆ ನೀಡಿದ ಸ್ಫೂರ್ತಿ ಇತ್ಯಾದಿ ವಿಮರ್ಶಾಗ್ರಂಥಗಳು, ಜನನಾಯಕ, ವಿಮರ್ಶಕ ವೈದ್ಯ, ಯುಗಾಂತರ, ಮುಂತಾದ ನಾಟಕಗಳು ಇವರಿಂದ ರಚಿತವಾಗಿವೆ. ಕೃತಿಗಳು; ಕಲೋಪಸಾಕ, ಪಯಣ, ತ್ರಿವಿಕ್ರಮರ ಅಕಾಶಗಂಗೆ, ಅಭ್ಯುದಯ, ವಿನಾಯಕರ ಸುನೀತಗಳು, ನವ್ಯ ಕವಿತಗಳು, ಉಗಮ, ದ್ಯಾವಪೃಥಿವೀ,ಊರ್ಣನಾಭ, ಕಾಶ್ಮೀರ, ಚಿಂತನ, ಇಂದಲ್ಲ ನಾಳೆ, ತ್ರಿಶಂಕುವಿನ ಪ್ರಜ್ಞಾ ಪ್ರಭಾತ, ಪುಣ್ಯಭೂಮಿ, ಬಾಳದೇಗುಲದಲ್ಲಿ, ಸಮುದ್ರಗೀತೆಗಳು, ಭಾವರಾಗ, ಹಿಗ್ಗು, ಸಿಮ್ಲಾಸಿಂಫನಿ,ಭಾಗವತ ನಿಮಿಷಗಳು, ಕೊನೆಯ ದಿನ, ಸೆಳೆವು, ಸಸ್ಯ ಸೃಷ್ಟಿ ಪಾರಿಜಾತದಡಿಯಲ್ಲಿ (ಕವನ ಸಂಕಲನಗಳು) ಭಾರತ ಸಿಂಧು ರಶ್ಮಿ (ಮಹಾಕಾವ್ಯ) ನವಧ್ವನಿ (ಸಂಪಾದನೆ) ಜನನಾಯಕ, ಯುಗಾಂತರ, ವಿಮರ್ಶಕ ವೈದ್ಯ, ಮುನಿದ ಮಾರಿ (ನಾಟಕಗಳು) ಚೆಲುವಿನ ನಿಲುವು, ಜೀವನ ಪಾಠಗಳು (ಪ್ರಭಂದ) ಸಮರಸವೇ ಜೀವನ (ಕಾದಂಬರಿ) ಕವಿಕಾವ್ಯ ಮಹೋನ್ನತಿ, ನವ್ಯತೆ ಹಾಗು ಕಾವ್ಯ ಜೀವನ, ಸಾಹಿತ್ಯದಲ್ಲಿ ಪ್ರಗತಿ, ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು, ಕಲೆಯ ನೆಲೆ (ವಿಮರ್ಶೆಗಳು) ಸಮುದ್ರಾಚೆಯಿಂದ, ಸಮುದ್ರದೀಚೆಯಿಂದ, ಪಯಣಿಗ (ಪ್ರಾವಾಸ ಕಥನ).
ಗೋಕಾಕರ ಬೃಹತ್ ಕಾದಂಬರಿ ಸಮರಸವೇ ಜೀವನ ಕಾದಂಬರಿಯ ಮೊದಲ ಭಾಗ. ಮೊಗ್ಗಾವಿ ಎಂಬ ಊರಲ್ಲಿ ಆಚಾರ್ಯ ಕುಟುಂಬಗಳ ಕಥೆ. ಉಭಯ ಕುಟುಂಬಗಳಲ್ಲಿ ಉಂಟಾದ ವಾಕ್ಸಮರದಿಂದ ವೈಮನಸ್ಯದಿಂದ ಬಿರುಕು ಉಂಟಾಗುವುದು. ಮನೆಯಲ್ಲಿಯ ಕಲಹ, ಆದರೂ ಮನೆಯ ಮಕ್ಕಳಲ್ಲಿ ಕಲಿಯಬೇಕು ಎಂಬ ಹಂಬಲ. ಒಂದು ಕುಟುಂಬದಲ್ಲಿ ಮಕ್ಕಳಿಂದ ದುಃಖದ ಮೂಲವಾದರೆ, ಇನ್ನೊಂದು ಕುಟುಂಬದಲ್ಲಿ ತಂದೆ ತಾಯಿಯ ಹಟದಿಂದ ದುಃಖ. ಇಷ್ಟಾದರೂ ವಿದ್ಯಾರ್ಥಿಗಳು ತಮ್ಮ ಯಶಸ್ಸಿಗಾಗಿ ಹವಣಿಸುತ್ತಾರೆ. ೫೦೦ ಪುಟಗಳುಳ್ಳ ಕಾದಂಬರಿ ಜೀವನದ ಮೌಲ್ಯಗಳನ್ನು ಖಂಡಿತವಾಗಿಯೂ ತಿಳಿಸಿಕೊಡುತ್ತವೆ.